ಭಾವಗೀತೆ
ಯಾವುದೇ ಪೋಸ್ಟ್ ಗಳಿಲ್ಲ
ಬಸವಣ್ಣನವರ ವಚನಗಳು
-
ಉದಕದೊಳಗೆ ಬೈಚಿಟ್ಟ
ಬೈಕೆಯ ಕಿಚ್ಚಿನಂತೆ ಇದ್ದಿತ್ತು;
ಸಸಿಯೊಳಗಣ
ರಸದ ರುಚಿಯಂತೆ ಇದ್ದಿತ್ತು;
ನನೆಯೊಳಗಣ
ಪರಿಮಳದಂತೆ ಇದ್ದಿತ್ತು;
ಕೂಡಲಸಂಗಮದೇವರ ನಿಲವು
ಕನ್ನೆಯ ಸ್ನೇಹದಂತೆ ಇದ್ದಿತ್ತು.
-
ಕಾಳಿಯ ಕಂಕಾಳದಿಂದ ಮುನ್ನ
ತ್ರಿಪುರ ಸಂಹಾರದಿಂದ ಮುನ್ನ
ಹರಿವಿರಿಂಚಿಗಳಿಂದ ಮುನ್ನ
ಉಮೆಯ ಕಲ್ಯಾಣದಿಂದ ಮುನ್ನ
ಮುನ್ನ, ಮುನ್ನ, ಮುನ್ನ,
ಅಂದಂದಿಗೆ ಎಳೆಯ ನೀನು, ಹಳೆಯ ನಾನು
ಮಹಾದಾನಿ ಕೂಡಲಸಂಗಮದೇವ.
-
ಅಯ್ಯಾ, ನೀನು ನಿರಾಕಾರವಾದಲ್ಲಿ
ನಾನು ಜ್ಞಾನವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ನಾಂಟ್ಯಕ್ಕೆ ನಿಂದಲ್ಲಿ
ನಾನು ಚೈತನ್ಯವೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನು ಸಾಕಾರವಾಗಿದ್ದಲ್ಲಿ
ನಾನು ವೃಷಭನೆಂಬ ವಾಹನವಾಗಿದ್ದೆ ಕಾಣಾ.
ಅಯ್ಯಾ, ನೀನೆನ್ನ ಭವವ ಕೊಂದಹೆನೆಂದು
ಜಂಗಮಲಾಂಛನವಾಗಿ ಬಂದಲ್ಲಿ
ನಾನು ಭಕ್ತನೆಂಬ ವಾಹನವಾಗಿದ್ದೆ ಕಾಣಾ ಕೂಡಲಸಂಗಮದೇವ
. -
ಕರಿ ಘನ, ಅಂಕುಶ ಕಿರಿದೆನ್ನಬಹುದೆ ? ಬಾರದಯ್ಯ!
ಗಿರಿ ಘನ, ವಜ್ರ ಕಿರಿದೆನ್ನಬಹುದೆ ? ಬಾರದಯ್ಯ!
ತಮಂಧ ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಮರಹು ಘನ, ನಿಮ್ಮ ನೆನೆವ ಮನ ಕಿರಿದೆನ್ನಬಹುದೆ ? ಬಾರದಯ್ಯ!
ಕೂಡಲಸಂಗಮದೇವ.
-
ಸಂಸಾರಸಾಗರದ ತೆರೆ ಕೊಬ್ಬಿ
ಮುಖದ ಮೇಲೆ ಅಲೆವುತ್ತಿದೆ ನೋಡಾ!
ಸಂಸಾರಸಾಗರ ಉರದುದ್ದವೇ ಹೇಳಾ ?
ಸಂಸಾರಸಾಗರ ಕೊರಲುದ್ದವೇ ಹೇಳಾ ?
ಸಂಸಾರಸಾಗರ ಶಿರದುದ್ದವಾದ ಬಳಿಕ ಏನ ಹೇಳುವೆನಯ್ಯ ?
ಅಯ್ಯ; ಅಯ್ಯ, ಎನ್ನ ಹುಯ್ಯಲ ಕೇಳಯ್ಯ!
ಕೂಡಲಸಂಗಮದೇವ, ನಾನೇವೆನೇವೆನಯ್ಯ!
-
ಚಂದ್ರಮನಂತೆ ಕಳೆ ಸಮನಿಸಿತ್ತೆನಗೆ
ಸಂಸಾರವೆಂಬ ರಾಹು ಸರ್ವಗ್ರಾಸಿಯಾಗಿ ನುಂಗಿತ್ತಯ್ಯ,
ಇಂದೆನ್ನ ದೇಹಕ್ಕೆ ಗ್ರಹಣವಾಯಿತ್ತು.
ಇನ್ನೆಂದಿಂಗೆ ಮೋಕ್ಷವಹುದೋ ?! ಕೂಡಲಸಂಗಮದೇವ.
-
ನಾನೊಂದ ನೆನೆದರೆ, ತಾನೊಂದ ನೆನೆವುದು;
ನಾನಿತ್ತಲೆಳೆದರೆ, ತಾನತ್ತಲೆಳೆವುದು;
ತಾ ಬೇರೆ ಎನ್ನನಳಲಿಸಿ ಕಾಡಿತ್ತು;
ತಾ ಬೇರೆ ಎನ್ನ ಬಳಲಿಸಿ ಕಾಡಿತ್ತು;
ಕೂಡಲಸಂಗನ ಕೂಡಿಹೆನೆಂದರೆ
ತಾನೆನ್ನ ಮುಂದುಗೆಡಿಸಿತ್ತು ಮಾಯೆ.
-
ಜನಿತಕ್ಕೆ ತಾಯಾಗಿ ಹೆತ್ತಳು ಮಾಯೆ,
ಮೋಹಕ್ಕೆ ಮಗಳಾಗಿ ಹುಟ್ಟಿದಳು ಮಾಯೆ,
ಕೂಟಕ್ಕೆ ಸ್ತ್ರಿಯಾಗಿ ಕೂಡಿದಳು ಮಾಯೆ,
ಇದಾವಾವ ಪರಿಯಲ್ಲು ಕಾಡಿತ್ತು ಮಾಯೆ.
ಈ ಮಾಯೆಯ ಕಳೆವಡೆ ಎನ್ನಳವಲ್ಲ
ನೀವೇ ಬಲ್ಲಿರಿ ಕೂಡಲಸಂಗಮದೇವ.
-
ಇಂದಿಂಗೆಂತು ನಾಳಿಂಗೆಂತೆಂದು
ಬೆಂದೊಡಲ ಹೊರೆಯ ಹೋಯಿತ್ತೆನ್ನ ಸಂಸಾರ!
ಹಿಂದೆ ನಾನಾ ಯೋನಿಯಲ್ಲಿ ಬಂದೆನೆಂಬ ಹೇಯವಿಲ್ಲ!
ಮುಂದೆ ಮುಕ್ತಿಯಾಗಬೇಕೆಂಬ ಯುಕ್ತಿಯಿಲ್ಲ!
ಎಂದೆಂದೂ ಸದಾಶಿವನ ಕುಂದದೆ ನೆನೆಯಲೀಯದೆ
ಕೊಂದಹುದೀ ಮಾಯೆ ಕೂಡಲಸಂಗಮದೇವ!
-
ಆಸತ್ತೆನಲಸಿದೆನೆಂದರೆ ಮಾಣದು,
ಬೇಸತ್ತೆ ಬೆಂಬಿದ್ದೆನೆಂದರೆ ಮಾಣದು,
ಏವೆನೇವೆನೆಂದರೆ ಮಾಣದು-
ಕಾಯದ ಕರ್ಮದ ಫಲಭೋಗವು.
ಕೂಡಲಸಂಗನ ಶರಣರು ಬಂದು
"ಹೋ ಹೋ ಅಂಜದಿರಂಜದಿರು" ಎಂದರಾನು ಬದುಕುವೆನು.
-
ಸಂಸಾರವೆಂಬ ಸರ್ಪ ಮುಟ್ಟಲು
ಪಂಚೇಂದ್ರಿಯವಿಷಯವೆಂಬ
ವಿಷದಿಂದಾನು ಮುಂದುಗೆಟ್ಟೆನಯ್ಯ,
ಆನು ಹೊರಳಿ ಬೀಳುತ್ತಿದ್ದೆನಯ್ಯ;
"ಓಂ ನಮಶ್ಶಿವಾಯ" ಎಂಬ ಮಂತ್ರವ ಜಪಿಸುತ್ತಿದ್ದೆನಯ್ಯ
ಕೂಡಲಸಂಗಮದೇವ.
-
ಎಂದೋ, ಸಂಸಾರದ ದಂದುಗ ಹಿಂಗುವುದೆನಗೆಂದೋ ?
ಮನದಲ್ಲಿ ಪರಿಣಾಮವಹುದೆನಗಿನ್ನೆಂದೊ ?
ಕೂಡಲಸಂಗಮದೇವಾ ಇನ್ನೆಂದೋ
ಪರಮಸಂತೋಷದಲಿಹುದೆನಗೆಂದೋ ?
-
ಕಾಲಲಿ ಕಟ್ಟಿದ ಗುಂಡು, ಕೊರಳಲಿ ಕಟ್ಟಿದ ಬೆಂಡು!
ತೇಲಲೀಯದು ಗುಂಡು, ಮುಳುಗಲೀಯದು ಬೆಂಡು!
ಇಂತಪ್ಪ ಸಂಸಾರಶರಧಿಯ ದಾಂಟಿಸಿ
ಕಾಲಾಂತಕನೇ ಕಾಯೋ, ಕೂಡಲಸಂಗಯ್ಯ!
-
ಲೇಸ ಕಂಡು ಮನ ಬಯಸಿ ಬಯಸಿ
ಆಶೆ ಮಾಡಿದರಿಲ್ಲ ಕಂಡಯ್ಯ.
ತಾಳಮರಕ್ಕೆ ಕೈಯ್ಯ ನೀಡಿ, ಮೇಲ ನೋಡಿ
ಗೋಣು ನೊಂದುದಯ್ಯ.
ಕೂಡಲಸಂಗಮದೇವ ಕೇಳಯ್ಯ
ನೀನೀವ ಕಾಲಕ್ಕಲ್ಲದಿಲ್ಲ ಕಂಡಯ್ಯ.
-
ಚಂದ್ರೋದಯಕ್ಕೆ ಅಂಬುಧಿ ಹೆಚ್ಚುವುದಯ್ಯ.
ಚಂದ್ರ ಕುಂದೆ ಕುಂದುವುದಯ್ಯ,
ಚಂದ್ರಂಗೆ ರಾಹು ಅಡ್ಡ ಬಂದಲ್ಲಿ
ಅಂಬುಧಿ ಬೊಬ್ಬಿಟ್ಟಿತ್ತೇ ಅಯ್ಯ ?
ಅಂಬುಧಿಯ ಮುನಿ ಆಪೋಶನವ ಕೊಂಡಲ್ಲಿ
ಚಂದ್ರಮನಡ್ಡ ಬಂದನೆ ಅಯ್ಯ ?
ಆರಿಗಾರೂ ಇಲ್ಲ, ಕೆಟ್ಟವಂಗೆ ಕೆಳೆಯಿಲ್ಲ
ಜಗದ್ ನಂಟ ನೀನೇ ಅಯ್ಯ ಕೂಡಲಸಂಗಮದೇವ.
-
ಒಲೆ ಹತ್ತಿ ಉರಿದರೆ ನಿಲ ಬಹುದಲ್ಲದೆ
ಧರೆ ಹತ್ತಿ ಉರಿದರೆ ನಿಲ ಬಾರದು.
ಏರಿ ನೀರುಂಬಡೆ, ಬೇಲಿ ಕೈಯ ಮೇವಡೆ
ನಾರಿ ತನ್ನ ಮನೆಯಲ್ಲಿ ಕಳುವಡೆ
ತಾಯ ಮೊಲೆವಾಲು ನಂಜಾಗಿ ಕೊಲುವಡೆ
ಇನ್ನಾರಿಗೆ ದೂರುವೆ
ತಂದೆ ಕೂಡಲಸಂಗಮದೇವ
ನೀ ಹುಟ್ಟಿಸಿ ಜೀವನ ಭವದುಃಖಿಯ ಮಾಡಿದ ಬಳಿಕ.
ಬಿಡಿಸುವರಾರುಂಟು ?
-
ಎನ್ನ ಚಿತ್ತವು ಅತ್ತಿಯ ಹಣ್ಣು ನೋಡಯ್ಯ,
ವಿಚಾರಿಸಿದರೇನು ಹುರುಳಿಲ್ಲವಯ್ಯ.
ಪ್ರಪಂಚಿನ ಡಂಬಿನಲ್ಲಿ ಎನ್ನನೊಂದು ರೂಹುಮಾಡಿ
ನೀವಿರಿಸಿದಿರಯ್ಯ ಕೂಡಲಸಂಗಮದೇವ.
-
ಮುಂಗಯ್ಯ ಕಂಕಣಕೆ ಕನ್ನಡಿಯ ತೋರುವಂತೆ
ಎನ್ನ ಮನ ನಿಧಾನವನೊಲ್ಲದೆ ಜರಗ ಮೆಚ್ಚಿತ್ತು ನೋಡಾ
ನಾಯಿಗೆ ನಾರಿವಾಣವಕ್ಕುವುದೆ ? ಕೂಡಲಸಂಗಮದೇವ.
-
ಎನ್ನ ಮನವೆಂಬ ಮರ್ಕಟನು
ತನುವಿಕಾರವೆಂಬ ಅಲ್ಪಸುಖದಾಸೆ ಮಾಡಿ,
ವೃಥಾ ಭ್ರಮಣಗೊಂಡು, ನಾನಾ ದೆಸೆಗೆ ಲಂಘಿಸಿ
ಅಳಲಿಸಿ ಬಳಲಿಸುತ್ತಿದೆ ನೋಡಾ!
ಕೂಡಲಸಂಗಮದೇವರೆಂಬ ವೃಕ್ಷಕ್ಕೆ ಲಂಘಿಸಿ
ಅಪರಿಮಿತ ಸುಖವನೆಯ್ದದು ನೋಡಾ!
-
ಕೊಂಬೆಯ ಮೇಲಣ ಮರ್ಕಟನಂತೆ
ಲಂಘಿಸುವುದೆನ್ನ ಮನವು
ನಿಂದಲ್ಲಿ ನಿಲಲೀಯದೆನ್ನ ಮನವು
ಹೊಂದಿದಲ್ಲಿ ಹೊಂದಲೀಯದೆನ್ನ ಮನವು
ಕೂಡಲಸಂಗಮದೇವಾ
ನಿಮ್ಮ ಚರಣ ಕಮಲದಲ್ಲಿ ಭ್ರಮರನಾಗಿರಿಸು ನಿಮ್ಮ ಧರ್ಮ.
-
ಅಂದಣವನೇರಿದ ಸೊಣಗನಂತೆ
ಕಂಡರೆ ಬಿಡದು ತನ್ನ ಮುನ್ನಿನ ಸ್ವಭಾವವನು
ಸುಡು, ಸುಡು; ಮನವಿದು ವಿಷಯಕ್ಕೆ ಹರಿವುದು,
ಮೃಡ, ನಿಮ್ಮನನುದಿನ ನೆನೆಯಲೀಯದು.
ಎನ್ನೊಡೆಯನೇ, ಕೂಡಲಸಂಗಮದೇವ,
ನಿಮ್ಮ ಚರಣವ ನೆನೆವಂತೆ ಕರುಣಿಸು,
ಸೆರಗೊಡ್ಡಿ ಬೇಡುವೆ ನಿಮ್ಮ ಧರ್ಮ.
-
ತುಪ್ಪದ ಸವಿಗೆ ಅಲಗ ನೆಕ್ಕುವ
ಸೊಣಗನಂತೆನ್ನ ಬಾಳುವೆ
ಸಂಸಾರಸಂಗವ ಬಿಡದು ನೋಡೆನ್ನ ಮನವು.
ಈ ನಾಯಿತನವ ಮಾಣಿಸು
ಕೂಡಲಸಂಗಮದೇವಯ್ಯ ನಿಮ್ಮ ಧರ್ಮ.
-
ಒಂದು ಮೊಲಕ್ಕೆ ನಾಯನೊಂಬತ್ತ ಬಿಟ್ಟಂತೆ
ಎನ್ನ ಬಿಡು, ತನ್ನ ಬಿಡೆಂಬುದು ಕಾಯವಿಕಾರ;
ಎನ್ನ ಬಿಡು, ತನ್ನ ಬಿಡೆಂಬುದು ಮನೋವಿಕಾರ
. ಕರಣೇಂದ್ರಿಯಗಳೆಂಬ ಸೊಣಗ ಮುಟ್ಟದ ಮುನ್ನ
ಮನ ನಿಮ್ಮನೆಯ್ದುಗೆ ಕೂಡಲಸಂಗಮದೇವ.
-
ತನ್ನ ವಿಚಾರಿಸಲೊಲ್ಲದು
ಇದಿರ ವಿಚಾರಿಸ ಹೋಹುದೀ ಮನವು.
ಏನು ಮಾಡುವೆನೀ ಮನವನು:
ಎಂತು ಮಾಡುವೆನೀ ಮನವನು-
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಬೆಂದ ಮನವನು ?
-
ತನ್ನಿಚ್ಛೆಯ ನುಡಿದರೆ ಮೆಚ್ಚುವುದೀ ಮನವು.
ಇದಿರಿಚ್ಛೆಯ ನುಡಿದರೆ ಮೆಚ್ಚದೀ ಮನವು
ಕೂಡಲಸಂಗನ ಶರಣರ ನಚ್ಚದ ಮೆಚ್ಚದ ಮನವನು
ಕಿಚ್ಚಿನೊಳಿಕ್ಕುವೆನು.
-
ಸುಡಲೀ ಮನವೆನ್ನ (ಮುಡುಬನ) ಮಾಡಿತ್ತು ನಡೆವಲ್ಲಿ;
ನುಡಿವಲ್ಲಿ ಅಧಿಕನೆಂದೆನಿಸಿತ್ತು.
ಬೆಡಗಿನ ಕೀಲು ಕಳೆದು, ಕೆಡೆದ ಬಳಿಕ,
ಕಡುಗೂಪ ಮಡದಿ ತಾ ಮುಟ್ಟಲಮ್ಮಳು;
ಒಡಲನುರಿಗೊಂಬುದು: ಒಡವೆಯನರಸು ಕೊಂಬ;
ಕಡುಗೂಪ ಮಡದಿಯ ಮತ್ತೊಬ್ಬ ಚೆನ್ನಿಗ ಕೊಂಬ.
ಮುನ್ನ ಮಾಡಿದ ಪಾಪ ತನ್ನ ಬೆನ್ನ ಬಿಡದನ್ನಕ
ಇನ್ನು ಬಯಸಿದರೊಳವೆ ಕೂಡಲಸಂಗಮದೇವ ?
-
ವಚನದ ಹುಸಿ-ನುಸುಳೆಂತು ಮಾಬುದೆನ್ನ ?
ಮನದ ಮರ್ಕಟತನವೆಂತು ಮಾಬುದೆನ್ನ ?
ಹೃದಯದ ಕಲ್ಮಷವೆಂತು ಮಾಬುದೆನ್ನ ?
ಕಾಯವಿಕಾರಕ್ಕೆ ತರಿಸಲುವೋದೆನು!
ಎನಗಿದು ವಿಧಿಯೇ, ಕೂಡಲಸಂಗಮದೇವ ?
-
ಮುನಿದೆಯಾದರೆ ಒಮ್ಮೆ ಜರಿದರೆ ಸಾಲದೆ ?
ಅಕಟಕಟ, ಮದನಂಗೆ ಮಾರುಗೊಡುವರೆ ?
ಹಗೆಗೆ ಮಾರುಗೊಟ್ಟು ನಿನ್ನವರನೊಪ್ಪಿಸುವರೆ ?
ಕೂಡಲಸಂಗಮದೇವ ?
-
ವಿಕಳನಾದೆನು ಪಂಚೇಂದ್ರಿಯಧಾತುವಿಂದ!
ಮತಿಗೆಟ್ಟನು ಮನದ ವಿಕಾರದಿಂದ!
ಧೃತಿಗೆಟ್ಟೆನು ಕಾಯವಿಕಾರದಿಂದ!
ಶರಣುವೊಕ್ಕೆನು ಕೂಡಲಸಂಗಮದೇವಯ್ಯ
ಎನ್ನುವನು ಕಾಯಯ್ಯ.
-
ಕಾಯವಿಕಾರ ಕಾಡಿಹುದಯ್ಯ!
ಮನೋವಿಕಾರ ಕೂಡಿಹುದಯ್ಯ!
ಇಂದ್ರಿಯವಿಕಾರ ಸುಳಿದಿಹುದಯ್ಯ!
ಆ ಸುಳುಹಿನೊಳಗೆ ಸುಳಿವುತ್ತಲಿದ್ದೇನೆ-ಸಿಲುಕಿಸದಿರಯ್ಯ!
ಅನ್ಯಚಿತ್ತವಿರಿಸದಿರಯ್ಯ, ನಿಮ್ಮ ಚಿತ್ತವಿರಿಸಯ್ಯ!
ಅನುಪಮಸುಖ ಸಾರಾಯ ಶರಣರಲ್ಲಿ,
ಕೂಡಲಸಂಗಮದೇವ, ನಿಮ್ಮಲ್ಲಿ ಇದೇ ವರವ ಬೇಡುವೆನಯ್ಯ ?
-
ಆನು ಒಬ್ಬನು; ಸುಡುವರೈವರು.
ಮೇಲೆ ಕಿಚ್ಚು ಘನ, ನಿಲಲು ಬಾರದು.
ಕಾಡುಬಸವನ ಹುಲಿ ಕೊಂಡೊಯ್ದರೆ
ಆರೈಯಲಾಗದೆ ಕೂಡಲಸಂಗಮದೇವ ?
-
ಬೆಳೆಯ ಭೂಮಿಯಲೊಂದು ಪ್ರಳಯದ ಕಸ ಹುಟ್ಟಿ,
ತಿಳಿಯಲೀಯದು; ಎಚ್ಚರಲೀಯದು.
ಎನ್ನವಗುಣವೆಂಬ ಕಸವ ಕಿತ್ತು ಸಲಹಯ್ಯ ಲಿಂಗತಂದೆ.
ಸುಳಿದೆಗೆದು ಬೆಳೆವೆನು ಕೂಡಲಸಂಗಮದೇವ.
-
ವಿಷಯವೆಂಬ ಹಸುರನೆನ್ನ ಮುಂದೆ ತಂದು
ಪಸರಿಸಿದೆಯಯ್ಯ;
ಪಶುವೇನ ಬಲ್ಲುದು ಹಸುರೆಂದೆಳಸುವುದು
ವಿಷಯರಹಿತನ ಮಾಡಿ, ಭಕ್ತಿರಸವ ದಣಿಯ ಮೇಯಿಸಿ
ಸುಬುದ್ಧಿಯೆಂಬುದಕವನೆರೆದು ನೋಡಿ ಸಲಹಯ್ಯ
ಕೂಡಲಸಂಗಮದೇವ. -
ಅಯ್ಯ, ಎಳಗರು ತಾಯನರಸಿ ಬಳಲುವಂತೆ
ಅಯ್ಯ, ನಿಮ್ಮನರಸಿ ಬಳಲುತ್ತಿದ್ದೇನೆ,
ಅಯ್ಯ, ನೀವೆನ್ನ ಮನಕ್ಕೆ ಪ್ರಸನ್ನವ ಮಾಡಿ
ಕಾರುಣ್ಯವ ಮಾಡಿರಯ್ಯ!
ನೀವೆನ್ನ ಮನಕ್ಕೆ ನೆಲೆವನೆಯಾಗಿ ಕಾರುಣ್ಯವ ಮಾಡಿರಯ್ಯ!
ನೀವಿನಿತು ಲೇಸನೀಯಯ್ಯ, ಅಂಬೇ, ಅಂಬೇ,
ಕೂಡಲಸಂಗಮದೇವ!
-
ಕೆಸರಲ್ಲಿ ಬಿದ್ದ ಪಶುವಿನಂತೆ
ಅನು ದೆಸೆದೆಸೆಗೆ ಬಾಯ ಬಿಡುತಿದ್ದೇನಯ್ಯ
ಅಯ್ಯಾ, ಆರೈವರಿಲ್ಲ--
"ಅಕಟಕಟಾ! ಪಶು" ವೆಂದೆನ್ನ
ಕೂಡಲಸಂಗಮದೇವ ಕೊಂಬ ಹಿಡಿದೆತ್ತುವನ್ನಕ.
-
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ, ಬೇರೆ ಗತಿಯುಂಟೆ ?
ಶಿವ ಶಿವಾ! ಹೋದಹೆ, ಹೋದಹೆನಯ್ಯ!
ನಿಮ್ಮ ಮನದೆತ್ತಲೆನ್ನ ತೆಗೆಯಯ್ಯ
ಪಶುವಾನು, ಪಶುಪತಿ ನೀನು.
ತುಡುಗುಣಿಯೆಂದೆನ್ನ ಹಿಡಿದು ಬಡಿಯದ ಮುನ್ನ.
ಒಡೆಯ, ನಿಮ್ಮ ಬಯ್ಯದಂತೆ ಮಾಡು
ಕೂಡಲಸಂಗಮದೇವ.
-
ಬಲೆಗೆ ಸಿಕ್ಕಿದ ಮೃಗದಂತೆ ನಾನಯ್ಯ.
ಮರಿದಪ್ಪಿದ ಹುಲ್ಲೆಯಂತೆ
ದೆಸೆದೆಸೆಗೆ ಬಾಯ ಬಿಡುತಿರುವೆನಯ್ಯ,
ನಾನಾರ ಸಾರುವೆನಯ್ಯ.
ತಾಯಾಗಿ ತಂದೆಯಾಗಿ ನೀನೇ, ಸಕಲ ಬಂಧುಬಳಗವು ನೀನೆ
ಕೂಡಲಸಂಗಮದೇವ.
-
ಸಮುದ್ರದೊಳಗಣ ಸಿಂಪಿನಂತೆ ಬಾಯ ಬಿಡುತಿದ್ದೇನಯ್ಯ!
ನೀವಲ್ಲದೆ ಮತ್ತಾರೂ ಎನ್ನನರಿವರಿಲ್ಲ ನೋಡಯ್ಯ!
ಕೂಡಲಸಂಗಮದೇವ, ನೀನಲ್ಲದೊಳಕೊಂಬವರಿಲ್ಲವಯ್ಯ.
-
ನೀ ಹುಟ್ಟಿಸಿದಲ್ಲಿ ಹುಟ್ಟಿ, ನೀ ಕೊಂದಲ್ಲಿ ಸಾಯದೆ
ಎನ್ನ ವಶವೇ ಅಯ್ಯ ?
ನೀನಿರಿಸಿದಲ್ಲಿ ಇರದೆ ಎನ್ನ ವಶವೇ ಅಯ್ಯ.
ಅಕಟಕಟಾ ಎನ್ನವನೆನ್ನವನೆನ್ನಯ್ಯ ಕೂಡಲಸಂಗಮದೇವಯ್ಯ.
-
ನರವಿಂಧ್ಯದೊಳಗೆನ್ನ ಹುಲುಗಿಳಿಯ ಮಾಡಿ
ಸಲಹುತ್ತ, "ಶಿವಶಿವಾ" ಎಂದೋದಿಸಯ್ಯ.
ಭಕ್ತಿ ಎಂಬ ಪಂಜರದೊಳಗಿಕ್ಕಿ ಸಲಹು ಕೂಡಲಸಂಗಮದೇವ.
-
ಅತ್ತಲಿತ್ತ ಹೋಗದಂತೆ ಹೆಳವನ ಮಾಡಯ್ಯ ತಂದೆ,
ಸುತ್ತಿ ಸುಳಿದು ನೋಡದಂತೆ ಅಂಧಕನ ಮಾಡಯ್ಯ ತಂದೆ.
ಮತ್ತೊಂದ ಕೇಳದಂತೆ ಕಿವುಡನ ಮಾಡಯ್ಯ ತಂದೆ.
ನಿಮ್ಮ ಶರಣರ ಪಾದವಲ್ಲದೆ ಅನ್ಯವಿಷಯಕ್ಕೆಳಸದಂತೆ ಇರಿಸು
ಕೂಡಲಸಂಗಮದೇವ. -
ಎನ್ನ ವಾಮ-ಕ್ಷೇಮ ನಿಮ್ಮದಯ್ಯ
ಎನ್ನ ಹಾನಿ-ವೃದ್ಧಿ ನಿಮ್ಮದಯ್ಯ
ಎನ್ನ ಮಾನಾಪಮಾನವು ನಿಮ್ಮದಯ್ಯ
ಬಳ್ಳಿಗೆ ಕಾಯಿ ದಿಮ್ಮಿತ್ತೆ ? ಕೂಡಲಸಂಗಮದೇವ.
-
ಇವನಾರವ, ಇವನಾರವ, ಇವನಾರವನೆಂದೆನಿಸದಿರಯ್ಯ.
ಇವ ನಮ್ಮವ, ಇವ ನಮ್ಮವ, ಇವನಮ್ಮವನೆಂದೆನಿಸಯ್ಯ
ಕೂಡಲಸಂಗಮದೇವಯ್ಯ ನಿಮ್ಮ ಮನೆಯ ಮಗನೆಂದೆನಿಸಯ್ಯ.
-
ನರ ಕೂರಂಬಿನಲೆಚ್ಚ; ಅವಂಗೊಲಿದೆಯಯ್ಯ
ಅರಳಂಬಿನಲೆಚ್ಚ ಕಾಮನನುರಹಿದೆಯಯ್ಯ.
ಇರುಳು ಹಗಲೆನ್ನದೆ ಪ್ರಾಣಘಾತವ ಮಾಡಿದ ಬೇಡನ
ಕೈಲಾಸಕೊಯ್ದೆಯಯ್ಯ.
ಎನ್ನನೇತಕೆ ಒಲ್ಲೆ ಕೂಡಲಸಂಗಮದೇವ ?
-
ನೀನೊಲಿದರೆ ಕೊರಡು ಕೊನರುವುದಯ್ಯ.
ನೀನೊಲಿದರೆ ಬರಡು ಹಯನಹುದಯ್ಯ.
ನೀನೊಲಿದರೆ ವಿಷವಮೃತವಹುದಯ್ಯ.
ನೀನೊಲಿದರೆ ಸಕಲ ಪಡಿಪದಾರ್ಥ ಇದಿರಲಿಪ್ಪವು
ಕೂಡಲಸಂಗಮದೇವ. -
ಆಶೆಯೆಂಬ ಪಾಶದಲ್ಲಿ ಭವಬಂಧನವಾಗಿದ್ದೆನಯ್ಯ.
ಸಕೃತೂ ನಿಮ್ಮ ನೆನೆಯಲೆನಗೆ ತೆರೆಹಿಲ್ಲವಯ್ಯ.
ಕರುಣಾಕರ, ಅಭಯಕರ, ವರದಾನಿ ಕರುಣಿಸಯ್ಯ.
ಸಂಸಾರಬಂಧವನು ಮಾಣಿಸಿ ಎನಗೆ ಕೃಪೆ ಮಾಡಿ
ನಿಮ್ಮ ಶ್ರೀಪಾದಪದ್ಮದಲ್ಲಿ ಭ್ರಮರನಾಗಿರಿಸಯ್ಯ
ಭಕ್ತಜನಮನೋವಲ್ಲಭ ಕೂಡಲಸಂಗಮದೇವ.
-
ಅರಿದಹೆನೆಂದರೆ ಅರುಹಿಂಗಸಾಧ್ಯ!
ನೆನೆದಹೆನೆಂದರೆ ನೆನೆಹಿಂಗಸಾಧ್ಯ!
ಭಾವಿಸುವೆನೆಂದರೆ ಭಾವಕ್ಕಸಾಧ್ಯ!
ವಾಙ್ಮಾನಸಕ್ಕಗೋಚರವನರಿವ ಪರಿಯೆಂತಯ್ಯ
ಗುರು ತೋರದನ್ನಕ ?
ಗುರು-ಶಿಷ್ಯರ ಸಂವಾದದಲ್ಲಿ
ಸ್ವಯಂ ಜೋತಿರ್ಲಿಂಗ ಸಾವಯವಪ್ಪುದೆಂಬ ಶ್ರುತಿ ಹುಸಿಯೆ ?
-
ಜ್ಞಾನಾಮೃತವೆಂಬ ಜಲಧಿಯ ಮೇಲೆ
ಸಂಸಾರವೆಂಬ ಹಾವಸೆ ಮುಸುಕಿಹುದು!
ನೀರ ಮೊಗೆವವರು ಬಂದು ನೂಕಿದಲ್ಲದೆ ತೆರಳದು!
ಮರಳಿ ಮರಳಿ ಮುಸುಕುವುದು ಮಾಣದಯ್ಯ!
ಆಗಳೂ ಎನ್ನುವನು ನೆನೆವುತ್ತಿರಬೇಕೆಂದು-
ಬೇಗ ಗುರು ಅಪ್ಪೈಸಿ ತನ್ನ ಪ್ರಸಾದವೆಂದು ಕುರುಹ ಕೊಟ್ಟನು.
ದಿವಾರಾತ್ರಿ ಮಾಡ ಹೇಳಿದ ಲಿಂಗಪೂಜೆಯ, ತನ್ನನರಿಯಬೇಕೆಂದು.
ಕೆರೆಯ ನೀರನುಂಡು ತೊರೆಯ ನೀರ ಹೊಗಳುವ
ಅರೆಮರುಳುಗಳ ಮೆಚ್ಚ ನಮ್ಮ ಕೂಡಲಸಂಗಮದೇವ.
-
ಮಡಕೆಯ ಮಾಡುವಡೆ ಮಣ್ಣೇ ಮೊದಲು,
ತೊಡಿಗೆಯ ಮಾಡುವಡೆ ಹೊನ್ನೇ ಮೊದಲು,
ಶಿವಪಥವನರಿವಡೆ ಗುರುಪಾದವೇ ಮೊದಲು
ಕೂಡಲಸಂಗಮದೇವನರಿವಡೆ ಶರಣರ ಸಂಗವೇ ಮೊದಲು.
-
ಕರಿಯಂಜುವುದು ಅಂಕುಶಕ್ಕಯ್ಯ!
ಗಿರಿಯಂಜುವುದು ಕುಲಿಶಕ್ಕಯ್ಯ!
ತಮಂಧವಂಜುವುದು ಜ್ಯೋತಿಗಯ್ಯ!
ಕಾನನವಂಜುವುದು ಬೇಗೆಗಯ್ಯ!
ಪಂಚಮಹಾಪಾತಕವಂಜುವುದು
ನಮ್ಮ ಕೂಡಲಸಂಗನ ನಾಮಕ್ಕಯ್ಯ!
-
ನೀರಿಂಗೆ ನೈದಿಲೇ ಶೃಂಗಾರ,
ಊರಿಂಗೆ ಆರವೆಯೇ ಶೃಂಗಾರ,
ಸಮುದ್ರಕ್ಕೆ ತೆರೆಯೇ ಶೃಂಗಾರ
ನಾರಿಗೆ ಗುಣವೇ ಶೃಂಗಾರ
ಗಗನಕ್ಕೆ ಚಂದ್ರಮನೇ ಶೃಂಗಾರ
ನಮ್ಮ ಕೂಡಲಸಂಗನ ಶರಣರಿಗೆ ನೊಸಲ ವಿಭೂತಿಯೇ ಶೃಂಗಾರ.
-
. ಅಕಟಕಟಾ ಬೆಡಗುಬಿನ್ನಾಣವೇನೋ ?!
'ಓಂ ನಮಶ್ಶಿವಾಯ' ಎಂಬುದೇ ಮಂತ್ರ!
'ಓಂ ನಮಶ್ಶಿವಾಯ' ಎಂಬುದೇ ತಂತ್ರ!
ನಮ್ಮ ಕೂಡಲಸಂಗಮದೇವರ ಮಾಣದೆ ನೆನವುದೇ ಮಂತ್ರ!
-
ಎಮ್ಮವರು ಬೆಸಗೊಂಡರೆ ಶುಭಲಗ್ನವೆಂದೆನ್ನಿರಯ್ಯ
ರಾಶಿ ಕೂಟ ಋಣ ಸಂಬಂಧ ಉಂಟೆಂದು ಹೇಳಿರಯ್ಯ
ನಾಳಿನ ದಿನಕಿಂದಿನ ದಿನ ಲೇಸೆಂದು ಹೇಳಿರಯ್ಯ
ಚಂದ್ರಬಲ ತಾರಾಬಲ ಉಂಟೆಂದು ಹೇಳಿರಯ್ಯ
ಕೂಡಲಸಂಗಮದೇವನ ಪೂಜಿಸಿದ ಫಲ ನಿಮ್ಮದಯ್ಯ.
-
ತಾಳಮರದ ಕೆಳಗೆ ಒಂದು ಹಾಲ ಹರವಿಯಿದ್ದರೆ
ಅದ ಹಾಲ ಹರವಿಯೆನ್ನರು: ಸುರೆಯ ಹರವಿಯೆಂಬರು.
ಈ ಭಾವಸಂದೆಯವ ಮಾಣಿಸಾ ಕೂಡಲಸಂಗಮದೇವ.
-
ಕುಂಬಳ ಕಾಯಿಗೆ ಕಬ್ಬುನದ ಕಟ್ಟ ಕೊಟ್ಟರೆ
ಕೊಳೆವುದಲ್ಲದೆ ಅದು ಬಲುಹಾಗ ಬಲ್ಲುದೆ ?
ಅಳಿಮನದವಂಗೆ ದೀಕ್ಷೆಯ ಕೊಟ್ಟರೆ
ಭಕ್ತಿಯೆಂತಹುದು ?
ಮುನ್ನಿನಂತೆ, ಕೂಡಲಸಂಗಯ್ಯ!
ಮನಹೀನನ ಮೀಸಲ ಕಾಯ್ದಿರಿಸಿದಂತೆ!!
-
ಸಗಣಿಯ ಬೆನಕನ ಮಾಡಿ ಸಂಪಿಗೆಯರಳಲ್ಲಿ
ಪೂಜಿಸಿದರೆ ರಂಜನೆಯಹುದಲ್ಲದೆ, ಅದರ ಗಂಜಳ ಬಿಡದಣ್ಣ!
ಮಣ್ಣ ಪ್ರತಿಮೆಯ ಮಾಡಿ ಮಜ್ಜನಕ್ಕೆರೆದರೆ
ನಿಚ್ಚ ಕೆಸರಹುದಲ್ಲದೆ ಅದರಚ್ಚಿಗ ಬಿಡದಣ್ಣ!!
ಲೋಕದ ಮಾನವಂಗೆ ಶಿವದೀಕ್ಷೆಯ ಕೊಟ್ಟರೆ
ಆ ಕೆಟ್ಟವನೇಕೆ ಸದ್ಭಕ್ತನಹನು ಕೂಡಲಸಂಗಮದೇವಾ ?
-
ಕಬ್ಬುನದ ಕೋಡಗ ಪರುಷ ಮುಟ್ಟಿ ಹೊನ್ನಾದರೇನು
ಅದು ತನ್ನ ಮುನ್ನಿನ ರೂಹ ಬಿಡದನ್ನಕ ? ಕೂಡಲಸಂಗಮದೇವಾ,
ನಿಮ್ಮ ನಂಬಿಯೂ, ನಂಬದ ಡಂಬಕ ನಾನಯ್ಯ.
-
ಒಳಗೆ ಕುಟಿಲ, ಹೊರಗೆ ವಿನಯವಾಗಿ
ಭಕ್ತರೆನಿಸಿಕೊಂಬವರನೊಲ್ಲನಯ್ಯಾ ಲಿಂಗವು!
ಅವರು ಸತ್ಪಥಕ್ಕೆ ಸಲ್ಲರು ಸಲ್ಲರಯ್ಯ!
ಒಳಹೊರಗೊಂದಾಗದವರಿಗೆ ಅಳಿಯಾಸೆದೋರಿ
ಬೀಸಾಡುವನವರ ಜಗದೀಶ ಕೂಡಲಸಂಗಮದೇವ.
-
ಮನೆಯೊಳಗೆ ಮನೆಯೊಡೆಯನಿದ್ದಾನೊ ಇಲ್ಲವೊ ?
ಹೊಸ್ತಿಲಲ್ಲಿ ಹುಲ್ಲು ಹುಟ್ಟಿ, ಮನೆಯೊಳಗೆ ರಜ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ತನುವಿನಲಿ ಹುಸಿ ತುಂಬಿ, ಮನದಲ್ಲಿ ವಿಷಯ ತುಂಬಿ
ಮನೆಯೊಳಗೆ ಮನೆಯೊಡೆಯನಿಲ್ಲ!
ಕೂಡಲಸಂಗಮದೇವ.
-
ಹಲವು ಕಾಲ ಹಂಸೆಯ ಸಂಗದಲಿದ್ದರೇನು
ಬಕ ಶುಚಿಯಾಗಬಲ್ಲುದೇ ?
ಗಂಗಾನದಿಯಲ್ಲಿದ್ದರೇನು ಪಾಷಾಣ ಮೃದುವಾಗಬಲ್ಲುದೇ ?
ಕಲ್ಪತರುವಿನ ಸನ್ನಿಧಿಯಲ್ಲಿದ್ದರೇನು
ಒಣ ಕೊರಡು ಕೊನರಿ ಫಲವಾಗಬಲ್ಲುದೇ ?
ಕಾಶೀಕ್ಷೇತ್ರದಲ್ಲಿ ಒಂದು ಶುನಕನಿದ್ದರೇನು ?
ಅದರ ಹಾಲು ಪಂಚಾಮೃತಕ್ಕೆ ಸಲುವುದೇ ?
ತೀರ್ಥದಲೊಂದು ಗಾರ್ದಭನಿದ್ದರೇನು ಕಾರಣಿಕನಾಗಬಲ್ಲುದೇ ?
ಖಂಡುಗ ಹಾಲೊಳಗೊಂದು ಇದ್ದಲಿಯಿದ್ದರೇನು ?
ಅದು ಬಿಳುಹಾಗಬಲ್ಲುದೆ ?
ಇದು ಕಾರಣ-ಕೂಡಲಸಂಗನ ಶರಣರ ಸನ್ನಿಧಿಯಲ್ಲಿ
ಅಸಜ್ಜನನಿದ್ದರೇನು ಸದ್ಭಕ್ತನಾಗಬಲ್ಲನೇ ?
-
ಓಡೆತ್ತ ಬಲ್ಲುದೋ ಅವಲಕ್ಕಿಯ ಸವಿಯ ?
ಕೋಡಗ ಬಲ್ಲುದೇ ಸೆಳೆಮಂಚದ ಸುಖವ ?
ಕಾಗೆ ನಂದನವನದೊಳಗಿದ್ದರೇನು,
ಕೋಗಿಲೆಯಾಗಬಲ್ಲುದೇ ?
ಕೊಳನ ತಡಿಯಲೊಂದು ಹೊರಸು ಕುಳಿತಿದ್ದರೇನು
ಕಳಹಂಸೆಯಾಗಬಲ್ಲುದೇ ಕೂಡಲಸಂಗಮದೇವ ?
-
ಎನಿಸು ಕಾಲ ಕಲ್ಲು ನೀರೊಳಗಿದ್ದರೇನು,
ನೆನೆದು ಮೃದುವಾಗಬಲ್ಲುದೆ ?
ಎನಿಸುಕಾಲ ನಿಮ್ಮ ಪೂಜಿಸಿ ಏವೆನಯ್ಯಾ
ಮನದಲ್ಲಿ ದೃಢವಿಲ್ಲದನ್ನಕ ?
ನಿಧಾನವ ಕಾಯ್ದಿದ್ದ ಬೆಂತರನ ವಿಧಿ ಎನಗಾಯಿತ್ತು
ಕಾಣಾ ಕೂಡಲಸಂಗಮದೇವ.
-
ಕೂಸುಳ್ಳ ಸೂಳೆ ಧನದಾಸೆಗೊತ್ತೆಗೊಂಡರೆ
ಕೂಸಿಂಗಿಲ್ಲ, ಬೊಜಗಂಗಿಲ್ಲ;
ಕೂಸನೊಮ್ಮೆ ಸಂತವಿಡುವಳು,
ಬೊಜಗನನೊಮ್ಮೆ ನೆರೆವಳು;
ಧನದಾಸೆ ಬಿಡದು ಕೂಡಲಸಂಗಮದೇವ.
-
ಎರದೆಲೆಯಂತೆ ಒಳಗೊಂದು ಹೊರಗೊಂದಾದರೆ
ಮೆಚ್ಚುವನೆ ?
ತಾನು ತನ್ನಂತೆ!
ನುಡಿ ಎರಡಾದರೆ ಮೆಚ್ಚುವನೆ ?
ತಾನು ತನ್ನಂತೆ!
ನಡೆ ಎರಡಾದರೆ ಮೆಚ್ಚುವನೆ ?
ತಾನು ತನ್ನಂತೆ!
ಉಡುವಿನ ನಾಲಗೆಯಂತೆ ಎರಡಾದರೆ ಮೆಚ್ಚುವನೇ ?
ಕೂಡಲಸಂಗಮದೇವ ತಾನು ತನ್ನಂತೆ!
-
ಭಕ್ತರ ಕಂಡರೆ ಬೋಳಪ್ಪಿರಯ್ಯ;
ಸವಣರ ಕಂಡರೆ ಬತ್ತಲೆಯಪ್ಪಿರಯ್ಯ
ಹಾರುವರ ಕಂಡರೆ ಹರಿನಾಮವೆಂಬಿರಯ್ಯ;
ಅವರವರ ಕಂಡರೆ ಅವರವರಂತೆ
ಸೂಳೆಗೆ ಹುಟ್ಟಿದವರ ತೋರದಿರಯ್ಯ.
ಕೂಡಲಸಂಗಯ್ಯನ ಪೂಜಿಸಿ ಅನ್ಯದೈವಂಗಳಿಗೆರಗಿ
ಭಕ್ತರೆನಿಸಿಕೊಂಬ ಅಜ್ಞಾನಿಗಳ ನಾನೇನೆಂಬೆನಯ್ಯ!
-
ಗಂಡ ಶಿವಲಿಂಗದೇವರ ಭಕ್ತ,
ಹೆಂಡತಿ ಮಾರಿಮಸಣಿಯ ಭಕ್ತೆ;
ಗಂಡ ಕೊಂಬುದು ಪಾದೋದಕಪ್ರಸಾದ,
ಹೆಂಡತಿ ಕೊಂಬುದು ಸುರೆಮಾಂಸ.
ಭಾಂಡ-ಭಾಜನ ಶುದ್ಧವಿಲ್ಲದವರ ಭಕ್ತಿ
ಹೆಂಡದ ಮಡಕೆಯ ಹೊರಗೆ ತೊಳೆದಂತೆ
ಕೂಡಲಸಂಗಮದೇವ.
-
ಹಾವಾಡಿಗನು, ಮೂಕೊರತಿಯು ತನ್ನ ಮಗನ ಮದುವೆಗೆ
ಶಕುನವ ನೋಡ ಹೋಗುವಾಗ,
ಇದಿರಲೊಬ್ಬ ಮೂಕೊರತಿಯ ಹಾವಾಡಿಗನ ಕಂಡು
ಶಕುನ ಹೊಲ್ಲವೆಂಬ ಚದುರನ ನೋಡಾ!
ತನ್ನ ಸತಿ ಮೂಕೊರತಿ, ತನ್ನ ಕೈಯಲು ಹಾವು!
ತಾನು ತನ್ನ ಭಿನ್ನವನರಿಯದೆ
ಅನ್ಯರನೆಂಬ ಕುನ್ನಿಯನೇನೆಂಬೆ ಕೂಡಲಸಂಗಮದೇವ!
-
ಅರ್ಥರೇಖೆಯಿದ್ದಲ್ಲಿ ಫಲವೇನು
ಆಯುಷ್ಯರೇಖೆಯಿಲ್ಲದನ್ನಕ ?
ಹಂದೆಯ ಕೈಯಲ್ಲಿ ಚಂದ್ರಾಯುಧವಿದ್ದು ಫಲವೇನು ?
ಅಂಧಕನ ಕೈಯಲ್ಲಿ ದರ್ಪಣವಿದ್ದು ಫಲವೇನು ?
ಮರ್ಕಟನ ಕೈಯಲ್ಲಿ ಮಾಣಿಕ್ಯವಿದ್ದು ಫಲವೇನು ?
ನಮ್ಮ ಕೂಡಲಸಂಗನ ಶರಣರನರಿಯದವರ ಕೈಯಲ್ಲಿ
ಲಿಂಗವಿದ್ದು ಫಲವೇನು ಶಿವಪಥವನರಿಯದನ್ನಕ ?
-
ಗಂಡನ ಮೇಲೆ ಸ್ನೇಹವಿಲ್ಲದ ಹೆಂಡತಿ,
ಲಿಂಗದ ಮೇಲೆ ನಿಷ್ಠೆಯಿಲ್ಲದ ಭಕ್ತ,
ಇದ್ದರೇನೋ, ಶಿವಶಿವಾ, ಹೋದರೇನೋ!
ಕೂಡಲ ಸಂಗಮ ದೇವ, ಕೇಳಯ್ಯ,
ಊಡದ ಆವಿಂಗೆ ಉಣ್ಣದ ಕರುವ ಬಿಟ್ಟಂತೆ!
-
ಹಾದರಕ್ಕೆ ಹೋದರೆ ಕಳ್ಳದಮ್ಮವಾಯಿತ್ತು!
ಹಾಳುಗೋಡೆಗೆ ಹೋದರೆ ಚೇಳೂರಿತ್ತು!
ಅಬ್ಬರವ ಕೇಳಿ ತಳವಾರನುಟ್ಟ ಸೀರೆಯ ಸುಲಿದ!
ನಾಚಿ ಹೋದರೆ, ಮನೆಯ ಗಂಡ ಬೆನ್ನ ಬಾರನೆತ್ತಿದ!
ಅರಸು ಕೂಡಲಸಂಗಮದೇವ ದಂಡವ ಕೊಂಡ!
-
ಅಳೆಯುತ್ತ ಅಳೆಯುತ್ತ ಬಳಲುವರಲ್ಲದೆ
ಕೊಳಗ ಬಳಲುವುದೇ ?
ನಡೆಯುತ್ತ ನಡೆಯುತ್ತ ಬಳಲುವರಲ್ಲದೆ, ಬಟ್ಟೆ ಬಳಲುವುದೆ ?
ಶ್ರವವ ಮಾಡುತ್ತ ಮಾಡುತ್ತ ಬಳಲುವರಲ್ಲದೆ
ಕೋಲು ಬಳಲುವುದೆ ?
ನಿಜವನರಿಯದ ಭಕ್ತ ಬಳಲುವನಲ್ಲದೆ, ಲಿಂಗ ಬಳಲುವುದೆ ?
ಕೂಡಲಸಂಗಮದೇವ, ಅರಸರಿಯದ ಬಿಟ್ಟಿಯೋಪಾದಿ!
-
ಧರಣಿಯ ಮೇಲೊಂದು ಹಿರಿದಪ್ಪ ಅಂಗಡಿಯನಿಕ್ಕಿ
ಹರದ ಕುಳ್ಳಿರ್ದ ನಮ್ಮ ಮಹದೇವಸೆಟ್ಟಿ.
ಒಮ್ಮನವಾದರೆ ಒಡನೆ ನುಡಿವನು;
ಇಮ್ಮನವಾದರೆ ನುಡಿಯನು.
ಕಾಣಿಯ ಸೋಲ; ಅರ್ಧ ಕಾಣಿಯ ಗೆಲ್ಲ.
ಜಾಣ ನೋಡವ್ವ ನಮ್ಮ ಕೂಡಲಸಂಗಮದೇವ.
-
ನಂಬರು, ನಚ್ಚರು; ಬರಿದೆ ಕರೆವರು;
ನಂಬಲರಿಯರೀ ಲೋಕದ ಮನುಜರು!
ನಂಬಿ ಕರೆದಡೆ, "ಓ" ಎನ್ನನೇ ಶಿವನು ?
ನಂಬದೆ, ನಚ್ಚದೆ ಬರಿದೆ ಕರೆವರ
ಕೊಂಬ ಮೆಟ್ಟಿ ಕೂಗೆಂದ ಕೂಡಲಸಂಗಮದೇವ.
-
ಹುತ್ತವ ಬಡಿದರೆ ಉರಗ ಸಾವುದೆ
ಘೋರತಪವ ಮಾಡಿದರೇನು
ಅಂತರಂಗ-ಆತ್ಮಶುದ್ಧಿಯಿಲ್ಲದವರನೆಂತು ನಂಬುವನಯ್ಯ
ಕೂಡಲಸಂಗಮದೇವ ?
-
ಮೇರು ಗುಣವನರಸುವುದೇ ಕಾಗೆಯಲ್ಲಿ ?
ಪರುಷ ಗುಣವನರಸುವುದೇ ಕಬ್ಬುನದಲ್ಲಿ ?
ಸಾಧು ಗುಣವನರಸುವನೇ ಅವಗುಣಿಯಲ್ಲಿ ?
ಚಂದನ ಗುಣವನರಸುವುದೇ ತರುಗಳಲ್ಲಿ ?
ಸರ್ವಗುಣಸಂಪನ್ನ ಲಿಂಗವೇ,
ನೀನೆನ್ನಲ್ಲಿ ಅವಗುಣವನರಸುವುದೇ, ಕೂಡಲಸಂಗಮದೇವ!
-
ಸಾರ, ಸಜ್ಜನರ ಸಂಗವ ಮಾಡುವುದು!
ದೂರ, ದುರ್ಜನರ ಸಂಗ ಬೇಡವಯ್ಯ!
ಆವ ಹಾವಾದರೇನು ? ವಿಷವೊಂದೆ!
ಅಂಥವರ ಸಂಗ ನಮಗೆ ಬೇಡವಯ್ಯ.
ಅಂತರಂಗಶುದ್ಧವಿಲ್ಲದವರ ಸಂಗ
ಸಿಂಗಿ ಕಾಳಕೂಟ ವಿಷವೋ ಕೂಡಲಸಂಗಯ್ಯ.
-
ಹಸಿದು ಎಕ್ಕೆಯ ಕಾಯ ಮೆಲಬಹುದೆ ?
ನೀರಡಸಿ ವಿಷವನೀಂಟಬಹುದೆ ?
ಸುಣ್ಣದ, ತುಯ್ಯಲ ಬಣ್ಣವೊಂದೆ ಎಂದರೆ
ನಂಟುತನಕ್ಕೆ ಉಣ್ಣಬಹುದೆ ?
ಲಿಂಗಸಾರಾಯ ಸಜ್ಜನರಲ್ಲದವರ
ಕೂಡಲಸಂಗಮ ದೇವರೆಂತೊಲಿವ!
-
ಎಲವದ ಮರ ಹೂತು ಫಲವಾದ ತೆರನಂತೆ
ಸಿರಿಯಾದರೇನು ಶಿವಭಕ್ತಿಯಿಲ್ಲದನ್ನಕ ?
ಫಲವಾದರೇನು, ಹೇಳಾ, ಹಾವುಮೆಕ್ಕೆಯ ಕಾಯಿ ?
ಕುಲವಿಲ್ಲದ ರೂಹು ಎಲ್ಲಿದ್ದರೇನು ?
ಬಚ್ಚಲ ನೀರು ತಿಳಿದಲ್ಲಿ ಫಲವೇನು ?
ಅವಗುಣಿಗಳ ಮೆಚ್ಚ ಕೂಡಲಸಂಗಮದೇವ.
-
ಗಿಳಿಯೋದಿ ಫಲವೇನು
ಬೆಕ್ಕು ಬಹುದ ಹೇಳಲರಿಯದು!
ಜಗವೆಲ್ಲವ ಕಾಂಬ ಕಣ್ಣು
ತನ್ನ ಕೊಂಬ ಕೊಯಿಲೆಯ ಕಾಣಲರಿಯದು!
ಇದಿರ ಗುಣವ ಬಲ್ಲೆವೆಂಬರು
ತಮ್ಮ ಗುಣವ ತಾವರಿಯರು ಕೂಡಲಸಂಗಮದೇವ.
-
ಲೋಕದ ಡೊಂಕ ನೀವೇಕೆ ತಿದ್ದುವಿರಿ ?
ನಿಮ್ಮ ನಿಮ್ಮ ತನವ ಸಂತೈಸಿಕೊಳ್ಳಿ;
ನಿಮ್ಮ ನಿಮ್ಮ ಮನವ ಸಂತೈಸಿಕೊಳ್ಳಿ.
ನೆರೆಮನೆಯ ದುಃಖಕ್ಕೆ ಅಳುವರ ಮೆಚ್ಚ
ನಮ್ಮ ಕೂಡಲಸಂಗಮದೇವ.
-
ಏತ ತಲೆವಾಗಿದರೇನು ? ಗುರುಭಕ್ತನಾಗಬಲ್ಲುದೆ ?
ಇಕ್ಕುಳ ಕೈ ಮುಗಿದರೇನು ? ಭೃತ್ಯಾಚಾರಿಯಾಗಬಲ್ಲುದೆ ?
ಗಿಳಿಯೋದಿದರೇನು ? ಲಿಂಗವೇದಿಯಾಗಬಲ್ಲುದೆ ?
ಕೂಡಲಸಂಗನ ಶರಣರು ಬಂದ ಬರವ, ನಿಂದ ನಿಲವ
ಅನಂಗಸಂಗಿಗಳೆತ್ತ ಬಲ್ಲರು ?
-
ಒಲವಿಲ್ಲದ ಪೂಜೆ, ನೇಹವಿಲ್ಲದ ಮಾಟ;
ಆ ಪೂಜೆಯು, ಆ ಮಾಟವು
ಚಿತ್ರದ ರೂಹು ಕಾಣಿರಣ್ಣ!
ಚಿತ್ರದ ಕಬ್ಬು ಕಾಣಿರಣ್ಣ!
ಅಪ್ಪಿದರೆ ಸುಖವಿಲ್ಲ, ಮೆಲಿದರೆ ಸವಿಯಿಲ್ಲ;
ಕೂಡಲಸಂಗಮದೇವ, ನಿಜವಿಲ್ಲದವನ ಭಕ್ತಿಯಿಂತುಟು!
-
ಹಬ್ಬಕ್ಕೆ ತಂದ ಹರಕೆಯ ಕುರಿ
ತೋರಣಕ್ಕೆ ತಂದ ತಳಿರ ಮೇಯಿತ್ತು!
ಕೊಂದಹರೆಂಬುದನರಿಯದೆ ಬೆಂದೊಡಲ ಹೊರೆಯ
ಹೋಯಿತ್ತು!
ಅದಂದೆ ಹುಟ್ಟಿತು, ಅದಂದೆ ಹೊಂದಿತ್ತು.
ಕೊಂದವರುಳಿದರೆ ಕೂಡಲಸಂಗಮದೇವ ?
-
ಹಾವಿನ ಬಾಯಿ ಕಪ್ಪೆ ಹಸಿದು
ತಾ ಹಾರುವ ನೊಣಕಾಸೆ ಮಾಡುವಂತೆ,
ಶೂಲವನೇರುವ ಕಳ್ಳ ಹಾಲು ತುಪ್ಪವ ಕುಡಿದು
ಮೇಲಿನ್ನೇಸು ಕಾಲ ಬದುಕುವನೋ ?!
ಕೆಡುವೊಡಲ ನೆಚ್ಚಿ, ಕಡುಹುಸಿಯನೆ ಹುಸಿದು
ಒಡಲ ಹೊರೆವವರ ಮೆಚ್ಚ ನಮ್ಮ ಕೂಡಲಸಂಗಮದೇವ.
-
ಅರತವಡಗದು. ಕ್ರೋಧ ತೊಲಗದು;
ಕ್ರೂರಕುಭಾಷೆ ಕುಹುಕ ಬಿಡದನ್ನಕ
ನೀನೆತ್ತಲು ? ಶಿವನೆತ್ತಲು ? ಹೋಗತ್ತ ಮರುಳೆ!
ಭವರೋಗವೆಂಬ ತಿಮಿರ ತಿಳಿಯದನ್ನಕ
ಕೂಡಲಸಂಗಯ್ಯನೆತ್ತ ? ನೀನೆತ್ತ ? ಮರುಳೇ!
-
ಹಾವು ತಿಂದವರ ನುಡಿಸ ಬಹುದು!
ಗರ ಹೊಡೆದವರ ನುಡಿಸ ಬಹುದು!
ಸಿರಿಗರ ಹೊಡೆದವರ ನುಡಿಸ ಬಾರದು ನೋಡಯ್ಯ!
ಬಡತನವೆಂಬ ಮಂತ್ರವಾದಿ ಹೋಗಲು
ಒಡನೆ ನುಡಿವರಯ್ಯ ಕೂಡಲಸಂಗಮದೇವ.
-
ಅರೆಭಕ್ತರಾದವರ ನೆರೆ ಬೇಡ, ಹೊರೆ ಬೇಡ.
ದಾರಿಸಂಗಡ ಬೇಡ, ದೂರ ನುಡಿಯಲು ಬೇಡ.
ಕೂಡಲಸಂಗನ ಶರಣರಲ್ಲಿ ಅಚ್ಚಲಿಂಗೈಕ್ಯಂಗೆ
ತೊತ್ತಾಗಿಹುದು ಕರಲೇಸಯ್ಯ.
-
ದೂಷಕನಾವನೊಬ್ಬ ದೇಶವ ಕೊಟ್ಟರೆ,
ಆಸೆಮಾಡಿ ಅವನ ಹೊರೆಯಲಿರಬೇಡ.
ಮಾದಾರ ಶಿವಭಕ್ತನಾದರೆ
ಆತನ ಹೊರೆಯಲು ಇಪ್ಪುದು ಕರಲೇಸಯ್ಯ!
ಭೃತ್ಯನಾಗಿ, ತೊತ್ತಾಗಿಪ್ಪುದು ಕರಲೇಸಯ್ಯ!
ಕಾಡುಸೊಪ್ಪ ತಂದು ಓಡಿನಲ್ಲಿ ಹುರಿದಿಟ್ಟುಕೊಂಡು
ಕೂಡಿಕೊಂಡಿಪ್ಪುದು ನಮ್ಮ ಕೂಡಲಸಂಗನ ಶರಣರ.
-
ಸಾರ ಸಜ್ಜನರ ಸಂಗವೇ ಲೇಸು ಕಂಡಯ್ಯ!
ದೂರ ದುರ್ಜನರ ಸಂಗವದು ಭಂಗವಯ್ಯ!
ಸಂಗವೆರಡುಂಟು-ಒಂದ ಬಿಡು, ಒಂದ ಹಿಡಿ
ಮಂಗಳಮೂರ್ತಿ ನಮ್ಮ ಕೂಡಲಸಂಗನ ಶರಣ.
-
ಪಟ್ಟವ ಕಟ್ಟಿದ ಬಳಿಕ ಲಕ್ಷಣವನರಸುವರೆ ?
ಲಿಂಗದೇವನ ಪೂಜಿಸಿ ಕುಲವನರಸುವರೆ,
ಅಯ್ಯಾ, ಕೂಡಲಸಂಗಮದೇವ
"ಭಕ್ತಕಾಯ ಮಮಕಾಯ" ವೆಂದನಾಗಿ ?
-
ಪರಷ ಮುಟ್ಟಿದ ಬಳಿಕ ಕಬ್ಬುನವಾಗದು ನೋಡಾ!
ಲಿಂಗ(ವ) ಮುಟ್ಟಿದ ಬಳಿಕ
ಕುಚಿತ್ತಾಚಾರವಾಗದು ನೋಡಾ
ಕೂಡಲಸಂಗನ ಶರಣರು ಅನ್ಯವನರಿಯರಾಗಿ.
-
ದೇವಲೋಕ ಮರ್ತ್ಯಲೋಕವೆಂಬುದು
ಬೇರೆ ಮತ್ತುಂಟೆ ? ಇಹಲೋಕದೊಳಗೇ ಮತ್ತನಂತಲೋಕ!
ಶಿವಲೋಕ ಶಿವಾಚಾರವಯ್ಯ,
ಶಿವಭಕ್ತನಿದ್ದ ಠಾವೇ ದೇವಲೋಕ,
ಭಕ್ತನಂಗಳವೇ ವಾರಣಾಸಿ,
ಶಿವಭಕ್ತನ ಕಾಯವೇ ಕೈಲಾಸ, ಇದು ಸತ್ಯ ಕೂಡಲಸಂಗಮದೇವ.
-
ಕಟ್ಟಿದಿರಲ್ಲಿ ಶಿವಭಕ್ತನ ಕಂಡು,
ದೃಷ್ಟಿಯಾರೆ ಮನಮುಟ್ಟಿ ನೋಡಿ ಶರಣೆಂದರೆ
ಹುಟ್ಟೇಳು ಜನ್ಮದ ಪಾಪ ಬಿಟ್ಟು ಹೋಹವು ನೋಡಾ!
ಮುಟ್ಟಿ ಚರಣಕ್ಕೆರಗಿದರೆ,
ತನು ಒಪ್ಪಿದಂತಿಹುದು
ಪರುಷ ಮುಟ್ಟಿದಂತೆ.
ಕರ್ತೃ ಕೂಡಲಸಂಗನ ಶರಣರ ಸಂಗವು!
ಮತ್ತೆ ಭವಮಾಲೆಯ ಹೊದ್ದಲೀಯದು ನೋಡಾ!
-
ಆರಾರ ಸಂಗವೇನೇನ ಮಾಡದಯ್ಯ!
ಕೀಡೆ ಕುಂಡಲಿಗನಾಗದೇನಯ್ಯ ?
ಚಂದನದ ಸನ್ನಿಧಿಯಲ್ಲಿ, ಪರಿಮಳ ತಾಗಿ
ಬೇವು-ಬೊಬ್ಬುಲಿ-ತರಿಯ ಗಂಧಂಗಳಾಗವೆ ?
ನಮ್ಮ ಕೂಡಲಸಂಗನ ಶರಣರ ಸನ್ನಿಧಿಯಲ್ಲಿದ್ದು
ಕರ್ಮ ನಿರ್ಮಳವಾಗದಿಹುದೇ ?
-
ಹಾವಿನ ಡೊಂಕು ಹುತ್ತಕ್ಕೆ ಸಸಿನ.
ನದಿಯ ಡೊಂಕು ಸಮುದ್ರಕ್ಕೆ ಸಸಿನ.
ನಮ್ಮ ಕೂಡಲಸಂಗನ ಶರಣರ ಡೊಂಕು ಲಿಂಗಕ್ಕೆ ಸಸಿನ.
-
ಆಳಿಗೊಂಡಿಹರೆಂದು ಅಂಜಲದೇಕೆ ?
ನಾಸ್ತಿಕವಾಡಿಹರೆಂದು ನಾಚಲದೇಕೆ ?
ಆರಾದಡಾಗಲಿ ಶ್ರೀ ಮಹಾದೇವಂಗೆ ಶರಣೆನ್ನಿ.
ಏನೂ ಅರಿಯೆನೆಂದು ಮೋನಗೊಂಡಿರಬೇಡ
ಕೂಡಲಸಂಗಮದೇವರ ಮುಂದೆ ದಂ-ದಣ-ದತ್ತಣಯೆನ್ನಿ.
-
ಹಮ್ಮಿನ ಭಕ್ತಿ ಕರ್ಮಕ್ಕೆ ಮೊದಲು!
ಮರ್ಮವರಿಯದ ಮಾಟ ಸಯಿದಾನದ ಕೇಡು!
ಬಂದ ಸಮಯೋಚಿತವನರಿಯದಿದ್ದರೆ
ನಿಂದಿರಲೊಲ್ಲ ಕೂಡಲಸಂಗಮದೇವ.
-
ಬಲ್ಲಿದರೊಡನೆ ಬವರವಾದರೆ
ಗೆಲಲುಂಟು ಸೋಲಲುಂಟು-
ಕಳನೊಳಗೆ ಭಾಷೆ ಪೂರಾಯವಯ್ಯ!
ನಮ್ಮ ಕೂಡಲಸಂಗನ ಶರಣರಿಗೆ
ಮಾಡಿ ಮಾಡಿ, ಧನ ಸವೆದು ಬಡವಾದರೆ
ಆ ಭಕ್ತನು ಲಿಂಗಕ್ಕೆ ಪೂಜೆಯಹನು.
-
ಗೀತವ ಬಲ್ಲಾತ ಜಾಣನಲ್ಲ.
ಮಾತ ಬಲ್ಲಾತ ಜಾಣನಲ್ಲ.
ಜಾಣನು ಜಾಣನು, ಆತ ಜಾಣನು;
ಲಿಂಗವ ನೆರೆ ನಂಬಿದಾತ ಆತ ಜಾಣನು!
ಜಂಗಮಕ್ಕೆ ಸವೆಸುವಾತ ಆತ ಜಾಣನು!
ಜವನ ಬಾಯಲು ಬಾಲವ ಕೊಯ್ದು
ಹೋದಾತ ಆತ ಜಾಣನು
ನಮ್ಮ ಕೂಡಲಸಂಗನ ಶರಣನು!
-
ಹಾವು-ಹದ್ದು-ಕಾಗೆ-ಗೂಗೆ ಅನಂತ ಕಾಲ ಬದುಕವೆ ?
ಬೇಡವೋ ಮಾನವ,
ಲೇಸೆನಿಸಿಕೊಂಡು ಬದುಕುವೋ, ಮಾನವ, ಶಿವಭಕ್ತನಾಗಿ!
"ಜೀವಿತಂ ಶಿವಭಕ್ತಾನಾಂ ವರಂ ಪಂಚ ದಿನಾನಿ ಚ
ಅಜಕಲ್ಪ ಸಹಸ್ರಂ ತು ಭಕ್ತಿಹೀನಂ ನ ಶಾಂಕರಿ" ಎಂದುದಾಗಿ
ನಮ್ಮ ಕೂಡಲಸಂಗಮದೇವರ ಭಕ್ತಿವಿಡಿದು
ಐದು ದಿನವಾದರೂ ಬದುಕಿದರೆ ಸಾಲದೆ ?!
-
೧೦೧. ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಒಂದು ದಿನ ಬದುಕಿದರೇನು ?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು.
-
೧೦೨. ಮರ್ತ್ಯಲೋಕವೆಂಬುದು ಕರ್ತಾರನ ಕಮ್ಮಟವಯ್ಯ.
ಇಲ್ಲಿ ಸಲ್ಲುವರು ಅಲ್ಲಿಯೂ ಸಲ್ಲುವರಯ್ಯ.
ಇಲ್ಲಿ ಸಲ್ಲದವರು ಅಲ್ಲಿಯೂ ಸಲ್ಲರಯ್ಯ
ಕೂಡಲಸಂಗಮದೇವ.
-
೧೦೩. ಹೊತ್ತಾರೆಯೆದ್ದು ಶಿವಲಿಂಗದೇವನ
ದೃಷ್ಟಿಯಾರೆ ನೋಡದವನ ಸಂಸಾರವೇನವನ ?!
ಬಾಳುವೆಣನ ಬೀಳುವೆಣನ ಸಂಸಾರವೇನವನ ?!
ನಡೆವೆಣನ ನುಡಿವೆಣನ ಸಂಸಾರವೇನವನ ?!
ಕರ್ತೃ ಕೂಡಲಸಂಗ, ನಿಮ್ಮ ತೊತ್ತಗೆಲಸಮಾಡದವನ
ಸಂಸಾರವೇನವನ ?! -
೧೦೪. ವ್ಯಾಧನೊಂದು ಮೊಲನ ತಂದರೆ
ಸಲುವ ಹಾಗಕ್ಕೆ ಬಿಲಿವರಯ್ಯ.
ನೆಲನಾಳ್ದನ ಹೆಣನೆಂದರೆ
ಒಂದಡಕೆಗೆ ಕೊಂಬವರಿಲ್ಲ ನೋಡಯ್ಯ.
ಮೊಲನಿಂದ ಕರಕಷ್ಟ ನರನ ಬಾಳುವೆ!
ಸಲೆ ನಂಬೋ ನಮ್ಮ ಕೂಡಲಸಂಗಮದೇವನ.
-
೧೦೫. ಉತ್ಪತ್ತಿ ಶುಕ್ಲ-ಶೋಣಿತದಿಂದಾದ ಲಜ್ಜೆ ಸಾಲದೆ ?
ಅಂತು ಬಲಿದ ಸಪ್ತಧಾತುವಿನ
ನರಕದೇಹದೊಳಿಪ್ಪ ಹೇಸಿಕೆ ಸಾಲದೆ ?
ಮತ್ತೆಯು ಪಾಪಂಗಳ ಮಾಡಿ
ದುರಿತಂಗಳ ಹೆರುವ ಹೇಗತನವೇಕಯ್ಯ ?
ಕಾಲನ ಕೈಯ ಬಡಿಸಿಕೊಂಡು
ನರಕವನುಂಬುದು ವಿಧಿಯೇ, ಎಲೆ ಮನುಜ ?
ಒತ್ತೊತ್ತೆಯ ಜನನವ ಗೆಲುವಡೆ
ಕರ್ತನ ಪೂಜಿಸು ನಮ್ಮ ಕೂಡಲಸಂಗಮದೇವನ!
-
೧೦೬. ಮನವೇ ಸರ್ಪ, ತನುವೇ ಹೇಳಿಗೆ!
ಹಾವಿನೊಡತಣ ಹುದುವಾಳಿಗೆ!
ಇನ್ನಾವಾಗ ಕೊಂದಹುದೆಂದರಿಯೆ.
ಇನ್ನಾವಾಗ ತಿಂದಹುದೆಂದರಿಯೆ.
ನಿಚ್ಚಕ್ಕೆ ನಿಮ್ಮ ಪೂಜಿಸಬಲ್ಲಡೆ
ಅದೇ ಗಾರುಡ ಕೂಡಲಸಂಗಮದೇವ.
-
೧೦೭. ನರೆ ಕೆನ್ನೆಗೆ, ತೆರೆ ಗಲ್ಲಕೆ,
ಶರೀರ ಗೂಡುವೋಗದ ಮುನ್ನ;
ಹಲ್ಲು ಹೋಗಿ, ಬೆನ್ನು ಬಾಗಿ
ಆನ್ಯರಿಗೆ ಹಂಗಾಗದ ಮುನ್ನ;
ಕಾಲ ಮೇಲೆ ಕೈಯನೂರಿ
ಕೋಲ ಹಿಡಿಯದ ಮುನ್ನ;
ಮುಪ್ಪಿಂದೊಪ್ಪವಳಿಯದ ಮುನ್ನ;
ಮೃತ್ಯು ಮುಟ್ಟದ ಮುನ್ನ
ಪೂಜಿಸುವೋ ಕೂಡಲಸಂಗಮದೇವನ.
-
೧೦೮. ನೀರ ಬೊಬ್ಬುಳಿಕೆಗೆ ಕಬ್ಬುನದ ಕಟ್ಟ ಕೊಟ್ಟು
ಸುರಕ್ಷಿತವ ಮಾಡುವ ಭರವ ನೋಡಾ!
ಮಹಾದಾನಿ ಕೂಡಲಸಂಗಮ ದೇವನ ಪೂಜಿಸಿ ಬದುಕುವೋ
ಕಾಯವ ನಿಶ್ಚಯಿಸದೆ!
-
೧೦೯. ಹಂಜರ ಬಲ್ಲಿತ್ತೆಂದು ಅಂಜದೇ ಓದುವ ಗಿಳಿಯೇ,
ಎಂದೆಂದೂ ಅಳಿಯೆನೆಂದು
ಗುಡಿಗಟ್ಟಿದೆಯಲ್ಲಾ ನಿನ್ನ ಮನದಲ್ಲಿ!
ಮಾಯಾಮಂಜರ ಕೊಲುವಡೆ, ನಿನ್ನ ಹಂಜರ ಕಾವುದೇ
ಕೂಡಲಸಂಗಮದೇವನಲ್ಲದೆ ?
-
೧೧೦. ಸಂಸಾರವೆಂಬುದೊಂದು ಗಾಳಿಯ ಸೊಡರು!
ಸಿರಿಯೆಂಬುದೊಂದು ಸಂತೆಯ ಮಂದಿ ಕಂಡಯ್ಯ!
ಇದ ನೆಚ್ಚಿ ಕೆಡಬೇಡ;
ಸಿರಿಯೆಂಬುದ ಮರೆದು ಪೂಜಿಸು
ನಮ್ಮ ಕೂಡಲಸಂಗಮದೇವನ.
-
೧೧೧. ಎಲೆಯೆಲೆ ಮಾನವಾ, ಅಳಿಯಾಸೆ ಬೇಡವೋ,
ಕಾಳ-ಬೆಳುದಿಂಗಳು-ಸಿರಿ ಸ್ಥಿರವಲ್ಲ!
ಕೇಡಿಲ್ಲದ ಪದವಿಯನೀವ
ಕೂಡಲಸಂಗಮದೇವಯ್ಯನ ಮರೆಯದೆ ಪೂಜಿಸು.
-
೧೧೨. ಎಂತಕ್ಕೆ ಎಂತಕ್ಕೆ
ಹಡೆದ ಕಾಯ ಬೀಯವಾಗದ ಮುನ್ನ ಅಟ್ಟುಣ್ಣವೋ!
ಬೆರಣಿಯುಳ್ಳಲ್ಲಿ ಹೊತ್ತು ಹೋಗದ ಮುನ್ನ ಅಟ್ಟುಣ್ಣವೋ!
ಮರಳಿ ಭವಕ್ಕೆ ಬಹೆ ಬಾರದಿಹೆ!
ಕರ್ತೃ ಕೂಡಲಸಂಗಂಗೆ ಶರಣೆನ್ನವೋ!
-
೧೧೩. ಶಕುನವೆಂದೆಂಬೆ ಅಪಶಕುನವೆಂದೆಂಬೆ,
ನಿಮ್ಮವರು ಅಳಲಿಕಂದೇಕೆ ಬಂದೆ ?
ನಿಮ್ಮವರು ಅಳಲಿಕಿಂದೇಕೆ ಹೋದೆ ?
ನೀ ಹೋಹಾಗಳಕ್ಕೆ!
ನೀ ಬಾಹಾಗಳಕ್ಕೆ!
ಅಕ್ಕೆ ಬಾರದ ಮುನ್ನ ಪೂಜಿಸು ಕೂಡಲಸಂಗಮದೇವನ.
-
೧೧೪. ನಿಮಿಷಂ ನಿಮಿಷಂ ಭೋ!
ಕ್ಷಣದೊಳಗರ್ಧಂ ಭೋ!
ಕಣ್ಣ ಮುಚ್ಚಿ ಬಿಚ್ಚುವಿನಿಸು ಬೇಗಂ ಭೋ
ಸಂಸಾರದಾಗುಂ ಭೋ!
ಸಂಸಾರದ ಹೋಗುಂ ಭೋ!
ಸಂಸಾರದೊಪ್ಪಂ ಭೊ!
ಕೂಡಲಸಂಗಮದೇವ ಮಾಡಿದ
ಮಾಯಂ ಭೋ!
ಅಭ್ರಚ್ಛಾಯಂ ಭೋ!
-
೧೧೫. ಹರನೀವ ಕಾಲಕ್ಕೆ ಸಿರಿಯು ಬೆನ್ನಲಿ ಬಕ್ಕು-
ಹರಿದು ಹೆದ್ದೊರೆಯು ಕೆರೆ ತುಂಬಿದಂತಯ್ಯ;
ನೆರೆಯದ ವಸ್ತು ನೆರೆವುದು ನೋಡಯ್ಯ;
ಅರಸು ಪರಿವಾರ ಕೈವಾರ ನೋಡಯ್ಯ.
ಪರಮನಿರಂಜನ ಮರೆವ ಕಾಲಕ್ಕೆ
ತುಂಬಿದ ಹರವಿಯ ಕಲ್ಲು ಕೊಂಡಂತೆ
ಕೂಡಲಸಂಗಮದೇವ.
-
೧೧೬. ಪುಣ್ಯಗಳಹ ಕಾಲಕ್ಕೆ ಹಗೆಗಳು ತನ್ನವರಹರು!
ಪುಣ್ಯಗಳಹ ಕಾಲಕ್ಕೆ ಮಣ್ಣು ಹೊನ್ನಹುದು!
ಪುಣ್ಯಗಳಹ ಕಾಲಕ್ಕೆ ಹಾವು ನೇವಳವಹುದು!
ಪುಣ್ಯಗಳಹ ಕಾಲಕ್ಕೆ ಅನ್ಯರು ತನ್ನವರಹರು!
ಇಂತಪ್ಪ ಪುಣ್ಯಗಳೆಲ್ಲವೂ ಭಕ್ತಿಯಿಂದಲಹುದು!
ಭಕ್ತಿ ಕೆಟ್ಟರೆ ಪುಣ್ಯವೂ ಕೆಡುವುದು!
ಇಂತಪ್ಪ ಭಕ್ತಿಯೂ ಪುಣ್ಯವೂ ಚೆನ್ನಬಸವಣ್ಣನಿಂದುಂಟಾಗಿ
ನಾನು ಬದುಕಿದೆನಯ್ಯ ಕೂಡಲಸಂಗಮದೇವ .
-
೧೧೭. ಹೊಯ್ದರೆ ಹೊಯ್ಗಳು ಕೈಯ ಮೇಲೆ,
ಬೈದರೆ ಬೈಗಳು ಕೈಯ ಮೇಲೆ,
ಹಿಂದಣ ಜನನವೇನಾದರಾಗಲಿ,
ಇಂದಿನ ಭೋಗವು ಕೈಯ ಮೇಲೆ.
ಕೂಡಲಸಂಗಮದೇವಯ್ಯ,
ನಿನ್ನ ಪೂಜಿಸಿದ ಫಲ ಕೈಯ್ಯ ಮೇಲೆ!
-
೧೧೮. ಹೊತ್ತಾರೆ ಎದ್ದು ಅಗ್ಘವಣಿ ಪತ್ರೆಯ ತಂದು
ಹೊತ್ತು ಹೋಗದ ಮುನ್ನ ಪೂಜಿಸು ಲಿಂಗವ.
ಹೊತ್ತು ಹೋದ ಬಳಿಕ ನಿನ್ನನಾರು ಬಲ್ಲರು ?
ಹೊತ್ತು ಹೋಗದ ಮುನ್ನ, ಮೃತ್ಯು ಒಯ್ಯದ ಮುನ್ನ
ತೊತ್ತುಗೆಲಸವ ಮಾಡು ಕೂಡಲಸಂಗಂಗೆ.
-
೧೧೯. ಅಚ್ಚಿಗವೇಕಯ್ಯ ? ಸಂಸಾರದೊಳಗಿರ್ದು
ನಿಚ್ಚ ನಿಚ್ಚ ಶಿವರಾತ್ರಿಯ ಮಾಡುವುದು.
ಬೇಗ ಬೇಗ ಅರ್ಚನೆ-ಪೂಜನೆಯ ಮಾಡುವುದು!
ಬೇಗ ಬೇಗ ಕೂಡಲಸಂಗನ ಕೂಡುವುದು!
-
೧೨೦. ಅಂದು ಇಂದು ಮತ್ತೊಂದೆನಬೇಡ.
ದಿನವಿಂದೇ ಶಿವಶರಣೆಂಬವಂಗೆ,
ದಿನವಿಂದೇ ಹರಶರಣೆಂಬವಂಗೆ,
ದಿನವಿಂದೇ ನಮ್ಮ ಕೂಡಲಸಂಗನ ಮಾಣದೆ ನೆನೆವಂಗೆ.
-
೧೨೧. ಸುಪ್ರಭಾತ ಸಮಯದಲ್ಲಿ
ಅರ್ತಿಯಲ್ಲಿ ಲಿಂಗವ ನೆನೆದರೆ
ತಪ್ಪುವುದು ಅಪಮೃತ್ಯು ಕಾಲಕರ್ಮಂಗಳಯ್ಯ!
ದೇವಪೂಜೆಯ ಮಾಟ
ದುರಿತಬಂಧನದೋಟ!
ಶಂಭು ನಿಮ್ಮಯ ನೋಟ
ಹೆರೆಹಿಂಗದ ಕಣ್ಬೇಟ!!
ಸದಾ ಶಿವಲಿಂಗಸನ್ನಿಹಿತನಾಗಿಪ್ಪುದು,
ಶರಣೆಂದು ನಂಬುವುದು.
ಜಂಗಮಾರ್ಚನೆಯ ಮಾಟ
ಕೂಡಲಸಂಗನ ಕೂಟ!!!
-
೧೨೨. ನಾದಪ್ರಿಯ ಶಿವನೆಂಬರು,
ನಾದಪ್ರಿಯ ಶಿವನಲ್ಲಯ್ಯ!
ವೇದಪ್ರಿಯಶಿವನೆಂಬರು
ವೇದಪ್ರಿಯ ಶಿವನಲ್ಲಯ್ಯ!
ನಾದವ ಮಾಡಿದ ರಾವಣಂಗೆ
ಆರೆಯಾಯುಷವಾಯಿತ್ತು.
ವೇದವನೋದಿದ ಬ್ರಹ್ಮನ ಶಿರ ಹೋಯಿತ್ತು.
ನಾದಪ್ರಿಯನೂ ಅಲ್ಲ,
ವೇದಪ್ರಿಯನೂ ಅಲ್ಲ,
ಭಕ್ತಿಪ್ರಿಯ ನಮ್ಮ ಕೂಡಲಸಂಗಮದೇವ.
-
೧೨೩. ತನ್ನಾಶ್ರಯದ ರತಿಸುಖವನು
ತಾನುಂಬ ಊಟವನು
ಬೇರೊಬ್ಬರ ಕೈಯಲು ಮಾಡಿಸಬಹುದೇ ?
ತನ್ನ ಲಿಂಗಕ್ಕೆ ಮಾಡುವ
ನಿತ್ಯ ನೇಮವನು ತಾ ಮಾಡಬೇಕಲ್ಲದೆ,
ಬೇರೆ ಮತ್ತೊಬ್ಬರ ಕೈಯಲು ಮಾಡಿಸಬಹುದೇ ?
ಕೆಮ್ಮನುಪಚಾರಕ್ಕೆ ಮಾಡುವರಲ್ಲದೆ
ನಿಮ್ಮನೆತ್ತ ಬಲ್ಲರು ಕೂಡಲಸಂಗಮದೇವ.
-
೧೨೪. ಬಂಡಿ ತುಂಬಿದ ಪತ್ರೆಯ ತಂದು
ಕಂಡ ಕಂಡಲ್ಲಿ ಮಜ್ಜನಕ್ಕೆರೆವಿರಯ್ಯ.
ತಾಪತ್ರಯವ ಕಳೆದು ಪೂಜಿಸಿ:
ತಾಪತ್ರಯವ ಲಿಂಗನೊಲ್ಲ!
ಕೂಡಲಸಂಗಮದೇವ ಬರಿಯುದಕದಲ್ಲಿ ನೆನೆವನೆ ?
-
೧೨೫. ಕನ್ನಡಿಯ ನೋಡುವ ಅಣ್ಣಗಳಾ,
ಜಂಗಮವ ನೋಡಿರೇ!
ಜಂಗಮದೊಳಗೆ ಲಿಂಗಯ್ಯ ಸನ್ನಿಹಿತನಾಗಿಪ್ಪ.
ಸ್ಥಾವರ ಜಂಗಮ ಒಂದೆಂದುದು ಕೂಡಲಸಂಗನ ವಚನ.
-
೧೨೬. ಗೀತವ ಹಾಡಿದರೇನು,
ಶಾಸ್ತ್ರ ಪುರಾಣವ ಕೇಳಿದರೇನು,
ವೇದವೇದಾಂತವನೋದಿದರೇನು,
ಮನವೊಲಿದು ಲಿಂಗಜಂಗಮವ ಪೂಜಿಸಲರಿಯದವರು ?
ಇವೆಲ್ಲರಲ್ಲಿಯೂ ಅನುಭಾವಿಯಾದರೇನು,
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ.
-
೧೨೭. ಲಿಂಗವ ಪೂಜಿಸಿದ ಬಳಿಕ ಜಂಗಮಕ್ಕಂಜಲೇ ಬೇಕು.
ದಕ್ಕ ನುಂಗಿದಂತೆ ಬೆರೆದುಕೊಂಡಿರಬೇಡ.
ಬೀಗಿ ಬೆಳೆದ ಗೊನೆವಾಳೆಯಂತೆ ಬಾಗಿಕೊಂಡಿದ್ದರೆ,
ಬೇಡಿದ ಪದವಿಯನೀವ ಕೂಡಲಸಂಗಮದೇವ.
-
೧೨೮. ದ್ವೈತಾದ್ವೈತವನೋದಿ ಏನ ಮಾಡುವಿರಯ್ಯ
ನಮ್ಮ ಶರಣರಿಗೆ ಉರಿಗರಗಾಗಿ ಕರಗದನ್ನಕ ?
ಸ್ಥಾವರ ಜಂಗಮ ಒಂದೆಂದು ನಂಬದನ್ನಕ ?
ಕೂಡಲಸಂಗಮದೇವ,
ಬರಿಯ ಮಾತಿನ ಮಾಲೆಯಲೇನಹುದು ?
-
೧೨೯. ಆಡುತ್ತ ಹಾಡುತ್ತ ಭಕ್ತಿಯ ಮಾಡಬಹುದು ಲಿಂಗಕ್ಕೆ-
ಅದು ಬೇಡದು, ಬೆಸಗೊಳ್ಳದು !
ತಂದೊಮ್ಮೆ ನೀಡಬಹುದು !
ಕಾಡುವ ಬೇಡುವ ಜಂಗಮ ಬಂದರೆ
ನೀಡಲು ಬಾರದು ಕೂಡಲಸಂಗಮದೇವ.
-
೧೩೦. ಕಲ್ಲ ನಾಗರ ಕಂಡರೆ ಹಾಲನೆರೆ ಎಂಬರು;
ದಿಟದ ನಾಗರ ಕಂಡರೆ ಕೊಲ್ಲೆಂಬರಯ್ಯ!
ಉಂಬ ಜಂಗಮ ಬಂದರೆ ನಡೆ ಎಂಬರು;
ಉಣ್ಣದ ಲಿಂಗಕ್ಕೆ ಬೋನವ ಹಿಡಿ ಎಂಬರಯ್ಯ!
ನಮ್ಮ ಕೂಡಲಸಂಗನ ಶರಣರ ಕಂಡು
ಉದಾಸೀನವ ಮಾಡಿದರೆ,
ಕಲ್ಲ ತಾಗಿದ ಮಿಟ್ಟೆಯಂತಪ್ಪರಯ್ಯ!
-
೧೩೧. ಎರೆದರೆ ನೆನೆಯದು, ಮರೆದರೆ ಬಾಡದು
ಹುರುಳಿಲ್ಲ ಹುರುಳಿಲ್ಲ ಲಿಂಗಾರ್ಚನೆ!
ನೋಡಯ್ಯ, ಕೂಡಲಸಂಗಮದೇವಯ್ಯ,
"ಜಂಗಮ"ಕ್ಕೆರೆದರೆ, "ಸ್ಥಾವರ" ನೆನೆಯಿತ್ತು.
-
೧೩೨. ಅಗ್ನಿಯಾಧಾರದಲ್ಲಿ ಕಬ್ಬುನ ನೀರುಂಬುದಯ್ಯ;
ಭೂಮಿಯಧಾರದಲ್ಲಿ ವೃಕ್ಷ ನೀರುಂಬುದಯ್ಯ.
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿಯಹುದಯ್ಯ
"ವೃಕ್ಷಸ್ಯ ವದನಂ ಭೂಮಿಃ
ಸ್ಥಾವರಸ್ಯ ತು ಜಂಗಮಃ!
ಅಹಂ ತುಷ್ಟಿರುಮೇ ದೇವ್ಯು-
ಭಯೋರ್ಜಂಗಮಲಿಂಗಯೋಃ ||"
ಇದು ಕಾರಣ ಕೂಡಲಸಂಗನ ಶರಣರಲ್ಲಿ
ಜಂಗಮಾಪ್ಯಾಯನವಾದರೆ ಲಿಂಗಸಂತುಷ್ಟಿ.
-
೧೩೩. ಬಂಡವ ತುಂಬಿದ ಬಳಿಕ
ಸುಂಕವ ತೆತ್ತಲ್ಲದೆ ಹೊಗಬಾರದು.
ಕಳ್ಳನಾಣ್ಯ ಸಲಿಕೆಗೆ ಸಲ್ಲದು,
ಕಳ್ಳನಾಣ್ಯವ ಸಲಲೀಯರಯ್ಯ.
ಭಕ್ತಿಯೆಂಬ ಬಂಡಕ್ಕೆ ಜಂಗಮವೇ ಸುಂಕಿಗ
ಕೊಡಲಸಂಗಮದೇವ.
-
೧೩೪. ಮಾಡಿ, ನೀಡಿ, ಲಿಂಗವ ಪೂಜಿಸಿಹೆವೆಂಬವರು
ನೀವೆಲ್ಲ ಕೇಳಿರಣ್ಣ;
ಹಾಗದ ಕೆರಹ ಹೊರಗೆ ಕಳೆದು
ದೇಗುಲಕ್ಕೆ ಹೋಗಿ,
ನಮಸ್ಕಾರವ ಮಾಡುವನಂತೆ,
ತನ್ನ ಕೆರಹಿನ ಧ್ಯಾನವಲ್ಲದೆ,
ದೇವರ ಧ್ಯಾನವಿಲ್ಲ;
ಧನವನಿರಿಸದಿರಾ ! ಇರಿಸಿದರೆ ಭವ ಬಪ್ಪುದು ತಪ್ಪದು!
ಕೂಡಲಸಂಗನ ಶರಣರಿಗೆ ಸವೆಸಲೇಬೇಕು.
-
೧೩೫. ಉಂಡುದು ಬಂದೀತೆಂಬ ಸಂದೇಹಿಮಾನವ ನೀ ಕೇಳ!
ಉಂಡುದೇನಾಯಿತೆಂಬುದ ನಿನ್ನ ನೀ ತಿಳಿದು ನೋಡಾ!
ಉಂಡುದಾಗಳೇ ಆ ಪೀಯವಾಯಿತ್ತು!
ಆ ಉಂಡುದನುಣಬಂದ ಹಂದಿಯ ಬಾಳುವೆಯವರ
ಕಂಡು ಆನು ಮರುಗುವೆನಯ್ಯ ಕೂಡಲಸಂಗಮದೇವ.
-
೧೩೬. ಆಯುಷ್ಯವುಂಟು ಪ್ರಳಯವಿಲ್ಲೆಂದು,
ಅರ್ಥವ ಮಡಗುವಿರಿ:
ಆಯುಷ್ಯ ತೀರಿ ಪ್ರಳಯ ಬಂದರೆ
ಆ ಅರ್ಥವನುಂಬವರಿಲ್ಲ:
ನೆಲನನಗೆದು ಮಡಗದಿರಾ!
ನೆಲ ನುಂಗಿದರುಗುಳುವುದೇ ?
ಕಣ್ಣಿನಲ್ಲಿ ನೋಡಿ, ಮಣ್ಣಿನಲ್ಲಿ ನೆರಹಿ
ಉಣ್ಣದೆ ಹೋಗದಿರಾ;
ನಿನ್ನ ಮಡದಿಗಿರಲೆಂದರೆ--ಮಡದಿಯ ಕೃತಕ ಬೇರೆ!
ನಿನ್ನೊಡಲು ಕೆಡೆಯಲು
ಮತ್ತೊಬ್ಬನಲ್ಲಿಗೆ ಅಡಕದೆ ಮಾಬಳೆ ?
ಹೆರರಿಗಿಕ್ಕಿ ಹೆಗ್ಗುರಿಯಾಗಿ ಕೆಡಬೇಡ.
ಕೂಡಲಸಂಗನ ಶರಣರಿಗೆ ಒಡನೆ ಸೆವೆಸುವುದು.
-
೧೩೭. ಅವಳ ವಚನ ಬೆಲ್ಲದಂತೆ!
ಹೃದಯದಲಿಪ್ಪುದೆಲ್ಲಾ ನಂಜು ಕಂಡಯ್ಯ!!
ಕಂಗಳಲೊಬ್ಬನ ಕರೆವಳು ಮನದಲೊಬ್ಬನ ನೆನೆವಳು,
ವಚನದಲೊಬ್ಬನ ನೆರೆವಳು!
ಇಂತಿವಳ ತನು ಒಂದೆಸೆ, ಮನ ಒಂದೆಸೆ, ಮಾತೊಂದೆಸೆ!!
ಈ ಮಾನಿಸಗಳ್ಳಿಯ ನನ್ನವಳೆಂದು ನಂಬುವ
ಕುರಿನರರನೇನೆಂಬೆನಯ್ಯ ಕೂಡಲಸಂಗಮದೇವ.
-
೧೩೮. ತನು-ಮನ-ಧನವ ಹಿಂದಿಕ್ಕಿಕೊಂಡು
ಮಾತಿನ ಬಣಬೆಯ ಒಳಲೊಟ್ಟೆಯ ನುಡಿವರು
ನೀವೆಲ್ಲ ಕೇಳಿರೆ:
ತಲಹಿಲ್ಲದ ಕೋಲು ಪೊಳ್ಳುಹಾರುವುದಲ್ಲದೆ
ಗುರಿಯ ತಾಗಬಲ್ಲುದೆ ?
ಮಾಯಾಪಾಶ ಹಿಂಗಿ, ಮನದ ಗಂಟು ಬಿಡದನ್ನಕ
ಕೂಡಲಸಂಗಮದೇವನೆಂತೊಲಿವನಯ್ಯ.
-
೧೩೯. ಹಲವು ಮಣಿಯ ಕಟ್ಟಿ ಕುಣಿಕುಣಿದಾಡಿ,
ಹಲವು ಪರಿಯಲಿ ವಿಭೂತಿಯ ಪೂಸಿ,
ಗಣಾಡಂಬರದ ನಡುವೆ ನಲಿನಲಿದಾಡಿ
ಉಂಡು ತಂಬುಲಗೊಂಡು ಹೋಹುದಲ್ಲ!
ತನು-ಮನ-ಧನವ ಸಮರ್ಪಿಸದವರ
ಕೂಡಲಸಂಗಮದೇವನೆಂತೊಲಿವ ?
-
೧೪೦. ತನುವ ಕೊಟ್ಟು ಗುರುವನೊಲಿಸಲೆ ಬೇಕು.
ಮನವ ಕೊಟ್ಟು ಲಿಂಗವನೊಲಿಸಲೆ ಬೇಕು.
ಧನವ ಕೊಟ್ಟು ಜಂಗಮವನೊಲಿಸಲೆ ಬೇಕು.
ಈ ತ್ರಿವಿಧವ ಮರೆಸಿಕೊಂಡು,
ಹರೆಯ ಹೊಯಿಸಿ, ಕುರುಹ ಪೂಜಿಸುವ ಡಂಬಕರ ಮೆಚ್ಚ
ಕೂಡಲಸಂಗಮದೇವ.
-
೧೪೧. ಆಡಿದರೇನೋ, ಹಾಡಿದರೇನೋ, ಓದಿದರೇನೋ-
ತ್ರಿವಿಧ ದಾಸೋಹವಿಲ್ಲದನ್ನಕ ?
ಆಡದೇ ನವಿಲು ? ಹಾಡದೇ ತಂತಿ ? ಓದದೇ ಗಿಳಿ ?
ಭಕ್ತಿಯಿಲ್ಲದವರನೊಲ್ಲ ಕೂಡಲಸಂಗಮದೇವ!
-
೧೪೨. ವೇದದಂತುಟಲ್ಲ, ಶಾಸ್ತ್ರದಂತುಟಲ್ಲ,
ಗೀತ-ಮಾತಿನಂತುಟಲ್ಲ ಕೇಳಿರಯ್ಯ !
ಮಾತಿನ ಮಾತಿನ ಕೌಳುಗೋಲ ಶ್ರವದಲ್ಲಿ
ಸತ್ತವರೊಳರೇ ಅಯ್ಯ ?
ದಿಟದಲಗಿನ ಕಾಳೆಗವಿತ್ತಲಿದ್ದುದೇ
ಕೂಡಲಸಂಗನ ಶರಣರು ಬಂದಲ್ಲಿ !?
-
೧೪೩. ಮಾತಿನ ಮಾತಿನಲಪ್ಪುದೇ ಭಕ್ತಿ ?
ಮಾಡಿ ತನು ಸವೆಯದನ್ನಕ,
ಧನ ಸವೆಯದನ್ನಕ,
ಮನ ಸವೆಯದನ್ನಕ,
ಅಪ್ಪುದೇ ಭಕ್ತಿ ?
ಕೂಡಲಸಂಗಮದೇವನೆಲುದೋರ ಸರಸವಾಡುವನು;
ಸೈರಿಸದನ್ನಕ ಅಪ್ಪುದೇ ಭಕ್ತಿ ?
-
೧೪೪. ಹಾವಸೆಗಲ್ಲ ಮೆಟ್ಟಿ ಹರಿದು
ಗೊತ್ತ ಮುಟ್ಟ ಬಾರದಯ್ಯ.
ನುಡಿದಂತೆ ನಡೆಯಲು ಬಾರದಯ್ಯ.
ಕೂಡಲಸಂಗನ ಶರಣರ ಭಕ್ತಿ ಬಾಳ ಬಾಯಿಧಾರೆ.
-
೧೪೫. ಭಕ್ತಿಯೆಂಬುದ ಮಾಡಬಾರದು.
ಗರಗಸದಂತೆ ಹೋಗುತ್ತ ಕೊರೆವುದು;
ಬರುತ್ತ ಕೊಯ್ವುದು.
ಘಟಸರ್ಪನಲ್ಲಿ ಕೈದುಡುಕಿದರೆ ಹಿಡಿಯದೆ ಮಾಬುದೆ ?
ಕೂಡಲಸಂಗಮದೇವ.
-
೧೪೬. ಹಲವು ಕಾಲ ಧಾವತಿಗೊಂಡು ಒಟ್ಟಿದ ಹಿದಿರೆಯು
ಒಂದು ಮಿಡುಕುರಲ್ಲಿ ಬೇವಂತೆ
ಸಲೆನೆಲೆ ಸನ್ನಿಹಿತನಾಗಿಪ್ಪ ಶರಣನ ಭಕ್ತಿ
ಒಂದನಾಯತದಿಂದ ಕೆಡುವುದು!
ಸ್ವಧರ್ಮದಲ್ಲಿ ಗಳಿಸಿದ ಪಿತನ ಧನವ
ಅಧರ್ಮದಲ್ಲಿ ಕೆಡಿಸುವ ಸುತನಂತೆ
ಶಿವನ ಸೊಮ್ಮ ಶಿವಂಗೆ ಮಾಡದೆ ಅನ್ಯಕ್ಕೆ ಮಾಡಿದರೆ
ತನ್ನ ಭಕ್ತಿ ತನ್ನನೇ ಕೆಡಿಸುವುದು ಕೂಡಲಸಂಗಮದೇವ!
-
೧೪೭. ನೆಚ್ಚಿದೆನೆಂದರೆ, ಮೆಚ್ಚಿದೆನೆಂದರೆ,
ಸಲೆ ಮಾರುವೋದೆನೆಂದರೆ;
ತನುವನಲ್ಲಾಡಿಸಿ ನೋಡುವೆ ನೀನು!
ಮನವನಲ್ಲಾಡಿಸಿ ನೋಡುವೆ ನೀನು!
ಧನವನಲ್ಲಾಡಿಸಿ ನೋಡುವೆ ನೀನು!
ಇವೆಲ್ಲಕಂಜದಿದ್ದರೆ
ಭಕ್ತಿಕಂಪಿತ ನಮ್ಮ ಕೂಡಲಸಂಗಮದೇವ.
-
೧೪೮. ಕೌಳುಗೋಲ ಹಿಡಿದು ಶ್ರವವ ಮಾಡಬಹುದಲ್ಲದೆ
ಕಳನೇರಿ ಕಾದುವುದರಿದು ನೋಡಾ!
ಬಣ್ಣವಿಟ್ಟು ನುಡಿದಲ್ಲಿ ಫಲವೇನು ಚಿನ್ನಗೆಯ್ಕನಾಡುವಂತೆ ?
ಬಂದ ಸಮಯೋಚಿತವನರಿತು
ಇದ್ದುದ ವಂಚಿಸದಿದ್ದರೆ
ಕೂಡಲಸಂಗಮದೇವನೊಲಿದು ಸಲಹುವ!
-
೧೪೯. ಹಸಿದು ಬಂದ ಗಂಡನಿಗೆ ಉಣಲಿಕ್ಕದೆ
ಬಡವಾದನೆಂದು ಮರುಗುವ ಸತಿಯ ಸ್ನೇಹದಂತೆ
ಬಂದುದನರಿಯಳು, ಇದ್ದುದ ಸವಿಸಳು!
ದುಃಖವಿಲ್ಲದಕ್ಕೆ ಹಗರಣಿಗನ ತೆರನಂತೆ!
ಕೂಡಲಸಂಗನ ಶರಣರಿಗೆ ತ್ರಿವಿಧವ ವಂಚಿಸಿ
ಬಣ್ಣಿಸುವ ಭಕ್ತಿಯ ಕಂಡು ನಾನು ನಾಚಿದೆನು!
-
೧೫೦. ಉದಯದ ಮಾಗಿಯ ಬಿಸಿಲು
ಅಂಗಕ್ಕೆ ಹಿತವಾಯಿತ್ತು!
ಮಧ್ಯಾಹ್ನದ ಬಿಸಿಲು
ಅಂಗಕ್ಕೆ ಕರ ಕಠಿನವಾಯಿತ್ತು!
ಮೊದಲಲ್ಲಿ ಲಿಂಗಭಕ್ತಿ ಹಿತವಾಯಿತ್ತು!
ಕಡೆಯಲ್ಲಿ ಜಂಗಮಭಕ್ತಿ ಕಠಿನವಾಯಿತ್ತು!
ಇದು ಕಾರಣ,
ಕೂಡಲಸಂಗಮದೇವನವರ
ಬಲ್ಲನಾಗಿ ಒಲ್ಲನಯ್ಯ.
-
೧೫೧. ಬರಬರ ಭಕ್ತಿ ಅರೆಯಾಯಿತ್ತು ಕಾಣಿರಣ್ಣ!
ಮೊದಲ ದಿನ ಹಣೆ ಮುಟ್ಟಿ,
ಮರುದಿನ ಕೈ ಮುಟ್ಟಿ,
ಮೂರೆಂಬ ದಿನಕೆ ತೂಕಡಿಕೆ ಕಾಣಿರಣ್ಣಾ.
ಹಿಡಿದುದ ಬಿಡದಿದ್ದರೆ ತಡಿಗೆ ಚಾಚುವ
ಅಲ್ಲದಿದ್ದರೆ ನಡುನೀರಲದ್ದುವ
ನಮ್ಮ ಕೂಡಲಸಂಗ್ದೇವ.
-
೧೫೨. ಬೆಟ್ಟದ ಬಿದಿರೇ ನೀನು ಅಟ್ಟಕ್ಕೆ ಏಣಿಯಾದೆ!
ಕಾಲು ಮುರಿದವರಿಗೆ ಊರುಗೋಲಾದೆ!
ಬಿದಿರಿಂ ಭೋ! ಅಯ್ಯ, ಬಿದಿರಿಂ ಭೋ!
ಬಿದಿರ ಫಲವನುಂಬರೆ ಬಿದಿರಿಂ ಭೊ;
ಬಿದಿರಲಂದಣವಕ್ಕು
ಬಿದಿರೆ ಸತ್ತಿಗೆಯಕ್ಕು,
ಬಿದಿರಲೀ ಗುಡಿಯು ಗುಡಾರಂಗಳಕ್ಕು,
ಬಿದಿರಲೀ ಸಕಲಸಂಪದವೆಲ್ಲ!
ಬಿದಿರದವರ ಮೆಚ್ಚ ನಮ್ಮ ಕೂಡಲಸಂಗಮದೇವ.
-
೧೫೩. ಉಂಬಾಗಳಿಲ್ಲೆನ್ನ, ಉಡುವಾಗಳಿಲ್ಲೆನ್ನ
ಬಂಧುಗಳು ಬಂದಾಗಳಿಲ್ಲೆನ್ನ;
ಲಿಂಗಕ್ಕೆ ಇಲ್ಲೆಂಬ, ಜಂಗಮಕ್ಕೆ ಇಲ್ಲೆಂಬ,
ಬಂದ ಪುರಾತರಿಗೆ ಇಲ್ಲೆಂಬ;
ಸಾವಾಗ ದೇಹವ ದೇಗುಲಕ್ಕೊಯ್ಯೆಂಬ
ದೇವರಿಗೆ ಹೆಣ ಬಿಟ್ಟಿ ಹೇಳಿತ್ತೆ, ಕೂಡಲಸಂಗಮದೇವ ?
-
೧೫೪. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ,
ಸತ್ಪಾತ್ರಕ್ಕೆ ಸಲ್ಲದಯ್ಯ!
ನಾಯ ಹಾಲು ನಾಯಿಂಗಲ್ಲದೆ,
ಪಂಚಾಮೃತಕ್ಕೆ ಸಲ್ಲದಯ್ಯ!
ನಮ್ಮ ಕೂಡಲಸಂಗನ ಶರಣರಿಗಲ್ಲದೆ
ಮಾಡುವ ಅರ್ಥ ವ್ಯರ್ಥ ಕಂಡಯ್ಯ.
-
೧೫೫. ಹತ್ತು ಮತ್ತರ ಭೂಮಿ,
ಬತ್ತುವ ಹಯನ, ನಂದಾದೀವಿಗೆಯ
ನಡೆಸಿಹೆನೆಂಬವರ ಮುಖವ ನೋಡಲಾಗದು!
ಅವರ ನುಡಿಯ ಕೇಳಲಾಗದು;
ಅಂಡಜ-ಸ್ವೇದಜ-ಉದ್ಬಿಜ-ಜರಾಯುಜವೆಂಬ
ಚತುರಶೀತಿ ಲಕ್ಷಪ್ರಾಣಿಗಳಿಗೆ ಭವಿತವ್ಯವ ಕೊಟ್ಟವರಾರೋ ?!
ಒಡೆಯರಿಗೆ ಉಂಡೆಯ ಮುರಿದಿಕ್ಕಿದಂತೆ
"ಎನ್ನಿಂದಲೇ ಆಯಿತು, ಎನ್ನಿಂದಲೇ ಹೋಯಿತು"
ಎಂಬುವನ ಬಾಯಲ್ಲಿ
ಮೆಟ್ಟಿ ಹುಡಿಯ ಹೊಯ್ಯದೆ ಮಾಬನೆ ಕೂಡಲಸಂಗಮದೇವ!
-
೧೫೬. ಅನವರತ ಮಾಡಿಹೆನೆಂದು ಉಪ್ಪರ ಗುಡಿಯ ಕಟ್ಟಿ
ಮಾಡುವ ಭಕ್ತನ ಮನೆಯದು ಲಂದಣಗಿತ್ತಿಯ ಮನೆ,
ಸರ್ವಜೀವದಯಾಪಾರಿಯೆಂದು
ಭೂತದಯಕಿಕ್ಕುವನ ಮನೆ ಸಯಿದಾನದ ಕೇಡು.
ಸೂಳೆಯ ಮಗ ಮಾಳವ ಮಾಡಿದರೆ
ತಾಯ ಹೆಸರಾಯಿತ್ತಲ್ಲದೆ ತಂದೆಯ ಹೆಸರಿಲ್ಲ
ಕೂಡಲಸಂಗಮದೇವ.
-
೧೫೭. ಓಡಲಾರದ ಮೃಗವು
ಸೊಣಗಂಗೆ ಮಾಂಸವ ಕೊಡುವಂತೆ,
ಮಾಡಲಾಗದು ಭಕ್ತನು, ಕೊಳಲಾಗದು ಜಂಗಮ;
ಹಿರಿಯರು ನರಮಾಂಸವ ಭುಂಜಿಸುವರೆ ?!
ತನು ಉಕ್ಕಿ ಮನ ಉಕ್ಕಿ ಮಾಡಬೇಕು ಭಕ್ತಿಯ,
ಮಾಡಿಸಿಕೊಳ್ಳಬೇಕು ಜಂಗಮ, ಕೂಡಲಸಂಗಮದೇವ.
-
೧೫೮. ಬಂದುದ ಕೈಕೊಳಬಲ್ಲಡೆ ನೇಮ.
ಇದ್ದುದ ವಂಚನೆ ಮಾಡದಿದ್ದರೆ ಅದು ನೇಮ.
ನಡೆದು ತಪ್ಪದಿದ್ದರೆ ಅದು ನೇಮ.
ನುಡಿದು ಹುಸಿಯದಿದ್ದರೆ ಅದು ಮುನ್ನವೆ ನೇಮ.
ನಮ್ಮ ಕೂಡಲಸಂಗನ ಶರಣರು ಬಂದರೆ
ಒಡೆಯರಿಗೊಡವೆಯನೊಪ್ಪಿಸುವುದೇ ನೇಮ.
-
೧೫೯. ಹಾಲ ನೇಮ, ಹಾಲ ಕೆನೆಯ ನೇಮ;
ಕೆನೆ ತಪ್ಪಿದ ಬಳಿಕ ಕಿಚ್ಚಡಿಯ ನೇಮ;
ಬೆಣ್ಣೆಯ ನೇಮ, ಬೆಲ್ಲದ ನೇಮ-
ಅಂಬಲಿಯ ನೇಮದವರನಾರನೂ ಕಾಣೆ,
ಕೂಡಲಸಂಗನ ಶರಣರಲ್ಲಿ
ಅಂಬಲಿಯ ನೇಮದಾತ ಮಾದರ ಚನ್ನಯ್ಯ
-
೧೬೦. ಮಾಡಿ ಮಾಡಿ ಕೆಟ್ಟರು ಮನವಿಲ್ಲದೆ.
ನೀಡ ನೀಡಿ ಕೆಟ್ಟರು ನಿಜವಿಲ್ಲದೆ.
ಮಾಡುವ ನೀಡುವ ನಿಜಗುಣವುಳ್ಳಡೆ.
ಕೂಡಿಕೊಂಬ ನಮ್ಮ ಕೂಡಲಸಂಗಮದೇವ.
-
೧೬೧. ಮಾಡಿದೆನೆಂಬುದು ಮನದಲ್ಲಿ ಹೊಳೆದರೆ
ಏಡಿಸಿ ಕಾಡಿತ್ತು ಶಿವನ ಡಂಗುರ.
ಮಾಡಿದೆನೆನ್ನದಿರಾ ಲಿಂಗಕ್ಕೆ!
ಮಾಡಿದೆನೆನ್ನದಿರಾ ಜಂಗಮಕ್ಕೆ!
ಮಾಡಿದೆನೆಂಬುದು ಮನದಲಿಲ್ಲದಿದ್ದರೆ
ಬೇಡಿದ್ದನೀವ ಕೂಡಲಸಂಗಮದೇವ!!
-
೧೬೨. ಮಾಡುವಂತಿರಬೇಕು ಮಾಡದಂತಿರಬೇಕು!
ಮಾಡುವ ಮಾಟದೊಳಗೆ ತಾನಿಲ್ಲದಿರಬೇಕು!!
ನೋಡುವಂತಿರಬೇಕು, ನೋಡದಂತಿರಬೇಕು!
ನೋಡುವ ನೋಟದೊಳಗೆ ತಾನಿಲ್ಲದಿರಬೇಕು!!
ನಮ್ಮ ಕೂಡಲಸಂಗಮದೇವರ
ನೆನೆವುತ್ತ ನೆನೆವುತ್ತ ನೆನೆಯದಂತಿರಬೇಕು!
-
೧೬೩. ಭಕ್ತನು ಶಾಂತನಾಗಿರಬೇಕು.
ತನ್ನ ಕುರಿತು ಬಂದ ಠಾವಿನಲ್ಲಿ ಸತ್ಯನಾಗಿರಬೇಕು.
ಭೂತಹಿತವಹ ವಚನವ ನುಡಿಯಬೇಕು.
ಲಿಂಗ-ಜಂಗಮದಲ್ಲಿ ನಿಂದೆಯಿಲ್ಲದಿರಬೇಕು.
ಸಕಲ ಪ್ರಾಣಿಗಳ ತನ್ನಂತೆ ಭಾವಿಸಬೇಕು.
ತನು-ಮನ-ಧನವ ಗುರು-ಲಿಂಗ-ಜಂಗಮಕ್ಕೆ ಸವೆಸಬೇಕು.
ಅಪಾತ್ರದಾನವಂ ಗೆಯ್ಯದಿರಬೇಕು.
ಸಕಲೇಂದ್ರಿಯಂಗಳೂ ತನ್ನ ವಶಗತವಾಗಿರಬೇಕು.
ಇದೇ ಮೊದಲಲ್ಲಿ ಬೇಹ ಶೌಚ ನೋಡಾ!
ಲಿಂಗವ ಪೂಜಿಸಿ ಪ್ರಸಾದವ ಪಡೆವಡೆ
ಎನಗಿದೇ ಸಾಧನ ಕೂಡಲಸಂಗಮದೇವ!
-
೧೬೪ ಕಳಬೇಡ ಕೊಲಬೇಡ,
ಹುಸಿಯ ನುಡಿಯಲು ಬೇಡ,
ಮುನಿಯ ಬೇಡ,
ಅನ್ಯರಿಗೆ ಅಸಹ್ಯಪಡಬೇಡ.
ತನ್ನ ಬಣ್ಣಿಸಬೇಡ,
ಇದಿರ ಹಳಿಯಲು ಬೇಡ.
ಇದೇ ಅಂತರಂಗಶುದ್ಧಿ!
ಇದೇ ಬಹಿರಂಗಶುದ್ಧಿ!
ಇದೆ ನಮ್ಮ ಕೂಡಲಸಂಗನನೊಲಿಸುವ ಪರಿ.
-
೧೬೫. ದೇವಲೋಕ ಮರ್ತ್ಯಲೋಕವೆಂಬುದು
ಬೇರಿಲ್ಲ ಕಾಣಿರಣ್ಣ.
ಸತ್ಯವ ನುಡಿವುದೇ ದೇವಲೋಕ!
ಮಿಥ್ಯವ ನುಡಿವುದೇ ಮರ್ತ್ಯಲೋಕ!
ಆಚಾರವೇ ಸ್ವರ್ಗ! ಅನಾಚಾರವೇ ನರಕ!
ನೀವೇ ಪ್ರಮಾಣ ಕೂಡಲಸಂಗಮದೇವ.
-
೧೬೬. ಪುಣ್ಯಪಾಪಂಗಳೆಂಬವು
ತಮ್ಮಿಷ್ಟ ಕಂಡಿರೇ!
'ಅಯ್ಯ' ಎಂದರೆ ಸ್ವರ್ಗ,
'ಎಲವೋ' ಎಂದರೆ ನರಕ.
"ದೇವ, ಭಕ್ತ, ಜಯ, ಜೀಯ" ಎಂಬ
ನುಡಿಯೊಳಗೆ ಕೈಲಾಸವೈದುವುದು ಕೂಡಲಸಂಗಮದೇವ.
-
೧೬೭. ಏನಿ ಬಂದಿರಿ, ಹದುಳಿದ್ದಿರೆಂದರೆ
ನಿಮ್ಮ ಮೈಸಿರಿ ಹಾರಿಹೋಹುದೇ ?
ಕುಳ್ಳಿರೆಂದರೆ ನೆಲ ಕುಳಿಹೋಹುದೇ ?
ಒಡನೆ ನುಡಿದರೆ ಶಿರಹೊಟ್ಟೆ ಒಡೆವುದೆ ?
ಕೊಡಲಿಲ್ಲದಿದ್ದರೊಂದು
ಗುಣವಿಲ್ಲದಿದ್ದರೆ
ಕೆಡಹಿ ಮೂಗ ಕೊಯ್ವುದ ಮಾಬನೆ ಕೂಡಲಸಂಗಯ್ಯ ?
-
೧೬೮. ಭಕ್ತಿಯೆಂಬ ನಿಧಾನವ ಸಾಧಿಸುವಡೆ
ಶಿವಪ್ರೇಮವೆಂಬಂಜನವನೆಚ್ಚಿ ಕೊಂಬುದು ?
ಭಕ್ತನಾದವಂಗಿದೇ ಪಥವಾಗಿರಬೇಕು.
ನಮ್ಮ ಕೂಡಲಸಂಗನ ಶರಣರನುಭಾವ ಗಜವೈದ್ಯ.
-
೧೬೯. ಕಂಡ ಭಕ್ತರಿಗೆ ಕೈಮುಗಿವಾತನೇ ಭಕ್ತ
ಮೃದುವಚನವೇ ಸಕಲ ಜಪಂಗಳಯ್ಯ!
ಮೃದುವಚನವೇ ಸಕಲ ತಪಂಗಳಯ್ಯ ?
ಸದುವಿನಯವೇ ಸದಾಶಿವನೊಲುಮೆಯಯ್ಯ!
ಕೂಡಲಸಂಗಯ್ಯನಂತಲ್ಲದೊಲ್ಲನಯ್ಯ.
-
೧೭೦. ದಯವಿಲ್ಲದ ಧರ್ಮವದೇವುದಯ್ಯ,
ದಯವೇ ಬೇಕು ಸರ್ವಪ್ರಾಣಿಗಳೆಲ್ಲರಲ್ಲಿ!
ದಯವೇ ಧರ್ಮದ ಮೂಲವಯ್ಯ.
ಕೂಡಲಸಂಗಯ್ಯನಂತಲ್ಲದೊಲ್ಲ ಕಂಡಯ್ಯ.
-
೧೭೧. ಇತ್ತ ಬಾರೈ ಇತ್ತ ಬಾರೈಯೆಂದು
ಭಕ್ತರೆಲ್ಲರು ಕೂರ್ತು ಹತ್ತಿರಕೆ ಕರೆವುತಿರಲು,
ಮತ್ತೆ ಕೆಲಸಕ್ಕೆ ಹೋಗಿ,
ಶರಣೆಂದು ಹಸ್ತಬಾಯನೆ ಮುಚ್ಚಿ, ಕಿರಿದಾಗಿ;
ಭೃತ್ಯಾಚಾರವ ನುಡಿದು
ವಿನಯ ತದ್ಧ್ಯಾನ ಉಳ್ಳವರನೆತ್ತಿಕೊಂಬನಯ್ಯ
ಕೂಡಲಸಂಗಮದೇವ ಪ್ರಮಥರ ಮುಂದೆ.
-
೧೭೨. ತನಗೆ ಮುನಿವರಿಗೆ ತಾ ಮುನಿಯಲೇಕಯ್ಯ ?
ತನಗಾದ ಆಗೇನು ? ಅವರಿಗಾದ ಚೇಗೇನು ?
ತನುವಿನ ಕೋಪ ತನ್ನ ಹಿರಿಯತನದ ಕೇಡು.
ಮನದ ಕೋಪ ತನ್ನ ಅರಿವಿನ ಕೇಡು.
ಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ
ನೆರೆಮನೆಯ ಸುಡದು ಕೂಡಲಸಂಗಮದೇವ.
-
೧೭೩. ಭಕ್ತನು ಕಾಣದ ಠಾವಿನಲ್ಲಿ ಜರಿದನೆಂದರೆ
ಕೇಳಿ ಪರಿಣಾಮಿಸಬೇಕು!
ಅದೇನು ಕಾರಣವೆಂದರೆ--
ಕೊಡದೆ ಕೊಳದೆ ಅವಂಗೆ ಸಂತೋಷವಹುದಾಗಿ!
ಎನ್ನ ಮನದ ತದ್ವೇಷವಳಿದು
ನಿಮ್ಮ ಶರಣರಿಗೆ ಶರಣೆಂಬುದ ಕರುಣಿಸು, ಕೂಡಲಸಂಗಮದೇವ!
-
೧೭೪. ಕರಗಿಸಿ ಎನ್ನ ಮನದ ಕಾಳಿಕೆಯ ಕಳೆಯಯ್ಯ.
ಒರೆ ಬಣ್ಣಕ್ಕೆ ತಂದೆನ್ನ ಪುಟವಿಕ್ಕಿ ನೋಡಯ್ಯ,
ಕಡಿಹಕ್ಕೆ ಬಡಿಹಕ್ಕೆ ತಂದೆನ್ನ ಕಡೆಯಾಣಿಯ ಮಾಡಿ
ನಿಮ್ಮ ಶರಣರ ಪಾದಕ್ಕೆ ತೊಡಿಗೆಯ ಮಾಡಿ
ಸಲಹಯ್ಯ ಕೂಡಲಸಂಗಮದೇವ.
-
೧೭೫. ಅವರಿವರೆನ್ನದೆ ಚರಣಕ್ಕೆರಗಲು
ಅಯ್ಯತನವೇರಿ ಬೆಬ್ಬನೆ ಬೆರೆವೆ ನಾನು
ಕೆಚ್ಚು ಬೆಳೆಯಿತಯ್ಯ ಎನ್ನ ಎದೆಯಲ್ಲಿ!
ಆ ಕೆಚ್ಚಿಂಗೆ ಕಿಚ್ಚನಿಕ್ಕಿ ಸುಟ್ಟು
ಬೆಳುಕನ ಮಾಡಿ
ಬೆಳುಗಾರದಂತೆ ಮಾಡು
ಕೂಡಲಸಂಗಮದೇವ.
-
೧೭೬. ಇರಿಸಿಕೊಂಡು ಭಕ್ತರಾದರೆಮ್ಮವರು
ತರಿಸಿಕೊಂಡು ಭಕ್ತರಾದರೆಮ್ಮವರು
ಜರಿಸಿಕೊಂಡು ಭಕ್ತರಾದರೆಮ್ಮವರು
ಕೊರಿಸಿಕೊಂಡು ಭಕ್ತರಾದರೆಮ್ಮವರು
ಕೂಡಲಸಂಗನ ಶರಣರಿಗೆ ಮುಳಿಸ ತಾಳಿ
ಎನ್ನ ಭಕ್ತಿ ಅರೆಯಾಯಿತ್ತು.
-
೧೭೭. ಕುದುರನೇಸು ತೊಳೆದರೆಯು ಕೆಸರು ಮಾಬುದೇ ?
ಎನ್ನ ಕಾಯದಲುಳ್ಳ ಅವಗುಣಂಗಳ ಕಳೆದು
ಕೃಪೆಯ ಮಾಡಯ್ಯ ತಂದೆ,
ಕಂಬಳಿಯಲ್ಲಿ ಕಣಿಕವ ನಾದಿದಂತೆ ಎನ್ನ ಮನ!
ಕೂಡಲಸಂಗಮದೇವ ನಿಮಗೆ ಶರಣೆಂದು ಶುದ್ಧ ಕಾಣಯ್ಯ.
-
೧೭೮. ಕಾಣದುದನೆಲ್ಲವ ಕಾಣಲಾರೆನಯ್ಯ.
ಕೇಳದುದನೆಲ್ಲವ ಕೇಳಲಾರೆನಯ್ಯ.
ದ್ರೋಹವಿಲ್ಲ - ಎಮ್ಮ ಶಿವಲ್ಲಿ ಸೀಮೆಯಯ್ಯ.
ಒಲೆಯ ಮುಂದಿದ್ದು ಮಾಡದ ಕನಸ ಕಾಬವರನು
ಒಲ್ಲನಯ್ಯ ಕೂಡಲಸಂಗಮದೇವ.
-
೧೭೯. ಕಾಣಬಹುದೇ ಪರುಷದ ಗಿರಿಯಂಧಕಂಗೆ ?
ಮೊಗೆಯಬಹುದೇ ರಸದ ಬಾವಿ ನಿರ್ಭಾಗ್ಯಂಗೆ ?
ತೆಗೆಯಬಹುದೇ ಕಡವರವು ದರಿದ್ರಂಗೆ ?
ಕರೆಯಬಹುದೇ ಕಾಮಧೇನುವಶುದ್ಧಂಗೆ ?
ಹೊನ್ನ ಹುಳುವ ಕಂಡು ನರಿ ತನ್ನ ಬಾಲವ
ಹುಣ್ಣುಮಾಡಿಕೊಂಡರೆ ಹೋಲಬಹುದೆ ?
ಎನ್ನೊಡೆಯ ಕೂಡಲಸಂಗನ ಶರಣನ
ಪುಣ್ಯವಿಲ್ಲದೆ ಕಾಣಬಹುದೇ ?
-
೧೮೦. ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು,
ಪುರುಷನ ಒಲವಿಲ್ಲದ ಲಲನೆಯಂತೆ ನಾನಿದ್ದೆನಯ್ಯ!
ವಿಭೂತಿಯನೆ ಪೂಸಿ, ರುದ್ರಾಕ್ಷಿಯನೆ ಧರಿಸಿ
ಶಿವ, ನಿಮ್ಮ ಒಲವಿಲ್ಲದಂತೆ ನಾನಿದ್ದೆನಯ್ಯ!
ಕೆಟ್ಟು ಬಾಳುವರಿಲ್ಲ ನಮ್ಮವರ ಕುಲದಲ್ಲಿ
ನೀನೊಲಿದಂತೆ ಸಲಹಯ್ಯ ಕೂಡಲಸಂಗಮದೇವ.
-
೧೮೧. ಉದಯಾಸ್ತಮಾನವೆನ್ನ ಬೆಂದ ಬಸಿರಿಂಗೆ ಕುದಿಯಲಲ್ಲದೆ,
ನಿಮ್ಮ ನೆನೆಯಲು ತೆರಹಿಲ್ಲವಯ್ಯ.
ಎಂತೊ ಲಿಂಗ ತಂದೆ, ಎಂತಯ್ಯ ಎನ್ನ ಪೂರ್ವಲಿಖಿತ ?
ಬೆರಣಿಯನಾಯಲಲ್ಲದೆ
ಅಟ್ಟುಣ್ಣ ತೆರಹಿಲ್ಲೆನಗೆ!
ನೀ ಕರುಣಿಸು ಕೂಡಲಸಂಗಮದೇವ.
-
೧೮೨. ಬೆಲ್ಲವ ತಿಂದ ಕೋಡಗದಂತೆ
ಸಿಹಿಯ ನೆನೆಯದಿರಾ ಮನವೆ!
ಕಬ್ಬ ತಿಂದ ನರಿಯಂತೆ
ಹಿಂದಕ್ಕೆಳಸದಿರಾ ಮನವೇ!
ಗಗನವನಡರಿದ ಕಾಗೆಯಂತೆ
ದೆಸೆದೆಸೆಗೆ ಹಂಬಲಿಸದಿರಾ ಮನವೇ!
ಕೂಡಲಸಂಗನ ಶರಣರ ಕಂಡು
ಲಿಂಗವೆಂದೇ ನಂಬು ಮನವೇ!
-
೧೮೩. ಒಡೆಯನ ಕಂಡರೆ ಕಳ್ಳನಾಗದಿರಾ ಮನವೆ!
ಭವದ ಬಾಧೆಯ ತಪ್ಪಿಸಿಕೊಂಬಡೆ
ನೀನು ನಿಯತವಾಗಿ ಭಯಭರಿತನಾಗಿ,
ಅಹಂಕಾರಿಯಾಗದೆ ಶರಣೆನ್ನು ಮನವೇ!
ಕೂಡಲಸಂಗನ ಶರಣರಲ್ಲಿ
ಭಕ್ತಿಯ ನೋನುವಡೆ
ಕಿಂಕರನಾಗಿ ಬದುಕು ಮನವೇ.
-
೧೮೪. ಕೋಟ್ಯನುಕೋಟಿ ಜಪವ ಮಾಡಿ
ಕೋಟಲೆಗೊಳ್ಳಲೆದೇಕೆ ಮನವೇ ?!
ಕಿಂಚಿತು ಗೀತ ಒಂದನಂತಕೋಟಿ ಜಪ!
ಜಪವೆಂಬುದೇಕೆ ಮನವೇ ?
ಕೂಡಲಸಂಗನ ಶರಣರ ಕಂಡು
ಆಡಿ, ಹಾಡಿ ಬದುಕು ಮನವೇ!
-
೧೮೫. ಮನವೇ ನಿನ್ನ ಜನನದ ಪರಿಭವವ ಮರೆದೆಯಲ್ಲಾ!
ಮನವೇ, ಲಿಂಗವ ನಂಬು ಕಂಡಾ!
ಮನವೇ, ಜಂಗಮವ ನಂಬು ಕಂಡಾ!
ಮನವೇ, ಕೂಡಲಸಂಗಮದೇವರ
ಬಿಡದೆ ಬೆಂಬತ್ತು ಕಂಡಾ!
-
೧೮೬. ಕೊಡುವಾತ ಸಂಗ, ಕೊಂಬಾತ ಸಂಗ ಕಾಣಿರೆಲವೋ!
ನರಮಾನವರು ಕೊಡುವರೆಂಬವನ ಬಾಯಲ್ಲಿ
ಬಾಲಹುಳುಗಳು ಸುರಿಯವೆ ?
ಮೂರು ಲೋಕಕ್ಕೆ ನಮ್ಮ ಕೂಡಲಸಂಗಯ್ಯ ಕೊಡುವ ಕಾಣಿರೆಲವೊ!
-
೧೮೭. ಸುರರ ಬೇಡಿದರಿಲ್ಲ! ನರರ ಬೇಡಿದರಿಲ್ಲ!
ಬರಿದೆ ಧೃತಿಗೆಡಬೇಡ ಮನವೇ
ಆರನಾದರೆಯೂ ಬೇಡಿ ಬೇಡಿ
ಬರಿದೆ ಧೃತಿಗೆಡಬೇಡ ಮನವೇ!
ಕೂಡಲಸಂಗಮದೇವರನಲ್ಲದೆ ಆರ ಬೇಡಿದರಿಲ್ಲ ಮನವೇ!
-
೧೮೮. ಹೃದಯದಿ ಕತ್ತರಿ, ತುದಿನಾಲಿಗೆ ಬೆಲ್ಲಂ ಭೋ!
ಆಡಿ ಏವೆಂ ಭೊ, ಹಾಡಿ ಏವೆಂ ಭೋ!
ನಿಚ್ಚ ನಿಚ್ಚ ಶಿವರಾತ್ರಿಯ ಮಾಡಿ ಏವೆಂ ಭೋ!
ಆನು ಎನ್ನಂತೆ, ಮನವು ಮನದಂತೆ!
ಕೂಡಲಸಂಗಮದೇವ ತಾನು ತನ್ನಂತೆ!
-
೧೮೯. ಕೆಲಕ್ಕೆ ಶುದ್ಧನಾದೆನಲ್ಲದೆ
ಎನ್ನ ಮನಕ್ಕೆ ಶುದ್ಧನಾಗೆನೇಕಯ್ಯ!
ಕೈ ಮುಟ್ಟಿ ಪೂಜಿಸುವಡೆನ್ನ ಕೈ ಶುದ್ಧವಲ್ಲಯ್ಯ!
ಮನ ಮುಟ್ಟಿ ಪೂಜಿಸುವಡೆನ್ನ ಮನ ಶುದ್ಧವಲ್ಲಯ್ಯ!
ಭಾವ ಶುದ್ಧವಾದರೆ
ಕೂಡಲಸಂಗಯ್ಯನಿತ್ತ ಬಾ ಎಂದೆತ್ತಿಕೊಳ್ಳನೇಕಯ್ಯ ?!
-
೧೯೦. ಲಿಂಗದಲ್ಲಿ ಕಠಿಣವುಂಟೆ ?
ಜಂಗಮದಲ್ಲಿ ಕುಲವುಂಟೆ ?
ಪ್ರಸಾದದಲ್ಲಿ ಅರುಚಿಯುಂಟೆ ?
ಈ ತ್ರಿವಿಧದಲ್ಲಿ ಭಾವಭೇದವನರಸುವೆನು:
ಕೂಡಲಸಂಗಮದೇವಾ,
ಧಾರೆವಟ್ಟಲೆನ್ನ ಮನವು.
-
೧೯೧. ಓತಿ ಬೇಲಿವರಿದಂತೆನ್ನ ಮನವಯ್ಯ,
ಹೊತ್ತಿಗೊಂದು ಪರಿಯಪ್ಪ
ಗೋಸುಂಬೆಯಂತೆನ್ನ ಮನವು.
ಬಾವಲ ಬಾಳುವೆಯಂತೆನ್ನ ಮನವು.
ನಡುವಿರುಳೆದ್ದ ಕುರುಡಂಗಗುಸೆಯಲ್ಲಿ ಬೆಳಗಾದಂತೆ
ನಾನಿಲ್ಲದ ಭಕ್ತಿಯ ಬಯಸಿದರುಂಟೆ
ಕೂಡಲಸಂಗಮದೇವ.
-
೧೯೨. ಶಬ್ದ-ಸಂಭಾಷಣೆಯ ನುಡಿಯ ವರ್ಚ್ಚಿಸಿ ನುಡಿವೆ
ತೊಡೆಹದ ಕೆಲಸದ ಬಣ್ಣದಂತೆ!
ಕಡಿಹಕ್ಕೆ ಒರಗೆ ಬಾರದು ನೋಡಾ!
ಎನ್ನ ಮನದಲೊಂದು, ಹೃದಯದಲೊಂದು,
ವಚನದಲೊಂದು ನೋಡಾ! ಕೂಡಲಸಂಗಮದೇವ,
ಆನು ಭಕ್ತನೆಂಬ ಹುಸಿಯ ಮಸಕವನೇನ ಬಣ್ಣಿಸುವೆನಯ್ಯ!
-
೧೯೩. ಏನನೋದಿ, ಏನ ಕೇಳಿ, ಏನ ಮಾಡಿಯೂ
ಫಲವೇನು ನಿನ್ನವರೊಲಿಯದನ್ನಕ ?
ಶಿವ ಶಿವ ಮಹಾದೇವ!
ಬಾಳಿಲ್ಲದವಳ ಒಲೆಯಂತಾಯಿತ್ತೆನಗೆ
ಕೂಡಲಸಂಗಮದೇವ.
-
೧೯೪. ಮುನ್ನೂರರವತ್ತು ದಿನ ಶರವ ಮಾಡಿ,
ಕಳನೇರಿ ಕೈಮರೆದಂತಾಯಿತ್ತೆನ್ನ ಭಕ್ತಿ!
ಎನಿಸು ಕಾಲ ಲಿಂಗಾರ್ಚನೆಯ ಮಾಡಿ
ಏವೆನಯ್ಯ ಮನದಲ್ಲಿ ದೃಢವಿಲ್ಲದನ್ನಕ ?
ಕೊಡನ ತುಂಬಿದ ಹಾಲ ಕೆಡಹಿ
ಉಡುಗಲೆನ್ನಳವೆ ಕೂಡಲಸಂಗಮದೇವ.
-
೧೯೫. ಅಂಕ ಓಡಿದರೆ ತೆತ್ತಿಗಂಗೆ ಭಂಗವಯ್ಯ,
ಕಾದಿ ಗೆಲಿಸಯ್ಯ-ಎನ್ನನು ಕಾದಿ ಗೆಲಿಸಯ್ಯ,
ಕೂಡಲಸಂಗಮದೇವಯ್ಯ, ಎನ್ನ ತನು-ಮನ-ಧನದಲ್ಲಿ
ವಂಚನೆಯಿಲ್ಲದಂತೆ ಮಾಡಯ್ಯ.
-
೧೯೬. ಅಂಕ ಕಳನೇರಿ ಕೈಮರೆದಿದ್ದರೆ
ಮಾರಂಕ ಬಂದಿರಿವುದು ಮಾಬನೆ ?
ನಿಮ್ಮ ನೆನವ ಮತಿ ಮರೆದಿದ್ದರೆ
ಪಾಪ ತನುವನಂಡಲೆವುದ ಮಾಬುದೆ ?
ಕೂಡಲಸಂಗಯ್ಯನ ನೆನೆದರೆ
ಪಾಪ ಉರಿಗೊಂಡಿದರಗಿನಂತೆ ಕರಗುವುದಯ್ಯ.
-
೧೯೭. ಹೇಡಿ ಬಿರುದ ಕಟ್ಟಿದಂತಾಯಿತೆನ್ನ ವೇಷ!
ಕಾದಬೇಕು, ಕಾದುವರೆ ಮನವಿಲ್ಲ!
ಆಗಳೇ ಹೋಯಿತ್ತು ಬಿರುದು;
ಹಗರಣಿಗನಂತೆ ನಗೆಗೆಡೆಯಾಯಿತ್ತು!
ಮಾರಂಕ-ಜಂಗಮ ಮನೆಗೆ ಬಂದರೆ
ಕಾಣದಂತಡ್ಡ ಮುಸುಡಿಟ್ಟರೆ,
ಕೂಡಲಸಂಗಮದೇವ ಜಾಣ
ಮೂಗ ಕೊಯ್ವ ಹಲುದೋರಲು.
-
೧೯೮. ಆಡುವುದಳವಟ್ಟಿತ್ತು-ಹಾಡುವುದಳವಟ್ಟಿತ್ತು.
ಅರ್ಚನೆಯಳವಟ್ಟಿತ್ತು-ಪೂಜನೆಯಳವಟ್ಟಿತ್ತು.
ನಿತ್ಯಲಿಂಗಾರ್ಚನೆಯು ಮುನ್ನವೇ ಅಳವಟ್ಟಿತ್ತು!
ಕೂಡಲಸಂಗನ ಶರಣರು ಬಂದರೆ
ಏಗುವುದೇಬೇಸನೆಂಬುದೊಪ್ಪಚ್ಚಿಯಳವಡದು!!
-
೧೯೯. ಹೊರಿಸಿಕೊಂಡು ಹೋದ ನಾಯಿ
ಮೊಲನನೇನ ಹಿಡಿವುದಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಹೇಳುವುದೇ ನಾಚಿಕೆ!
ಆನು ಭಕ್ತನೆಂತೆಂಬೆನಯ್ಯ
ಕೂಡಲಸಂಗಮದೇವ ?
-
೨೦೦. ನೋಡುವರುಳ್ಳರೆ ಮಾಡುವೆ ದೇಹಾರವ,
ಎನಗೊಂದು ನಿಜವಿಲ್ಲ,
ಎನಗೊಂದು ನಿಷ್ಪತ್ತಿಯಿಲ್ಲ;
ಲಿಂಗವ ತೋರಿ ಉದರವ ಹೊರೆವ
ಭಂಗಗಾರ ನಾನು ಕೂಡಲಸಂಗಮದೇವ.
-
೨೦೧. ಊರ ಸೀರೆಗೆ ಅಸಗ ಬಡಿವಡೆದಂತೆ
ಹೊನ್ನೆನ್ನದು, ಹೆಣ್ಣೆನ್ನದು, ಮಣ್ಣೆನ್ನದು,
ಎಂದು ಮರುಳಾದೆ.
ನಿಮ್ಮನರಿಯದ ಕಾರಣ,
ಕೆಮ್ಮನೆ ಕೆಟ್ಟೆ ಕೂಡಲಸಂಗಮದೇವ.
-
೨೦೨. ಕಾಂಚನವೆಂಬ ನಾಯ ನೆಚ್ಚಿ
ನಿಮ್ಮ ನಾನು ಮರೆದೆನಯ್ಯ.
ಕಾಂಚನಕ್ಕೆ ವೇಳೆಯಲ್ಲದೆ, ಲಿಂಗಕ್ಕೆ ವೇಳೆಯಿಲ್ಲ!
ಹಡಕಿಗೆ ಮೆಚ್ಚಿದ ಸೊಣಗನಮೃತದ ರುಚಿಯ ಬಲ್ಲುದೇ ?
ಕೂಡಲಸಂಗಮದೇವ.
-
೨೦೩. ಹಗೆಹದಲ್ಲಿ ಬಿದ್ದವರ ಮೇಲೆ ಒರಳ ನೂಂಕುವರೆ ?
ಕೋಳದ ಮೇಲೆ ಸಂಕಲೆಯನಿಕ್ಕುವರೆ ?
ಬೆಂದ ಹುಣ್ಣ ಕಂಬಿಯಲ್ಲಿ ಕೀಸುವರೆ ?
ಕೂಡಲಸಂಗಯ್ಯ ಕಾಡುವ ಕಾಟ
ಸಿರಿಯಾಳಂಗಲ್ಲದೆ ಸೈರಿಸಬಹುದೆ ?
-
೨೦೪. ಮಾತಿನಲ್ಲಿ ಶ್ರೋತ್ರಸುಖವ ನುಡಿಯಬಹುದಲ್ಲದೆ,
ಮಾಡುವ ಸತ್ಕ್ರಿಯೆಯಿಂದ ಭಕ್ತನೆನಿಸಲು ಬಾರದು.
ಅರ್ಥಪ್ರಾಣಾಭಿಮಾನವಾರಿಗೆಯು ಸಮನಿಸದು,
ಲಿಂಗಮುಖದಲುದಯವಾದ ಶರಣಂಗಲ್ಲದೆ,
ಅಯ್ಯ, ಕೂಡಲಸಂಗನ ಶರಣರ
ಭಕ್ತಿಭಂಡಾರವು ಎನಗೆಂತು ಸಾಧ್ಯವಪ್ಪುದು,
ಹೇಳೆನ್ನ ತಂದೆ.
-
೨೦೫. ಬಾಣಮಯೂರರಂತೆ ಬಣ್ಣಿಸಲರಿಯೆ
ಸಿರಿಯಾಳನಂತೆ ಉಣಲಿಕ್ಕಲರಿಯೆ
ದಾಸಿಮಯ್ಯನಂತೆ ಉಡಕೊಡಲರಿಯೆ
v ಉಂಡುಟ್ಟು ಕೊಟ್ಟರೆ ಮುಯ್ಯಿಗೆ ಮುಯ್ಯೆನಿಸಿತ್ತು,
ಎನಗೆ ಕೊಟ್ಟರೆ ಧರ್ಮ ಕೂಡಲಸಂಗಮದೇವ.
-
೨೦೬. ಎನ್ನ ತಪ್ಪನಂತಕೋಟಿ
ನಿಮ್ಮ ಸೈರಣೆಗೆ ಲೆಕ್ಕವಿಲ್ಲಯ್ಯ.
ಇನ್ನು ತಪ್ಪಿದೆನಾದರೆ
ನಿಮ್ಮ ಪಾದವೇ ದಿವ್ಯ ಕೂಡಲಸಂಗಮದೇವಯ್ಯ,
ನಿಮ್ಮ ಪ್ರಮಥರ ಮುಂದೆ ಕಿನ್ನರಿ ಬೊಮ್ಮಣ್ಣನೇ ಸಾಕ್ಷಿ!
-
೨೦೭. ಅಡಿಗಡಿಗೆ ಎನ್ನ ಮನವ ಜಡಿದು ನೋಡದಿರಯ್ಯ.
ಬಡವನೆಂದೆನ್ನ ಕಾಡದಿರಯ್ಯ
ಎನಗೊಡೆಯರುಂಟು ನಮ್ಮ ಕೂಡಲಸಂಗನ ಶರಣರು.
-
೨೦೮. ಮನೆ ನೋಡಾ ಬಡವರು,
ಮನ ನೋಡಾ ಧೀರರು
ಸೋಂಕಿನಲ್ಲಿ ಶುಚಿ;
ಸರ್ವಾಂಗಕಲಿ.
ಪರಸಕ್ಕನುವಿಲ್ಲ; ಬಂದ ತತ್ಕಾಲಕ್ಕುಂಟು.
ಕೂಡಲಸಂಗನ ಶರಣರು ಸ್ವತಂತ್ರಧೀರರು.
-
೨೦೯. ಆ ಕರಿಯಾಕೃತಿಯ ಸೂಕರನ ಹೋಲಿಸಿದರೆ
ಸೂಕರ ಆ ಕರಿಯಾಗಬಲ್ಲುದೆ ?
ಆ ವ್ಯಾಳೇಶನಾಕೃತಿಯ ಭೂನಾಗನ ಹೋಲಿಸಿದರೆ
ಭೂನಾಗನಾ ವ್ಯಾಳೇಶನಾಗಬಲ್ಲುದೇ ?
ನಾನು ಭಕ್ತನಾದರೇನಯ್ಯ
ನಮ್ಮ ಕೂಡಲಸಂಗಮದೇವರ ಸದ್ಭಕ್ತರ ಹೋಲಲರಿವೆನೆ ?
-
೨೧೦. ಮೋಟನ ಮೌಳಿ, ಮೂಕೊರತಿಯ ಶೃಂಗಾರ,
ಬೇಟ ಕುರುಡಂಗೆ ನಗೆಗೆಡೆಯಾಯಿತ್ತು!
ನಮ್ಮ ಕೂಡಲಸಂಗನ ಶರಣರ ಮುಂದೆ
ಆನು ಭಕ್ತನೆಂಬ ನಾಚಿಕೆ ಸಾಲದೆ ?
-
೨೧೧. ಮಾವಿನ ಕಾಯೊಳಗೊಂದು ಎಕ್ಕೆಯ ಕಾಯಿ ನಾನಯ್ಯ!
ನಾನು ಭಕ್ತನೆಂತೆಂಬೆ ನಿಮ್ಮ ಶರಣರ ಮುಂದೆ ನಾಚಿಕೆಯಿಲ್ಲದೆ ?
ಕೂಡಲಸಂಗನ ಶರಣರ ಮುಂದೆ ನಾನೆಂತು ಭಕ್ತನಪ್ಪೆನಯ್ಯ ?!
-
೨೧೨. ಮರದ ನೆಳಲಲ್ಲಿದ್ದು ತನ್ನ ನೆಳಲನರಸುವರೆ ?
ನಿಮ್ಮ ಶರಣರ ಮುಂದೆ ನಾನೇತರ ಭಕ್ತನಯ್ಯ!
ನಿಮ್ಮ ಶರಣರ ಮುಂದೆ ನಾನೇತರ ಯುಕ್ತನಯ್ಯ!
ನಾನು ಭಕ್ತನೆಂಬ ನುಡಿ ಸುಡದೆ ಕೂಡಲಸಂಗಮದೇವ.
-
೨೧೩. ಎನಗಿಂತ ಕಿರಿಯರಿಲ್ಲ!
ಶಿವಭಕ್ತರಿಗಿಂತ ಹಿರಿಯರಿಲ್ಲ.
ನಿಮ್ಮ ಪಾದ ಸಾಕ್ಷಿ ಎನ್ನ ಮನ ಸಾಕ್ಷಿ!
ಕೂಡಲಸಂಗಮದೇವಾ ಎನಗಿದೇ ದಿಬ್ಯ.
-
೨೧೪. ಅರ್ಚಿಸಲರಿಯೆ, ಪೂಜಿಸಲರಿಯೆ,
ನಿಚ್ಚ ನಿಚ್ಚ ಶಿವರಾತ್ರಿಯ ನಾ ಮಾಡಲರಿಯೆ!
ಕಪ್ಪಡಿವೇಷದಿಂದಾನು ಬಂದಾಡುವೆ.
ಕಪ್ಪಡಿವೇಷದಿಂದ, ಈಶ,
ನಿಮ್ಮ ದಾಸರ ದಾಸಿಯ ದಾಸ ನಾನಯ್ಯ.
ನಿಮ್ಮ ವೇಷಧಾರಿಯ ಮನೆಯ ಪಂಗುಳ ನಾನಯ್ಯ.
ಕೂಡಲಸಂಗಮದೇವ, ನಿಮ್ಮ ಲಾಂಛನವ ಧರಿಸಿಪ್ಪ
ಉದರಪೋಷಕ ನಾನಯ್ಯ.
-
೨೧೫. ಅಪ್ಪನು ಡೋಹರ ಕಕ್ಕಯ್ಯನಾಗಿ,
ಮುತ್ತಯ್ಯ ಚೆನ್ನಯ್ಯನಾದರೆ ಆನು ಬದುಕೆನೆ ?
ಮತ್ತಾ ಶ್ವಪಚಯ್ಯನ ಸನ್ನಿಧಿಯಿಂದ
ಭಕ್ತಿಯ ಸದ್ಗುಣವ ನಾನರಿಯೆನೆ ?
ಕಷ್ಟಜಾತಿಜನ್ಮದಲ್ಲಿ ಜನಿಯಿಸಿದೆ ಎನ್ನ,
ಎನಗಿದು ವಿಧಿಯೇ ಕೂಡಲಸಂಗಮದೇವ ?
-
೨೧೬. ಉತ್ತಮ ಕುಲದಲ್ಲಿ ಹುಟ್ಟಿದೆನೆಂಬ
ಕಷ್ಟತನದ ಹೊರೆಯ ಹೊರಿಸಿದಿರಯ್ಯ!
ಕಕ್ಕಯನೊಕ್ಕುದನಿಕ್ಕ ನೋಡಯ್ಯ,
ದಾಸಯ್ಯ ಶಿವದಾನವನೆರೆಯ ನೋಡಯ್ಯ.
ಮನ್ನಣೆಯ ಚೆನ್ನಯ್ಯನೆನ್ನುವ ಮನ್ನಿಸ.
ಉನ್ನತಮಹಿಮ ಕೂಡಲಸಂಗಮದೇವಾ
ಶಿವಧೋ! ಶಿವಧೋ!!
-
೨೧೭. ಸೆಟ್ಟಿ ಎಂಬೆನೆ ಸಿರಿಯಾಳನ ?
ಮಡಿವಾಳನೆಂಬೆನೆ ಮಾಚಯ್ಯನ ?
ಡೋಹರನೆಂಬೆನೆ ಕಕ್ಕಯ್ಯನ ?
ಮಾದಾರನೆಂಬೆನೆ ಚೆನ್ನಯ್ಯನ ?
ಆನು ಹಾರುವನೆಂದರೆ,
ಕೂಡಲಸಂಗಯ್ಯ ನಗುವನಯ್ಯ.
-
೨೧೮. ಸೂಳೆಗೆ ಹುಟ್ಟಿದ ಕೂಸಿನಂತೆ
ಆರನಾದರೆಯೂ 'ಅಯ್ಯ' 'ಅಯ್ಯ' ಎನಲಾರೆನಯ್ಯ.
ಚೆನ್ನಯ್ಯನೆಮ್ಮಯ್ಯನು,
ಚೆನ್ನಯ್ಯನ ಮಗ ನಾನು;
ಕೂಡಲಸಂಗನ ಮಹಾಮನೆಯಲ್ಲಿ
ಧರ್ಮಸಂತಾನ ಭಂಡಾರಿ ಬಸವನು!
-
೨೧೯. ಭಕ್ತಿ ಇಲ್ಲದ ಬಡವ ನಾನಯ್ಯ.
ಕಕ್ಕಯ್ಯನ ಮನೆಯಲು ಬೇಡಿದೆ.
ದಾಸಯ್ಯನ ಮನೆಯಲು ಬೇಡಿದೆ.
ಚೆನ್ನಯ್ಯನ ಮನೆಯಲು ಬೇಡಿದೆ,
ಎಲ್ಲ ಪುರಾತರು ನೆರೆದು,
ಭಕ್ತಿ-ಭಿಕ್ಷವನಿಕ್ಕಿದರೆ ಎನ್ನ ಪಾತ್ರೆ ತುಂಬಿತ್ತು.
ಕೂಡಲಸಂಗಮದೇವ.
-
೨೨೦. ಅರಸರ ಮನೆಯಲ್ಲಿ ಅರಸಿಯಾಗಿಪ್ಪುದರಿಂದ
ಭಕ್ತರ ಮನೆಯಲ್ಲಿ ತೊತ್ತಾಗಿಪ್ಪುದು ಕರ ಲೇಸಯ್ಯ.
ತಾರೌ ಅಗ್ಗವಣಿಯ, ನೀಡೌ ಪತ್ರೆಯ,
ಲಿಂಗಕ್ಕೆ ಬೋನವ ಹಿಡಿಯೌ ಎಂಬರು;
ಕೂಡಲಸಂಗನ ಮಹಾಮನೆಯಲ್ಲಿ ಒಕ್ಕುದನುಣ್ಣೌ
ತೊತ್ತೇ ಎಂಬರು.
-
೨೨೧. ಮೇಲಾಗಲೊಲ್ಲೆ ಕೀಳಾಗಲೊಲ್ಲದೆ!
ಕೀಳಿಂಗಲ್ಲದೆ ಹಯನು ಕರೆವುದೆ ?
ಮೇಲಾಗಿ ನರಕದಲೋಲಾಡಲಾರೆನು!
ನಿಮ್ಮ ಶರಣರ ಪಾದಕ್ಕೆ ಕೀಳಾಗಿರಿಸು
ಮಹಾದಾನಿ ಕೂಡಲಸಂಗಮದೇವ.
-
೨೨೨. ಕಾಗೆ ವಿಷ್ಟಿಸುವ ಹೊನ್ನಕಳಶವಹುದರಿಂದ,
ಒಡೆಯರು ಜೋಗೈಸುವ ಚಮ್ಮಾವುಗೆಯ ಮಾಡಯ್ಯ.
ಅಯ್ಯ, ನಿಮ್ಮ ಶರಣರ ಪಾದಕ್ಕೆ ಚಮ್ಮಾವುಗೆಯ ಮಾಡಯ್ಯ.
"ಕರ್ಮಾವಲಂಬಿನಃ ಕೇಚಿತ್
ಕೇಚಿತ್ ಜ್ಞಾನಾವಲಂಬಿನಃ
ವಯಂತು ಶಿವಭಕ್ತಾನಾಂ
ಪಾದರಕ್ಷಾವಲಂಬಿನಃ"
ಕೂಡಲಸಂಗಮದೇವ ನಿಮ್ಮ ಸೆರಗೊಡ್ಡಿ ಬೇಡುವೆನು
ಇದೊಂದೇ ವರವ ಕರುಣಿಸಯ್ಯ.
-
೨೨೩. ಚಕೋರಂಗೆ ಚಂದ್ರಮನ ಬೆಳಗಿನ ಚಿಂತೆ,
ಅಂಬುಜಕ್ಕೆ ಭಾನುವಿನ ಉದಯದ ಚಿಂತೆ.
ಭ್ರಮರಂಗೆ ಪರಿಮಳದ ಬಂಡುಂಬ ಚಿಂತೆ.
ಎನಗೆ ನಮ್ಮ ಕೂಡಲಸಂಗಮದೇವರ
ನೆನೆವುದೇ ಚಿಂತೆ!
-
೨೨೪. ಹೊಲಬುಗೆಟ್ಟ ಶಿಶು ತನ್ನ ತಾಯನರಸುವಂತೆ,
ಬಳಿದಪ್ಪಿದ ಪಶು ತನ್ನ ಹಿಂಡನರಸುವಂತೆ,
ಬಯಸುತ್ತಿದ್ದೆನಯ್ಯ ನಿಮ್ಮ ಭಕ್ತರ ಬರವನು!
ಬಯಸುತ್ತಿದ್ದೆನಯ್ಯ ನಿಮ್ಮ ಶರಣರ ಬರವನು!
ದಿನಕರನುದಯಕ್ಕೆ ಕಮಳ ವಿಕಸಿತವಾದಂತೆ
ಎನಗೆ ನಿಮ್ಮ ಶರಣರ ಬರವು ಕೂಡಲಸಂಗಮದೇವ.
-
೨೨೫. ಸೂರ್ಯನುದಯ ತಾವರೆಗೆ ಜೀವಾಳ!
ಚಂದ್ರಮನುದಯ ನೈದಿಲೆಗೆ ಜೀವಾಳ!
ಕೂಪರ ಠಾವಿನಲ್ಲಿ ಕೂಟ-ಜೀವಾಳವಯ್ಯ.
ಒಲಿದ ಠಾವಿನಲ್ಲಿ ನೋಟ-ಜೀವಾಳವಯ್ಯ.
ಕೂಡಲಸಂಗನ ಶರಣರ ಬರವೆನಗೆ
ಪ್ರಾಣ-ಜೀವಾಳವಯ್ಯ.
-
೨೨೬. ಕಂಡರೆ ಮನೋಹರವಯ್ಯ,
ಕಾಣದಿದ್ದರೆ ಅವಸ್ಥೆ ನೋಡಯ್ಯ.
ಹಗಲು ಇರುಳಹುದು; ಇರುಳು ಹಗಲಹುದು.
ಇರುಳು ಹಗಲೊಂದು
ಜುಗ ಮೇಲೆ ಕೆಡೆದಂತೆ ಇಹುದು.
ಕೂಡಲಸಂಗನ ಶರಣರನಗಲುವ ಧಾವತಿಯಿಂದ
ಮರಣವೇ ಲೇಸು ಕಂಡಯ್ಯ.
-
೨೨೭. ಅಂಗೈ ತಿಂದುದು, ಎನ್ನ ಕಂಗಳು ಕೆತ್ತಿಹವಯ್ಯ.
ಬಂದಹರಯ್ಯ ಪುರಾತರೆನ್ನ ಮನೆಗೆ!
ಬಂದಹರಯ್ಯ ಶರಣರೆನ್ನ ಮನೆಗೆ!
ಕಂಡ ಕನಸು ದಿಟವಾಗಿ,
ಜಂಗಮ ಮನೆಗೆ ಬಂದರೆ
ಶಿವಾರ್ಚನೆಯ ಮಾಡಿಸುವೆ
ಕೂಡಲಸಂಗಮದೇವಾ ನಿಮ್ಮ ಮುಂದೆ.
-
೨೨೮. ಗಿಳಿಯ ಪಂಜರವಿಕ್ಕಿ, ಸೊಡರಿಗೆಣ್ಣೆಯನೆರೆದು,
ಬತ್ತಿಯನಿಕ್ಕಿ ಬರವ ಹಾರುತ್ತಿದ್ದೆನೆಲೆಗವ್ವ!
ತರಗೆಲೆ ಗಿರಕಂದರೆ, ಹೊರಗನಾಲಿಸುವೆ.
ಅಗಲಿದೆನೆಂದೆನ್ನ ಮನ ಧಿಗಿಲೆಂದಿತ್ತೆಲೆಗವ್ವ.
ಕೂಡಲಸಂಗನ ಶರಣರು ಬಂದು
ಬಾಗಿಲ ಮುಂದೆ ನಿಂದು
'ಶಿವಾ' ಎಂದರೆ ಸಂತೋಷಪಟ್ಟೆನೆಲೆಗವ್ವ.
-
೨೨೯. ಅಡವಿಯಲೊಬ್ಬ ಕಡುನೀರಡಸಿ
ಎಡೆಯಲ್ಲಿ ನೀರ ಕಂಡಂತಾಯಿತಯ್ಯ!
ಕುರುಡ ಕಣ್ಣ ಪಡೆದಂತಾಯಿತಯ್ಯ!
ಬಡವ ನಿಧಾನವ ಪಡೆದಂತಾಯಿತಯ್ಯ!
ನಮ್ಮ ಕೂಡಲಸಂಗನ ಶರಣರ
ಬರವೆನ್ನ ಪ್ರಾಣ ಕಂಡಯ್ಯ.
-
೨೩೦. ಇಂದೆನ್ನ ಮನೆಗೆ ಪ್ರಮಥರು ಬಂದಾರೆಂದು,
ಗುಡಿ, ತೋರಣವ ಕಟ್ಟಿ;
ಪಡುಸಮ್ಮಾರ್ಜನೆಯ ಮಾಡಿ
ರಂಗವಾಲಿಯನಿಕ್ಕಿ
ಉಘೇ, ಚಾಂಗು, ಭಲಾ, ಎಂಬೆ!
ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹುವರಾಗಿ.
-
೨೩೧. ಸಾಸವೆಯ ಮೇಲೆ ಸಾಗರವರಿದಂತಾಯಿತಯ್ಯ!
ಆನಂದದಿಂದ ನಲಿನಲಿದಾಡುವೆನು.
ಆನಂದದಿಂದ ಕುಣಿಕುಣಿದಾಡುವೆನು.
ಕೂಡಲಸಂಗನ ಶರಣರು ಬಂದರೆ
ಉಬ್ಬಿಕೊಬ್ಬಿ ಹರುಷದಲೋಲಾಡುವೆನು.
-
೨೩೨. ಎಳ್ಳಿಲ್ಲದ ಗಾಣವನಾಡಿದ
ಎತ್ತಿನಂತಾಯಿತ್ತೆನ್ನ ಭಕ್ತಿ!
ಉಪ್ಪ ಅಪ್ಪುವಿನಲ್ಲಿ ಅದ್ದಿ
ಮೆಲಿದಂತಾಯಿತ್ತೆನ್ನ ಭಕ್ತಿ!
ಕೂಡಲಸಂಗಮದೇವ,
ಅನು ಮಾಡಿದೆನೆಂಬೀ ಕಿಚ್ಚು ಸಾಲದೆ ?
-
೨೩೩. ಧ್ಯಾನಮೌನವೆಂಬ ಶಸ್ತ್ರವ ಹಿಡಿಯಲಾರದೆ
ಅಹಂಕಾರಧಾರೆಯ ಮೊನೆಯಲಗೆಂಬ ಶಸ್ತ್ರವ ಹಿಡಿದು ಕೆಟ್ಟೆನಯ್ಯ!
ಅಂಜುವೆನಂಜುವೆನಯ್ಯ!
ಜಂಗಮ-ಲಿಂಗವೆಂಬ ಭಾಷೆ ಪಲ್ಲಟವಾಯಿತ್ತು!
ಇನ್ನು-ಜಂಗಮಲಿಂಗವೆಂಬ ಶಿಕ್ಷಾಶಸ್ತ್ರದಲ್ಲಿ,
ಎನ್ನ ಹೊಯ್ದು ಬಯ್ದು ರಕ್ಷಿಸುವುದು ಕೂಡಲಸಂಗಮದೇವ!
-
೨೩೪. ಎನ್ನಲ್ಲಿ ಭಕ್ತಿ ಸಾಸವೆಯ ಷಡ್ಭಾಗದಿನಿತಿಲ್ಲ;
ಎನ್ನ ಭಕ್ತನೆಂಬರು; ಎನ್ನ ಸಮಯಾಚಾರಿ ಎಂದೆಂಬರು.
ನಾನೇನು ಪಾಪವ ಮಾಡಿದೆನೋ!
ಬೆಳೆಯದ ಮುನ್ನವೇ ಮೊಳೆಯ ಕೊಯ್ವರೆ ಹೇಳಯ್ಯ ?
ಇರಿಯದ ವೀರ ಇಲ್ಲದ ಸೊಬಗುವ
ಎಲ್ಲ ಒಡೆಯರು ಏರಿಸಿ ನುಡಿವರು!
ಎನಗಿದು ವಿಧಿಯೇ ಕೂಡಲಸಂಗಮದೇವ ?
-
೨೩೫. ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ
ಹೊಗಳಿ ಹೊಗಳಿ!
ಎನ್ನ ಹೊಗಳತೆ ಎನ್ನನಿಮ್ಮೈಗೊಂಡಿತಲ್ಲ!
ಅಯ್ಯೋ ನಿಮ್ಮ ಮನ್ನಣೆಯೆ
ಮಸೆದಲಗಾಗಿ ತಾಗಿತ್ತಲ್ಲ!
ನೊಂದೆನು, ಸೈರಿಸಲಾರೆನು-ಕೂಡಲಸಂಗಮದೇವ,
ನೀನೆನಗೊಳ್ಳಿದನಾದರೆ,
ಎನ್ನ ಹೊಗಳತೆಗಡ್ಡ ಬಾರಾ ಧರ್ಮೀ.
-
೨೩೬. ಎನ್ನವರೆನಗೊಲಿದು ಹೊನ್ನಶೂಲದಲ್ಲಿಕ್ಕಿದರೆನ್ನ!
ಅಹಂಕಾರ ಪೂರಾಯ ಗಾಯದಲ್ಲಿ
ಆನೆಂತು ಬದುಕುವೆನೆಂತು ಜೀವಿಸುವೆ!
ಜಂಗಮವಾಗಿ ಬಂದು ಜರಿದು
ಶೂಲವನಿಳುಹಿ, ಪ್ರಸಾದದ ಮದ್ದನಿಕ್ಕಿ
ಸಲಹು ಕೂಡಲಸಂಗಮದೇವ.
-
೨೩೭. ಹೊಯ್ದವರೆನ್ನ ಹೊರೆದವರೆಂಬೆ,
ಬಯ್ದವರೆನ್ನ ಬಂಧುಗಳೆಂಬೆ.
ನಿಂದಿಸಿದವರೆನ್ನ ತಂದೆತಾಯಿಗಳೆಂಬೆ!
ಆಳಿಗೊಂಡವರೆನ್ನ ಆಳ್ದರೆಂಬೆ.
ಜರಿದವರೆನ್ನ ಜನ್ಮಬಂಧುಗಳೆಂಬೆ.
ಹೊಗಳಿದವರೆನ್ನ ಹೊನ್ನಶೂಲದಲಿಕ್ಕಿದವರು
ಕೂಡಲಸಂಗಮದೇವ.
-
೨೩೮. ಎಡದ ಕೈಯಲು ಹಾಲ ಬಟ್ಟಲು
ಬಲದ ಕೈಯಲು ಓಜುಗಟ್ಟಿಗೆ!
ಆವಾಗ ಬಂದಾನೆಮ್ಮಯ್ಯ
ಬಡಿದು ಹಾಲು ಕುಡಿಸುವ ತಂದೆ! ?
"ದಂಡಕ್ಷೀರದ್ವಯೀಹಸ್ತಂ
ಜಂಗಮಂ ಭಕ್ತಿಮಂದಿರಂ |
ತದ್ಭಕ್ತ್ಯಾ ಲಿಂಗಸಂತುಷ್ಟಿಃ
ಅಪಹಾಸಾಚ್ಚ ದಂಡನಂ ||"
ಎಂದುದಾಗಿ ಕೂಡಲಸಂಗಮದೇವಯ್ಯ
ತಾನೇ ಭಕ್ತಿಪಥವ ತೋರುವ ತಂದೆ.
-
೨೩೯. ಕೃತಯುಗದಲ್ಲಿ ಕೇತಾರವೆಂಬ ಮೂಲಸ್ಥಾನ;
ತ್ರೇತಾಯುಗದಲ್ಲಿ ವಾರಣಾಸಿ ಎಂಬ ಮೂಲಸ್ಥಾನ;
ದ್ವಾಪರಯುಗದಲ್ಲಿ ವಿರೂಪಾಕ್ಷವೆಂಬ ಮೂಲಸ್ಥಾನ;
ಕಲಿಯುಗದಲ್ಲಿ ಪರ್ವತವೆಂಬ ಮೂಲಸ್ಥಾನ;
ನಾ-ನಾ ಸ್ಥಾನವ ಮೆಟ್ಟಿದೆ
ಜಂಗಮವೇ ಲಿಂಗವೆಂದು ನಂಬಿದೆ
ಕೂಡಲಸಂಗಮದೇವ.
-
೨೪೦. ಭಕ್ತದೇಹೀಕದೇವನಪ್ಪ ದೇವನು
ಸದ್ಭಕ್ತರ ಬಳಿಯಲ್ಲಿ ಬಪ್ಪನಾಗಿ,
ಆಳ್ದನು ಬರಲಾಳು ಮಂಚದ ಮೇಲೆ
ಇಪ್ಪುದು ಗುಣವೇ ಹೇಳಾ
ಕೂಡಲಸಂಗಮದೇವ ?
ಜಂಗಮರೂಪವಾಗಿ ಸಂಗಯ್ಯ ಬಂದಾನೆಂದು
ಎಂದೆಂದೂ ನಾನು ಮಂಚವನೇರದ ಭಾಷೆ!
-
೨೪೧. ಭಿತ್ತಿಯಿಲ್ಲದೆ ಬರೆಯಬಹುದೆ ಚಿತ್ತಾರವ ?
ಬಿತ್ತಿ ಬೆಳೆಯಬಹುದೆ ಧರೆಯಿಲ್ಲದೆ ?
ಜಂಗಮವಿಲ್ಲದೆ ಮಾಡಬಹುದೆ,
ರೂಢೀಶನ ಭೇದಿಸಬಹುದೆ ?
ಒಡಲಿಲ್ಲದ ನಿರಾಳಕರ್ತೃ ಕೂಡಲಸಂಗಮದೇವ
ಜಂಗಮಮುಖಲಿಂಗವಾದನಾಗಿ
ಮತ್ತೊಂದನರಿಯೆನಯ್ಯ.
-
೨೪೨. ಕೆಂಡದಲ್ಲಿಟ್ಟರೆ ಕೈ ಬೆಂದುದೆಂಬರು;
ಕೊಂಡಿಟ್ಟವನ ಕೈ ಮುನ್ನವೇ ಬೆಂದುದು!
ನೊಂದೆ ನಾನು ನೊಂದೆನಯ್ಯ.
ಬೆಂದೆ ನಾನು ಬೆಂದೆನಯ್ಯ.
ಕೂಡಲಸಂಗನ ಶರಣರ ಕಂಡು
ಕಾಣದಂತಿದ್ದರೆ ಅಂದೇ ಬೆಂದೆನಯ್ಯ.
-
೨೪೩. ಲಾಂಛನವ ಕಂಡು ನಂಬುವೆ,
ಅವರಂತರಂಗವ ನೀವೇ ಬಲ್ಲಿರಿ.
ತೊತ್ತಿಂಗೆ ತೊತ್ತುಗೆಲಸವಲ್ಲದೆ
ಅರಸರ ಸುದ್ದಿ ಎಮಗೇಕಯ್ಯ ?
ರತ್ನಮೌಕ್ತಿಕದಚ್ಚು ಕೂಡಲಸಂಗಮದೇವ, ನಿಮ್ಮ ಶರಣರು.
-
೨೪೪. ಎಡದ ಕೈಯಲ್ಲಿ ನಿಗಳವನಿಕ್ಕಿ,
ಬಲದ ಕೈಯ್ಯ ಕಡಿದುಕೊಂಡರೆ,
ನೋಯದಿಪ್ಪುದೇ, ಅಯ್ಯ ?
ಪ್ರಾಣ ಒಂದಾಗಿ ದೇಹ ಬೇರಿಲ್ಲ.
ಲಿಂಗವ ಪೂಜಿಸಿ ಜಂಗಮವನುದಾಸೀನ ಮಾಡಿದರೆ
ಬೆಂದೆನಯ್ಯ ನಾನು, ಕೂಡಲಸಂಗಮದೇವ.
-
೨೪೫. ತನುವ ನೋಯಿಸಿ, ಮನವ ಬಳಲಿಸಿ
ನಿಮ್ಮ ಪಾದವಿಡಿದವರೊಳರೆ ?
ಈ ನುಡಿ ಸುಡದಿಹುದೆ ?
ಕೂಡಲಸಂಗಮದೇವ,
ಶಿವಭಕ್ತರ ನೋವೇ ಅದು ಲಿಂಗದ ನೋವು!
-
೨೪೬. ಕುದುರೆ ಸತ್ತಿಗೆಯವರ ಕಂಡರೆ
ಹೊರಳಿಬಿದ್ದು ಕಾಲ ಹಿಡಿವರಯ್ಯ.
ಬಡಭಕ್ತರು ಬಂದರೆ, ಎಡೆಯಿಲ್ಲ ಅತ್ತ ಸನ್ನಿ ಎಂಬರು.
ಎನ್ನೊಡೆಯ ಕೂಡಲಸಂಗಯ್ಯನವರ
ತಡೆಗೆಡಹಿ ಮೂಗ ಕೊಯ್ಯದೆ ಮಾಬನೆ ?
-
೨೪೭. ಅಡ್ಡದೊಡ್ಡ ನಾನಲ್ಲಯ್ಯ.
ದೊಡ್ಡ ಬಸಿರು ಎನಗಿಲ್ಲವಯ್ಯ.
ದೊಡ್ಡವರನಲ್ಲದೆ ನಿಮ್ಮ ಶರಣರು ಮನ್ನಿಸರಯ್ಯ.
ಹಡೆದುಂಬ ಸೂಳೆಯಂತೆ
ಧನವುಳ್ಳವರನರಸಿಯರಸಿ ಬೋಧಿಸಲು,
ಪ್ರಾರ್ಥಿಸಲು ಮುನ್ನ ನಾನರಿಯೆನಯ್ಯ!
ದೊಡ್ಡತನವೆನಗಿಲ್ಲವಯ್ಯ.
ಅಂಜುವೆನಂಜುವೆ ನಿಮ್ಮ ಪ್ರಥಮರಿಗೆ
ಅನಾಥ ನಾನಯ್ಯ, ಕೂಡಲಸಂಗಮದೇವ.
-
೨೪೮. ಹಾಲ ಕಂದಲು, ತುಪ್ಪದ ಗಡಿಗೆಯ-
ಬೋಡ, ಮುಕ್ಕೆನಬೇಡ!
ಹಾಲು ಸಿಹಿ, ತುಪ್ಪ ಕಮ್ಮಗೆ!
ಲಿಂಗಕ್ಕೆ ಬೋನ,
ಕೂಡಲಸಂಗನ ಶರಣರ
ಅಂಗಹೀನರೆಂದರೆ ನಾಯಕನರಕ!
-
೨೪೯. ಮರಕ್ಕೆ ಬಾಯಿ ಬೇರೆಂದು
ತಳಕ್ಕೆ ನೀರನೆರೆದರೆ ಮೇಲೆ ಪಲ್ಲವಿಸಿತ್ತು ನೋಡಾ!
ಲಿಂಗದ ಬಾಯಿ ಜಂಗಮವೆಂದು
ಪಡಿಪದಾರ್ಥವ ನೀಡಿದರೆ, ಮುಂದೆ ಸಕಲಾರ್ಥವನೀವನು!
ಆ ಜಂಗಮವ ಹರನೆಂದು ಕಂಡು
ನರನೆಂದು ಭಾವಿಸಿದರೆ, ನರಕ ತಪ್ಪದು ಕಾಣಾ!
ಕೂಡಲಸಂಗಮದೇವ.
-
೨೫೦. ನನಗೆ ನಾನೇ ಹಗೆ ನೋಡಯ್ಯ!
ನನಗೆ ನಾನೇ ಕೆಳೆ ನೋಡಯ್ಯ!
ನಿಮ್ಮ ಸದ್ಭಕ್ತರೊಡನೆ ವಿರೋಧವ ಮಾಡಿದರೆನ್ನ ಕೊಲುವುದಾಗಿ
ನಿಮ್ಮ ಪುರಾತನರಿಗಂಜಿ ಬೆಸಗೊಂಡರೆನ್ನ ಕಾಯ್ವುದಾಗಿ
ಅನ್ಯ ಹಗೆಯೆಲ್ಲಿ ? ಕೆಳೆಯೆಲ್ಲಿ ?
ಬಾಗಿದ ತಲೆಯ, ಮುಗಿದ ಕೈಯಾಗಿರಿಸು ಕೂಡಲಸಂಗಮದೇವ.
-
೨೫೧. ಆರಾಧನೆಯ ಮಾಡಿದರೆ ಅಮೃತದ ಬೆಳಸು.
ವಿರೋಧಿಸಿದರೆ ವಿಷದ ಬೆಳಸು.
ಇದು ಕಾರಣ,
ಲಿಂಗ ಜಂಗಮಕ್ಕಂಜಲೇಬೇಕು.
ಸ್ಥಾವರ-ಜಂಗಮ ಒಂದೆಂದರಿದರೆ
ಕೂಡಲಸಂಗಮದೇವ ಶರಣಾಸನ್ನಿಹಿತನು.
-
೨೫೨. ಜಂಗಮ ನಿಂದೆಯ ಮಾಡಿ, ಲಿಂಗವ ಪೂಜಿಸುವ
ಭಕ್ತನ ಅಂಘವಣೆ ಎಂತೋ ?
ಶಿವಶಿವ, ನಿಂದಿಸುವ ಪೂಜಿಸುವ
ಪಾತಕವಿದ ಕೇಳಲಾಗದು!
"ಗುರುವಿನ ಗುರು ಜಂಗಮ"
ಇಂತೆಂದುದು ಕೂಡಲಸಂಗನ ವಚನ.
-
೨೫೩. ಅರಸರ ಕಂಡು ತನ್ನ ಪುರುಷನ ಮರೆತರೆ
ಮರನೇರಿ ಕಯ್ಯ ಬಿಟ್ಟಂತಾದೆನಯ್ಯ!
ಇಹಲೋಕಕ್ಕೆ ದೂರ, ಪರಲೋಕಕ್ಕೆ ದೂರ
ನಮ್ಮ ಕೂಡಲಸಂಗಮದೇವಯ್ಯ
ಜಂಗಮಮುಖಲಿಂಗವಾದ ಕಾರಣ.
-
೨೫೪. ಲಿಂಗದಲ್ಲಿ ದಿಟವನರಸುವಡೆ
ಜಂಗಮವ ನೆರೆ ನಂಬುವುದು.
ನಡೆ ಲಿಂಗ, ನುಡಿ ಲಿಂಗ
ಮುಖ ಲಿಂಗವೆಂದೆ ನಂಬೊ.
ಯತ್ರ ಮಾಹೇಶ್ವರಸ್ತತ್ರಾಸನ್ನಹಿತನಾಗಿ,
ಅಧರ ತಾಗಿದ ರುಚಿಯನು
ಉದರ ತಾಗಿದ ಸುಖವ
ಉಂಬ-ಉಡುವ ಕೂಡಲಸಂಗಮದೇವ
ಜಂಗಮಮುಖದಲ್ಲಿ.
-
೨೫೫. ಎಂಬತ್ತುನಾಲ್ಕುಲಕ್ಷ ಮುಖದೊಳಗೊಂದೇ ಮುಖವಾಗಿ
ಕಾಡಿ ನೋಡೆನ್ನನು, ಬೇಡಿ ನೋಡೆನ್ನನು
ಬೇಡದಿದ್ದರೆ, ಅಯ್ಯ, ನಿಮಗೆ ಪ್ರಮಥರಾಣೆ!
ನೀನಾವ ಮುಖದಲ್ಲಿ ಬಂದು ಬೇಡಿದರೀವೆನು
ಕೂಡಲಸಂಗಮದೇವ.
-
೨೫೬. ಕಂದಿದೆನಯ್ಯ ಎನ್ನ ನೋಡುವರಿಲ್ಲದೆ.
ಕುಂದಿದೆನಯ್ಯ ಎನ್ನ ನುಡಿಸುವರಿಲ್ಲದೆ.
ಬಡವಾದೆನಯ್ಯ ಎನ್ನ ತನುಮನಧನವ ಬೇಡುವರಿಲ್ಲದೆ,
ಕಾಡುವ ಬೇಡುವ ಶರಣರ ತಂದು
ಕಾಡಿಸು ಬೇಡಿಸು ಕೂಡಲಸಂಗಮದೇವ.
-
೨೫೭. ನೀನಿಕ್ಕಿದ ಬಿಯ್ಯದಲ್ಲಿ ವಂಚನೆಯುಳ್ಳೊಡೆ
ಸಂಗ, ನಿಮ್ಮ ತೊತ್ತುತನಕ್ಕೆ ದೂರವಯ್ಯ.
ಕದ್ದು ತಿಂದರೆ, ಕೈಯ ಹಿಡಿದೊಮ್ಮೆ ಬಡಿದು,
ತುಡುಗುಣಿತನವ ಬಿಡಿಸಯ್ಯ.
ಜಂಗಮ ಮನೆಗೆ ಬಂದಲ್ಲಿ ಓಸರಿಸಿದರೆ
ಹಿಡಿದು ಮೂಗ ಕೊಯ್ಯಯ್ಯ ಕೂಡಲಸಂಗಮದೇವ.
-
೨೫೮. ಹೊನ್ನಿನೊಳಗೊಂದೊರೆಯ,
ಸೀರೆಯೊಳಗೊಂದೆಳೆಯ,
ಇಂದಿಂಗೆ ನಾಳಿಂಗೆ ಬೇಕೆಂದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ,
ನಿಮ್ಮ ಶರಣರಿಗಲ್ಲದೆ ಮತ್ತೊಂದಕಿಕ್ಕೆನಯ್ಯ
ಕೂಡಲಸಂಗಮದೇವ.
-
೨೫೯. ಕಾಗೆಯಂದಗುಳ ಕಂಡರೆ
ಕರೆಯದೇ ತನ್ನ ಬಳಗವನ್ನು ?
ಕೋಳಿಯೊಂದು ಕುಟುಕ ಕಂಡರೆ
ಕೂಗಿ ಕರೆಯದೇ ತನ್ನ ಕುಲವೆಲ್ಲವನ್ನು ?
ಶಿವಭಕ್ತನಾಗಿ ಭಕ್ತಿ-ಪಕ್ಷವಿಲ್ಲದಿದ್ದರೆ
ಕಾಗೆ ಕೋಳಿಯಿಂದ ಕರಕಷ್ಟ ಕೂಡಲಸಂಗಮದೇವ.
-
೨೬೦. ಆವನಾದರೇನು ಹೇಮವಿಲ್ಲದುಂಗೈಸಬಹುದೆ ?
ಕೊಡಲಿಲ್ಲೆಂಬುದರಿಂದ ಸಾಯಲುಬಹುದು,
ಸೈರಿಸಬಾರದು!
ಬೇಡುವರ ನೋಡಿ ನೋಡಿ
ಈಯಲಿಲ್ಲದ ಜೀವನವದೇಕೆ ಕೂಡಲಸಂಗಮದೇವ.
-
೨೬೧. ಓಡುವಾತ ಲೆಂಕನಲ್ಲ, ಬೇಡುವಾತ ಭಕ್ತನಲ್ಲ!
ಓಡಲಾಗದು ಲೆಂಕನು ಬೇಡಲಾಗದು ಭಕ್ತನು!
ಓಡೆನಯ್ಯ, ಬೇಡೆನಯ್ಯ ಕೂಡಲಸಂಗಮದೇವ.
-
೨೬೨. ಎಲ್ಲಿ ನೋಡಿರಲ್ಲಿ ಮನವೆಳಸಿದರೆ
ಆಣೆ, ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಪರವಧುವನು ಮಾದೇವಿಯೆಂದೇ ಕಾಬೆ ಕೂಡಲಸಂಗಮದೇವ.
-
೨೬೩. ಹರಿವ ಹಾವಿಂಗಂಜೆ, ಉರಿಯ ನಾಲಗೆಗಂಜೆ!
ಸುರಗಿಯ ಮೊನೆಗಂಜೆ!
ಒಂದಕ್ಕಂಜುವೆ, ಒಂದಕ್ಕಳುಕುವೆ;
ಪರಧನ ಪರಸ್ತ್ರೀಯೆಂಬೀ ಜೂಬಿಂಗಂಜುವೆ!
ಮುನ್ನಂಜದ ರಾವಣನೇ ವಿಧಿಯಾದ
ಅಂಜುವೆನಯ್ಯ, ಕೂಡಲಸಂಗಮದೇವ!
-
೨೬೪. ಅಸುರನೈಶ್ವರ್ಯವನೆಣಿಸುವಡೆ-
ಸೀತೆಗೆ ಸರಿ-ಮಿಗಿಲೆನಿಸುವ ಸತಿಯರುಂಟು ಕೋಟಿ!
ಮತಿವಂತ ಶಿರಃಪ್ರಧಾನರೆಂಟು ಕೋಟಿ!
ಲೆಕ್ಕವಿಲ್ಲದ ದಳವು! ಲಕ್ಷ ಕುಮಾರರು!
ದಿಕ್ಪಾಲಕರವನ ಮನೆಯ ಬಂಧನದಲಿಪ್ಪರು
ಸುರಸತಿಯರನೆಲ್ಲರನಾತ ಸೆರೆಮಾಡಿಯಾಳಿದ!
ಶಿವನೇ ನೀ ಕರುಣಿಸಿದಂತಿರದೆ
ಪರವಧುವಿನ ಬೇಟವವನ ಪ್ರಾಣವ ಕೊಂಡಿತ್ತು.
ಇದನರಿತು ಪರವಧುವಿಗೆಳಸುವವರ ಕಂಡು
ಗರುಡ ಕಂಡ ಸರ್ಪ ಧರೆಗಿಳಿವಂತೆ ಅಡಗಿಪ್ಪೆನಯ್ಯ
ಕೂಡಲಸಂಗಮದೇವ.
-
೨೬೫. ಒಂದಕೊಂಬತ್ತ ನುಡಿದು ಕಣ್ಣ ಕೆಚ್ಚನೆ ಮಾಡಿ,
ಗಂಡುಗೆದರಿ ಮುಡುಹಿಕ್ಕಿ
ಕೆಲೆವರ ಕಂಡಂಜುವೆ ಓಸರಿಸುವೆ,
ಓಡಿದೆನೆಂಬ ಭಂಗವಾದರಾಗಲಿ
ನಮ್ಮ ಕೂಡಲಸಂಗನ ಶರಣರನುಭಾವವಿಲ್ಲದವರ
ಹೊಲಮೇರೆಯ ಹೊದ್ದೆ, ಹೊಲನ ಬಿಟ್ಟೋಡುವೆ.
-
೨೬೬. ದೇವಸಹಿತ ಭಕ್ತ ಮನೆಗೆ ಬಂದರೆ
ಕಾಯಕವಾವುದೆಂದು ಬೆಸಗೊಂಡೆನಾದರೆ
ನಿಮ್ಮಾಣೆ, ನಿಮ್ಮ ಪುರಾತರಾಣೆ, ತಲೆದಂಡ, ತಲೆದಂಡ.
ಕೂಡಲಸಂಗಮದೇವಾ, ಭಕ್ತರಲ್ಲಿ ಕುಲವನರಸಿದರೆ
ನಿಮ್ಮ ರಾಣಿವಾಸದಾಣೆ.
-
೨೬೭. ಕೂಪರಿಗೆ ಹೇಳುವೆನು ಕುಳಸ್ಥಳಂಗಳನೆಲ್ಲ,
ಕೂರದವರಿಗೆ ಹೇಳಿ ನಾನೇವೇನು ಶಿವನೆ,
ಕರಲ ಭೂಮಿಯಲ್ಲಿ ಕರೆದ ವೃಷ್ಟಿಯ ತೆರನಂತೆ!
ಅವರೆತ್ತ ಬಲ್ಲರೆನ್ನ ಸುಖದುಃಖವ ?
ಅಂಗವಿಲ್ಲದ ಸಂಗವು
ಅಳಲಿಲ್ಲದ ಹುಯ್ಯಲಂತೆ.
ಇದು ಕಾರಣ ಕೂಡಲಸಂಗಮದೇವಾ
ನಿಮ್ಮ ಶರಣರಿಗಲ್ಲದೆ ಬಾಯ ತೆರೆಯನು.
-
೨೬೮. ಒಡೆದೋಡೂ ಎನ್ನ ಮನೆಯಲಿಲ್ಲದಂತೆ ಮಾಡಯ್ಯ !
ಕೊಡು ದೇವ ಎನ್ನ ಕೈಯಲೊಂದು ಗರಿಕೆಯನು,
ಮೃಡದೇವಾ ಶರಣೆಂದು ಭಿಕ್ಷಕ್ಕೆ ಹೋದರೆ,
ಅಲ್ಲಿ, ನಡೆ ದೇವಾ ಎಂದೆನಿಸು ಕೂಡಲಸಂಗಮದೇವ.
-
೨೬೯. ಅಯ್ಯ, ನಿಮ್ಮ ಶರಣರ ದಾಸೋಹಕ್ಕೆ
ಎನ್ನ ತನು-ಮನ-ಧನವಲಸದಂತೆ ಮಾಡಯ್ಯ.
ತನು ದಾಸೋಹಕ್ಕೆ ಉಬ್ಬುವಂತೆ ಮಾಡು;
ಮನ ದಾಸೋಹಕ್ಕೆ ಲೀಯವಹಂತೆ ಮಾಡು;
ಧನ ದಾಸೋಹಕ್ಕೆ ಸವೆದು
ನಿಮ್ಮ ಶರಣರ ಪ್ರಸಾದದಲ್ಲಿ ನಿರಂತರ
ಆಡಿ, ಪಾಡಿ; ನೋಡಿ, ಕೂಡಿ;
ಭಾವಿಸಿ, ಸುಖಿಸಿ; ಪರಿಣಾಮಿಸುವಂತೆ ಮಾಡು
ಕೂಡಲಸಂಗಮದೇವ.
-
೨೭೦. ಹಾರುವ ಹಾರುವನಪ್ಪೆ ನಾನು,
ಸದ್ಭಕ್ತರೆನ್ನವರೆನ್ನವರೆಂದು!
ಹಾರುವ ಹಾರುವನಪ್ಪೆ ನಾನು, ಶರಣರು ಎನ್ನವರೆನ್ನವರೆಂದು!
ಕೂಡಲಸಂಗನ ಶರಣರು ಒಕ್ಕುದನಿಕ್ಕಿ ಸಲಹುವರೆಂದು!
-
೨೭೧. ಆವನಾದರೇನು ?
ಶ್ರೀಮಹಾದೇವನ ನೆನೆವನ ಬಾಯ ತಂಬುಲವ ಮೆಲುವೆ,
ಬೀಳುಡಿಗೆಯ ಕಾಯ್ದು ಬದುಕುವೆ
ಕೂಡಲಸಂಗಮದೇವ.
-
೨೭೨. ನಾನು ಹೊತ್ತ ಹುಳ್ಳಿಯನಂಬಲಿಗೆ
ಕೊಂಬವರಿಲ್ಲ ನೋಡಯ್ಯ.
ಆನು ನಿಮ್ಮ ಶರಣರ ಒಕ್ಕುದನುಂಡು
ಬದುಕುವೆನಯ್ಯ.
ಮೇರುವ ಸಾರಿದ ಕಾಗೆ
ಹೊಂಬಣ್ಣವಪ್ಪುದು ತಪ್ಪದು ಕೂಡಲಸಂಗಮದೇವ.
-
೨೭೩. ದಾಸಿಯ ವರ್ಗದಲ್ಲಿಪ್ಪೆನು ಶಿವಶರಣರ ಮನೆಯಲ್ಲಿ.
ಅವರೊಕ್ಕುದನುಂಡು, ಮಿಕ್ಕುದನಾಯ್ದುಕೊಂಡಿಪ್ಪ ಕಾರಣ-
ಕಾಲ ಮುಟ್ಟಲಮ್ಮದು, ಕಲ್ಪಿತ ತೊಡೆಯಿತ್ತು;
ಭವಬಂಧನ ಹಿಂಗಿತ್ತು, ಕರ್ಮನಿರ್ಮಳವಾಯಿತ್ತು.
ಅವರ ತೊತ್ತಿನ ತೊತ್ತಿನ ಪಡಿದೊತ್ತಿನ ಮಗನೆಂದು
ಕೂಡಲಸಂಗಮದೇವನು ಇತ್ತ ಬಾ ಎಂದೆತ್ತಿಕೊಂಡನು.
-
೨೭೪ ಜನ್ಮ ಜನ್ಮಕ್ಕೆ ಹೋಗಲೀಯದೆ,
"ಸೋಹಂ" ಎಂದೆನಿಸದೆ, 'ದಾಸೋಹಂ' ಎಂದೆನಿಸಯ್ಯ.
ಲಿಂಗಜಂಗಮದ ಪ್ರಸಾದವ ತೋರಿ
ಬದುಕಿಸಯ್ಯ ಕೂಡಲಸಂಗಮದೇವ.
-
೨೭೫. ಕರ್ತರು ನಿಮ್ಮ ಗಣಂಗಳು,
ಎನ್ನ ತೊತ್ತ ಮಾಡಿ ಸಲಹಿದ ಸುಖವು
ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ, ಸಾಯುಜ್ಯದುಂತುಟಲ್ಲ
ಕೇಳಿರಯ್ಯ, ಕೂಡಲಸಂಗನ ಶರಣರು
ತಮ್ಮ ಒಕ್ಕುದನಿಕ್ಕಿ ಸಲಹಿದ ಸುಖವು.
-
೨೭೬. ತೊತ್ತಿಂಗೆ ಬಲ್ಲಹನೊಲಿದರೆ
ಪದವಿಯನೀಯದೆ ಮಾಬನೆ ?
ಅಯ್ಯ, ಜೇಡರ ದಾಸಯ್ಯಂಗೊಲಿದಾತ
ಮತ್ತೊಬ್ಬ ದೇವನೆ ?
ಅಯ್ಯ, ಮಾದರ ಚೆನ್ನಯ್ಯಂಗೆ
ಡೋಹರಕಕ್ಕಯ್ಯಂಗೆ, ತೆಲುಗ ಜೊಮ್ಮಯ್ಯಂಗೆ
ಒಲಿದಾತ ಮತ್ತೊಬ್ಬ ದೇವನೆ ?
ಅಯ್ಯ, ಎನ್ನ ಮನದ ಪಂಚೇಂದ್ರಿಯ
ನಿಮ್ಮತ್ತಲಾದರೆ ತನ್ನತ್ತ ಮಾಡುವ ಕೂಡಲಸಂಗಮದೇವ.
-
೨೭೭. ಹೊರಗೆ ಪೂಸಿ ಏವೆನಯ್ಯಾ
ಒಳಗೆ ಶುದ್ಧವಿಲ್ಲದನ್ನಕ ?
ಮಣಿಯ ಕಟ್ಟಿ ಏವೆನಯ್ಯ ?
ಮನ ಮುಟ್ಟದನ್ನಕ ?
ನೂರನೋದಿ ಏವೆನಯ್ಯ
ನಮ್ಮ ಕೂಡಲಸಂಗಮದೇವನ
ಮನ ಮುಟ್ಟದನ್ನಕ ?
-
೨೭೮. ಸುಚಿತ್ತದಿಂದ ನಿಮ್ಮ ನೆನೆಯಲೊಲ್ಲದೆನ್ನ ಮನವು,
ಎಂತಯ್ಯ ?
ಎನಗಿನ್ನಾವುದು ಗತಿ ಎಂತಯ್ಯ ?
ಎನಗಿನ್ನಾವುದು ಮತಿ ಎಂತಯ್ಯ ?
ಹರಹರ ಕೂಡಲಸಂಗಮದೇವ.
ಮನವ ಸಂತೈಸೆನ್ನ.
-
೨೭೯. ನಾ ನಿಮ್ಮ ನೆನೆವೆನು
ನೀವೆನ್ನನರಿಯಿರಿ!
ನಾ ನಿಮ್ಮನೋಲೈಸುವೆನು
ನೀವೆನ್ನ ಕಾಣಿರಿ!
ನಾನೆಂತು ಬದುಕುವೆನೆಂತು ಜೀವಿಸುವೆನಯ್ಯ ?
ಕೂಡಲಸಂಗಮದೇವ,
ಎನಗೇ ನೀವೇ ಪ್ರಾಣ, ಗತಿ, ಮತಿ ನೋಡಯ್ಯ!
-
೨೮೦. ತಂದೆ ನೀನು, ತಾಯಿ ನೀನು;
ಬಂಧು ನೀನು ಬಳಗ ನೀನು;
ನೀನಲ್ಲದೆ ಮತ್ತಾರು ಇಲ್ಲವಯ್ಯ!
ಕೂಡಲಸಂಗಮದೇವ,
ಹಾಲಲದ್ದು ನೀರಲದ್ದು.
-
೨೮೧. ಎನ್ನ ಜನ್ಮವ ತೊಡೆದ ನೀ ಧರ್ಮಿ!
ಎನ್ನ ಜನ್ಮವನತಿಗಳೆದ ನೀ ಧರ್ಮಿ!
ಎನ್ನ ಭವಬಂಧನವ ನೀಕರಿಸಿದೆಯಾಗಿ
ಶಿವನೇ ಗತಿಯೆಂದು ನಂಬಿದೆನಯ್ಯ.
ಎನ್ನಷ್ಟಮದಂಗಳ ಸುಟ್ಟುರುಹಿದೆಯಾಗಿ
ಕಟ್ಟುಗ್ರದಿಂದ ನಿಮ್ಮ ಶ್ರೀಚರಣವ ಕಂಡೆ.
ಸೃಷ್ಟಿಪ್ರತಿಪಾಲಕ ನಿಮ್ಮ ನಾ ನಂಬಿದೆ
ಕರುಣಿಸು ಕೂಡಲಸಂಗಮದೇವ.
-
೨೮೨. ಭವರೋಗವೈದ್ಯನೆಂದು ನಾ ನಿಮ್ಮ ಮರೆವೊಕ್ಕೆ,
ಭಕ್ತಿದಾಯಕ ನೀನು, ಕರುಣಿಸು ಲಿಂಗತಂದೆ.
ಜಯ ಜಯ ಶ್ರೀ ಮಹಾದೇವ,
ಜಯ ಜಯ ಶ್ರೀ ಮಹಾದೇವ,
ಎನುತಿದ್ದಿತೆನ್ನ ಮನವು;
ಕೂಡಲಸಂಗಮದೇವಂಗೆ
ಶರಣೆನುತಿದ್ದಿತೆನ್ನ ಮನವು.
-
೨೮೩. ಅಂಗೈಯೊಳಗಣ ಲಿಂಗವ ನೋಡುತ್ತ
ಕಂಗಳು ಕಡೆಗೋಡಿವರಿವುತ್ತ ಸುರಿವುತ್ತ ಎಂದಿಪ್ಪೆನೋ ?!
v ನೋಟವೇ ಪ್ರಾಣವಾಗಿ ಎಂದಿಪ್ಪೆನೋ!
ಕೂಟವೇ ಪ್ರಾಣವಾಗಿ ಎಂದಿಪ್ಪೆನೋ!
ಎನ್ನಂಗ ವಿಕಾರದ ಸಂಗವಳಿದು
ಕೂಡಲಸಂಗಯ್ಯ ಲಿಂಗಯ್ಯ ಲಿಂಗವೆನುತ್ತ ಎಂದಿಪ್ಪೆನೋ !?
-
೨೮೪. ಎದೆ ಬಿರಿವನ್ನಕ, ಮನ ದಣಿವನ್ನಕ
ನಾಲಗೆ ನಲಿನಲಿದೋಲಾಡುವನ್ನಕ
ನಿಮ್ಮ ನಾಮಾಮೃತವ ತಂದಿರಿಸು ಕಂಡ
ಎಲೆ ಹರನೆ
ಎಲೆ ಶಿವನೆ!
ನಿಮ್ಮ ನಾಮಾಮೃತವ ತಂದಿರಿಸು ಕಂಡಾ
ಬಿರಿಮುಗುಳಂತೆ ಎನ್ನ ಹೃದಯ
ನಿಮ್ಮ ಶ್ರೀಚರಣದ ಮೇಲೆ ಬಿದ್ದರಳುಗೆ
ಕೂಡಲಸಂಗಮದೇವ.
-
೨೮೫. ಆಡಿ ಕಾಲು ದಣಿಯದು
ನೋಡಿ ಕಣ್ಣು ದಣಿಯದು,
ಹಾಡಿ ನಾಲಗೆ ದಣಿಯದು,
ಇನ್ನೇವೆನಿನ್ನೇವೆ!
ನಾ ನಿಮ್ಮ ಕಯ್ಯಾರೆ ಪೂಜಿಸಿ
ಮನ ದಣಿಯಲೊಲ್ಲದು
ಇನ್ನೇವೆನಿನ್ನೇವೆ!
ಕೂಡಲಸಂಗಮದೇವಯ್ಯ,
ನಿಮ್ಮ ಉದರವ ಬಗಿದಾನು ಹೊಗುವ ಭರವೆನಗೆ!
-
೨೮೬. ಕಾಮಸಂಗ ನಿಸ್ಸಂಗವಾಗಿ
ಇನ್ನಾವ ಸಂಗವನರಿಯೆನಯ್ಯ.
ಮಿಗೆ ಒಲಿದೆನಾಗಿ ಅಗಲಲಾರೆ:
ನಗೆಮೊಗದರಸ ಅವಧಾರು! ಕೂಡಲಸಂಗಮದೇವ,
ಬಗಿದು ಹೊಗುವೆ ನಾ ನಿಮ್ಮ ಮನವನು.
-
೨೮೭. ವಾರವೆಂದರಿಯೆ, ದಿನವೆಂದರಿಯೆ!
ಏನೆಂದರಿಯೆನಯ್ಯ.
ನಾನು ಇರುಳೆಂದರಿಯೆ, ಹಗಲೆಂದರಿಯೆ!
ಏನೆಂದರಿಯೆನಯ್ಯ.
ನಾನು ನಿಮ್ಮುವ ಪೂಜಿಸಿ, ಎನ್ನುವ ಮರೆದೆನು
ಕೂಡಲಸಂಗಮದೇವ.
-
೨೮೮. ನಿಮ್ಮ ನೋಟವನಂತಸುಖ.
ನಿಮ್ಮ ಕೂಟ ಪರಮಸುಖ.
ಅಷ್ಟಕೋಟಿರೋಮಂಗಳೆಲ್ಲ
ಕಂಗಳಾಗಿ ನೋಡುತ್ತಿದ್ದೆನು.
ಕೂಡಲಸಂಗಮದೇವಯ್ಯ,
ನಿಮ್ಮ ನೋಡಿ ನೋಡಿ
ಎನ್ನ ಮನದಲ್ಲಿ ರತಿ ಹುಟ್ಟಿ,
ನಿಮಿರ್ದವೆನ್ನ ಕಳೆಗಳು.
-
೨೮೯. ವಚನದಲ್ಲಿ ನಾಮಾಮೃತ ತುಂಬಿ.
ನಯನದಲ್ಲಿ ನಿಮ್ಮ ಮೂರುತಿ ತುಂಬಿ,
ಮನದಲ್ಲಿ ನಿಮ್ಮ ನೆನಹು ತುಂಬಿ;
ಕಿವಿಯಲ್ಲಿ ನಿಮ್ಮ ಕೀರುತಿ ತುಂಬಿ;
ಕೂಡಲಸಂಗಮದೇವ,
ನಿಮ್ಮ ಚರಣಕಮಲದೊಳಗಾನು ತುಂಬಿ!
-
೨೯೦. ಉರಿಯೊಳಗಣ ಕರ್ಪೂರಕ್ಕೆ ಕರೆಯುಂಟೇ ಅಯ್ಯ ?
ಬಯಲು ಮರೀಚಿಕೆಯ ಜಲಕ್ಕೆ ಕೆಸರುಂಟೇ ಅಯ್ಯ ?
ವಾಯುವನಪ್ಪಿದ ಪರಿಮಳಕ್ಕೆ ನಿರ್ಮಾಲ್ಯವುಂಟೇ ಅಯ್ಯ ?
ನೀವು ನೆರೆಯೊಲಿದ ಬಳಿಕೆನಗೆ ಭವವುಂಟೇ ?
ಕೂಡಲಸಂಗಮದೇವ.
ಚರಣಕಮಲದೊಳಗೆನ್ನನಿಂಬಿಟ್ಟುಕೊಳ್ಳಯ್ಯ!
-
೨೯೧. ಮಂಡೆಯ ಬೋಳಿಸಿಕೊಂಡು
ಗಂಡುದೊತ್ತುವೊಕ್ಕೆನಯ್ಯ.
ಲಜ್ಜೆಗೆಟ್ಟಾದರೂ ಲಿಂಗವನೊಲಿಸುವೆ.
ನಾಣುಗೆಟ್ಟಾದರೂ ಲಿಂಗವನೊಲಿಸುವೆ.
ಕೆಲದ ಸಂಸಾರಿಗಳು ನಗುತಿದ್ದರಿರಲಿ.
ಕೂಡಲಸಂಗಮದೇವ ಶರಣಾಗತಿವೊಕ್ಕೆನಯ್ಯ.
-
೨೯೨. ಎನಗೆ ನಿಮ್ಮ ನೆನಹಾದಾಗವೇ ಉದಯ!
ಎನಗೆ ನಿಮ್ಮ ಮರಹಾದಾಗವೇ ಅಸ್ತಮಾನ!
ಎನಗೆ ನಿಮ್ಮ ನೆನಹವೇ ಜೀವ!
ಎನಗೆ ನಿಮ್ಮ ನೆನಹವೇ ಪ್ರಾಣ ಕಾಣ ತಂದೆ!
ಸ್ವಾಮಿ, ಎನ್ನ ಹೃದಯದಲ್ಲಿ
ನಿಮ್ಮ ಚರಣದುಂಡಿಗೆಯನೊತ್ತಯ್ಯ!
ವದನದಲ್ಲಿ ಪಂಚಾಕ್ಷರಿಯ ಬರೆಯಯ್ಯ
ಕೂಡಲಸಂಗಮದೇವ.
-
೨೯೩. ಎನ್ನ ಕಾಯವ ದಂಡಿಗೆಯ ಮಾಡಯ್ಯ,
ಎನ್ನ ಶಿರವ ಸೋರೆಯ ಮಾಡಯ್ಯ,
ಎನ್ನ ನರವ ತಂತಿಯ ಮಾಡಯ್ಯ,
ಎನ್ನ ಬೆರಲ ಕಡ್ಡಿಯ ಮಾಡಯ್ಯ,
ಬತ್ತೀಸ ರಾಗವ ಹಾಡಯ್ಯ,
ಉರದಲೊತ್ತಿ ಬಾಜಿಸು ಕೂಡಲಸಂಗಮದೇವ.
-
೨೯೪. ಮನಕ್ಕೆ ಮನೋಹರವಲ್ಲದ ಗಂಡರು
ಮನಕ್ಕೆ ಬಾರರು ಕೇಳವ್ವ ಕೆಳದಿ.
ಪನ್ನಗಭೂಷಣನಲ್ಲದ ಗಂಡರು
ಇನ್ನೆನಗಾಗದ ಮೋರೆ ನೋಡವ್ವ!
ಕನ್ನೆಯಂದಿನ ಕೂಟ:
ಚಿಕ್ಕಂದಿನ ಬಾಳುವೆ,
ನಿಮ್ಮಾಣೆಯಯ್ಯ ಕೂಡಲಸಂಗಮದೇವ.
-
೨೯೫. ಜಗವೆಲ್ಲಾ ಅರಿಯಲು
ಎನಗೊಬ್ಬ ಗಂಡನುಂಟು!
ಆನು ಮುತ್ತೈದೆ;
ಆನು ನಿಟ್ಟೈದೆ.
ಕೂಡಲಸಂಗಮದೇವನಂತಪ್ಪ
ಎನಗೊಬ್ಬ ಗಂಡನುಂಟು.
-
೨೯೬. ಸಂಸಾರವೆಂಬ ಶ್ವಾನನಟ್ಟಿ
ಮೀಸಲ ಬೀಸರ ಮಾಡದಿರಯ್ಯ!
ಎನ್ನ ಚಿತ್ತವು ನಿನ್ನ ಧ್ಯಾನವಯ್ಯ!
ನೀನಲ್ಲದೆ ಮತ್ತೇನನೂ ಅರಿಯೆನು
ಕನ್ನೆಯಲ್ಲಿ ಕೈವಿಡಿದೆನು.
ನಿನ್ನಲ್ಲಿ ನೆರೆದೆನು.
ಮನ್ನಿಸು ಕಂಡಾ ಮಹಾಲಿಂಗವೆ!
ಸತಿಯಾನು ಪತಿ ನೀನು
ಮನೆಯೊಡೆಯ ಮನೆಯ ಕಾಯ್ದಿಪ್ಪಂತೆ
ನೀನೆನ್ನ ಮನವ ಕಾಯ್ದಿಪ್ಪ ಗಂಡನು.
ನಿನಗೋತ ಮನವನನ್ಯಕ್ಕೆ ಹರಿಸಿದರೆ
ನಿನ್ನಭಿಮಾನ ಹಾನಿ ಕೂಡಲಸಂಗಮದೇವ.
-
೨೯೭. ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ತನು ಹಾಳಾಯಿತ್ತು.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ಮನ ಹಾಳಾಯಿತ್ತು.
ಅಯ್ಯ, ನಿಮ್ಮ ಅನುಭಾವದಿಂದ
ಎನ್ನ ಕರ್ಮಚ್ಛೇದನವಾಯಿತ್ತು.
ಅಯ್ಯ, ನಿಮ್ಮವರು ಅಡಿಗಡಿಗೆ ಹೇಳಿ
ಭಕ್ತಿ ಎಂಬೀ ಒಡವೆಯನು
ದಿಟಮಾಡಿ ತೋರಿದರು ಕೂಡಲಸಂಗಮದೇವ.
-
೨೯೮. ಭಕ್ತನೆಂತೆಂಬೆನಯ್ಯ, ಭವಿಸಂಗ ಬಿಡದನ್ನಕ ?
ಮಾಹೇಶ್ವರನೆಂತೆಂಬೆನಯ್ಯ,
ಪರಸ್ತ್ರೀ ಪರರರ್ಥದಾಸೆ ಬಿಡದನ್ನಕ ?
ಪ್ರಸಾದಿಯೆಂತೆಂಬೆನಯ್ಯ,
ಆಧಿವ್ಯಾಧಿ ನಷ್ಟವಾಗದನ್ನಕ ?
ಪ್ರಾಣಲಿಂಗಿಯೆಂತೆಂಬೆನಯ್ಯ,
ಪ್ರಾಣ ಸ್ವಸ್ಥಿರವಾಗದನ್ನಕ ?
ಶರಣನೆಂತೆಂಬೆನಯ್ಯ,
ಪಂಚೇಂದ್ರಿಯ ನಾಸ್ತಿಯಾಗದನ್ನಕ ?
ಐಕ್ಯನೆಂತೆಂಬೆನಯ್ಯ,
ಜನನ ಮರಣ ವಿರಹಿತವಾಗದನ್ನಕ ?
ಇಂತಪ್ಪ ಭಾಷೆ-ವ್ರತ-ವೇಷಂಗಳ
ನಾನರಿಯೆನಯ್ಯ!
ಅಘಟಿತ-ಘಟಿತ-ವರ್ತಮಾನವ
ನಾನರಿಯೆನಯ್ಯ!
ನಿಮ್ಮ ಶರಣರ ತೊತ್ತು,
ಭೃತ್ಯಾಚಾರವ ಮಾಡುವೆ ಕೂಡಲಸಂಗಮದೇವ.
-
೨೯೯. ಅಭ್ಯಾಸವೆನ್ನ ವರ್ತಿಸಿತ್ತಯ್ಯ!
ಭಕ್ತಿ ಸಾಧ್ಯವಾಗದು, ನಾನೇವೆನಯ್ಯ ?
ಆನು ನಿಮ್ಮ ಮನಂಬೊಗುವನ್ನಕ,
ನೀವೆನ್ನ ಮನಂಬೊಗುವನ್ನಕ.
ಕಾಯಗುಣಂಗಳ ಕಳೆದವರಿಗೆ ಶರಣೆಂಬೆ
ಕೂಡಲಸಂಗಮದೇವ.
-
೩೦೦. ತನುಸಾರಾಯರ, ಮನಸಾರಾಯರ,
ಜ್ಞಾನಸಾರಾಯರ ತೋರಯ್ಯ ನಿಮ್ಮ ಧರ್ಮ!
ಭಾವಸಾರಾಯರ, ಭಕ್ತಿಸಾರಾಯರ,
ತೋರಯ್ಯ ನಿಮ್ಮ ಧರ್ಮ !
ಕೂಡಲಸಂಗಮದೇವಯ್ಯ, ನಿಮ್ಮನರಿಯದ
ಅವಗುಣಿಗಳ ತೋರದಿರಯ್ಯ ನಿಮ್ಮ ಧರ್ಮ.
-
೩೦೧. ಕಾಮ ಸಂಗವಳಿದು,
ಅನುಭಾವ ಸಂಗದಲುಳಿದವರನಗಲಲಾರೆ,
ಶಿವಂಗೆ ಮಿಗೆ ಒಲಿದವರನು
ನಾನು ಅಗಲಲಾರೆ ಕಾಣಾ ಕೂಡಲಸಂಗಮದೇವ.
-
೩೦೨. ಭಕ್ತಿರತಿಯ ವಿಕಲತೆಯ
ಯುಕುತಿಯನೇನ ಬೆಸಗೊಂಬಿರಯ್ಯ ?
ಕಾಮಿಗುಂಟೇ ಲಜ್ಜೆ ನಾಚಿಕೆ ?
ಕಾಮಿಗುಂಟೇ ಮಾನಾಪಮಾನವು ?
ಕೂಡಲಸಂಗನ ಶರಣರಿಗೊಲಿದ
ಮರುಳನನೇನ ಬೆಸಗೊಂಬಿರಯ್ಯ ?
-
೩೦೩. ಸಕ್ಕರೆಯ ಕೊಡನ ತುಂಬಿ
ಹೊರಗ ಸವಿದರೆ ರುಚಿಯುಂಟೆ ?
ತಕ್ಕೈಸಿ ಭುಜತುಂಬಿ,
ಲಿಂಗಸ್ಪರ್ಶನವ ಮಾಡದೆ,
ಅಕ್ಕಟಾ, ಸಂಸಾರ ವೃಥಾ ಹೋಯಿತ್ತಲ್ಲ!
ಅದೇತರ ಭಕ್ತಿ ? ಅದೇತರ ಯುಕ್ತಿ ? ಕೂಡಿಕೊ!
ಕೂಡಲಸಂಗಮದೇವ.
-
೩೦೪. ಪರಚಿಂತೆ ಎಮಗೇಕಯ್ಯ ?
ನಮ್ಮ ಚಿಂತೆ ಎಮಗೆ ಸಾಲದೆ ?
ಕೂಡಲಸಂಗಯ್ಯ ಒಲಿದಾನೋ ಒಲಿಯನೋ
ಎಂಬ ಚಿಂತೆ
ಹಾಸಲುಂಟು ಹೊದಿಯಲುಂಟು!
-
೩೦೫. ಲಜ್ಜೆಗೆಟ್ಟೆನು, ನಾಣುಗೆಟ್ಟೆನು,
ಕುಲಗೆಟ್ಟೆನು, ಛಲಗೆಟ್ಟೆನು,
ಸಂಗಾ, ನಿಮ್ಮ ಪೂಜಿಸಿ ಭವಗೆಟ್ಟೆನು ನಾನಯ್ಯ!
ಕೂಡಲಸಂಗಮದೇವಯ್ಯ,
ನಿಮ್ಮ ಮುಟ್ಟಿ ಹುಟ್ಟುಗೆಟ್ಟೆನು ನಾನಯ್ಯ!
-
೩೦೬. ಮಾಡುವ ಭಕ್ತನ ಕಾಯ
ಬಾಳೆಯ ಕಂಬದಂತಿರಬೇಕು!
ಮೆಲ್ಲಮೆಲ್ಲನೆ ಹೊರೆಯೆತ್ತಿ ನೋಡಿದರೆ
ಒಳಗೆ ಕೆಚ್ಚಿಲ್ಲದಿರಬೇಕು!
ಮೇಲಾದ ಫಲವ ನಮ್ಮವರು
ಬೀಜ ಸಹಿತ ನುಂಗಿದರು.
ಎನಗಿನ್ನಾವ ಭವವಿಲ್ಲ ಕಾಣಾ
ಕೂಡಲಸಂಗಮದೇವ.
-
೩೦೭. ಏನು ಮಾಡುವೆನೆನ್ನ ಪುಣ್ಯದ ಫಲವು!
ಶಾಂತಿಯ ಮಾಡಹೋದರೆ ಬೇತಾಳ ಮೂಡಿತ್ತು!
ಕೂಡಲಸಂಗಮದೇವನ ಪೂಜಿಸಿಹೆನೆಂದರೆ
ಭಕ್ತಿ ಎಂಬ ಮೃಗವೆನ್ನನಟ್ಟಿ ಬಂದು
ನುಂಗಿತಯ್ಯ!
-
೩೦೮. ಭಕ್ತಿಯೆಂಬ ಫೃಥ್ವಿಯ ಮೇಲೆ
ಗುರುವೆಂಬ ಬೀಜವಂಕುರಿಸಿ,
ಲಿಂಗವೆಂಬ ಎಲೆಯಾಯಿತ್ತು!
ಲಿಂಗವೆಂಬ ಎಲೆಯ ಮೇಲೆ
ವಿಚಾರವೆಂಬ ಹೂವಾಯಿತ್ತು!
ಆಚಾರವೆಂಬ ಕಾಯಾಯಿತ್ತು!!
ನಿಷ್ಪತ್ತಿಯೆಂಬ ಹಣ್ಣಾಯಿತ್ತು!!!
ನಿಷ್ಪತ್ತಿಯೆಂಬ ಹಣ್ಣು
ತೊಟ್ಟುಬಿಟ್ಟು ಕಳಚಿಬೀಳುವಲ್ಲಿ
ಕೂಡಲಸಂಗಮದೇವನು
ತನಗೆ ಬೇಕೆಂದೆತ್ತಿಕೊಂಡನು.
-
೩೦೯. ಸ್ವಾಮಿ ನೀನು, ಶಾಶ್ವತ ನೀನು.
ಎತ್ತಿದೆ ಬಿರುದ ಜಗವೆಲ್ಲರಿಯಲು.
ಮಹಾದೇವ, ಮಹಾದೇವ!
ಇಲ್ಲಿಂದ ಮೇಲೆ ಶಬ್ದವಿಲ್ಲ!
ಪಶುಪತಿ ಜಗಕ್ಕೆ ಏಕೋದೇವ;
ಸ್ವರ್ಗಮರ್ತ್ಯ ಪಾತಾಳದೊಳಗೊಬ್ಬನೇ ದೇವ;
ಕೂಡಲಸಂಗಮದೇವ.
-
೩೧೦. ಶ್ರುತಿತತಿಶಿರದ ಮೇಲೆ
ಅತ್ಯತಿಷ್ಠದ್ದಶಾಂಗುಲನ ನಾನೇನೆಂಬೆನಯ್ಯ
ಘನಕ್ಕೆ ಘನಮಹಿಮನ
ಮನಕ್ಕಗೋಚರನ !?
ಅಣೋರಣೀಯಾನ್
ಮಹತೋ ಮಹೀಯಾನ್
ಮಹಾದಾನಿ ಕೂಡಲಸಂಗಮದೇವ.
-
೩೧೧. ಸಕಲ-ನಿಷ್ಕಲವ ಕೂಡಿಕೊಂಡಿಪ್ಪೆಯಾಗಿ
ಸಕಲ ನೀನೆ, ನಿಷ್ಕಲ ನೀನೇ ಕಂಡಯ್ಯ!
ವಿಶ್ವತಶ್ಚಕ್ಷು ನೀನೇ ದೇವ!
ವಿಶ್ವತೋಬಾಹು ನೀನೇ ದೇವ
ವಿಶ್ವತೋಮುಖ ನೀನೇ ದೇವ!
ಕೂಡಲಸಂಗಮದೇವ.
-
೩೧೨. ಎತ್ತೆತ್ತ ನೋಡಿದಡತ್ತತ್ತ ನೀನೇ ದೇವ!
ಸಕಲ ವಿಸ್ತಾರದ ರೂಹು ನೀನೇ ದೇವ.
ವಿಶ್ವತಶ್ಚಕ್ಷು ನೀನೇ ದೇವ,
ವಿಶ್ವತೋಮುಖ ನೀನೇ ದೇವ.
ವಿಶ್ವತೋಬಾಹು ನೀನೇ ದೇವ.
ವಿಶ್ವತೋಪಾದ ನೀನೇ ದೇವ.
ಕೂಡಲಸಂಗಮದೇವ.
-
೩೧೩. ಹರನ ಕೊರಳಲ್ಲಿಪ್ಪ ಕರೋಟಿಮಾಲೆಯ
ಶಿರದ ಲಿಖಿತವ ಕಂಡು, ಮರುಳುತಂಡಗಳು
ಓದಿನೋಡಿ
"ಇವನಜ, ಇವ ಹರಿ, ಇವ ಸುರಪತಿ
ಇವ ಧರಣೀಂದ್ರ, ಇವನಂತಕ"ನೆಂದು
ಹರುಷದಿಂದ ಸರಸವಾಡುವುದ ಹರ ನೋಡಿ
ಮುಗುಳುನಗೆಯ ನಗುತ್ತಿದ್ದನು!
ಕೂಡಲಸಂಗಮದೇವ.
-
೩೧೪. ಅದುರಿತು ಪಾದಘಾತದಿಂದ ಧರೆ!
ಬಿದಿರಿದವು ಮಕುಟ ತಾಗಿ ತಾರಕಿಗಳು
ಉದುರಿದವು ಕೈತಾಗಿ ಲೋಕಂಗಳೆಲ್ಲ!
"ಮಹೀ ಪಾದಾಘಾತಾದ್ವ್ರಜತಿ ಸಹಸಾ ಸಂಶಯಪದಂ
ಪದಂ ವಿಷ್ಣೋರ್ಭ್ರಾಮ್ಯದ್ಭುಜಪರಿಘರುಗ್ಣಗ್ರಹಗಣಂ!
ಮುಹರ್ದ್ಯೌರ್ಧ್ವಸ್ತಾತ್ಯಂತ್ಯನಿಭೃತಜಟಾತಾಟಿತತಟಾ
ಜಗದ್ರಕ್ಷಾಯೈ ತ್ವಂ ನನು ವಹಸಿ ಭೌಮಾಂ ಚ ವಿಭುತಾಂ"
ನಮ್ಮ ಕೂಡಲಸಂಗಮದೇವ
ನಿಂದು ನಾಂಟ್ಯವನಾಡೆ!
-
೩೧೫. ಇಬ್ಬರು ಮೂವರು ದೇವರೆಂದು
ಉಬ್ಬಿ ಮಾತನಾಡಬೇಡ.
ದೇವನೊಬ್ಬನೇ ಕಾಣಿರೋ.
ಇಬ್ಬರೆಂಬುದು ಹುಸಿ ನೋಡಾ.
ಕೂಡಲಸಂಗಮನಲ್ಲದಿಲ್ಲೆಂದಿತ್ತು ವೇದ.
-
೩೧೬. ಬಿದಿರೆಲೆಯ ಮೆಲಿದಂತಲ್ಲದೆ,
ರಸ ಪಡೆಯಲು ಬಾರದು.
ನೀರ ಕಡೆದರೆ, ಕಡೆದಂತಲ್ಲದೆ,
ಬೆಣ್ಣೆಯ ಪಡೆಯಲು ಬಾರದು.
ಮಳಲ ಹೊಸೆದರೆ, ಹೊಸೆದಂತಲ್ಲದೆ,
ಸರವಿಯ ಪಡೆಯಲು ಬಾರದು.
ನಮ್ಮ ಕೂಡಲಸಂಗಮದೇವನಲ್ಲದೆ
ಅನ್ಯ ದೈವಕ್ಕೆರಗಿದರೆ,
ಪೊಳ್ಳ ಕುಟ್ಟಿ ಕೈ ಪೋಟು ಹೋದಂತಾಯಿತ್ತಯ್ಯ!
-
೩೧೭. ಆಗಳೂ ಲೋಗರ ಮನೆಯ ಬಾಗಿಲ
ಕಾಯ್ದುಕೊಂಡಿಪ್ಪವು ಕೆಲವು ದೈವಂಗಳು,
ಹೋಗೆಂದರೆ ಹೋಗವು,
ನಾಯಿಂದ ಕರಕಷ್ಟ ಕೆಲವು ದೈವಂಗಳು!
ಲೋಗರ ಬೇಡಿಕೊಂಡುಂಬ ದೈವಂಗಳು
ತಾವೇನ ಕೊಡುವವು ಕೂಡಲಸಂಗಮದೇವ.
-
೩೧೮. ಹಾಳುಮೊರಡಿಗಳಲ್ಲಿ, ಊರ ದಾರಿಗಳಲ್ಲಿ;
ಕೆರೆ-ಭಾವಿ-ಹೂಗಿಡಂ-ಮರಂಗಳಲ್ಲಿ,
ಗ್ರಾಮಮಧ್ಯಂಗಳಲ್ಲಿ,
ಚೌಪಥ-ಪಟ್ಟಣ ಪ್ರವೇಶದಲ್ಲಿ, ಹಿರಿಯಾಲದ ಮರದಲ್ಲಿ
ಮನೆಯ ಮಾಡಿ,
ಕರೆವೆಮ್ಮೆ, ಹಸುಗೂಸು, ಬಸುರಿ, ಬಾಣತಿ, ಕುಮಾರಿ
ಕೊಡುಗೂಸೆಂಬರ ಹಿಡಿದುಂಬ, ತಿರಿದುಂಬ
ಮಾರಯ್ಯ, ಬೀರಯ್ಯ,
ಖೇಚರ ಗಾವಿಲ, ಅಂತರಬೆಂತರ,
ಕಾಳಯ್ಯ, ಮಾರಯ್ಯ, ಮಾಳಯ್ಯ, ಕೇತಯ್ಯಗಳೆಂಬ
ನೂರು ಮಡಕೆಗೆ ನಮ್ಮ ಕೂಡಲಸಂಗಮದೇವ
ಶರಣೆಂಬುದೊಂದು ದಡಿ ಸಾಲದೆ ?
-
೩೧೯. ಅರಗು ತಿಂದರೆ ಕರಗುವ ದೈವವ,
ಉರಿಯ ಕಂಡರೆ ಮುರುಟುವ ದೈವವ,
ಎಂತು ಸರಿಯೆಂಬೆನಯ್ಯ!
ಅವಸರ ಬಂದರೆ ಮಾರುವ
ದೈವವನೆಂತು ಸರಿಯೆಂಬೆನಯ್ಯ!
ಅಂಜಿಕೆಯಾದರೆ ಹೂಳುವ
ದೈವವನೆಂತು ಸರಿಯೆಂಬೆನಯ್ಯ!
ಸಹಜಭಾವ ನಿಜೈಕ್ಯ
ಕೂಡಲಸಂಗಮದೇವನೊಬ್ಬನೇ ದೇವ.
-
೩೨೦. ಮಾರಿಕವ್ವೆಯ ನೋಂತು ಕೊರಳಲ್ಲಿ ಕಟ್ಟಿಕೊಂಬರು.
ಸಾಲಬಟ್ಟರೆ ಮಾರಿಕೊಂಬರಯ್ಯ!
ಸಾಲಬಟ್ಟರೆ ಅವನೊತ್ತೆಯನಿಟ್ಟು ಕೊಂಡುಂಬರಯ್ಯ!
ಮಾರುವೋಗನೊತ್ತೆವೋಗ
ನಮ್ಮ ಕೂಡಲಸಂಗಮದೇವ.
-
೩೨೧. ಮೊರನ ಗೋಟಿಗೆ ಬಪ್ಪ ಕಿರುಕುಳದೈವಕ್ಕೆ
ಕುರಿಯನಿಕ್ಕಿಹೆವೆಂದು ನಲಿನಲಿದಾಡುವರು.
ಕುರಿ ಸತ್ತು ಕಾವುದೆ ಹರ ಮುಳಿದವರ ?
ಕುರಿ ಬೇಡ, ಮರಿ ಬೇಡ
ಬರಿಯ ಪತ್ರೆಯ ತಂದು
ಮರೆಯದೇ ಪೂಜಿಸು ನಮ್ಮ ಕೂಡಲಸಂಗಮದೇವನ.
-
೩೨೨. ಮಡಕೆ ದೈವ, ಮೊರ ದೈವ,
ಬೀದಿಯ ಕಲ್ಲು ದೈವ,
ಹಣಿಗೆ ದೈವ, ಬಿಲ್ಲ ನಾರಿ ದೈವ--ಕಾಣಿರೊ!
ಕೊಳಗ ದೈವ, ಗಿಣ್ಣಿಲು ದೈವ--ಕಾಣಿರೊ!
ದೈವ ದೈವವೆಂದು ಕಾಲಿಡಲಿಂಬಿಲ್ಲ!
ದೇವನೊಬ್ಬನೆ ಕೂಡಲಸಂಗಮದೇವ.
-
೩೨೩. ಋಣ ತಪ್ಪಿದ ಹೆಂಡಿರಲ್ಲಿ,
ಗುಣ ತಪ್ಪಿದ ನಂಟರಲ್ಲಿ,
ಜೀವವಿಲ್ಲದ ದೇಹದಲ್ಲಿ ಫಲವೇನೋ ?
ಆಳ್ದನೊಲ್ಲದಾಳಿನಲ್ಲಿ,
ಸಿರಿತೊಲಗಿದರಸಿನಲ್ಲಿ
ವರವಿಲ್ಲದ ದೈವದಲ್ಲಿ ಫಲವೇನೋ ?
ಕಳಿದ ಹೂವಿನಲ್ಲಿ ಕಂಪನು,
ಉಳಿದ ಸೊಳೆಯಲ್ಲಿ ಪೆಂಪನು,
ಕೊಳೆಚೆನೀರಿನಲ್ಲಿ ಗುಣ್ಪನರಸುವಿರಿ!
ಮರುಳೆ, ವರಗುರು ವಿಶ್ವಕ್ಕೆಲ್ಲ
ಗಿರಿಜಾಮನೋವಲ್ಲಭ ಪರಮ ಕಾರುಣಿಕ
ನಮ್ಮ ಕೂಡಲಸಂಗಮದೇವ.
-
೩೨೪. ಗುಡಿಯೊಳಗಿದ್ದು ಗುಡಿಯ ನೇಣ ಕೊಯ್ದರೆ
ಗುಡಿಯ ದಡಿ ಬಿದ್ದು ಹಲ್ಲು ಹೋಹುದು ನೋಡಾ!
ಪೊಡವಿಗೀಶ್ವರನ ಗರ್ಭವಾಸದೊಳಗಿದ್ದು
ನುಡಿವರು ಮತ್ತೊಂದು ದೈವ ಉಂಟೆಂದು!
ತುಡುಗುಣಿ ನಾಯ ಹಿಡಿತಂದು ಸಾಕಿದರೆ
ತನ್ನೊಡಯಂಗೆ ಬೊಗಳುವಂತೆ ಕಾಣಾ
ಕೂಡಲಸಂಗಮದೇವ.
-
೩೨೫. ಮಾತಿನ ಮಾತಿಂಗೆ ನಿನ್ನ ಕೊಂದೆಹರೆಂದು
ಅಳು ಕಂಡಾ! ಎಲೆ ಹೋತೇ,
ವೇದವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ಶಾಸ್ತ್ರವನೋದಿದವರ ಮುಂದೆ
ಅಳು, ಕಂಡಾ! ಎಲೆ ಹೋತೇ,
ನೀನತ್ತುದಕೆ ತಕ್ಕುದ ಮಾಡುವ ಕೂಡಲಸಂಗಮದೇವ.
-
೩೨೬. ಹೊಲೆಯೊಳಗೆ ಹುಟ್ಟಿ ಕುಲವನರಸುವೆಯೆಲವೋ
ಮಾತಂಗಿಯ ಮಗ ನೀನು!
ಸತ್ತುದನೆಳೆವವನೆತ್ತಣ ಹೊಲೆಯ ?
ಹೊತ್ತು ತಂದು ನೀವು ಕೊಲುವಿರಿ!
ಶಾಸ್ತ್ರವೆಂಬುದು ಹೋತಿಂಗೆ ಮಾರಿ.
ವೇದವೆಂಬುದು ನಿಮಗೆ ತಿಳಿಯದು.
ನಮ್ಮ ಕೂಡಲಸಂಗನ ಶರಣರು
ಕರ್ಮವಿರಹಿತರು, ಶರಣಾಸನ್ನಹಿತರು,
ಅನುಪಮ ಚರಿತ್ರರು,
ಅವರಿಗೆ ತೋರಲು ಪ್ರತಿಯಿಲ್ಲವೋ.
-
೩೨೭. ಇಟ್ಟಯ ಹಣ್ಣ ನರಿ ತಿಂದು
ಸೃಷ್ಟಿ ತಿರುಗಿತೆಂಬಂತೆ,
ಮಟ್ಟಿಯನಿಟ್ಟ ದ್ವಿಜರ ಮಾತದೇಕೆ ?
ಹಗಲುಗಾಣದ ಗೂಗೆ ಇರುಳಾಯಿತ್ತೆಂದರೆ
ಜಗಕ್ಕೆ ಯಿರುಳಪ್ಪುದೆ ಮರುಳೆ ?
ಹೋಮದ ನೆವದಿಂದ ಹೋತನ ಕೊಂದು ತಿಂಬ
ಅನಾಮಿಕರೊಡನಾಡಿ ಗೆಲುವುದೇನು
ಕೂಡಲಸಂಗಮದೇವ.
-
೩೨೮. ನೀರ ಕಂಡಲ್ಲಿ ಮುಳುಗುವರಯ್ಯ!
ಮರನ ಕಂಡಲ್ಲಿ ಸುತ್ತುವರಯ್ಯ!
ಬತ್ತುವ ಜಲವನೊಣಗುವ ಮರನ
ಮೆಚ್ಚಿದವರು ನಿಮ್ಮನೆತ್ತ ಬಲ್ಲರು
ಕೂಡಲಸಂಗಮದೇವ.
-
೩೨೯. ಕಣ್ಣಮುಚ್ಚಿ ಕನ್ನಡಿಯ ತೋರುವಂತೆ!
ಇರುಳು ಹಗಲಿನ ನಿದ್ರೆ ಸಾಲದೆ ?
ಬೆರಳನೆಣಿಸಿ ಪರಮಾರ್ಥವ ಹಡೆವುದು
ಚೋದ್ಯವಲ್ಲವೆ ಹೇಳಾ ?
ಮೂಗ ಮುಚ್ಚಿ ಮುಕ್ತಿಯ ಬಯಸುವ
ನಾಚಿಕೆಯಿಲ್ಲದವರ ನಾನೇನೆಂಬೆ ಕೂಡಲಸಂಗಮದೇವ.
-
೩೩೦. ನಿಮ್ಮನರಿಯದ ಕಾರಣ ಕೈಯಲ್ಲಿ ಹುಲ್ಲು.
ನಿಮಗೆರಗದ ಕಾರಣ ಕೊರಳಲ್ಲಿ ನೇಣು.
ಹಿಂಡಲೇಕೋ, ತೊಳೆಯಲೇಕೊ ?
ಮುಳುಮುಳುಗಿ ಮೂಗ ಹಿಡಿಯಲೇಕೋ ?
ಕೂಡಲಸಂಗನ ಶರಣರಲ್ಲಿ
ಡೋಹರಕಕ್ಕಯ್ಯನಾವ ತೊರೆಯಲ್ಲಿ ಮಿಂದ ?
-
೩೩೧. ವ್ಯಾಸ ಬೋಯಿತಿಯ ಮಗ.
ಮಾರ್ಕಂಡೇಯ ಮಾತಂಗಿಯ ಮಗ.
ಮಂಡೋದರಿ ಕಪ್ಪೆಯ ಮಗಳು.
ಕುಲವನರಸದಿರಿ ಭೋ!
ಕುಲದಿಂದ ಮುನ್ನೇನಾದಿರಿ ಭೋ!
ಸಾಕ್ಷಾತ್ ಅಗಸ್ತ್ಯ ಕಬ್ಬಿಲ.
ದೂರ್ವಾಸ ಮಚ್ಚಿಗ.
ಕಶ್ಯಪ ಕಮ್ಮಾರ.
ಕೌಂಡಿನ್ಯನೆಂಬ ಋಷಿ
ಮೂರುಲೋಕವರಿಯೆ ನಾವಿದ ಕಾಣಿ ಭೋ!
ನಮ್ಮ ಕೂಡಲಸಂಗನ ವಚನವಿಂತೆಂದುದು-
"ಶ್ವಪಚೋಪಿಯಾದರೇನು ಶೀವಭಕ್ತನೇ ಕುಲಜಂ" ಭೋ!
-
೩೩೨. ಹೊಲೆಗಂಡಲ್ಲದೆ ಪಿಂಡದ ನೆಲೆಗಾಶ್ರಯವಿಲ್ಲ.
ಜಲಬಿಂದುವಿನ ವ್ಯವಹಾರವೊಂದೇ.
ಆಶೆಯಾಮಿಷ ಹರ್ಷರೋಷ ವಿಷಯಾದಿಗಳೆಲ್ಲವೊಂದೇ.
ಏನನೋದಿ ಏನ ಕೇಳಿ ಏನು ಫಲ ?!
ಕುಲಜನೆಂಬುದಕ್ಕೆ ಆವುದು ದೃಷ್ಟ ?
"ಸಪ್ತಧಾತುಸಮಂ ಪಿಂಡಂ
ಸಮಯೋನಿಸಮುದ್ಭವಂ |
ಆತ್ಮಾಜೀವಸ್ಸಮಸ್ತಸ್ಮಾತ್
ವರ್ಣಾನಾಂ ಕಿಂ ಪ್ರಯೋಜನಂ ?" ||
ಕಾಸಿ ಕಮ್ಮಾರನಾದ, ಬೀಸಿ ಮಡಿವಾಳನಾದ,
ಹಾಸನಿಕ್ಕಿ ಸಾಲಿಗನಾದ, ವೇದವನೋದಿ ಹಾರುವನಾದ.
ಕರ್ಣದಲ್ಲಿ ಜನಿಸಿದವರುಂಟೆ ಜಗದೊಳಗೆ ?
ಇದು ಕಾರಣ, ಕೂಡಲಸಂಗಮದೇವ,
ಲಿಂಗಸ್ಥಲವನರಿದವನೇ ಕುಲಜನು!
-
೩೩೩. ಕೊಲುವವನೇ ಮಾದಿಗ!
ಹೊಲಸ ತಿಂಬವನೇ ಹೊಲೆಯ!
ಕುಲವೇನೋ ? ಆವದಿರ ಕುಲವೇನೋ ?
ಸಕಲ ಜೀವಾತ್ಮರಿಗೆ ಲೇಸನೇ ಬಯಸುವ
ನಮ್ಮ ಕೂಡಲಸಂಗನ ಶರಣರೇ ಕುಲಜರು!
-
೩೩೪. ಹೊನ್ನ ನೇಗಿಲಲುತ್ತು
ಎಕ್ಕೆಯ ಬೀಜವ ಬಿತ್ತುವರೆ ?
ಕರ್ಪೂರದ ಮರನ ಕಡಿದು
ಕಳ್ಳಿಗೆ ಬೇಲಿಯನಿಕ್ಕುವರೆ ?
ಶ್ರೀಗಂಧದ ಮರನ ಕಡಿದು
ಬೇವಿಂಗೆ ಅಡೆಯನಿಕ್ಕುವರೆ ?
ನಮ್ಮ ಕೂಡಲಸಂಗನ
ಶರಣರಿಗಲ್ಲದೆ ಬೇರೆ ಇಚ್ಛಾಭೋಜನವಿಕ್ಕಿದರೆ
ಕಿಚ್ಚಿನೊಳಗುಚ್ಚೆಯ ಹೊಯ್ದು
ಹವಿಯ ಬೇಳ್ದಂತಾಯಿತ್ತು.
-
೩೩೫. ಕುರಿವಿಂಡು ಕಬ್ಬಿನ ಉಲಿವ ತೋಂಟವ ಹೊಕ್ಕು
ತೆರನನರಿಯದೇ ತನಿರಸದ,
ಹೊರಗಣೆಲೆಯನೇ ಮೇದುವು!
ನಿಮ್ಮನರಿವ ಮದಕರಿಯಲ್ಲದೆ
ಕುರಿಯೇನ ಬಲ್ಲುದೋ ಕೂಡಲಸಂಗಮದೇವ ?
-
೩೩೬. ದೇವ, ನಿಮ್ಮ ಪೂಜಿಸಿ
ಚೆನ್ನನ ಕುಲ ಚೆನ್ನಾಯಿತ್ತು!
ದೇವ, ನಿಮ್ಮ ಪೂಜಿಸಿ
ದಾಸನ ಕುಲ ದೇಸಿವಡೆಯಿತ್ತು!
ದೇವ, ನಿಮ್ಮಡಿಗೆರಗಿ
ಮಡಿವಾಳ ಮಾಚಯ್ಯ ನಿಮ್ಮಡಿಯಾದ!
ನೀನೊಲಿದ ಕುಲಕ್ಕೆ
ನೀನೊಲಿದ ಹೊಲೆಗೆ ಮೇರೆಯುಂಟೇ, ದೇವ ?
ಶ್ವಪಚೋಪಿ ಮುನಿಶ್ರೇಷ್ಠಃ
ಯಸ್ತು ಲಿಂಗಾರ್ಚನೇ ರತಃ |
ಲಿಂಗಾರ್ಚನವಿಹೀನೋಪಿ
ಬ್ರಾಹ್ಮಣಃ ಶ್ವಪಚಾಧಮಃ ||
ಎಂದುದಾಗಿ ಜಾತಿ-ವಿಜಾತಿಯಾದರೇನು
ಅಜಾತಂಗೆ ಶರಣೆಂದೆನ್ನದವನು ?
ಆತನೇ ಹೊಲೆಯ ಕೂಡಲಸಂಗಮದೇವ.
-
೩೩೭. ಭಕ್ತಿಹೀನನ ದಾಸೋಹವ
ಸದ್ಭಕ್ತರು ಸವಿಯರು!
ಬೇವಿನ ಹಣ್ಣು ಕಾಗೆಗೆ ಇನಿದಲ್ಲದೆ
ಕೋಗಿಲೆಗೆ ಮೆಲಲಾಗದು!
ಲಿಂಗಸಂಬಂಧವಿಲ್ಲದವರ ನುಡಿ
ಕೂಡಲಸಂಗನ ಶರಣರಿಗೆ ಸಮನಿಸದು.
-
೩೩೮. ಬಂದು ಬಲ್ಲಹ ಬಿಡಲು
ಹೊಲಗೇರಿಯೆಂಬ ಹೆಸರೊಳವೇ ಅಯ್ಯ!
ಲಿಂಗವಿದ್ದವರ ಮನೆ
ಕೈಲಾಸವೆಂದು ನಂಬಬೇಕು!
ಇದಕ್ಕೆ ಪ್ರಮಾಣ:-
ಚಂಡಾಲವಾಟಿಕಾಯಾಂ ವಾ
ಶಿವಭಕ್ತಃಸ್ಸ್ಥಿತೋ ಯದಿ |
ತತ್ ಶ್ರೇಣಿಶ್ಯಿವಲೋಕಸ್ಯಾತ್
ತದ್ ಗೃಹಂ ಶಿವಮಂದಿರಂ ||
ಲೋಕದ ಡಂಭಕರ ಮಾತು ಬೇಡ.
ಕೂಡಲಸಂಗನಿದ್ದುದೇ ಕೈಲಾಸ!
-
೩೩೯. ದೇವನೊಬ್ಬ ನಾಮ ಹಲವು.
ಪರಮ ಪತಿವ್ರತೆಗೆ ಗಂಡನೊಬ್ಬ.
ಮತ್ತೊಂದಕ್ಕೆರಗಿದರೆ
ಕಿವಿ ಮೂಗ ಕೊಯ್ವನು.
ಹಲವು ದೈವದ ಎಂಜಲ
ತಿಂಬವರನೇನೆಂಬೆ ಕೂಡಲಸಂಗಮದೇವ.
-
೩೪೦. ಎಲವೋ! ಎಲವೋ!
ಪಾಪಕರ್ಮವ ಮಾಡಿದವನೇ
ಎಲವೊ! ಎಲವೊ!
ಬ್ರಹ್ಮೇತಿಯ ಮಾಡಿದವನೇ
ಒಮ್ಮೆ ಶರಣೆನ್ನೆಲವೋ!
ಒಮ್ಮೆ ಶರಣೆಂದರೆ
ಪಾಪಕರ್ಮ ಓಡುವವು.
ಸರ್ವಪ್ರಾಯಶ್ಚಿತ್ತಕ್ಕೆ
ಹೊನ್ನಪರ್ವತಂಗಳೆಯ್ದವು!
ಓರ್ವಂಗೆ ಶರಣೆನ್ನು ನಮ್ಮ ಕೂಡಲಸಂಗಮದೇವಂಗೆ!
-
೩೪೧. ಅರಸು-ವಿಚಾರ, ಸಿರಿಯು-ಶೃಂಗಾರ
ಸ್ಥಿರವಲ್ಲ ಮಾನವ!
ಕೆಟ್ಟಿತ್ತು ಕಲ್ಯಾಣ ಹಾಳಾಯಿತ್ತು ನೋಡಾ!
ಒಬ್ಬ ಜಂಗಮನಭಿಮಾನದಿಂದ
ಚಾಳುಕ್ಯರಾಯನಾಳ್ವಿಕೆ ತೆಗೆಯಿತ್ತು
ಸಂದಿತ್ತು, ಕೂಡಲಸಂಗಮದೇವ,
ನಿನ್ನ ಕವಳಿಗೆಗೆ.
-
೩೪೨. ಬೇವಿನ ಬೀಜವ ಬಿತ್ತಿ,
ಬೆಲ್ಲದ ಕಟ್ಟೆಯ ಕಟ್ಟಿ,
ಆಕಳ ಹಾಲನೆರೆದು,
ಜೇನುತುಪ್ಪವ ಹೊಯ್ದರೆ
ಸಿಹಿಯಾಗಬಲ್ಲುದೆ ಕಹಿಯಹುದಲ್ಲದೆ ?
ಶಿವಭಕ್ತರಲ್ಲದವರ ಕೂಡೆ
ನುಡಿಯಲಾಗದು ಕೂಡಲಸಂಗಮದೇವ.
-
೩೪೩. ಮಾರಿ ಮಸಣಿ ಎಂಬವು ಬೇರಿಲ್ಲ ಕಾಣಿರೋ!
ಮಾರಿ ಎಂಬುದೇನು ?
ಕಂಗಳು ತಪ್ಪಿ ನೋಡಿದರೆ ಮಾರಿ!
ನಾಲಿಗೆ ತಪ್ಪಿ ನುಡಿದರೆ ಮಾರಿ!
ನಮ್ಮ ಕೂಡಲಸಂಗಯ್ಯನ ನೆನಹ ಮರೆದರೆ ಮಾರಿ!
-
೩೪೪. ಆಯುಧವಿಕ್ಕಿದವಂಗೆ ವೀರದ ಮಾತೇಕೆ ?
ಲಿಂಗವು ಅಂತರಿಸಿದವಂಗೆ ಒಳುನುಡಿಯೇಕೆ ?
ಐದೆಯರ ಪೋಚಿ ಇಲ್ಲದವಳಿಗೆ
ಸೌಭಾಗ್ಯದ ಹೂವಿನ ಬಟ್ಟೇಕೆ ?
ಸತ್ಯನಲ್ಲದವಂಗೆ ನಿತ್ಯನೇಮವೇಕೆ ?
ಕರ್ತಾರ, ನಿನ್ನ ಒಲವಿಲ್ಲದವಂಗೆ
ಶಂಭುವಿನ ಬಂಧುಗಳೇಕೆ ?
ಕೂಡಲಸಂಗಮದೇವಯ್ಯ
ನೀವಿಲ್ಲದವಂಗೆ ಶಿವಾಚಾರದ ಮಾತೇಕೆ ?
-
೩೪೫. ಸಿಂಗದ ನಡು ಮುರಿಯಲಾ ಸಿಂಗವೇಬಾತೆ!
ಸೊಂಡಿಲು ಮುರಿದರೆ ಆ ಗಜವೇಬಾತೆ!
ಸಂಗ್ರಾಮದಲ್ಲಿ ಧೀರನುಳಿಯೆ ಆ ಧೀರತ್ವವೇಬಾತೆ!
ಸಿಂಗಾರದ ಮೂಗು ಹೋದರಾ ಶೃಂಗಾರವೇಬಾತೆ!
ನಿಜತುಂಬಿದ ಭಕ್ತಿ ತುಳುಕಾಡದವರ ಸಂಗವೇಬಾತೆ!
ಕೂಡಲಸಂಗಮದೇವ.
-
೩೪೬. ಗೀಜಗನ ಗೂಡು, ಕೋಡಗದಣಲ ಸಂಚ,
ಬಾದುಮನ ಮದುವೆ, ಬಾವಲನ ಬಿದ್ದಿನಂತೆ:
ಜೂಜುಗಾರನ ಮಾತು, ಬೀದಿಯ ಗುಂಡನ ಸೊಬಗು;
ಓಡಿನೊಳಗಗೆಯ ಹೊಯ್ದಂತೆ ಕಾಣಿರೇ;
ಶಿವನಾದಿಯಂತುವನರಿಯದವನ ಭಕ್ತಿ
ಸುಖಶೋಧನೆಗೆ ಮದ್ದ ಕೊಂಡಂತೆ
ಕೂಡಲಸಂಗಮದೇವ.
-
೩೪೭. ತೊತ್ತಿನ ಕೊರಳಲ್ಲಿ
ಹೊಂಬಿತ್ತಾಳಿಯ ಸಿಂಗಾರವ ಮಾಡಿದಂತೆ!
ಕುಚಿತ್ತರ ಸಂಗ ಸುಸಂಗಿಗೆ ಸಂಗವಲ್ಲ.
ಗುರುಗುಂಜಿ ಮಾಣಿಕಕ್ಕೆ ಸರಿಯಪ್ಪುದೆ ?
ಕೂಡಲಸಂಗಮದೇವ.
-
೩೪೮. ಆನೆಯನೇರಿಕೊಂಡು ಹೋದಿರಿ ನೀವು,
ಕುದುರೆಯನೇರಿಕೊಂಡು ಹೋದಿರಿ ನೀವು.
ಕುಂಕುಮ-ಕಸ್ತುರಿಯ ಪೂಸಿಕೊಂಡು ಹೋದಿರಿ ಅಣ್ಣಾ;
ಸತ್ಯದ ನಿಲುವನರಿಯದೆ ಹೋದಿರಲ್ಲಾ!
ಸದ್ಗುಣವೆಂಬ ಫಲವ ಬಿತ್ತದೆ ಬೆಳೆಯದೆ ಹೋದಿರಲ್ಲಾ
ಅಹಂಕಾರವೆಂಬ ಮದಗಜವನೇರಿ
ವಿಧಿಗೆ ಗುರಿಯಾಗಿ ನೀವು ಕೆಟ್ಟು ಹೋದಿರಲ್ಲಾ!
ನಮ್ಮ ಕೂಡಲಸಂಗಮದೇವನನರಿಯದೆ
ನರಕಕ್ಕೆ ಭಾಜನವಾದಿರಲ್ಲಾ!
-
೩೪೯. ಇಂದ್ರಿಯನಿಗ್ರಹವ ಮಾಡಿದರೆ
ಹೊಂದುವವು ದೋಷಂಗಳು.
ಮುಂದೆ ಬಂದು ಕಾಡುವವು ಪಂಚೇಂದ್ರಿಯಂಗಳು.
ಸತಿಪತಿರತಿಸುಖವ ಬಿಟ್ಟರೇ ಸಿರಿಯಾಳ-ಚೆಂಗಳೆಯರು ?
ಸತಿಪತಿರತಿಸುಖ ಭೋಗೋಪಭೋಗವಿಳಾಸವ
ಬಿಟ್ಟರೇ ಸಿಂಧುಬಲ್ಲಾಳನವರು ?
ನಿಮ್ಮ ಮುಟ್ಟಿ, ಪರಧನ ಪರಸತಿಯರಿಗೆಳಸಿದರೆ
ನಿಮ್ಮ ಚರಣಕ್ಕೆ ದೂರ ಕೂಡಲಸಂಗಮದೇವ.
-
೩೫೦. ನೋಡಲಾಗದು, ನುಡಿಸಲಾಗದು ಪರಸ್ತ್ರೀಯರ;
ಬೇಡ ಕಾಣಿರೋ!
ತಗರ ಬೆನ್ನಲಿ ಹರಿವ ಸೊಣಗನಂತೆ;
ಬೇಡ ಕಾಣಿರೋ!
ಒಂದಾಸೆಗೆ ಸಾಸಿರ ವರುಷ
ನರಕದಲದ್ದುವ ಕೂಡಲಸಂಗಮದೇವ.
-
೩೫೧. ತೊರೆಯ ಮೀವ ಅಣ್ಣಗಳಿರಾ,
ತೊರೆಯ ಮೀವ ಸ್ವಾಮಿಗಳಿರಾ,
ತೊರೆಯಿಂ ಭೋ, ತೊರೆಯಿಂ ಭೋ!
ಪರನಾರಿಯ ಸಂಗವ ತೊರೆಯಿಂ ಭೋ!
ಪರಧನದಾಮಿಷವ ತೊರೆಯಿಂ ಭೋ!
ಇವ ತೊರೆಯದೇ, ಹೋಗಿ ತೊರೆಯ ಮಿಂದರೆ
ಬರುದೊರೆ ಹೋಹುದು ಕೂಡಲಸಂಗಮದೇವ.
-
೩೫೨. ಹುತ್ತವ ಕಂಡಲ್ಲಿ ಹಾವಾಗಿ,
ನೀರ ಕಂಡಲ್ಲಿ ಹೊಳೆಯಾದವನ ಮೆಚ್ಚುವನೆ ?
ಬಾರದ ಭವಕ್ಕೆ ಬರಿಸುವನಲ್ಲದೆ ಮೆಚ್ಚುವನೆ ?
ಅಘೋರ ನರಕವನುಣಿಸುವನಲ್ಲದೆ ಮೆಚ್ಚುವನೆ ?
ಅಟಮಟದ ಭಕ್ತರ ಕಂಡರೆ
ಕೋಟಲೆಗೊಳಿಸುವನು ಕೂಡಲಸಂಗಯ್ಯನು.
-
೩೫೩. ಕುಳ್ಳಿದ್ದು ಲಿಂಗವ ಪೂಜಿಸಿ
ಅಲ್ಲದಾಟವನಾಡುವರಯ್ಯ;
ಬೆಳ್ಳೆತ್ತಿನ ಮರೆಯಲ್ಲಿದ್ದು
ಹುಲ್ಲೆಗೆ ಅಂಬ ತೊಡುವಂತೆ!
ಕಳ್ಳ-ಹಾದರಿಗರ ಕೈಯಲು ಪೂಜೆಯ ಕೊಳ್ಳ
ನಮ್ಮ ಕೂಡಲಸಂಗಮದೇವ.
-
೩೫೪. ತನುಶುಚಿಯಿಲ್ಲದವನ ದೇಹಾರವೇಕೆ ?
ದೇವರು ಕೊಡನೆಂಬ ಭ್ರಾಂತೇಕೆ ?
ಮನಕ್ಕೆ ಮನವೇ ಸಾಕ್ಷಿ ಸಾಲದೆ ಲಿಂಗ ತಂದೆ ?!
ಹೇಂಗೆ ಮನ ಹಾಂಗೆ ಘನ!
ತಪ್ಪದು ಕೂಡಲಸಂಗಮದೇವ.
-
೩೫೫. ನೂರನೋದಿ ನೂರ ಕೇಳಿದರೇನು ?
ಆಶೆ ಹರಿಯದು, ರೋಷ ಬಿಡದು!
ಮಜ್ಜನಕ್ಕೆರೆದು ಫಲವೇನು ?
ಮಾತಿನಂತೆ ಮನವಿಲ್ಲದ
ಜಾತಿ-ಡೊಂಬರ ನೋಡಿ ನಗುವನಯ್ಯ
ಕೂಡಲಸಂಗಮದೇವರು.
-
೩೫೬. ಗುರೂಪದೇಶ ಮಂತ್ರವೈದ್ಯ!
ಜಂಗಮೋಪದೇಶ ಶಸ್ತ್ರವೈದ್ಯ ನೋಡಾ!
ಭವರೋಗವ ಕಳೆವ ಪರಿಯ ನೋಡಾ!
ಕೂಡಲಸಂಗನ ಶರಣರ ಅನುಭಾವ
ಮಡಿವಾಳನ ಕಾಯಕದಂತೆ!
-
೩೫೭. ಶ್ವಪಚನಾದರೇನು ಲಿಂಗಭಕ್ತನೇ ಕುಲಜನು.
ನಂಬಿ ನಂಬದಿದ್ದರೆ, ಸಂದೇಹಿ ನೋಡಾ!
ಕಟ್ಟಿದರೇನು, ಮುಟ್ಟಿದರೇನು,
ಪೂಸಿದರೇನು ಮನಮುಟ್ಟದನ್ನಕ ?
ಭಾವಶುದ್ಧವಿಲ್ಲದವಂಗೆ ಭಕ್ತಿ ನೆಲೆಗೊಳ್ಳದು
ಕೂಡಲಸಂಗಮದೇವನೊಲಿದವಂಗಲ್ಲದೆ.
-
೩೫೮. ಅರಗಿನ ಪುತ್ಧಳಿಗೆ ಉರಿಯ ನಾಲಗೆ ಹೊಯ್ದು
ಮಾತಾಡುವ ಸರಸ ಬೇಡ!
ಬೆಣ್ಣೆಯ ಬೆನಕಂಗೆ ಕೆಂಡದುಂಡಲಿಗೆಯ ಮಾಡಿ
ಚಲ್ಲವಾಡಿದರೆ ಹಲ್ಲು ಹೋಹುದು!
ಕೂಡಲಸಂಗನ ಶರಣರೊಡನೆ ಸರಸವಾಡಿದರೆ
ಅದು ವಿರಸ ಕಾಣಿರಣ್ಣ. -
೩೫೯. ಹಾವಿನ ಹೆಡೆಗಳ ಕೊಂಡು
ಕೆನ್ನೆಯ ತುರಿಸಿಕೊಂಬಂತೆ,
ಉರಿವ ಕೊಳ್ಳಿಯ ಕೊಂಡು
ಮಂಡೆಯ ಸಿಕ್ಕ ಬಿಡಿಸುವಂತೆ,
ಹುಲಿಯ ಮೀಸೆಯ ಹಿಡಿದುಕೊಂಡು
ಒಲೆದುಯ್ಯಲನಾಡುವಂತೆ,
ಕೂಡಲಸಂಗನ ಶರಣರೊಡನೆ ಮರೆದು ಸರಸವಾಡಿದರೆ
ಸುಣ್ಣಕಲ್ಲ ಮಡಿಲಲ್ಲಿ ಕಟ್ಟಿಕೊಂಡು ಮಡುವ ಬಿದ್ದಂತೆ!
-
೩೬೦. ಉರಿವ ಕೊಳ್ಳಿಯ ಮಂಡೆಯಲಿಕ್ಕಿದಡೆ
ಉರಿವುದು ಮಾಣ್ಬುದೇ ?
ಕಲ್ಲ ಗುಗ್ಗುರಿಯ ಮೆಲಿದರೆ
ಹಲ್ಲು ಹೋಹುದು ಮಾಣ್ಬುದೇ ?
ಶರಣರೊಡನೆ ಸರಸವಾಡಿದರೆ
ನರಕ ತಪ್ಪದು ಕಾಣಾ ಕೂಡಲಸಂಗಮದೇವ.
-
೩೬೧. ಕೋಣನ ಹೇರಿಗೆ ಕುನ್ನಿ ಬಸುಗುತ್ತಬಡುವಂತೆ
ತಾವು ನಂಬರು, ನಂಬುವರನು ನಂಬಲೀಯರು!
ತಾವು ಮಾಡರು, ಮಾಡುವರನು ಮಾಡಲೀಯರು!
ಮಾಡುವ ಭಕ್ತರ ಕಂಡು ಸೈರಿಸಲಾರದವರ
ಕೂಗಿಡೆ ಕೂಗಿಡೆ ನರಕದಲ್ಲಿಕ್ಕುವ ಕೂಡಲಸಂಗಮದೇವ.
-
೩೬೨. ಚೇಳಿಂಗೆ ಬಸುರಾಯಿತ್ತೆ ಕಡೆ!
ಬಾಳೆಗೆ ಫಲವಾಯಿತ್ತೆ ಕಡೆ ನೋಡಾ !
ರಣರಂಗದಲ್ಲಿ ಕಾದುವ ಓಲೆಯಕಾರಂಗೆ ಓಸರಿಸಿತ್ತೆ ಕಡೆ!
ಮಾಡುವ ಭಕ್ತಂಗೆ ಮನಹೀನವಾದರೆ
ಅದೇ ಕಡೆ ಕೂಡಲಸಂಗಮದೇವ.
-
೩೬೩. ಹುಲಿಯ ಹಾಲು ಹುಲಿಗಲ್ಲದೆ
ಹೊಲದ ಹುಲ್ಲೆಗುಣಬಾರದು
ಕಲಿಯ ಕಾಲ ತೊಡರು ಛಲದಾಳಿಂಗಲ್ಲದೆ ಇಕ್ಕಬಾರದು.
ಅಳಿಮನದಾಸೆಯವರ ಮೂಗ ಹಲುದೋರ ಕೊಯ್ವ
ಕೂಡಲಸಂಗಮದೇವ.
-
೩೬೪. ಅಲಗಲಗು ಮೋಹಿದಲ್ಲದೆ
ಕಲಿತನವ ಕಾಣಬಾರದು.
ನುಡಿವ ನುಡಿ ಜಾರಿದರೆ
ಮನಕ್ಕೆ ಮನ ನಾಚಬೇಕು.
ಶಬ್ದಗಟ್ಟಿಯತನದಲ್ಲಿ
ಎಂತಪ್ಪುದಯ್ಯ ಭಕ್ತಿ ?
ಪಾಪಿಯ ಕೂಸನೆತ್ತಿದಂತೆ-
ಕೂಡಲಸಂಗಮದೇವರ ಭಕ್ತಿ
ಅಳಿಮನದವರಿಗೆ ಅಳವಡದಯ್ಯ!
-
೩೬೫. ಹರಬೀಜವಾದರೆ ಹಂದೆ ತಾನಪ್ಪನೇ ?
ಒರೆಯ ಬಿಚ್ಚಿ ಇರಿಯದವರ ಲೋಕ ಮೆಚ್ಚುವುದೆ ?
ಚಲ್ಲಣವುಟ್ಟು ಕೈಯ ಪಟ್ಟೆಹವಿಡಿದು
ಗರುಡಿಯ ಕಟ್ಟಿ ಶ್ರಮವ ಮಾಡುವ-
ಅಂತೆ ತನ್ನ ತಪ್ಪಿಸಿಕೊಂಡರೆ ಶಿವ ಮೆಚ್ಚುವನೆ ?
ಅರಿಯದವರಿಗೆ ಒಳ್ಳೆ ಹೆಡೆಯೆತ್ತಿ ಆಡುವಂತೆ
ಬೊಳ್ಳೆಗನ ಭಕ್ತಿ ಕೂಡಲಸಂಗಮದೇವ.
-
೩೬೬. ಮೊನೆ ತಪ್ಪಿದ ಬಳಿಕ,
ಅಲಗೇನ ಮಾಡುವುದು ?
ವಿಷ ತಪ್ಪಿದ ಬಳಿಕ,
ಹಾವೇನ ಮಾಡುವುದು ?
ಭಾಷೆ ತಪ್ಪಿದ ಬಳಿಕ
ದೇವನೇ ಬಲ್ಲಿದ;
ಭಕ್ತನೇನ ಮಾಡುವನಯ್ಯ ?
ಭಾಷೆ ತಪ್ಪಿದ ಬಳಿಕ
ಪ್ರಾಣದಾಸೆಯನು ಹಾರಿದರೆ
ಮೀಸಲನು ಸೊಣಗ ಮುಟ್ಟಿದಂತೆ
ಕೂಡಲಸಂಗಮದೇವ.
-
೩೬೭. ವೀರ, ವ್ರತಿ, ಭಕ್ತನೆಂದು ಹೊಗಳಿಕೊಂಬಿರಿ!
ಹೇಳಿರಯ್ಯ.
ವೀರನಾದರೆ ವೈರಿಗಳು ಮೆಚ್ಚಬೇಕು!
ವ್ರತಿಯಾದರೆ ಅಂಗನೆಯರು ಮೆಚ್ಚಬೇಕು!
ಭಕ್ತನಾದರೆ ಜಂಗಮ ಮೆಚ್ಚಬೇಕು.
ಈ ನುಡಿಯೊಳಗೆ ತನ್ನ ಬಗೆಯಿರೆ
ಬೇಡಿದ ಪದವಿಯನೀವ ಕೂಡಲಸಂಗಮದೇವ.
-
೩೬೮. ಕಟ್ಟಿ ಬಿಡುವನೇ ಶರಣನು ?
ಬಿಟ್ಟು ಹಿಡಿವನೇ ಶರಣನು ?
ನಡೆದು ತಪ್ಪುವನೇ ಶರಣನು ?
ನುಡಿದು ಹುಸಿವನೇ ಶರಣನು ?
ಸಜ್ಜನಿಕೆ ತಪ್ಪಿದರೆ
ಕೂಡಲಸಂಗಯ್ಯ ಮೂಗ ಹಲುದೋರ ಕೊಯ್ವ!
-
೩೬೯. ಒಡನೆ ಹುಟ್ಟಿದುದಲ್ಲ;
ಒಡನೆ ಬೆಳೆದುದಲ್ಲ;
ಎಡೆಯಲಾದೊಂದುಡಿಗೆಯನುಟ್ಟು ಸಡಿಲಿದರೆ
ಲಜ್ಜೆ-ನಾಚಿಕೆಯಾಯಿತ್ತೆಂಬ ನುಡಿ ದಿಟವಾಯಿತ್ತು ಲೌಕಿಕದಲ್ಲಿ
ಪಡೆದ ಗುರುಕರುಣದೊಡನೆ ಹುಟ್ಟಿದ
ನೇಮವನು ಬಿಡದಿರೆಲವೋ!
ಬಿಟ್ಟರೆ ಕಷ್ಟ!
ಕೂಡಲಸಂಗಮದೇವನು
ಅಡಸಿ ಕೆಡಹುವ ನಾಯಕನರಕದಲ್ಲಿ.
-
೩೭೦. ಛಲಬೇಕು ಶರಣಂಗೆ ಪರಧನವನೊಲ್ಲೆಂಬ!
ಛಲಬೇಕು ಶರಣಂಗೆ ಪರಸತಿಯನೊಲ್ಲೆಂಬ!
ಛಲಬೇಕು ಶರಣಂಗೆ ಪರದೈವವನೊಲ್ಲೆಂಬ
ಛಲಬೇಕು ಶರಣಂಗೆ ಲಿಂಗಜಂಗಮವೊಂದೆಂಬ!
ಛಲಬೇಕು ಶರಣಂಗೆ ಪ್ರಸಾದ ದಿಟವೆಂಬ!
ಛಲವಿಲ್ಲದವರ ಮೆಚ್ಚ ಕೂಡಲಸಂಗಮದೇವ.
-
೩೭೧. ಜಂಬೂದ್ವೀಪನವಖಂಡಪೃಥ್ವಿಯೊಳಗೆ
ಕೇಳಿರಯ್ಯ ಎರಡಾಳಿನ ಭಾಷೆಯ!
ಕೊಲುವೆನೆಂಬ ಭಾಷೆ ದೇವನದು,
ಗೆಲುವೆನೆಂಬ ಭಾಷೆ ಭಕ್ತನದು.
ಸತ್ಯವೆಂಬ ಕೂರಲಗನೆ ಕಳೆದುಕೊಂಡು
ಸದ್ಭಕ್ತರು ಗೆದ್ದರು ಕಾಣಾ ಕೂಡಲಸಂಗಮದೇವ.
-
೩೭೨. ಶಿವಭಕ್ತನಾಗಿ ತನ್ನ ಹಿಡಿದಹೆನೆಂದು ಹೋದರೆ
ನುಗ್ಗುಮಾಡುವ, ನುಸಿಯ ಮಾಡುವ!
ಮಣ್ಣುಮಾಡುವ, ಮಸಿಯ ಮಾಡುವ!
ಕೂಡಲಸಂಗಮದೇವರ ನೆರೆನಂಬಿದನಾದರೆ
ಕಡೆಗೆ ತನ್ನಂತೆ ಮಾಡುವ.
-
೩೭೩. ಅರೆವನಯ್ಯ ಸಣ್ಣವಹನ್ನಕ
ಒರೆವನಯ್ಯ ಬಣ್ಣಗಾಬನ್ನಕ
ಅರೆದರೆ ಸುಣ್ಣವಾಗಿ,
ಒರೆದರೆ ಬಣ್ಣವಾದರೆ
ಕೂಡಲಸಂಗಮದೇವನೊಲಿದು ಸಲಹುವನು.
-
೩೭೪. ಎಡದ ಪಾದದಲೊದ್ದರೆ ಬಲದ ಪಾದವ ಹಿಡಿವೆ!
ಬಲದ ಪಾದದಲೊದ್ದರೆ ಎಡದ ಪಾದವ ಹಿಡಿವೆ!
ತ್ರಾಹಿ, ತ್ರಾಹಿ! ತಪ್ಪೆನ್ನದು, ಕ್ಷಮೆ ನಿನ್ನದು!
ಕೂಡಲಸಂಗಮದೇವ ನಿಮ್ಮ ಕರುಣದ ಕಂದ ನಾನು!
-
೩೭೫. ಅಂಜಿದರಾಗದು, ಅಳುಕಿದರಾಗದು!
ವಜ್ರಪಂಜರದೊಳಗಿದ್ದರಾಗದು!
ತಪ್ಪದೆಲವೋ ಲಲಾಟಲಿಖಿತ!
ಕಕ್ಕುಲತೆಬಟ್ಟರಾಗದು ನೋಡಾ!
ಧೃತಿಗೆಟ್ಟು ಮನ ಧಾತುಗೆಟ್ಟರೆ
ಅಪ್ಪುದು ತಪ್ಪದು ಕೂಡಲಸಂಗಮದೇವ.
-
೩೭೬. ಆಯುಷ್ಯ ತೀರಿದಲ್ಲದೆ ಮರಣವಿಲ್ಲ.
ಭಾಷೆ ತೀರಿದಲ್ಲದೆ ದಾರಿದ್ರ್ಯವಿಲ್ಲ.
ಅಂಜಲದೇಕೋ ಲೋಕವಿಗರ್ಹಣೆಗೆ ?
ಅಂಜಲದೇಕೋ ಕೂಡಲಸಂಗಮದೇವ ನಿಮ್ಮಾಳಾಗಿ ?
-
೩೭೭. ಮನಕ್ಕೆ ಮನ ಒಂದಾಗಿ, ಧನಕ್ಕೆ ಧನ ಒಂದಾಗಿ;
ನಚ್ಚಿದ ಮಚ್ಚು ಅಚ್ಚೊತ್ತಿದಂತಿರಬೇಕು.
ಪ್ರಾಣಕ್ಕೆ ಪ್ರಾಣ ಒಂದಾಗಿ, ಶುಭಸೂಚನೆ ಒಂದಾಗಿರದ
ನಚ್ಚು ಮಚ್ಚು ಪಾರವೈದುವುದೆ ?
ಶಿರ ಹರಿದರೇನು ? ಕರುಳು ಕುಪ್ಪಳಿಸಿದರೇನು ?
ಇಂತಪ್ಪ ಸಮಸ್ತ ವಸ್ತುವೆಲ್ಲ ಹೋದರೇನು ?
ಚಿತ್ತ-ಮನ-ಬುದ್ಧಿಯೊಂದಾದ ಮಚ್ಚು
ಬಿಚ್ಚಿ ಬೇರಾಗದಿದ್ದರೆ
ಮೆಚ್ಚುವ ನಮ್ಮ ಕೂಡಲಸಂಗಮದೇವ.
-
೩೭೮. ಎನಿಸೆನಿಸೆಂದಡೆಯೂ ನಾ ಧೃತಿಗೆಡೆನಯ್ಯ ?
ಎಲುದೋರಿದಡೆಯೂ, ನರ ಹರಿದಡೆಯೂ,
ಕರಳು ಕುಪ್ಪಳಿಸಿದಡೆಯೂ ನಾ ಧೃತಿಗೆಡೆನಯ್ಯ ?
ಸಿರ ಹರಿದು ಅಟ್ಟೆ ನೆಲಕ್ಕೆ ಬಿದ್ದಡೆಯೂ
ನಾಲಗೆ ಕೂಡಲಸಂಗ ಶರಣೆನುತಿಪ್ಪುದಯ್ಯ ?
-
೩೭೯. ಒಣಗಿಸಿಯೆನ್ನ ಘಣಘಣಲನೆ ಮಾಡಿದಡೆಯೂ
ಹರಣವುಳ್ಳನ್ನಕ ನಿಮ್ಮ ಚರಣವ ನೆನೆವುದ ಮಾಣೆ, ಮಾಣೆ!
ಶರಣೆಂಬುದ ಮಾಣೆ, ಮಾಣೆ!
ಕೂಡಲಸಂಗಮದೇವಯ್ಯ
ಎನ್ನ ಹೆಣನ ಮೇಲೆ ಕಂಚಿಟ್ಟುಂಡೊಡೆಯು ಮಾಣೆ, ಮಾಣೆ!
-
೩೮೦. ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ
ಮತ್ತೊಂದ ನೆನೆದಡೆ ತಲೆದಂಡ, ತಲೆದಂಡ!
ಹುಸಿಯಾದಡ ದೇವಾ, ತಲೆದಂಡ! ತಲೆದಂಡ!
ಕೂಡಲಸಂಗಮದೇವ ನೀವಲ್ಲದೆ ಅನ್ಯವ ನೆನೆದಡೆ
ತಲೆದಂಡ, ತಲೆದಂಡ!
-
೩೮೧. ಸುಖ ಬಂದರೆ ಪುಣ್ಯದ ಫಲವೆನ್ನೆನು,
ದುಃಖ ಬಂದರೆ ಪಾಪದ ಫಲವೆನ್ನೆನು,
ನೀ ಮಾಡಿದಡಾಯಿತ್ತೆನ್ನೆನು,
ಕರ್ಮಕ್ಕೆ ಕರ್ತೃವೇ ಕಡೆಯೆನ್ನೆನು,
ಉದಾಸೀನವಿಡಿದು ಶರಣೆನ್ನೆನು ಕೂಡಲಸಂಗಮದೇವ.
ನೀ ಮಾಡಿದುಪದೇಶವು ಎನಗೀ ಪರಿಯಲಿ!
ಸಂಸಾರವ ಸವೆಯ ಬಳಸುವೆನು.
-
೩೮೨. ಕಾಯದ ಕಳವಳಕಂಜಿ ಕಾಯಯ್ಯ ಎನ್ನೆನು.
ಜೀವನೋಪಾಯಕಂಜಿ ಈಯಯ್ಯ ಎನ್ನೆನು.
'ಯದ್ಭಾವಂ ತದ್ಭವತಿ'
ಉರಿ ಬರಲಿ, ಸಿರಿ ಬರಲಿ
ಬೇಕು ಬೇಡೆನ್ನೆನಯ್ಯ!
ಆನು ನಿಮ್ಮ ಹಾರೆನು, ಮಾನವರ ಬೇಡೆನು;
ಆಣೆ, ನಿಮ್ಮಾಣೆ ಕೂಡಲಸಂಗಮದೇವ.
-
೩೮೩. ನಾಳೆ ಬಪ್ಪುದು ನಮಗಿಂದೇ ಬರಲಿ.
ಇಂದು ಬಪ್ಪುದು ನಮಗೀಗಲೇ ಬರಲಿ.
ಇದಕಾರಂಜುವರು ? ಇದಕಾರಳುಕುವರು-
'ಜಾತಸ್ಯ ಮರಣಂ ಧ್ರುವಂ' ಎಂದುದಾಗಿ ?
ನಮ್ಮ ಕೂಡಲಸಂಗಮದೇವ ಬರೆದ
ಬರಹವ ತಪ್ಪಿಸುವಡೆ ಹರಿಬ್ರಹ್ಮಾದಿಗಳಿಗಳವಲ್ಲ ?
-
೩೮೪. ಕಳ ಹೋದರೆ ಕನ್ನದುಳಿಯ ಹಿಡಿವೆ.
ಬಂದಿವಿಡಿದರೆ ನಿಮ್ಮಿಂದ ಮುಂದೆ ನಡೆವೆ,
ಮನಭೀತಿ ಮನಶಂಕೆಗೊಂಡೆನಾದರೆ,
ನಿಮ್ಮಾಣೆ ನಿಮ್ಮ ಪುರಾತರಾಣೆ.
ಆಳ್ದರ ನಡೆ ಸದಾಚಾರವೆನ್ನದಿದ್ದರೆ
ಕಟ್ಟಾಳು ಶಿಷ್ಟತನಕ್ಕೆ ಹೋಹ ಕಷ್ಟವ ನೋಡಾ
ಕೂಡಲಸಂಗಮದೇವ.
-
೩೮೫. ಜೋಳವಾಳಿಯಾನಲ್ಲ,
ವೇಳೆವಾಳಿಯವ ನಾನಯ್ಯ!
ಹಾಳುಗೆಟ್ಟೋಡುವಾಳು ನಾನಲ್ಲಯ್ಯ,
ಕೇಳು, ಕೂಡಲಸಂಗಮದೇವ,
ಮರಣವೇ ಮಹಾನವಮಿ.
-
೩೮೬. ಎನಗೆ ಜನನವಾಯಿತ್ತೆಂಬರು,
ಎನಗೆ ಜನನವಿಲ್ಲಯ್ಯ!
ಎನಗೆ ಮರಣವಾಯಿತ್ತೆಂಬರು,
ಎನಗೆ ಮರಣವಿಲ್ಲಯ್ಯ!
ಜನನವಾದರೆ ನಿಮ್ಮ ಪಾದೋದಕಪ್ರಸಾದವ ಕೊಂಬೆ.
ಮರಣವಾದರೆ ನಿಮ್ಮ ಶ್ರೀ ಚರಣವನೆಯ್ದುವೆ.
ಬಾವನ್ನದ ವೃಕ್ಷ ಊರೊಳಗಿದ್ದರೇನು ?
ಅಡವಿಯೊಳಗಿದ್ದರೇನು ?
ಪರಿಮಳವೊಂದೆ!
ಕೂಡಲಸಂಗಮದೇವ.
-
೩೮೭. ಒಡೆಯರುಳ್ಳಾವಿಂಗೆ ಕೇಡಿಲ್ಲ ಕಾಣಿರೋ
ಊರೆನ್ನದೆ ಅಡವಿಯೆನ್ನದೆ ಆಳನರಸಿ ಬಹ ಆಳ್ದರುಂಟೆ!
ಜೋಳವಾಳಿಂಗೆ ಬಿಜ್ಜಳಂಗೆ ಆಳಾದರೇನು ?
ವೇಳೆವಾಳಿಂಗೆ ಕೊಡಿಕೊಂಡಿಪ್ಪ ಕೂಡಲಸಂಗಮದೇವ!
-
೩೮೮. ಕರ್ಮವೆಂಬ ಅಂಕದೊಡನೆ ತೊಡರಿದೆ
ಬಿನ್ನಪವ ಅವಧಾರು-ನಿಮ್ಮಾಳಿನ ಭಾಷೆಯ:
ಕಡೆಗಳಕ್ಕೆ ನೂಂಕುವೆ, ಕೆಡಹುವೆನಂಕವ.
ಕರೆದಡೋಸರಿಸಿದರೆ ನಿಮ್ಮಾಳಲ್ಲ!
ಶಿವಶರಣೆಂಬ ದಂಡೆಯ ಹೂಡಿ
ಗಣಮೇಳಾಪವೆಂಬಲಗಿನಿಂದಿರಿವೆ
ಕೂಡಲಸಂಗಮದೇವ.
-
೩೮೯. ಎಲೆ ಗಂಡುಗೂಸೆ ನೀ ಕೇಳಾ!
ನಿನಗೊಬ್ಬಗೆಂದುಟ್ಟೆ ಗಂಡುಡುಗೆಯನು;
ಮತ್ತೊಮ್ಮೆಯಾನು ಗಂಡಪ್ಪೆನಯ್ಯ;
ಮತ್ತೊಮ್ಮೆಯಾನು ಹೆಣ್ಣಪ್ಪೆನಯ್ಯ!
ಕೂಡಲಸಂಗಮದೇವ,
ನಿಮಗೆ ವೀರನಪ್ಪೆ! ನಿಮ್ಮ ಶರಣರಿಗೆ ವಧುವಪ್ಪೆ!
-
೩೯೦. ಹುಟ್ಟುತ್ತ ದ್ರವ್ಯವನರಿಯದವಂಗೆ
ಐಶ್ವರ್ಯವಂತ ಮಗನಾದರೆ
ಲಕ್ಷಸಂಖ್ಯೆಯ ಹಿರಣ್ಯವ ತಂದು ಸಂತೋಷಂಬಡಿಸುವಂತೆ;
ಕಾಳಗದ ಮುಖವಾವುದೆಂದರಿಯದ ಹಂದೆ-ನೃಪಂಗೆ
ಒಬ್ಬ ಕ್ಷತ್ರಿಯನಂತಹ ಕುಮಾರ ಹುಟ್ಟಿ
ಕಿಗ್ಗಡಲ ರಕ್ತದ ಹೊನಲಲ್ಲಿ ಕಡಿದು ಮುಳುಗಾಡುವ
ಕೊಳುಗುಳವ ಕಂಡು ಪರಿಣಾಮಿಸುವಂತೆ
ಆನು ಪರಿಣಾಮಿಸುವೆನಯ್ಯ, ಕೂಡಲಸಂಗಮದೇವ,
ನೀ ಬಂದೆನ್ನ ಬೇಡಿದರೆ.
-
೩೯೧. ಒಡವೆ-ಭಂಡಾರ-ಕಡವರ-ದ್ರವ್ಯವ
ಬಡ್ಡಿಯ ವ್ಯವಹಾರಕ್ಕೆ ಕೊಟ್ಟು
ಮನೆಯ ಗೊಂಟಿನಲ್ಲಿ ಹೊಯ್ದುಕೊಂಡಿದ್ದೆನಾದರೆ
ಅದು ಎನ್ನರ್ಥವಲ್ಲ! ಅನರ್ಥವೆಂಬೆ!!
ಸಂಗಮ ದೇವ, ನೀ ಜಂಗಮರೂಪಾಗಿ ಬಂದು
ಆ ಧನವನು ನೀ ಬಲ್ಲಂತೆನ್ನ ಮುಂದೆ ಸೂರೆಗೊಳ್ಳುತ್ತಿರಲು
ನಾ ಬೇಕು-ಬೇಡೆಂದು ಮನದಲ್ಲಿ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಕಾಮನೇಮವೆಂಬ ಸಿಂಧುಬಲ್ಲಾಳನ ವಧುವ
ಸರ್ವಭುವನದೊಡೆಯ ಸಂಗಮದೇವರು ಬೇಡುವಂತಲ್ಲ-
ಎನ್ನ ಸತಿ ನೀಲಲೋಚನೆ ಪೃಥ್ವಿಗಗ್ಗಳೆ ಚೆಲುವೆ
ಆಕೆಯನು, ಸಂಗಮದೇವ, ನೀ ಜಂಗಮರೂಪಾಗಿ ಬಂದು
ಎನ್ನ ಮುಂದೆ ಸಂಗವ ಮಾಡುತ್ತಿರಲು
ಎನ್ನೊಡನಿದ್ದ ಸತಿಯೆಂದು ವಾಯಕ್ಕೆ ಮರುಗಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ ಮನದೊಡೆಯ, ನೀನೆ ಬಲ್ಲೆ!
ಪ್ರತ್ಯಕ್ಷವಾಗಿ ಸಿರಿಯಾಳ-ಚಂಗಳೆಯರ ಮನೆಗೆ ಬಂದು
ಅವರ ಮಗನ ಬೇಡುವಂತಲ್ಲ-
ಸಂಗಮ ದೇವ, ನಿಮ್ಮ ಹೆಸರ ಚಿಕ್ಕಸಂಗಯ್ಯನಿದ್ದಹನು
ನೀ ಜಂಗಮರೂಪಾಗಿ ಬಂದು ಅವನ ಹಿಡಿದು
ಎನ್ನ ಮುಂದೆ ಹೆಡಗುಡಿಯ ಕಟ್ಟಿ ಚಿನಿಖಂಡವ ಮಾಡಿ
ಬಾಣಸವ ಮಾಡುವಾಗಲು
ಎನ್ನುದರದಲ್ಲಿ ಬಂದ ಪುತ್ರನೆಂದು ವಾಯಕ್ಕೆ ಮರುಗಿದೆನಾದಡೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ, ಮನದೊಡೆಯ, ನೀನೆ ಬಲ್ಲೆ!
ಇಂತೀ ತ್ರಿವಿಧವು ಹೊರಗಣವು-
ಎನ್ನ ನೋವಿನೊಳಗಲ್ಲ! ಎನ್ನ ಬೇನೆಯೊಳಗಲ್ಲ!
ಇನ್ನು ನಾನಿದ್ದಿಹೆ-
ಕದ್ದ ಕಳ್ಳನ ಕಟ್ಟುವಂತೆ ಕಟ್ಟಿ ನೀ ಜಂಗಮರೂಪಾಗಿ ಬಂದು
ಎನ್ನಂಗದ ಮೇಲೆ ಶಸ್ತ್ರವನಿಕ್ಕಿ ನೋಡು!
ಬಸಿವ ಶೂಲಪ್ರಾಪ್ತಿಯ ಮಾಡಿ ನೋಡು!
ಸೂಜಿಯ ಮೊನೆಯಂತಿದ್ದ ಶೂಲದ ಮೇಲಿಕ್ಕಿ ನೋಡು!
ನವಖಂಡವ ಮಾಡಿ ಕಡಿಕಡಿದು ನೋಡು!
ಆ ಶೂಲವೈದೈದು ಮುಖವಾಗಿ ಹಾಯುವಾಗ ಹರಿತಿನಿಸಿ ನೋಡು!
ಎಂತೆನ್ನ ಭಂಗಬಡಿಸಿ ನೋಡಿದರೆಯೂ
ಲಿಂಗಾರ್ಚನೆಯ ಮಾಡುವುದ ಬಿಡೆ,
ಜಂಗಮದಾಸೋಹವ ಮಾಡುವುದು ಬಿಡೆ.
ಪಾದತೀರ್ಥ ಪ್ರಸಾದವ ಕೊಂಬುದ ಬಿಡೆ.
ಇಂತೀ ತ್ರಿವಿಧಕ್ಕೆ ರೋಷವ ಮಾಡಿ ಬಿಟ್ಟೆನಾದರೆ
ನಿಮ್ಮಾಣೆ, ನಿಮ್ಮ ಪ್ರಮಥರಾಣೆ!
ಇನಿತರೊಳಗೆ ತಪ್ಪುಳ್ಳಡೆ ಮೂದಲಿಸಿ ಮೂಗ ಕೊಯಿ
ಕೂಡಲಸಂಗಮದೇವ.
-
೩೯೨. ಅರ್ಥವನರ್ಥವ ಮಾಡಿ ಕೋಳಾಹಳಂಗೈವುತ್ತಿರಲಿ;
ಹುಟ್ಟಿದ ಮಕ್ಕಳ ನವಖಂಡವ ಮಾಡಿ ಕಡಿವುತ್ತಿರಲಿ!
ಮುಟ್ಟಿದ ಸ್ತ್ರೀಯ ಕಣ್ಣ ಮುಂದೆ ಅಭಿಮಾನಂಗೊಂಡು ನೆರೆವುತ್ತಿರಲಿ.
ಇಂತೀ ತ್ರಿವಿಧವು ಹೊರಗಣವು.
ಇನ್ನೆನ್ನಂಗದ ಮೇಲೆ ಬರಲಿ, ಹಿಡಿಖಂಡವ ಕೊಯ್ಯಲಿ.
ಇಕ್ಕುವ ಶೂಲ ಪ್ರಾಪ್ತಿಸಲಿ
ಹಾಕೊಂದೆಸೆ ಹನ್ನೊಂದೆಸೆಯಾಗಿ ಮಾಡುತ್ತಿರಲಿ,
ಮತ್ತೆಯೂ ಲಿಂಗಾರಾಧನೆಯ ಮಾಡುವೆ,
ಜಂಗಮಾರಾಧನೆಯ ಮಾಡುವೆ,
ಪ್ರಸಾದಕ್ಕೆ ತಪ್ಪೆ.
ಇಂತಪ್ಪ ಭಾಷೆ ಕಿಂಚಿತ್ತು ಹುಸಿಯಾದರೆ
ನೀನಂದೇ ಮೂಗ ಕೊಯಿ ಕೂಡಲಸಂಗಮದೇವ.
-
೩೯೩. ತನುವ ಬೇಡಿದಡೀವೆ, ಮನವ ಬೇಡಿದಡೀವೆ,
ಧನವ ಬೇಡಿದಡೀವೆ; ಬೇಡು ಬೇಡೆಲೆ ಹಂದೆ.
ಕಣ್ಣ ಬೇಡಿದಡೀವೆ, ತಲೆಯ ಬೇಡಿದಡೀವೆ.
ಕೂಡಲ ಸಂಗಮ ದೇವ,
ನಿಮಗಿತ್ತು ಶುದ್ಧನಾಗಿಪ್ಪೆ ನಿಮ್ಮ ಪುರಾತರ ಮನೆಯಲ್ಲಿ.
-
೩೯೪. ಓಡದಿರೋಡದಿರು ನಿನ್ನ ಬೇಡುವವ ನಾನಲ್ಲ!
ಶಿವನೇ, ನೋಡುವೆ ಕಣ್ಣ ತುಂಬ! ಆಡಿ-ಪಾಡಿ ನಲಿದಾಡುವೆ!
ಬೇಡೆನ್ನ ಕೂಡೆ ಮಾತನಾಡಲಾಗದೆ ?
ಕೂಡಲಸಂಗಮದೇವ, ನೀನಾಡಿಸುವ ಗೊಂಬೆ ನಾನು!
-
೩೯೫. ನಾನು ಆರಂಬವ ಮಾಡುವೆನಯ್ಯ ಗುರುಪೂಜೆಗೆಂದು.
ನಾನು ಬೆವಹಾರವ ಮಾಡುವೆನಯ್ಯ ಲಿಂಗಾರ್ಚನೆಗೆಂದು
ನಾನು ಪರಸೇವೆಯ ಮಾಡುವೆನಯ್ಯ
ಜಂಗಮದಾಸೋಹಕ್ಕೆಂದು.
ನಾನಾವಾವ ಕರ್ಮಂಗಳ ಮಾಡಿದಡೆಯೂ
ಆ ಕರ್ಮಫಲಭೋಗವ ನೀ ಕೊಡುವೆಯೆಂಬುದ
ನಾನು ಬಲ್ಲೆನು.
ನೀ ಕೊಟ್ಟ ದ್ರವ್ಯದ ನಿಮಗಲ್ಲದೆ
ಮತ್ತೊಂದು ಕ್ರೀಯ ಮಾಡೆನು.
ನಿಮ್ಮ ಸೊಮ್ಮ ನಿಮಗೆ ಸಲ್ಲಿಸುವೆನು
ನಿಮ್ಮಾಣೆ ಕೂಡಲಸಂಗಮದೇವ.
-
೩೯೬. ಹೊತ್ತಾರೆಯೆದ್ದು ಕಣ್ಣ ಹೊಸೆವುತ್ತ
ಎನ್ನ ಒಡಲಿಂಗೆ, ಎನ್ನ ಒಡವೆಗೆ,
ಎನ್ನ ಮಡದಿ ಮಕ್ಕಳಿಗೆಂದು ಕುದಿದೆನಾದರೆ
ಎನ್ನ ಮನಕ್ಕೆ ಮನವೇ ಸಾಕ್ಷಿ!
"ಆಶನೇ ಶಯನೇ ಯಾನೇ
ಸಂಪರ್ಕೇ ಸಹಭೋಜನೇ,
ಸಂಚರಂತಿ ಮಹಾಘೋರೇ
ನರಕೇ ಯಾವದಕ್ಷಯೇ"
ಎಂಬ ಶ್ರುತಿಯ ಬಸವಣ್ಣನೋದುವನು.
ಭವಿಬಿಜ್ಜಳನ ಗದ್ದುಗೆಯ ಕೆಳಗೆ ಕುಳ್ಳಿರ್ದು
ಓಲೈಸಿಹೆನೆಂದು ನುಡಿವರಯ್ಯ ಪ್ರಮಥರು;
ಕೊಡುವೆನ್ನುತ್ತರವನವರಿಗೆ - ಕೊಡಲಮ್ಮೆ,
ಪ್ರತ್ಯುತ್ತರ ನಾಯಕನರಕವೆಂಬುದುಂಟಾಗಿ,
ಹೊಲೆಹೊಲೆಯರ ಮನೆಯ ಹೊಕ್ಕಾದರೆಯು,
ಸಲೆ ಕೈಕೂಲಿಯ ಮಾಡಿಯಾದರೆಯು,
ನಿಮ್ಮ ನಿಲವಿಂಗೆ ಕುದಿವೆನಲ್ಲದೆ,
ಎನ್ನ ಒಡಲವಸರಕ್ಕೆ ಕುದಿದೆನಾದರೆ
ತಲೆದಂಡ ಕೂಡಲಸಂಗಮದೇವ.
-
೩೯೭.
ಅಣ್ಣ, ತಮ್ಮ, ಹೆತ್ತಣ್ಣ ಗೋತ್ರವಾದರೇನು
ಲಿಂಗಸಾಹಿತ್ಯವಿಲ್ಲದವರ ಎನ್ನವರೆನ್ನೆನಯ್ಯ.
ನಂಟು-ಭಕ್ತಿ-ನಾಯಕನರಕ ಕೂಡಲಸಂಗಮದೇವ.
-
೩೯೮.
ಹೊನ್ನು-ಹೆಣ್ಣು-ಮಣ್ಣೆಂಬ
ಕರ್ಮದ ಬಲೆಯಲ್ಲಿ ಸಿಲುಕಿ
ವೃಥಾ ಬರುದೊರೆ ಹೋಹ ಕೆಡುಕ ಹಾರುವ ನಾನಲ್ಲ.
ಹಾರುವೆನಯ್ಯ ಭಕ್ತರ ಬರವ ಗುಡಿಗಟ್ಟಿ!
ಹಾರುವೆನಯ್ಯ ಶರಣರ ಬರವ ಗುಡಿಗಟ್ಟಿ!
ಕೂಡಲಸಂಗಮದೇವನು
ವಿಪ್ರಕರ್ಮವ ಬಿಡಿಸಿ
ಅಶುದ್ಧನ ಶುದ್ಧನ ಮಾಡಿದನಾಗಿ.
-
೩೯೯.
ವೇದಕ್ಕೆ ಒರೆಯ ಕಟ್ಟುವೆ!
ಶಾಸ್ತ್ರಕ್ಕೆ ನಿಗಳವನಿಕ್ಕುವೆ!
ತರ್ಕದ ಬೆನ್ನ ಬಾರನೆತ್ತುವೆ!
ಆಗಮದ ಮೂಗ ಕೊಯ್ವೆ!
ನೋಡಯ್ಯ, ಮಹಾದಾನಿ ಕೂಡಲಸಂಗಮದೇವ,
ಮಾದರ ಚೆನ್ನಯ್ಯನ ಮನೆಯ ಮಗ ನಾನಯ್ಯ!
-
೪೦೦.
ಕಳ್ಳ, ಬಂದಿಕಾರ, ಹಾವಾಡಿಗ, ಹಾದರಿಗ,
ಬಂಟನೋಲೆಯಕಾರನೆಂದೆನಾದರೆ,
ನೀ ಮುಂತಾಗಿ ಬಂದ ಭಕ್ತರ ನೀನೆನ್ನದಿದ್ದರೆ,
ಅದೇ ದ್ರೋಹ!
ನಡೆ-ನುಡಿ ಹುಸಿಯುಂಟಾದರೆ
ಕೂಡಲಸಂಗನ ತೋರಿದ ಚೆನ್ನಬಸವಣ್ಣನಾಣೆ.
-
೪೦೧.
ಒಡೆಯರೊಡವೆಯ ಕೊಂಡರೆ
ಕಳ್ಳಂಗಳಲಾಯಿತ್ತೆಂಬ ಗಾದೆಯೆನಗಿಲ್ಲಯ್ಯ.
ಇಂದೆನ್ನ ವಧುವ, ನಾಳೆನ್ನ ಧನವ,
ನಾಡಿದೆನ್ನ ತನುವ ಬೇಡರೇಕಯ್ಯ ?
ಕೂಡಲಸಂಗಮದೇವ, ಆನು ಮಾಡಿದುದಲ್ಲದೆ
ಬಯಸಿದ ಬಯಕೆ ಸಲುವುದೇ ಅಯ್ಯ ?
-
೪೦೨.
ಸಮಚಿತ್ತವೆಂಬ ನೇಮದ ಹಲಗೆಯ ಹಿಡಿದು,
ಶಿವಚಿತ್ತವೆಂಬ ಕೂರಲಗ ಕೊಂಡು
ಶರಣಾರ್ಥಿಯೆಂಬ ಶ್ರವಗಲಿತಡೆ
ಆಳುತನಕ್ಕೆ ದೆಸೆಯಪ್ಪೆ ನೋಡಾ!
ಮಾರಂಕ-ಜಂಗಮ ಮನೆಗೆ ಬಂದಲ್ಲಿ
ಇದಿರೆತ್ತಿ ನಡೆವುದು;
ಕೂಡಲಸಂಗಮದೇವನನೊಲಿಸುವಡಿದು ಚಿಹ್ನ.
-
೪೦೩.
ಅಟ್ಟಟ್ಟಿಕೆಯ ಮಾತನಾಡಲದೇಕೋ ?
ಮುಟ್ಟಿ ಬಂದುದಕ್ಕಂಜಲದೇಕೋ ?
ಕಾದಿದಲ್ಲದೆ ಮಾಣೆನು,
ಓಡಿದರೆ ಭಂಗ ಹಿಂಗದಾಗಿ;
ಕೂಡಲಸಂಗಮದೇವ ಎನ್ನ ಭಂಗ ನಿಮ್ಮದಾಗಿ!
-
೪೦೪.
ನೀನಿರಿಸಿದ ಮನದಲ್ಲಿ ನಾನಂಜೆನಯ್ಯ.
ಮನವು ಮಹಾಘನಕ್ಕೆ ಶರಣಾಗತಿವೊಕ್ಕುದಾಗಿ!
ನೀನಿರಿಸಿದ ಧನದಲ್ಲಿ ನಾನಂಜೆನಯ್ಯ,
ಧನವು ಸತಿಸುತಮಾತಾಪಿತರಿಗೆ ಹೋಗದಾಗಿ!
ನೀನಿರಿಸಿದ ತನುವಿನಲ್ಲಿ ನಾನಂಜೆನಯ್ಯ,
ಸರ್ವಾರ್ಪಿತದಲ್ಲಿ ತನು ನಿಯತಪ್ರಸಾದಭೋಗಿಯಾಗಿ!
ಇದು ಕಾರಣ ವೀರಧೀರ ಸಮಗ್ರನಾಗಿ
ಕೂಡಲಸಂಗಮದೇವಯ್ಯ ನಿಮಗಾನಂಜೆನು!
-
೪೦೫.
ಬತ್ತೀಸಾಯುಧದಲ್ಲಿ ಅಭ್ಯಾಸವ ಮಾಡಿದರೇನು ?
ಹಗೆಯ ಕೊಲುವಡೆ ಒಂದಲಗು ಸಾಲದೆ ?
ಲಿಂಗವ ಗೆಲುವಡೆ "ಶರಣಸತಿ ಲಿಂಗಪತಿ"
ಎಂಬಲಗು ಸಾಲದೆ ?
ಎನಗೆ ನಿನಗೆ ಜಂಗಮಪ್ರಸಾದವೆಂಬಲಗು ಸಾಲದೆ
ಕೂಡಲಸಂಗಮದೇವ ?
-
೪೦೬.
ಕೊಲ್ಲೆನಯ್ಯ ಪ್ರಾಣಿಗಳ,
ಮೆಲ್ಲೆನಯ್ಯ ಬಾಯಿಚ್ಚೆಗೆ,
ಒಲ್ಲೆನಯ್ಯ ಪರಸತಿಯರ ಸಂಗವ,
ಬಲ್ಲೆನಯ್ಯ ಮುಂದೆ ತೊಡಕುಂಟೆಂಬುದ!
ಬಳ್ಳದ ಬಾಯಂತೆ ಒಂದೇ ಮನವ ಮಾಡಿ
ನಿಲ್ಲೆಂದು ನಿಲಿಸಯ್ಯ ಕೂಡಲಸಂಗಮದೇವ.
-
೪೦೭.
ಆನೆ ಅಂಕುಶಕ್ಕಂಜುವುದೆ ಅಯ್ಯ,
ಮಾಣದೆ ಸಿಂಹದ ನಖವೆಂದಂಜುವುದಲ್ಲದೆ ?
ಆನೀ ಬಿಜ್ಜಳಂಗಂಜುವೆನೇ ಅಯ್ಯ,
ಕೂಡಲಸಂಗಮದೇವ,
ನೀನು ಸರ್ವಜೀವದಯಾಪಾರಿಯಾದ ಕಾರಣ
ನಿಮಗಂಜುವೆನಲ್ಲದೆ !?
-
೪೦೮. ಬಂದಹೆನೆಂದು ಬಾರದಿದ್ದರೆ
ಬಟ್ಟೆಗಳ ನೋಡುತ್ತಿದ್ದೆನಯ್ಯ!
ಇನ್ನಾರನಟ್ಟುವೆ ? ಇನ್ನಾರನಟ್ಟುವೆ ?
ಇನ್ನಾರ ಪಾದವ ಹಿಡಿವೆನಯ್ಯ ?
ಕೂಡಲಸಂಗನ ಶರಣರು ಬಾರದಿದ್ದರೆ
ಅಟ್ಟುವೆನೆನ್ನ ಪ್ರಾಣವನು!
-
೪೦೯. ಜಗದಗಲ ಮುಗಿಲಗಲ
ಮಿಗೆಯಗಲ ನಿಮ್ಮಗಲ!
ಪಾತಾಳದಿಂದವತ್ತತ್ತ ನಿಮ್ಮ ಶ್ರೀಚರಣ!
ಬ್ರಹ್ಮಾಂಡದಿಂದವತ್ತತ್ತ ನಿಮ್ಮ ಶ್ರೀಮಕುಟ!
ಅಗಮ್ಯ ಅಪ್ರಮಾಣ
ಅಗೋಚರ ಅಪ್ರತಿಮಲಿಂಗವೇ,
ಕೂಡಲಸಂಗಮದೇವಯ್ಯ,
ಎನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ.
-
೪೧೦.
ನಿಷ್ಠೆಯಿಂದ ಲಿಂಗವ ಪೂಜಿಸಿ,
ಮತ್ತೊಂದು ಪಥವನರಿಯದ ಶರಣರು,
ಸರ್ಪನ ಹೆಡಯ ಮಾಣಿಕದ ಮಕುಟದಂತಿಪ್ಪರು ಭೂಷಣರಾಗಿ!
ದರ್ಪಣದೊಳಗಣ ಪ್ರತಿಬಿಂಬದಂತಿಪ್ಪರು
ಕೂಡಲಸಂಗಮದೇವ, ನಿಮ್ಮ ಶರಣರು!
-
೪೧೧.
ಶಿವಲೋಕಕ್ಕೆ ಸರಿ ಬೇರೆ ಲೋಕವಿಲ್ಲ!
ಶಿವಮಂತ್ರಕ್ಕೆ ಸರಿ ಬೇರೆ ಮಂತ್ರವಿಲ್ಲ!
ಜಗಕ್ಕೆ ಇಕ್ಕಿದೆ ಮುಂಡಿಗೆಯ!
ಎತ್ತಿಕೊಳ್ಳಿ, ಕೂಡಲಸಂಗಯ್ಯನೊಬ್ಬನೇ ದೈವವೆಂದು!
-
೪೧೨.
ವೇದ ನಡನಡುಗಿತ್ತು.
ಶಾಸ್ತ್ರವಗಲಿ ಕೆಲಕ್ಕೆ ಸಾರಿದ್ದುದಯ್ಯ,
ತರ್ಕ ತರ್ಕಿಸಲರಿಯದೆ ಮೂಗುವಟ್ಟಿದ್ದಿತಯ್ಯ,
ಆಗಮ ಹೊರತೊಲಗಿ ಆಗಲಿದ್ದಿತಯ್ಯ,
ನಮ್ಮ ಕೂಡಲಸಂಗಯ್ಯನು
ಚೆನ್ನಯ್ಯನ ಮನೆಯಲುಂಡ ಕಾರಣ!
-
೪೧೩.
ಆರು ಮುನಿದು ನಮ್ಮನೇನ ಮಾಡುವರು ?
ಊರು ಮುನಿದು ನಮ್ಮನೆಂತು ಮಾಡುವರು ?
ನಮ್ಮ ಕುನ್ನಿಗೆ ಕೂಸ ಕೊಡಬೇಡ!
ನಮ್ಮ ಸೊಣಗಂಗೆ ತಣಿಗೆಯಲ್ಲಿಕ್ಕಬೇಡ!
ಆನೆಯ ಮೇಲೆ ಹೋಹನ ಶ್ವಾನ ಕಚ್ಚಬಲ್ಲುದೆ ?
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ ?
-
೪೧೪.
ನ್ಯಾಯನಿಷ್ಠುರ!
ದಾಕ್ಷಿಣ್ಯಪರ ನಾನಲ್ಲ.
ಲೋಕವಿರೋಧಿ!
ಶರಣನಾರಿಗಂಜುವನಲ್ಲ,
ಕೂಡಲಸಂಗಮದೇವರ ರಾಜತೇಜದಲ್ಲಿಪ್ಪೆನಾಗಿ!
-
೪೧೫.
ಊರ ಮುಂದೆ
ಹಾಲ ಹಳ್ಳ ಹರಿಯುತ್ತಿರಲು ?
ಓರೆಯಾವಿನ ಬೆನ್ನ ಹರಿಯಲದೇಕಯ್ಯ ?
ಲಜ್ಜೆಗೆಡಲೇಕೆ ? ನಾಣುಗೆಡಲೇಕೆ ?
ಕೂಡಲಸಂಗಮದೇವಯ್ಯನುಳ್ಳನ್ನಕ
ಬಿಜ್ಜಳನ ಭಂಡಾರವೆನಗೇಕಯ್ಯ ?
-
೪೧೬.
ಕಂಡುದಕ್ಕೆಳೆಸೆನೆನ್ನ ಮನದಲ್ಲಿ;
ನೋಡಿ ಸೋಲೆನೆನ್ನ ಕಂಗಳಲ್ಲಿ;
ಆಡಿ ಹುಸಿಯನೆನ್ನ ಜಿಹ್ವೆಯಲ್ಲಿ;
ಕೂಡಲಸಂಗಮದೇವ,
ನಿಮ್ಮ ಶರಣನ ಪರಿ ಇಂತುಟಯ್ಯ.
-
೪೧೭.
ಆಪ್ಯಾಯನಕ್ಕೆ ನೀಡುವೆ:
ಲಾಂಛನಕ್ಕೆ ಶರಣೆಂಬೆ.
ಲಾಂಛನಕ್ಕೆ ತಕ್ಕ ಆಚಾರವಿಲ್ಲದಿದ್ದರೆ
ನೀ ಸಾಕ್ಷಿಯಾಗಿ ಛೀಯೆಂಬೆನು.
-
೪೧೮.
ದಾಸನಂತೆ ತವನಿಧಿಯ ಬೇಡುವನಲ್ಲ,
ಚೋಳನಂತೆ ಹೊನ್ನ ಮಳೆಯ ಕರಸೆಂಬುವನಲ್ಲ.
ಅಂಜದಿರು, ಅಂಜದಿರು!
ಅವರಂದದವ ನಾನಲ್ಲ!
ಎನ್ನ ತಂದೆ ಕೂಡಲಸಂಗಮದೇವ,
ಸದ್ಭಕ್ತಿಯನೆ ಕರಣಿಸೆನಗೆ.
-
೪೧೯.
ಲಿಂಗದಲ್ಲಿ ಸಮ್ಯಕ್ಕರು,
ಲಿಂಗದಲ್ಲಿ ಸದರ್ಥರು,
ಲಿಂಗದ ಸೊಮ್ಮು-ಸಂಬಂಧವರಿತ
ಸ್ವಾಮಿಭೃತ್ಯರೆಲ್ಲರು ನಿಮ್ಮ ಬೇಡೆನಂಜದಿರಿ.
ಎನಗೆ ಮರ್ತ್ಯಲೋಕದ ಮಹಾಗಣಂಗಳುಂಟು.
ಇದು ಕಾರಣ, ಕೂಡಲಸಂಗಮದೇವರ ಲೋಕವ
ಹಂಚಿಕೊಳ್ಳಿ ನಿಮನಿಮಗೆ.
-
೪೨೦.
ಕಲಿಯ ಕಯ್ಯ ಕೈದುವನಂತಿರಬೇಕಯ್ಯ
ಎಲುದೋರ ಸರಸವಾಡಿದರೆ ಸೈರಿಸಬೇಕಯ್ಯ,
ರಣದಲ್ಲಿ ತಲೆ ಹರಿದು ನೆಲಕ್ಕೆ ಬಿದ್ದು ಬೊಬ್ಬಿಡಲು
ಅದಕ್ಕೆ ಒಲಿವ ಕೂಡಲಸಂಗಮದೇವ.
-
೪೨೧.
ಸೂಳೆಗೆ ಮೆಚ್ಚಿ
ಸೂಳೆಯ ಬಂಟರೆಂಜಲ ತಿಂಬುದೀ ಲೋಕವೆಲ್ಲ!
ಅಡಗ ವೆಚ್ಚಿ
ಸೊಣಗನೆಂಜಲ ತಿಂಬುದೀ ಲೋಕವೆಲ್ಲ!
ಲಿಂಗವ ಮೆಚ್ಚಿ
ಜಂಗಮಪ್ರಸಾದವ ಕೊಂಬರ ನೋಡಿ ನಗುವವರ
ಕುಂಭೀಪಾಕ ನಾಯಕನರಕದಲಿಕ್ಕುವ
ಕೂಡಲಸಂಗಮದೇವ.
-
೪೨೨.
ಹೊಲೆಯುಂಟೆ ಲಿಂಗವಿದ್ದೆಡೆಯಲ್ಲಿ ?
ಕುಲವುಂಟೇ ಜಂಗಮವಿದ್ದೆಡೆಯಲ್ಲಿ ?
ಎಂಜಲುಂಟೇ ಪ್ರಸಾದವಿದ್ದೆಡೆಯಲ್ಲಿ ?
ಅಪವಿತ್ರದ ನುಡಿಯ ನುಡಿವ ಸೂತಕವೆ ಪಾತಕ.
ನಿಷ್ಕಳಂಕ, ನಿಜೈಕ್ಯ, ತ್ರಿವಿಧನಿರ್ಣಯ
ಕೂಡಲಸಂಗಮದೇವ, ನಿಮ್ಮ ಶರಣರಿಗಲ್ಲದಿಲ್ಲ.
-
೪೨೩.
ಹುತ್ತದ ಮೇಲಣ ರಜ್ಜು ಮುಟ್ಟಿದರೆ
ಸಾವರು ಶಂಕಿತರಾದವರು!
ಸರ್ಪದಷ್ಟವಾದರೆಯೂ
ಸಾಯರು ನಿಶ್ಶಂಕಿತರಾದವರು!
ಕೂಡಲಸಂಗಮದೇವಯ್ಯ,
ಶಂಕಿತಂಗೆ ಪ್ರಸಾದ ಕಾಳಕೂಟವಿಷವು!
-
೪೨೪.
ನಂಬಿದರೆ ಪ್ರಸಾದ
ನಂಬದಿದ್ದರೆ ವಿಷವು!
ತುಡುಕಬಾರದು ನೋಡಾ ಲಿಂಗನ ಪ್ರಸಾದ!
ಸಂಗನ ಪ್ರಸಾದ!
ಕೂಡಲಸಂಗನ ಪ್ರಸಾದ ಸಿಂಗಿ-ಕಾಳಕೂಟ ವಿಷವು.
-
೪೨೫.
ಪಂಡಿತನಾಗಲಿ ಮೂರ್ಖನಾಗಲಿ
ಸಂಚಿತಕರ್ಮ ಉಂಡಲ್ಲದೆ ಬಿಡದು.
ಪ್ರಾರಬ್ಧಕರ್ಮ ಭೋಗಿಸಿದಲ್ಲದೆ ಹೋಗದು-
ಎಂದು ಶ್ರುತಿ ಸಾರುತ್ತೈದಾವೆ-
ನೋಡಾ, ತಾನಾವ ಲೋಕದೊಳಗಿದ್ದರೆಯು ಬಿಡದು.
ಕರ್ಮಫಲಗೂಡಿ ಕೂಡಲಸಂಗಮದೇವಂಗೆ
ಆತ್ಮನೈವೇದ್ಯವ ಮಾಡಿದವನೇ ಧನ್ಯನು!
-
೪೨೬.
ಒಲ್ಲೆನೆಂಬುದು ವೈರಾಗ್ಯ,
ಒಲಿವೆನೆಂಬುದು ಕಾಯಗುಣ.
ಆವ ಪದಾರ್ಥವಾದರೇನು
ತಾನಿದ್ದೆಡೆಗೆ ಬಂದುದು ಲಿಂಗಾರ್ಪಿತವ ಮಾಡಿ
ಭೋಗಿಸುವುದೇ ಆಚಾರ!
ಕೂಡಲಸಂಗಮದೇವನ
ಒಲಿಸ ಬಂದ ಪ್ರಸಾದಕಾಯವ ಕೆಡಿಸಲಾಗದು.
-
೪೨೭.
ಒಪ್ಪವ ನುಡಿವಿರಯ್ಯ ತುಪ್ಪವ ತೊಡೆದಂತೆ!
ಶರಣ ತನ್ನ ಮೆರೆವನೇ ಬಿನ್ನಾಣಿಯಂತೆ ?
ಕೂಡಲಸಂಗನ ಪ್ರಸಾದದಿಂದ ಬದುಕುವನಲ್ಲದೆ
ತನ್ನ ಮೆರೆವನೇ ?
-
೪೨೮.
ದಾಸೋಹವೆಂಬ ಸೋಹೆಗೊಂಡು ಹೋಗಿ
ಗುರುವ ಕಂಡೆ, ಲಿಂಗವ ಕಂಡೆ,
ಜಂಗಮವ ಕಂಡೆ, ಪ್ರಸಾದವ ಕಂಡೆ
ಇಂತೀ ಚತುರ್ವಿಧ ಸಂಪನ್ನನಾದೆ ಕಾಣಾ
ಕೂಡಲಸಂಗಮದೇವ.
-
೪೨೯.
ಕಿವಿಯ ಸೂತಕ ಹೋಯಿತ್ತು
ಸದ್ಗುರುವಿನ ವಚನದಿಂದ!
ಕಂಗಳ ಸೂತಕ ಹೋಯಿತ್ತು
ಸದ್ಭಕ್ತರ ಕಂಡೆನಾಗಿ!
ಕಾಯದ ಸೂತಕ ಹೋಯಿತ್ತು
ನಿಮ್ಮ ಚರಣವ ಮುಟ್ಟಿದೆನಾಗಿ!
ಬಾಯ ಸೂತಕ ಹೋಯಿತ್ತು
ನಿಮ್ಮ ಒಕ್ಕುದ ಕೊಂಡೆನಾಗಿ!
ನಾನಾ ಸೂತಕ ಹೋಯಿತ್ತು
ನಿಮ್ಮ ಶರಣರನುಭಾವಿಯಾಗಿ!
ಕೂಡಲಸಂಗಮದೇವ ಕೇಳಯ್ಯ
ಎನ್ನ ಮನದ ಸೂತಕ ಹೋಯಿತ್ತು
ನೀವಲ್ಲದಿಲ್ಲೆಂದರಿದೆನಾಗಿ!
-
೪೩೦.
ಮೋನದಲುಂಬುದು ಆಚಾರವಲ್ಲ,
ಲಿಂಗಾರ್ಪಿತವ ಮಾಡಿದ ಬಳಿಕ
ತುತ್ತಿಗೊಮ್ಮೆ ಶಿವಶರಣೆನ್ನುತ್ತಿರಬೇಕು.
ಕರಣವೃತ್ತಿಗಳಡಗುವವು,
ಕೂಡಲಸಂಗನ ನೆನೆವುತ್ತ ಉಂಡರೆ.
-
೪೩೧.
ಶಿವಾಚಾರವೆಂಬುದೊಂದು ಬಾಳ ಬಾಯಿಧಾರೆ
ಲಿಂಗ ಮೆಚ್ಚಬೇಕು; ಜಂಗಮ ಮೆಚ್ಚಬೇಕು
ಪ್ರಸಾದ ಮೆಚ್ಚಿ ತನ್ನಲ್ಲಿ ಸ್ವಾಯತವಾಗಿರಬೇಕು.
ಬಿಚ್ಚಿ ಬೇರಾದರೆ ಮೆಚ್ಚ ನಮ್ಮ ಕೂಡಲಸಂಗಮದೇವ.
-
೪೩೨.
ಆವಾವ ಭಾವದಲ್ಲಿ ಶಿವನ ನಂಬಿದ ಶರಣರು
ಎಂತಿದ್ದರೇನಯ್ಯ ?
ಆವಾವ ಭಾವದಲ್ಲಿ ಶಿವನ ನಂಬಿದ ಮಹಿಮರು
ಎಂತಿದ್ದರೇನಯ್ಯ ?
ಸುಚರಿತ್ರರೆಂತಿದ್ದರೇನಯ್ಯ ?
ಅವಲೋಹವ ಕಳೆವ
ಪರುಷವೆಂತಿದ್ದರೇನಯ್ಯ ?
ಕೂಡಲಸಂಗನ ಶರಣರು ರಸದ ವಾರಿಧಿಗಳು
ಎಂತಿದ್ದರೇನಯ್ಯ ?
-
೪೩೩.
ನಡೆ ಚೆನ್ನ, ನುಡಿ ಚೆನ್ನ, ಎಲ್ಲಿ ನೋಡಿದರಲ್ಲಿ ಚೆನ್ನ!
ಪ್ರಮಥರೊಳಗೆ ಚೆನ್ನ, ಪುರಾತರೊಳಗೆ ಚೆನ್ನ!
ಪ್ರಸಾದಿಗಳೊಳಗೆ ಚೆನ್ನ!
ಸವಿದು ನೋಡಿ ಅಂಬಲಿ ರುಚಿಯಾಯಿತ್ತೆಂದು
ಕೂಡಲಸಂಗಮದೇವರಿಗೆ ಬೇಕಾಯಿತ್ತೆಂದು
ಕೈದೆಗೆದ ನಮ್ಮ ಚೆನ್ನ!
-
೪೩೪.
ಲಿಂಗವಿಕಾರಿಗೆ ಅಂಗವಿಕಾರವೆಂಬುದಿಲ್ಲ.
ಜಂಗಮವಿಕಾರಿಗೆ ಧನವಿಕಾರವೆಂಬುದಿಲ್ಲ.
ಪ್ರಸಾದವಿಕಾರಿಗೆ ಮನವಿಕಾರವೆಂಬುದಿಲ್ಲ.
ಇಂತೀ ತ್ರಿವಿಧಗುಣವನರಿದಾತನು
ಅಚ್ಚಲಿಂಗೈಕ್ಯನು ಕೂಡಲಸಂಗಮದೇವ.
-
೪೩೫.
ಪ್ರಾಣಲಿಂಗಪ್ರತಿಗ್ರಾಹಕನಾದ ಬಳಿಕ
ಲಿಂಗವಿರಹಿತವಾಗಿ ನಡೆವ ಪರಿಯೆಂತೊ ?
ಲಿಂಗವಿರಹಿತವಾಗಿ ನುಡಿವ ಪರಿಯೆಂತೊ ?
ಪಂಚೇಂದ್ರಿಯಸುಖವನು
ಲಿಂಗವಿರಹಿತವಾಗಿ ಭುಂಜಿಸಲಾಗದು!
"ಲಿಂಗವಿರಹಿತವಾಗಿ ಉಗುಳ ನುಂಗಲಾಗದು!"
ಇಂತೆಂದುದು ಕೂಡಲಸಂಗನ ವಚನ.
-
೪೩೬.
ಹತ್ತು ಸಾವಿರ ಗೀತವ ಹಾಡಿ ಅರ್ಥವಿಟ್ಟಲ್ಲಿ ಫಲವೇನು
ಮುಟ್ಟುವ ತೆರನನರಿಯದನ್ನಕ ?
ಕಟ್ಟಿದರೇನು ಬಿಟ್ಟರೇನು
ಮನವು ಲಿಂಗದಲ್ಲಿ ಮುಟ್ಟದನ್ನಕ ?
ಮಾತಿನಲೆ ಒಲಿಸಿ ಮಹತ್ತಪ್ಪ ಲಿಂಗವ ಕಂಡೆನೆಂಬ
ಪಾತಕರ ಮೆಚ್ಚ ನಮ್ಮ ಕೂಡಲಸಂಗಮದೇವ
-
೪೩೭.
ಶ್ವಾನಜ್ಞಾನ, ಗಜಜ್ಞಾನ, ಕುಕ್ಕುಟಜ್ಞಾನವೆಂಬ
ಜ್ಞಾನತ್ರಯಂಗಳೇಕಾದವು ?!
ಕೂಡಲಸಂಗಮದೇವ,
ನಿಮ್ಮನರಿಯದ ಜ್ಞಾನವೆಲ್ಲ ಅಜ್ಞಾನ!
-
೪೩೮.
ಕಬ್ಬುನ ಪರುಷವೇದಿಯಾದರೇನು ?!
ಕಬ್ಬುನ ಹೊನ್ನಾಗದೊಡೆ ಪರುಷವದೇಕೋ ?
ಮನೆಯೊಳಗೆ ಕತ್ತಲೆ ಹರಿಯದೊಡೆ
ಆ ಜ್ಯೋತಿಯದೇಕೋ ?
ಕೂಡಲಸಂಗಮದೇವರ ಮನಮುಟ್ಟಿ ಪೂಜಿಸಿ
ಕರ್ಮ ಹರಿಯದೊಡೆ ಆ ಪೂಜೆಯದೇಕೋ ?
-
೪೩೯.
ಅಹಂಕಾರ ಮನವನಿಂಬುಗೊಂಡಲ್ಲಿ
ಲಿಂಗ ತಾನೆಲ್ಲಿಪ್ಪುದೋ ?
ಅಹಂಕಾರಕ್ಕೆ ಎಡೆಗುಡದೆ
ಲಿಂಗತನುವಾಗಿರಬೇಕು!
ಅಹಂಕಾರರಹಿತನಾದಲ್ಲಿ
ಸನ್ನಿಹಿತ ಕಾಣಾ ಕೂಡಲಸಂಗಮದೇವ.
-
೪೪೦.
ನುಡಿದರೆ ಮುತ್ತಿನ ಹಾರದಂತಿರಬೇಕು!
ನುಡಿದರೆ ಮಾಣಿಕ್ಯದ ದೀಪ್ತಿಯಂತಿರಬೇಕು!
ನುಡಿದರೆ ಸ್ಫಟಿಕದ ಶಲಾಕೆಯಂತಿರಬೇಕು!
ನುಡಿದರೆ ಲಿಂಗ ಮೆಚ್ಚಿ ಅಹುದೆನಬೇಕು ?
ನುಡಿಯೊಳಗಾಗಿ ನಡೆಯದಿದ್ದರೆ
ಕೂಡಲಸಂಗಮದೇವನೆಂತೊಲಿವನಯ್ಯ ?
-
೪೪೧.
ಅರಿದರಿದು ಸಮಗಾಣಿಸಬಾರದು ?
ತ್ರಾಸಿನ ಕಟ್ಟಳೆಯಂತಿನಿತು ವೆಗ್ಗಳವಾದರೆ
ಈಶ್ವರನು ಒಡೆಯಿಕ್ಕದೆ ಮಾಣುವನೆ ?
ಪಾತ್ರಾಪಾತ್ರವೆಂದು ಕಂಡರೆ
ಶಿವನೆಂತು ಮೆಚ್ಚುವನೊ ?
ಜೀವಜೀವಾತ್ಮವ ಸರಿಯೆಂದು ಕಂಡರೆ
ಸಮವೇದಿಸದಿಪ್ಪನೇ ಶಿವನು ?
ತನ್ನ ಮನದಲ್ಲಿ
"ಯತ್ರ ಜೀವಸ್ತತ್ರ ಶಿವ"ನೆಂದು
ಸರ್ವಜೀವದಯಾಪಾರಿಯಾದರೆ
ಕೂಡಲಸಂಗಮದೇವನು
ಕೈಲಾಸದಿಂದ ಬಂದು ಎತ್ತಿಕೊಳ್ಳದಿಪ್ಪನೆ ?
-
೪೪೨.
ಮುತ್ತು ಉದಕದಲಾಗದು,
ಉದಕ ಮುತ್ತಿನೊಲಾಗದು,
ತತ್ತ್ವಘಟಿಸಿದ ಸುಮುಹೂರ್ತದಲಲ್ಲದೆ!
ಚಿತ್ತವೇದ್ಯವಾಗದು ಸದ್ಗುರುವಿನ ಕರುಣಕಲ್ಲದೆ,
ಕರ್ತೃ ಕೂಡಲಸಂಗಮದೇವರ
ಒಲವಿನ ದಯದ ಚಿತ್ತವಿಡಿದಂಗಲ್ಲದೆ
ಶಿವತತ್ತ್ವ ಸಾಹಿತ್ಯವಾಗದು.
-
೪೪೩.
ಚಂದ್ರಕಾಂತದ ಶಿಲೆಯಲ್ಲಿ ಜಲವಿಲ್ಲದನ್ನಕ
ಶೈತ್ಯವ ತೋರುವ ಪರಿಯೆಂತೋ ?
ಸೂರ್ಯಕಾಂತದ ಶಿಲೆಯಲ್ಲಿ ಅಗ್ನಿಯಿಲ್ಲದನ್ನಕ
ಉಷ್ಣವ ತೋರುವ ಪರಿಯೆಂತೋ ?
ಶರಣಂಗೆ ಭಕ್ತಿಕಾಯವಿಲ್ಲದನ್ನಕ
ಕೂಡಲಸಂಗನನರಿವ ಪರಿಯೆಂತೋ ?
-
೪೪೪.
ಮುನ್ನೂರರುವತ್ತು ನಕ್ಷತ್ರಕ್ಕೆ
ಬಾಯ ಬಿಟ್ಟುಕೊಂಡಿಪ್ಪುದೇ ಸಿಂಪು ?
ಅದು ಸ್ವಾತಿಗಲ್ಲದೆ ಬಾಯ್ದೆರೆಯದು ಕೇಳಾ ಕೇಳು ತಂದೆ!
ಎಲ್ಲವಕ್ಕೆ ಬಾಯ ಬಿಟ್ಟರೆ
ತಾನೆಲ್ಲಿಯ ಮುತ್ತಪ್ಪುದು ?
ಪರಮಂಗಲ್ಲದೆ ಹರುಷವಿಲ್ಲೆಂದು
ಕರಣಾದಿ ಗುಣಂಗಳ ಮರೆದರು;
ಇದು ಕಾರಣ ಕೂಡಲಸಂಗನ ಶರಣರು
ಸಪ್ತವ್ಯಸನಿಗಳಲ್ಲಾಗಿ.
-
೪೪೫.
ಮೈಗೆ ಕಾಹ ಹೇಳುವರಲ್ಲದೆ,
ಮನಕ್ಕೆ ಕಾಹ ಹೇಳುವರೆ ?
ಅಣಕದ ಗಂಡನ ಹೊಸ ಪರಿಯ ನೋಡಾ!
ಕೂಡಲಸಂಗಮದೇವನೆನ್ನ ಮನವ ನಂಬದೆ
ತನ್ನಲ್ಲಿದ್ದ ಲೇಸ ಕಾಹ ಹೇಳಿದನು.
-
೪೪೬.
ಬೆಳಗಿನೊಳಗಣ ಮಹಾಬೆಳಗು! ಶಿವಶಿವಾ!!
ಪರಮಾಶ್ರಯವೆ ತಾನಾಗಿ,
ಶತಪತ್ರಕಮಳಕರ್ಣಿಕಾಮಧ್ಯದಲ್ಲಿ
ಸ್ವತಸ್ಸಿದ್ಧನಾಗಿಪ್ಪ ನಮ್ಮ ಕೂಡಲಸಂಗಮದೇವ.
-
೪೪೭.
ತಮತಮಗೆಲ್ಲ ನೊಸಲ ಕಣ್ಣವರು!
ತಮತಮಗೆಲ್ಲ ನಂದಿವಾಹನರು!
ತಮತಮಗೆಲ್ಲ ಖಟ್ವಾಂಗಕಪಾಲ ತ್ರಿಶೂಲಧರರು!
ದೇವರಾರು ಭಕ್ತರಾರು ಹೇಳಿರಯ್ಯ ?
ಕೂಡಲಸಂಗಮದೇವ,
ನಿಮ್ಮ ಶರಣರು ಸ್ವತಂತ್ರರು!
ಎನ್ನ ಬಚ್ಚಬರಿಯ ಬಸವನೆನಿಸಯ್ಯ!
-
೪೪೮.
ಉಳ್ಳವರು ಶಿವಾಲಯವ ಮಾಡಿಹರು!
ನಾನೇನ ಮಾಡುವೆ ? ಬಡವನಯ್ಯ!
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ!
ಕೂಡಲಸಂಗಮದೇವ ಕೇಳಯ್ಯ,
ಸ್ಥಾವರಕ್ಕಳಿವುಂಟು, ಜಂಗಮಕ್ಕಳಿವಿಲ್ಲ!
-
೪೪೯.
ಗುರು ಮುನಿದರೆ ಒಂದು ದಿನ ತಾಳುವೆ,
ಲಿಂಗ ಮುನಿದರೆ ದಿನವರೆ ತಾಳುವೆ.
ಜಂಗಮ ಮುನಿದರೆ
ಕ್ಷಣಮಾತ್ರವ ತಾಳಿದೆನಾದರೆ
ಎನ್ನ ಪ್ರಾಣದ ಹೋಕು ಕೂಡಲಸಂಗಮದೇವ.
-
೪೫೦.
ರಚ್ಚೆಯ ನೆರವಿಗೆ ನಾಡನುಡಿ ಇಲ್ಲದಿಹುದೆ ?
ಅದರಂತೆನಬಹುದೇ ಸಜ್ಜನ ಸ್ತ್ರೀಯ ?
ಅದರಂತೆನಬಹುದೇ ಭಕ್ತಿರತಿಯ ?
ಕರುಳ ಕಲೆ-ಪ್ರಕಟಿತ ಉಂಟೆ ಕೂಡಲಸಂಗಮದೇವ ?
-
೪೫೧.
ಭೂತ ಒಲಿದು ಆತ್ಮನ ಸೋಂಕಿದ ಬಳಿಕ
ಭೂತದ ಗುಣವಲ್ಲದೆ, ಆತ್ಮನ ಗುಣವುಂಟೆ ?
ಗುರುಕಾರುಣ್ಯವಾಗಿ,
ಹಸ್ತಮಸ್ತಕಸಂಯೋಗವಾದ ಬಳಿಕ
ಗುರುಲಿಂಗಜಂಗಮವೇ ಗತಿಯಾಗಿದ್ದೆ
ಕೂಡಲಸಂಗಮದೇವ.
-
೪೫೨.
ಮಾಡುವಾತ ನಾನಲ್ಲಯ್ಯ,
ನೀಡುವಾತ ನಾನಲ್ಲಯ್ಯ,
ಬೇಡುವಾತ ನಾನಲ್ಲಯ್ಯ,
ನಿಮ್ಮ ಕಾರುಣ್ಯವಲ್ಲದೆ, ಎಲೆ ದೇವಾ!
ಮನೆಯ ತೊತ್ತಲಸಿದರೆ ಒಡತಿ ಮಾಡಿಕೊಂಬಂತೆ
ನಿನಗೆ ನೀ ಮಾಡಿಕೋ ಕೂಡಲಸಂಗಮದೇವಾ!
-
೪೫೩.
ಪರಿಯಾಣವೇ ಭಾಜನವೆಂಬರು
ಪರಿಯಾಣ ಭಾಜನವಲ್ಲ ಲಿಂಗಕ್ಕೆ!
ತನ್ನ ಮನವೇ ಭಾಜನ!
ಪ್ರಾಣವನು ಬೀಸರವೋಗದೆ
ಮೀಸಲಾಗರ್ಪಿಸಬಲ್ಲಡೆ,
ಕೂಡಿಕೊಂಡಿಪ್ಪ ನಮ್ಮ ಕೂಡಲಸಂಗಮದೇವ.
-
೪೫೪.
ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ.
ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ.
ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ.
ಪರುಷದ ಬಲದಿಂದ ಅವಲೋಹದ ಕೇಡು ನೋಡಯ್ಯ.
ಕೂಡಲಸಂಗನ ಶರಣರನುಭಾವದಿಂದ
ಎನ್ನ ಭವದ ಕೇಡು ನೋಡಯ್ಯ.
-
೪೫೫.
ಆಲಿಕಲ್ಲ ಹರಳಿನಂತೆ,
ಅರಗಿನ ಪುತ್ಥಳಿಯಂತೆ
ತನು ಕರಗಿ ನೆರೆವ ಸುಖವ ನಾನೇನೆಂಬ!
ಕಡೆಗೋಡಿವರಿದವೆನಗಯ್ಯ ನಯನದ ಸುಖಜಲಂಗಳು!
ನಮ್ಮ ಕೂಡಲಸಂಗಮದೇವರ ಮುಟ್ಟಿ
ನೆರೆವ ಸುಖವನಾರಿಗೇನೆಂಬೆ!
-
೪೫೬.
ನಾಲಗೆ ತಾಗಿದ ರುಚಿಗೆ ಮನವೇ ಸಾಕ್ಷಿ!
ಸಾಲದೇ ಅಯ್ಯ!
ಮಾಲೆಗಾರನ ಕೇಳಿ ನನೆಯರಳುವುದೇ ?
ಆಗಮವನಿದಿರಿಂಗೆ ತೋರುವುದು ಆಚಾರವೇ ಅಯ್ಯ ?
ಕೂಡಲಸಂಗನ ಕೂಡಿದ
ಕೂಟದ ಕರುಳ ಕಲೆಯನು
ಇದಿರಿಂಗೆ ತೋರುವುದು ಆಚಾರವೇ ಅಯ್ಯ ?
-
೪೫೭.
ಎಲ್ಲ ಗಂಡರ ಪರಿಯಂತಲ್ಲ ನೋಡವ್ವ ನನ್ನ ನಲ್ಲ!
ಸುಳಿಯಲಿಲ್ಲ, ಸುಳಿದು ಸಿಂಗರವ ಮಾಡಲಿಲ್ಲ;
ಕೂಡಲ ಸಂಗಮ ದೇವನು ತನ್ನೊಳಗೆ ಬೈಚಿಟ್ಟನಾಗಿ!
-
೪೫೮.
ಆಹ್ವಾನಿಸಿ ಕರೆವಲ್ಲಿ ಎಲ್ಲಿದ್ದನೋ
ಈರೇಳು ಭುವನಂಗಳ ಒಳಗೊಂಡಿಪ್ಪ ದಿವ್ಯವಸ್ತು ?
ಮತ್ತೆ, ವಿಸರ್ಜಿಸಿ ಬಿಡುವಾಗ ಎಲ್ಲಿದ್ದನೋ
ಮುಳ್ಳೂರ ತೆರಹಿಲ್ಲದಿಪ್ಪ ಅಖಂಡವಸ್ತು ?
ಬರಿಯ ಮಾತಿನ ಬಳಕೆಯ ತೂತಿನ ಜ್ಞಾನವ ಬಿಟ್ಟು
ನೆಟ್ಟನೆ ತನ್ನ ಕರಸ್ಥಳದೊಳಗಿರುತಿಪ್ಪ
ಇಷ್ಟಲಿಂಗವ ದಿಟ್ಟಿಸಿ ನೋಡಲು
ಅಲ್ಲಿ ತನ್ನ ಮನಕ್ಕೆ ಮನ-ಸಂಧಾನವಾಗಿ ದಿವ್ಯನಿಶ್ಚಯ ಒದಗೆ
ಆ ದಿವ್ಯ ನಿಶ್ಚಯದಿಂದ ಕುಳವಡಗಿ ಅದ್ವೈತವಪ್ಪುದು!
ಇದು ಕಾರಣ, ನಮ್ಮ ಕೂಡಲಸಂಗನ ಶರಣರು
ಆಹ್ವಾನ-ವಿಸರ್ಜನವೆಂಬುಭಯ ಜಡತೆಯ ಬಿಟ್ಟು
ತಮ್ಮ ತಮ್ಮ ಕರಸ್ಥಳದಲ್ಲಿ ನಿಶ್ಚೈಸಿ ಅವರೇ
ಸ್ವಯಲಿಂಗವಾದರು ಕಾಣಿರೋ!
-
೪೫೯.
ಎನ್ನ ಗಂಡ ಬರಬೇಕೆಂದು
ಎನ್ನ ಅಂತರಂಗವೆಂಬ ಮನೆಯ ತೆರಹುಮಾಡಿ
ಅಷ್ಟದಳಕಮಲವೆಂಬ ಓವರಿಯೊಳಗೆ
ನಿಜನಿವಾಸವೆಂಬ ಹಾಸುಗೆಯ ಹಾಸಿ
ಧ್ಯಾನಮೌನವೆಂಬ ಮೇಲುಕಟ್ಟ ಕಟ್ಟಿ
ಜ್ಞಾನವೆಂಬ ದೀಪವ ಬೆಳಗಿ
ನಿಷ್ಕ್ರೀಗಳೆಂಬುಪಕರಣಂಗಳ ಹರಹಿಕೊಂಡು
ಪಶ್ಚಿಮದ್ವಾರವೆಂಬ ಬಾಗಿಲ ತೆರೆದು
ಕಂಗಳೇ ಪ್ರಾಣವಾಗಿ ಹಾರುತಿರ್ದೆನಯ್ಯ!
"ನಾನು ಬಾರೆನೆಂದು ಉಮ್ಮಳಿಸಿಹ"ನೆಂದು
ತಾನೇ ಬಂದು ಎನ್ನ ಹೃದಯಸಿಂಹಾಸನದ ಮೇಲೆ
ಮೂರ್ತಿಗೊಂಡರೆ
ಎನ್ನ ಮನದ ಬಯಕೆ ಸಯವಾಯಿತ್ತು.
ಹಿಂದೆ ಹನ್ನೆರಡು ವರ್ಷದಿಂದಿದ್ದ ಚಿಂತೆ ನಿಶ್ಚಿಂತೆಯಾಯಿತ್ತು!
ಕೂಡಲಸಂಗಮದೇವ ಕೃಪಾಮೂರ್ತಿಯಾದ ಕಾರಣ,
ಆನು ಬದುಕಿದೆನು.
-
೪೬೦.
ಕಾಯವೆಂಬ ಘಟಕ್ಕೆ
ಚೈತನ್ಯವೇ ಸಯಿದಾನ,
ಸಮತೆ ಎಂಬ ಜಲ,
ಕರಣಾದಿಗಳೇ ಸ್ರವಣ,
ಜ್ಞಾನವೆಂಬ ಅಗ್ನಿಯನಿಕ್ಕಿ
ಮತಿಯೆಂಬ ಸಟ್ಟುಗದಲ್ಲಿ ಘಟ್ಟಿಸಿ,
ಪಾಕಕ್ಕೆ ತಂದು, ಭಾವದಲ್ಲಿ ಕುಳ್ಳಿರಿಸಿ
ಪರಿಣಾಮದೋಗರವ ನೀಡಿದರೆ
ಕೂಡಲಸಂಗಮದೇವಂಗೆ ಆರೋಗಣೆಯಾಯಿತ್ತು.
-
೪೬೧.
ಅಡಿಗಡಿಗೆ ಸ್ಥಾನನಿಧಿ!
ಅಡಿಗಡಿಗೆ ದಿವ್ಯಕ್ಷೇತ್ರ!
ಅಡಿಗಡಿಗೆ ನಿಧಿಯು ನಿಧಾನ! ನೋಡಾ!
ಆತನಿರವೇ ಅವಿಮುಕ್ತ ಕ್ಷೇತ್ರ,
ಕೂಡಲಸಂಗನ ಶರಣ ಸ್ವತಂತ್ರನಾಗಿ.
-
೪೬೨.
ಧನದಲ್ಲಿ ಶುಚಿ, ಪ್ರಾಣದಲ್ಲಿ ನಿರ್ಭಯ
ಇದಾವಂಗಳವಡುವುದಯ್ಯ ?
ನಿಧಾನ ತಪ್ಪಿ ಬಂದರೆ ಒಲ್ಲೆನೆಂಬವರಿಲ್ಲ!
ಪ್ರಮಾದವಶ ಬಂದರೆ ಹುಸಿಯೆನೆಂಬವರಿಲ್ಲ!
ನಿರಾಶೆ, ನಿರ್ಭಯ, ಕೂಡಲಸಂಗಮದೇವ,
ನೀನೊಲಿದ ಶರಣಂಗಲ್ಲದಿಲ್ಲ!
-
೪೬೩.
ಹಲಬರ ನುಂಗಿದ ಹಾವಿಂಗೆ ತಲೆ-ಬಾಲವಿಲ್ಲ ನೋಡಾ!
ಕೊಲುವುದು ತ್ರೈಜಗವೆಲ್ಲವ!
ತನಗೆ ಬೇರೆ ಪ್ರಳಯವಿಲ್ಲ!!
ನಾಕಡಿಯನೆಯ್ದದು,
ಲೋಕದ ಕಡೆಯನೇ ಕಾಬುದು!
ಸೂಕ್ಷ್ಮಪಥದಲ್ಲಿ ನಡೆವುದು,
ತನಗೆ ಬೇರೊಡಲಿಲ್ಲ!
ಅಹಂಕಾರವೆಂಬ ಗಾರುಡಿಗನ ನುಂಗಿತ್ತು
ಕೂಡಲಸಂಗನ ಶರಣರಲ್ಲದುಳಿದವರ.
-
೪೬೪.
ಉಂಬ ಬಟ್ಟಲು ಬೇರೆ ಕಂಚಲ್ಲ!
ನೋಡುವ ದರ್ಪಣ ಬೇರೆ ಕಂಚಲ್ಲ!
ಭಾಂಡ, ಭಾಜನ ಒಂದೆ!
ಬೆಳಗೆ ಕನ್ನಡಿಯೆನಿಸಿತ್ತಯ್ಯ!
ಅರಿದರೆ ಶರಣನು, ಮರೆದರೆ ಮಾನವನು!
ಮರೆಯದೆ ಪೂಜಿಸು ಕೂಡಲಸಂಗನ.
-
೪೬೫.
ಕೆರೆ ಹಳ್ಳ ಭಾವಿಗಳು ಮೈದೆಗೆದರೆ
ಗುಳ್ಳೆ, ಗೊರಚೆ, ಚಿಪ್ಪು ಕಾಣಬಹವು!
ವಾರಿಧಿ ಮೈದೆಗೆದರೆ
ರತ್ನ ಮುತ್ತುಗಳು ಕಾಣಬಹವು!
ಕೂಡಲಸಂಗನ ಶರಣರು
ಮನದೆರೆದು ಮಾತನಾಡಿದರೆ
ಲಿಂಗವೇ ಕಾಣಬಹುದು!
-
೪೬೬.
ನಾರುಳಿಯ ಹಣಿದವನಾರಾದರೆಯು ಆಡರೆ
ನಾರುಳಿದರೆ ಮುಂದೆ ಅಂಕುರಿತ ಫಲ ತಪ್ಪದು!
ಮಾಡುವನ್ನಕ ಫಲದಾಯಕ.
ಮಾಟವರತು ನಿಮ್ಮಲ್ಲಿ ಸಯವಾದರೆ
ಆತನೇ ಅಚ್ಚ ಶರಣನಯ್ಯ, ಕೂಡಲಸಂಗಮದೇವ.
-
೪೬೭.
ಐದು ಮಾನವ ಕುಟ್ಟಿ
ಒಂದು ಮಾನವ ಮಾಡು ಕಂಡೆಯಾ ಮದುವಳಿಗೆ!
ಇದು ನಮ್ಮ ಬಾಳುವೆ ಮದುವಳಿಗೆ!
ಇದು ನಮ್ಮ ವಿಸ್ತಾರ ಮದುವಳಿಗೆ!
ಮದವಳಿದು ನಿಜವುಳಿದ ಬಳಿಕ
ಅದು ಸತ್ಯ ಕಾಣಾ ಕೂಡಲಸಂಗಮದೇವಾ.
-
೪೬೮.
ಕುಲಮದವಳಿಯದನ್ನಕ ಶರಣನಾಗಲೇಕೆ ?
ವಿಧಿವಶ ಬಿಡದನ್ನಕ ಭಕ್ತನಾಗಲೇಕೆ ?
ಹಮ್ಮಿನ ಸೊಮ್ಮಿನ ಸಂಬಂಧ ಬಿಟ್ಟು
ಕಿಂಕರರ ಕಿಂಕರನಾಗಿರಬೇಕು.
ಹೆಪ್ಪನೆರೆದ ಹಾಲು ಕೆಟ್ಟು
ತುಪ್ಪವಪ್ಪಂತೆಯಿಪ್ಪರು,
ಕೂಡಲಸಂಗಮದೇವ, ನಿಮ್ಮ ಶರಣರು.
-
೪೬೯.
ಮಣ್ಣ ಮಡಕೆ ಮಣ್ಣಾಗದು ಕ್ರೀಯಳಿದು,
ಬೆಣ್ಣೆ ಕರಗಿ ತುಪ್ಪವಾಗಿ
ಮರಳಿ ಬೆಣ್ಣೆಯಾಗದು ಕ್ರೀಯಳಿದು,
ಹೊನ್ನು ಕಬ್ಬುನವಾಗದು ಕ್ರೀಯಳಿದು,
ಮುತ್ತು ನೀರಲ್ಲಿ ಹುಟ್ಟಿ ಮತ್ತೆ ನೀರಾಗದು ಕ್ರೀಯಳಿದು.
ಕೂಡಲಸಂಗನ ಶರಣನಾಗಿ
ಮರಳಿ ಮಾನವನಾಗ ಕ್ರೀಯಳಿದು.
-
೪೭೦.
ಪೂರ್ವಜನ್ಮ ನಿವೃತ್ತಿಯಾಗಿ
ಗುರುಕರುಣವಿಡಿದಂಗೆ ಬಂಧನವೆಲ್ಲಿಯದೋ,
ಭವಬಂಧನವೆಲ್ಲಿಯದೋ
ಸಂಕಲ್ಪ-ವಿಕಲ್ಪವೆಂಬ ಸಂದೇಹವ ಕಳೆದುಳಿದವಂಗೆ
ಕೂಡಲಸಂಗಮದೇವರ
ತ್ರಿಸಂಧ್ಯಾಕಾಲದಲ್ಲಿ ಮಾಣದೇ ನೆನೆವಂಗೆ ?
-
೪೭೧.
ಲಗ್ನವೆಲ್ಲಿಯದೋ
ವಿಘ್ನವೆಲ್ಲಿಯದೋ ಸಂಗಯ್ಯ ?
ದೋಷವೆಲ್ಲಿಯದೋ
ದುರಿತವೆಲ್ಲಿಯದೋ ಸಂಗಯ್ಯ ?
ನಿಮ್ಮ ಮಾಣದೆ ನೆನೆವಂಗೆ
ಭವಕರ್ಮವೆಲ್ಲಿಯದೋ ಕೂಡಲಸಂಗಯ್ಯ!
-
೪೭೨.
ಶರಣ ನಿದ್ರೆಗೈದರೆ ಜಪ ಕಾಣಿರೋ!
ಶರಣನೆದ್ದು ಕುಳಿತರೆ ಶಿವರಾತ್ರಿ ಕಾಣಿರೋ!
ಶರಣ ನಡೆದುದೇ ಪಾವನ ಕಾಣಿರೋ!
ಶರಣ ನುಡಿದುದೇ ಶಿವತತ್ವಕಾಣಿರೋ
ಕೂಡಲಸಂಗನ ಶರಣನ ಕಾಯವೇ
ಕೈಲಾಸ ಕಾಣಿರೋ!
-
೪೭೩.
ಸಮುದ್ರ ಘನವೆಂಬೆನೆ ?
ಧರೆಯ ಮೇಲಡಗಿತ್ತು!
ಧರೆ ಘನವೆಂಬೆನೆ ?
ನಾಗೇಂದ್ರನ ಫಣಾಮಣಿಯ ಮೇಲಡಗಿತ್ತು!
ನಾಗೇಂದ್ರ ಘನವೆಂಬೆನೆ ?
ಪಾರ್ವತಿಯ ಕಿರುಗುಣಿಕೆಯ ಮುದ್ರಿಕೆಯಾಯಿತ್ತು!
ಅಂಥ ಪಾರ್ವತಿ ಘನವೆಂಬೆನೆ ?
ಪರಮೇಶ್ವರನ ಅರ್ಧಾಂಗಿಯಾದಳು!
ಅಂಥ ಪರಮೇಶ್ವರ ಘನವೆಂಬೆನೆ ?
ನಮ್ಮ ಕೂಡಲಸಂಗನ ಶರಣರ
ಮನದ ಕೊನೆಯ ಮೊನೆಯ ಮೇಲಡಗಿದನು!
-
೪೭೪.
ನೆಲನೊಂದೇ ಹೊಲೆಗೇರಿ, ಶಿವಾಲಯಕ್ಕೆ!
ಜಲವೊಂದೇ ಶೌಚಾಚಮನಕ್ಕೆ!
ಕುಲವೊಂದೇ ತನ್ನ ತಾನರಿದವಂಗೆ!
ಫಲವೊಂದೇ ಷಡುದರ್ಶನ ಮುಕ್ತಿಗೆ!
ನಿಲವೊಂದೇ, ಕೂಡಲಸಂಗಮದೇವ,
ನಿಮ್ಮನರಿದವಂಗೆ.
-
೪೭೫.
ಅಯ್ಯಾ, ಸಜ್ಜನ ಸದ್ಭಕ್ತರ ಸಂಗದಿಂದ
ಮಹಾನುಭಾವರ ಕಾಣಬಹುದು!
ಮಹಾನುಭಾವರ ಸಂಗದಿಂದ
ಶ್ರಿಗುರುವನರಿಯಬಹುದು!
ಲಿಂಗವನರಿಯಬಹುದು ಜಂಗಮವನರಿಯಬಹುದು!
ಪ್ರಸಾದವನರಿಯಬಹುದು! ತನ್ನ ತಾನರಿಯಬಹುದು!!
ಇದು ಕಾರಣ ಸದ್ಭಕ್ತರ ಸಂಗವ ಕರುಣಿಸು
ಕೂಡಲಸಂಗಮದೇವಾ ನಿಮ್ಮ ಧರ್ಮ!
-
೪೭೬.
ಕುಂಡಲಿಗನೊಂದು ಕೀಡೆಯ ತಂದು
ತನ್ನಂತೆ ಮಾಡಿತಲ್ಲ!
ಎಲೆ ಮಾನವಾ, ಕೇಳಿ ನಂಬಯ್ಯ!
ನೋಡಿ ನಂಬಯ್ಯ, ಎಲೆ ಮಾನವ!
"ತ್ವಚ್ಚಿಂತಯಾ ಮಹಾದೇವ!
ತ್ವಮೇವಾಸ್ಮಿ ನ ಸಂಶಯಃ!
ಭ್ರಮದ್ ಭ್ರಮರಚಿಂತಾಯಾಂ
ಕೀಟೋಪಿ ಭ್ರಮರಾಯತೇ"!!
ಕೂಡಲಸಂಗನ ಶರಣರ ಅನುಭಾವ
ಇದರಿಂದ ಕಿರುಕುಳವೆ ಎಲೆ ಮಾನವಾ ?!
-
೪೭೭.
ಮರಮರನ ಮಥನದಿಂದಗ್ನಿ ಹುಟ್ಟಿ,
ಆ ಮರನೆಲ್ಲವ ಸುಡದಿಪ್ಪುದೆ ?
ಮಹಾನುಭಾವರ ಸಂಗದಿಂದ ಜ್ಞಾನಾಗ್ನಿ ಹುಟ್ಟಿ
ಎನ್ನ ತನುಗುಣವೆಲ್ಲವ ಸುಡದಿಪ್ಪುದೆ ?
ಇದು ಕಾರಣ,
ಮಹಾನುಭಾವರ ತೋರಿಸು
ಕೂಡಲಸಂಗಮದೇವ.
-
೪೭೮.
ಅರಿದುದ ಅರಿಯಲೊಲ್ಲದು! ಅದೆಂತಯ್ಯ ?
ಮರೆದುದ ಮರೆಯಲೊಲ್ಲದು! ಅದೆಂತಯ್ಯ
ಅರಿದು ಮರೆದ ಮನವ
ಕೂಡಲಸಂಗಯ್ಯ ತಾನೇ ಬಲ್ಲ.
-
೪೭೯.
ಮೀಸಲು ಬೀಸರವೋದ ಪರಿಯ ನೋಡಾ!
ಕಾಲು ತಾಗಿದ ಅಗ್ಛವಣಿ,
ಕೈ ಮುಟ್ಟಿದರ್ಪಿತ
ಮನ ಮುಟ್ಟಿದಾರೋಗಣೆಯನೆಂತು ಘನವೆಂಬೆನಯ್ಯ !?
ಬಂದ ಪರಿಯಲಿ ಪರಿಣಾಮಿಸಿ
ನಿಂದ ಪರಿಯಲ್ಲಿ ನಿಜಮಾಡಿ
ಆನೆಂದ ಪರಿಯಲ್ಲಿ ಕೈಕೋ
ಕೂಡಲಸಂಗಮದೇವ!
-
೪೮೦.
ಹಾಲೆಂಜಲು ವತ್ಸನ!
ಉದಕವೆಂಜಲು ಮತ್ಸ್ಯದ!
ಪುಷ್ಪವೆಂಜಲು ತುಂಬಿಯ!
ಎಂತು ಪೂಜಿಸುವೆನಯ್ಯ!
ಶಿವಶಿವಾ! ಎಂತು ಪೂಜಿಸುವೆ ?
ಈ ಎಂಜಲವನತಿಗಳೆವರೆ ಎನ್ನಳವಲ್ಲ.
ಬಂದುದ ಕೈಕೋ ಕೂಡಲಸಂಗಮದೇವ.
-
೪೮೧.
ದಿಟ ಮಾಡಿ ಪೂಜಿಸಿದರೆ ಸಟೆ ಮಾಡಿ ಕಳೆವೆ.
ಸಟೆ ಮಾಡಿ ಪೂಜಿಸಿದರೆ ದಿಟ ಮಾಡಿ ಕಳೆವೆ.
ಏನೆಂಬೆನೆಂತೆಂಬೆ!
ಸುಖಕ್ಕೆ ತುಂಬಿದ ದೀವಿಗೆ ಮನೆಯೆಲ್ಲವ ಸುಟ್ಟಂತೆ
ಆನು ಮಾಡಿದ ಭಕ್ತಿ
ಎನಗಿಂತಾಯಿತ್ತು ಕೂಡಲಸಂಗಮದೇವ.
-
೪೮೨.
ಎಂಬತ್ತೆಂಟು ಪವಾಡವ ಮೆರೆದು
ಹಗರಣದ ಚೋಹದಂತಾಯಿತ್ತೆನ್ನ ಭಕ್ತಿ;
ತನುವಿನೊಳಗೆ ಮನ ಸಿಲುಕದೆ,
ಮನದೊಳಗೆ ತನು ಸಿಲುಕದೆ
ತನು ಅಲ್ಲಮನಲ್ಲಿ ಸಿಲುಕಿತ್ತು!
ಮನ ಚೆನ್ನಬಸವಣ್ಣನಲ್ಲಿ ಸಿಲುಕಿತ್ತು
ನಾನೇತರಲ್ಲಿ ನೆನೆವೆನಯ್ಯ
ಕೂಡಲಸಂಗಮದೇವ ? !
-
೪೮೩.
ಬಸವ ಬಾರಯ್ಯ,
ಮರ್ತ್ಯಲೋಕದೊಳಗೆ ಭಕ್ತರುಂಟೆ ಹೇಳಯ್ಯ ?
ಮತ್ತಾರು ಇಲ್ಲಯ್ಯ, ಮತ್ತಾರು ಇಲ್ಲಯ್ಯ !
ನಾನೊಬ್ಬನೇ ಭಕ್ತನು,
ಮರ್ತ್ಯಲೋಕದೊಳಗಣ ಭಕ್ತರೆಲ್ಲರೂ
ಜಂಗಮಲಿಂಗ ನೀನೇ ಅಯ್ಯ ಕೂಡಲಸಂಗಮದೇವ!!
-
೪೮೪.
ಭಕ್ತ, ಮಾಹೇಶ್ವರ, ಪ್ರಸಾದಿ,
ಪ್ರಾಣಲಿಂಗ, ಶರಣನೈಕ್ಯನು
ಮೆಲ್ಲಮೆಲ್ಲನೆ ಆದೆನೆಂಬನ್ನಬರ,
ನಾನು ವಜ್ರದೇಹಿಯೆ ?
ನಾನೇನು ಅಮೃತವ ಸೇವಿಸಿದೆನೆ ?
ನಾನು ಮರುಜೇವಣಿಯ ಕೊಂಡೆನೆ ?
ನುಡಿದ ನುಡಿಯೊಳಗೆ ಷಡುಸ್ಥಲ ಬಂದು
ನನ್ನ ಮನವನಿಂಬುಗೊಳದಿದ್ದರೆ
ಸುಡುವೆನೀ ತನುವ ಕೂಡಲಸಂಗಮದೇವ.
-
೪೮೫.
ತಾಪತ್ರಯವೆಂದರೆ ರೂಪ ಕಾಣುತ್ತ ಕನಲಿದ!
ಕೋಪದಲ್ಲಿ ಶಿವಕಳೆಯದ ಕರಡಿಗೆಯನೆ ಮುರಿದ!
ಧೂಪಗುಂಡಿಗೆಯನೊಡೆದ!
ದೀಪದಾರತಿಯ ನಂದಿಸಿದ!
ಬಹು ಪರಿಣಾಮದೋಗರವ ತುಡುಕಿದ!
ಪಾಪಕರ್ಮ, ಕೂಡಲಸಂಗಮದೇವಾ,
ನಿಮ್ಮ ಶರಣ.
-
೪೮೬.
ಜಗವ ಸುತ್ತಿಪ್ಪುದು ನಿನ್ನ ಮಾಯೆಯಯ್ಯ,
ನಿನ್ನ ಸುತ್ತಿಪ್ಪುದು ಎನ್ನ ಮನ ನೋಡಯ್ಯ!
ನೀನು ಜಗಕ್ಕೆ ಬಲ್ಲಿದನು,
ನಾನು ನಿನಗೆ ಬಲ್ಲಿದನು ಕಂಡಯ್ಯ!
ಕರಿಯು ಕನ್ನಡಿಯೊಳಡಗಿದಂತಯ್ಯ -
ಎನ್ನೊಳಗೆ ನೀನಡಗಿದೆ ಕೂಡಲಸಂಗಮದೇವ.
-
೪೮೭.
ಎಲ್ಲರ ಗಂಡರು ಬೇಂಟೆಯ ಹೋದರು.
ನೀನೇಕೆ ಹೋಗೆ ಎಲೆ ಗಂಡನೆ ?
ಸತ್ತುದ ತಾರದಿರು; ಕೈ ಮುಟ್ಟಿ ಕೊಲ್ಲದಿರು!
ಅಡಗಿಲ್ಲದೆ ಮನೆಗೆ ಬಾರದಿರು!
ದೇವರ ಧರ್ಮದಲೊಂದು
ಬೇಂಟೆ ದೊರೆಕೊಂಡರೆ
ಕೂಡಲಸಂಗಮದೇವಂಗರ್ಪಿತ ಮಾಡುವೆ ಎಲೆ ಗಂಡನೆ,
-
೪೮೮.
ಗ್ರಹ ಬಂದು ಆವರಿಸಲೊಡನೆ ತನ್ನ ಮರೆಸುವುದು;
ಮತ್ತೊಂದಕಿಂಬುಗೊಡಲೀಯದಯ್ಯ!
ಕೂಡಲಸಂಗಮದೇವನ ಅರಿವು
ಅನುಪಮವಾಗಲೊಡನೆ,
ಬೆವಹಾರದೊಳಗಿರಲೀಯದಯ್ಯ!
-
೪೮೯.
ಮನೆಯ ಗಂಡನ ಮನೆವಾರ್ತೆಯನೇನ ಹೇಳುವೆನವ್ವ!
ಅಂಗವಿದ್ಯವನೊಲ್ಲ,
ಕಂಗಳೊಳಗಣ ಕಸವ ಕಳೆದಲ್ಲದೆ ನೋಡಲೀಯ!
ಕಯ್ಯ ತೊಳೆದಲ್ಲದೆ ಮುಟ್ಟಲೀಯ,
ಕಾಲ ತೊಳೆದಲ್ಲದೆ ಹೊದ್ದಲೀಯ.
ಇಂತೀ ಸರ್ವಾಂಗ ತಲೆದೊಳೆದ ಕಾರಣ
ಕೂಡಲಸಂಗಮದೇವನೆನ್ನ
ಕೂಡಿಕೊಂಡನವ್ವ.
-
೪೯೦.
ಅಯ್ಯ, ನೀ ಮಾಡಲಾದ ಜಗತ್ತು;
ಅಯ್ಯ, ನೀ ಮಾಡಲಾದ ಸಂಸಾರ;
ಅಯ್ಯ, ನೀ ಮಾಡಲಾದ ಮರವೆ;
ಅಯ್ಯ, ನೀ ಮಾಡಲಾದ ದುಃಖ!
ಅಯ್ಯ, ನೀ ಬಿಡಿಸಿದರೆ ಬಿಟ್ಟಿತ್ತು ತಾಮಸವಯ್ಯ!
ನಾನೀ ಮಾಯೆಯ ಗೆದ್ದೆನೆಂಬ ಹಮ್ಮಿದೇಕೆ,
ಕೂಡಲಸಂಗಮದೇವ ?
-
೪೯೧.
ಅರತುದಯ್ಯ ಅಂಗಗುಣ, ಒರೆತುದಯ್ಯ ಭಕ್ತಿರಸ!
ಆವರಿಸಿತಯ್ಯ ಅಂಗ ಲಿಂಗವನು!
ಏನೆಂದರಿಯೆನಯ್ಯ ಲೋಕ-ಲೌಕಿಕದ ಮದವ,
ಕೂಡಲಸಂಗಮದೇವ, ನಿಮ್ಮ ಕರುಣವೆನ್ನನೆಡೆಗೊಂಡಿತ್ತಾಗಿ!
-
೪೯೨.
ಪೂಜೆಯುಳ್ಳನ್ನಬರ ಲಿಂಗವ ಹಾಡಿದೆ!
ಮಾಟವುಳ್ಳನ್ನಬರ ಜಂಗಮವ ಹಾಡಿದೆ!
ಜಿಹ್ವೆಯುಳ್ಳನ್ನಬರ ಪ್ರಸಾದವ ಹಾಡಿದೆ!
ಈ ತ್ರಿವಿಧ ನಾಸ್ತಿಯಾದ ಬಳಿಕ
ಎನ್ನ ನಾ ಹಾಡಿಕೊಂಡೆ ಕಾಣಾ
ಕೂಡಲಸಂಗಮದೇವ.
-
೪೯೩.
ಮರಳು ತಲೆ, ಹುರುಳು ತಲೆ ನೀನೇ ದೇವ
ಹೆಂಗೂಸು ಗಂಡುಗೂಸೂ ನೀನೇ ದೇವ
ಎಮ್ಮಕ್ಕನ ಗಂಡ ನೀನೇ ದೇವ,
ಕೂಡಲಸಂಗಮದೇವ,
ಭ್ರಾಂತಳಿದು ಭಾವ ನಿಂದುದಾಗಿ.
-
೪೯೪.
ಉಮಾದಿನಾಥರು ಕೋಟಿ,
ಪಂಚವಕ್ತ್ರರು ಕೋಟಿ,
ನಂದಿವಾಹನರೊಂದು ಕೋಟಿ ನೋಡಯ್ಯ!
ಸದಾಶಿವರೊಂದು ಕೋಟಿ
ಗಂಗೆವಾಳುಕಸಮಾರುದ್ರರು ಇವರೆಲ್ಲರು
ಕೂಡಲಸಂಗನ ಸಾನ್ನಿಧ್ಯರಲ್ಲದೆ
ಸಮರಸವೇದ್ಯರೊಬ್ಬರೂ ಇಲ್ಲ!
-
೪೯೫.
ಬಯಲ ರೂಪಮಾಡಬಲ್ಲಾತನೇ ಶರಣನು,
ಆ ರೂಪ ಬಯಲಮಾಡಬಲ್ಲಾತನೇ ಲಿಂಗಾನುಭಾವಿ.
ಬಯಲ ರೂಪಮಾಡಲರಿಯದಿದ್ದರೆ
ಎಂತು ಶರಣನೆಂಬೆ ?
ಆ ರೂಪ ಬಯಲ ಮಾಡಲರಿಯದಿದ್ದರೆ
ಎಂತು ಲಿಂಗಾನುಭಾವಿಯೆಂಬೆ ?
ಈ ಉಭಯವೊಂದಾದರೆ
ನಿಮ್ಮಲ್ಲಿ ತೆರಹುಂಟೇ ಕೂಡಲಸಂಗಮದೇವ ?
-
೪೯೬.
ದೇವಲೋಕ, ಮರ್ತ್ಯಲೋಕವೆಂಬ
ಸೀಮೆಯುಳ್ಳನ್ನಕ ಕೇವಲ ಶರಣನಾಗಲರಿಯ,
ಸತ್ತು ಬೆರೆಸಿಹೆನೆಂದರೆ
ಕಬ್ಬಿನ ತುದಿಯ ಮೆಲಿದಂತೆ ಕೂಡಲಸಂಗಮದೇವ.
-
೪೯೭.
ಏನನಾದರೆಯು ಸಾಧಿಸಬಹುದು!
ಮತ್ತೇನನಾದರೆಯು ಸಾಧಿಸಬಹುದಯ್ಯ!
ತಾನಾರೆಂಬುದ ಸಾಧಿಸಬಾರದು,
ಕೂಡಲಸಂಗಮದೇವನ
ಕರುಣವುಳ್ಳವಂಗಲ್ಲದೆ!
-
೪೯೮.
ಗುರುಶಿಷ್ಯ ಸಂಬಂಧವಾದುದಕ್ಕೆ ಇದು ಚಿಹ್ನ!
ಹಿಂದ ಬಿಟ್ಟು ಮುಂದ ಹಿಡಿಯಲೇ ಬೇಕು.
ಕೂಡಲಸಂಗಮದೇವಯ್ಯ
ಕಿಚ್ಚಿನೊಳಗೆ ಕೋಲ ಬೈಚಿಟ್ಟಂತಿರಬೇಕು.
-
೪೯೯.
ಲಿಂಗವ ಪೂಜಿಸಿ ಫಲವೇನಯ್ಯ
ಸಮರತಿ, ಸಮಕಳೆ, ಸಮಸುಖವರಿಯದನ್ನಕ ?
ಲಿಂಗವ ಪೂಜಿಸಿ ಫಲವೇನಯ್ಯ
ಕೂಡಲಸಂಗಮದೇವರ ಪೂಜಿಸಿ
ನದಿಯೊಳಗೆ ನದಿ ಬೆರಸಿದಂತಾಗದನ್ನಕ ?
-
೫೦೦.
ಲಿಂಗಾರ್ಚನೆಯ ಮಾಡುವ ಮಹಿಮರೆಲ್ಲರೂ
ಸಲಿಗೆವಂತರಾಗಿ ಒಳಗೈದಾರೆ.
ಆನು ದೇವಾ ಹೊರಗಳವನು!
ಸಂಬೋಳಿಯೆನುತ್ತ, ಇಂಬಿನಲ್ಲಿದೇನೆ.
ಕೂಡಲಸಂಗಮದೇವ.
ನಿಮ್ಮ ನಾಮವಿಡಿದ ಅನಾಮಿಕ ನಾನು.
-
೫೦೧.
ಭಿತ್ತಿಯಿಲ್ಲದ ಚಿತ್ತಾರದಂತೆ,
ಭಕ್ತಿಯಲ್ಲದ ಪ್ರಮಥನಾಗಿ ಎಂದಿಪ್ಪೆನಯ್ಯ
ಸತ್ಯವಿಲ್ಲದ ಶರಣನಾಗಿ ಎಂದಿಪ್ಪೆನಯ್ಯ!
ಗೆರೆಯಿಲ್ಲದ ಕೋಲಲ್ಲಿ
ಉದ್ದರೆಯನಿಕ್ಕಿದ ಭಂಡದ ಹರದನಂತಾದೆನಯ್ಯ!
ಕೂಡಲಸಂಗಮದೇವ.
-
೫೦೨.
ಹುಸಿಯಿಂದ ಜನಿಸಿದೆನಯ್ಯ
ಮರ್ತ್ಯಲೋಕದೊಳಯಿಂಕೆ!
ಹುಸಿಯಿಂದ ಲಿಂಗವ ಹೆಸರುಗೊಂಡು ಕರೆದೆನಯ್ಯ!
ಅದು ಎನಗೆ ಭಾವವೂ ಅಲ್ಲದೆ
ನಿರ್ಭಾವವೂ ಅಲ್ಲದೆ ನಿಂದಿತ್ತಯ್ಯ!
ಅದರ ಅವಯವಂಗಳೆಲ್ಲವು ಜಂಗಮವಯ್ಯ!
ಅದಕ್ಕೆ ಎನ್ನ ಉಳ್ಳ ಸಯದಾನವ ಮಾಡಿ ನೀಡಿದೆನಯ್ಯ,
ಆ ಪ್ರಸಾದಕ್ಕೆ ಶರಣೆಂದೆನಯ್ಯ!
ಅದು ಸಾರವೂ ಅಲ್ಲ, ನಿಸ್ಸಾರವೂ ಅಲ್ಲ!
ಆ ಪ್ರಸಾದದಲ್ಲಿ ನಾನೇ ತದ್ಗತನಾದೆ ಕಾಣಾ
ಕೂಡಲಸಂಗಮದೇವ.
-
೫೦೩.
ಕುರುಹಿಲ್ಲ ಕುರುಹಿಲ್ಲ ಲಿಂಗವೆಂದೆಂಬರೆ,
ತೆರಹಿಲ್ಲ ತೆರಹಿಲ್ಲ ಜಂಗಮವೆಂದೆಂಬರೆ-
ಇದೇ ನೋಡಾ ಶಿವಾಚಾರ!
ಇದೇ ನೋಡಾ ಶಿವದೊಡಕು!
"ಆತ್ಮಾನಾಂ ಪ್ರಕೃತಿಸ್ವಭಾವ" ಎಂದುದಾಗಿ
ಮುಟ್ಟಬಾರದ ಠಾವ ಮರೆಗೊಂಡಿಪ್ಪ
ಮಮ ಕರ್ತೃ ಕೂಡಲಸಂಗಮದೇವ.
-
೫೦೪.
ವೇದ ವೇದಿಸಲರಿಯದೆ,
ಅಭೇದ್ಯ ಲಿಂಗವೆಂದು ನಡನಡುಗಿತ್ತು!
ಶಾಸ್ತ್ರ ಸಾಧಿಸಲರಿಯದೆ,
ಅಸಾಧ್ಯಲಿಂಗವೆಂದು ಸಾರುತ್ತೈದಾವೆ!
ತರ್ಕ ತರ್ಕಿಸಲರಿಯದೆ,
ಅತರ್ಕ್ಯಲಿಂಗವೆಂದು ಮನಂಗೊಳ್ಳವು!
ಆಗಮ ಗಮನಿಸಲರಿಯದೆ,
ಅಗಮ್ಯವೆಂದು ಹೋದುವು!
ನರರು ಸುರರು ಅಂತುವ ಕಾಣರು!
ನಮ್ಮ ಕೂಡಲಸಂಗಮದೇವನ ಪ್ರಮಾಣವ ಶರಣ ಬಲ್ಲ!
-
೫೦೫.
ಅಂತರಂಗ ಬಹಿರಂಗ
ಆತ್ಮಸಂಗ ಒಂದೇ ಅಯ್ಯ!
ನಾದ-ಬಿಂದು-ಕಳಾತೀತ
ಆದಿಯಾಧಾರ ನೀನೇ ಅಯ್ಯ!
ಆರೂಢದ ಕೂಟದ ಸುಖವ
ಕೂಡಲ ಸಂಗಯ್ಯ ತಾನೇ ಬಲ್ಲ!
-
೫೦೬.
ಕಾಮವೇಕೋ ಲಿಂಗಪ್ರೇಮಿಯೆನಿಸುವಂಗೆ ?
ಕಾಮವೇಕೋ ಶರಣವೇದ್ಯನೆನಿಸುವಂಗೆ ?
ಲೋಭವೇಕೋ ಭಕ್ತಿಲಾಭವ ಬಯಸುವಂಗೆ ?
ಮೋಹವೇಕೋ ಪ್ರಸಾದವೇದ್ಯನೆನಿಸುವಂಗೆ ?
ಮದಮತ್ಸರವುಳ್ಳವಂಗೆ ಹೃದಯ ಶುದ್ಧವೆಲ್ಲಿಯದೋ ?
ಹದುಳಿಗರಾದಲ್ಲಿಪ್ಪ ಕೂಡಲಸಂಗಮದೇವ |
-
೫೦೭.
ಎನ್ನ ನಡೆಯೊಂದು ಪರಿ |
ಎನ್ನ ನುಡಿಯೊಂದು ಪರಿ |
ಎನ್ನೊಳಗೇನೂ ಶುದ್ಧವಿಲ್ಲ ನೋಡಯ್ಯ |
ನುಡಿಗೆ ತಕ್ಕ ನಡೆಯ ಕಂಡರೆ
ಕೂಡಲಸಂಗಮದೇವ ತನ್ನೊಳಗಿಪ್ಪನಯ್ಯ |
-
೫೦೮.
ಬಡಪಶು ಪಂಕದಲ್ಲಿ ಬಿದ್ದರೆ
ಕಾಲ ಬಡಿವುದಲ್ಲದೆ ಬೇರೆ ಗತಿಯುಂಟೆ ?
ಶಿವ ಶಿವಾ ಹೋದಹೆ ಹೋದಹೆನಯ್ಯ |
ನಿಮ್ಮ ಮನದತ್ತಲೆನ್ನ ತೆಗೆಯಯ್ಯ |
ಪಶುವಾನು ಪಶುಪತಿ ನೀನು |
ತುಡುಗುಣಿಯಿಂದೆನ್ನ ಹಿಡಿದು ಬಡಿಯದ ಮುನ್ನ
ಒಡೆಯ, ನಿಮ್ಮ ಬೈಯದಂತೆ ಮಾಡು
ಕೂಡಲಸಂಗಮದೇವ.
-
೫೦೯.
ತನು ನಿಮ್ಮದೆಂದ ಬಳಿಕ ಎನಗೆ ಬೇರೆ ತನುವಿಲ್ಲ |
ಮನ ನಿಮ್ಮದೆಂದ ಬಳಿಕ ಎನಗೆ ಬೇರೆ ಮನವಿಲ್ಲ |
ಧನ ನಿಮ್ಮದೆಂದ ಬಳಿಕ ಎನಗೆ ಬೇರೆ ಧನವಿಲ್ಲ |
ಇಂತಿ ತ್ರಿವಿಧವೂ ನಿಮ್ಮದೆಂದರಿತ ಬಳೀಕ
ಎನಗೆ ಬೇರೆ ವಿಚಾರವುಂಟೇ ಕೂಡಲಸಂಗಮದೇವ ||
-
೫೧೦.
ಅಂಗದಿಚ್ಚೆಗೆ ಮದ್ದು ಮಾಸವ ತಿಂಬರು |
ಕಂಗಳಿಚ್ಚೆಗೆ ಪರವಧುವ ನೆರೆವರು |
ಲಿಂಗಲಾಂಛನಧಾರಿಯಾದಲ್ಲಿ ಫಲವೇನು ?
ಲಿಂಗಪಥವ ತಪ್ಪಿ ನಡೆವರು |
ಜಂಗಮ ಮುಖದಿಂದೆ ನಿಂದೆ ಬಂದರೆ
ಕೊಂಡ ಮಾರಿಂಗೆ ಹೋಹುದು ತಪ್ಪದು
ಕೂಡಲಸಂಗಮದೇವ |
-
೫೧೧.
ಕೋಪಿ ಮಜ್ಜನಕ್ಕೆರೆದರೆ ರಕ್ತದ ಧಾರೆ |
ಪಾಪಿ ಹೂವನೇರಿಸಿದರೆ ಮಸೆದಡಾಯುಧದ ಗಾಯ |
ಕೂಪವರನಾರನೂ ಕಾಣೆನು ಮಾದಾರಚೆನ್ನಯ್ಯನಲ್ಲದೆ |
ಕೂಪವರನಾರನೂ ಕಾಣೆನು ಡೋಹರಕಕ್ಕಯ್ಯನಲ್ಲದೆ |
ವ್ಯಾಪತ್ತಿಯುಳ್ಳವ ನಮ್ಮ ಮಡಿವಾಳ ಮಾಚಯ್ಯ |
ನಿನ್ನ ಪತ್ತಿಗರಿವರಯ್ಯ ಕೂಡಲಸಂಗಮದೇವ |
-
೫೧೨.
ಕೃಷಿ-ಕೃತ್ಯ-ಕಾಯಕದಿಂದಾದರೇನು ?
ತನು-ಮನವ ಬಳಲಿಸಿ ಪಾದವ ತಂದು ದಾಸೋಹವ ಮಾಡುವ
ಪರಮ ಸದ್ಭಕ್ತನ ಪಾದವ ತೋರಯ್ಯ ಎನಗೆ |
ಅದೆಂತೆನೆ :
ಆತನ ತನು ಶುದ್ಧ | ಆತನ ಮನ ಶುದ್ಧ |
ಆತನ ನಡೆ ಶುದ್ಧ | ನುಡಿಯೆಲ್ಲವು ಪಾವನ |
ಆತಂಗೆ ಉಪದೇಶವ ಮಾಡಿದಾತನೆ ಪರಮಸದ್ಗುರು |
ಅಂತಪ್ಪ ಸದ್ಭಕ್ತನ ಮನೆಯ ಕೈಲಾಸವೆಂದು ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮವೇ ಜಗತ್ಪಾವನ |
ಇಂತಪ್ಪವರ ನಾನು ನೆರೆ ನಂಬಿ
ನಮೋ ನಮೋ ಎಂಬೆನಯ್ಯ ಕೂಡಲಸಂಗಮದೇವ |
-
೫೧೩.
ದೇವ ದೇವ ಬಿನ್ನಪವ ಅವಧಾರು |
ವಿಪ್ರ ಮೊದಲು ಅಂತ್ಯಜ ಕಡೆಯಾಗಿ
ಶಿವಭಕ್ತರಾದವರನೆಲ್ಲರನು ಒಂದೇ ಎಂಬೆ
ಹಾರುವ ಮೊದಲು ಶ್ವಪಚ ಕಡೆಯಾಗಿ
ಭವಿಯಾದವರನೆಲ್ಲರನು ಒಂದೇ ಎಂಬೆ |
ಈ ಹೀಂಗೆಂದು ನಂಬುವುದೆನ್ನ ಮನವು |
ಈ ನುಡಿದ ನುಡಿಯೊಳಗೆ ಎಳ್ಳ ಮೊನೆಯಷ್ಟುಸಂದೇಹವುಳ್ಳೆರೆ
ಹಲುದೋರ ಮೂಗ ಕೊಯಿ ಕೂಡಲಸಂಗಮದೇವ |
-
೫೧೪.
ಗೋತ್ರನಾಮವ ಬೆಸಗೊಂಡರೆ
ಮಾತ ನೂಂಕದೆ ಸುಮ್ಮನಿದ್ದಿರಿದೇಕಯ್ಯ ?
ತಲೆಯ ಕುತ್ತಿ ನೆಲನ ಬರುವುತಿದ್ದಿದೇನಯ್ಯ ?
ಗೋತ್ರ ಮಾದಾರ ಚೆನ್ನಯ್ಯ
ಡೋಹಾರ ಕಕ್ಕಯ್ಯನೆಂಬುದೇನು ?
ಕೂಡಲಸಂಗಯ್ಯ.
-
೫೧೫.
ಕುಲಮದಕ್ಕೆ ಹೋರಿ ಜಂಗಮಬೇಧವ ಮಾಡುವೆ |
ಫಲವೇನು ? ನಿತ್ಯಲಿಂಗಾರ್ಚನೆ ಪ್ರಾಯಶ್ಚಿತ್ತ |
ಛಲಮದಕ್ಕೆ ಹೋರಿ ಲಿಂಗ ಭೇದವ ಮಾಡುವೆ
ಜಂಗುಳಿಯ ಕಾವ ಗೋವಳ ಹಲವು ಪಶುವ ನಿವಾರಿಸುವಂತೆ |
ತನುಭಕ್ತನಾಯಿತ್ತೆನ್ನ ಮನ ಭವಿ |
ಕೂಡಲಸಂಗಮದೇವ
-
೫೧೬.
ಬ್ರಹ್ಮಪದವಿಯನೊಲ್ಲೆ |
ವಿಷ್ಣುಪದವಿಯನೊಲ್ಲೆ |
ರುದ್ರಪದವಿಯನೊಲ್ಲೆ |
ನಾನು ಮತ್ತಾವ ಪದವಿಯನೊಲ್ಲೆನಯ್ಯ |
ಕೂಡಲಸಂಗಮದೇವ
ನಿಮ್ಮ ಸದ್ಭಕ್ತರ ಪಾದವನರಿದಿಪ್ಪ
ಮಹಾಪದವಿಯನೆ ಕರಿಶಿಸಯ್ಯ |
ಅಕ್ಕಮಹಾದೇವಿಯ ವಚನಗಳು
೧.
ಅಘಟಿತ-ಘಟಿತನ ಒಲವಿನ ಶಿಶು
ಕಟ್ಟಿದೆನು ಜಗಕ್ಕೆ ಬಿರುದನು
ಕಾಮ-ಕ್ರೋಧ-ಲೋಭ-ಮೋಹ-ಮದ-ಮತ್ಸರಂಗಳಿಗೆ
ಇಕ್ಕಿದೆನು ಕಾಲಲ್ಲಿ ತೊಡರನು
ಗುರುಕೃಪೆಯೆಂಬ ತಿಗುರನಿಕ್ಕಿ
ಮಹಾಶರಣೆಂಬ ತಿಲಕವನಿಕ್ಕಿ
ಶಿವಶರಣೆಂಬ ಅಲಗ ಕೊಂಡು
ನಿನ್ನ ಕೊಲುವೆ ಗೆಲುವೆ!
ಬಿಡು ಬಿಡು ಕರ್ಮವೇ, ನಿನ್ನ ಕೊಲ್ಲದೇ ಮಾಣೆನು!!
ಕಡೆಹಿಸಿಕೊಳ್ಪದೆನ್ನ ನುಡಿಯ ಕೇಳಾ-
ಕೆಡದ ಶಿವಶರಣೆಂಬ ಅಲಗನೆ ಕೊಂಡು
ನಿನ್ನ ಕೊಲುವೆ ಗೆಲುವೆ ನಾನು!
ಬ್ರಹ್ಮಪಾಶವೆಂಬ ಕಳನನೆ ಸವರಿ
ವಿಷ್ಣುಮಾಯೆಯೆಂಬ ಎಡಗೋಲ ನೂಕಿ
ಎನ್ನೊಡೆಯ ಚೆನ್ನಮಲ್ಲಿಕಾರ್ಜುನಯ್ಯ ತಲೆದೂಗಲಿಕಾಡುವೆ ನಾನು.
೨.
ನೆಲದ ಮರೆಯ ನಿಧಾನದಂತೆ
ಫಲದ ಮರೆಯ ರುಚಿಯಂತೆ
ಶಿಲೆಯ ಮರೆಯ ಹೇಮದಂತೆ
ತಿಲದ ಮರೆಯ ತೈಲದಂತೆ
ಮರದ ಮರೆಯ ತೇಜಿದಂತೆ
ಭಾವದ ಮರೆಯ ಬ್ರಹ್ಮನಾಗಿಪ್ಪ
ಚೆನ್ನಮಲ್ಲಿಕಾರ್ಜುನನ ನಿಲವನಾರೂ ಅರಿಯಬಾರದು!
೩.
ಈಳೆ-ನಿಂಬೆ-ಮಾವು-ಮಾದಲಕ್ಕೆ
ಹುಳಿನೀರೆರೆದವರಾರಯ್ಯ?
ಕಬ್ಬು-ಬಾಳೆ-ನಾರಿವಾಳಕ್ಕೆ ಸಿಹಿನೀರೆರೆದವರಾರಯ್ಯ?
ಕಳವೆ-ಶಾಲಿಗೆ ಓಗರದ ಉದಕವನೆರೆದವರಾರಯ್ಯ?
ಮರುಗ-ಮಲ್ಲಿಗೆ-ಪಚ್ಚೆ-ಮುಡಿವಾಳಕ್ಕೆ
ಪರಿಮಳದುದಕವನೆರೆದವರಾರಯ್ಯ?
ಇಂತೀ ಜಲ ಒಂದೆ, ನೆಲ ಒಂದೆ, ಆಕಾಶ ಒಂದೆ!
ಒಂದೇ ಜಲವು ಹಲವು ದ್ರವ್ಯಂಗಳ ಕೂಡಿ
ತನ್ನ ಪರಿ ಬೇರಾಗಿಹ ಹಾಂಗೆ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನು
ಹಲವು ಜಗಂಗಳ ಕೂಡಿಕೊಂಡಿದ್ದರೇನು? ತನ್ನ ಪರಿ ಬೇರೆ!
೪.
ತನ್ನ ವಿನೋದಕ್ಕೆ ತಾನೇ ಸೃಜಿಸಿದ ಜಗತ್ತ!
ತನ್ನ ವಿನೋದಕ್ಕೆ ತಾನೇ ಸುತ್ತಿದನದಕ್ಕೆ ಸಕಲ ಪ್ರಪಂಚ!!
ತನ್ನ ವಿನೋದಕ್ಕೆ ತಾನೇ ತಿರಿಗಿಸಿದನನಂತ ಭವದುಃಖಂಗಳಲ್ಲಿ
ಇಂತೆನ್ನ ಚೆನ್ನಮಲ್ಲಿಕಾರ್ಜುನದೇವನೆಂಬ ಪರಶಿವನು
ತನ್ನ ಜಗದ್ವಿಲಾಸ ಸಾಕಾದ ಮತ್ತೆ
ತಾನೇ ಪರಿವನಾ ಮಾಯಾಪಾಶವನು!
೫.
ಶಿವಂಗೆ ತಪ್ಪಿದ ಕಾಲ ಭಸ್ಮವಾದುದನರಿಯಾ?
ಶಿವಂಗೆ ತಪ್ಪಿದ ಕಾಮನುರಿದುದನರಿಯಾ?
ಶಿವಂಗೆ ತಪ್ಪಿದ ಬ್ರಹ್ಮನ ಶಿರ ಹೋದುದನರಿಯಾ?
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ತಪ್ಪಿದೆಡೆ
ಭವಘೋರನರಕವೆಂದರಿಯಾ ಮರುಳೇ.
೬.
ಕಾಮ ಬಲ್ಲಿದನೆಂದರೆ
ಉರುಹಿ ಭಸ್ಮವ ಮಾಡಿದ!
ಕಾಲ ಬಲ್ಲಿದನೆಂದರೆ ಕೆಡಹಿ ತುಳಿದ!
ಬ್ರಹ್ಮ ಬಲ್ಲಿದನೆಂದರೆ
ಶಿರವ ಚಿವುಟಿಯಾಡಿದ!
ಎಲೆ ಅವ್ವ, ನೀನು ಕೇಳಾ ತಾಯೆ,
ವಿಷ್ಣು ಬಲ್ಲಿದನೆಂದರೆ
ಮುರಿದು ಕಂಕಾಳವ ಪಿಡಿದ!
ತ್ರಿಪುರದ ಕೋಟೆ ಬಲ್ಲಿತ್ತೆಂದರೆ
ನೊಸಲ ಕಣ್ಣಿಂದುರುಹಿದನವ್ವ!
ಇದು ಕಾರಣ
ಚೆನ್ನಮಲ್ಲಿಕಾರ್ಜುನ ಗಂಡನೆನಗೆ!
ಜನನಮರಣಕ್ಕೊಳಗಾಗದವನ
ಬಲುಹನೇನ ಬಣ್ಣಿಪೆನವ್ವ!?
೭.
ಅಯ್ಯ, ಪಾತಾಳವಿತ್ತಿತ್ತ, ಶ್ರೀಪಾದವತ್ತತ್ತ
ಬ್ರಹ್ಮಾಂಡವಿತ್ತಿತ್ತ, ಮಣಿಮುಕುಟವತ್ತತ್ತ
ಅಯ್ಯ, ದಶದಿಕ್ಕುಇತ್ತಿತ್ತ, ದಶಭುಜಗಳತ್ತತ್ತ
ಚೆನ್ನಮಲ್ಲಿಕಾರ್ಜುನಯ್ಯ,
ನೀವೆನ್ನ ಕರಸ್ಥಲಕ್ಕೆ ಬಂದು ಚುಳುಕಾದಿರಯ್ಯ!
೮.
ದೇವ, ಎನ್ನ ಹೃದಯಕಮಲದೊಳಗೆ ಪ್ರಜ್ವಳಿಪ್ಪ ಬೆಳಗೆ
ದೇವ, ಎನ್ನ ಮನದ ಮೊನೆಯೊಳೊಪ್ಪುತಿರ್ಪ ಬೆಳಗಿನೊಳಗೆ
ಗುರುವೆ ಬಾರ, ಪರವೆ ಬಾರ, ವರವೆ ಬಾರ, ದೇವದೇವ
ಹರನೆ ಬಾರ, ಸುಕೃತಸಾರ ಸರ್ಪಹಾರ ಬಾರ ದೇವ
ವೀರಭದ್ರ, ರುದ್ರ, ದುರಿತದೂರ, ವಿಶ್ವರೂಪ ಬಾರ
ಮಾರಮಥನ, ಪುಣ್ಯಕಥನ, ಸಹಜಮಿಥುನರೂಪ ಬಾರ
ತರಗಿರಿಯ ಪಿರಿಯ ಸಿರಿಯ ಸತ್ಯಶರಣ ಭರಣ ಬಾರ
ಬಾರ ಫಲವೆ, ಫಲದ ರಸವೆ, ರಸದ ಸವಿಯ ಸುಖವೆ ಬಾರ
ಬಾರ ಗುರುವೆ, ಬಾರ ಪರವೆ, ಬಾರ ವರವೆ ಮಲ್ಲಿನಾಥ
ಬಾರ ಧನವೆ, ಬಾರ ಸುಕೃತಸಾರ ಬಾರ ಮಲ್ಲಿನಾಥ
ಬರ ಸಿದ್ಧ, ಭವವಿರುದ್ಧ ಸುಪ್ರಸಿದ್ಧ ಮಲ್ಲಿನಾಥ
ಬಾರ ಮುಡುಹು ಮುಂದಲೆಗಳ ಕುರುಳನೀವೆ ಮಲ್ಲಿನಾಥ ಬಾರ
೯.
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು
ಮನ ಕರಗದವರಲ್ಲಿ ಪುಷ್ಪವನೊಲ್ಲೆಯಯ್ಯ ನೀನು
ಹದುಳಿಗರಲ್ಲದವರಲ್ಲಿ ಗಂಧಾಕ್ಷತಯನೊಲ್ಲೆಯಯ್ಯ ನೀನು
ಅರಿವು ಕಣ್ತೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು
ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು
ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು
ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು
ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು
ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ
ಚೆನ್ನಮಲ್ಲಿಕಾರ್ಜುನಯ್ಯ.
೧೦.
ಅಷ್ಟವಿಧಾರ್ಚನೆಯ ಮಾಡಿ ಒಲಿಸುವೆನೆ ಅಯ್ಯ?
ನೀನು ಬಹಿರಂಗವ್ಯವಹಾರದೂರಸ್ಥನು!
ಅಂತರಂಗದಲ್ಲಿ ಧ್ಯಾನವ ಮಾಡಿ ಒಲಿಸುವೆನೆ ಅಯ್ಯ?
ನೀನು ವಾಙ್ಮನಕ್ಕತೀತನು
ಜಪಸ್ತೋತ್ರದಿಂದ ಒಲಿಸುವೆನೆ ಅಯ್ಯ?
ನೀನು ನಾದಾತೀತನು
ಭಾವಜ್ಞಾನದಿಂದೊಲಿಸುವೆನೆ ಅಯ್ಯ?
ನೀನು ಮತಿಗತೀತನು
ಹೃದಯಕಮಲಮಧ್ಯದಲ್ಲಿ ಇಂಬಿಟ್ಟುಕೊಂಬೆನೇ ಅಯ್ಯ?
ನೀನು ಸರ್ವಾಂಗಪರಿಪೂರ್ಣನು
ಅಯ್ಯ ನಿನ್ನ ಒಲಿಸಲೆನ್ನಳವಲ್ಲ
ನೀ ಒಲಿವುದೆ ಸುಖವಯ್ಯ ಚೆನ್ನಮಲ್ಲಿಕಾರ್ಜುನಯ್ಯ!
೧೧.
ನೀರಕ್ಷೀರದಂತೆ ನೀನಿಪ್ಪೆಯಾಗಿ
ಆವುದು ಮುಂದು, ಆವುದು ಹಿಂದು ಎಂದರಿಯೆನು
ಆವುದು ಕರ್ತೃ, ಆವುದು ಭೃತ್ಯನೆಂದರಿಯೆನು
ಆವುದು ಘನ, ಆವುದು ಕಿರಿದೆಂದರಿಯೆನು
ಚೆನ್ನಮಲ್ಲಿಕಾರ್ಜುನಯ್ಯ, ನಿನ್ನನೊಲಿದು ಕೊಂಡಾಡಿದರೆ
ಇರುಹೆ ರುದ್ರನಾಗದೆ ಹೇಳಯ್ಯ
೧೨.
ಎನ್ನ ಕಾಯ ಮಣ್ಣು, ಜೀವ ಬಯಲು
ಆವುದ ಹಿಡಿವೆನಯ್ಯ ದೇವ?
ನಿಮ್ಮನಾವ ಪರಿಯಲ್ಲಿ ನೆನೆವೆನಯ್ಯ?
ಎನ್ನ ಮಾಯವನು ಮಾಣಿಸಯ್ಯ ಚೆನ್ನಮಲ್ಲಿಕಾರ್ಜುನಯ್ಯ
೧೩.
ಆವಾಗಳೂ ನನ್ನ ಮನ ಉದರಕ್ಕೆ ಹರಿವುದು
ಕಾಣಲಾರೆನಯ್ಯ ನಿಮ್ಮುವನು
ಭೇದಿಸಲಾರೆನಯ್ಯ ನಿಮ್ಮ ಮಾಯೆಯನು
ಮಾಯದ ಸಂಸಾರದಲ್ಲಿ ಸಿಲುಕಿದೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಹೊದ್ದುವಂತೆ ಮಾಡಾ ನಿಮ್ಮ ಧರ್ಮ
೧೪.
ಕಲ್ಲ ಹೊಕ್ಕರೆ ಕಲ್ಲ ಬಿರಿಸಿದೆ
ಗಿರಿಯ ಹೊಕ್ಕರೆ ಗಿರಿಯ ಬಿರಿಸಿದೆ
ಭಾಪು ಸಂಸಾರವೇ, ಬೆನ್ನಿಂದ ಬೆನ್ನ ಹತ್ತಿ ಬಂದೆ
ಚೆನ್ನಮಲ್ಲಿಕಾರ್ಜುನಯ್ಯ, ಇನ್ನೇವೆನಿನ್ನೇವೆ!?
೧೫.
ಸಂಸಾರವೆಂಬ ಹಗೆಯಯ್ಯ, ತಂದೆ,
ಎನ್ನ ವಂಶವಂಶ ತಪ್ಪದೆ ಅರಸಿಕೊಂಡು ಬರುತ್ತಿದೆಯಯ್ಯ
ಎನ್ನುವನರಸಿಯರಸಿ ಹಿಡಿದು ಕೊಲ್ಲುತ್ತಿದೆಯಯ್ಯ
ನಿಮ್ಮ ಮರೆವೊಕ್ಕೆ ಕಾಯಯ್ಯ
ಎನ್ನ ಬಿನ್ನಪವನವಧಾರು, ಚೆನ್ನಮಲ್ಲಿಕಾರ್ಜುನಯ್ಯ
೧೬.
ಬೆಂದ ಸಂಸಾರ ಬೆಂಬಿಡದೆ ಕಾಡುತ್ತಿರುವುದಯ್ಯ
ಏವೆನಯ್ಯ ಏವೆನಯ್ಯ?
ಅಂದಂದಿನ ದಂದುಗಕ್ಕೆ ಏವೆನಯ್ಯ ಏವೆನಯ್ಯ?
ಬೆಂದೊಡಲ ಹೊರೆವುದಕ್ಕೆ ನಾನಾರೆ
ಚೆನ್ನಮಲ್ಲಿಕಾರ್ಜುನ, ಕೊಲ್ಲು ಕಾಯಿ ನಿಮ್ಮ ಧರ್ಮ!
೧೭.
ತೆರಣಿಯ ಹುಳು ತನ್ನ ಸ್ನೇಹದಿಂದ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸುತ್ತಿ ಸಾವ ತೆರನಂತೆ
ಮನ ಬಂದುದ ಬಯಸಿ ಬಯಸಿ ಬೇವುತ್ತಿರುವೆನಯ್ಯ!
ಅಯ್ಯ, ಎನ್ನ ಮನದ ದುರಾಶೆಯ ಮಾಣಿಸಿ
ನಿಮ್ಮತ್ತ ತೋರಾ, ಚೆನ್ನಮಲ್ಲಿಕಾರ್ಜುನ
೧೮.
ಒಂದಲ್ಲ ಎರಡಲ್ಲ ಮೂರಲ್ಲ ನಾಲ್ಕಲ್ಲ-
ಎಂಬತ್ತುನಾಲ್ಕು ಲಕ್ಷ ಯೋನಿಯೊಳಗೆ
ಬಂದೆ ಬಂದೆ ಬಾರದ ಭವಗಳನುಂಡೆನುಂಡೆ ಸುಖಾಸುಖಂಗಳ
ಹಿಂದಣ ಜನ್ಮಂಗಳು ತಾನೇನಾದರಾಗಲಿ
ಇಂದು ನೀ ಕರುಣಿಸು ಚೆನ್ನಮಲ್ಲಿಕಾರ್ಜುನ
೧೯.
ಪುಣ್ಯಪಾಪಂಗಳನರಿಯದ ಮೊದಲು
ಭವ ಭವಂಗಳಲಿ ಬಂದೆನಯ್ಯ
ನಂಬಿ ಬಂದು ಶರಣುಹೊಕ್ಕೆನಯ್ಯ
ನಿಮ್ಮನೆಂದೂ ಅಗಲದಂತೆ ಮಾಡಿ ನಡೆಸಯ್ಯ
ನಿಮ್ಮ ಧರ್ಮ, ನಿಮ್ಮ ಧರ್ಮ!!
ನಿಮ್ಮನೊಂದನೇ ಬೇಡುವೆನು
ಎನ್ನ ಬಂಧನವ ಬಿಡುವಂತೆ ಮಾಡಯ್ಯ ಶ್ರೀ ಚೆನ್ನಮಲ್ಲಿಕಾರ್ಜುನ
೨೦.
ಕೋಲ ತುದಿಯ ಕೋಡಗದಂತೆ
ನೇಣ ತುದಿಯ ಬೊಂಬೆಯಂತೆ
ಆಡಿದೆನಯ್ಯ ನೀನಾಡಿಸಿದಂತೆ
ನಾ ನುಡಿದೆನಯ್ಯ ನೀ ನುಡಿಸಿದಂತೆ
ನಾನಿದ್ದೇನಯ್ಯ ನೀನಿರಿಸಿದಂತೆ
ಜಗದ ಯಂತ್ರವಾಹಕ ಚೆನ್ನಮಲ್ಲಿಕಾರ್ಜುನ ಸಾಕೆಂಬನ್ನಕ
೨೧.
ಅಲ್ಲೆಂದೊಡೆ ಉಂಟೆಂಬುದೀ ಮಾಯೇ,
ಒಲ್ಲೆನೆಂದೆಡೆ ಬಿಡದೀ ಮಾಯೇ, ಎನಗಿದು ವಿಧಿಯೇ?
ಚೆನ್ನಮಲ್ಲಿಕಾರ್ಜುನಯ್ಯ, ಒಪ್ಪಿ ಮರೆವೊಕ್ಕೊಡೆ ಮತ್ತುಂಟೆ
ಕಾಯಯ್ಯ ಶಿವಧೋ!
೨೨.
ಕಾಯ ಮೀಸಲಾಗಿ ನಿನಗರ್ಪಿತವಾಯಿತ್ತು
ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು, ಆನೊಂದರಿಯೆನಯ್ಯ
ಎನ್ನ ಗತಿ ನೀನಾಗಿ, ಎನ್ನ ಮತಿ ನೀನಾಗಿ,
ಪ್ರಾಣ ನಿನಗರ್ಪಿತವಾಯಿತ್ತು,
ನೀನಲ್ಲದೆ ಪೆರತೊಂದ ನೆನೆದರೆ ಆಣೆ
ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ
೨೩.
ಹಿಂದಣ ಹಳ್ಳ, ಮುಂದಣ ತೊರೆ,
ಸಲ್ಲುವ ಪರಿಯೆಂತು ಹೇಳಾ! ಹಿಂದಣ ಕೆರೆ, ಮುಂದಣ ಬಲೆ
ಹದುಳವಿನ್ನೆಲ್ಲಿಯದು ಹೇಳಾ
ನೀನಿಕ್ಕಿದ ಮಾಯೆ ಕೊಲುತಿಪ್ಪುದು
ಕಾಯಯ್ಯ ಕಾಯಯ್ಯ ಚೆನ್ನಮಲ್ಲಿಕಾರ್ಜುನ
೨೪.
ಭವಭವದಲಿ ತೊಳಲಿ ಬಳಲಿತ್ತೆನ್ನ ಮನ
ಆನೇವೆನಯ್ಯ,
ಹಸಿದುಂಡೊಡೆ, ಉಂಡು ಹಸಿವಾಯಿತ್ತು
ಇಂದು ನೀನೊಲಿದೆಯಾಗಿ
ಎನಗೆ ಅಮೃತದ ಆಪ್ಯಾಯನವಾಯಿತ್ತು
ಇದು ಕಾರಣ ನೀನಿಕ್ಕಿದ ಮಾಯೆಯನಿನ್ನು ಮೆಟ್ಟಿದೆನಾದೊಡೆ
ಆಣೆ ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ
೨೫.
ಹರಿಯ ನುಂಗಿತ್ತು ಮಾಯೆ! ಅಜನ ನುಂಗಿತ್ತು ಮಾಯೆ!
ಇಂದ್ರನ ನುಂಗಿತ್ತು ಮಾಯೆ! ಚಂದ್ರನ ನುಂಗಿತ್ತು ಮಾಯೆ!
ಬಲ್ಲೆನೆಂಬ ಬಲುಗೈಯರ ನುಂಗಿತ್ತು ಮಾಯೆ!
ಅರಿಯೆನೆಂಬ ಅಜ್ಞಾನಿಗಳ ನುಂಗಿತ್ತು ಮಾಯೆ!
ಈರೇಳು ಭುವನವನಾರಡಿಗೊಂಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನಯ್ಯ,
ಎನ್ನ ಮಾಯೆಯ ಮಾಣಿಸಾ ಕರುಣಿ
೨೬.
ಕಾಯಕ್ಕೆ ನೆಳಲಾಗಿ ಕಾಡಿತ್ತು ಮಾಯೆ!
ಪ್ರಾಣಕ್ಕೆ ಮನವಾಗಿ ಕಾಡಿತ್ತು ಮಾಯೆ!
ಮನಕ್ಕೆ ನೆನಹಾಗಿ ಕಾಡಿತ್ತು ಮಾಯೆ!
ನೆನಹಿಂಗೆ ಅರಿವಾಗಿ ಕಾಡಿತ್ತು ಮಾಯೆ!
ಜಗದ ಜಂಗುಳಿಗೆ ಬೆಂಗೋಲನೆತ್ತಿ ಕಾಡಿತ್ತು ಮಾಯೆ!
ಚೆನ್ನಮಲ್ಲಿಕಾರ್ಜುನ, ನೀನೊಡ್ಡಿದ ಮಾಯೆಯನಾರೂ ಗೆಲಬಾರದು
೨೭.
ಬಿಟ್ಟೆನೆಂದರೂ ಬಿಡದೀ ಮಾಯೆ!
ಬಿಡದಿದ್ದರೆ ಬೆಂಬತ್ತಿತ್ತು ಮಾಯೆ!
ಯೋಗಿಗೆ ಯೋಗಿಣಿಯಾಯಿತ್ತು ಮಾಯೆ!
ಸವಣಂಗೆ ಸವಣಿಯಾಯಿತ್ತು ಮಾಯೆ!
ಯತಿಗೆ ಪರಾಕಿಯಾಯಿತ್ತು ಮಾಯೆ!
ನಿನ್ನ ಮಾಯೆಗೆ ನಾನಂಜುವವಳಲ್ಲ
ಚೆನ್ನಮಲ್ಲಿಕಾರ್ಜುನದೇವ, ನಿಮ್ಮಾಣೆ
೨೮.
ಬಿಟ್ಟಿರ್ಪನೆಂದೊಡಂ ಬಿಡದು ನಿನ್ನಯ ಮಾಯೆ!
ಒಟ್ಟಯಿಸಿ ಬಂದೊಡೊಡವಂದಪ್ಪುದೀ ಮಾಯೆ!
ಬಿಡದು ನಿನ್ನಯ ಮಾಯೆ ಒಟ್ಟಯಿಸಿ ನಿಂದೊಡಂ
ಒಡವಂದರೊಡಬಪ್ಪುದೀ ಮಾಯೆ ಸಂಗಡಂ
ಜೋಗಿಗಂ ಜೋಗಿಣಿಯದಾಯ್ತು ನಿನ್ನಯ ಮಾಯೆ!
ರಾಗದಿಂ ಸವಣಂಗೆ ಕಂತಿಯಾಯ್ತೀ ಮಾಯೆ!
ಭಗವಂಗೆ ಮಾಸಕಬ್ಬೆಯ ಚೋಹವಾಯ್ತಯ್ಯ
ಬಗೆವರಾರವರಿಗವರಂದವಾಯಿತ್ತಯ್ಯ!
ಗಿರಿಯನೇರಿದೊಡಿರದೆ ಗಿರಿಯನೇರಿತು ಮಾಯೆ!
ಪರಿದಡವಿಯಂ ಪೊಕ್ಕೊಡೊಡನೆ ಪೊಕ್ಕುದು ಮಾಯೆ!
ಬೆನ್ನ ಕೈಯಂ ಬಿಡದು ಭಾಪು ಸಂಸಾರವೆ
ಎನ್ನಂ ನಂಬಿಸಿತು ಮಝಪೂತು ಸಂಸಾರವೆ
ಕರುಣಕರ ನಿನ್ನ ಮಾಯೆಗಂಜುವೆನಯ್ಯ
ಪರಮೇಶ್ವರ ಮಲ್ಲಿನಾಥ ಕರುಣಿಪುದಯ್ಯ
ಇನ್ನೇವೆನಿನ್ನೇವೆನಯ್ಯೋ ಮಹಾದೇವ
ಪನ್ನಗಾಭರಣ ಕರುಣಿಸುವುದೆಲೆ ಮಹದೇವ
೨೯.
ಎನ್ನ ಮಾಯದ ಮದವ ಮುರಿಯಯ್ಯ
ಎನ್ನ ಕಾಯದ ಕಳವಳವ ಕೆಡಿಸಯ್ಯ
ಎನ್ನ ಜೀವದ ಜಂಜಡವ ಬಿಡಿಸಯ್ಯ
ಎನ್ನ ದೇವ ಮಲ್ಲಿಕಾರ್ಜುನಯ್ಯ,
ಎನ್ನ ಸುತ್ತಿದ ಮಾಯಾಪ್ರಪಂಚವ ಬಿಡಿಸಾ ನಿಮ್ಮ ಧರ್ಮ!
೩೦.
ವರಚಕ್ರಿ ಬೆಸಗೆಯ್ವೊಡೆ ಅಲಗಿನ ಹಂಗೇಕೆ?
ಪರುಷ ಕೈಯಲುಳ್ಳೊಡೆ ಸಿರಿಯ ಹಂಗೇಕೆ?
ಮಾಣಿಕ್ಯದ ಬೆಳಗುಳ್ಳೊಡೆ ಜ್ಯೋತಿಯ ಹಂಗೇಕೆ?
ಕಾಮಧೇನು ಕರೆವೆಡೆ ಕರುವಿನ ಹಂಗೇಕೆ?
ಎನ್ನ ದೇವ ಶ್ರೀಶೈಲ ಚೆನ್ನಮಲ್ಲಿಕರ್ಜುನನುಳ್ಳೊಡೆ
ಮರಳಿ ಸಂಸಾರದ ಹಂಗೇಕೆ?
೩೧.
ಊರ ಸೀರೆಗೆ ಅಗಸ ತಡಬಡಗೊಂಬಂತೆ
ಹೊನ್ನೆನ್ನದು ಹೆಣ್ಣೆನ್ನದು ಮಣ್ಣೆನ್ನದು ಎಂದು ನೆನೆನೆನೆದು
ನಿಮ್ಮನರಿಯದ ಕಾರಣ ಕೆಮ್ಮನೆ ಕೆಟ್ಟೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೩೨.
ದೇವ ಎನಗೆ ಭವಿಯ ಸಂಗವೆಂದು ಮಾಣ್ಪುದೆನ್ನ ತಂದೆ
ದೇವ ಬೆರಕೆಯಿಲ್ಲದಚ್ಚಬಕುತಿ ಸುಖವದೆಂದು ತಂದೆ
ಪೂಜೆಯೊಳಗೆ ಮೆಚ್ಚ ಬೆಚ್ಚ ಮನವನೆಂತು ತೆಗೆವೆನಯ್ಯ
ಪೂಜೆಯೊಳಗೆ ನೆಟ್ಟ ದಿಟ್ಟಿಗಳನದೆಂತು ಕೀಳ್ವೆನಯ್ಯ
[ಚೆನ್ನಮಲ್ಲಿಕಾರ್ಜುನ]
೩೩.
ದೇವ ಶಿವಲಾಂಛನವನೇರಿಸಿಕೊಂಡು
ಮನೆಗೆ ಬಂದವರಂ ಕಡೆಗಣಿಸೆ
ಎಂತು ನೋಡುತಿರ್ಪೆನ್?
ಆವರ್ಗೆ ಸತ್ಕಾರವಂ
ಮಾಡಲಿಲ್ಲದಿರ್ದೊಡೆ
ಎನ್ನನೀ ಧರೆಯ ಮೇಲಿರಿಸುವ ಕಾರಣವೇನಭವ?
ನಿನ್ನವಳೆಂದೆನ್ನ ಮುದ್ದುತನವ ಸಲಿಸುವೊಡಿರಿಸುವುದು
ಇಲ್ಲಾ ಕೈಲಸಕ್ಕೆ ಕೊಂಡೊಯ್ವುದು [ಚೆನ್ನಮಲ್ಲಿಕಾರ್ಜುನ]
೩೪.
ಅಶನದಾಶಯಂ, ತೃಷೆಯ ತೃಷ್ಣೆಯಂ,
ಬೆಸನದ ಬೇಗೆಯಂ, ವಿಷಯದ ವಿಹ್ವಳತೆಯಂ,
ತಾಪತ್ರಯದ ಕಲ್ಪನೆಗಳಂ ಗೆಲಿದೆ
ಇನ್ನೇನಿನ್ನೇನೆನ್ನಿಚ್ಛೆಯಾದುದು
ಚೆನ್ನಮಲ್ಲಿಕಾರ್ಜುನ ನಿನಗಂಜೆನಂಜೆ
೩೫.
ಶಿವನೇ, ಉಳಿವ ಕರೆವ ನೇಹವುಂಟೆ?
ಸಂಸಾರಕ್ಕಂ ನಿಮ್ಮಲ್ಲಿ ಗೆಡೆಯಾಡುವ ಭಕ್ತಿಯುಂಟೇ?
ಏನಯ್ಯ ಶಿವನೇ,
ಏನೆಂದು ಪೇಳ್ವೆ ಲಜ್ಜೆಯ ಮಾತ, [ಚೆನ್ನಮಲ್ಲಿಕಾರ್ಜುನ]
೩೬.
ಒಳಗೆ ಶೋಧಿಸಿ, ಹೊರಗೆ ಶುದ್ಧವಿಸಿ,
ಒಳ-ಹೊರಗೆಂಬ ಉಭಯಶಂಕೆಯ ಕಳೆದು,
ಸ್ಫಟಿಕದ ಶಲಾಕೆಯಂತೆ ತಳವೆಳಗುಮಾಡಿ,
ಸುಕ್ಷೇತ್ರವನರಿದು ಬೀಜವ ಬಿತ್ತುವಂತೆ,
ಶಿಷ್ಯನ ಸರ್ವಪ್ರಪಂಚ ನಿವೃತ್ತಿಯಂ ಮಾಡಿ, ನಿಜೋಪದೇಶವನಿತ್ತು
ಆ ಶಿಷ್ಯನ ನಿಜದಾದಿಯನೈದಿಸುವನೀಗ ದೀಕ್ಷಾಗುರು!
ಆ ಸಹಜಗುರುವೀಗ ಜಗದಾರಾಧ್ಯನು
ಅವನ ಪಾದಕ್ಕೆ ನಮೋ ನಮೋ ಎಂಬೆ ಕಾಣಾ ಚೆನ್ನಮಲ್ಲಿಕಾರ್ಜುನ
೩೭.
ಗುರುವೆಂಬ ತೆತ್ತಿಗನೆನಗೆ
ಲಿಂಗವೆಂಬಲಗನು ಮನುನಿಷ್ಠೆಯೆಂಬ ಕೈಯಲ್ಲಿ ಕೊಡಲು
ಕಾದುವೆನು, ಗೆಲುವೆನು ಕಾಮನೆಂಬುವನ!
ಕ್ರೋಧಾದಿಗಳು ಕೆಟ್ಟು, ವಿಷಯಂಗಳೋಡಿದವು
ಅಲಗು ಎನ್ನೊಳಗೆ ನಟ್ಟು ಆನಳಿದ ಕಾರಣ
ಚೆನ್ನಮಲ್ಲಿಕಾರ್ಜುನಲಿಂಗವ ಕರದಲ್ಲಿ ಹಿಡಿದೆ
೩೮.
ಗುರುವಿನ ಕರುಣದಿಂದ ಲಿಂಗ-ಜಂಗಮನ ಕಂಡೆ
ಗುರುವಿನ ಕರುಣದಿಂದ ಪಾದೋದಕ-ಪ್ರಸಾದವ ಕಂಡೆ
ಗುರುವಿನ ಕರುಣದಿಂದ ಸಜ್ಜನಸದ್ಭಕ್ತರ ಗೋಷ್ಠಿಯ ಕಂಡೆ
ಚೆನ್ನಮಲ್ಲಿಕಾರ್ಜುನಯ್ಯ,
ನಾ ಹುಟ್ಟಲೊಡನೆ ವಿಭೂತಿಯ ಪಟ್ಟವ ಕಟ್ಟಿ
ಸದ್ಗುರುಸ್ವಾಮಿ ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು
೩೯.
ಗುರುವಿನ ಕರುಣದಿಂದ ಲಿಂಗ-ಜಂಗಮನ ಕಂಡ್
ಗುರುವಿನ ಕರುಣದಿಂದ ಪಾದೋದಕ-ಪ್ರಸಾದವ ಕಂಡೆ
ಗುರುವಿನ ಕರುಣದಿಂದ ಸಜ್ಜನಸದ್ಭಕ್ತರ ಗೋಷ್ಠಿಯ ಕಂಡೆ
ಚೆನ್ನಮಲ್ಲಿಕಾರ್ಜುನಯ್ಯ, ನಾ ಹುಟ್ಟಲೊಡನೆ
ವಿಭೂತಿಯ ಪಟ್ಟವ ಕಟ್ಟಿ ಸದ್ಗುರುಸ್ವಾಮಿ
ಲಿಂಗಸ್ವಾಯತವ ಮಾಡಿದನಾಗಿ ಧನ್ಯಳಾದೆನು
೪೦.
ಅರಸಿ ಮರೆವೊಕ್ಕೊಡೆ ಕಾವ ಗುರುವೇ,
ಜಯ ಜಯ ಗುರುವೇ
ಆರೂ ಅರಿಯದ ಬಯಲೊಳಗೆ ಬಯಲಾಗಿ
ನಿಂದ ನಿಲವ ಹಿಡಿದೆನ್ನ ಕರದಲ್ಲಿ ತೋರಿದ ಗುರುವೇ
ಚೆನ್ನಮಲ್ಲಿಕಾರ್ಜುನ ಗುರುವೇ, ಜಯ ಜಯ ಗುರುವೇ.
೪೧.
ಶ್ರೀ ಗುರುಲಿಂಗದೇವರು ತಮ್ಮ ಹಸ್ತವ ತಂದು
ಎನ್ನ ಮಸ್ತಕದ ಮೇಲೆ ಇರಿಸಿದಾಗಳೇ
ಎನ್ನ ಭವಂ ನಾಸ್ತಿಯಾಯಿತ್ತು! ಎನ್ನ ತನ್ನಂತೆ ಮಾಡಿದ!
ಎನಗೆ-ತನಗೆ ತೆರಹಿಲ್ಲದಂತೆ ಮಾಡಿ ತೋರಿದನು ನೋಡಾ!
ತನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಕರಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಕರಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಮನಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಮನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಭಾವಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಭಾವಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಜ್ಞಾನಸ್ಥಲದಲ್ಲಿ ಮೂರ್ತಿಗೊಳಿಸಿದ!
ಎನ್ನ ಜ್ಞಾನಸ್ಥಲದಲ್ಲಿದ್ದ ಮಹಾಲಿಂಗವನು
ಎನ್ನ ಸರ್ವಾಂಗದೊಳಹೊರಗೆ ತೆರಹಿಲ್ಲದಳವಡಿಸಿದ
ನಮ್ಮ ಗುರುಲಿಂಗದೇವ ಚೆನ್ನಮಲ್ಲಿಕಾರ್ಜುನ
೪೨.
ನಿತ್ಯವೆನ್ನ ಮನೆಗೆ ನಡೆದು ಬಂದಿತ್ತು
ಮುಕ್ತಿಯೆನ್ನ ಮನೆಗೆ ನಡೆದು ಬಂದಿತ್ತು
ಜಯ ಜಯ ಗುರು ನಮೋ
ಪರಮ ಗುರುವೆ ನಮೋ ನಮೋ
ಚೆನ್ನಮಲ್ಲಿಕಾರ್ಜುನನ ತಂದೆನಗೆ ತೋರಿ ಕೊಟ್ಟ
ಗುರುವೆ ನಮೋ ನಮೋ
೪೩.
ನರ-ಜನ್ಮವ ತೊಡೆದು
ಹರ-ಜನ್ಮವ ಮಾಡಿದ ಗುರುವೆ
ಭವಬಂಧನವ ಬಿಡಿಸಿ
ಪರಮಸುಖವ ತೋರಿದ ಗುರುವೆ
ಭವಿ ಎಂಬುದ ತೊಡೆದು
ಭಕ್ತೆ ಎಂದೆನಿಸಿದ ಗುರುವೆ
ಚೆನ್ನಮಲ್ಲಿಕಾರ್ಜುನನ ತಂದೆನ್ನ ಕೈವಶಕೆ
ಕೊಟ್ಟ ಗುರುವೆ ನಮೋ ನಮೋ
೪೪.
ಸಂಸಾರಸಾಗರದೊಳಗೆ ಬಿದ್ದೆ ನೋಡಾ ನಾನು
ಸಂಸಾರ ನಿಸ್ಸಾರವೆಂದು ತೋರಿದನೆನಗೆ ಗುರು
ಅಂಗ ವಿಕಾರದ ಸಂಗವ ನಿಲಿಸಿ
ಲಿಂಗವನಂಗದ ಮೇಲೆ ಸ್ಥಾಪ್ಯವ ಮಾಡಿದನೆನ್ನ ಗುರು
ಹಿಂದಣ ಜನ್ಮವ ತೊಡೆದು
ಮುಂದಣ ಪಥವ ತೋರಿದನೆನ್ನ ತಂದೆ
ಚೆನ್ನಮಲ್ಲಿಕಾರ್ಜುನನ ನಿಜವನರುಹಿದನೆನ್ನ ಗುರು
೪೫.
ಅರಲುಗೊಂಡ ಕೆರೆಗೆ ತೊರೆ ಬಂದು ಹಾಯ್ದಂತೆ
ಬರಲುಗೊಂಡ ಸಸಿಗೆ ಮಳೆಸುರಿದಂತಾಯ್ತು ನೋಡಾ!
ಇಂದೆನಗೆ ಇಹದ ಸುಖ, ಪರದ ಗತಿ ನಡೆದು ಬಂದಂತಾಯಿತ್ತು
ನೋಡಾ ಚೆನ್ನಮಲ್ಲಿಕಾರ್ಜುನಯ್ಯ ಗುರುಪಾದವ ಕಂಡು
ಧನ್ಯಳಾದೆನು ನೋಡಾ
೪೬.
ಲೋಕದ ಚೇಷ್ಟೆಗೆ ರವಿ ಬೀಜವಾದಂತೆ
ಕರಣಂಗಳ ಚೇಷ್ಟೆಗೆ ಮನವೇ ಬೀಜ!
ಎನಗುಳ್ಳುದೊಂದು ಮನ,
ಆ ಮನ ನಿಮ್ಮಲ್ಲಿ ಒಡೆವೆರೆದ ಬಳಿಕ
ಎನಗೆ ಭಯವುಂಟೆ ಚೆನ್ನಮಲ್ಲಿಕಾರ್ಜುನಯ್ಯ!?
೪೭.
ಅಂಗವ ಲಿಂಗಮುಖಕ್ಕೆ ಅರ್ಪಿಸಿ
ಅಂಗ ಅನಂಗವಾಯಿತ್ತು
ಮನವ ಅರಿವಿಂಗರ್ಪಿಸಿ ಮನ ಲಯವಾಯಿತ್ತು
ಭಾವವ ತೃಪ್ತಿಗರ್ಪಿಸಿ ಭಾವ ಬಯಲಾಯಿತ್ತು
ಅಂಗ-ಮನ-ಭಾವವಳಿದ ಕಾರಣ ಕಾಯ ಅಕಾಯವಾಯಿತ್ತು
ಎನ್ನ ಅಕಾಯದ ಸುಖವ ಲಿಂಗ ಭೋಗಿಸುವನಾಗಿ
ಶರಣಸತಿ-ಲಿಂಗಪತಿಯಾದೆನು!
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗಂಡನ ಒಳಹೊಕ್ಕು ಬೆರೆಸಿದೆನು!
೪೮.
ಹರನೇ ನೀನೆನಗೆ ಗಂಡನಾಗಬೇಕೆಂದು
ಅನಂತಕಾಲ ತಪಿಸಿದ್ದೆ ನೋಡಾ!
ಹದೆಯ ಮೇಲಣ ಮಾತ ಬೆಸಗೊಳಲಟ್ಟಿದರೆ
ಶಶಿಧರನ ಹತ್ತಿರಕ್ಕೆ ಕಳುಹಿದರೆಮ್ಮವರು
ಭಸ್ಮವನೇ ಪೂಸಿ ಕಂಕಣವನೆ ಕಟ್ಟಿದರು
ಚೆನ್ನಮಲ್ಲಿಕಾರ್ಜುನ ತನಗೆ ನಾನಾಗಬೇಕೆಂದು!
೪೯.
ಜಲದ ಮಂಟಪದ ಮೇಲೆ
ಉರಿಯ ಚಪ್ಪರವನಿಕ್ಕಿ,
ಆಲಿಕಲ್ಲ ಹಸೆಯ ಹಾಸಿ, ಬಾಸಿಗವ ಕಟ್ಟಿ
ಕಾಲಿಲ್ಲದ ಹೆಂಡತಿಗೆ
ತಲೆಯಿಲ್ಲದ ಗಂಡ ಬಂದು ಮುಟ್ಟಿದನು ನೋಡಾ!
ಎಂದೆಂದೂ ಬಿಡದ ಬಾಳುವೆಗೆ ಕೊಟ್ಟರೆನ್ನ
ಚೆನ್ನಮಲ್ಲಿಕಾರ್ಜುನಯ್ಯನಿಗೆ!
೫೦.
ಎನ್ನ ನಾನರಿಯದಂದು ಮುನ್ನ ನೀನೆಲ್ಲಿರ್ದೆ? ಹೇಳಯ್ಯ!
ಚಿನ್ನದೊಳಗಣ ಬಣ್ಣದಂತೆ ಎನ್ನೊಳಗಿರ್ದೆಯಯ್ಯ
ಎನ್ನೊಳಗಿರ್ದು ಮೈದೋರದ ಭೇದವ
ನಿಮ್ಮಲ್ಲಿ ಕಂಡೆನು ಕಾಣಾ ಚೆನ್ನಮಲ್ಲಿಕಾರ್ಜುನ
೫೧.
ಅಂಗ ಲಿಂಗವ ವೇಧಿಸಿ
ಅಂಗ ಲಿಂಗದೊಳಗಾಯಿತ್ತು
ಮನ ಲಿಂಗವ ವೇಧಿಸಿ
ಮನ ಲಿಂಗದೊಳಗಾಯಿತ್ತು
ಭಾವ ಲಿಂಗವ ವೇಧಿಸಿ
ಭಾವ ಲಿಂಗದೊಳಗಾಯಿತ್ತು
ಚೆನ್ನಮಲ್ಲಿಕಾರ್ಜುನ, ನಿಮ್ಮ ಒಲುಮೆಯ ಸಂಗದಲ್ಲಿರ್ದು
ಸ್ವಯಂಲಿಂಗಿಯಾದೆನು
೫೨.
ನಿನ್ನರಿಕೆಯ ನರಕವೇ ಮೋಕ್ಷ ನೋಡಯ್ಯ
ನಿನ್ನರಿಯದ ಮುಕ್ತಿಯೇ ನರಕ ಕಂಡಯ್ಯ
ನೀನೊಲ್ಲದ ಸುಖವೇ ದುಃಖ ಕಂಡಯ್ಯ
ನೀನೊಲಿದ ದುಃಖವೇ ಪರಮಸುಖ ಕಂಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನೀ ಕಟ್ಟಿ ಕೆಡಹಿದ ಬಂಧನವೇ ನಿರ್ಬಂಧನವೆಂದಿಪ್ಪೆನು
೫೩.
ಹಾಲು ತುಪ್ಪವ ನುಂಗಿ ಬೇರಾಗಬಲ್ಲುದೆ?
ಸೂರ್ಯಕಾಂತದಗ್ನಿಯನಾರು ಭೇದಿಸಬಲ್ಲರು?
ಅಪಾರಮಹಿಮ ಚೆನ್ನಮಲ್ಲಿಕಾರ್ಜುನನೆನ್ನೊಳಡಗಿಪ್ಪ ಪರಿಯ
ಬೇರಿಲ್ಲದೆ ಕಂಡು ಕಣ್ತೆರೆದೆನು
೫೪.
ಘನವ ಕಂಡೆ, ಅನುವ ಕಂಡೆ
ಆಯತ-ಸ್ವಾಯತ-ಸನ್ನಿಹಿತ ಸುಖವ ಕಂಡೆ
ಅರಿವನರಿದು ಮರಹ ಮರೆದೆ
ಕುರುಹಿನ ಮೋಹದ ಮರವೆಯನೀಡಾಡಿದೆ
ಚೆನ್ನಮಲ್ಲಿಕಾರ್ಜುನ, ನಿಮ್ಮನರಿದು ಸೀಮೆಗೆಟ್ಟೆನು
೫೫.
ಕ್ರೀಗಳು ಮುಟ್ಟಲರಿಯವು ನಿಮ್ಮನೆಂತು ಪೂಜಿಸುವೆ?
ನಾದ-ಬಿಂದುಗಳು ಮುಟ್ಟಲರಿಯವು ನಿಮ್ಮನೆಂತು ಹಾಡುವೆ?
ಕಾಯ ಮುಟ್ಟುವೊಡೆ ಕಾಣಬಾರದ ಘನವು
ನಿಮ್ಮನೆಂತು ಕರಸ್ಥಲದಲಿ ಧರಿಸುವೆ?
ಚೆನ್ನಮಲ್ಲಿಕಾರ್ಜುನಯ್ಯ, ನಾನೇನೆಂದರಿಯದೆ
ನಿಮ್ಮ ನೋಡಿ ನೋಡಿ ಸೈವೆರೆಗಾಗುತಿರ್ದೆನು
೫೬.
ಸಜ್ಜನವಾಗಿ ಮಜ್ಜನಕ್ಕೆರೆವೆ
ಶಾಂತಳಾಗಿ ಪೂಜೆಯ ಮಾಡುವೆ
ಸಮರತಿಯಿಂದ ನಿಮ್ಮ ಕೂಡುವೆ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನಲಗದ ಪೂಜೆ ಅನುವಾಯಿತ್ತೆನಗೆ
೫೭.
ಎಲ್ಲ ಎಲ್ಲವನರಿದು ಫಲವೇನಯ್ಯ?
ತನ್ನ ತಾನರಿಯಬೇಕಲ್ಲದೆ?
ತನ್ನಲ್ಲಿ ಅರಿವು ಸ್ವಯವಾಗಿರಲು ಅನ್ಯರ ಕೇಳಲುಂಟೆ?
ಚೆನ್ನಮಲ್ಲಿಕಾರ್ಜುನ, ನೀ ಅರಿವಾಗಿ ಮುಂದೋರಿದ ಕಾರಣ
ನಿಮ್ಮಿಂದ ನಿಮ್ಮನರಿದೆನಯ್ಯ ಪ್ರಭುವೆ
೫೮.
ಚಂದನವ ಕಡಿದು ಕೊರೆದು ತೇದೊಡೆ
ನೊಂದೆನೆಂದು ಕಂಪ ಬಿಟ್ಟಿತ್ತೆ?
ತಂದು ಸುವರ್ಣವ ಕಡಿದೊರೆದೆಡೆ ಬೆಂದು ಕಳಂಕ ಹಿಡಿದಿತ್ತೆ?
ಸಂದು ಸಂದನು ಕಡಿದು ಕಬ್ಬನು ತಂದು ಗಾಣದಲಿಕ್ಕಿ ಅರೆದೊಡೆ
ಬೆಂದು ಪಾಕಗೂಳ ಸಕ್ಕರೆಯಾಗಿ ನೊಂದೆನೆಂದು ಸವಿಯ ಬಿಟ್ಟಿತ್ತೆ?
ನಾ ಹಿಂದೆ ಮಾಡಿದ ಹೀನಂಗಳೆಲ್ಲವ ತಂದು ಮುಂದಿಳುಹಲು
ನಿಮಗೆ ಹಾನಿ
ಎನ್ನ ತಂದೆ ಮಲ್ಲಿಕಾರ್ಜುನದೇವಯ್ಯ,
ಕೊಂದೊಡೆ ಶರಣೆಂಬುದ ಮಾಣೆ
೫೯.
ಒಡಲ ಕಳವಳಕ್ಕಾಗಿ ಅಡವಿಯ ಹೊಕ್ಕೆನು
ಗಿಡುಗಿಡುದಪ್ಪದೆ ಬೇಡಿದೆನೆನ್ನಂಗಕ್ಕೆಂದು
ಆವು ನೀಡಿದವು ತಮ್ಮ ಲಿಂಗಕ್ಕೆಂದು
ಆನು ಬೇಡಿ ಭವಿಯಾದೆನು
ಆವು ನೀಡಿ ಭಕ್ತರಾದರು
ಇನ್ನು ಬೇಡಿದೆನಾದರೆ, ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮಾಣೆ
೬೦.
ಗಿರಿಯೊಳು ವನದೊಳು ಗಿಡಗಿಡದತ್ತ
ದೇವ ಎನ್ನ ದೇವ ಬಾರಯ್ಯ ತೋರಯ್ಯ ನಿಮ್ಮ ಕರುಣವನೆಂದು
ನಾನು ಅರಸುತ್ತ ಅಳಲುತ್ತ ಕಾಣದೇ ಸುಯಿದು ಬಂದು
ಕಂಡೆ ಶರಣರ ಸಂಗದಿಂದ
ಅರಸಿ ಹಿಡಿದೇನೆಂದು ನೀನಡಗುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ
೬೧.
ಪೃಥ್ವಿಯ ಗೆಲಿದ ಏಲೇಶ್ವರನ ನಾನು ಕಂಡೆ
ಭಾವಭ್ರಮೆಯ ಗೆಲಿದ ಬ್ರಹ್ಮೇಶ್ವರನ ನಾನು ಕಂಡೆ
ಸತ್ವ-ರಜ-ತಮ-ತ್ರಿವಿಧವ ಗೆಲಿದ ತ್ರಿಪುರಾಂತಕನ ಕಂಡೆ
ಅಂತರಂಗ-ಆತ್ಮಜ್ಞಾನದಿಂದ ಜ್ಯೋತಿಸಿದ್ಧಯ್ಯನ ನಾನು ಕಂಡೆ
ಇವರೆಲ್ಲರ ಮಧ್ಯಸ್ಥಾನ ಪ್ರಾಣಲಿಂಗವೆಂದು
ಸುಜ್ಞಾನದಲ್ಲಿ ತೋರಿದ ಆ ಬಸವಣ್ಣನ ಪ್ರಸಾದದಿಂದ
ಚೆನ್ನಮಲ್ಲಿಕಾರ್ಜುನನ ಕಂಡೆನಯ್ಯ
೬೨.
ಅಪಾರ ಗಂಭೀರದ ಅಂಬುಧಿಯಲ್ಲಿ
ತಾರಾಪಥವ ನೋಡಿ ನಡೆಯೆ
ಭೈತ್ರದಿಂದ ದ್ವೀಪಾಂತರಕ್ಕೆ ಸಕಲಪದಾರ್ಥನವೆಯ್ದಿಸುವುದು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನ ಸಮೀಪ
ತುರ್ಯಸಂಭಾಷಣೆಯನರಿದಡೆ ಮುನ್ನಿನಲ್ಲಿಗೆಯ್ದಿಸುವುದು
೬೩.
ಕ್ರೀಯೊಳ್ಳುಡೊಂತೊಂದಾಸೆ
ಸದ್ಭಕ್ತರ ನುಡಿಗಡಣ ಉಳ್ಳೊಡಂತೊಂದಾಸೆ
ಶ್ರೀಗಿರಿಯನೇರಿ ನಿಮ್ಮ ಬೆರೆಸಿದರೆ ಎನ್ನಾಸೆಗೆ ಕಡೆಯೇ ಅಯ್ಯ?
ಆವಾಸೆಯೂ ಇಲ್ಲದೆ ನಿಮ್ಮ ನಂಬಿ ಬಂದು ಕೆಟ್ಟೆನಯ್ಯ
೬೪.
ಆರೂ ಇಲ್ಲದವಳೆಂದು
ಅಳಿಗೊಳಲು ಬೇಡ ಕಂಡಯ್ಯ
ಏನ ಮಾಡಿದೆಡೆಯೂ ನಾನಂಜುವಳಲ್ಲ!
ತರಗೆಲೆಯ ಮೆಲಿದು ನಾನಿಹೆನು
ಸುರಗಿಯ ಮೇಲೆರಗಿ ನಾನಿಹೆನು
ಚೆನ್ನಮಲ್ಲಿಕಾರ್ಜುನಯ್ಯ
ಕರ ಕಡೆ ನೋಡಿದಡೆ
ಒಡಲನೂ ಪ್ರಾಣವನೂ ನಿಮಗೊಪ್ಪಿಸಿ ಶುದ್ಧಳಿಹೆನು
೬೫.
ಕಿಡಿಕಿಡಿ ಕೆದರಿದಡೆ
ಎನಗೆ ಹಸಿವು ತೃಷೆ ಅಡಗಿತ್ತೆಂಬೆನು
ಮುಗಿಲು ಹರಿದು ಬಿದ್ದಡೆ
ಎನಗೆ ಮಜ್ಜನಕ್ಕೆರೆದರೆಂಬೆನು
ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು
ಚೆನ್ನಮಲ್ಲಿಕಾರ್ಜುನಯ್ಯ, ಶಿರ ಹರಿದು ಬಿದ್ದಡೆ ಪ್ರಾಣ
ನಿಮಗರ್ಪಿತವೆಂಬೆನು
೬೬.
ನಚ್ಚುಗೆ ಮನ ನಿಮ್ಮಲ್ಲಿ ಮೆಚ್ಚುಗೆ ಮನ ನಿಮ್ಮಲ್ಲಿ
ಸಲುಗೆ ಮನ ನಿಮ್ಮಲ್ಲಿ ಸೋಲುಗೆ ಮನ ನಿಮ್ಮಲ್ಲಿ
ಅಳಲುಗೆ ಮನ ನಿಮ್ಮಲ್ಲಿ ಬಳಲುಗೆ ಮನ ನಿಮ್ಮಲ್ಲಿ
ಕರಗುಗೆ ಮನ ನಿಮ್ಮಲ್ಲಿ ಕೊರಗುಗೆ ಮನ ನಿಮ್ಮಲ್ಲಿ
ಎನ್ನ ಪಂಚೇದ್ರಿಯಗಳು ಕಬ್ಬುನ ಉಂಡ ನೀರಿನಂತೆ
ನಿಮ್ಮಲ್ಲಿ ಬೆರೆಸುಗೆ ಚೆನ್ನಮಲ್ಲಿಕಾರ್ಜುನಯ್ಯ
೬೭.
ಒಡಲಿಲ್ಲದ, ನುಡಿಯಿಲ್ಲದ, ಕಡೆಯಿಲ್ಲದ
ನಲ್ಲನ ಒಡಗೂಡಿ ಸುಖಿಯಾದೆ ಕೇಳಿರಯ್ಯ
ಭಾಷೆ ಪೈಸರವಿಲ್ಲ ಓಸರಿಸೆನನ್ಯಕ್ಕೆ
ಆಸೆ ಮಾಡೆನು ಮತ್ತೆ ಭಿನ್ನ ಸುಖಕ್ಕೆ
ಆರಳಿದು ಮೂರಾಗಿ, ಮೂರಳಿದು ಎರಡಾಗಿ,
ಎರಡಳಿದು ಒಂದಾಗಿ ನಿಂದೆನಯ್ಯ
ಬಸವಣ್ಣ ಮೊದಲಾದ ಶರಣರಿಗೆ ಶರಣಾರ್ಥಿ
ಪ್ರಭುವಿನಿಂದ ಕೃತಕೃತ್ಯಳಾದೆನು ನಾನು
ಮರೆಯಲಾಗದು ನಾನು ನಿಮ್ಮ ಶಿಶುವೆಂದು
ಚೆನ್ನಮಲ್ಲಿಕಾರ್ಜುನನ ಬೆರೆಸೆಂದು
ಎನ್ನ ಹರಸುತ್ತಿಹುದು
೬೮.
ಹೊಳೆವ ಕೆಂಜೆಡೆಗಳ ಮಣಿಮುಕುಟದ
ಒಪ್ಪುವ ಸುಲಿಪಲ್ಗಳ ನಗೆಮೊಗದ
ಕಂಗಳ ಕಾಂತಿಯಿಂ ಈರೇಳು ಭುವನಮಂ ಬೆಳಗುವ
ದಿವ್ಯ ಸ್ವರೂಪನಂ ಕಂಡೆ ನಾನು
ಕಂಡೆನ್ನ ಕಂಗಳ ಬರ ಹಿಂಗಿತ್ತೆಂದೆನಗೆ
ಗಂಡ ಗಂಡರನ್ನೆಲ್ಲ ಹೆಂಡಹೆಂಡಿರಾಗಿ ಆಳುವ
ಗುರುವನ ಕಂಡೆ ನಾನು !
ಜಗದಾದಿ ಶಕ್ತಿಯೊಳು ಬೆರೆಸಿ ಒಡನಾಡುವ
ಪರಮ ಗುರು ಚೆನ್ನಮಲ್ಲಿಕಾರ್ಜುನನ ನಿಲುವ ಕಂಡು ಬದುಕಿದೆನು
೬೯.
ಕಿಚ್ಚಿಲ್ಲದ ಬೇಗೆಯಲಿ ಬೆಂದೆನವ್ವ
ಏರಿಲ್ಲದ ಘಾಯದಲಿ ನೊಂದೆನವ್ವ
ಸುಖವಿಲ್ಲದ ಧಾವತಿಗೊಂಡೆನವ್ವ
ಚೆನ್ನಮಲ್ಲಿಕಾರ್ಜುನದೇವಂಗೊಲಿದು
ಬಾರದ ಭವಂಗಳಲಿ ಬಂದೆನವ್ವ
೭೦.
ಬೆರಸುವಡೆ ಬೇಗ ತೋರ! ಹೊರಹಾಕದಿರಯ್ಯ!
ನಿಮ್ಮಲ್ಲಿಗೆ ಸಲೆ ಸಂದ ತೊತ್ತಾನು, ಎನ್ನ ಹೊರಹಾಕದಿರಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ನಂಬಿ
ಬೆಂಬಳಿ ಬಂದೆನು ಇಂಬುಗೊಳ್ಳಯ್ಯ ಬೇಗದಲಿ
೭೧.
ಬಲ್ಲಿದ ಹಗೆಹ ತೆಗೆವನ್ನಬರ
ಬಡವರ ಹರಣ ಹಾರಿ ಹೋದ ತೆರನಂತಾಯಿತ್ತು
ನೀ ಕಾಡಿ ಕಾಡಿ ನೋಡವನ್ನಬರ
ಎನಗಿದು ವಿಧಿಯೇ ಹೇಳಾ ತಂದೆ !
ತೂರುವಾರುವನ್ನಬರ ಒಮ್ಮೆ ಗಾಳಿಗೆ
ಹಾರಿ ಹೋದ ತೆರನಂತಾಯಿತ್ತು
ಎನಗೆ ನೀನಾವ ಪರಿಯಲ್ಲಿ ಕರುಣಿಸುವೆಯಯ್ಯ
ಚೆನ್ನಮಲ್ಲಿಕಾರ್ಜುನ ?
೭೨.
ಒಮ್ಮೆ ಕಾಮನ ಕಾಲಹಿಡಿವೆ,
ಮತ್ತೂಮ್ಮೆ ಚಂದ್ರಮಂಗೆ ಸೆರಗೊಡ್ಡಿ ಬೇಡುವೆ
ಸುಡಲೀ ವಿರಹವ ! ನಾನಾರಿಗೆ ಧೃತಿಗೆಡುವೆ
ಚೆನ್ನಮಲ್ಲಿಕಾರ್ಜುನದೇವನೆನ್ನನೊಲ್ಲದ ಕಾರಣ
ಎಲ್ಲರಿಗೆ ಹಂಗಿತಿಯಾದೆನವ್ವ !
೭೩.
ಚಿಲಿಮಿಲಿ ಎಂದೋದುವ ಗಿಳಿಗಳಿರಾ!
ನೀವು ಕಾಣಿರೆ? ನೀವು ಕಾಣಿರೆ?
ಸರವೆತ್ತಿ ಪಾಡುವ ಕೋಗಿಲೆಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಎರಗಿ ಬಂದಾಡುವ ತುಂಬಿಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಕೊಳನ ತಡಿಯಾಡುವ ಹಂಸಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಗಿರಿಗಹ್ವರದೊಳಗಾಡುವ ನವಿಲುಗಳಿರಾ !
ನೀವು ಕಾಣಿರೆ? ನೀವು ಕಾಣಿರೆ?
ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂಬುದ ಬಲ್ಲೆಡೆ
ನೀವು ಹೇಳಿರೇ !
೭೪.
ಅಳಿಸಂಕುಳವೆ, ಮಾಮರವೇ, ಬೆಳದಿಂಗಳೇ,
ಕೋಗಿಲೆಯೇ, ನಿಮ್ಮನ್ನೆಲ್ಲರನೂ ಒಂದು ಬೇಡುವೆನು
ಎನ್ನೊಡೆಯ ಚೆನ್ನಮಲ್ಲಿಕಾರ್ಜುನ ದೇವರ ಕಂಡಡೆ
ಕರೆದು ತೋರಿರೆ
೭೫.
ವನವೆಲ್ಲ ನೀವೆ
ವನದೊಳಗಣ ದೇವತರುವೆಲ್ಲ ನೀವೆ
ತರುವಿನೊಳಗಾಡುವ ಖಗಮೃಗವೆಲ್ಲ ನೀವೆ
ಚೆನ್ನಮಲ್ಲಿಕಾರ್ಜುನ ಸರ್ವಭರಿತನಾಗಿ
ಎನಗೇಕೆ ಮುಖದೋರೆ?
೭೬.
ಪಚ್ಚೆಯ ನೆಲಗಟ್ಟು, ಕನಕದ ತೋರಣ, ವಜ್ರದ ಕಂಭ,
ಪವಳದ ಚಪ್ಪರವಿಕ್ಕಿ, ಮುತ್ತು ಮಾಣಿಕದ ಮೇಲುಕಟ್ಟು ಕಟ್ಟಿ,
ಮದುವೆಯ ಮಾಡಿದರು, ಎಮ್ಮವರೆನ್ನ ಮದುವೆಯ ಮಾಡಿದರು
ಕಂಕಣ ಕೈಧಾರೆ, ಸ್ಥಿರಸೇಸೆಯನಿಕ್ಕಿ
ಚೆನ್ನಮಲ್ಲಿಕಾರ್ಜುನನೆಂಬ ಗಂಡಗೆನ್ನ ಮದುವೆಯ ಮಾಡಿದರು
೭೭.
ಗಗನದ ಗುಂಪ ಚಂದ್ರನು ಬಲ್ಲುದಲ್ಲದೇ
ಮೇಲಿದ್ದಾಡುವ ಹದ್ದು ಬಲ್ಲುದೇ ಅಯ್ಯ !
ನದಿಯ ಗುಂಪ ತಾವರೆ ಬಲ್ಲುದಲ್ಲದೇ
ತಡಿಯಲ್ಲಿದ್ದ ಹೊನ್ನಾವರಿಕೆ ಬಲ್ಲುದೇ ಅಯ್ಯ !
ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೇ
ಕಡೆಯಲ್ಲಿದ್ದಾಡುವ ನೊರಜು ಬಲ್ಲುದೇ ಅಯ್ಯ !
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರ ನಿಲುವ ನೀವೇ ಬಲ್ಲಿರಲ್ಲದೇ
ಈ ಕೋಣನ ಮೈಯ ಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯ
೭೮.
ಮಂಗಳವೇ ಮಜ್ಜನವೆನಗೆ
ವಿಭೂತಿಯೇ ಒಳಗುಂದದರಿಸಿನವೆನಗೆ
ದಿಗಂಬರವೇ ದಿವ್ಯಾಂಬರವೆನಗೆ
ಶಿವನಾದರೇಣುವೇ ಅನುಲೇಪನವೆನಗೆ
ರುದ್ರಾಕ್ಷಿಯೇ ಮೈದೊಡುಗೆಯೆನಗೆ
ಶರಣರ ಪಾದಂಗಳೇ ತೊಂಡಿಲ ಬಾಸಿಗವೆನಗೆ
ಚೆನ್ನಮಲ್ಲಿಕಾರ್ಜುನಯ್ಯನೇ ಗಂಡನೆನಗೆ
ಆನು ಚೆನ್ನಮಲ್ಲಿಕಾರ್ಜುನಂಗೆ ಮದುವಳಿಗೆ
ಎನಗೆ ಬೇರೆ ಶೃಂಗಾರವೇಕೆ ಹೇಳಿರವ್ವ
೭೯. ಹಗಲು ನಾಲ್ಕು ಜಾವ ನಿಮ್ಮ ಕಳವಳದಲ್ಲಿಪ್ಪೆನು
ಇರುಳು ನಾಲ್ಕು ಜಾವ ಲಿಂಗದ ವಿಕಳಾವಸ್ಥೆಯಲ್ಲಿಪ್ಪೆನು
ಹಗಲಿರುಳು ನಿಮ್ಮ ಹಂಬಲದಲ್ಲಿ ಮೈಮರೆದೊರಗಿದೆನು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಒಲುಮೆನಟ್ಟು
ಹಸಿವು-ತೃಷೆ-ನಿದ್ರೆಯ ಮರೆವೆನು
೮೦.
ಆಲಿಸೆನ್ನ ಬಿನ್ನಪವ
ಲಾಲಿಸೆನ್ನ ಬಿನ್ನಪವ
ಪಾಲಿಸೆನ್ನ ಬಿನ್ನಪವ
ಏಕೆನ್ನ ಮೊರೆಯ ಕೇಳೆ
ನೋಡೆಯನೆನ್ನ ದುಃಖವ
ಚೆನ್ನಮಲ್ಲಿಕಾರ್ಜುನಯ್ಯ
೮೧.
ಅಯ್ಯ ದೂರದಲಿರ್ದೆಹೆಯೆಂದು
ಬಾಯಾರಿ ಬಳಲುತ್ತಿದ್ದೆನಯ್ಯ ನಾನು
ಅಯ್ಯ ಸಾರೆ ಬಂದು ನೀನೆನ್ನ ಕರಸ್ಥಲದಲಿ ಮೂರ್ತಿಗೊಂಡರೆ
ಇನ್ನಾರತಿಯೆಲ್ಲ ನಿನ್ನಲ್ಲಿ ಲಿಂಗಯ್ಯ
ಆಲಿ ನಿಮ್ಮಲ್ಲಿ ನೆಟ್ಟವು ನೋಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನೆನ್ನ ಕರಸ್ಥಲದಲ್ಲಿ ನೋಡಿ ನೋಡಿ
ಕಂಗಳೇ ಪ್ರಾಣವಾಗಿದ್ದೆನಯ್ಯ
೮೨.
ನಾನು ನಿನಗೊಲಿದೆ, ನೀನು ಎನಗೊಲಿದೆ
ನೀನೆನ್ನನಗಲದಿಪ್ಪೆ, ನಾನಿನ್ನಗಲದಿಪ್ಪೆನಯ್ಯಾ
ನಿನಗೆ ಎನಗೆ ಬೇರೊಂದು ಠಾವುಂಟೆ
ನೀನು ಕರುಣಿಯೆಂಬುದು ಬಲ್ಲೆನು
ನೀನಿರಿಸಿದ ಗತಿಯೊಳಗಿಪ್ಪವಳಾನು
ನೀನೆ ಬಲ್ಲೆ ಚೆನ್ನಮಲ್ಲಿಕಾರ್ಜುನ
೮೩.
ಅಯ್ಯ ನೀ ಕೇಳಿದರೆ ಕೇಳು, ಕೇಳದಿದ್ದರೆ ಮಾಣು
ನಾ ನಿನ್ನ ಹಾಡಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀನೊಲಿದರೆ ಒಲಿ, ಒಲಿಯದಿದ್ದರೆ ಮಾಣು
ನಾ ನಿನ್ನ ಪೂಜಿಸಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀ ಮೆಚ್ಚಿದರೆ ಮೆಚ್ಚು, ಮೆಚ್ಚದಿದ್ದರೆ ಮಾಣು
ನಾ ನಿನ್ನನಪ್ಪಿದಲ್ಲದೆ ಸೈರಿಸಲಾರೆನಯ್ಯ
ಅಯ್ಯ ನೀ ನೋಡಿದರೆ ನೋಡು, ನೋಡದಿದ್ದರೆ ಮಾಣು
ನಾ ನಿನ್ನ ನೋಡಿ ಹಿಗ್ಗಿ ಹಾರೈಸಿದಲ್ಲದೆ ಸೈರಿಸಲಾರೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ ನಾ ನಿಮ್ಮ ಪೂಜಿಸಿ
ಹರುಷದಲೋಲಾಡುವೆನಯ್ಯ
೮೪.
ಕಾಣುತ್ತ ಕಾಣುತ್ತ
ಕಂಗಳ ಮುಚ್ಚಿದೆ ನೋಡವ್ವ
ಕೇಳುತ್ತ ಕೇಳುತ್ತ
ಮೈಮರೆದೊರಗಿದೆ ನೋಡವ್ವ
ಹಾಸಿದ ಹಾಸಿಗೆ ಹಂಗಿಲ್ಲದೇ ಹೋಯಿತ್ತು ಕೇಳವ್ವ
ಚೆನ್ನಮಲ್ಲಿಕಾರ್ಜುನ ದೇವರ ದೇವನಂ
ಕೂಡುವ ಕೂಟವ ನಾನೇನಂದರಿಯದೇ
ಮರೆದೆ ಕಾಣವ್ವ
೮೫.
ಬಾರದ ಭವಂಗಳಲ್ಲಿ ಬಂದೆನಯ್ಯ
ಕಡೆಯಿಲ್ಲ ತಾಪಂಗಳಲ್ಲಿ ನೊಂದು
ನಿಮ್ಮ ಕರುಣೆಗೆ ಬಳಿಸಂದೆನಯ್ಯ
ಇದು ಕಾರಣ ಎನ್ನ ದೇವ ಚೆನ್ನಮಲ್ಲಿಕಾರ್ಜುನಂಗೆ
ತನುವನುವಾಗಿ ಮನ ಮಾರುಹೋಗಿ
ಮತ್ತಿಲ್ಲದ ತವಕದ ಸ್ನೇಹಕ್ಕೆ
ತೆರಹಿನ್ನೆಂತು ಹೇಳಾ ತಂದೆ?
೮೬.
ಹೊಳೆವ ಕೆಂಜೆಡೆಗಳ ಮೇಲೆ ಎಳೆವೆಳುದಿಂಗಳು
ಫಣಿಮಣಿ ಕರ್ಣಕುಂಡಲದವ ನೋಡವ್ವ !
ರುಂಡ ಮಾಲೆಯ ಕೊರಳವನ ಕಂಡೊಡೆ ಒಮ್ಮೆ ಬರಹೇಳವ್ವ
ಗೋವಿಂದನ ನಯನ ಉಂಗುಟದ ಮೇಲಿಪ್ಪುದು
ಚೆನ್ನಮಲ್ಲಿಕಾರ್ಜುನ ದೇವಂಗಿದು ಕುರುಹವ್ವ
೮೭.
ಅಕ್ಕ ಕೇಳವ್ವ ಅಕ್ಕಯ್ಯ ನಾನೊಂದ ಕನಸ ಕಂಡೆ
ಅಕ್ಕಿ ಅಡಿಕೆ ಓಲೆ ತೆಂಗಿನಕಾಯ ಕಂಡೆ
ಚಿಕ್ಕ ಚಿಕ್ಕ ಜಡೆಗಳ ಸುಲಿಪಲ್ಲ ಗೊರವನು
ಭಿಕ್ಷಕ್ಕೆ ಮನೆಗೆ ಬಂದುದ ಕಂಡೆನವ್ವ
ಮಿಕ್ಕಿ ಮೀರಿ ಹೋವನ ಬೆಂಬತ್ತಿ ಕೈವಿಡಿದೆನು
ಚೆನ್ನಮಲ್ಲಿಕಾರ್ಜುನನ ಕಂಡು ಕಣ್ತೆರೆದೆನು
೮೮.
ಎನ್ನ ಮನವ ಮಾರುಗೊಂಡನವ್ವ
ಎನ್ನ ತನುವ ಸೂರೆಗೊಂಡೆನವ್ವ
ಎನ್ನ ಸುಖವನೊಪ್ಪುಗೊಂಡನವ್ವ
ಎನ್ನಿರುವನಿಂಬುಗೊಂಡನವ್ವ
ಚೆನ್ನಮಲ್ಲಿಕಾರ್ಜುನನ ಒಲುಮೆಯವಳಾನು
೮೯.
ಹಗಲಿನ ಕೂಟಕ್ಕೆ ಹೋರಿ ಬೆಂಡಾದೆ
ಇರುಳಿನ ಕೂಟಕ್ಕೆ ಇಂಬರಿದು ಹತ್ತಿದೆ
ಕನಸಿನಲ್ಲಿ ಮನಸಂಗವಾಗಿ
ಮನಸಿನಲ್ಲಿ ಮೈಮೆರೆದು ಸಂಗವಾಗಿರ್ದೆ
ಚೆನ್ನಮಲ್ಲಿಕಾರ್ಜುನನನೊಪ್ಪಚ್ಚಿ ಕೂಡಿ ಕಣ್ತೆರೆದೆನವ್ವ
೯೦.
ಅಕ್ಕ ಕೇಳಕ್ಕ,
ಆನೊಂದು ಕನಸ ಕಂಡೆ!
ಚಿಕ್ಕಚಿಕ್ಕ ಜಡೆಯ ಸುಲಿಪಲ್ಲ ಗೊರವನು
ಬಂದೆನ್ನ ನೆರೆದ ನೋಡವ್ವ
ಆತನನಪ್ಪಿಕೊಂಡು ತಳವೆಳಗಾದೆನೆಲಗೇ!
ಚೆನ್ನಮಲ್ಲಿಕಾರ್ಜುನನ ಕೂಡಿ
ಕಣ್ತೆರೆದು ತೆಳವೆಳಗಾದೆನೆಲಗೇ!
೯೧.
ಇಹಕೊಬ್ಬ ಗಂಡನೆ? ಪರಕೊಬ್ಬ ಗಂಡನೆ?
ಲೌಕಿಕಕ್ಕೊಬ್ಬ ಗಂಡನೆ? ಪಾರಮಾರ್ಥಕ್ಕೊಬ್ಬ ಗಂಡನೆ?
ನನ್ನ ಗಂಡ ಚೆನ್ನಮಲ್ಲಿಕಾರ್ಜುನದೇವರಲ್ಲದೆ
ಮಿಕ್ಕಿದ ಗಂಡರೆಲ್ಲ ಮುಗಿಲ ಮರೆಯ ಬಣ್ಣದ ಬೊಂಬೆಯಂತೆ
೯೨.
ರತ್ನದ ಸಂಕೋಲೆಯಾದರೆ ತೊಡರಲ್ಲವೆ?
ಮುತ್ತಿನ ಬಲೆಯಾದರೆ ಬಂಧನವಲ್ಲವೆ?
ಚಿನ್ನದ ಕತ್ತಿಯಲ್ಲಿ ತಲೆಯ ಹೊಯ್ದರೆ ಸಾಯದಿಪ್ಪರೆ?
ಲೋಕದ ಭಜನೆಯ ಭಕ್ತಿಯಲ್ಲಿ ಸಿಲುಕಿದರೆ
ಜನನಮರಣ ಬಿಡುವುದೇ ಚೆನ್ನಮಲ್ಲಿಕಾರ್ಜುನ?
೯೩.
ಎರದ ಮುಳ್ಳಿನಂತೆ ಪರಗಂಡರೆನಗವ್ವ
ಸೋಂಕಲಮ್ಮೆ ಸುಳಿಯಲಮ್ಮೆ ನಂಬಿ ನೆಚ್ಚಿ ಮಾತಾಡಲಮ್ಮೆನವ್ವ
ಚೆನ್ನಮಲ್ಲಿಕಾರ್ಜುನನಲ್ಲದುಳಿದ ಗಂಡರ ಉರದಲ್ಲಿ ಮುಳ್ಳುಂಟೆಂದು
ನಾನಪ್ಪಲಮ್ಮೆನವ್ವ
೯೪.
ಗುರುವಿನಿಂದ ಲಿಂಗವ ಕಂಡೆ, ಜಂಗಮವ ಕಂಡೆ
ಗುರುವಿನಿಂದ ಪಾದೋದಕವ ಕಂಡೆ, ಪ್ರಸಾದವ ಕಂಡೆ
ಗುರುವಿನಿಂದ ನನ್ನ ನಾ ಕಂಡೆ, ಚೆನ್ನಮಲ್ಲಿಕಾರ್ಜುನ
೯೫.
ತರಳಿಯ ಹುಳು ತನ್ನ ಸ್ನೇಹಕ್ಕೆ ಮನೆಯ ಮಾಡಿ
ತನ್ನ ನೂಲು ತನ್ನನೇ ಸುತ್ತಿ ಸಾವಂತೆ-
ಎನಗೂ ಮನೆಯೇ? ಎನಗೂ ಧನವೇ?
ಎನ್ನ ಮನೆಮಠ ಕನಸ ಕಂಡುಕಣ್ತೆರೆದಂತಾಯಿತ್ತು
ಎನ್ನ ಮನದ ಸಂಸಾರವ ಮಾಣಿಸಾ ಚೆನ್ನಮಲ್ಲಿಕಾರ್ಜುನ
೯೬.
ತನುವನುವಾಯಿತ್ತು, ಮನವನುವಾಯಿತ್ತು
ಪ್ರಾಣವನುವಾಯಿತ್ತು ಮುನಿದು ಬಾರದ ಪರಿಯಿನ್ನೆಂತು ಹೇಳಾ!
ಎನ್ನ ಪ್ರಾಣದಲ್ಲಿ ಸಂದು, ಎನ್ನ ಮನಕ್ಕೆ ಮನವಾಗಿ
ನಿಂದ ಎನ್ನ ದೇವ ಚೆನ್ನಮಲ್ಲಿಕಾರ್ಜುನನ
ಕಾಣದೊಡೆ ಆನೆಂತು ಬದುಕುವೆನವ್ವ?
೯೭.
ಹಿಡಿವೆನೆಂದೊಡೆ ಹಿಡಿಗೆ ಬಾರನವ್ವ,
ತಡೆವೆನೆಂದೊಡೆ ಮೀರಿ ಹೋದನವ್ವ,
ಒಪ್ಪಚ್ಚಿ ಅಗಲಿದೊಡೆ ಕಳವಳಗೊಂಡೆ,
ಚೆನ್ನಮಲ್ಲಿಕಾರ್ಜುನನ ಕಾಣದೆ
ಆನಾರೆಂದರಿಯೆ ಕೇಳಾ ತಾಯೆ
೯೮.
ಮನ ಬೀಸರವಾದೊಡೆ ಪ್ರಾಣ ಪಲ್ಲಟವಹುದವ್ವ,
ತನುಕರಣಂಗಳು ಮೀಸಲಾಗಿ
ಮನ ಸಮರಸವಾಯಿತ್ತು ನೋಡಾ!
ಅನ್ಯವನರಿಯೆ, ಭಿನ್ನವನರಿಯೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ
ಬಳಿಯವಳಾನು ಕೇಳಾ ತಾಯೇ
೯೯.
ಕಾಮಿಸಿ ಕಲ್ಪಿಸಿ ಕಂದಿ ಕುಂದಿದೆನವ್ವ
ಮೋಹಿಸಿ ಮುದ್ದಿಸಿ ಮರುಳಾದೆನವ್ವ
ತೆರೆಯದೆ ತೊರೆಯದೆ ನಲಿದು ನಂಬಿದೆ ನಾನು,
ಎನ್ನ ದೇವ ಚೆನ್ನಮಲ್ಲಿಕಾರ್ಜುನನೆನ್ನನೊಲ್ಲದೊಡೆ ಆನೇವೇನವ್ವ
೧೦೦.
ಕಳಿವರಿದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳುದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತ್ತಿದ್ದೆನವ್ವ
ತಿಳುಹೌ ಬುದ್ಧಿಯ, ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ
೧೦೧.
ಕಂಗಳೊಳಗೆ ತೊಳಗಿ ಬೆಳಗುವ
ದಿವ್ಯರೂಪನ ಕಂಡು ಮೈಮರೆದೆನವ್ವ
ಮಣಿಮುಕುಟದ ಫಣಿ-ಕಂಕಣದ
ನಗೆಮೊಗದ ಸುಲಿಪಲ್ಲ ಸೊಬಗನ ಕಂಡು ಮನಸೋತೆನವ್ವ
ಇಂತಾಗಿ ಚೆನ್ನಮಲ್ಲಿಕಾರ್ಜುನನೆನ್ನ ಮದುವಣಿಗ
ಆನು ಮದುವಣಿಗಿ ಕೇಳಾ ತಾಯೆ
೧೦೨.
ಮನಮನ ತಾರ್ಕಣೆಯ ಕಂಡು ಅನುಭವಿಸಲು
ನೆನಹೇ ಘನವಹುದಲ್ಲದೆ
ಅದು ಹವಣದಲ್ಲಿ ನಿಲ್ಲುವುದೇ?
ಎಲೆ ಅವ್ವ, ನೀನು ಮರುಳವ್ವೆ!
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯಗೊಲಿದು
ಸಲೆ ಮಾರುವೋದೇನು
ನಿನ್ನ ತಾಯಿತನವನೊಲ್ಲೆ ಹೋಗೇ!
೧೦೩.
ಲಿಂಗವನೂ ಪುರಾತನರನೂ
ಅನ್ಯರ ಮನೆಯೊಳಯಿಂಕೆ ಹೋಗಿ ಹೊಗಳುವರು
ತಮ್ಮದೊಂದು ಉದರ ಕಾರಣ
ಲಿಂಗವೂ ಪುರಾತನರೂ ಅಲ್ಲಿಗೆ ಬರಬಲ್ಲರೆ?
ಅನ್ಯವನೆ ಮರೆದು, ನಿಮ್ಮ ನೆನೆವರ ಎನಗೊಮ್ಮೆ ತೋರಾ
ಚೆನ್ನಮಲ್ಲಿಕಾರ್ಜುನಯ್ಯ!
೧೦೪.
ಗುಣ-ದೋಷ ಸಂಪಾದನೆಯ ಮಾಡುವನ್ನಕ್ಕ
ಕಾಮದ ಒಡಲು ಕ್ರೋಧದ ಗೊತ್ತು
ಲೋಭದ ಇಕ್ಕೆ ಮೋಹದ ಮಣ್ದಿರ
ಮದದಾವರಣ ಮತ್ಸರದ ಹೊದಿಕೆ
ಆ ಭಾವವರತಲ್ಲದೆ
ಚೆನ್ನಮಲ್ಲಿಕಾರ್ಜುನನ ಅರಿವುದಕ್ಕೆ ಇಂಬಿಲ್ಲ ಕಾಣಿರಣ್ಣ
೧೦೫.
ಕಡೆಗೆ ಮಾಡದ ಭಕ್ತಿ ಧೃಡವಿಲ್ಲದಾಳುತನ
ಮೃಡನೊಲಿಯ ಹೇಳಿದರೆ ಎಂತೊಲಿವನಯ್ಯ?
ಮಾಡಲಾಗದಳಿಮನವ ಮಾಡಿದರೆ ಮನದೊಡೆಯ ಬಲ್ಲನೈಸೆ
ವಿರಳವಿಲ್ಲದ ಮಣಿಯ ಪವಣಿಸಿಹೆನೆಂದೆಡೆ
ದುರುಳ ಚೆನ್ನಮಲ್ಲಿಕಾರ್ಜುನಯ್ಯನೆಂತೊಲಿವನಯ್ಯ
೧೦೬.
ಬೆಟ್ಟದ ಮೇಲೊಂದು ಮನೆಯ ಮಾಡಿ
ಮೃಗಂಗಳಿಗಂಜಿದೊಡೆಂತಯ್ಯ?
ಸಮುದ್ರದ ತಡಿಯಲೊಂದು ಮನೆಯ ಮಾಡಿ
ನೊರೆತೆರೆಗಳಿಗಂಜಿದೊಡೆಂತಯ್ಯ?
ಸಂತೆಯೊಳಗೊಂದು ಮನೆಯ ಮಾಡಿ
ಶಬ್ದಕ್ಕೆ ನಾಚಿದೊಡೆಂತಯ್ಯ?
ಚೆನ್ನಮಲ್ಲಿಕಾಜುನದೇವ ಕೇಳಯ್ಯ
ಲೋಕದೊಳಗೆ ಹುಟ್ಟಿದ ಬಳಿಕ
ಸ್ತುತಿ-ನಿಂದೆಗಳು ಬಂದರೆ
ಮನದಲ್ಲಿ ಕೋಪವ ತಾಳದೆ ಸಮಾಧಾನಿಯಾಗಿರಬೇಕು
೧೦೭.
ವೇದಶಾಸ್ತ್ರಾಗಮ ಪುರಾಣಗಳೆಂಬುವ
ಕೊಟ್ಟಣವ ಕುಟ್ಟುತ್ತ ನುಚ್ಚು ತೌಡು ಕಾಣಿ ಭೋ!
ಅವ ಕುಟ್ಟಲೇಕೆ?
ಅತ್ತಲಿತ್ತ ಹರಿವ ಮನದ ಶಿವನರಿಯಬಲ್ಲಡೆ
ಬಚ್ಚಬರಿಯ ಬಯಲು ಚೆನ್ನಮಲ್ಲಿಕಾರ್ಜುನ
೧೦೮.
ಅಮೇಧ್ಯದ ಮಡಕೆ ಮೂತ್ರದ ಕುಡಿಕೆ
ಎಲುವಿನ ತಡಿಕೆ ಕೀವಿನ ಹಡಿಕೆ
ಸುಡಲೀ ದೇಹವ
ಒಡಲುವಿಡಿದು ಕೆಡದಿರು
ಚೆನ್ನಮಲ್ಲಿಕಾರ್ಜುನನರಿ ಮರುಳೇ!
೧೦೯.
ಜಾಲಗಾರನೊಬ್ಬ ಜಲವ ಹೊಕ್ಕು ಶೋಧಿಸಿ
ಹಲವು ಪ್ರಾಣಿಗಳ ಕೊಂದು ನಲಿದಾಡುವ
ತನ್ನ ಮನೆಯಲೊಂದು ಶಿಶು ಸತ್ತರೆ
ಅದಕೆ ಮರುಗುವಂತೆ ಅವಕೇಕೆ ಮರುಗನು?
ಸ್ವಾತ್ಮಾನಮಿತರಾಂಶ್ಚೈವ
ದೃಷ್ಟ್ವಾ ಧೃಷ್ಟ್ವಾ ನ ಭಿದ್ಯತೇ
ಸರ್ವಂ ಚಿಜ್ಜ್ಯೋತಿರೇವೇತಿ
ಯಃ ಪಶ್ಯತಿ ಸ ಪಶ್ಯತಿ
ಎಂದುದಾಗಿ-ಜಾಲಗಾರನ ದುಃಖ ಜಗಕೆಲ್ಲ ನಗೆಗೆಡೆ
ಇದು ಕಾರಣ ಚೆನ್ನಮಲ್ಲಿಕಾರ್ಜುನಯ್ಯನ ಭಕ್ತನಾಗಿರ್ದು
ಜೀವ-ಹಿಂಸೆಯ ಮಾಡುವ ಮಾದಿಗರನೇನೆಂಬೆನಯ್ಯ
೧೧೦.
ಶೀಲ! ಶೀಲ! ಎಂತೆಬಿರಯ್ಯ?
ಶೀಲದ ನೆಲೆಯ ಒಲ್ಲಡೆ ಹೇಳಿರೋ
ಅರಿಯದಿರ್ದೊಡೆ ಕೇಳಿರೋ
ಕಾಮ [ಒಂದನೇ] ಭವಿ, ಕ್ರೋಧ ಎರಡನೇ ಭವಿ
ಲೋಭ ಮೂರನೇ ಭವಿ, ಮೋಹ ನಾಲ್ಕನೇ ಭವಿ
ಮದ ಐದನೇ ಭವಿ, ಮತ್ಸರ ಆರನೇ ಭವಿ
ಆಮಿಷ ಏಳನೇ ಭವಿ
ಇಂತೀ ಏಳು ಭವಿಗಳ ತಮ್ಮೊಳಗಿಟ್ಟುಕೊಂಡು
ಲಿಂಗವಿಲ್ಲದವರ ಭವಿ ಭವಿ ಎಂಬರು
ತಮ್ಮಂತರಂಗದಲ್ಲಿದ್ದ ಲಿಂಗಾಂಗದ ಸುದ್ದಿಯನ್ನರಿಯದೆ
ಅಚ್ಚಪ್ರಸಾದಿ-ನಿಚ್ಚಪ್ರಸಾದಿ-ಸಮಯಪ್ರಸಾದಿಗಳೆಂದು
ಜಲಕ್ಕೆ ಕನ್ನವನಿಕ್ಕಿ ಉದಕವ ತಂದು
ಲಿಂಗಮಜ್ಜನಕ್ಕೆರೆವ ಹಗಲುಗಳ್ಳರಿಗೆ ಮೆಚ್ಚುವನೆ
ಚೆನ್ನಮಲ್ಲಿಕಾರ್ಜುನ?
೧೧೧.
ಭವಿಸಂಗವಳಿದು ಶಿವಭಕ್ತನಾದ ಬಳಿಕ
ಭಕ್ತಂಗೆ ಭವಿಸಂಗವತಿ ಘೋರ ನರಕ
ಶರಣಸತಿ-ಲಿಂಗಪತಿಯಾದ ಬಳಿಕ
ಶರಣಂಗೆ ಸತಿಸಂಗವತಿಘೋರ ನರಕ
ಚೆನ್ನಮಲ್ಲಿಕಾರ್ಜುನ,
ಲಿಂಗೈಕ್ಯಂಗೆ ಪ್ರಾಣಗುಣವಳಿಯದವರ ಸಂಗವೇ ಭಂಗ
೧೧೨.
ಹೂವು ಕಂದಿದಲ್ಲಿ ಪರಿಮಳವನರಸುವರೇ?
[ಎನ್ನ ತಂದೆ] ಕಂದನಲ್ಲಿ ಕುಂದನರಸುವರೇ?
ಎಲೆ ದೇವ, ಸ್ನೇಹವಿದ್ದ ಠಾವಿನೊಳು
ದ್ರೋಹವಾದ ಬಳಿಕ ಮರಳಿ ಸದ್ಗುಣವನರಸುವರೇನಯ್ಯ?
ನೀ ಎನ್ನ ತಂದೆ, ಹೂವು ಕಂದಿದಲ್ಲಿ [ಪರಿಮಳವನರಸುವರೇ?]
ಕಂದನಲ್ಲಿ [ಕುಂದನರಸುವರೇ?]
ಎಲೆ ದೇವ, ಬೆಂದ ಹುಣ್ಣಿಗೆ ಬೇಗೆಯನಿಕ್ಕುವರೇ?
ಗುರುವೇ ಹೂವು ಕಂದಿದಲ್ಲಿ [ಪರಿಮಳವನರಸುವರೇ?]
[ಕಂದನಲ್ಲಿ ಕುಂದನರಸುವರೇ?]
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಹೊಳೆಯಳಿದ ಬಳಿಕ ಅಂಬಿಗಂಗೇನುಂಟು?
ಹೂವು ಕಂದಿದಲ್ಲಿ [ಪರಿಮಳವನರಸುವರೇ?]
[ಕಂದನಲ್ಲಿ ಕುಂದನರಸುವರೇ?]
೧೧೩.
ಕಂಗಳಲ್ಲಿ ಕಾಂಬೆನೆಂದು ಕತ್ತಲೆಯ ಹೊಕ್ಕುಡೆಂತಹುದಯ್ಯ?
ಬೆಟ್ಟದ ತುದಿಯ ಮೆಟ್ಟಿಲೆಂದು ಹಳ್ಳಕೊಳ್ಳಂಗಳಲ್ಲಿ
ಇಳಿದೊಡೆಂತಹುದಯ್ಯ?
ನೀನಿಕ್ಕಿದ ಸಯಿದಾನವನೊಲ್ಲದೆ
ಬೇರೆ ಬಯಸಿದೊಡೆಂತಹುದಯ್ಯ?
ಚೆನ್ನಮಲ್ಲಿಕಾರ್ಜುನನ ಘನವನರಿಯಲೆಂದು
ಕಿರುಕುಳಕ್ಕೆ ಸಂದೊಡೆಂತಹುದಯ್ಯ?
೧೧೪.
ಒಳಗಣ ಗಂಡನವ್ವಾ, ಹೊರಗಣ ಮಿಂಡನವ್ವಾ! ಎರಡನೂ ನಡೆಸಲು [ಬಾರದವ್ವ]!
ಚೆನ್ನಮಲ್ಲಿಕಾರ್ಜುನಯ್ಯ,
ಬಿಲ್ಲು [ಬೆಳವಲಕಾಯನೊಂದಾಗಿ] ಹಿಡಿಯಲು ಬಾರದಯ್ಯ!!
೧೧೫.
ಚಿನ್ನಕ್ಕರಿಸಿನ ಚಿನ್ನಕ್ಕರಿಸಿನ!
ಚಿನ್ನಕ್ಕರಿಸಿನವ ಕೊಳ್ಳಿರವ್ವ!
ನಮ್ಮ ನಲ್ಲನ ಮೈಯ್ಯ ಹತ್ತುವ ಅರಿಸಿನವ ಕೊಳ್ಳಿರವ್ವ
ಒಳಗುಂದದರಿಸಿನವ ಮಿಂದು
ಚೆನ್ನಮಲ್ಲಿಕಾರ್ಜುನನಪ್ಪಿರವ್ವ!
೧೧೬.
ಕಾಯ ಕರ್ರನೆ ಕುಂದಿದರೇನಯ್ಯ?
ಕಾಯ ಮಿರ್ರನೆ ಮಿಂಚಿದರೇನಯ್ಯ?
ಅಂತರಂಗ ಶುದ್ಧವಾದ ಬಳಿಕ
ಚೆನ್ನಮಲ್ಲಿಕಾರ್ಜುನನನೊಲಿದ ಕಾಯ
ಎಂತಾದಡೆಮಗೇನಯ್ಯ?
೧೧೭.
ಹಣ ಮೆದ್ದ ಬಳಿಕ, ಆ ಮರನ ಆರು ತರಿದರೇನು?
ಹೆಣ ಬಿಟ್ಟ ಬಳಿಕ, ಆಕೆಯನಾರು ಕೂಡಿಕೊಂಡರೇನು?
ಮಣ್ಣ ಬಿಟ್ಟ ಬಳಿಕ ಆ ಕೆಯ್ಯನಾರುತ್ತರೇನು?
ಚೆನ್ನಮಲ್ಲಿಕಾರ್ಜುನನ ಅರಿದ ಬಳಿಕ
ಆ ಕಾಯವ ನಾಯಿ ತಿಂದರೇನು ನೀರ ಕುಡಿದರೇನು?
೧೧೮.
ಹಗಲು ನಾಲ್ಕು ಜಾವ ಆಶನಕ್ಕೆ ಕುದಿವರು
ಇರುಳು ನಾಲ್ಕು ಜಾವ ವ್ಯಸನಕ್ಕೆ ಕುದಿವರು
ಅಸಗ ನೀರೊಳಗಿರ್ದುಬಾಯಾರಿ ಸತ್ತಂತೆ
ತಮ್ಮೊಳಗಿರ್ದ ಮಹಾಘನವನರಿಯರು ಚೆನ್ನಮಲ್ಲಿಕಾರ್ಜುನ
೧೧೯.
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗಲೆನ್ನದಿರೊ ಚೆನ್ನಮಲ್ಲಿಕಾರ್ಜುನ
೧೨೦.
ಉಸುರಿನ ಪರಿಮಳವಿರಲು ಕುಸುಮದ ಹಂಗೇಕಯ್ಯ?
ಕ್ಷಮೆ-ದಯೆ-ಶಾಂತಿ-ಸೈರಣೆಯಿರಲು ಸಮಾಧಿಯ ಹಂಗೇಕಯ್ಯ?
ಲೋಕವೇ ತಾನಾದ ಬಳಿಕ ಏಕಾಂತದ ಹಂಗೇಕಯ್ಯ,
ಚೆನ್ನಮಲ್ಲಿಕಾರ್ಜುನ?
೧೨೧.
ಹಸಿವೇ ನೀನು ನಿಲ್ಲು, ನಿಲ್ಲು, ತೃಷೆಯೇ ನೀನು ನಿಲ್ಲು ನಿಲ್ಲು
ನಿದ್ರೆಯೇ ನೀನು ನಿಲ್ಲು ನಿಲ್ಲು, ಕಾಮವೇ ನೀನು ನಿಲ್ಲು ನಿಲ್ಲು
ಕ್ರೋಧವೇ ನೀನು ನಿಲ್ಲು ನಿಲ್ಲು, ಮೋಹವೇ ನೀನು ನಿಲ್ಲು ನಿಲ್ಲು
ಲೋಭವೇ ನೀನು ನಿಲ್ಲು ನಿಲ್ಲು, ಮದವೇ ನೀನು ನಿಲ್ಲು ನಿಲ್ಲು
ಮಚ್ಚರವೇ ನೀನು ನಿಲ್ಲು ನಿಲ್ಲು, ಸಚರಾಚರವೇ ನೀನು ನಿಲ್ಲು ನಿಲ್ಲು
ನಾನು ಚೆನ್ನಮಲ್ಲಿಕಾರ್ಜುನದೇವರ ಅವಸರದ
ಓಲೆಯನೊಯ್ಯುತ್ತಲಿದ್ದೇನೆ ಶರಣಾರ್ಥಿ
೧೨೨.
ಹೆದರದಿರು ಮನವೇ, ಬೆದರದಿರು ಮನವೇ
ನಿಜವನರಿತು ನಿಶ್ಚಿಂತವಾಗಿರು
ಫಲವಾದ ಮರನ ಇಡುವುದೊಂದು ಕೋಟಿ
ಎಲವದ ಮರನ ಇಡುವರೊಬ್ಬರ ಕಾಣೆ
ಭಕ್ತಿಯುಳ್ಳವರ ಬೈವರೊಂದು ಕೋಟಿ,
ಭಕ್ತಿಯಿಲ್ಲದವ ಬೈವರೊಬ್ಬರ ಕಾಣೆ
ನಿಮ್ಮ ಶರಣರ ನುಡಿಯೆ ಎನಗೆ ಗತಿಸೋಪಾನ, ಚೆನ್ನಮಲ್ಲಿಕಾರ್ಜುನ
೧೨೩.
ತನ್ನವಸರಕ್ಕಾಗಿ ಹಗಲುಗನ್ನವನಿಕ್ಕಿದರೆ
ಕನ್ನ ಸವೆಯಲಿಲ್ಲ, ಕಳವು ದೊರೆಯಲಿಲ್ಲ!
ಬೊಬ್ಬುಲಿಯನೇರಿದ ಮರ್ಕಟನಂತೆ
ಹಣ್ಣ ಮೆಲಲಿಲ್ಲ, ಕುಳ್ಳಿರೆ ಠಾವಿಲ್ಲ!
ನಾನು ಸರ್ವಸಂಗಪರಿತ್ಯಾಗ ಮಾಡಿದವಳಲ್ಲ
ನಿಮ್ಮ ಕೂಡಿ ಕುಲವಳಿದವಳಲ್ಲ ಚೆನ್ನಮಲ್ಲಿಕಾರ್ಜುನ
೧೨೪.
ಕೈಸಿರಿಯ ದಂಡವ ಕೊಳಬಹುದಲ್ಲದೆ
ಮೈಸಿರಿಯ ದಂಡವ ಕೊಳಲುಂಟೆ?
ಉಟ್ಟಂತ ಉಡಿಗೆತೊಡಿಗೆಯನೆಲ್ಲ ಸೆಳೆದುಕೊಳಬಹುದಲ್ಲದೆ
ಮುಚ್ಚಿ ಮುಸುಕಿರ್ದ ನಿರ್ವಾಣವ ಸೆಳೆದುಲೊಳಬಹುದೇ?
ಚೆನ್ನಮಲ್ಲಿಕಾರ್ಜುನದೇವರ ಬೆಳಗನುಟ್ಟು ಲಜ್ಜೆಗೆಟ್ಟವಳಿಗೆ
ಉಡಿಗೆತೊಡಿಗೆಯ ಹಂಗೇಕೊ ಮರುಳೇ?
೧೨೫.
ಮರವಿದ್ದು ಫಲವೇನು? ನೆಳಲಿಲ್ಲದನ್ನಕ!
ಧನವಿದ್ದು ಫಲವೇನು ದಯವಿಲ್ಲದನ್ನಕ?
ಹಸುವಿದ್ದು ಫಲವೇನು ಹಯನಿಲ್ಲದನ್ನಕ?
ರೂಪಿದ್ದು ಫಲವೇನು ಗುಣವಿಲ್ಲದನ್ನಕ?
ಅಗಲಿದ್ದು ಫಲವೇನು ಬಾನವಿಲ್ಲದನ್ನಕ?
ನಾನಿದ್ದು ಫಲವೇನು ನಿಮ್ಮ ಜ್ಞಾನವಿಲ್ಲದನ್ನಕ?
ಚೆನ್ನಮಲ್ಲಿಕಾರ್ಜುನ
೧೨೬.
ಕಟ್ಟಿಹಾದ ಬಿದಿರಿನಲ್ಲಿ ಮರಳಿ ಕಳಲೆ ಮೂಡಬಲ್ಲುದೆ?
ಸುಟ್ಟ ಮಡಕೆ ಮುನ್ನಿನಂತೆ ಮರಳಿ ಧರೆಯನಪ್ಪಬಲ್ಲುದೆ?
ತೊಟ್ಟು ಬಿಟ್ಟು ಬಿದ್ದ ಹಣ್ಣು ಮರಳಿ ತೊಟ್ಟನಪ್ಪಬಲ್ಲುದೆ?
ಕಷ್ಟಕರ್ಮಿ ಮನುಜರು ಕಾಣದೆ ಒಂದ ನುಡಿದರೆ
ನಿಷ್ಠೆಯುಳ್ಳ ಶರಣರು ಮರಳಿ ಮರ್ತ್ಯಕ್ಕೆ ಬಪ್ಪರೆ?
ಚೆನ್ನಮಲ್ಲಿಕಾರ್ಜುನ
೧೨೭.
ಪಂಚೇಂದ್ರಿಯಂಗಳೊಳಗೆ
ಒಂದಕ್ಕೆ ಪ್ರಿಯನಾದರೆ ಸಾಲದೆ?
ಸಪ್ತವ್ಯಸನಂಗಳೊಳಗೆ ಒಂದಕ್ಕೆ ಪ್ರಿಯನಾದರೆ ಸಾಲದೆ?
ರತ್ನದ ಸಂಕೋಲೆಯಾದಡೇನು ಬಂಧನ ಬಿಡುವುದೆ?
ಚೆನ್ನಮಲ್ಲಿಕಾರ್ಜುನ
೧೨೮.
ಮರೆಯ ನೂಲು ಸರಿಯೆ
ನಾಚುವುದು ನೋಡಾ ಗಂಡು ಹೆಣ್ಣೆಂಬ ಜಾತಿ
ಪ್ರಾಣದೊಡೆಯ ನೀ ಜಗದಲ್ಲಿ
ತೆರಹಿಲ್ಲದೊಪ್ಪುಡೆ ನಾಚಲೆಡೆಯುಂಟೆ ಹೇಳಾ!
ಚೆನ್ನಮಲ್ಲಿಕಾರ್ಜುನಯ್ಯ ಜಗವೆಲ್ಲ ಕಣ್ಣಾಗಿ ನೋಡುತ್ತಿರೆ
ಮುಚ್ಚಿ ಮರೆಯಿಸುವೆನೆಂತು ಹೇಳಾ ಅಯ್ಯ
೧೨೯.
ತನುವಿಡಿದು ದಾಸೋಹವ ಮಾಡಿ, ಗುರುಪ್ರಸಾದಿಯಾದ ಬಸವಣ್ಣ
ಮನವಿಡಿದು ದಾಸೋಹವ ಮಾಡಿ ಲಿಂಗಪ್ರಸಾದಿಯಾದ ಬಸವಣ್ಣ
ಧನವಿಡಿದು ದಾಸೋಹವ ಮಾಡಿ, ಜಂಗಮಪ್ರಸಾದಿಯಾದ ಬಸವಣ್ಣ
ಇಂತೀ ತ್ರಿವಿಧವಿಡಿದು ದಾಸೋಹವ ಮಾಡಿ
ಸದ್ಗುರು ಚೆನ್ನಮಲ್ಲಿಕಾರ್ಜುನಯ್ಯಾ
ನಿಮ್ಮ ಶರಣ ಬಸವಣ್ಣ ಸ್ವಯಂಪ್ರಸಾದಿಯಾದನಯ್ಯ
೧೩೦.
ಆತುರದ ಧ್ಯಾನದಿಂದ ಧಾವತಿಗೊಂಡೆ
ಜ್ಯೋತಿರ್ಲಿಂಗವ ಕಾಣಿಸಬಾರದು, ಮಾತಿನ ಮಾತಿಗೆ ಸಿಲುಕುವನಲ್ಲ
ಧಾತುಗೆಡಿಸಿ ಮನವ ನೋಡಿ ಕಾಡುವನು
ಆತುಮನಂತರ-ಪರವನರಿದಡೆ ಆತನೆ ಶಿವಯೋಗಿ
ಆತನ ಪಾದಕೆ ಶರಣು ಎಂಬೆನಯ್ಯ ಚೆನ್ನಮಲ್ಲಿಕಾರ್ಜುನ
೧೩೧.
ದೃಶ್ಯವಾದ ರವಿಯ ಬೆಳಗು, ಆಕಾಶದ ವಿಸ್ತೀರ್ಣ,
ವಾಯುವಿನ ಚಲನೆ, ತರುಗುಲ್ಮಲತಾದಿಗಳಲ್ಲಿಯ ತಳಿರು ಪುಷ್ಪ
ಷಡುವರ್ಣಂಗಳೆಲ್ಲ ಹಗಲಿನ [ಪೂಜೆ]
ಚಂದ್ರಪ್ರಕಾಶ, ನಕ್ಷತ್ರ, ಅಗ್ನಿ,
ವಿದ್ಯುದ್ ಆದಿಗಳು ದೀಪ್ತಿಮಯವೆನಿಸಿಪ್ಪುವುಗಳೆಲ್ಲ
ಇರುಳಿನ ಪೂಜೆ;
ಹಗಲಿರುಳು ನಿನ್ನ ಪೂಜೆಯಲ್ಲಿ ಎನ್ನ ಮರೆದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
೧೩೨.
ಸಂಸಾರವ ನಿರ್ವಾಣವ ಮಾಡಿ,
ಮನವ ವಜ್ರತುರಗವ ಮಾಡಿ,
ಜೀವನ ರಾವುತನ ಮಾಡಿ,
ಮೇಲಕ್ಕುಪ್ಪುವಡಿಸಲೀಯದೆ,
ಮುಂದಕ್ಕೆ ಮುಗ್ಗರಿಸಲೀಯದೆ, ಈ ವಾರುವನ ದಳದ ಮೇಲೆ
ಅಟ್ಟಿ ಮುಟ್ಟಿ ಹಾರಿ ಬರಸೆಳೆದು ನಿಲಿಸಲರಿಯದೆ
ಪವನಬಣ್ಣದ ಕೇಸರಿಯ ತೊತ್ತಳದುಳಿವುತ್ತಿಪ್ಪುದಿದಾರಯ್ಯ?
ಅಂಗಡಿಯ ರಾಜಬೀದಿಯೋಳಗೆ ರತ್ನಶೆಟ್ಟಿಯ ಮಾಣಿಕ್ಯ ಬಿದ್ದರೆ
ಥಳಥಳನೆ ಹೊಳೆವ ಪ್ರಜ್ವಳಿತವ ಕಾಣದೆ
ಹಳಹಳನೆ ಹಳಚುತ್ತಿಪ್ಪುದಿದಾರಯ್ಯ?
ಹೃದಯಸ್ಥಾನದ ಧೂಪಗುಂಡಿಗೆಯಲ್ಲಿ
ಆಧಾರಸ್ಥಾನದಿಂಗಳ ಮತ್ತೊಂದು ಬಂದು,
ಪರಿಣಾಮವೆಂಬ ಧೂಪವನಿಕ್ಕಿ
ವಾಯುವಿನ ಸಂಬಂಧವರಿಯದೆ ವಾಯುವ ಮೇಲಕ್ಕೆತ್ತಲು
ಗಗನಕ್ಕೆ ತಾಗುವುದು,
ತಾಗಲಿಕೆ ಅಲ್ಲಿರ್ದ ಅಮೃತದ ಕೊಡನೊಡೆದು
ಕೆಳಗಣ ಹೃದಯಸ್ಥಾನದ ಮೇಲೆ ಬೀಳೆ,
ಮರೆಸಿದ ಮಾಣಿಕ್ಯವ ಕಾಣಬಹುದು,
ಇದನಾರು ಬಲ್ಲರೆಂದರೆ
ಹಮ್ಮಳಿದು ಇಹಪರವನರಿದು
ಪಂಚೇಂದ್ರಿಯದ ಇಂಗಿತವನರಿದ ಶರಣ ಬಸವಣ್ಣನಲ್ಲದೆ
ಈ ಪ್ರಾಣಘಾತವ ಮಾಡುವರೆತ್ತ ಬಲ್ಲರಯ್ಯ, ಚೆನ್ನಮಲ್ಲಿಕಾರ್ಜುನ
೧೩೩.
ಲಿಂಗಕ್ಕೆ ಶರಣೆಂದು ಪೂಜಿಸಬಹುದಲ್ಲದೆ
ಜಂಗಮವ ಪೂಜಿಸಿ ಸರ್ವಸುಖವನರ್ಪಿಸಿ ಶರಣೆನ್ನಬಾರದು ಎಲೆ ತಂದೆ
ಆಡಬಹುದು ಪಾಡಬಹುದಲ್ಲದೆ ನುಡಿದಂತೆ ನಡೆಯಲು ಬಾರದೆಲೆ ತಂದೆ
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣರು ನುಡಿದಂತೆ ನಡೆಯಲು ಬಲ್ಲರು ಎಲೆ ತಂದೆ
೧೩೪.
ಹಂದಿಯು ಮದಕರಿಯು ಒಂದೆ ದಾರಿಯಲ್ಲಿ
ಸಂಧಿಸಿದರೆ ಹಂದಿಗಂಜಿ ಮದಕರಿ ಕೆಲಸಕ್ಕೆ ಸಾರಿದರೆ,
ಹೀಹಂದಿಯದು ಕೇಸರಿಯಪ್ಪುದೇ
ಚೆನ್ನಮಲ್ಲಿಕಾರ್ಜುನ?
೧೩೫.
ಕಳನೇರಿ ಇಳಿವುದು ವೀರಂಗೆ ಮತವಲ್ಲ
ಶಿವಶರಣಂಗೆ ಹಿಮ್ಮೆಟ್ಟುವುದು ಪಥವಲ್ಲ
ಮನದೊಡೆಯ ಮನವನಿಂಬುಗೊಂಬನಯ್ಯ
ಏರಲಾಗದು ಶ್ರೀಪರ್ವತವ, ಏರಿ ಇಳಿದೊಡೆ ವ್ರತಕ್ಕೆ ಭಂಗ
ಕಳನೇರಿ ಕೈಮರೆದಡೆ ಮಾರಂಕ
ಚೆನ್ನಮಲ್ಲಿಕಾರ್ಜುನನಿಮ್ಮೈಗಾಣಲಿರಿವನು
೧೩೬.
ಬಯಲು ಲಿಂಗವೆಂಬೆನೆ ? ನಡೆದಲ್ಲಿಯೇ ಹೋಯಿತು
ಬೆಟ್ಟ ಲಿಂಗವೆಂಬೆನೆ ? ಮೆಟ್ಟಿನಡೆದಲ್ಲಿಯೇ ಹೋಯಿತು
ತರುಮರಾದಿಗಳು ಲಿಂಗವೆಂಬೆನೆ ? ತರಿದಲ್ಲಿಯೇ ಹೋಯಿತು
ಲಿಂಗಜಂಗಮದ ಪಾದವೇ ಗತಿಯೆಂದು ನಂಬಿದ
ಸಂಗನ ಬಸವಣ್ಣನ ಮಾತ ಕೇಳದೆ
ಕೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
೧೩೭.
ಅರಿವು ಸಾಧ್ಯವಾಯಿತ್ತೆಂದು
ಗುರು-ಲಿಂಗ-ಜಂಗಮವ ಬಿಡಬಹುದೇ?
ಸಂದುಸಂಶಯವಳಿದಖಂಡಜ್ಞಾನವಾಯಿತ್ತೆಂದು
ಪರಧನ-ಪರಸ್ತ್ರೀಗಳುಪಬಹುದೇ?
ಯತ್ರ ಜೀವಸ್ತತ್ರ ಶಿವಃ ಎಂಬ ಅಭಿನ್ನಜ್ಞಾನವಾಯಿತ್ತೆಂದು
ಶುನಕು-ಸೂಕರ-ಕುಕ್ಕುಟ-ಮಾರ್ಜಾಲಂಗಳ ಕೂಡಿ ಭುಂಜಿಸಬಹುದೇ?
ಭಾವದಲ್ಲಿ ತನ್ನ ನಿಜ ನೆಲೆಯರಿಯನರಿವುತ್ತಿಹುದು
ಸುಜ್ಞಾನ-ಸತ್ಕ್ರಿಯಾ-ಸುನೀತಿ-ಸುಮಾರ್ಗದಲ್ಲಿ ವರ್ತಿಸುವುದು
ಹೀಂಗಲ್ಲದೆ ಜ್ಞಾನವಾಯಿತ್ತೆಂದು
ತನ್ನ ಮನಕ್ಕೆ ಬಂದ ಹಾಂಗೆ ಮೀರಿ ನುಡಿದು ನಡೆದೊಡೆ
ಶ್ವಾನಗರ್ಭದಲ್ಲಿ ಹುಟ್ಟಿಸದೆ ಬಿಡುವನೆ ಚೆನ್ನಮಲ್ಲಿಕಾರ್ಜುನಯ್ಯನು?
೧೩೮.
ಸರ್ಪನ ಬಾಯ ಕಪ್ಪೆ ನೊಣಕ್ಕೆ ಹಾರುವಂತೆ
ಆಪ್ಯಾಯನ ಬಿಡದು
ಕಾಯವರ್ಪಿತವೆಂಬ ಹುಸಿಯ ನೋಡಾ
ನಾನು ಭಕ್ತನೆಂಬ ನಾಚಿಕೆಯ ನೋಡಾ
ನಾನು ಯುಕ್ತನೆಂಬ ಹೇಸಿಕೆಯ ನೋಡಾ
ಓಗರವಿನ್ನಾಗದು ಪ್ರಸಾದ ಮುನ್ನಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ, ಉಭಯವಡಗದನ್ನಕ
೧೩೯.
ಅಕ್ಕಿಯಿಲ್ಲದ ತುಷಕ್ಕೆ ಅಗ್ಘವಣಿಯನೆರೆದರೆ
ಅದೆಂದಿಗೆ ಬೆಳೆದು ಫಲವಪ್ಪುದಯ್ಯ?
ಅರಿವಿಲ್ಲದವರಿಗೆ ಆಚಾರವಿದ್ದರೆ
ಅರಕೆಗೆಟ್ಟು ಸುಖವೆಂದಪ್ಪುದಯ್ಯ?
ಹಾರದ ಪರಿಮಳವು ಸ್ಥಿರವಾಗಬಲ್ಲುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನರಿಯದವರಿಗೆ
ಆಚಾರವಿಲ್ಲ ಕಾಣಿರಯ್ಯ
೧೪೦.
ಸಟೆ-ದಿಟವೆಂಬುವೆರಡುವಿಡಿದು
ನಡೆವುದೀ ಲೋಕವೆಲ್ಲವು
ಸಟೆ-ದಿಟವೆಂಬುವೆರಡುವಿಡಿದು
ನಡೆವನೇ ಲೋಕದೊಡನೆ ಶರಣನು?
ಗುರು-ಲಿಂಗ-ಜಂಗಮದಲ್ಲಿ ಸಟೆಯ ಬಳಸಿದಡೆ
ಆತನು ತ್ರಿವಿಧಕ್ಕೆ ದ್ರೋಹಿ, ಅಘೋರನರಕಿ,
ಉಂಬುದೆಲ್ಲ ಕಿಲ್ಪಿಷ, ತಿಂಬುದೆಲ್ಲ ಅಡಗು, ಕುಡಿವುದೆಲ್ಲ ಸುರೆ
ಹುಸಿಯೆಂಬುದೇ ಹೊಲೆ
ಶಿವಭಕ್ತಂಗೆ ಹುಸಿಯೆಂಬುದುಂಟೆ ಅಯ್ಯ?
ಹುಸಿಯನಾಡಿ ಲಿಂಗವ ಪೂಜಿಸಿದಡೆ
ಹೊಳ್ಳ ಬಿತ್ತಿ ಫಲವನರಸುವಂತೆ ಕಾಣಾ ಚೆನ್ನಮಲ್ಲಿಕಾರ್ಜುನ
೧೪೧.
ಐದು ಪರಿಯ ಬಣ್ಣವ ತಂದುಕೊಟ್ಟರೆ
ನಾಲ್ಕು ಮೊಲೆಯ ಹಸುವಾಯಿತ್ತು
ಹಸುವಿನ ಬಸರಲ್ಲಿ ಕರು ಹುಟ್ಟಿತ್ತು
ಕರುವ ಮುಟ್ಟಲೀಯದೆ ಹಾಲು ಕರೆದುಕೊಂಡರೆ
ಕರ ರುಚಿಯಾಗಿತ್ತು
ಮಧುರ ತಲೆಗೇರಿ, ಅರ್ಥ ನೀಗಾಡಿ
ಆ ಕರುವಿನ ಬೆಂಬಳಿವಿಡಿದು ಭವ ಹರಿಯಿತ್ತು
ಚೆನ್ನಮಲ್ಲಿಕಾರ್ಜುನ
೧೪೨.
ರವಿಯ ಕಾಳಗವ ಗೆಲಿದು
ಒಂಬತ್ತು ಬಾಗಿಲ ಮುರಿದು
ಅಷ್ಟಧವಳಾರಮಂ ಸುಟ್ಟು, ಮೇಲುಪ್ಪರಿಗೆಯ ಮೆಟ್ಟಿ
ಅಲ್ಲ-ಅಹುದು, ಉಂಟು-ಇಲ್ಲ, ಬೇಕು-ಬೇಡ ಎಂಬ
ಆರರತಾತನೇ ಗುರು
ಗುರು ತಾನೇ ಬೇರಿಲ್ಲ
ದ್ವಯಕಮಲದಲ್ಲಿ ಉದಯವಾದ ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣ ಸಂಗನ ಬಸವಣ್ಣನ
ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
೧೪೩.
ಹುಟ್ಟದ ಯೋನಿಯಲ್ಲಿ ಹುಟ್ಟಿಸಿ,
ಬಾರದ ಭವಂಗಳಲಿ ಬರಿಸಿ,
ಉಣ್ಣದ ಊಟವನುಣಿಸಿ ವಿಧಿಯೊಳಗಾಗಿಸುವ ಕೇಳಿರಣ್ಣ!
ತನ್ನವರೆಂದರೆ ಮನ್ನಿಸುವನೇ ಶಿವನು?
ಹತ್ತಿರಿದ್ದ ಭೃಂಗಿಯ ಚರ್ಮವ ಕಿತ್ತೀಡಾಡಿಸಿದನು
ಮತ್ತೆ ಕೆಲವರ ಬಲ್ಲನೇ?
ಇದನರಿದು ಬಿಡದಿರು ಚೆನ್ನಮಲ್ಲಿಕಾರ್ಜುನನಿಂತಹ ಸಿತಗನವ್ವ!
೧೪೪.
ಬಯಲಿಂದ ಹುಟ್ಟಿದ ಪರವೆಂಬ ತಾಯಿಗೆ
ಐವರು ಮಕ್ಕಳು ಜನಿಸಿದರೆಂತೆಂಬೆ?!
ಒಬ್ಬ ಭಾವದರೂಪ, ಒಬ್ಬ ಪ್ರಾಣದರೂಪ,
ಒಬ್ಬನೈಮುಖನಾಗಿ ವಿಶ್ವಕ್ಕೆ ಕಾಯರೂಪಾದ
ಇಬ್ಬರು ಉತ್ಪತ್ತಿಸ್ಥಿತಿಗೆ ಕಾರಣರಾದರು
ಐಮುಗನರಮನೆ ಸುಖವಿಲ್ಲೆಂದರಿದವನಾಗಿ
ಇನ್ನು ಕೈಲಾಸವನು ಹೊಗೆ ಹೊಗೆ!
ಮರ್ತ್ಯಕ್ಕೆ ಅಡಿಯಿಡೆನು
ಚೆನ್ನಮಲ್ಲಿಕಾರ್ಜುನದೇವ ನೀನೆ ಸಾಕ್ಷಿ!
೧೪೫.
ಸುಖದ ಸುಖಿಗಳ ಸಂಭಾಷಣೆಯಿಂದ
ದುಃಖಕ್ಕೆ ವಿಶ್ರಾಮವಾಯಿತ್ತು
ಭಾವಕ್ಕೆ ಭಾವ ತಾರ್ಕಣೆಯಾದಲ್ಲಿ
ನೆನಹಕ್ಕೆ ವಿಶ್ರಾಮವಾಯಿತ್ತು
ಬೆಚ್ಚು ಬೆರೆಸಲೊಡನೆ ಮೆಚ್ಚು ಒಳಕೊಂಡಿತಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗದಿಂದ
೧೪೬.
ಅಂಗೈಯೊಳಗಣ ಲಿಂಗವ ಪೂಜಿಸುತ್ತ
ಮಂಗಳಾರತಿಗಳನು ತೊಳಗಿ ಬೆಳಗುತಲಿರ್ದೆ ನೋಡಯ್ಯ
ಕಂಗಳ ನೋಟ ಕರುವಿಟ್ಟ ಭಾವ,
ಹಿಂಗದ ಮೋಹ ತೆರಹಿಲ್ಲದಿರ್ದೆ ನೋಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮನಲಗದ ಪೂಜೆ ಅನುವಾಯಿತ್ತೆನಗೆ
೧೪೭.
ಪುರುಷರ ಮುಂದೆ ಮಾಯೆ
ಸ್ತ್ರೀಯೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಸ್ತ್ರೀಯ ಮುಂದೆ ಮಾಯೆ
ಪುರುಷನೆಂಬ ಅಭಿಮಾನವಾಗಿ ಕಾಡಿತ್ತು ನೋಡಾ!
ಲೋಕವೆಂಬ ಮಾಯೆಗೆ
ಶರಣಚಾರಿತ್ರ ಮರುಳಾಗಿ ತೋರುವುದು ನೋಡಾ!
ಚೆನ್ನಮಲ್ಲಿಕಾರ್ಜುನನೊಲಿದ ಶರಣಂಗೆ
ಮಾಯೆಯಿಲ್ಲ, ಮರಹಿಲ್ಲ, ಅಭಿಮಾನವೂ ಇಲ್ಲ
೧೪೮.
ಹುಟ್ಟಿದೆ ಶ್ರೀಗುರುವಿನ ಹಸ್ತದಲ್ಲಿ,
ಬೆಳೆದನು ಅಸಂಖ್ಯಾತರ ಕರುಣದಲ್ಲಿ
ಸುಜ್ಞಾನವೆಂಬ ತುಪ್ಪ,
ಪರಮಾರ್ಥವೆಂಬ ಸಕ್ಕರೆಯನಿಕ್ಕಿದಿರಿ ನೋಡಾ!
ಇಂತಪ್ಪ ತ್ರಿವಿಧಾಮೃತವ ದಣಿಯಲೆರಡು ಸಲಹಿದಿರಿ
ಎನ್ನ ವಿವಾಹವ ಮಾಡಿದಿರಿ
ಸಯವಪ್ಪ ಗಂಡಂಗೆ ಕೊಟ್ಟಿರಿ
ಕೊಟ್ಟ ಮನೆಗೆ ಕಳುಹಲೆಂದು ಅಸಂಖ್ಯಾತರೆಲ್ಲರು ನೆರೆದು ಬಂದಿರಿ
ಬಸವಣ್ಣ ಮೆಚ್ಚಲು ಒಗೆತನವ ಮಾಡುವೆ
ಚೆನ್ನಮಲ್ಲಿಕಾರ್ಜುನನ ಕೈವಿಡಿದು,
ನಿಮ್ಮ ಮಂಡೆಗೆ ಹೂವ ತಹೆವಲ್ಲದೆ ಹುಲ್ಲ ತಾರೆನು!
ಅವಥರಿಸಿ ನಿಮ್ಮಡಿಗಳೆಲ್ಲರು
ಮರಳಿ ಬಿಜಯಂಗೈವುದು ಶರಣು ಶರಣಾರ್ಥಿ
೧೪೯.
ಅಯ್ಯ, ನಿಮ್ಮ ಮಹಂತರ ಕೂಡಿದ
ಸುಖವನುಪಮೆಗೆ ತರಬಾರದಯ್ಯ
ಅಯ್ಯ, ನಿಮ್ಮ ಮಹಂತರ ಕೂಡಿಯಗಲುವ ಧಾವತಿಯಿಂದ
ಸಾವುದೇ ಕರ ಲೇಸು ಕಂಡಯ್ಯ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ನಿಜವನರುಹಿದ ಮಹಿಮರನಗಲಿ ನಿಲಲಾರೆನಯ್ಯ
೧೫೦.
ಅಯ್ಯ, ನಿಮ್ಮ ಸದ್ಭಕ್ತರ ಕಂಡೆನಾಗಿ
ಎನ್ನ ಕಂಗಳ ಪಟಲ ಹರಿಯಿತ್ತು
ಅಯ್ಯ ನಿಮ್ಮ ಸಜ್ಜನ ಸದ್ಭಕ್ತರ ಶ್ರೀಚರಣಕ್ಕೆರಗಿದೆನಾಗಿ
ಎನ್ನ ಹಣೆಯ ಲಿಖಿತ ತೊಡೆಯಿತ್ತು
ಚೆನ್ನಮಲ್ಲಿಕಾರ್ಜುನದೇವ,
ನಿಮ್ಮ ಶರಣ ಸಂಗನಬಸವಣ್ಣನ ಕಂಡು
ಮಿಗೆ ಮಿಗೆ ನಮೋ ನಮೋ ಎನುತಿರ್ದೆನು
೧೫೧.
ಎನ್ನಂಗದಲಿ ಆಚಾರವ ತೋರಿದನಯ್ಯ ಬಸವಣ್ಣನು
[ಆ] ಆಚಾರವೇ ಲಿಂಗವೆಂದರುಹಿದನಯ್ಯ ಬಸವಣ್ಣನು
ಎನ್ನ ಪ್ರಾಣದಲ್ಲಿ ಅರುಹ ತೋರಿದನಯ್ಯ ಬಸವಣ್ಣನು
ಆ ಅರುಹೇ ಜಂಗಮವೆಂದರುಹಿದನಯ್ಯ ಬಸವಣ್ನನು
[ಚೆನ್ನಮಲ್ಲಿಕಾರ್ಜುನ] [ಎನ್ನ] ಹೆತ್ತ ತಂದೆ ಸಂಗಬಸವಣ್ನನು
ಎನಗೀ ಕ್ರಮವನರುಹಿದನಯ್ಯ
೧೫೨.
ಗಂಗೆಯೊಡನಾಡಿದ ಗಟ್ಟ-ಬೆಟ್ಟಂಗಳು
ಕೆಟ್ಟ ಕೇಡ ನೋಡಯ್ಯ
ಅಗ್ನಿಯೊಡನಾಡಿದ ಕಾಷ್ಟಂಗಳು ಕೆಟ್ಟ ಕೇಡ ನೋಡಯ್ಯ
ಜ್ಯೋತಿಯೊಡನಾಡಿದ ಕತ್ತಲೆ ಕೆಟ್ಟ ಕೇಡ ನೋಡಯ್ಯ
ಇಂತೀ ಪರಶಿವಮೂರ್ತಿ ಹರನೇ
ನಿಮ್ಮ ಜಂಗಮಲಿಂಗದೊಡನಾಡಿ ಎನ್ನ ಭವಾದಿಭವಂಗಳು
ಕೆಟ್ಟ ಕೇಡ ನೋಡಾ ಚೆನ್ನಮಲ್ಲಿಕಾರ್ಜುನ
೧೫೩.
ಮರ್ತ್ಯಲೋಕದ ಭಕ್ತರ ಮನವ ಬೆಳಗಲೆಂದು
ಇಳಿತಂದನಯ್ಯ ಶಿವನು
ಕತ್ತಲೆಯ ಪಾತಾಳವ ರವಿ ಹೊಕ್ಕಂತಾಯಿತಯ್ಯ
ಚಿತ್ತದ ಪ್ರವೃತ್ತಿಯ ಹಿಂಗಿಸಿ
ಮುಕ್ತಿಪಥವ ತೋರಿದನಲ್ಲಾ ಅಸಂಖ್ಯಾತರುಗಳಿಗೆ
ತನುವೆಲ್ಲ ಸ್ವಯಂಲಿಂಗ, ಮನವೆಲ್ಲ ಚರಲಿಂಗ
ಭಾವವೆಲ್ಲ ಮಹಾಘನದ ಬೆಳಗು
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣಸಮ್ಯಜ್ಞಾನಿ ಚೆನ್ನಬಸವಣ್ಣನ
ಶ್ರೀಪಾದಕ್ಕೆ ಶರಣೆಂದು
ಎನ್ನ ಭಾವಂ ನಾಸ್ತಿಯಾಯಿತ್ತಯ್ಯ ಪ್ರಭುವೇ
೧೫೪.
ಕಲ್ಯಾಣವೆಂಬುದಿನ್ನಾರಿಗೂ ಹೊಗಬಾರದು
ಆಶೆ-ಆಮಿಷವನಳಿದವಂಗಲ್ಲದೆ ಕಲ್ಯಾಣದತ್ತಲಡಿಯಿಡಬಾರದು
ಒಳಗು-ಹೊರಗೂ ಶುದ್ಧವಾದಂಗಲ್ಲದೆ ಕಲ್ಯಾಣವ ಹೊಗಬಾರದು
ನಾನೆಂಬುದು ಹರಿದವಂಗಲ್ಲದೆ ಕಲ್ಯಾಣವ ಹೊಗಬಾರದು
ಒಳಗು ತಿಳಿದು ಚೆನ್ನಮಲ್ಲಿಕಾರ್ಜುನಂಗೊಲಿದು
ಉಭಯ ಲಜ್ಜೆಯಳಿದೆನಾಗಿ ಕಲ್ಯಾಣವ ಕಂಡು
ನಮೋ ನಮೋ ಎನುತಿರ್ದೆನು
೧೫೫.
ಅಯ್ಯಾ ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯಾ ನಿಮ್ಮ ಅನುಭಾವಿಗಳ ಸಂಗದಿಂದ
ಎನ್ನ ಮನ ಶುದ್ಧವಾಯಿತ್ತು!
ಅಯ್ಯಾ ನಿಮ್ಮ ಅನುಭಾವಿಗಳು ಒರೆದೊರೆದು ಆಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನ, ನಿಮಗಾನು ತೊಡಿಗೆಯಾದೆನು
೧೫೬.
ಅರಸಿ ತೊಳಲಿದರಿಲ್ಲ ಹರಸಿ ಬಳಲಿದರಿಲ್ಲ
ಬಯಸಿ ಹೊಕ್ಕರಿಲ್ಲ ತಪಸ್ಸು ಮಾಡಿದರಿಲ್ಲ
ಅದು ತನ್ನ ತಾನಹ ಕಾಲಕ್ಕಲ್ಲದೆ ಸಾಧ್ಯವಾಗದು
ಶಿವನೊಲಿದಲ್ಲದೇ ಕೈಗೂಡದು
ಚೆನ್ನಮಲ್ಲಿಕಾರ್ಜುನನೆನಗೊಲಿದನಾಗಿ
ನಾನು ಸಂಗನಬಸವಣ್ಣನ ಶ್ರೀಪಾದವ ಕಂಡು ಬದುಕಿದೆನು
೧೫೭.
ಹಾವಿನ ಬಾಯ ಹಲ್ಲ ಕಳೆದು
ಹಾವನಾಡಿಸಬಲ್ಲೆಡೆ
ಹಾವಿನ ಸಂಗವೆ ಲೇಸು ಕಂಡಯ್ಯ!
ಕಾಯದ ಸಂಗವ ವಿವರಿಸಬಲ್ಲಡೆ
ಕಾಯದ ಸಂಗವೇ ಲೇಸು ಕಂಡಯ್ಯ!
ತಾಯಿ ರಕ್ಕಸಿಯಾದಂತೆ ಕಾಯವಿಕಾರವು
ಚೆನ್ನಮಲ್ಲಿಕಾರ್ಜುನಯ್ಯ,
ನೀನೊಲಿದವರು ಕಾಯಗೊಂಡಿದ್ದರೆನಬೇಡ
೧೫೮.
ಅಂಗವಿಕಾರಸಂಗವ ಮರೆದು
ಲಿಂಗವನೊಡಗೂಡುತಿಪ್ಪರ ತೋರಾ ಎನಗೆ!
ಕಾಯವಿಕಾರ ಕತ್ತಲೆಯಳಿದು
ಭಕ್ತಿಯೇ ಪ್ರಾಣವಾಗಿಪ್ಪರ ತೋರಾ ಎನಗೆ!
ತ್ರಿಕರಣಶುದ್ಧವಾಗಿ ನಿಮ್ಮ ನೆರೆನಂಬಿದ ಸದ್ಭಕ್ತರ ತೋರಾ ಎನಗೆ
ಚೆನ್ನಮಲ್ಲಿಕಾರ್ಜುನ
೧೫೯.
ತುಂಬಿದುದು ತುಳುಕದು ನೋಡಾ
ನಂಬಿದುದು ಸಂದೇಹಿಸದು ನೋಡಾ
ಒಳಿದುದು ಓಸರಿಸದು ನೋಡಾ
ನೆರೆಯರಿದುದು ಮರೆಯದು ನೋಡಾ
ಚೆನ್ನಮಲ್ಲಿಕಾರ್ಜುನಯ್ಯ, ನೀನೊಲಿದ ಶರಣಂಗೆ
ನಿಸ್ಸೀಮ ಸುಖ ನೋಡಯ್ಯ!
೧೬೦.
ನೋಡಿ ನುಡಿಸಿ ಮಾತಾಡಿಸಿದಡೊಂದು ಸುಖ
ಏನ ಮಾಡದಯ್ಯ ನಿಮ್ಮ ಶರಣರ ಅನುಭಾವ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರ ಸದ್ಗೋಷ್ಠಿ ಏನ ಮಾಡಯ್ಯ?
೧೬೧.
ಆಯತ-ಸ್ವಾಯತ-ಅನುಭಾವವ ನಾನೆತ್ತ ಬಲ್ಲೆನಯ್ಯಾ
ಗುರು-ಲಿಂಗ-ಜಂಗಮಕ್ಕೆ ಅರ್ಥಪ್ರಾಣಾಭಿಮಾನಂಗಳನಿತ್ತ
ನಿನ್ನ ಭಕ್ತರ ಭೃತ್ಯರಿಗಾಳಾಗಿಪ್ಪೆನಯ್ಯಾ
ನಿಮ್ಮ ಶರಣರ ಸಂಗವನಲ್ಲದೆ ಬೇರೊಂದ ಬಯಸೆನಯ್ಯ
ಚೆನ್ನಮಲ್ಲಿಕಾರ್ಜುನ
೧೬೨.
ಅಷ್ಟದಳಕಮಲದ ಆತ್ಮನೊಳಗೆ ಸೃಷ್ಟಿ ಜನಿಸಿ
[ಕೂರುಮ ದಿಗುದಂತಿ] ದಿಗುವಳಯವ ನುಂಗಿ
ನಿಜ ಶೂನ್ಯ ತಾನಾದ ಬಳಿಕ
ತನ್ನ ತಾನರಿದ ನಿಜಪದ ಭಿನ್ನಯೋಗಕ್ಕೆ ಬರಬಹುದೇ?
ಕಂಗಳ ನೋಟದಲ್ಲಿ
ಮನ ಸೊಗಸಿನಲ್ಲಿ
ಅನಂಗನ ಧಾಳಿಯನಗಲಿದೆವಣ್ಣ
ಮರೀಚಿಕಾಜಲದೊಳಡಗಿದ ಪ್ರಾಣಿ ವ್ಯಾಧನ ಬಲೆಗೊಳಗಹುದೇ?
ಎನ್ನ ದೇವ ಚೆನ್ನಮಲ್ಲಿಕಾರ್ಜುನನಲ್ಲದ
ಪರಪುರುಷರು ನಮಗಾಗದಣ್ಣ!
೧೬೩.
ನಮಗೆ ನಮ್ಮ ಲಿಂಗದ ಚಿಂತೆ
ನಮಗೆ ನಮ್ಮ ಭಕ್ತರ ಚಿಂತೆ, ಮನಗೆ ನಮ್ಮ ಆದ್ಯರ ಚಿಂತೆ
ನಮಗೆ ನಮ್ಮ ಚೆನ್ನಮಲ್ಲಿಕಾರ್ಜುನನ ಚಿಂತೆಯಲ್ಲದೆ
ಲೋಕದ ಮಾತು ನಮಗೇಕಣ್ಣ?
೧೬೪.
ನಿಮ್ಮ ನಿಲುವಿಂಗೆ ನೀವು ನಾಚಬೇಡವೆ?
ಅನ್ಯರ ಕೈಲಿ ಅಲ್ಲ ಎನಿಸಿಕೊಂಬ ನಡೆ-ನುಡಿಯೇಕೆ?
ಅಲ್ಲ ಎನಿಸಿಕೊಂಬುದರಿಂದ, ಆ ಕ್ಷಣವೇ ಸಾವುದು ಲೇಸು ಕಾಣಾ
ಚೆನ್ನಮಲ್ಲಿಕಾರ್ಜುನ
೧೬೫.
ಶಿವಭಕ್ತರ ರೋಮ ನೊಂದರೆ
ಒಡನೆ ಶಿವನು ನೋವ ನೋಡಾ
ಶಿವಭಕ್ತರು ಪರಿಣಾಮಿಸಿದರೆ, ಒಡನೆ ಶಿವ ಪರಿಣಆಮಿಸುವ ನೋಡಾ !
ಭಕ್ತದೇಹಿಕ ದೇವ ಎಂಬ ಶ್ರುತಿ ಹೊಗಳುವ ಕಾರಣ
ಶಿವಭಕ್ತರ ಲೇಸು ಹೊಲ್ಲೆಹ ಶಿವನ ಮುಟ್ಟುವುದು
ತಾಯಿ ನೊಂದರೆ ಒಡಲ ಶಿಶು ನೋವ ತೆರನಂತೆ
ಚೆನ್ನಮಲ್ಲಿಕಾರ್ಜುನ-ತನ್ನ ಭಕ್ತರು ನೊಂದರೆ
ಒಡನೆ ತಾ ನೋವನು
೧೬೬.
ನೋಡುವ ಕಂಗಳಿಗೆ ರೂಪಿಂಬಾಗಿರಲು
ನೀವು ಮನ ನಾಚದೆ ಬಂದಿರಣ್ಣ!
ಕೇಳಿದ ಶ್ರೋತ್ರಸೊಗಸಿಗೆ ನೀವು ಮರುಳಾಗಿ ಬಂದಿರಣ್ಣ!
ನಾರಿಯೆಂಬ ರೂಪಿಂಗೆ ನೀವು ಒಲಿದು ಬಂದಿರಣ್ಣ!
ಮೂತ್ರವು ಬಿಂದು ಒಸರುವ ನಾಳವೆಂದು
ಕಂಗಾಣದೆ ಮುಂದುಗೆಟ್ಟು ಬಂದಿರಣ್ಣ!
ಬುದ್ಧಿಗೇಡಿತನದಿಂದ ಪರಮಾರ್ಥದ ಸುಖವ
ಹೋಗಲಾಡಿಸಿಕೊಂಡು
ಇದಾವ ಕಾರಣವೆಂದರಿಯದೆ, ನೀವು ನರಹೇತುವೆಂದರಿದೂ
ಮನ ಹೇಸದೆ ಬಂದಿರಣ್ಣ!
ಚೆನ್ನಮಲ್ಲಿಕಾರ್ಜುನನಲ್ಲದೆ ಮಿಕ್ಕಿಹ ಪುರುಷರೆನಗೆ ಸಹೋದರರು
ಛೀ ಹೋಗಾ ಮರುಳೇ!
೧೬೭.
ಲೇಸು ಹಾಸು, ನೋಟವಾಭರಣ,
ಆಲಿಂಗನ ವಸ್ತ್ರ, ಚುಂಬನವಾರೋಗಣೆ,
ಲಲ್ಲೆವಾತು ತಾಂಬೂಲ, ಲವಲವಿಕೆಯೇ ಅನುಲೇಪನವೆನಗೆ
ಚೆನ್ನಮಲ್ಲಿಕಾರ್ಜುನನ ಕೂಟ ಪರಮಸುಖವವ್ವ!
೧೬೮.
ಆಡುವುದು, ಪಾಡುವುದು; ಕೇಳುವುದು, ಹೇಳುವುದು
ನಗೆ-ನುಡಿ ಸರಸ ಸಮ್ಮೇಳನವಾಗಿಪ್ಪುದು ಶರಣರೊಡನೆ
ಚೆನ್ನಮಲ್ಲಿಕಾರ್ಜುನ ಕೊಟ್ಟ ಆಯುಷ್ಯ ಉಳ್ಳನ್ನಕ್ಕರ
ಲಿಂಗಸುಖಿಗಳ ಸಂಗದಲ್ಲಿ ದಿನಂಗಳ ಕಳೆವುದು!
೧೬೯.
ಜಂಗಮವೆನ್ನ ಪ್ರಾಣ, ಜಂಗಮವೆನ್ನ ಜೀವ!
ಜಂಗಮವೆನ್ನ ನಿಧಿನಿಧಾನ!
ಜಂಗಮವೆನ್ನ ಹರುಷದ ಮೇರೆ!
ಚೆನ್ನಮಲ್ಲಿಕಾರ್ಜುನ,
ಜಂಗಮದ ತಿಂಥಿಣಿಯಲ್ಲಿ ಓಲಾಡುವೆ
೧೭೦.
ಅರಿಯದವರೊಡನೆ ಸಂಗವ ಮಾಡಿದರೆ
ಕಲ್ಲು ಹೊಯ್ದು ಕಿಡಿಯ ತೆಗೆದುಕೊಂಬಂತೆ
ಬಲ್ಲವರೊಡನೆ ಸಂಗವ ಮಾಡಿದರೆ
ಮೊಸರ ಹೊಸೆದು ಬೆಣ್ಣೆಯ ತೆಗೆದುಕೊಂಬಂತೆ
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಸಂಗ
ಕರ್ಪುರಗಿರಿಯ ಉರಿಯು ಕೊಂಡಂತೆ
೧೭೧.
ಮರ ಮರ ಮಥನಿಸಿ ಕಿಚ್ಚು ಹುಟ್ಟಿ
ಸುತ್ತಣ ತರುಮರಾದಿಗಳ ಸುಡಲಾಯಿತ್ತು
ಆತ್ಮವಾತ್ಮ ಮಥನಿಸಿ ಅನುಭಾವ ಹುಟ್ಟಿ
ಹೊದ್ದಿರ್ದ ತನುಗುಣಾದಿಗಳ ಸುಡಲಾಯಿತ್ತು
ಇಂತಪ್ಪ ಮಹಾನುಭಾವರ ಅನುಭಾವವ ತೋರಿ
ಎನ್ನನುಳುಹಿಕೊಳ್ಳಾ, ಚೆನ್ನ ಮಲ್ಲಿಕಾರ್ಜುನ
೧೭೨.
ಸಂಗದಿಂದಲ್ಲದೇ ಅಗ್ನಿ ಹುಟ್ಟದು
ಸಂಗದಿಂದಲ್ಲದೇ ಬೀಜ ಮೊಳೆದೋರದು
ಸಂಗದಿಂದಲ್ಲದೇ ದೇಹವಾಗದು
ಸಂಗದಿಂದಲ್ಲದೇ ಸರ್ವಸುಖದೋರದು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಅನುಭವದ ಸಂಗದಿಂದಾನು
ಪರಮಸುಖಿಯಯ್ಯಾ
೧೭೩.
ಶಿವಭಕ್ತನ ಮನೆಯಂಗಳ
ವಾರಣಾಸಿ ಎಂಬುದು ಹುಸಿಯೆ?
ಶಿವಭಕ್ತನ ಮನೆಯಂಗಳದಲ್ಲಿ
ಅಷ್ಟಷಷ್ಟಿ ತೀರ್ಥಂಗಳು ನೆಲಸಿಪ್ಪವಾಗಿ
ಸುತ್ತಿಬರಲು ಶ್ರೀಶೈಲ, ಕಲಬಲದಲ್ಲಿ ಕೇದಾರ,
ಅಲ್ಲಿಂದ ಹೊರಗೆ ಶ್ರೀ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ,
ನಿಮ್ಮ ಭಕ್ತನ ಮನೆಯಂಗಳ ವಾರಣಾಸಿಯಿಂದಧಿಕ ನೋಡಾ!
೧೭೪.
ಕಾಮನ ಗೆಲಿದೆನು, ಬಸವ, ನಿಮ್ಮ ದಯೆಯಿಂದ
ಸೋಮಧರನ ಹಿಡಿಪ್ಪೆತನು, ಬಸವ, ನಿಮ್ಮ ಕೃಪೆಯಿಂದ
ನಾಮದಲ್ಲಿ ಹೆಂಗೂಸೆಂಬ ಹೆಸರಾದಡೇನು?
ಭಾವಿಸಲು ಗಂಡು-ರೂಪು, ಬಸವ, ನಿಮ್ಮ ದಯದಿಂದದ
ಅತಿಕಾಮಿ ಚೆನ್ನಮಲ್ಲಿಕಾರ್ಜುನಯ್ಯಂಗೆ ತೊಡರನಿಕ್ಕಿ
ಎರಡರಿಯೆದೆ ಕೂಡಿದೆನು, ಬಸವ, ನಿಮ್ಮ ಕೃಪೆಯಿಂದ
೧೭೫.
ಅಂಗದ ಭಂಗವ ಲಿಂಗಮುಖದಿಂದ ಗೆಲಿದೆ
ಮನದ ಭಂಗವ ಅರಿವಿನ ಮುಖದಿಂದ ಗೆಲಿದೆ
ಜೀವದ ಭಂಗವ ಶಿವಾನುಭವದಿಂದ ಗೆಲಿದೆ
ಕರಣದ ಕತ್ತಲೆಯ ಬೆಳಗನುಟ್ಟು ಗೆಲಿದೆ
ಜವ್ವನದ ಹೊರಮಿಂಚಿನಲ್ಲಿ ನಿಮ್ಮ ಕಣ್ಣಿಗೆ ತೋರುವ
ಕಾಮನ ಸುಟ್ಟುರುಹಿದ ಭಸ್ಮವ ನೋಡಯ್ಯ
ಚೆನ್ನಮಲ್ಲಿಕಾರ್ಜುನ ಕಾಮನ ಕೊಂದು
ಮನಸಿಜನಾಗುಳುಹಿದರೆ
ಮನಸಿಜನ ತಲೆಯ ಬರಹವ ತೊಡೆದೆನು
೧೭೬.
ಎಲ್ಲರ ಗಂಡರ ಶೃಂಗಾರದ ಪರಿಯಲ್ಲ
ಎನ್ನ ನಲ್ಲನ ಶೃಂಗಾರದ ಪರಿ ಬೇರೆ
ಕರದಲ್ಲಿ ಕಂಕಣ, ಉರದ ಮೇಲಂದುಗೆ, ಕಿವಿಯಲ್ಲಿ ಹಾವುಗೆ
ಉಭಯ-ಸಿರಿವಂತನ ಮೊಣಕಾಲಲ್ಲಿ ಝಳವಟ್ಟಿಗೆ
ಉಂಗುಷ್ಠದಲ್ಲಿ ಮೂಕುತಿ ಅದು ಜಾಣರಿಗೆ ಜಗುಳಿಕೆ
ಚೆನ್ನಮಲ್ಲಿಕಾರ್ಜುನಯ್ಯನ ಶೃಂಗಾರದ ಪರಿ ಬೇರೆ!
೧೭೭.
ದೃಷ್ಟಿವರಿದುದು, ಮನ ನೆಲೆಗೊಂಡುದಿದೇನೋ!
ಆವನೆಂದರಿಯೆ ಭಾವ ನೆಟ್ಟುದವ್ವ!
ಕಳಿಯರಿದು ಅಂಗ ಗಸಣಿಯಾದುದು
ಇನ್ನಾರೆಂದಡೆ ಬಿಡೆ ಚೆನ್ನಮಲ್ಲಿಕಾರ್ಜುನಲಿಂಗವ
೧೭೮.
ತಲೆಯಲ್ಲಿ ನಿರಿ, ಟೊಂಕದಲ್ಲಿ ಮುಡಿ,
ಮೊಣಕಾಲಲ್ಲಿ ಕಿವಿಯೋಲೆ ಕಂಡೆ!
ಹರವಸದ ಉಡೂಗೆ, ಚಿಣ್ಣಂಗೆ ಹರವಸನ ಉಡುಗೆ!
ಏಕಾಂತದಲ್ಲಿ ಕೂಡಿ, ಮುಖವ ಕಂಡು
ಕಾಣದ ಚೆನ್ನಮಲ್ಲಿಕಾರ್ಜುನನ ನೆರೆವ ಪರಿ ಕರ ಹೊಸತು
೧೭೯.
ಭಾವಿಸಿ ನೋಡಿದೆಡೆ ಅಂಗವಾಯಿತ್ತು!
ಅಂಗಗುಣವಳಿದ ಬಳಿಕ ನಿನಗಂಗವಾದೆ
ಭಿನ್ನರುಚಿಯ ಬಿಟ್ಟು ಲಿಂಗರುಚಿಯಾದ ಬಳಿಕ
ಚೆನ್ನಮಲ್ಲಿಕಾರ್ಜುನನ ಕೊಂದು ಸಾವ ಭಾಷೆ!
೧೮೦.
ಕಾಯದೊಳಗೆ ಅಕಾಯವಾಯಿತ್ತು
ಜೀವದೊಳಗೆ ನಿರ್ಜೀವವಾಯಿತ್ತು
ಭಾವದೊಳಗೆ ನಿರ್ಭಾವವಾಯಿತ್ತು
ಎನ್ನ ಮನದೊಳಗೆ ಘನ ನೆನಹಾಯಿತ್ತು
ಎನ್ನ ತಲೆ-ಮೊಲೆಯ ನೋಡಿ ಸಲಹಿದಿರಾಗಿ
ಚೆನ್ನಮಲ್ಲಿಕಾರ್ಜುನಯ್ಯನ ಧರ್ಮದವಳಾನು
೧೮೧.
ಗಟ್ಟಿದುಪ್ಪಕ್ಕೆ ತಿಳಿದುಪ್ಪಕ್ಕೆ ಭೇದವುಂಟೇ ಅಯ್ಯ?
ದೀಪಕ್ಕೆ ದೀಪ್ತಿಗೆ ಭೇದವುಂಟೇ ಅಯ್ಯ?
ಆತ್ಮಕ್ಕೆ ಅಂಗಕ್ಕೆ ಭೇದವುಂಟೇ ಅಯ್ಯ
ಎನ್ನಂಗವನು ಶ್ರೀಗುರು ಮಂತ್ರವ ಮಾಡಿ ತೋರಿದನಾಗಿ
ಸಾವಯವಕ್ಕೆ ನಿರವಯವಕ್ಕೆ ಭಿನ್ನವಿಲ್ಲವಯ್ಯ!
ಚೆನ್ನಮಲ್ಲಿಕಾರ್ಜುನದೇವರ ಬೆರೆಸಿ ಮತಿಗೆಟ್ಟವಳ
ಏನ ನುಡಿಸುವಿರಯ್ಯ?
೧೮೨.
ಕೆಂಡವ ಶವದಂತೆ
ಸೂತ್ರ ತಪ್ಪಿದ ಬೊಂಬೆಯಂತೆ
ಜಲವರತ ತಟಾಕದಂತೆ
ಬೆಂದ ನುಲಿಯಂತೆ-
ಮತ್ತೆ ಹಿಂದಣಂಗ ಉಂಟೇ ಅಣ್ಣ
ಚೆನ್ನಮಲ್ಲಿಕಾರ್ಜುನನಂಗವೇ ಆಶ್ರಯವಾದವಳಿಗೆ?!
೧೮೩.
ಫಲ ಒಳಗೆ ಪಕ್ವವಾಗಿಯಲ್ಲದೆ
ಹೊರಗಣ ಸಿಪ್ಪೆ ಒಪ್ಪಗೆಡದು
ಕಾಮನ ಮುದ್ರೆಯ ಕಂಡು ನಿಮಗೆ ನೋವಾದೀತೆಂದು
ಆ ಭಾವದಿಂದ ಮುಚ್ಚಿದೆ
ಇದಕೆ ನೋವೇಕೆ?
ಕಾಡದಿರಣ್ಣ ಚೆನ್ನಮಲ್ಲಿಕಾರ್ಜುನದೇವನ ಒಳಗಾದವಳ
೧೮೪.
ನಾಣ ಮರೆಯ ನೂಲು ಸಡಿಲೆ ನಾಚುವರು ನೋಡಾ
ಗಂಡು-ಹೆಣ್ಣೆಂಬ ಜಾತಿ
ಪ್ರಾಣದೊಡೆಯ ಜಗದೊಳಗೆ ಮುಳುಗುತ್ತ ತೆರಹಿಲ್ಲದಿರಲು
ದೇವರ ಮುಂದೆ ನಾಚಲುಂಟೆ?
ಚೆನ್ನಮಲ್ಲಿಕಾರ್ಜುನಂಗೆ ಜಗವೆಲ್ಲ ಕಣ್ಣಾಗಿ ನೋಡುತ್ತಿರಲು
ಮುಚ್ಚಿ ಮೆರೆಸಬಹುದೆ ಹೇಳಯ್ಯ
೧೮೫.
ಎಲ್ಲಿ ಹೋದರೂ ಕಲಿಗೆ ಭಯವಿಲ್ಲ
ಹಂದೆಗೆ ಸುಖವಿಲ್ಲ ಕೇಳಿರಣ್ಣ!
ಈವಂಗವಗುಣವಿಲ್ಲ, ಕರುಣ ಉಳ್ಳವಂಗೆ ಪಾಪವಿಲ್ಲ
ಇನ್ನು ಪರಧನ-ಪರಸ್ತ್ರೀಯ ತೊರೆದಾತಂಗೆ
ಮುಂದೆ ಭವವಿಲ್ಲ, ಚೆನ್ನಮಲ್ಲಿಕಾರ್ಜುನ
೧೮೬.
ಸಿರಿಯಾಳಂಗೆ ಶಿವದಾಸಿಮಯ್ಯಂಗೆ ಬಸವಂಗೆ
ಆದ ರೇಖೆಯ ಬಿಟ್ಟು ಜೂಜನಾಡರೆ ನಮ್ಮವರಂದು?
ಒಬ್ಬಂಗೆ ಮಗನ ರಪಣ
ಒಬ್ಬಂಗೆ ಸೀರೆಯ ರಪಣ
ಒಬ್ಬಂಗೆ ತನು-ಮನ-ಧನ ರಪಣ
ಮೂವರೂ ಮೂದಲಿಸಿ ಮುಕ್ಕಣ್ಣನ ಗೆಲಿದರು
ಎನ್ನ ದೇವ ಚೆನ್ನಮಲ್ಲಿಕಾರ್ಜುನ
೧೮೭.
ಪ್ರಾಣಲಿಂಗವೆಂದರಿದ ಬಳಿಕ
ಪ್ರಾಣದಾಸೆ ಹಿಂಗಿತ್ತು
ಲಿಂಗಪ್ರಾಣವೆಂದರಿದ ಬಳಿಕ
ಅಂಗದಾಸೆ ಹಿಂಗಿತ್ತು
ಲಿಂಗಸೋಂಕಿನ ಸಂಗಿಗೆ-ಕಂಗಲೇ ಕರುವಾಗಿರ್ದವಯ್ಯ
ಚೆನ್ನಮಲ್ಲಿಕಾರ್ಜುನನ ಹಿಂಗದೆ ಅನಿಮಿಷವಾಗಿಹ ಶರಣಂಗೆ
೧೮೮.
ಕರಸ್ಥಲಕ್ಕೆ ಲಿಂಗಸ್ವಾಯತವಾದ ಬಳಿಕ
ಕಾಯಕ ನಿವೃತ್ತಿಯಾಗಬೇಕು
ಅಂಗದಲಳವಟ್ಟ ಲಿಂಗ ಲಿಂಗೈಕ್ಯಂಗೆ
ಅಂಗಸಂಗ ಮತ್ತೆಲ್ಲಿಯದು?
ಮಹಾಘನವನರಿದ ಮಹಂತರಿಗೆ
ಮಾಯವೆಲ್ಲಿಯದೋ ಚೆನ್ನಮಲ್ಲಿಕಾರ್ಜುನ?
೧೮೯.
ಕಟ್ಟಿದ ಕೆರೆಗೆ ಕೋಡಿ ಮಾಣದು
ಹುಟ್ಟಿದ ಪ್ರಾಣಿಗೆ ಪ್ರಳಯ ತಪ್ಪದಿನ್ನೆಂತಯ್ಯ
ಅರುಹಿರಿಯರೆಲ್ಲಾ ವೃಥಾ ಕೆಟ್ಟುಹೋದರಿನ್ನೆಂತಯ್ಯ
ಚೆನ್ನಮಲ್ಲಿಕಾರ್ಜುನದೇವನ
ಗೊತ್ತ ಮುಟ್ಟಿದವರೆಲ್ಲರೂ ನಿಶ್ಚಿಂತರಾದರು
೧೯೦.
ಊರ ನಡುವೆ ಒಂದು ಬೇಂಟೆ ಬಿದ್ದಿತ್ತು
ಆರು ಕಂಡವರು ಕೊಡಿರಯ್ಯಾ
ಊರಿಗೆ ದೂರುವೆನಗುಸೆಯನಿಕ್ಕುವೆ
ಅರಿತು ಅರಿಯದೆ ಒಂದು ಬೇಂಟೆಯನಾಡಿದೆನು
ಅರಸಿಕೊಡಯ್ಯ ಚೆನ್ನಮಲ್ಲಿಕಾರ್ಜುನ
೧೯೧.
ಆವ ವಿದ್ಯೆಯ ಕಲಿತಡೇನು
ಶವ ವಿದ್ಯೆ ಮಾಣದನ್ನಕ?
ಅಶನವ ತೊಡೆದಡೇನು? ವ್ಯಸನವ ಮರೆದೆಡೇನು?
ಉಸಿರಗಿಡಿದರೇನು? ಬಸಿರ ಕಟ್ಟಿದರೇನು?
ಚೆನ್ನಮಲ್ಲಿಕಾರ್ಜುನದೇವಯ್ಯ ನೆಲದಳವಾರನಾದಡೆ
ಕಳ್ಳನೆಲ್ಲಿ ಅಡಗುವ?
೧೯೨.
ಹಡೆವುದರಿದು ನರಜನ್ಮವ
ಹಡೆವುದರಿದು ಗುರುಕಾರುಣ್ಯವ
ಹಡೆವುದರಿದು ಲಿಂಗಜಂಗಮಸೇವೆಯ
ಚೆನ್ನಮಲ್ಲಿಕಾರ್ಜುನಯ್ಯನ ಶರಣ ಸಂಗದಲ್ಲಿ
ನಲಿದಾಡು ಕಂಡೆಯಾ ಎಲೆ ಮನವೇ
೧೯೩.
ಮಾಟಕೂಟ ಬಸವಣ್ಣಂಗಾಯಿತ್ತು
ನೋಟಕೂಟ ಪ್ರಭುದೇವರಿಗಾಯಿತ್ತು
ಭಾವಕೂಟ ಅಜಗಣ್ಣಂಗಾಯಿತ್ತು
ಸ್ನೇಹಕೂಟ ಬಾಚಿರಾಜಂಗಾಯಿತ್ತು
ಇವರೆಲ್ಲರ ಕೂಟ ಬಸವಣ್ಣಂಗಾಯಿತ್ತು
ಎನಗೆ ನಿಮ್ಮಲ್ಲಿ ಅವಿರಳದ ಕೂಟ ಚೆನ್ನಮಲ್ಲಿಕಾರ್ಜುನಯ್ಯ
೧೯೪.
ಮಾಟಕೂಟದಲ್ಲಿ ಬಸವಣ್ಣನಿಲ್ಲ
ನೋಟಕೂಟದಲ್ಲಿ ಪ್ರಭುದೇವರಿಲ್ಲ
ಭಾವಕೂಟದಲ್ಲಿ ಅಜಗಣ್ಣನಿಲ್ಲ
ಸ್ನೇಹಕೂಟದಲ್ಲಿ ಬಾಚಿರಾಜನಿಲ್ಲ
ಇವರೆಲ್ಲರ ಕೂಟದಲ್ಲಿ ಬಸವಣ್ಣನಿಲ್ಲ
ಎನಗಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ?
೧೯೫.
ಕದಳಿಯೆಂಬುದು ತನು! ಕದಳಿಯೆಂಬುದು ಮನ!
ಕದಳಿಯೆಂಬುದು ವಿಷಯಂಗಳು
ಕದಳಿಯೆಂಬುದು ಭವಘೋರಾರಣ್ಯ
ಕದಳಿಯೆಂಬುದ ಗೆದ್ದು ತವ ಬದುಕೆ ಬಂದು
ಕದಳಿಯ ಬನದಲ್ಲಿ ಭವಹರನ ಕಂಡೆನು
ಭವಗೆಟ್ಟು ಬಂದ ಮಗಳೆಂದು
ಕರುಣದಿಂ ತೆಗೆದು ಬಿಗಿಯಪ್ಪಿದರೆ
ಚೆನ್ನಮಲ್ಲಿಕಾರ್ಜುನನ ಹೃದಯಕಮಲದಲ್ಲಿ ಅಡಗಿದೆನು
೧೯೬.
ಕರ್ಮವೆಂಬ ಕದಳಿಯೆನಗೆ, ಕಾಯವೆಂಬ ಕದಳಿ ನಿನಗೆ
ಮಾಟವೆಂಬ ಕದಳಿ ಚೆನ್ನಬಸವಣ್ಣಂಗೆ
ಬಂದ ಬಂದ ಭಾವ ಸೆಲೆ ಸಂದಿತ್ತು
ಎನ್ನಂಗದವಸಾನವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ
೧೯೭.
ಬಸವಣ್ಣನ ಭಕ್ತಿ, ಚೆನ್ನಬಸವಣ್ಣನ ಜ್ಞಾನ,
ಮಡಿವಾಳಯ್ಯನ ನಿಷ್ಠೆ, ಪ್ರಭುದೇವರ ಜಂಗಮಸ್ಥಲ,
ಅಜಗಣ್ಣ ಐಕ್ಯಸ್ಥಲ, ನಿಜಗುಣನ ಆರೂಢಸ್ಥಲ,
ಸಿದ್ಧರಾಮಯ್ಯನ ಸಮಾಧಿಸ್ಥಲ-
ಇಂತಿವರ ಕರುಣಪ್ರಸಾದ ಎನಗಾಯಿತ್ತು ಚೆನ್ನಮಲ್ಲಿಕಾರ್ಜುನಯ್ಯ
೧೯೮.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ತೊತ್ತಿನ ಮರುದೊತ್ತಿನ
ಮಗಳಾದ ಕಾರಣ
ಜ್ಞಾನ ಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣ ಪ್ರಸಾದವ ಸಿದ್ಧಿಸಿ ಕೊಟ್ಟನು
ಮಡಿವಾಲಯ್ಯನ ಮನೆಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ
ತಮ್ಮ ಕರುಣದ ಕಂದನೆಂದು ತಲೆದಡವಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ಶ್ರೀಪಾದಕ್ಕೆ ಯೋಗ್ಯಳಾದೆನು
೧೯೯.
ಹಸಿವಾದರೆ ಊರೊಳಗೆ ಭಿಕ್ಷಾನ್ನಗಳುಂಟು
ತೃಷೆಯಾದರೆ ಕೆರೆ-ಭಾವಿ-ಹಳ್ಳಂಗಳುಂಟು
ಶಯನಕ್ಕೆ ಹಾಳುದೇಗುಲವುಂಟು
ಚೆನ್ನಮಲ್ಲಿಕಾರ್ಜುನಯ್ಯ ಆತ್ಮಸಂಗಾತಕ್ಕೆ ನೀನೆನಗುಂಟು
೨೦೦.
ಮನೆಮನೆದಪ್ಪದೆ ಕೈಯೊಡ್ಡಿ ಬೇಡುವಂತೆ ಮಾಡಯ್ಯ
ಬೇಡಿದರೆ ಇಕ್ಕದಂತೆ ಮಾಡಯ್ಯ
ಇಕ್ಕಿದರೆ ನೆಲಕ್ಕೆ ಬೀಳುವಂತೆ ಮಾಡಯ್ಯ
ನೆಲಕ್ಕೆ ಬಿದ್ದರೆ ನಾನೆತ್ತಿಕೊಂಬುದಕೆ ಮುನ್ನವೇ
ಶುನಿ ಎತ್ತಿಕೊಂಬಂತೆ ಮಾಡು
ಚೆನ್ನಮಲ್ಲಿಕಾರ್ಜುನಯ್ಯ!
೨೦೧.
ಭಕ್ತೆ ಏನಪ್ಪೆನಯ್ಯ ಕರ್ತೃ-ಭೃತ್ಯತ್ವವ ನಾನರಿಯೆ
ಮಾಹೇಶ್ವರಿ ಏನಪ್ಪೆನಯ್ಯ? ವ್ರತ-ನೇಮ-ಛಲವ ನಾನರಿಯೆ
ಪ್ರಸಾದಿ ಏನಪ್ಪೆನಯ್ಯ?
ಅರ್ಪಿತಾನರ್ಪಿತವೆಂಬ ಭೇದವ ನಾನರಿಯೆ
ಪ್ರಾಣಲಿಂಗಿ ಏನಪ್ಪೆನಯ್ಯ?
ಅನುಭಾವದ ಗಮನವ ನಾನರಿಯೆ
ಶರಣೆ ಏನೆಪ್ಪೆನಯ್ಯ?
ಶರಣಸತಿ-ಲಿಂಗಪತಿಯೆಂಬ ಭಾವವ ನಾನರಿಯೆ
ಐಕ್ಯೆ ಏನೆಪ್ಪೆನಯ್ಯ?
ಬೆರಸಿದ ಭೇದವ ನಾನರಿಯೆ
ಚೆನ್ನಮಲ್ಲಿಕಾರ್ಜುನಯ್ಯ,
ಷಟ್ಸ್ಥಲದಲ್ಲಿ ನಿಸ್ಥಲವಾಗಿಪ್ಪೆನು
೨೦೨.
ಬಸವಣ್ಣ, ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಇಂತೀ ಮೂವರೂ ಒಂದೊಂದ ಕೊಟ್ಟ ಕಾರಣ
ಎನಗೆ ಮೂರು ಭಾವವಾಯಿತ್ತು
ಆ ಮೂರು ಭಾವವ ನಿಮ್ಮಲ್ಲಿ ಸಮರ್ಪಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯನ ನೆನಹಾದಲ್ಲಿ
ನಿಮ್ಮ ಕರುಣದ ಕಂದನು ಕಾಣಾ ಚೆನ್ನಬಸವಣ್ಣ
೨೦೩.
ಸಂಗನ ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ನಾಸ್ತಿಯಾಯಿತ್ತು
ಪ್ರಭುವೇ ! ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನಗೆ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನಯ್ಯ, ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗಾವ ಜಂಜಡವಿಲ್ಲವಯ್ಯ ಪ್ರಭುವೇ
೨೦೪.
ಬಸವಣ್ಣನೇ ಗುರು, ಪ್ರಭುದೇವರೇ ಲಿಂಗ
ಸಿದ್ಧರಾಮಯ್ಯನೇ ಜಂಗಮ
ಮಡಿವಾಳಯ್ಯನೇ ತಂದೆ, ಚೆನ್ನಬಸವಣ್ಣನೇ ಎನ್ನ ಪರಮಾರಾಧ್ಯರು
ಇನ್ನು ಶುದ್ಧವಾದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ
೨೦೫.
ಬಸವಣ್ಣ ನಿಮ್ಮಂಗದಾಚಾರವ ಕಂಡು ಎನಗೆ
ಲಿಂಗಸ್ವಾಯತವಾಯಿತಯ್ಯ
ಬಸವಣ್ಣ ನಿಮ್ಮ ಮನದ ಸುಜ್ಞಾನವ ಕಂಡು ಎನಗೆ
ಜಂಗಮಸಂಬಂಧವಾಯಿತ್ತಯ್ಯ
ಬಸವಣ್ಣ ನಿಮ್ಮ ಸದ್ಭಕ್ತಿಯ ತಿಳಿದೆನಗೆ
ನಿಜವು ಸಾಧ್ಯವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಹೆಸರಿಟ್ಟ ಗುರು ನೀವಾದ ಕಾರಣ
ನಿಮ್ಮ ಶ್ರೀಪಾದಕ್ಕೆ
ನಮೋ ನಮೋ ನಮೋ ಎನುತಿರ್ದೆನು ಕಾಣಾ ಸಂಗನಬಸವಣ್ಣ
೨೦೬.
ದೇವಲೋಕದವರಿಗೂ ಬಸವಣ್ಣನೇ ದೇವರು
ನಾಗಲೋಕದವರಿಗೂ ಬಸವಣ್ಣನೇ ದೇವರು
ಮರ್ತ್ಯಲೋಕದವರಿಗೂ ಬಸವಣ್ಣನೇ ದೇವರು
ಮೇರುಗಿರಿ-ಮಂದರಗಿರಿ ಮೊದಲಾದವೆಲ್ಲಕ್ಕು ಬಸವಣ್ಣನೇ ದೇವರು
ಚೆನ್ನಮಲ್ಲಿಕಾರ್ಜುನಯ್ಯ, ನಿಮಗೂ ಎನಗೂ ಎಮ್ಮ ಶರಣರಿಗೂ
ಬಸವಣ್ಣನೇ ದೇವರು
೨೦೭.
ಆದಿ-ಅನಾದಿಗಳಿಂದತ್ತಲಯ್ಯ ಬಸವಣ್ಣ
ಮೂಲದೇವರ ಮೂಲಸ್ಥಾನವಯ್ಯ ಬಸವಣ್ಣ
ನಾದ-ಬಿಂದು-ಕಳಾತೀತ ಆದಿನಿರಂಜನನಯ್ಯ ಬಸವಣ್ಣ
ಅನಾದಿಸ್ವರೂಪವೇ ಬಸವಣ್ಣನಾದ ಕಾರಣ
ಆ ಬಸವನ ಶ್ರೀಪಾದಕ್ಕೆ
ನಮೋ ನಮೋ ಎನುತಿರ್ದೆನು ಕಾಣಾ ಚೆನ್ನಮಲ್ಲಿಕಾರ್ಜುನಯ್ಯ
೨೦೮.
ಶಿವಶಿವಾ ಆದಿಅನಾದಿಯೆಂಬೆರಡೂ ಇಲ್ಲದೆ
ನಿರವಯವಾಗಿಪ್ಪ ಶಿವನೇ, ನಿಮ್ಮ ನಿಜವನಾರು ಬಲ್ಲರಯ್ಯ?
ವೇದಂಗಳಿಗಭೇದ್ಯನು, ಶಾಸ್ತ್ರಂಗಳಿಗಸಾಧ್ಯನು,
ಪುರಾಣಕ್ಕಗಮ್ಯನು, ಆಗಮಕ್ಕಗೋಚರನು, ತರ್ಕಕ್ಕತರ್ಕ್ಯನು
ವಾಙ್ಮನಕ್ಕತೀತವೆನಿಪ ಪರಶಿವಲಿಂಗನು
ಕೆಲಬರು ಸಕಲನೆಂಬರು, ಕೆಲಬರು ನಿಷ್ಕಲನೆಂಬರು
ಕೆಲವರು ಸೂಕ್ಷ್ಮನೆಂಬರು, ಕೆಲವರು ಸ್ಥೂಲನೆಂಬರು
ಈ ಬಗೆಯ ಭಾವದಿಂ ಹರಿ-ಬ್ರಹ್ಮ-ಇಂದ್ರ-ಚಂದ್ರ
ರವಿ-ಕಾಲ-ಕಾಮ-ದಕ್ಷ-ದೇವ-ದಾನವ-ಮಾನವರೊಳಗಾದವರೆಲ್ಲರೂ
ಕಾಣಲರಿಯದೆ ಅಜ್ಞಾನದಿಂದ ಭವಭಾರಿಗಳಾಗಿ ಹೋದರು
ಈ ಪರಿಯಲ್ಲಿ ಬಯಲಾಗಿ ಹೋಗಬಾರದೆಂದು
ನಮ್ಮ ಬಸವಣ್ಣನು ಜಗದ್ಧಿತಾರ್ಥವಾಗಿ ಮರ್ತ್ಯಕ್ಕೆ ಬಂದು
ವೀರಶೈವಮಾರ್ಗವರಿಪುವುದಕ್ಕೆ
ಬಾವನ್ನ ವಿವರವನೊಳಕೊಂಡು ಚರಿಸಿದನು ಅದೆಂತೆಂದಡೆ
ಗುರುಕಾರುಣ್ಯವೇದ್ಯನು, ವಿಭೂತಿರುದ್ರಾಕ್ಷಿಧಾರಕನು
ಪಂಚಾಕ್ಷರಿಭಾಷಾಸಮೇತನು, ಲಿಂಗಾಂಗಸಂಬಂಧಿ,
ನಿತ್ಯಲಿಂಗಾರ್ಚಕನು, ಅರ್ಪಿತದಲ್ಲಿ ಅವಧಾನಿ,
ಪಾದೋದಕಪ್ರಸಾದಗ್ರಾಹಕನು, ಗುರುಭಕ್ತಿಸಂಪನ್ನನು,
ಏಕಲಿಂಗನಿಷ್ಠಾಪರನು, ಚರಲಿಂಗಲೋಲುಪ್ತನು,
ಶರಣ ಸಂಗಮೇಶ್ವರನು, ತ್ರಿವಿಧದಲ್ಲಿ ಆಯತನು,
ತ್ರಿಕರಣಶುದ್ಧನು, ತ್ರಿವಿಧ ಲಿಂಗಾಂಗಸಂಬಂಧಿ,
ಅನ್ಯದೈವಸ್ಮರಣೆಯ ಹೊದ್ದ
ಭವಿಸಂಗವ ಮಾಡ, ಭವಪಾಶವ ಕೊಳ್ಳ,
ಪರಸತಿಯ ಬೆರೆಸ, ಪರಧನವನೊಲ್ಲ,
ಪರನಿಂದೆಯನಾಡ, ಅನೃತವ ನುಡಿಯ, ಹಿಂಸೆಯ ಮಾಡ,
ತಾಮಸಭಕ್ತಸಂಗವ ಮಾಡ,
ಅರ್ಥ-ಪ್ರಾಣಾಭಿಮಾನ ಮುಂತಾಗಿ ಗುರುಲಿಂಗಜಂಗಮಕ್ಕೆ ಅರ್ಪಿಸಿ
ಪ್ರಸಾದ ಮುಂತಾಗಿ ಭೋಗಿಸುವ,
ಜಂಗಮನಿಂದೆಯ ಸೈರಿಸ, ಪ್ರಸಾದನಿಂದೆಯ ಕೇಳ,
ಅನ್ಯರನಾಶೆಗೈಯ್ಯ ಪಾತ್ರಾಪಾತ್ರವನರಿದೀವ
ಚತುರ್ವಿಧ ಪದವಿಯ ಹಾರ, ಅರಿಷಡ್ವರ್ಗಕ್ಕಳುಕ
ಕುಲಾದಿ ಮದಂಗಳ ಬಗೆಗೊಳ್ಳ, ದ್ವೈತಾದ್ವೈತವ ನುಡಿವನಲ್ಲ
ಸಂಕಲ್ಪ ವಿಕಲ್ಪವ ಮಾದುವನಲ್ಲ, ಕಾಲೋಚಿತವ ಬಲ್ಲ,
ಕ್ರಮಯುಕ್ತವಾಗಿ ಷಟ್ಝಲಭರಿತ,
ಸರ್ವಾಂಗಲಿಂಗಿ, ದಾಸೋಹಸಂಪನ್ನ-
ಇಂತೀ ಐವತ್ತೆರಡು ವಿಧದಲ್ಲಿ ನಿಪುಣನಾಗಿ ಮೆರೆವ ನಮ್ಮ ಬಸವಣ್ಣನು
ಆ ಬಸವಣ್ಣನ ಶ್ರೀಪಾದಕ್ಕೆ ನಾನು ಅಹೋರಾತ್ರಿಯಲ್ಲಿ
ನಮೋ ನಮೋ ಎಂದು ಬದುಕಿದೆನು ಕಾಣಾ ಚೆನ್ನಮಲ್ಲಿಕಾರ್ಜುನ
೨೦೯.
ಅಂಗದಲ್ಲಿ ಆಚಾರವ ತೋರಿದ
ಆ ಆಚಾರವೇ ಲಿಂಗವೆಂದರುಹಿದ
ಪ್ರಾಣದಲ್ಲಿ ಅರಿವ ನೆಲೆಗೊಳಿಸಿದ
ಆ ಅರಿವೆ ಲಿಂಗಜಂಗಮವೆಂದು ತೋರಿದ
ಚೆನ್ನಮಲ್ಲಿಕಾರ್ಜುನನ ಹೆತ್ತ ತಂದೆ ಸಂಗನಬಸವಣ್ಣನು
ಎನಗೀ ಕ್ರಮವನರುಹಿದನಯ್ಯ ಪ್ರಭುವೆ
೨೧೦.
ಅಂಗ ಕ್ರಿಯಾಲಿಂಗವ ವೇದಿಸಿ
ಅಂಗ ಲಿಂಗದೊಳಗಾಯಿತು
ಮನ ಅರಿವ ಬೆರೆಸಿ, ಜಂಗಮಸೇವೆಯ ಮಾಡಿ
ಮನ ಜಂಗಮಲಿಂಗದೊಳಗಾಯಿತು
ಭಾವ ಗುರುಲಿಂಗದೊಳಗೆ ಬೆರೆಸಿ, ಮಹಾಪ್ರಸಾದವ ಭೋಗಿಸಿ
ಭಾವ ಗುರುಲಿಂಗದೊಳಗಾಯಿತು
ಚೆನ್ನಮಲ್ಲಿಕಾರ್ಜುನ ನಿಮ್ಮ ಒಲುಮೆಯಿಂದ
ಸಂದಳಿದು ಸ್ವಯಲಿಂಗವಾದೆನಯ್ಯ ಪ್ರಭುವೆ
೨೧೧.
ಅಂಗಸಂಗಿಯಾಗಿ ಸಂಬಂಧಿಯಲ್ಲ
ಲಿಂಗದೊಳಗಾಪ್ಯಾಯಿನಿಯಾಗಿ ಇತರ ಸು-
ಖಂಗಳ ಬಿಟ್ಟು ಕಳೆದು ಸಮನ ಸಾರಾಯನಾದ ಶರಣನು ||ಪಲ್ಲವ||
ಗುರುಕರುಣಸಂಗದಿಂದ ಶಿಷ್ಯನಿಂತು ಕರದಲ್ಲಿ ಹುಟ್ಟಿದನು
ಕರಣಸಹಿತ ಅವಗ್ರಾಹಿಯಾಗಿ ಘಾಳಿ ಸುಳುಹಡಗಿದ ಶರಣನು ||೧||
ಆಸೆಯೆಂಬ ಹದನುಳುಹಾಗಿ ಹಿಡಿದ ಛಲ ಬಿಡದೆಂಬ ಬೇರೂರಿ
ಸಂಕಲ್ಪವಿಕಲ್ಪಗಳೆರಡೂ ಇಲ್ಲದೆ ನಿಃಕಳಂಕನಾದನು ಶರಣನು ||೨||
ಮಾಡುವವರ ಕಂಡು ಮಾಡುವವನಲ್ಲ
ಮಾಡದವರ ಕಂಡು ಮಾಡದವನಲ್ಲ
ತಾ ಮಾಡುವ ಮಾಟಕೆ ತವಕಿಗನಾಗಿಪ್ಪ
ಹಿಂದುಮುಂದರಿಯದ ಶರಣನು ||೩||
ಎಲ್ಲವು ತಾನೆಂಬ ಕರುಣಾಕರನಲ್ಲ
ನಿಃಕರುಣಿಯಾಗಿ ಜಡದೇಹಿಯಲ್ಲ
ಭೋಗಿಪ ಭೋಗಂಗಳಾಮಿಷ
ತಾಮಸ ವಿಷಯವಿರಹಿತನು ಶರಣನು ||೪||
ಘನವನಿಂಬುಗೊಂಡ ಮನದ ಬೆಂಬಳಿವಿಡಿದುಳೆದಲ್ಲಿ
ನಿಜವಾಗಿ ನಿಂದನು ತಾನೆಂಬುದಿಲ್ಲ
ನಿರಂತರ ಸದ್ಗುರು ಚೆನ್ನಮಲ್ಲಿಕಾರ್ಜುನ
ನಿಮ್ಮ ಶರಣ ಬಸವಣ್ಣನು ||೫||
೨೧೨.
ಅಂಗದಲ್ಲಿ ಲಿಂಗಸಂಗ
ಲಿಂಗದಲ್ಲಿ ಅಂಗಸಂಗ ಮಾಡಿದನೆಂದರೆ
ಎನ್ನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನನ ಸ್ನೇಹದಲ್ಲಿ
ನಿನ್ನ ಕರುಣದ ಶಿಶು ನಾನು ಕಾಣ
ಸಂಗನಬಸವಣ್ಣ
೨೧೩.
ಲಿಂಗದಿಂದುದಯಿಸಿ ಅಂಗವಿಡಿದಿಪ್ಪ ಪುರಾತನರ
ಇಂಗಿತವೇನೆಂದು ಬೆಸಗೊಂಬಿರಯ್ಯ?
ಅವರ ನಡೆಯೇ ಆಗಮ, ಅವರ ನುಡಿಯೇ ವೇದ
ಅವರ ಲೋಕದ ಮಾನವರೆನ್ನಬಹುದೇ?
ಆದೆಂತೆಂದೊಡೆ
"ಬೀಜಾದ್ಭವತಿ ವೃಕ್ಷಂ ತು
ಬೀಜೇ ತು ಲೀಯತೇ ಪುನಃ
ರುದ್ರಲೋಕಂ ಪರಿತ್ಯಕ್ತ್ವಾ
ಶಿವಲೋಕೇ ಭವಿಷ್ಯತಿ"
ಎಂಬುದಾಗಿ ಅಂಕೋಲೆಯ ಬೀಜದಿಂದಾಯಿತ್ತು ವೃಕ್ಷವು
ಆ ವೃಕ್ಷವು ಮರಳಿ ಆ ಬೀಜದೊಳಡಗಿತ್ತು
ಆ ಪ್ರಾಕಾರದಿಂ
ಆ ಲಿಂಗದೊಳಗಿದ್ದ ಪುರಾತನರು
ಆ ಲಿಂಗದೊಳಗೆ ಬೆರೆಸಿದರು ನೋಡಿರಯ್ಯ
ಇಂತಪ್ಪ ಪುರಾತನರಿಗೆ ನಾನು ಶರಣೆಂದು
ಹುಟ್ಟುಗೆಟ್ಟೆನಯ್ಯ ಚೆನ್ನಮಲ್ಲಿಕಾರ್ಜುನ
೨೧೪.
ಲಿಂಗಕ್ಕೆ ರೂಪ ಸಲಿಸುವೆ
ಜಂಗಮಕ್ಕೆ ರುಚಿಯ ಸಲಿಸುವೆ
ಕಾಯಕ್ಕೆ ಶುದ್ಧಪ್ರಸಾದವ ಕೊಂಬೆ
ಪ್ರಾಣಕ್ಕೆ ಸಿದ್ಧಪ್ರಸಾದವ ಕೊಂಬೆ
ನಿಮ್ಮ ಪ್ರಸಾದದಿಂದ ಧನ್ಯಳಾದೆನು ಚೆನ್ನಮಲ್ಲಿಕಾರ್ಜುನಯ್ಯ
೨೧೫.
ನಾನು ಮಜ್ಜನವ ಮಾಡುವುದಕ್ಕೆ ಮುನ್ನವೇ
ಜಂಗಮಕ್ಕೆ ಮಜ್ಜನ ಮಾಡಿಸುವೆ
ನಾನು ಸೀರೆಯನುಡುವುದಕ್ಕೆ ಮುನ್ನವೇ
ಜಂಗಮಕ್ಕೆ ದೇವಾಂಗವನುಡಿಸುವೆ
ನಾನು ಪರಿಮಳವ ಲೇಪಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಸುಗಂಧದ್ರವ್ಯಗಳ ಲೇಪಿಸುವೆ
ನಾನು ಅಕ್ಷತೆಯನಿಡುವುದಕ್ಕೆ ಮುನ್ನವೇ
ಜಂಗಮಕ್ಕೆ ಅಕ್ಷತೆಯನಿಡುವೆ
ನಾನು ಧೂಪವಾಸನೆಯ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಧೂಪವಾಸನೆಯ ಕೊಡುವೆ
ನಾನು ಧೂಪಾರತಿಯ ನೋಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆರತಿಯ ನೋಡಿಸುವೆ
ನಾನು ಸಕಲ ಪದಾರ್ಥವ ಸ್ವೀಕರಿಸುವುದಕ್ಕೆ ಮುನ್ನವೇ
ಜಂಗಮಕ್ಕೆ ಮಿಷ್ಟಾನ್ನವ ನೀಡುವೆ
ನಾನು ಪಾನಂಗಳ ಕೊಳುವುದಕ್ಕೆ ಮುನ್ನವೇ
ಜಂಗಮಕ್ಕೆ ಅಮೃತಪಾನಂಗಳ ಕೊಡುವೆ
ನಾನು ಕೈಯ ತೊಳೆವುದಕ್ಕೆ ಮುನ್ನವೇ
ಜಂಗಮಕ್ಕೆ ಹಸ್ತಪ್ರಕ್ಷಾಲನವ ಮಾಡಿಸುವೆ
ನಾನು ವೀಳೆಯಂ ಮಡಿವುದಕ್ಕೆ ಮುನ್ನವೇ
ಜಂಗಮಕ್ಕೆ ತಾಂಬೂಲವ ಕೊಡುವೆ
ನಾನು ಗದ್ದಿಗೆಯ ಮೇಲೆ ಕುಳ್ಳಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಉನ್ನತಾಸನವನಿಕ್ಕುವೆ
ನಾನು ಸುನಾದಗಳ ಕೇಳುವ ಮುನ್ನವೇ
ಜಂಗಮಕ್ಕೆ ಸಂಗೀತವಾದ್ಯಂಗಳ ಕೇಳಿಸುವೆ
ನಾನು ಭೂಷಣಂಗಳ ತೊಡುವುದಕ್ಕೆ ಮುನ್ನವೇ
ಜಂಗಮಕ್ಕೆ ಆಭರಣಂಗಳ ತೊಡಿಸುವೆ
ನಾನು ವಾಹನಂಗಳನೇರುವುದಕ್ಕೆ ಮುನ್ನವೇ
ಜಂಗಮಕ್ಕೆ ವಾಹನವನೇರಿಸುವೆ
ನಾನು ಮನೆಯೊಳಗಿರುವುದಕ್ಕೆ ಮುನ್ನವೇ
ಜಂಗಮಕ್ಕೆ ಗೃಹವ ಕೊಡುವೆ
ಇಂತೀ ಹದಿನಾರು ತೆರನ ಭಕ್ತಿಯ ಚರಲಿಂಗಕ್ಕೆ ಕೊಟ್ಟು
ಆ ಚಿರಲಿಂಗಮೂರ್ತಿ ಭೋಗಿಸಿದ ಬಳಿಕ
ನಾನು ಪ್ರಸಾದವ ಮುಂತಾಗಿ ಭೋಗಿಸುವೆನಲ್ಲದೆ
ಜಂಗಮನಿಲ್ಲದೆ ಇನಿತರೊಳಗೊಂದು
ಭೋಗವನಾದರೂ ನಾನು ಭೋಗಿಸಿದೆನಾದರೆ
ನಿಮ್ಮಾಣೆ ನಿಮ್ಮ ಪ್ರಮಥರಾಣೆ
ಇಂತೀ ಕ್ರಮವಲ್ಲಿ ನಡೆದಾತಂಗೆ
ಗುರುವುಂಟು, ಲಿಂಗವುಂಟು, ಜಂಗಮವುಂಟು,
ಪಾದೋದಕವುಂಟು, ಪ್ರಸಾದವುಂಟು,
ಆಚಾರವುಂಟು, ಭಕ್ತಿಯುಂಟು
ಈ ಕ್ರಮದಲ್ಲಿ ನಡೆಯದಾತಂಗೆ
ಗುರುವಿಲ್ಲ, ಲಿಂಗವಿಲ್ಲ, ಜಂಗಮವಿಲ್ಲ,
ಪಾದೋದಕವಿಲ್ಲ, ಪ್ರಸಾದವಿಲ್ಲ,
ಆಚಾರವಿಲ್ಲ, ಸದ್ಭಕ್ತಿಯಿಲ್ಲ
ಅವನ ಬಾಳುವೆ ಹಂದಿಯ ಬಾಳುವೆ
ಅವನ ಬಾಳುವೆ ಕತ್ತೆಯ ಬಾಳುವೆ
ಅವನು ಸುರೆ-ಮಾಂಸ ಭುಂಜಕನು
ಅವನು ಸರ್ವಚಂಡಾಲನಯ್ಯ ಚೆನ್ನಮಲ್ಲಿಕಾರ್ಜುನ
೨೧೬.
ಅಯ್ಯ ಸದಾಚಾರ-ಸದ್ಭಕ್ತಿ-ಸತ್ಕ್ರಿಯೆ-ಸಮ್ಯಜ್ಞಾನ
ಸದ್ವರ್ತನೆ-ಸಗುಣ-ನಿರ್ಗುಣ-ನಿಜಗುಣ-ಸಚ್ಚರಿತ-ಸದ್ಭಾವ
ಅಕ್ರೋಧ-ಸತ್ಯವಚನ-ಕ್ಷಮೆ-ದಯೆ-ಭವಿಭಕ್ತಭೇದ
ಸತ್ಪಾತ್ರದ್ರವ್ಯಾರ್ಪಣ-ಗೌರವಬುದ್ಧಿ-ಲಿಂಗಲೀಯ
ಜಂಗಮಾನುಭಾವ-ದಶವಿಧ ಪಾದೋದಕ-ಏಕಾದಶಪ್ರಸಾದ
ಷೋಡಶ ಭಕ್ತಿನಿರ್ವಾಹ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಚನೆ
ತ್ರಿವಿಧ ಷಡ್ವಿಧ ನವವಿಧ ಜಪ
ತ್ರಿವಿಧ ಷಡ್ವಿಧ ನವವಿಧ ಲಿಂಗಾರ್ಪಿತ
ಚಿದ್ವಿಭೂತಿ ಸ್ನಾನ ಧೂಳನ ಧಾರಣ
ಸರ್ವಾಂಗದಲ್ಲಿ ಚಿದ್ರುದ್ರಾಕ್ಷಿ ಧಾರವ
ತಾ ಮಾಡುವ ಸತ್ಯಕಾಯಕ
ತಾ ಬೇಡುವ ಸದ್ಭಕ್ತಿ ಭಿಕ್ಷ
ತಾ ಕೊಟ್ಟು ಕೊಂಬ ಭೇದ
ತಾನಾಚರಿಸುವ ಸತ್ಯ ನಡೆನುಡಿ
ತಾ ನಿಂದ ನಿರ್ವಾಣಪದ-
ಇಂತೀ ಮುವ್ವತ್ತೆರಡು ಕಲೆಗಳ ಸದ್ಗುರುಮುಖದಿಂದರಿದ
ಬಸವ ಮೊದಲಾದ ಸಮಸ್ತ ಪ್ರಮಥ ಗಣಂಗಳೆಲ್ಲ
ನಿರಾಭಾರಿ ವೀರಶೈವ ಸನ್ಮಾರ್ಗವಿಡಿದಾಚರಿಸಿದರೂ ನೋಡಾ!
ಇಂತು ಪ್ರಮಥಗಣಂಗಳಾಚರಿಸಿದ ಸತ್ಯಸನ್ಮಾರ್ಗವನರಿಯದ
ಮೂಢ ಅಧಮರನೆಂತು
ಶಿವಶಕ್ತಿ-ಶಿವಭಕ್ತಿ-ಶಿವಜಂಗಮವೆಂಬೆನಯ್ಯ
ಚೆನ್ನಮಲ್ಲಿಕಾರ್ಜುನ
೨೧೭.
ಸಪ್ತಕೋಟಿಮಹಾಮಂತ್ರಂಗಳಿಗೆ
ಉಪಮಂತ್ರಂಗಳುಂಟು
ಆ ಉಪಮಂತ್ರಂಗಳಿಂಗೆ ಲೆಕ್ಕವಿಲ್ಲ
ಆ ಜಾಳು ಮಂತ್ರಂಗಳಿಗೆ ಭ್ರಮಿಸಿ
ಚಿತ್ತವ್ಯಾಕುಲವಾಗಿ ಕೆಟ್ಟುಹೋಗದಿರು ಮನವೇ
ಶಿವಶಿವಾ ಎಂದೆಡೆ ಸಾಲದ್?
ಒಂದು ಕೋಟಿ ಮಹಾಪಾತಕ ಪರಿಹಾರವಕ್ಕು
ಆದೆಂತೆಂದಡೆ ಶಿವಧರ್ಮೇ
ಶಿವೇತಿ ಮಂಗಲಂ ನಾಮ
ಯಸ್ಯ ವಾಚಿ ಪ್ರವರ್ತತೇ
ಭಸ್ಮೀಭವಂತಿ ತಸ್ಯಾಶು
ಮಹಾಪಾತಕಕೋಟಯಃ
ಎಂದುದಾಗಿ, ಸದ್ಗುರು ಚೆನ್ನಮಲ್ಲಿಕಾರ್ಜುನ ತೋರಿದ
ಸಹಜಮಂತ್ರವೆನಗಿದೇ ಪರಮತತ್ವವಯ್ಯ
೨೧೮.
ಒಪ್ಪುವ ಶ್ರೀವಿಭೂತಿಯ ನೊಸಲಲ್ಲಿ ಧರಿಸಿ
ದೃಷ್ಟಿವಾರೆ ನಿಮ್ಮ ನೋಡಲೊಡನೆ
ಬೆಟ್ಟದಷ್ಟು ತಪ್ಪುಳ್ಳಡೆಯೂ ಮುಟ್ಟಲಮ್ಮವು ನೋಡಾ
ದುರಿತವ ಪರಿಹರಿಸಬಲ್ಲಡೆ
ಓಂ ನಮಶ್ಶಿವಾಯ ಶರಣೆಂಬುದೇ ಮಂತ್ರ
ಓಂ ನಮಶ್ಶಿವಾಯೇತಿ ಮಂತ್ರಂ
ಯಃ ಕರೋತಿ ತ್ರಿಪುಂಡ್ರಕಂ
ಸಪ್ತ ಜನ್ಮಕೃತಂ ಪಾಪಂ
ತತ್ ಕ್ಷಣಾದೇವ ವಿನಶ್ಯತಿ
ಎಂದುದಾಗಿ ಸಿಂಹದ ಮರಿಯ ಸೀಳುನಾಯಿ ತಿಂಬಡೆ
ಭಂಗವಿನ್ನಾರದು ಚೆನ್ನಮಲ್ಲಿಕಾರ್ಜುನ?
೨೧೯.
ಹಿತವಿದೇ, ಸಕಲಲೋಕದ ಜನಕ್ಕೆ ಮತವಿದೇ
ಶೃತಿ-ಪುರಾಣಾಗಮದ ಗತಿಯಿದೇ
ಭಕುತಿಯ ಬೆಳಗಿನ ಉನ್ನತಿಯಿದೇ
ಇಂತಪ್ಪ ಶ್ರೀವಿಭೂತಿಯ ಧರಿಸಿರೆ
ಭವವ ಪರಿವುದು, ದುರಿತಸಂಕುಳವನೊರೆಸುವುದು
ನಿರುತವಿದು ನಂಬು ಮನುಜ! ಜವನ ಭೀತಿಯೀ ವಿಭೂತಿ
ಮರಣಭಯದಿಂದ ಅಗಸ್ತ್ಯ-ಕಶ್ಯಪ-ಜಮದಗ್ನಿಗಳು
ಧರಿಸಿದರಂದು ನೋಡಾ
ಶ್ರೀಶೈಲಚೆನ್ನಮಲ್ಲಿಕಾರ್ಜುನನೊಲಿಸುವ ವಿಭೂತಿ
೨೨೦.
ಹಾಲು ಹಿಡಿದು ಬೆಣ್ಣೆಯನರಸಲುಂಟೆ?
ಲಿಂಗವ ಹಿಡಿದು ಪುಣ್ಯತೀರ್ಥಕ್ಕೆ ಹೋಗಲುಂಟೆ?
ಲಿಂಗದ ಪಾದತೀರ್ಥಪ್ರಸಾದವ ಕೊಂಡು
ಅನ್ನಬೋಧೆ-ಅನ್ಯಶಾಸ್ತ್ರಕ್ಕೆ ಹಾರೈಸಲೇತಕ್ಕೆ?
ಇಷ್ಟಲಿಂಗವಿದ್ದಂತೆ ಸ್ಥಾವರಲಿಂಗಕ್ಕೆ ಶರಣೆಂದರೆ
ತಡೆಯದೇ ಹುಟ್ಟಿಸುವ ಶ್ವಾನಗರ್ಭದಲ್ಲಿ
ಆದೆಂತೆಂದಡೆ-ಶಿವಧರ್ಮಪುರಾಣೇ
ಇಷ್ಟಲಿಂಗಮವಿಶ್ವಸ್ಯ
ತೀರ್ಥಲಿಂಗಂ ನಮಸ್ಕೃತಃ
ಶ್ವಾನಯೋನಿಶತಂ ಗತ್ವಾ
ಚಂಡಾಲಗೃಹಮಾಚರೇತ್
ಎಂದುದಾಗಿ-ಇದನರಿದು
ಗುರು ಕೊಟ್ಟ ಲಿಂಗದಲ್ಲಿಯೇ
ಎಲ್ಲಾ ತೀರ್ಥಂಗಳು, ಎಲ್ಲಾ ಕ್ಷೇತ್ರಂಗಳು
ಇಹವೆಂದು ಭಾವಿಸಿ ಮುಕ್ತರಪ್ಪುವುದಯ್ಯ
ಇಂತಲ್ಲದೆ-ಗುರು ಕೊಟ್ಟ ಲಿಂಗವ ಕಿರಿದು ಮಾಡಿ
ತೀರ್ಥಲಿಂಗವ ಹಿರಿದು ಮಾಡಿ ಹೋದಾತಂಗೆ
ಅಘೋರನರಕ ತಪ್ಪದು ಕಾಣಾ ಚೆನ್ನಮಲ್ಲಿಕಾರ್ಜುನ
೨೨೧.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತತ್ ಶಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದಡೆ
ಮುಕ್ತಿಸಾಮ್ರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಲಶದ ಅಭಿಷೇಕವ ಮಾಡಿಸಲು
ಶಿವನ ಕಾರುಣ್ಯಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಂಗಳ ಮಧ್ಯದಲ್ಲಿ
ಮಹಾಲಿಂಗವನು ಕರಸ್ಥಲಾಮಲಕವಾಗಿ
ಶಿಷ್ಯನ ಕರಸ್ಥಲಕ್ಕೆ ಇಟ್ಟು, ಅಂಗದಲ್ಲಿ ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂದು ಮುಂದ ತೋರಿ ಹಿಂದ ಬಿಡಿಸಿದ
ಶ್ರೀಗುರುವಿನ ಸಾನಿದ್ಧ್ಯದಿಂದಾನು
ಬದುಕಿದೆನಯ್ಯ ಚೆನ್ನಮಲ್ಲಿಕಾರ್ಜುನಯ್ಯ
೨೨೨.
ನಮ್ಮ ಮನೆಯಲಿಂದು ಹಬ್ಬ
ನಮಗೆ ಸಂದಣಿ ಬಹಳ
ಒಮ್ಮೆ ನುಡಿಸ ಹೊತ್ತಿಲ್ಲ
ಹೋಗಿ ವಿಷಯಗಳಿರಾ
ತನುವೆಂಬ ಮನೆಯೊಳಗೆ ನೆಲಸಿಪ್ಪ ಪರಮಾತ್ಮ
ಮನೆಯ ದೇವರ ಹಬ್ಬ! ಆ ಹಬ್ಬಕಿಂದು
ನೆನೆಯದೆ ಮಿಂದು ನಡೆಯದೆ ಹೋಗಿ ಬಲಗೊಂಡು
ನೆನಹಿನಮೃತಾನ್ನದುಪಹಾರವಿಡಬೇಕು
ನೆರಹುಗುಡದೆ ಏಕಾಂತದೊಳಗಿರಬೇಕು
ನೆರಹಬೇಕಮಲಗುಣ ಪರವಸ್ತುಗಳನು
ಪರಿಹರಿಸಿ ಕಳೆಯಬೇಕಯ್ಯ ವಿಷಯಗಳನು
ಎರಡಿಲ್ಲದೊಂದು ಮನದಲ್ಲಿ ಭಜಿಸಬೇಕು
ನೋಡದೆ ಕಂಡು, ನುಡಿಸದೆ ಹೊಗಳಿ ಭಕ್ತಿಯಿಂ
ಬೇಡದೆ ಪರಮಪದವಿಯ ಪಡೆಯಬೇಕು
ನಾಡಾಡಿ ದೈವದಂತಲ್ಲವಿದು ಅಸಮಾಕ್ಷ
ರೂಢಿಯೊಳು ಚೆನ್ನಮಲ್ಲನ ಭಜಿಸಬೇಕು
೨೨೩.
ಕಂಗಳ ನೋಟವು, ಕಾಯದ ಕರದಲಿ
ಲಿಂಗದ ಕೂಟವು ಶಿವಶಿವ ಚೆಲುವನು
ಮಂಗಳ ಮೂರುತಿ ಮಲೆಗಳ ದೇವಂಗೆತ್ತುವೆನಾರತಿಯ ||ಪಲ್ಲವ||
ಜಗವಂದ್ಯಗೆ ಬೇಟವ ಮಾಡಿದೆ, ನಾ
ಹಗೆಯಾದೆನು ಸಂಸಾರಕೆಲ್ಲ
ನಗುತೈದರೆ ಲಜ್ಜೆ ನಾಚಿಕೆಯೆಲ್ಲವ ತೊರೆದವಳೆಂದೆನ್ನ
ಗಗನಗಿರಿಯ ಮೇಲಿರ್ದಹನೆಂದೆಡೆ
ಲಗುನಿಯಾಗಿ ನಾನರುಸುತ ಬಂದೆನು
ಅಘಹರ ಕರುಣಿಸು ನಿಮಗಾನೊಲಿದೆನು ಮಿಗೆ ಒಲಿದಾರತಿಯ ||೧||
ಭಕುತಿರತಿಯ ಸಂಭಾಷಣೆಯಿಂದವೆ
ಯುಕುತಿಯ ಮರೆದೆನು, ಕಾಯದ ಜೀವದ
ಪ್ರಕೃತಿಯ ತೊರೆದೆನು, ಸುತ್ತಿದ ಮಾಯಾಪಾಶವ ಹರಿದೆನಲಾ
ಸುಕೃತಿಯಾಯಿತು ನಿಮ್ಮಯ ನೆನಹಿಂದವೆ
ಮುಕುತಿಯ ಫಲಗಳ ದಾಂಟಿಯೆ ಬಂದೆನು
ಸಕುತಿಯಾದೆ ನಾ ಪ್ರಾಣಲಿಂಗಕೆ ಮನವೊಲಿದಾರತಿಯ ||೨||
ಮೆಚ್ಚಿ ಒಲಿದು ಮನವಗಲದ ಭಾವವು
ಬಿಚ್ಚದೆ ಬೇರೊಂದೆನಿಸದೆ, ಪ್ರಾಣವು
ಬೆಚ್ಚಂತಿರ್ದುದು, ಅಚ್ಚೊತ್ತಿದಾ ಮಹಘನ ತಾ ನೆಲೆಗೊಂಡು
ಪಶ್ಚಿಮ ಮುಖದಲಿ ಬೆಳಗು ಪ್ರಕಾಶವು
ನಿಚ್ಚನಿರಂಜನ ಚೆನ್ನಮಲ್ಲಿಕಾರ್ಜುನ
ಗೆತ್ತುವೆನಾರತಿ ಈ ರತಿಯಿಂದವೆ ಮನವೊಲಿದಾರತಿಯ ||೩||
೨೨೪.
ಅಯ್ಯ, ಸರ್ವಮೂಲಾಹಂಕಾರವಿಡಿದು
ಕುಲಭ್ರಮೆ! ಬಲಭ್ರಮೆ! ಜಾತಿಭ್ರಮೆ!
ನಾಮ-ವರ್ಣ-ಆಶ್ರಮ-ಮತ-ಶಾಸ್ತ್ರಭ್ರಮೆ! ರಾಜ್ಯಭ್ರಮೆ!
ಧನ-ಧಾನ್ಯ-ಪುತ್ರ-ಮಿತ್ರ-ಐಶ್ವರ್ಯ-ತ್ಯಾಗ-ಯೋಗಭ್ರಮೆ!
ಕಾಯ-ಕರಣ-ವಿಷಯಭ್ರಮೆ!
ವಾಯು-ಮನ-ಭಾವ-ಜೀವ-ಮೋಹಭ್ರಮೆ!
ನಾಹಂ-ಕೋಹಂ ಭ್ರಮೆ! ಶಿವೋಹಂ ಭ್ರಮೆ ಮಾಯಾಭ್ರಮೆ!
ಮೊದಲಾದ ಮೂವತ್ತೆರಡು ಪಾಶಭ್ರಮಿತರಾಗಿ ತೊಳಲುವ
ವೇಷಧಾರಿಗಳ ಕಂಡು-
ಶಿವಭಕ್ತಿ-ಶಿವಭಕ್ತ-ಶಿವಪ್ರಸಾದಿ-ಶಿವಶರಣ-
ಶಿವೈಕ್ಯ-ಶಿವಜಂಗಮವೆಂದು
ನುಡಿಯಲಾರದೆ ಎನ್ನ ಮನ ನಾಚಿ
ನಿಮ್ಮಡಿಗಳಿಗಭಿಮುಖವಾಯಿತ್ತಯ್ಯ, ಚೆನ್ನಮಲ್ಲಿಕಾರ್ಜುನ
೨೨೫.
ಅಯ್ಯ ಚಿದಂಗ-ಚಿದ್ರನಲಿಂಗ-
ಶಿವ-ಭಕ್ತಿ-ಹಸ್ತ-ಮುಖ-ಪದಾರ್ಥ-ಪ್ರಸಾದ
ಎಂಬಿವಾದಿಯಾದ ಸಮಸ್ತಸಕೀಲಂಗಳ ನೆಲೆಕಲೆಯನರಿಯದೆ
ಜಿಹ್ವಾಲಂಪಟಕ್ಕೆ ಆಹ್ವಾನಿಸಿ
ಗುಹ್ಯಲಂಪಟದಲ್ಲಿ ವಿಸರ್ಜಿಸಿ
ಸಕಲೇಂದ್ರಿಯ ಮುಖದಲ್ಲಿ ಮೋಹಿಯಾಗಿ
ಸದ್ಗುರು ಕರುಣಾಮೃತರಸ ತಾನೆಂದರಿಯದೆ
ಬರಿದೆ, ಭಕ್ತ-ಮಾಹೇಶ-ಪ್ರಸಾದಿ-ಪ್ರಾಣಲಿಂಗಿ-ಶರಣ-ಐಕ್ಯ
ಗುರು-ಚರ-ಪರವೆಂದು ಬೊಗಳುವ ಕುನ್ನಿಗಳ ನೋಡಿ
ಎನ್ನ ಮನ ಬೆರಗು ನಿಬ್ಬೆರಗು ಆಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ
೨೨೬.
ಹಸಿವಿಂಗೆ ಭಿಕ್ಷವುಂಟು
ತೃಷೆಗೆ ಹಳ್ಳದಲ್ಲಿ ಸುಚಿತ್ತವಾದ ಅಗ್ರವಣಿಯುಂಟು
ಕಟ್ಟಿಕೊಂಬೆಡೆ ತಿಪ್ಪೆಯ ಮೇಲೆ ಅರಿವೆಯುಂಟು
ಶಯನಕ್ಕೆ ಹಾಳುದೇಗುಲವುಂಟು
ನಮ್ಮ ಸಮಸುಖಿಯಾಗಿ ನಿಮ್ಮ ಜ್ಞಾನವುಂಟು
ಚೆನ್ನಮಲ್ಲಿಕಾರ್ಜುನ
೨೨೭.
ಯೋಗಿಗೆ ಯೋಗಿಣಿಯಾಗಿಹಳು ಮಾಯೆ
ಜೋಗಿಗೆ ಜೋಗಿಣಿಯಾಗಿಹಳು ಮಾಯೆ
ಶ್ರವಣಗೆ ಕಂತಿಯಾದಳು ಮಾಯೆ
ಯತಿಗೆ ಪರಾರ್ಥ [=ಪರಾಕಿ]ವಾದಳು ಮಾಯೆ
ಹೆಣ್ಣಿಗೆ ಗಂಡು ಮಾಯೆ
ಗಂಡಿಗೆ ಹೆಣ್ಣು ಮಾಯೆ
ನಿಮ್ಮ ಮಾಯೆಗೆ ನಾನಂಜುವವಳಲ್ಲ ಚೆನ್ನಮಲ್ಲಿಕಾರ್ಜುನ
೨೨೮.
ಕಲ್ಯಾಣ-ಕೈಲಾಸವೆಂಬ ನುಡಿ ಹಸನಾಯಿತ್ತು
ಒಳಗೂ ಕಲ್ಯಾಣ ಹೊರಗೂ ಕಲ್ಯಾಣ
ಇದರಂತುವನಾರು ಬಲ್ಲರೈಯ್ಯಾ ?
ನಿಮ್ಮ ಸತ್ಯಶರಣರ ಸುಳುಹು ತೋರುತ್ತಿದೆಯಯ್ಯಾ
ನಿಮ್ಮ ಶರಣ ಬಸವಣ್ಣನ ಕಾಂಬೆನೆಂಬ ತವಕವೆನಗಾಯಿತ್ತು
ಕೇಳಾ ಚೆನ್ನಮಲ್ಲಿಕಾರ್ಜುನ
೨೨೯.
ಹೆಣ್ಣು ಹೆಣ್ಣಾದೊಡೆ ಗಂಡಿನ ಸೂತಕ
ಗಂಡು ಗಂಡಾದೊಡೆ ಹೆಣ್ಣಿನ ಸೂತಕ
ಮನದ ಸೂತಕ ಹಿಂಗಿದೊಡೆ
ತನುವಿನ ಸೂತಕಕ್ಕೆ ತೆರಹುಂಟೇ ಅಯ್ಯ?
ಮೊದಲಿಲ್ಲದ ಸೂತಕಕ್ಕೆ ಮರುಳಾಯಿತ್ತು ಜಗವೆಲ್ಲ
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯನೆಂಬ
ಗರುವಂಗೆ ಜಗವೆಲ್ಲ ಹೆಣ್ಣು ನೋಡಾ!
೨೩೦.
ಲೋಕವಿಡಿದು ಲೋಕದ ಸಂಗದಿಂದಿಪ್ಪೆನು
ಆಕಾರವಿಡಿದು ಸಾಕಾರಸಹಿತ ನಡೆವೆನು
ಹೊರಗೆ ಬಳಸಿ ಒಳಗೆ ಮೈಮರೆದಿಪ್ಪೆನು
ಬೆಂದ ನುಲಿಯಂತೆ ಹುರಿಗುಂದದಿಪ್ಪೆನು
ಎನ್ನ ದೇವ ಚೆನ್ನಮಲ್ಲಿಕಾರ್ಜುನಯ್ಯ,
ಹತ್ತರೊಳಗೆ ಹನ್ನೊಂದಾಗಿ ನೀರ ತಾವರೆಯಂತಿಪ್ಪೆನು
೨೩೧.
ತನುವ ಮೀರಿತ್ತು, ಮನವ ಮೀರಿತ್ತು
ಮಹವ ಮೀರಿತ್ತು
ಅಲ್ಲಿಂದತ್ತ ಭಾವಿಸುವ ಭಾವಕರಿಲ್ಲಾಗಿ ತಾರ್ಕಣೆಯಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ ಬೆರಸಲಿಲ್ಲದ ನಿಜತತ್ವವು
೨೩೨.
ಆಧಾರ-ಸ್ವಾಧಿಷ್ಠಾನ-ಮಣಿಪೂರಕ-
ಅನಾಹುತ-ವಿಶುದ್ಧಿ-ಆಜ್ಞೇಯವ ನುಡಿದರೇನು?
ಆದಿಯನಾದಿಯ [ಸುದ್ದಿಯ] ಕೇಳಿದಡೇನು, ಹೇಳಿದಡೇನು
ತನ್ನಲ್ಲಿದ್ದುದ ತಾನರಿಯದನ್ನಕ್ಕರ
ಉನ್ಮನಿರಭಸದ ಮನ ಪವನದ ಮೇಲೆ
ಚೆನ್ನಮಲ್ಲಿಕಾರ್ಜುನಯ್ಯನ ಭೇದಿಸಲಯದವರು?
೨೩೩.
ನಿತ್ಯವೆಂಬ ನಿಜಪದವೆನ್ನ ಹತ್ತೆ ಸಾರ್ದುದ ಕಂಡ ಬಳಿಕ
ಚಿತ್ತ ಕರಗಿ ಮನ ಕೊರಗಿ
ಹೃದಯವರಳಿತು ನೋಡಯ್ಯ
ಒತ್ತಿ ಬಿಗಿದ ಸೆರೆಯೊಳಗೆ ಅತ್ತಿತ್ತಲೆಂದರಿಯದೆ
ಚೆನ್ನಮಲ್ಲಿಕಾರ್ಜುನನ ಪಾದದಲ್ಲಿ
ಮರೆದೊರಗಿದೆ ನೋಡಯ್ಯ
೨೩೪.
ಆಶೆಯಾಮಿಷವಳಿದು
ಹುಸಿ ವಿಷಯಂಗಳೆಲ್ಲಾ ಹಿಂಗಿ
ಸಂಶಯಸಂಬಂಧ ವಿಸಂಬಂಧವಾಯಿತ್ತು ನೋಡಾ
ಎನ್ನ ಮನದೊಳಗೆ ಘನಪರಿಣಾಮವ ಕಂಡು
ಮನ ಮಗ್ನವಾಯಿತ್ತಯ್ಯ
ಚೆನ್ನಮಲ್ಲಿಕಾರ್ಜುನ,
ನಿಮ್ಮ ಶರಣ ಪ್ರಭುದೇವರ ಕರುಣದಿಂದ ಬದುಕಿದೆನಯ್ಯ
೨೩೫.
ಆದಿಅನಾದಿಯ ನಿತ್ಯಾನಿತ್ಯವ ತಿಳಿಯಲರಿಯದೆ
ವಾಯಕ್ಕೆ ಪರಬ್ರಹ್ಮವ ನುಡಿವ
ವಾಯುಪ್ರಾಣಿಗಳವರೆತ್ತ ಬಲ್ಲರೋ ಆ ಪರಬ್ರಹ್ಮದ ನಿಲವ?
ಅದೆಂತೆಂದಡೆ
ಆದಿಯೇ ದೇಹ, ಅನಾದಿಯೇ ನಿರ್ದೇಹ
ಆದಿಯೇ ಸಕಲ, ಅನಾದಿಯೇ ನಿಷ್ಕಲ
ಆದಿಯೇ ಜಡ, ಅನಾದಿಯೇ ಅಜಡ
ಆದಿಯೇ ಕಾಯ, ಅನಾದಿಯೇ ಪ್ರಾಣ
ಈ ಎರಡರ ಯೋಗವ ಭೇದಿಸಿ
ತನ್ನಿಂದ ತಾ ತಿಳಿದು ನೋಡಲು
ಆದಿಸಂಬಂಧಮಪ್ಪ ಭೂತಂಗಳೂ ನಾನಲ್ಲ,
ದಶೇಂದ್ರಿಯಗಳೂ ನಾನಲ್ಲ,
ಅಷ್ಟಮದಂಗಳು, ಅರಿಷಡ್ವರ್ಗಂಗಳು, ಷಡೂರ್ಮಿಗಳು
ಷಡ್ಭಾವವಿಕಾರಂಗಳು ಷಟ್ಕರ್ಮಂಗಳು, ಷಡ್ಧಾತುಗಳು
ಸಪ್ತವ್ಯಸನಂಗಳು, ತನುತ್ರಯಂಗಳು, ಜೀವತ್ರಯಂಗಳು,
ಮನತ್ರಯಂಗಳು, ಮಲತ್ರಯಂಗಳು, ಗುಣತ್ರಯಂಗಳು,
ಭಾವತ್ರಯಂಗಳು, ತಾಪತ್ರಯಂಗಳು, ಷಟ್ಕರಣಂಗಳು,
ಇಂತಿವು ಆದಿಯಾಗಿ ತೋರುವ ತೋರಿಕೆಯೆ ನಾನಲ್ಲ
ಎನ್ನವೇ ಅಲ್ಲ!
ಎನ್ನ ಅಧೀನವಾಗಿರ್ಪವು, ನಾನಿವರ ಅಧೀನವಲ್ಲ
ಎನ್ನ ತುರ್ಯಾತುರ್ಯತೀತವಪ್ಪ ಸಚ್ಚಿದಾನಂದ,
ನಿತ್ಯಪರಿಪೂರ್ಣವೇ ತನ್ನಿರವೆಂದು ತಿಳಿಯೆ-
ಆ ತಿಳಿದ ಮಾತ್ರದಲ್ಲಿಯೇ ಅನಿತ್ಯದಾ ಬೆಸುಗೆ ಬಿಟ್ಟು
ನಿರಾಳದಲ್ಲಿ ನಿರವಯವನೆಯ್ದಲರಿಯದೆ
ಮತ್ತೆಯೂ ಭೌತಿಕಸಂಬಂಧಿಯಾಗಿ ಇರುತಿರಲು
ಈ ತತ್ವದಾದಿ ತಾನೆಂತೆನಲು
ಆ ಪರಬ್ರಹ್ಮವಪ್ಪ-ನಿತ್ಯನಿರಾಳ ನಿಶ್ಶೂನ್ಯಲಿಂಗವೇ
ತನ್ನ ಲೀಲಾವಿಲಾಸದಿಂದ ತಾನೇ ಸುನಾದ-ಬಿಂದು-ಪ್ರಕಾಶ
ತೇಜೋಮೂರ್ತಿಯಾಗಿ ನಿಂದು
ಆ ಮಹಾಲಿಂಗವೆನಿಸಿತ್ತು
ಆ ಪಂಚಸಾದಾಖ್ಯವೇ ಪಂಚಲಿಂಗಪ್ರಕಾಶವೆನಿಸಿತ್ತು
ಆ ಪಂಚಲಿಂಗಪ್ರಕಾಶವೇ ಪಂಚಮುಖವೆನಿಸಿತ್ತು
ಆ ಪಂಚಮುಖದಿಂದವೇ ಪಂಚಾಕ್ಷರಿ ಉತ್ಪತ್ತಿ
ಆ ಪಂಚಾಕ್ಷರಿಯಿಂದವೇ ಪಂಚಕಲೆಗಳುತ್ಪತ್ತಿ
ಆ ಪಂಚಕಲೆಗಳಿಂದಲೇ ಪಂಚಶಕ್ತಿಗಳುತ್ಪತ್ತಿ
ಆ ಪಂಚಶಕ್ತಿಗಳಿಂದವೇ
ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳ ಜನನ
ಆ ಜ್ಞಾನ-ಮನ-ಬುದ್ಧಿ-ಅಹಂಕಾರಗಳಿಂದವೇ
ಪಂಚತನ್ಮಾತ್ರೆಗಳುತ್ಪತ್ತಿ
ಆ ಪಂಚತನ್ಮಾತ್ರೆಗಳಿಂದವೇ ಪಂಚಭೂತಂಗಳುತ್ಪತ್ತಿ
ಆ ಪಂಚಭೂತಂಗಳೇ ಪಂಚೀಕರಣವನೆಯ್ದಿ ಆತ್ಮಂಗೆ ಅಂಗವಾಯಿತ್ತು
ಆ ಅಂಗಕ್ಕೆ ಜ್ಞಾನೇಂದ್ರಿಯಗಳು ಕರ್ಮೇಂದ್ರಿಯಗಳು
ಪ್ರತ್ಯಂಗವೆನಿಸಿತ್ತು
ಇಂತೀ ದೇಹಸಂಬಂಧಮಂ
ಶಿವ ತನ್ನ ಚಿದಂಶಿಕನಪ್ಪ ಆತ್ಮಂಗೆ ಸಂಬಂಧಿಸಿದನಾಗಿ
ಆ ಸಂಬಂಧಿಸಿದ ಕಾಯದ ಪೂರ್ವಾಶ್ರಯವು
ಎಲ್ಲಿ ಆಯಿತು ಅಲ್ಲೇ ಅಡಗಿಸಿ
ಆ ಕಾಯದ ಪೂರ್ವಾಶ್ರಯವನಳಿದು
ಮಹಾಘನಲಿಂಗವ ವೇಧಿಸಿ [ಕೊಟ್ಟು]
ಶಿವ ತಾನೆ ಗುರುವಾಗಿ ಬಂದು
ಆ ಗುರು ತಾನೆ ಮಹಾಘನಲಿಂಗವ ವೇಧಿಸಿ ಕೊಟ್ಟ ಪರಿಯೆಂತೆಂದೆಡೆ
ಆತ್ಮಗೂಡಿ ಪಂಚಭೂತಂಗಳನೆ ಷಡಂಗವೆಂದೆನಿಸಿ
ಆ ಅಂಗಕ್ಕೆ ಕಲೆಗಳನೆ ಷಡ್ವಿಧಭಕ್ತಿಗಳೆಂದೆನಿಸಿ
ಆ ಶಕ್ತಿಗಳಿಗೆ ಷಡ್ವಿಧಭಕ್ತಿಯನಳವಡಿಸಿ
ಆ ಭಕ್ತಿಗಳಿಗೆ ಭಾವ-ಜ್ಞಾನ-ಮನ-ಬುದ್ಧಿ-ಚಿತ್ತ-ಅಹಂಕಾರಗಳನೆ
ಷಡ್ವಿಧ ಹಸ್ತಂಗಳೆನಿಸಿ
ಆ ಹಸ್ತಂಗಳಿಗೆ ಮಹಾಲಿಂಗವಾದಿಯಾದ ಪಂಚಲಿಂಗಗಳನೆ
ಷಡ್ವಿಧ ಲಿಂಗಗಳೆಂದೆನಿಸಿ
ಆ ಲಿಂಗಂಗಳಿಗೆ ಷಡಕ್ಷರಿಯನೇ ಷಡ್ವಿಧ ಮಂತ್ರವೆಂದೆನಿಸಿ
ಆ ಮಂತ್ರಲಿಂಗಂಗಳಿಗೆ ಹೃದಯವೊಂದುಗೂಡಿ
ಆ ಪಂಚೇಂದ್ರಿಯಂಗಳನೆ ಷಡ್ವಿಧಮುಖಂಗಳೆಂದೆನಿಸಿ
ಆ ಮುಖಂಗಳಿಗೆ ತನ್ಮಾತ್ರೆಗಳನೆ ದ್ರವ್ಯಪದಾರ್ಥಂಗಳೆನಿಸಿ
ಆ ದ್ರವ್ಯಪದಾರ್ಥಂಗಳನು ಆಯಾಯಾ ಮುಖದ ಲಿಂಗಂಗಳಲ್ಲಿ
ನಿರಂತರ ಸಾವಧಾನದಿಂದ ಅರ್ಪಿತವಾಗಿ ಬೀಗಲೊಡನೆ
ಅಂಗಸ್ಥಲಂಗಳಡಗಿ ತ್ರಿವಿಧಲಿಂಗಸ್ಥಲಂಗಳುಳಿದು
ಕಾಯ ಗುರು, ಪ್ರಾಣ ಲಿಂಗ, ಜ್ಞಾನ ಜಂಗಮ
ಗುರುವಿನಲ್ಲಿ ಶುದ್ಧ ಪ್ರಸಾದ, ಲಿಂಗದಲ್ಲಿ ಸಿದ್ಧಪ್ರಸಾದ
ಜಂಗಮದಲ್ಲಿ ಪ್ರಸಿದ್ಧಪ್ರಸಾದ
ಇಂತೀ ತ್ರಿವಿಧಪ್ರಸಾದ ಏಕಾರ್ಥವಾಗಿ
ಮಹಾಘನ ಪರಿಪೂರ್ಣ ಪ್ರಸಾದವಳವಟ್ಟ ಶರಣನು
ಜ್ಞಾನಿ ಅಲ್ಲ, ಅಜ್ಞಾನಿ ಮುನ್ನವೇ ಅಲ್ಲ
ಶೂನ್ಯನಲ್ಲ, ನಿಶ್ಶೂನ್ಯನಲ್ಲ
ದ್ವೈತಿಯಲ್ಲ, ಅದ್ವೈತಿಯಲ್ಲ
ಇಂತೀ ಉಭಯಾತ್ಮಕ ತಾನೆಯಾಗಿ
ಇದು ಕಾರಣ-
ಅದರ ಆಗು-ಹೋಗು ಸಕೀಲಸಂಬಂಧವ
ಚೆನ್ನಮಲ್ಲಿಕಾರ್ಜುನ ನಿಮ್ಮ ಶರಣರೇಬಲ್ಲರು
೨೩೬.
ತನ್ನ ಶಿಷ್ಯ ತನ್ನ ಮಗನೆಂಬುದು ತಪ್ಪದಲಾ
ಏಕೆ?
ಆತನ ಧನಕ್ಕೆ ತಂದೆಯಾದನಲ್ಲದೆ
ಆತನ ಮನಕ್ಕೆ ತಂದೆಯಾದನೆ?
ಏಕೆ? ಆತನ ಮನವನರಿಯನಾಗಿ
ಆತನ ಧನಕ್ಕೆ ತಂದೆಯಾದನು
ತಮ್ಮಲ್ಲಿರ್ದ ಭಕ್ತಿಯ ಮಾರಿಕೊಂಡುಂಬವರು
ನಿಮ್ಮ ನಿಜಭಕ್ತರಲ್ಲಯ್ಯ ಚೆನ್ನಮಲ್ಲಿಕಾರ್ಜುನ
೨೩೭.
ಅರ್ಥ ಸಂನ್ಯಾಸಿಯಾದಡೇನಯ್ಯಾ,
ಆವಂಗದಿಂದ ಬಂದಡೆಯೂ ಕೊಳ್ಳದಿರಬೇಕು
ರುಚಿ ಸನ್ಯಾಸಿಯಾದಡೇನಯ್ಯಾ
ಜಿಹ್ವೆಯ ಕೊನೆಯಲ್ಲಿ ಮಧುರವನರಿಯದಿರಬೇಕು
ಸ್ತ್ರೀ-ಸನ್ಯಾಸಿಯಾದಡೇನಯ್ಯಾ
ಜಾಗ್ರತ್-ಸ್ವಪ್ನ-ಸುಷುಪ್ತಿಯಲ್ಲಿ ತಪ್ಪಿಲ್ಲದಿರಬೇಕು
ದಿಗಂಬರಿಯಾದಡೇನಯ್ಯಾ
ಮನ ಬತ್ತಲೆಯಿರಬೇಕು
ಇಂತೀ ಚತುರ್ವಿಧ ಹೊಲಬನರಿಯದೆ
ವೃಥಾ ಕೆಟ್ಟರು ಕಾಣಾ ಚೆನ್ನಮಲ್ಲಿಕಾರ್ಜುನಾ
೨೩೮.
ಸದ್ಗುರುಸ್ವಾಮಿ ಶಿಷ್ಯಂಗೆ ಅನುಗ್ರಹವ ಮಾಡುವಲ್ಲಿ
ತಚ್ಛಿಷ್ಯನ ಮಸ್ತಕದ ಮೇಲೆ ತನ್ನ ಶ್ರೀಹಸ್ತವನಿರಿಸಿದಡೆ
ಲೋಹದ ಮೇಲೆ ಪರುಷ ಬಿದ್ದಂತಾಯಿತ್ತಯ್ಯ
ಒಪ್ಪುವ ಶ್ರೀವಿಭೂತಿಯ ನೊಸಲಿಂಗೆ ಪಟ್ಟವ ಕಟ್ಟಿದೊಡೆ
ಮುಕ್ತಿರಾಜ್ಯದೊಡೆತನಕ್ಕೆ ಪಟ್ಟವ ಕಟ್ಟಿದಂತಾಯಿತ್ತಯ್ಯ
ಸದ್ಯೋಜಾತ-ವಾಮದೇವ-ಅಘೋರ-ತತ್ಪುರುಷ-ಈಶಾನವೆಂಬ
ಪಂಚಕಳಶದ ಅಭಿಷೇಕವ ಮಾಡಿಸಲು
ಶಿವನ ಕರುಣಾಮೃತದ ಸೋನೆ ಸುರಿದಂತಾಯಿತ್ತಯ್ಯ
ನೆರೆದ ಶಿವಗಣಂಗಳ ಮಧ್ಯದಲ್ಲಿ
ಮಹಾಲಿಂಗವನು ಕರತಳಾಮಳಕವಾಗಿ
ಶಿಷ್ಯನ ಕರಸ್ಥಲಕ್ಕೆ ಇತ್ತು ಪ್ರತಿಷ್ಠಿಸಿ
ಪ್ರಣವಪಂಚಾಕ್ಷರಿಯುಪದೇಶವ ಕರ್ಣದಲ್ಲಿ ಹೇಳಿ
ಕಂಕಣವ ಕಟ್ಟಿದಲ್ಲಿ
ಕಾಯವೇ ಕೈಲಾಸವಾಯಿತ್ತು
ಪ್ರಾಣವೇ ಪಂಚಬ್ರಹ್ಮಮಯ ಲಿಂಗವಾಯಿತ್ತು
ಇಂತು ಮುಂದ ತೋರಿಸಿ ಹಿಂದೆ ಬಿಡಿಸಿದ
ಶ್ರೀಗುರುವಿನ ಸಾನ್ನಿಧ್ಯದಿಂದಾನು ಬದುಕಿದೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೨೩೯.
ಧನದ ಮೇಲೆ ಬಂದವರೆಲ್ಲ ಅನುಸಾರಿಗಳಲ್ಲದೆ
ಅನುವ ಮಾಡಬಂದವರಲ್ಲ
ಮನದ ಮೇಲೆ ಬಂದು ನಿಂದು ಜರಿದು ನುಡಿದು
ಪಥವ ತೋರಬಲ್ಲಡಾತನೇ ಸಂಬಂಧಿ
ಹೀಂಗಲ್ಲದೆ, ಅವರಿಚ್ಛೆಯ ನುಡಿದು ತನ್ನುದರವ ಹೊರೆವನಕ
ಬಚ್ಚಣಿಗಳ ಮೆಚ್ಚುವನೆ ಚೆನ್ನಮಲ್ಲಿಕಾರ್ಜುನ
೨೪೦.
ಸೆಜ್ಜೆ ಉಪ್ಪರಿಸಿ, ಶಿವಲಿಂಗ ಕರಸ್ಥಲಕ್ಕೆ ಬರೆ,
ಪ್ರಜ್ವಲಿಸಿ ತೊಳಗಿ ಬೆಳಗುತ್ತಿಹ ಕಾಂತಿಯಲ್ಲಿ
ಜಜ್ಜರಿಸಿ ತನು-ಮನ, ದೃಷ್ಟಿನಟ್ಟು
ನಟ್ಟದೃಷ್ಟಿಯೊಳು ಒಜ್ಜರಿಸಿ ಹರಿವ
ಶಿವಸುಖರಸದೊಳೋಲಾಡುತೆಂದಿಪ್ಪೆನೊ
ನಿಮ್ಮ ಸಜ್ಜನಿಕೆ-ಸದ್ಭಕ್ತಿಯ ತಲೆಯೊತ್ತಿ ಕೂಡಿ ಆಡಿ ಲಜ್ಜೆಗೆಟ್ಟು
ನಿಮ್ಮನೆಂದಿಗೆ ನೆರೆವೆ ಚೆನ್ನಮಲ್ಲಿಕಾರ್ಜುನ
೨೪೧.
ತನು ಶುದ್ಧವಾಯಿತ್ತು ಶಿವಭಕ್ತರೊಕ್ಕುದ ಕಂಡೆನ್ನ
ಮನ ಶುದ್ಧವಾಯಿತ್ತು ಅಸಂಖ್ಯಾತರ ನೆನೆದೆನ್ನ
ಕಂಗಳು ಶುದ್ಧವಾಯಿತ್ತು ಸಕಲಗಣಂಗಳ ನೋಡಿಯೆನ್ನ
ಶ್ರೋತ್ರ ಶುದ್ಧವಾಯಿತ್ತು
ಅವರ ಕೀರ್ತಿಯ ಕೇಳಿಯೆನ್ನ
ಘ್ರಾಣ ಶುದ್ಧವಾಯಿತ್ತು
ನಿಮ್ಮ ಪಾದಾರ್ಪಿತ ಪರಿಮಳವ ವಾಸಿಸಿಯೆನ್ನ
ಜಿಹ್ವೆ ಶುದ್ಧವಾಯಿತ್ತು ನಿಮ್ಮ ಶರಣರೊಕ್ಕುದ ಕೊಂಡೆನಾಗಿ
ಭಾವನೆಯೆನಗಿದು ಜೀವನ ಕೇಳಾ ಲಿಂಗ ತಂದೆ
ನೆಟ್ಟನೆ ನಿಮ್ಮ ಮನ ಮುಟ್ಟಿ ಪೂಜಿಸಿ
ಭವಗೆಟ್ಟೆ ನಾನು ಚೆನ್ನಮಲ್ಲಿಕಾರ್ಜುನ
೨೪೨.
ಕುಲಮದವೆಂಬುದಿಲ್ಲ ಅಯೋನಿಸಂಭವನಾಗಿ
ಛಲಮದವೆಂಬುದಿಲ್ಲ ಪ್ರತಿದೂರನಾಗಿ
ಧನಮದವೆಂಬುದಿಲ್ಲ ತ್ರಿಕರಣಶುದ್ಧನಾಗಿ
ವಿದ್ಯಾಮದವೆಂಬುದಿಲ್ಲ ಅಸಾಧ್ಯವ ಸಾಧಿಸಿದೆನಾಗಿ
ಮತ್ತಾವ ಮದವಿಲ್ಲ ನೀನವಗವಿಸಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣ ಅಕಾಯಚರಿತ್ರನಾಗಿ
೨೪೩.
ಉದಯಾಸ್ತಮಾನವೆಂಬೆರಡು ಕೊಳಗದಲ್ಲಿ
ಆಯುಷ್ಯವೆಂಬ ರಾಶಿಯ ಅಳೆದು ತೀರದ ಮುನ್ನ
ಶಿವನ ನೆನೆಯಿರೇ! ಶಿವನ ನೆನೆಯಿರೇ!
ಈ ಜನ್ಮ ಬಳಿಕಿಲ್ಲ
ಚೆನ್ನಮಲ್ಲಿಕಾರ್ಜುನದೇವರ ದೇವ
ಪಂಚಮಹಾಪಾತಕರೆಲ್ಲ ಮುಕ್ತಿವಡೆದರು
೨೪೪.
ಕರುವಿನ ರೂಹು ಅರಗಿಳಿಯನೋದಿಸುವಂತೆ
ಓದಿಸುವುದಕೆ ಜೀವವಿಲ್ಲ
ಕೇಳುವುದಕ್ಕೆ ಜ್ಞಾನವಿಲ್ಲ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮನರಿಯದವನ ಭಕ್ತಿ
ಕರುವಿನ ರೂಹು ಅರಗಿಳಿಯ ನೋದಿಸುವಂತೆ
೨೪೫.
ಪ್ರಥಮದಲಾದ ಮೋಹ ಸಾತ್ವಿಕವಾದಡೆ ಕಿತವೇಕಯ್ಯ?
ಹೆರರನೊಲ್ಲದೆ ಬೇಟಕ್ಕೆ ಕಿತವೇಕಯ್ಯ?
ಚೆನ್ನಮಲ್ಲಿಕಾರ್ಜುನದೇವರ ದೇವನೊಂದಿಗೆ
ಬಿಡದ ನೇಹಕ್ಕೆ ಕಿತವೇಕೆ?
೨೪೬.
ಮುತ್ತೂ ನೀರಲಾಯಿತ್ತು
ವಾರಿಕಲ್ಲೂ ನೀರಲಾಯಿತ್ತು
ಉಪ್ಪೂ ನೀರಲಾಯಿತ್ತು
ಉಪ್ಪು ಕರಗಿತ್ತು, ವಾರಿಕಲ್ಲೂ ಕರಗಿತ್ತು
ಮತ್ತು ಕರಗಿದುದನಾರೂ ಕಂಡವರಿಲ್ಲ
ಈ ಸಂಸಾರಿಮಾನವರು ಲಿಂಗವ ಮುಟ್ಟಿ
ಭವಭಾರಿಗಳಾದರು
ನಾ ನಿಮ್ಮ ಮುಟ್ಟಿ ಕರಿಗೊಂಡೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೨೪೭.
ಬೋಳೆಯನೆಂದು ನಂಬಬೇಡ
ಡಾಳಕನವನು, ಜಗದ ಬಿನ್ನಾಣಿ
ಬಾಣ-ಮಯೂರ-ಕಾಳಿದಾಸ-ಓಹಿಲನುದ್ಭಟ
ಮಲುಹಣನವರಿಗಿತ್ತ ಪರಿ ಬೇರೆ
ಮುಕ್ತಿ-ಭುಕ್ತಿಯ ತೋರಿ, ಭಕ್ತಿಯ ಮರೆಸಿಕೊಂಬನು
ಚೆನ್ನಮಲ್ಲಿಕಾರ್ಜುನನು
೨೪೮.
ಜಾತಿಶೈವ-ಅಜಾತಿಶೈವವೆಂದೆರಡು
ಪ್ರಕಾರವಾಗಿಹುದಯ್ಯ
ಜಾತಿಶೈವರೆಂಬವರು ಶಿವಂಗೆ ಭೋಗಸ್ತ್ರೀಯರಯ್ಯ
ಅಜಾತಿಶೈವರೆಂಬವರು ಶಿವಂಗೆ ಕುಲಸ್ತ್ರೀಯರಯ್ಯ
ಜಾತಿಶೈವರೆಂಬವರು ಸರ್ವಭೋಗಂಗಳ ಬಯಸಿ ಮಾಡುವರಾಗಿ
ಯದ್ದ್ವಾರೇ ಮತ್ತ ಮಾತಂಗಾಃ ವಾಯುವೇಗಾಸ್ತುರಂಗಮಾಃ
ಪೂರ್ಣೇಂದುವದನಾ ನಾರ್ಯಃ ಶಿವಪೂಜಾವಿಧೇ ಫಲಂ
ಎಂದುದಾಗಿ-ಇದು ಜಾತಿಶೈವರಿಗೆ ಕೊಟ್ಟ ಭೋಗಂಗಳಯ್ಯ
ಅಜಾತಿಶೈವರು ಗುರುಲಿಂಗಕ್ಕೆ ತನುಮನಧನವ ನಿವೇದಿಸಿ
ಸರ್ವಸೂತಕರಹಿತವಾಗಿಹರಯ್ಯ
ಅಹಂ ಮಾಹೇಶ್ವರಪ್ರಾಣೋ ಮಾಹೇಶ್ವರೋ ಮಮ ಪ್ರಾಣಃ
ತಥೈವೈಕ್ಯಂ ತು ನಿಷ್ಕ್ರಿಯಂ ಅಚ್ಚಲಿಂಗೈಕ್ಯಮೇವ ಚ
ಇದು ಕಾರಣ ಸರ್ವೇಶ್ವರ ಚೆನ್ನಮಲ್ಲಿಕಾರ್ಜುನಯ್ಯನು
ಭಕ್ತಿ ಕಾಯವೆಂಬೈಕ್ಯಪದವನು
ಅಜಾತಿಶೈವರಿಗೆ ಕೊಡುವನಯ್ಯ
೨೪೯.
ಸತ್ತ ಹೆಣ ಕೂಗಿದುದುಂಟು
ಬೈಚಿಟ್ಟ ಬಯಕೆ ಕರೆದುದುಂಟು
ಹೆಪ್ಪಿಟ್ಟ ಹಾಲು ಗಟ್ಟಿಗೊಂಡು ಸಿಹಿಯಾದುದುಂಟು
ಇದು ನಿಶ್ಚಯಿಸಿ ನೋಡಿ ಚೆನ್ನಮಲ್ಲಿಕಾರ್ಜುನದೇವನಲ್ಲಿ
೨೫೦.
ಮರೆದೊರಗಿ ಕನಸ ಕಂಡೇಳುವಲ್ಲಿ
ಸತ್ತ ಹೆಣ ಎದ್ದಿತ್ತು
ತನ್ನ ಋಣನಿಧಾನ ಎದ್ದು ಕರೆಯಿತ್ತು
ಹೆಪ್ಪಿಟ್ಟ ಹಾಲು ಘಟ್ಟಿ ತುಪ್ಪವಾಗಿ ಸಿಹಿಯಾಯಿತ್ತು
ಇದಕ್ಕೆ ತಪ್ಪ ಸಾಧಿಸಲೇಕೆ?
ಚೆನ್ನಮಲ್ಲಿಕಾರ್ಜುನದೇವನ ಅಣ್ಣಗಳಿರಾ
೨೫೧.
ಎನಗೇಕಯ್ಯ? ಸಾವ ಪ್ರಪಂಚಿನ ಪುತ್ಥಳಿ
ಮಾಯಿಕದ ಮಲಭಾಂಡ ಆತುರದ ಭವನಿಳಯ
ಜಲಕುಂಭದ ಒಡೆಯಲ್ಲಿ ಒಸರುವ ನೆಲೆಮನೆ ಎನಗೇಕಯ್ಯ?
ಬೆರಳು ತಾಳ ಹಣ್ಣ ಹಿಸಿದಡೆ ಮೆಲಲುಂಟೆ
ಎನ್ನ ತಪ್ಪನೊಪ್ಪಗುಳ್ಳಾ ಚೆನ್ನಮಲ್ಲಿಕಾರ್ಜುನದೇವ
೨೫೨.
ಊಡಿದಡುಣ್ಣದು, ನೀಡಿದಡರಿಯದು
ಕಾಣದು ಬೇಡದು, ಒಲಿಯದು ನೋಡಾ
ಊಡಿದರುಂಡು ನೀಡೀದಡೊಲಿದು
ಬೇಡಿದ ವರವ ಕೊಡುವ ಜಂಗಮಲಿಂಗದ ಪಾದವ
ಹಿಡಿದು ಬದುಕಿದೆ ಕಾಣಾ ಚೆನ್ನಮಲ್ಲಿಕಾರ್ಜುನ
೨೫೩.
ಕಾಯ ಪ್ರಸಾದವೆನ್ನ ಮನ ಪ್ರಸಾದವೆನ್ನ
ಪ್ರಾಣ ಪ್ರಸಾದವೆನ್ನ ಭಾವ ಪ್ರಸಾದವೆನ್ನ
ಸೈಧಾನ ಪ್ರಸಾದವೆನ್ನ ಸಮಭೋಗ ಪ್ರಸಾದವೆನ್ನ
ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಪ್ರಸಾದವ ಹಾಸಿ ಹೊದಿಸಿಕೊಂಡಿಪ್ಪೆ
೨೫೪.
ಮಧ್ಯಾಹ್ನದಿಂದ ಮೇಲೆ ಹಿರಿಯರಿಲ್ಲ
ಅಸ್ತಮಾನದಿಂದ ಮೇಲೆ ಜಿತೇಂದ್ರಿಯರಿಲ್ಲ
ವಿಧಿಯ ಮೀರುವ ಅಮರರಿಲ್ಲ
ಕ್ಷುಧೆ-ವ್ಯಸನ-ವಿಧಿಗಂಜಿ ನಾ ನಿಮ್ಮ ಮರೆವೊಕ್ಕು
ಚೆನ್ನಮಲ್ಲಿಕಾರ್ಜುನ ಬದುಕಿದೆ
೨೫೫.
ಅರಿದೆನೆಂದೆಡೆ ಅರಿಯಬಾರದು ನೋಡಾ
ಘನಕ್ಕೆ ಘನ ತಾನೆ ನೋಡಾ
ಚೆನ್ನಮಲ್ಲಿಕಾರ್ಜುನನ ನಿರ್ಣಯವಿಲ್ಲದೆ ಸೋತೆನು
೨೫೬.
ಎನ್ನಂತೆ ಪುಣ್ಯಂಗೆಯ್ದವರುಂಟೆ?
ಎನ್ನಂತೆ ಭಾಗ್ಯಂಗೆಯ್ದವರುಂಟೆ?
ಕಿನ್ನರನಂತಪ್ಪ ಸೋದರನೆನಗೆ
ಏಳೇಳು ಜನ್ಮದಲ್ಲಿ ಶಿವಭಕ್ತರೇ ಬಂಧುಗಳೆನಗೆ
ಚೆನ್ನಮಲ್ಲಿಕಾರ್ಜುನನಂತಪ್ಪ ಗಂಡ ನೋಡಾ ಎನಗೆ
೨೫೭.
ಅಯ್ಯಾ ನಿಮ್ಮ ಶರಣರು ಮೆಟ್ಟಿದ ಧರೆ ಪಾವನವಯ್ಯ
ಅಯ್ಯಾ ನಿಮ್ಮ ಶರಣರು ಇದ್ದ ಪುರವೇ ಕೈಲಾಸಪುರವಯ್ಯ
ಅಯ್ಯಾ ನಿಮ್ಮ ಶರಣರು ನಿಂದುದೇ ನಿಜನಿವಾಸವಯ್ಯಾ
ಚೆನ್ನಮಲ್ಲಿಕಾರ್ಜುನಯ್ಯ
ನಿಮ್ಮ ಶರಣ ಬಸವಣ್ಣನಿದ್ದ ಕ್ಷೇತ್ರ ಅವಿಮುಕ್ತ ಕ್ಷೇತ್ರವಾಗಿ
ಆನು ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನುತಿರ್ದೆನು
೨೫೮.
ಗುರುವೆ ತೆತ್ತಿಗನಾದ
ಲಿಂಗವೆ ಮದವಳಿಗನಾದ
ನಾನು ಮದವಳಿಗೆಯಾದೆನು
ಈ ಭುವನವೆಲ್ಲರಿಯಲು
ಅಸಂಖ್ಯಾತರೆನಗೆ ತಾಯಿತಂದೆಗಳು
ಕೊಟ್ಟರು ಪ್ರಭುವಿನ ಮನೆಗೆ
ಸಾದೃಶ್ಯವಪ್ಪ ವರನ ನೋಡಿ
ಇದು ಕಾರಣ ಚೆನ್ನಮಲ್ಲಿಕಾರ್ಜುನ ಗಂಡನಾದ ಬಳಿಕ
ಮಿಕ್ಕಿನ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ
೨೫೯.
ಬಸವಣ್ಣನ ಪಾದವ ಕಂಡೆನಾಗಿ
ಎನ್ನಂಗ ನಾಸ್ತಿಯಾಯಿತ್ತು
ಚೆನ್ನಬಸವಣ್ಣನ ಪಾದವ ಕಂಡೆನಾಗಿ
ಎನ್ನ ಪ್ರಾಣ ಬಯಲಾಯಿತ್ತು
ಪ್ರುಭುವೆ ನಿಮ್ಮ ಶ್ರೀಚರಣಕ್ಕೆ ಶರಣೆಂದೆನಾಗಿ
ಎನ್ನ ಅರಿವು ಸ್ವಯವಾಯಿತ್ತು
ಚೆನ್ನಮಲ್ಲಿಕಾರ್ಜುನದೇವಯ್ಯ,
ನಿಮ್ಮ ಶರಣರ ಕರುಣವ ಪಡೆದೆನಾಗಿ
ಎನಗೆ ಮತ್ತಾವುದಿಲ್ಲವಯ್ಯ ಪ್ರಭುವೆ
೨೬೦.
ಅಂಗಸಂಗದಲ್ಲಿ ಲಿಂಗಸಂಗಿಯಾದೆ
ಲಿಂಗಸಂಗದಲ್ಲಿ ಅಂಗಸಂಗಿಯಾದೆ
ಉಭಯಸಂಗವನರಿಯದೆ ಪರಿಣಾಮಿಯಾದೆನು
ನುಡಿಯ ಗಡಣವ ಮರೆದು ತೆರಹಿಲ್ಲದಿದ್ದರೇನು
ಎನ್ನ ದೇಹ ಚೆನ್ನಮಲ್ಲಿಕಾರ್ಜುನನ ಬೆರೆಸಿದ ಬಳಿಕ
ಇನ್ನು ನಾನು ಏನೆಂದೂ ಅರಿಯೆನಯ್ಯ
೨೬೧.
ಅಂಗದೊಳಗೆ ಅಂಗವಾಗಿ ಅಂಗಲಿಂಗೈಕ್ಯವ ಮಾಡಿದೆ
ಮನದೊಳಗೆ ಮನವಾಗಿ ಮನ ಲಿಂಗೈಕ್ಯವ ಮಾಡಿದೆ
ಭಾವದೊಳಗೆ ಭಾವವಾಗಿ ಭಾವಲಿಂಗೈಕ್ಯವ ಮಾಡಿದೆ
ಅರಿವಿನೊಳಗೆ ಅರಿವಾಗಿ ಜ್ಞಾನಲಿಂಗೈಕ್ಯವ ಮಾಡಿದೆ
ಕ್ರೀಗಳೆಲ್ಲವ ನಿಲಿಸಿ ಕ್ರಿಯಾತೀತವಾಗಿ
ನಿವೃತ್ತಿಲಿಂಗೈಕ್ಯವ ಮಾಡಿದೆ
ನಾನೆಂಬುದ ನಿಲಿಸಿ ನೀನೆಂಬುದ ಕೆಡಿಸಿ
ಉಭಯಲಿಂಗೈಕ್ಯವ ಮಾಡಿದೆ
ಚೆನ್ನಮಲ್ಲಿಕಾರ್ಜುನನೊಳಗೆ ನಾನಳಿದೆನಾಗಿ
ಲಿಂಗವೆಂಬ ಘನವು ಎನ್ನಲ್ಲಿ ಅಳಿಯಿತ್ತು [=ಉಳಿಯಿತ್ತು?]
ಕಾಣಾ ಸಂಗನಬಸವಣ್ಣ
೨೬೨.
ಎನ್ನ ಭಕ್ತಿ ನಿಮ್ಮ ಧರ್ಮ
ಎನ್ನ ಜ್ಞಾನ ಪ್ರಭುದೇವರ ಧರ್ಮ
ಎನ್ನ ಪರಿಣಾಮ ಚೆನ್ನಬಸವಣ್ಣನ ಧರ್ಮ
ಈ ಮೂವರೂ ಒಂದೊಂದ ಕೊಟ್ಟರೆನಗೆ-
ಮೂರು ಭಾವವಾಯಿತ್ತು
ಈ ಮೂರನು ನಿನ್ನಲ್ಲಿ ಸಮರ್ಪಿಸಿದ ಬಳಿಕ
ಎನಗಾವ ಜಂಜಡವಿಲ್ಲ
ಚೆನ್ನಮಲ್ಲಿಕಾರ್ಜುನದೇವರ ನೆನಹಿನಲ್ಲಿ
ನಿನ್ನ ಕರುಣದ ಶಿಶು ನಾನು ಕಾಣಾ ಸಂಗನಬಸವಣ್ಣ
೨೬೩.
ಲಿಂಗ ಸುಖಸಂಗದಲ್ಲಿ ಮನ ವೇದ್ಯವಾಯಿತ್ತು
ಇನ್ನೆಲ್ಲಿಯದಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯದಯ್ಯ ನಿಮ್ಮಲ್ಲಿ ಕೂಡುವುದು?
ಪರಮಸುಖಪರಿಣಾಮ ಮನ ಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ ಚೆನ್ನಮಲ್ಲಿಕಾರ್ಜುನಯ್ಯ
೨೬೪.
ಮೂಲದ್ವಾರದ ಬೇರ ಮೆಟ್ಟಿ ಭೂಮಂಡಲವನೇರಿದೆ
ಆಚಾರದ ಬೇರ ಹಿಡಿದು ಐಕ್ಯದ ತುದಿಯನೇರಿದೆ
ವೈರಾಗ್ಯದ ಸೋಪಾನದಿಂದ ಶ್ರೀಗಿರಿಯನೇರಿದೆ
ಕೈವಿಡಿದು ತೆಗೆದುಕೊಳ್ಳಾ ಚೆನ್ನಮಲ್ಲಿಕಾರ್ಜುನ
೨೬೫.
ಬಯಲು ಲಿಂಗವೆಂಬೆನೆ? ಬಗಿದು ನಡೆದಲ್ಲಿ ಹೋಯಿತ್ತು
ಬೆಟ್ಟ ಲಿಂಗವೆಂಬೆನೆ? ಮೆಟ್ಟಿ ನಿಂದಲ್ಲಿ ಹೋಯಿತ್ತು
ತರುಮರಾದಿಗಳು ಲಿಂಗವೆಂಬೆನೆ! ತರಿದಲ್ಲಿ ಹೋಯಿತ್ತು
ಲಿಂಗ-ಜಂಗಮದ ಪಾದವೆ ಗತಿಯೆಂದು ನಂಬಿದ ಸಂಗನ ಬಸವಣ್ಣನ
ಮಾತು ಕೇಳದೆ ಕೆಟ್ಟೆನಯ್ಯ, ಚೆನ್ನಮಲ್ಲಿಕಾರ್ಜುನ
೨೬೬.
ನೋಡಿಹೆನೆಂದಡೆ ದೃಷ್ಟಿ ಮರೆಯಾಯಿತ್ತು
ಕೂಡಿಹೆನೆಂದೊಡೆ ಭಾವ ಮರೆಯಾಯಿತ್ತು
ಏನೆಂಬೆನೆಂತೆಂಬೆನಯ್ಯ?
ಅರಿದಿ[ದ=?]ಹೆನೆಂದೊಡೆ ಮರಹು ಮರೆಯಾಯಿತ್ತು
ನಿನ್ನ ಮಾಯೆಯನತಿಗಳೆವೊಡೆ ಎನ್ನಳವೇ
ಕಾಯಯ್ಯ ಚೆನ್ನಮಲ್ಲಿಕಾರ್ಜುನ
೨೬೭.
ಭಾವ ಬೀಸರವಾಯಿತ್ತು
ಮನ ಮೃತ್ಯುವನಪ್ಪಿತ್ತು, ಆನೇವೆನಯ್ಯ?
ಅಳಿತನದ ಮನ ತಲೆಕೆಳಗಾಯಿತ್ತು, ಆನೇವೆನಯ್ಯ?
ಬಿಚ್ಚಿ ಬೇರಾಗದ ಭಾವವಾಗಿ ಬೆರೆದೊಪ್ಪಚ್ಚಿ
ನಿನ್ನ ನಿತ್ಯಸುಖದೊಳಗಾನೆಂದಿಪ್ಪೆನಯ್ಯ
ಚೆನ್ನಮಲ್ಲಿಕಾರ್ಜುನ
೨೬೮.
ಹಗಲೆನ್ನೆ, ಇರುಳೆನ್ನೆ!
ಉದಯವೆನ್ನೆ, ಅಸ್ತಮಾನವೆನ್ನೆ! ಹಿಂದೆನ್ನೆ, ಮುಂದೆನ್ನೆ!
ನೀನಲ್ಲದೆ ಪರತೊಂದಹುದೆನ್ನೆ! ಮನ ಘನವಾದುದಿಲ್ಲಯ್ಯ!
ಕತ್ತಲೆಯಲ್ಲಿ ಕನ್ನಡಿಯ ನೋಡಿ ಕಳವಳಗೊಂಡೆನಯ್ಯ!
ನಿಮ್ಮ ಶರಣ ಬಸವಣ್ಣನ ತೇಜದೊಳಗಲ್ಲದೆ
ಆನೆನ್ನ [=ಆಂ ನಿನ್ನ?]ನೆಂತು ಕಾಂಬೆನು ಹೇಳಾ
ಚೆನ್ನಮಲ್ಲಿಕಾರ್ಜುನ
೨೬೯.
ಕಾಯದ ಕಾರ್ಪಣ್ಯವರತಿತ್ತು
ಕರಣಂಗಳ ಕಳವಳವಳಿದಿತ್ತು
ಮನ ತನ್ನ ತಾರ್ಕಣೆಯ ಕಂಡು ತಳವೆಳಗಾದುದು
ಇನ್ನೇವೆನಿನ್ನೇವೆನಯ್ಯ?
ನಿಮ್ಮ ಶರಣ ಬಸವಣ್ಣನ ಶ್ರೀಪಾದವ ಕಂಡಲ್ಲದೆ
ಬಯಕೆ ಬಯಲಾಗದು!
ಇನ್ನೇವೆನಿನ್ನೇವೆನಯ್ಯ ಚೆನ್ನಮಲ್ಲಿಕಾರ್ಜುನ
೨೭೦.
ಅಯ್ಯ ಕತ್ತಲೆಯ ಕಳೆದುಳಿದ
ಸತ್ಯ ಶರಣರ ಪರಿಯನೇನೆಂಬೆನಯ್ಯ!
ಘನವನೊಳಕೊಂಡ ಮನದ ಮಹಾನುಭಾವಿಗಳ
ಬಳಿವಿಡಿದು ಬದುಕುವೆನಯ್ಯ
ಅಯ್ಯ, ನಿನ್ನಲ್ಲಿ ಬೇರೊಂದರಿಯದ ಲಿಂಗಸುಖಿಗಳ ಸಂಗದಲ್ಲಿ
ದಿನವ ಕಳೆಯಿಸಯ್ಯ, ಚೆನ್ನಮಲ್ಲಿಕಾರ್ಜುನ
೨೭೧.
ತನು ಶುದ್ಧ, ಮನ ಶುದ್ಧ,
ಭಾವಶುದ್ಧವಾದವರನೆನಗೊಮ್ಮೆ ತೋರಾ!
ನಡೆಯೆಲ್ಲ ಸದಾಚಾರ, ನುಡಿಯೆಲ್ಲ ಶಿವಾಗಮ,
ನಿತ್ಯಶುದ್ಧರಾದವರನೆನಗೊಮ್ಮೆ ತೋರಾ!
ಕತ್ತಲೆಯ ಮೆಟ್ಟಿ ತಳವೆಳಗಾಗಿ ಹೊರಗೊಳಗೊಂದಾಗಿ ನಿಂದ
ನಿಮ್ಮ ಶರಣರನೆನಗೊಮ್ಮೆ ತೋರಾ ಚೆನ್ನಮಲ್ಲಿಕಾರ್ಜುನ
೨೭೨.
ನಡೆ ಶುಚಿ, ನುಡಿ ಶುಚಿ, ತನು ಶುಚಿ,
ಮನ ಶುಚಿ, ಭಾವ ಶುಚಿ-ಇಂತೀ ಪಂಚತೀರ್ಥಂಗಳನೊಳಕೊಂಡು
ಮರ್ತ್ಯದಲ್ಲಿ ನಿಂದ ನಿಮ್ಮ ಶರಣರ ತೋರಿ
ಎನ್ನನುಳುಹಿಕೊಳ್ಳಾ ಚೆನ್ನಮಲ್ಲಿಕಾರ್ಜುನ
೨೭೩.
ಪಡೆವುದರಿದು ನರಜನ್ಮವ,
ಪಡೆವುದರಿದು ಹರಭಕ್ತಿಯ; ಪಡೆವುದರಿದು ಗುರುಕಾರುಣ್ಯವ,
ಪಡೆವುದರಿದು ಸತ್ಯಶರಣರನುಭಾವವ!
ಇಂತಾಗಿ ಚೆನ್ನಮಲ್ಲಿಕಾರ್ಜುನಯ್ಯನ ಶರಣರ ಅನುಭಾವದಲ್ಲಿ
ನಲಿನಲಿದಾಡು ಕಂಡೆಯಾ ಎಲೆ ಮನವೇ!
೨೭೪.
ವನವೆಲ್ಲ ಕಲ್ಪತರು! ಗಿಡುವೆಲ್ಲ ಮರುಜೇವಣಿ!
ಶಿಲೆಗಳೆಲ್ಲ ಪರುಷ! ನೆಲವೆಲ್ಲ ಅವಿಮುಕ್ತ ಕ್ಷೇತ್ರ!
ಜಲವೆಲ್ಲ ನಿರ್ಜರಾಮೃತ! ಮೃಗವೆಲ್ಲ ಪುರುಷಮೃಗ!
ಎಡರುವ ಹರಳೆಲ್ಲ ಚಿಂತಾಮಣಿ!
ಚೆನ್ನಮಲ್ಲಿಕಾರ್ಜುನಯ್ಯನ ನಚ್ಚಿನ ಗಿರಿಯ ಸುತ್ತಿ
ನೋಡುತ ಬಂದು, ಕದಳಿಯ ಬನವ ಕಂಡೆ ನಾನು
೨೭೫.
ತನುವೆಲ್ಲ ಜರಿದು, ಮನವ ನಿಮ್ಮೊಳಗಿರಿಸಿ
ಘನಸುಖದಲೋಲಾಡುವ ಪರಿಯ ತೋರಯ್ಯ ಎನಗೆ
ಭಾವವಿಲ್ಲದ ಬಯಲ ಸುಖವು ಭಾವಿಸಿದಡೆಂತಹುದು
ಬಹುಮುಖರುಗಳಿಗೆ
ಕೇಳಯ್ಯ, ಶ್ರೀಶೈಲ ಚೆನ್ನಮಲ್ಲಿಕಾರ್ಜುನದೇವ
ನಾನಳಿದು ನೀನುಳಿದ ಪರಿಯ ತೋರಯ್ಯ ಪ್ರಭುವೆ
೨೭೬.
ಲಿಂಗಾಂಗಸಂಗ ಸಮರದ ಸುಖದಲ್ಲಿ
ಮನ ವೇದ್ಯವಾಯಿತು
ನಿಮ್ಮ ಶರಣರ ಅನುಭಾವಸಂಗದಿಂದ
ಎನ್ನ ತನು-ಮನ-ಪ್ರಾಣಪದಾರ್ಥವ
ಗುರು-ಲಿಂಗ-ಜಂಗಮಕಿತ್ತು
ಶುದ್ಧ-ಸಿದ್ಧ-ಪ್ರಸಿದ್ಧ ಪ್ರಸಾದಿಯಾದೆನು
ಆ ಮಹಪ್ರಸಾದದ ರೂಪ-ರುಚಿ-ತೃಪ್ತಿಯ
ಇಷ್ಟ-ಪ್ರಾಣ-ಭಾವಲಿಂಗದಲ್ಲಿ ಸಾವಧಾನದಿಂದರ್ಪಿಸಿ
ಮಹಾಘನಪ್ರಸಾದಿಯಾದೆನು
ಇಂತೀ ಸರ್ವಾಚಾರಸಂಪತ್ತು
ಎನ್ನ ತನು-ಮನವೇದ್ಯವಾಯಿತು
ಇನ್ನೆಲ್ಲಿಯಯ್ಯ ಎನಗೆ ನಿಮ್ಮಲ್ಲಿ ನಿರವಯವು?
ಇನ್ನೆಲ್ಲಿಯಯ್ಯ ನಿಮಗೆ ಕೂಡುವುದು?
ಪರಮಸುಖದ ಪರಿಣಾಮ ಮನಮೇರೆದಪ್ಪಿ
ನಾನು ನಿಜವನೈದುವ ಠಾವ ಹೇಳಾ
ಚೆನ್ನಮಲ್ಲಿಕಾರ್ಜುನ ಪ್ರಭುವೆ
೨೭೭.
ಹೋದೆನೂರಿಗೆ ಇದ್ದೆ ನಾನಿಲ್ಲಿ
ಹೋದರೆ ಮರಳಿ ಇತ್ತ ಬಾರೆನವ್ವ
ಐವರು ಭಾವದಿರು, ಐವರು ನಗೆವೆಣ್ಣು
ಐವರು ಕೂಡಿ ಎನ್ನ ಕಾಡುವರು
ಬೈವರು, ಹೊಯ್ವರು, ಮಿಗೆ ಕೆಡೆನುಡಿವರು
ಅವರೈವರ ಕಾಟಕ್ಕೆ ನಾನಿನ್ನಾರೆ ಕಂಡವ್ವಾ
ಅತ್ತೆ ಮಾವನು ಮೈದುನ ನಗೆವೆಣ್ಣು
ಚಿತ್ತವನೊರೆದು ನೋಡುವ ಗಂಡ
ಕತ್ತಲೆಯಾದರೆ ಕರೆದನ್ನವ ನೀಡಳವ್ವ
ಅತ್ತಿಗೆ ಹತ್ತೆಂಟು ನುಡಿವಳಮ್ಮಯ್ಯ ತಾಯೆ
ಉಪಮಾತೀತರು ರುದ್ರಗಣಂಗಳು
ಅವರೆನ್ನ ಬಂಧುಬಳಗಂಗಳು ಸಯಸಿ (?)
ಶ್ರೀಶೈಲ ಚೆನ್ನಮಲ್ಲಿಕಾರ್ಜುನ ಒಲಿದರೆ
ಮರಳಿ ಬಾರೆನಮ್ಮ ತಾಯೆ
೨೭೮.
ಲಿಂಗವೆನ್ನೆ ಲಿಂಗೈಕ್ಯವೆನ್ನೆ!
ಸಂಗವೆನ್ನೆ ನಿಸ್ಸಂಗವೆನ್ನೆ!
ಆಯಿತ್ತೆನ್ನೆ ಆಗದೆನ್ನೆ!
ನಾನೆನ್ನೆ ನೀನೆನ್ನೆ!
ಚೆನ್ನಮಲ್ಲಿಕಾರ್ಜುನಲಿಂಗದಲ್ಲಿ
ಘನಲಿಂಗೈಕ್ಯವಾದ ಬಳಿಕ ಏನೂ ಎನ್ನೆ!
೨೭೯.
ಕಾಯ ಮುಟ್ಟುವೊಡೆ ಕಾಣಬಾರದ ಘನ
ನಿಮ್ಮನೆಂತು ಕರಸ್ಥಲದಲ್ಲಿ ಧರಿಸುವೆನಯ್ಯ?
ಕ್ರೀಗಳು ಮುಟ್ಟಲರಿಯವು
ನಿಮ್ಮನೆಂತು ಪೂಜಿಸುವೆನಯ್ಯ?
ನಾದಬಿಂದುಗಳು ಮುಟ್ಟಲರಿಯವು
ನಿಮ್ಮನೆಂತು ಪಾಡುವೆನಯ್ಯ?
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ನೋಡಿ ನೋಡಿ ಸೈವೆರಗಾಗುತಿಪ್ಪೆನಯ್ಯ
೨೮೦.
ಕ್ರೀಡೆ ತುಂಬಿಯ ಹಂಬಲದಿಂದ ತುಂಬಿಯಾಗಿ
ತನ್ನ ಬಿಡಲುಂಟೇ ಅಯ್ಯ?
ಆನು ನಿಮ್ಮ ನೆನೆದು, ಎನ್ನ ಕರ ತುಂಬಿ,
ಎನ್ನ ಮನ ತುಂಬಿ, ಎನ್ನ ಭಾವ ತುಂಬಿ
ಮತ್ತಿಲ್ಲದೆ ನಿನ್ನ ಕೂಟದ ಸವಿಗಲೆಯನೆಂತು ಕಾಣುವೆನಯ್ಯ
ಚೆನ್ನಮಲ್ಲಿಕಾರ್ಜುನಯ್ಯ
೨೮೧.
ಕಲ್ಲಹೊತ್ತು ಕಡಲೊಳಗೆ ಮುಳುಗಿದೊಡೆ
ಎಡರಿಂಗೆ ಕಡೆಯುಂಟೇ ಅವ್ವ?
ಉಂಡು ಹಸಿವಾಯಿತ್ತೆಂದೊಡೆ ಭಂಗವೆಂಬೆ
ಕಂಡ ಕಂಡ ಠಾವಿನಲ್ಲಿ ಮನ ಬೆಂದೊಡೆ
ಗಂಡ ಮಲ್ಲಿಕಾರ್ಜುನಯ್ಯನೆಂತೊಲಿವೆನಯ್ಯ
೨೮೨.
ಉಡುವೆ ನಾನು ಲಿಂಗಕ್ಕೆಂದು
ತೊಡುವೆ ನಾನು ಲಿಂಗಕ್ಕೆಂದು
ಮಾಡುವೆ ನಾನು ಲಿಂಗಕ್ಕೆಂದು
ನೋಡುವೆ ನಾನು ಲಿಂಗಕ್ಕೆಂದು
ಎನ್ನಂತರಂಗ ಬಹಿರಂಗಗಳು
ಲಿಂಗಕ್ಕಾಗಿ ಮಾಡಿಯೂ ಮಾಡದಂತಿಪ್ಪೆ ನೋಡಾ!
ಆನೆನ್ನ ಚೆನ್ನಮಲ್ಲಿಕಾರ್ಜುನನೊಳಗಾಗಿ
ಹತ್ತರೊಳಗೆ ಹನ್ನೊಂದಾಗಿಪ್ಪುದನೇನ ಹೇಳುವೆನವ್ವ?
೨೮೩.
ಸಾವಿಲ್ಲದ ಕೇಡಿಲ್ಲದ ಚೆಲುವಂಗಾನೊಲಿದೆನವ್ವ
ಎಡೆಯಿಲ್ಲದ ಕಡೆಯಿಲ್ಲದ ತೆರಹಿಲ್ಲದ ಕುರುಹಿಲ್ಲದ
ಚೆಲುವಂಗಾನೊಲಿದೆನವ್ವ
ಭವವಿಲ್ಲದ ಭಯವಿಲ್ಲದ ಚೆಲುವಂಗಾನೊಲಿದೆ
ಕುಲಸೀಮೆಯಿಲ್ಲದ ನಿಸ್ಸೀಮ ಚೆಲುವಂಗಾನೊಲಿದೆ
ಇದುಕಾರಣ ಚೆನ್ನಮಲ್ಲಿಕಾರ್ಜುನ ಚೆಲುವ ಗಂಡನೆನಗೆ
ಈ ಸಾವ ಕೆಡುವ ಗಂಡರನೊಯ್ದು [ಒಲೆಯೊಳಗಿಕ್ಕು ತಾಯೆ]
೨೮೪.
ಅಯ್ಯ, ಪರಾತ್ಪರ ಸತ್ಯಸದಾಚಾರ ಗುರುಲಿಂಗ-
ಜಂಗಮದ ಶ್ರೀಚರಣವನ್ನು
ಹಿಂದೆ ಹೇಳದ ಅಚ್ಚಪ್ರಸಾದಿಯೋಪಾದಿಯಲ್ಲಿ
ನಿರ್ವಂಚಕತ್ವದಿಂದ
ಗುರುಲಿಂಗಜಂಗಮಕ್ಕೆ ಅರ್ಥಪ್ರಾಣಾಭಿಮಾನವ ಸಮರ್ಪಿಸಿ
ಒಪ್ಪೊತ್ತು ಅಷ್ಟವಿಧಾರ್ಚನೆಯ ಷೋಡಶೋಪಚಾರದಿಂದ
ಪಾದಾರ್ಚನೆಯ ಮಾಡಿ
ಪಾದೋದಕ ಪ್ರಸಾದವನ್ನು ತನ್ನ ಸರ್ವಾಂಗದಲ್ಲಿ ನೆಲೆಸಿರ್ಪ
ಇಷ್ಟ ಮಹಾಲಿಂಗದೇವನ ತ್ರಿವಿಧ ಸ್ಥಾನದಲ್ಲಿ
ಬಸವಣ್ಣ-ಚೆನ್ನಬಸವಣ್ಣ-ಅಲ್ಲಮ[+ಹಾ?]ಪ್ರಭು
ಎಂಬ ತ್ರಿವಿಧನಾಮಸ್ವರೂಪವಾದ
ಷೋಡಶಾಕ್ಷರಂಗಳೇ ಷೋಡಶವರ್ಣವಾಗಿ
ನೆಲಸಿರ್ಪರು ನೋಡಾ!
ಇಂತು ಷೋಡಶಕಲಾಸ್ವರೂಪವಾದ ಚಿದ್ರನ ಮಹಾಲಿಂಗದೇವನ
ನಿರಂಜನ ಜಂಗಮದೋಪಾದಿಯಲ್ಲಿ
ಸುಗುಣ-ನಿರ್ಗುಣ ಪೂಜೆಗಳ ಮಾಡಿ
ಜಂಗಮಚರಣ ಸೋಂಕಿನಿಂ ಬಂದ
ಗುರುಪಾದೋದಕವನಾದರೂ ಸರಿಯೆ
ಒಂದು ಭಾಜನದಲ್ಲಿ ಸೂಕ್ಷ್ಮವಾಗಿ ರಚಿಸಿ
ಆ ಉದಕದೊಳಗೆ ಹಸ್ತೋದಕ ಮಂತ್ರೋದಕವ ಮಾಡಿ
ಆಮೇಲೆ ಅನಾದಿಪ್ರಣಮವ ಪ್ರಸಾದ ಪ್ರಣಮದೊಳಗೆ
ಅಖಂಡ ಮಹಾಜ್ಯೋತಿಪ್ರಣಮವ ಲಿಖಿತವ ಮಾಡಿ
ಶ್ರದ್ಧಾದಿಯಾದ ಪೂರ್ಣಭಕ್ತಿಯಿಂದ
ಮಹಾಚಿದ್ರನತೀರ್ಥವೆಂದು ಭಾವಿಸಿ
ಪಂಚಾಕ್ಷರ ಷಡಕ್ಷರ ಮಂತ್ರಧ್ಯಾನದಿಂದ
ಆನಿಮಿಷ ದೃಷ್ಟಿಯಿಂದ ನಿರೀಕ್ಷಿಸಿ
ಮೂರು ವೇಳೆ ಪ್ರದಕ್ಷಿಣೆಯ ಮಾಡಿ
ಆ ಚಿದ್ರನತೀರ್ಥವನ್ನು
ದ್ವಾದಶದಳಕಮಲದಲ್ಲಿ ನೆಲೆಸಿರುವ ಇಷ್ಟಮಹಾಲಿಂಗಜಂಗಮಕ್ಕೆ
ಅಷ್ಟವಿಧ ಮಂತ್ರ ಸಕೀಲಂಗಳಿಂದ
ಆಚಾರಾದಿ ಶೂನ್ಯಾಂತವಾದ ಅಷ್ಟವಿಧಲಿಂಗಧ್ಯಾನದಿಂದ
ಅಷ್ಟವಿಧ ಬಂಧಂಗಳಂ ಸಮರ್ಪಿಸಿದಲ್ಲಿಗೆ
ಅಷ್ಟವಿಧೋದಕವಾಗುವುದಯ್ಯ
ಆ ಇಷ್ಟ ಮಹಾಲಿಂಗ ಜಂಗಮವೇ
ಅಷ್ಟಾದಶ ಸ್ಮರಣೆಯಿಂದ ಮುಗಿದಲ್ಲಿಗೆ
ನವಮೋದಕವಾಗುವುದಯ್ಯ
ಉಳಿದುದಕವು ತ್ರಿವಿಧೋದಕವೆನಿಸುವುದಯ್ಯ
ಹೀಗೆ ಮಹಾಜ್ಞಾನ ಲಿಂಗಜಂಗಮಸ್ವರೂಪವಾದ
ತೀರ್ಥವ ಮುಗಿದಮೇಲೆ
ತಟ್ಟೆ-ಬಟ್ಟಲಲ್ಲಿ ಎಡೆಮಾಡಬೇಕಾದರೆ
ಗೃಹದಲ್ಲಿರ್ದ ಕ್ರಿಯಾಶಕ್ತಿಯರಿಗೆ ಧಾರಣವಿದ್ದರೆ
ತಾವು ಸಲಿಸಿದ ಪಾದೋದಕಪ್ರಸಾದವ ಕೊಡುವುದಯ್ಯ
ಸಹಜಲಿಂಗಭಕ್ತರಾದರೆ ಮುಖಮಜ್ಜನವ ಮಾಡಿಸಿ
ತಾವು ಧರಿಸುವ ವಿಭೂತಿಧಾರಣವ ಮಾಡಿಸಿ
ಶಿವಶಿವಾ ಹರಹರಾ ಬಸವಲಿಂಗ ಎಂದು ಬೋಧಿಸಿ
ಎಡೆಮಾಡಿಸಿಕೊಂಬುದಯ್ಯ
ಆಮೇಲೆ-ತಾನು ಸ್ಥೂಲ[=ಸ್ವಸ್ಥಲ?]ವಾದೊಡೆ ಸಂಬಂಧವಿಟ್ಟು
ಪರಸ್ಥಲವಾದೊಡೆ ಚಿದ್ರನ ಇಷ್ಟಮಹಾಲಿಂಗ-ಜಂಗಮನ
ಕರಸ್ಥಲದಲ್ಲಿ ಮೂರ್ತವ ಮಾಡಿಸಿಕೊಂಡು
ದಕ್ಷಿಣಹಸ್ತದಲ್ಲಿ ಗುರು-ಲಿಂಗ-ಜಂಗಮಸೂತ್ರವಿಡಿದು
ಬಂದ ಕ್ರಿಯಾಭಸಿತವ ಲೇಪಿಸಿ
ಮೂಲಪ್ರಮಾಣವ ಪ್ರಸಾದಪ್ರಣವದೊಳಗೆ
ಗೋಳಕಪ್ರಣವ-ಅಖಂಡಗೋಳಕಪ್ರಣವ-
ಜ್ಯೋತಿಪ್ರಣವ ಧ್ಯಾನದಿಂದ
ದ್ವಾದಶಮಣಿಯ ಧ್ಯಾನಿಸಿ
ಪ್ರದಕ್ಷಿಣವ ಮಾಡಿ
ಮೂಲಮೂರ್ತಿ ಲಿಂಗಜಂಗಮದ ಮಸ್ತಕದ ಮೇಲೆ ಸ್ಪರ್ಶನವ ಮಾಡಿ
ಬಟ್ಟಲಿಗೆ ಮೂರು ವೇಳೆ ಸ್ಪರ್ಶನವ ಮಾಡಿ
ಪದಾರ್ಥದ ಪೂರ್ವಾಶ್ರಯವ ಕಳೆದು
ಶುದ್ಧಪ್ರಸಾದವೆಂದು ಭಾವಿಸಿ
ಇಷ್ಟಮಹಾಲಿಂಗ-ಜಂಗಮಕ್ಕೆ
ಅಷ್ಟಾದಶಸ್ಮರಣೆಯಿಂದ ಮೂರು ವೇಳೆ ರೂಪನರ್ಪಿಸಿ
ಎರಡು ವೇಳೆ ರೂಪವ ತೋರಿ
ಸುರುಚಿ ಪ್ರಾಣಲಿಂಗ ಮಂತ್ರಜಿಹ್ವೆಯಲ್ಲಿಟ್ಟು
ಆರನೆಯ ವೇಳೆ ಭೋಜನವ
ಇಷ್ಟಮಹಾಲಿಂಗ ಮಂತ್ರಧ್ಯಾನದಿಂದ ಸಮರ್ಪಿಸಿ
ಷಡ್ವಿಧಲಿಂಗಲೋಲುಪ್ತಿಯಿಂದ ಆಚರಿಸಿದಾತನೇ
ಗುರುಭಕ್ತನಾದ ನಿಚ್ಚಪ್ರಸಾದಿ ಎಂಬೆ
ಚೆನ್ನಮಲ್ಲಿಕಾರ್ಜುನ
೨೮೫.
ಒಲ್ಲೆ ಗಂಡನ ಕೂಟ ಒಗೆತನವ
ಅಕ್ಕಟ ಗಂಡನ ಮನೆಯ ಬಿರಿಸಯ್ಯಯ್ಯೋ! ||ಪಲ್ಲವ||
ಒಡಕು ಗಂಗಳದಲ್ಲಿ ನೀರಂಬಲಿಯ ನೀಡಿ
ಹೊಡೆದಳು ನಮ್ಮತ್ತೆ ಮೊರದಲ್ಲಿ
ಕಡುದುಃಖದಿಂದ ನಾ ಒಲೆಯ ಮುಂದೆ ಕುಳಿತಿರೆ
ಕೊಡಿತನದಿ ಬಂದು ಒದ್ದಳಯ್ಯಯ್ಯೋ! ||೧||
ನೆತ್ತಿಗೆಣ್ಣೆಯಿಲ್ಲದೆ ತಲೆ ಬತ್ತಿಗಟ್ಟಿತು
ವೃತ್ತಜವ್ವನ ಬಾಡಿಹೋದವಲ್ಲ!
ಅತ್ತೆಯಾಸೆಯಿಲ್ಲ ಮಾವನ ಲೇಸಿಲ್ಲ
ಚಿತ್ತವಲ್ಲಭನಲ್ಲಿ ಗಣವಿಲ್ಲವಯ್ಯಯ್ಯೋ! ||೨||
ಹೇಳಿ ಕಳುಹುವೆ ನಾನವ್ವೆಗಳೂರಿಗೆ
ಕೇಳಯ್ಯ ಶ್ರೀಶೈಲ ಮಲ್ಲಿಕಾರ್ಜುನ
ಭಾಳಪಾಪಿಗಳಲ್ಲಿ ಕೊಟ್ಟರಯ್ಯಯ್ಯೋ! ||೩||
೨೮೬.
ಆಪತ್ತಿಗೊಳಗಾದೆನಮ್ಮಯ್ಯ, ನಾ
ನಾಪತ್ತಿಗೊಳಗಾದೆ ||ಪಲ್ಲವ||
ಪಡುವಣ ದೇಶದಿ ಹುಟ್ಟಿದೆನಮ್ಮ
ಬಡಗಣ ದೇಶದಿ ಬೆಳೆದೆ
ಆಗರದ ನಾಡಿಗೆ ಇತ್ತರೆನ್ನನು
ದೂರದ ನೀರ ನಾ ಹೊರಲಾರೆನಮ್ಮ ||೧||
ಕೂಳಿಲ್ಲ ಹೊಟ್ತೆಗೆ, ತಲೆ ಬತ್ತಿಗಟ್ಟಿತು
ಬಲ್ಮೊಲೆಗಳು ಬತ್ತಿ ಬಡವಾದೆ
ಒಲ್ಲದ ಗಂಡನ ಒಲಿಸಿಹೆನೆಂದಡೆ
ಬಲ್ಲವರೊಂದು ಮದ್ದ ಹೇಳಿರಮ್ಮ ||೨||
ಆರೂ ಬಾರದ ತವರೂರ ದಾರಿಯಲಿ
ಬಾರದ ಭವದಲಿ ಬಂದೆನು
ಊರ ಕಡೆಗೆ ನೋಡಿ ಕಣ್ಣೆಲ್ಲ ಕೆಟ್ಟವು
ನೀರ ಹೊಳೆಗೆ ಹೋಗಿ ಅತ್ತೆನಮ್ಮ ||೩||
ಅತ್ತೆಯ ಲೇಸುಂಟೆ? ಮಾವನ ಲೇಸುಂಟೆ?
ಗಂಡನ ಲೇಸುಂಟೆಂಬುದನರಿಯೆ
ಆಸತ್ತು ಬೇಸತ್ತು ಒಲೆಯ ಮುಂದೆ ಕುಳಿತರೆ
ಪಾಪಿ ಗಂಡ ಕಾಲೊಳೊದ್ದನಮ್ಮ ||೪||
ಉನ್ನತ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನಿನ್ನ ನಂಬಿದ ಭಕ್ತೆ ನಾನೆಯಲ್ಲಾ!
ಮುನ್ನಿನ ಶರಣರ ಸಲಹಿದಂದದಿ ಬೇಗ
ಎನ್ನ ಸಲಹೊ ದೇವರ ದೇವ ||೫||
೨೮೭.
ಏನೇನೆಂಬೆ ಎನ್ನೊಗೆತನವ ಅಭಿ-
ಮಾನಭಂಗವ ಮಾಡಿದ ಮನೆಯಾತ ||ಪಲ್ಲವ||
ಒಡಕು ಮಡಕೆಯೊಳುದಕವ ತುಂಬಿಟ್ಟು
ಹುಡುಕಿ ತಂದೆನು ನಾನೊಮ್ಮ ನವ
ಅಡುಗೆಯ ಮಾಡುವಾಗಳುವ ಮಕ್ಕಳ ಕಾಟ
ಬಿಡದೆ ಮನೆಯಾತನ ಬಿರುನುಡಿ ಘನವಮ್ಮ ||೧||
ಮೊಸರ ಕಡೆದು ಬೆಣ್ಣೆಯ ನೆಲುವಿನ ಮೇಲಿಕ್ಕಿ
ಶಿಶುವಿಗೆ ನಾ ಮೊಲೆಯ ಕೊಡುತಿರಲು
ಅಸಿಯ ಕಲ್ಲಿನ ಮೇಲೆ ಮಸಿಯನರೆದು ಚೆಲ್ಲಿ
ಹಸಿಯ ಬೆಣ್ಣೆಯ ತಿಂಬ ಹಂಡಿಗತನವ ||೨||
ಉಟ್ಟುದ ಸೆಳೆಕೊಂಡೊಂದರುವೆಯನೆ ಕೊಟ್ಟು
ಹುಟ್ಟು ಮುರಿದು ಬಟ್ಟಬಯಲನಿತ್ತ
ಸೃಷ್ಟಿಗೆ ಶ್ರೀಶೈಲ ಚೆನ್ನಮಲ್ಲಿಕಾರ್ಜುನ,
ಬಿಟ್ಟಿಯಿಂದಲಿ ಕಟಕವ ಕಂಡ ತರನು ||೩||
೨೮೮.
ಕರಕರೆ ಕರಕನೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||
೨೮೯.
ಎಲ್ಲ ಎಲ್ಲವನರಿದು ಫಲವೇನು
ಮತ್ತೆ ಎಲ್ಲ ಎಲ್ಲವನರಿದು ಫಲವೇನು?
ತನ್ನ ತಾನರಿಯದನ್ನಕ್ಕ?
ತನ್ನರಿವು ಕರಿಗೊಂಡ ಬಳಿಕ ಇದಿರಿಟ್ಟು ಕೇಳಲುಂಟ?
ನಿಮ್ಮರಿವು ತಲೆದೋರಿದ ಕಾರಣ
ನನ್ನ ನಾನರಿದೆ ಚೆನ್ನಮಲ್ಲಿಕಾರ್ಜುನ
೨೯೦.
ಅಯ್ಯ, ನಿಮ್ಮ ಮುಟ್ಟಿ ಮುಟ್ಟದೆನ್ನ ಮನ ನೊಡಾ!
ಬಿಚ್ಚಿ ಬೀಸರವಾಯಿತ್ತೆನ್ನ ಮನ
ಹೊಳಲ ಸುಂಕಿಗನಂತೆ ಹೊದಕುಳಿಗೊಂಡಿತ್ತೆನ್ನ ಮನ
ಎರಡೆಂಬುದ ಮರೆದು ಬರಡಾಗದೆನ್ನ ಮನ
ನೀನು ಆನಪ್ಪ ಪರಿಯೆಂತು ಹೇಳಾ ಚೆನ್ನಮಲ್ಲಿಕಾರ್ಜುನ
೨೯೧.
ಹುಟ್ಟು-ಹೊರೆಯ ಕಟ್ಟಳೆಯ ಕಳೆದನವ್ವ
ಹೊನ್ನು-ಮಣ್ಣಿನ ಮಾಯೆಯ ಮಾಣಿಸಿದನವ್ವ
ಎನ್ನ ತನುವಿನ ಲಜ್ಜೆಯನಿಳುಹಿ
ಎನ್ನ ಮನದ ಕತ್ತಲೆಯ ಕಳೆದ
ಚೆನ್ನಮಲ್ಲಿಕಾರ್ಜುನಯ್ಯನ
ಒಳಗಾದವಳನೇನೆಂದು ನುಡಿಯಿಸುವಿರವ್ವ
೨೯೨.
ಕಾಯದ ಕಳವಳವ ಕೆಡಿಸಿ
ಮನದ ಮಾಯೆಯ ಮಾಣಿಸಿ
ಎನ್ನ ಹರಣವ ಮೇಲೆತ್ತಿ ಸಲಹಿದೆಯಯ್ಯ
ಶಿವಶಿವಾ ಎನ್ನ ಬಂಧನವ ಬಿಡಿಸಿ
ನಿಮ್ಮತ್ತ ತೋರಿದ ಘನವನುಪಮಿಸಬಾರದಯ್ಯ
ಇರುಳೋಸರಿಸದ ಜಕ್ಕವಕ್ಕಿಯಂತೆ ನಾನಿಂದು
ನಿಮ್ಮ ಶ್ರೀಪಾದವನಿಂಬುಗೊಂಡು
ಸುಖದೊಳಗೋಲಾಡುವೆನಯ್ಯ ಚೆನ್ನಮಲ್ಲಿಕಾರ್ಜುನ
೨೯೩.
ಅಯ್ಯ, ನೀನೆನ್ನ ಮೊರೆಯನಾಲಿಸಿದೊಡಾಲಿಸು
ಆಲಿಸದಿರ್ದೊಡೆ ಮಾಣು
ಅಯ್ಯ, ನೀನೆನ್ನ ದುಃಖವ ನೋಡಿದೊಡೆ ನೋಡು
ನೋಡದಿರ್ದೊಡೆ ಮಾಣು
ಎನಗಿದು ವಿಧಿಯೆ?!
ನೀನೊಲ್ಲದೊಡೆ ನಾನೊಲಿಸುವ ಪರಿಯೆಂತಯ್ಯ?
ಮಾನವಳಿಸಿ ಮಾರುವೋಗಿ ಮರೆವೊಕ್ಕೊಡೆ
ಕೊಂಬ ಪರಿಯೆಂತಯ್ಯ ಚೆನ್ನಮಲ್ಲಿಕಾರ್ಜುನ
೨೯೪.
ಮುಡಿ ಬಿಟ್ಟು ಮೊಗ ಬಾಡಿ ತನು ಕರಗಿದವಳ
ಎನ್ನನೇಕೆ ನುಡಿಸುವಿರಿ ಎಲೆ ಅಣ್ಣಗಳಿರಾ?
ಎನ್ನನೇಕೆ ಕಾಡುವಿರಿ ಎಲೆ ತಂದೆಗಳಿರಾ?
ಬಲುಹಳಿದು, ಭವಗೆಟ್ಟು ಛಲವಳಿದು
ಭಕ್ತೆಯಾಗಿ ಚೆನ್ನಮಲ್ಲಿಕಾರ್ಜುನನ ಕೂಡಿ ಕುಲವಳಿದವಳ
೨೯೫.
ಬಟ್ಟಿಹ ಮೊಲೆಯ, ಭರದ ಜವ್ವನವ
ಚೆಲುವ ಕಂಡು ಬಂದಿರಣ್ಣಾ
ಅಣ್ಣಾ, ನಾನು ಹೆಂಗೂಸಲ್ಲ
ಅಣ್ಣ, ನಾನು ಸೂಳೆಯಲ್ಲ
ಅಣ್ಣಾ, ಮತ್ತೆ ನನ್ನ ಕಂಡು ಕಂಡು
ಆರೆಂದು ಬಂದಿರಣ್ಣ?
ಚೆನ್ನಮಲ್ಲಿಕಾರ್ಜುನನಲ್ಲದ ಮಿಕ್ಕಿದ ಪುರುಷನು
ನಮಗಾಗದ ಮೋರೆ ನೋಡಣ್ಣ
೨೯೬.
ಎಲೆ ಅಣ್ಣಾ, ಎಲೆ ಅಣ್ಣಾ, ನೀವು ಮರುಳಲ್ಲ
ಅಣ್ಣಾ, ಎನ್ನ ನಿನ್ನಳವೆ?
ಹದಿನಾಲ್ಕು ಲೋಕವ ನುಂಗಿದ
ಕಾಮನ ಬಾಣದ ಗುಣ ಎನ್ನನಿನ್ನಳವೆ?
ವಾರುವ ಮುಗ್ಗಿದೊಡೆ [ಮಿಣಿ ಹರಿಯ] ಹೊಯ್ವರೆ?
ಮುಗ್ಗಿದ ಭಂಗವ ಮುಂದೆ ರಣದಲ್ಲಿ ತಿಳಿವುದು
ನಿನ್ನ ನೀ ಸಂಹರಿಸಿ ಕೈದುವ ಕೊಳ್ಳಿರಣ್ಣ
ಚೆನ್ನಮಲ್ಲಿಕಾರ್ಜುನನೆಂಬ ಹಗೆಗೆ ಬೆಂಗೊಡದಿರಣ್ಣ
೨೯೭.
ಒಬ್ಬಂಗೆ ಇಹವುಂಟು, ಒಬ್ಬಂಗೆ ಪರವುಂಟು
ಒಬ್ಬಂಗೆ ಇಹಪರವೆರಡೂ ಇಲ್ಲ
ಚೆನ್ನಮಲ್ಲಿಕಾರ್ಜುನದೇವರ ಶರಣರಿಗೆ
ಇಹಪರವೆರಡೂ ಉಂಟು
೨೯೮.
ಆಕಾರವಲ್ಲದ ನಿರಾಕಾರಲಿಂಗವ ಕೈಯಲ್ಲಿ ಹಿಡಿದು
ಕೊರಳಲ್ಲಿ ಕಟ್ಟಿದೆವೆಂಬರು ನರಕಜೀವಿಗಳು
ಹರಿಬ್ರಹ್ಮರು, ವೇದಶಾಸ್ತ್ರಂಗಳು ಅರಸಿ ಕಾಣದ ಲಿಂಗ
ಭಕ್ತಿಗೆ ಫಲಪದಂಗಳಲ್ಲದೆ ಲಿಂಗವಿಲ್ಲ
ಕರ್ಮಕ್ಕೆ ನರಕ[ನಾಕ?]ವಲ್ಲದೆ ಲಿಂಗವಿಲ್ಲ
ವೈರಾಗ್ಯಕ್ಕೆ ಮುಕ್ತಿಯಲ್ಲದೆ ಲಿಂಗವಿಲ್ಲ
ಜ್ಞಾನಕ್ಕೆ ಪರಿಭ್ರಮಣವಲ್ಲದೆ ಲಿಂಗವಿಲ್ಲ
ಇದುಕಾರಣ; ಅದ್ವೈತದಿಂದ ತನ್ನ ತಾನರಿದು ತಾನಾದರೆ
ಚೆನ್ನಮಲ್ಲಿಕಾರ್ಜುನಲಿಂಗ ತಾನೆ ಬೇರಿಲ್ಲ
೨೯೯.
ಕಂಗಳ ಕಳೆದು, ಕರುಳುಗಳ ಕಿತ್ತು
ಕಾಮದ ಮೂಗ ಕೊಯ್ದು
ಭಂಗದ ಬಟ್ಟೆಯ ಭವ ಗೆಲಿಯದಳಿಗಂಗವೆಲ್ಲಿಯದು ಹೇಳಾ!
ಶೃಂಗಾರವೆಂಬ ಹಂಚಿಗೆ ಹಲ್ಲ ತೆರೆದರೇನುಂಟು
ಅಂಗವೆ ಲಿಂಗವಹ ಪರಿಯೆನಗೆ ಹೇಳಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೦.
ಮೊಲೆ-ಮುಡಿಯಿದ್ದರೇನು
ಮೂಗಿಲ್ಲದವಳಿಂಗೆ?
ತಲೆಯ ಮೇಲೆ ಸೆರಗೇತಕ್ಕೆ
ಸಹಜಸಂಕಲ್ಪವಿಲ್ಲದವಳಿಂಗೆ?
ಜಲದೊಳಗೆ ಹುಟ್ಟಿಗುಳೆ[ಗುಳ್ಳೆ?]
ಜಾತಿಸ್ಮರತ್ವವರಿದಿತ್ತು
ಹಲವರ ಹಾದಿಯೊಳು
ಹರಿಸುರರು ನಿಮ್ಮ ನೆಲೆಯಂ ತೋರಿದೆ [ತೋರರೇ?]
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೧.
ಕಾಮನ ತಲೆಯ ಕೊರೆದು, ಕಾಲನ ಕಣ್ಣ ಕಳೆದು
ಸೋಮಸೂರ್ಯರ ಹರಿದು ಹುಡಿಮಾಡಿ ತಿಂಬವಳಿಂಗೆ
ನಾಮವನಿಡಬಲ್ಲವರಾರು ಹೇಳಿರೆ!
ನೀ ಮದುವಳಿಗನಾಗಿ
ನಾ ಮದುವಳಿಗಿತಿಯಾಗಿ
ಯವನ(=ಆನಲನ?) ಕೂಡುವ ಮರುತನಂತೆ (?) ನೋಡಾ,
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೨.
ಬಸವನ ಭಕ್ತಿ ಕೊಟ್ಟಣದ ಮನೆ
ಸಿರಿಯಾಳನ ಭಕ್ತಿ ಕಸಬಗೇರಿ
ಸಿಂಧುಬಲ್ಲಾಳನ ಭಕ್ತಿ ಪರದಾರದ್ರೋಹ
ಉಳಿದಾದ[+ಟ}ಮಟ ಉದಾಸೀನ ದಾಸೋಹ
ಮಾಡುವವರ ದೈನ್ಯವೆಂಬ ಭೂತ ಸೋಂಕಿತು
ಮಣ್ಣಿನ ಮನೆಯ ಕಟ್ಟಿ
ಮಾಯಾಮೋಹಿನಿಯೆಂಬ ಮಹೇಂದ್ರಜಾಲದೊಳಗಾಗಿ
ಮಾಡುವ ಮಾಟ
ಭಕ್ತನಲ್ಲಿ ಉಂಡು ಉದ್ದಂಡ ವೃತ್ತಿಯಲ್ಲಿ
ನಡೆದವರು ಶಿವನಲ್ಲ
ಇವರು ದೇವಲೋಕ ಮರ್ತ್ಯಲೋಕಕ್ಕೆ ಹೊರಗು
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ,
ನನ್ನ ಭಕ್ತಿ ನಿನ್ನೊಳಗೈಕ್ಯವಾಯಿತಾಗಿ
ನಿರ್ವಯಲಾದೆ ಕಾಣಾ!
೩೦೩.
ಅನ್ನವ ನೀಡುವವರಿಗೆ ಧಾನ್ಯವೆ [ಶಿವ]ಲೋಕ
ಅರ್ಥವ ಕೊಡುವವರಿಂಗೆ ಪಾಷಾಣವೆ [ಶಿವ]ಲೋಕ
ಹೆಣ್ಣು-ಹೊನ್ನು-ಮಣ್ಣು ಮೂರನೂ
ಕಣ್ಣಿನಲ್ಲಿ ನೋಡಿ, ಕಿವಿಯಲಿ ಕೇಳಿ
ಕೈ[ಯಲಿ] ಮುಟ್ಟಿ ಮಾಡುವ ಭಕ್ತಿ
ಸಣ್ಣವರ ಸಮಾರಾಧನೆಯಾಯಿತು
ತನ್ನನಿತ್ತು ತುಷ್ಟಿವಡೆವರನೆನಗೆ ತೋರಾ
ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೪.
ನಿತ್ಯ ತೃಪ್ತಂಗೆ ನೈವೇದ್ಯದ ಮಜ್ಜನದ ಹಂಗೇತಕ್ಕೆ?
ಸುರಾಳ-ನಿರಾಳಂಗೆ ಮಜ್ಜನದ ಹಂಗೇತಕ್ಕೆ?
ಸ್ವಯಂಜ್ಯೋತಿರ್ಮಯಂಗೆ ದೀಪಾರಾಧನೆಯ ಹಂಗೇತಕ್ಕೆ?
ಸುವಾಸನಸೂಕ್ಷ್ಮಗಂಧಕರ್ಪೂರಗೌರಂಗೆ
ಪುಷ್ಪದ ಹಂಗೇತಕ್ಕೆ?
ಮಾಟದಲಿ ಮನನಂಬುಗೆ ಇಲ್ಲದ
ಅಹಂಕಾರಕೀಡಾದ, ಭಕ್ತಿಯೆಂಬ ಪ್ರಸಾರವನಿಕ್ಕಿ
ಹೊಲೆ ಹದಿನೆಂಟು ಜನ್ಮವ ಹೊರೆವುದರಿಂದ
ಅಂಗೈಯಲೊರಿಸಿ ಮುಕ್ತಿಯ
ಮೂಲ ಶಿಖಿರಂಧ್ರದ (?) ಕಾಮನ ಸುಟ್ಟು
ಶುದ್ಧ ಸ್ಪಟಿಕ ಸ್ವಯಂಜ್ಯೋತಿಯನು
ಸುನ್ನಾಳ[=ಸುಷುಮ್ನಾನಾಳ?]ದಿಂದ ಹರಿಕ್ಷಾಯ[=ಹಕ್ಷ?]ವೆಂಬೆರಡಕ್ಷರವ
ಸ್ವಯಾನುಭಾವ ಭಕ್ತಿನಿರ್ವಾಣವಾದ[+ವರ]ನೆನಗೊಮ್ಮೆ
ತೋರಿದೆ ಶ್ರೀಗಿರಿ ಚೆನ್ನಮಲ್ಲಿಕಾರ್ಜುನ
೩೦೫.
ಮಾಟ ಮದುವೆಯ ಮನೆ
ದಾನ-ಧರ್ಮ ಸಂತೆಯ ಪಸಾರ
ಸಾಜ ಸಾಜೇಶ್ವರಿ ಸೂಳೆಗೇರಿಯ ಸೊಬಗು
ವ್ರತನೇಮವೆಂಬುದು ವಂಚನೆಯ ಲುಬ್ಧವಾಣಿ
ಭಕ್ತಿಯೆಂ[ಬುದು?] ಬಾಜಗಾರರಾಟ
ಬಸವಣಗೆ ತರ ನಾನರಿಯದೆ ಹುಟ್ಟಿದೆ (?)
ಹುಟ್ಟಿ ಹುಸಿಗೀಡಾದೆ
ಹುಸಿ ವಿಷಯದೊಳಡಗಿತ್ತು
ವಿಷಯ ಮಸಿಮಣ್ಣಾಯಿತ್ತು
ನಿನ್ನ ಗಸಣೆಯನೊಲ್ಲೆ
ಹೋಗಾ ಚೆನ್ನಮಲ್ಲಿಕಾರ್ಜುನ
೩೦೬.
ಚಿನ್ನದ ಸಂಕೋಲೆಯಾದಡೇನು, ಬಂಧನವಲ್ಲವೆ?
ಮುತ್ತಿನ ಬಲೆಯಾದಡೇನು, ತೊಡರಲ್ಲವೆ?
ನಚ್ಚುಮಚ್ಚಿನ ಭಕ್ತಿಯಲ್ಲಿ ಸಿಕ್ಕಿಕೊಂಡಿದ್ದರೆ
ಭವ ಹಿಂಗುವುದೇ ಚೆನ್ನಮಲ್ಲಿಕಾರ್ಜುನ?
೩೦೭.
ಕುಲಗಿರಿ ಶಿಖರದ ಮೇಲೆ ಬಾಳೆ [ಬೆಳೆವುದಯ್ಯ] ಎಂದಡೆ
ಬಾಳೆ [ಬೆಳೆವುದಯ್ಯ] ಎನ್ನಬೇಕು
ಓಲೆಕಲ[=ಓಲೆಕಲ್ಲ] ನುಗ್ಗುಕುಟ್ಟಿ ಮೆಲಬಹುದಯ್ಯ ಎಂದಡೆ
ಅದು ಅತ್ಯಂತ ಮೃದು
ಮೆಲಬಹುದಯ್ಯ ಎನಬೇಕು
ಸಿಕ್ಕಿದ ಠಾವಿನಲ್ಲಿ ಉಚಿತವೆ ನುಡಿವುದೆ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ಮರ್ತ್ಯಕ್ಕೆ ಬಂದುದಕ್ಕಿದೇ ಗೆಲುವು
೩೦೮.
ಅಯ್ಯ ವಿರಕ್ತರೆಂದರೇನೋ?
ವಿರಕ್ತಿಯ ಮಾತಾಡುವರಲ್ಲದೆ,
ವಿರಕ್ತಿ ಎಲ್ಲರಿಗೆಲ್ಲಿಯದೋ?
ಕೈಯೊಳಗಣ ಓಲೆ, ಕಂಕುಳೊಳಗಣ ಸಂಪುಟ
ಬಾಯೊಳಗಣ ಮಾತು
ಪುಣ್ಯವಿಲ್ಲ; ಪಾಪವಿಲ್ಲ;
ಕರ್ಮವಿಲ್ಲ; ಧರ್ಮವಿಲ್ಲ,
ಸತ್ಯವಿಲ್ಲ, ಅಸತ್ಯವಿಲ್ಲವೆಂದು ಮಾತನಾಡುತ್ತಿಪ್ಪರು
ಅದೆಂತೆಂದಡೆ-
ಕಂಗಳ ನೋಟ ಹಿಂಗದನ್ನಕ
ಕೈಯೊಳಗಣ ಬೆರಟು ನಿಲ್ಲದನ್ನಕ
ಹೃದಯದ ಕಾಮ ಉಡುಗದೆನ್ನಕ
ವಿರಕ್ತಿಕೆ ಎಲ್ಲರಿಗೆಲ್ಲಿಯದೋ?
ಬಲ್ಲ ವಿರಕ್ತನ ಹೃದಯವು ಕಾಡೊಳಗಣ್ಣ
ಗುಂಡಿನಲ್ಲಿ ಮಾಣಿಕ್ಯದ ಪ್ರಭೆಯ ಕಂಡವರಾರೋ
[ಲಿಂಗವ] ಕಂಡಾತಂಗೆ
ಕಂಗಳಲ್ಲಿ ನೋಡಿದ ಸರ್ವವಸ್ತುಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಕರ್ಣದಲ್ಲಿ ಕೇಳಿದಾಗಮಪುರಾಣಂಗಳು ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ನಾಸಿಕದಲ್ಲಿ ಸೋಂಕಿದ ಪರಿಮಳದ್ರವ್ಯಂಗಳು ಆ ಲಿಂಗಕರ್ಪಿತ
ಆ ಲಿಂಗವ ಕಂಡಾತಂಗೆ
ಜಿಹ್ವೆಯಲ್ಲಿ ರುಚಿಸಿದ ರುಚಿಪದಾರ್ಥಂಗಳು ಆ ಲಿಂಗಕರ್ಪಿತ
ಅದೆಂತೆಂದಡೆ-
ಅಂಗವು-ಲಿಂಗವು ಏಕೀಭವಿಸಿದಡೆ
ಅವಂಗೆ ಪುಣ್ಯವಿಲ್ಲ ಪಾಪವಿಲ್ಲ
ಕರ್ಮವಿಲ್ಲ ಧರ್ಮವಿಲ್ಲ
ಅದೆಂತೆಂದಡೆ-
ಬಂದುದ ಲಿಂಗಕ್ಕೆ ಕೊಟ್ಟನಾಗಿ, ಬಾರದುದ ಬಯಸನಾಗಿ
ಆಂಗನೆಯರು ಬಂದು ಕಾಮಿತಾರ್ಥದಿಂದ ತನ್ನನಪ್ಪಿದಡೆ
ತಾ ಮಹಾಲಿಂಗವನಪ್ಪುವನಾಗಿ
ಅವಂಗೆ ಮುಖ ಬೇರಲ್ಲದೆ ಆತ್ಮನೆಲ್ಲ ಒಂದೆ
ಅದಕ್ಕೆ ಜಗವು ಪಾಪ-ಪುಣ್ಯವೆಂದು ಮಾತಾಡುತ್ತಿಪ್ಪರು
ಅದೆಂತೆಂದಡೆ;
ಶಿವಂಗೆ ತಾಯಿಲ್ಲ
ಭುವನಕ್ಕೆ ಬೆಲೆ[=ನೆಲೆ?]ಯಿಲ್ಲ
ತರು-ಗಿರಿ-ಗಹ್ವರಕ್ಕೆ ಮನೆಯಿಲ್ಲ
ಲಿಂಗವನೊಡಗೂಡಿದ ವಿರಕ್ತಂಗೆ
ಪುಣ್ಯಪಾಪವಿಲ್ಲ ಕಾಣಾ ಚೆನ್ನಮಲ್ಲಿಕಾರ್ಜುನ
೩೦೯.
ವಿರಕ್ತಿ ವಿರಕ್ತಿಯೆಂಬರು
ವಿರಕ್ತಿ ಪರಿಯೆಂತುಂಟು ಹೇಳಿರಯ್ಯ
ಕಟ್ಟದ ಲಿಂಗವ ಕೈಯಲ್ಲಿ ಹಿಡಿದಿದ್ದರೆ ವಿರಕ್ತನೆ?
ಹುಟ್ಟು ಕೆತ್ತುವ ಡೊಂಬನಂತೆ
ಬಿಟ್ಟ ಮಂಡೆಯ ಕೇಶವ ನುಣ್ಣಿಸಿ
ಎಣ್ಣೆಗಂಟ ಹಾಕಿದಡೆ ವಿರಕ್ತನೆ?
ಕಟ್ಟುಹರಿದಿಹ ಪಂಜಿನಂತೆ
ಬಿಟ್ಟ ಮಂಡೆಯ ಕಟ್ಟದಿದ್ದಡೆ ವಿರಕ್ತನೆ?
ಹರ[+ದ?]ನಂತೆ ಹೇಸಿಯಾಗಿದ್ದರೆ ವಿರಕ್ತನೆ?
ಮೂಗನಂತೆ ಮಾತಾಡದಿದ್ದರೆ ವಿರಕ್ತನೆ?
ಹೊನ್ನು-ಹೆಣ್ಣು-ಮಣ್ಣ ಬಿಟ್ಟು
ಅಡವಿ-ಅರಣ್ಯದಲ್ಲಿದ್ದರೆ ವಿರಕ್ತನೆ?
ಅಲ್ಲ!
ವಿರಕ್ತನಾ ಪರಿಯೆಂತೆಂದಡೆ-
ಒಡಲ ಹುಡಿಗುಟ್ಟಿ
ಮೃಡನೊಳು ಎಡೆದೆರಹಿಲ್ಲದಿರಬಲ್ಲಡೆ ವಿರಕ್ತನಪ್ಪ
ಅಲ್ಲದಿರ್ದಡೆ ಮೈಲಾರಿಯ ಮಲ್ಲಿಗೊರವಿತಿಯಲ್ಲವೆ
ಮಲ್ಲಿಕಾರ್ಜುನ?
೩೧೦.
ಎಮ್ಮೆಗೊಂದು ಚಿಂತೆ! ಸಮ್ಮಗಾರನಿಗೊಂದು ಚಿಂತೆ!
ನನಗೆ ನನ್ನ ಚಿಂತೆ! ತನಗೆ ತನ್ನ ಕಾಮದ ಚಿಂತೆ!
ಒಲ್ಲೆ ಹೋಗು, ಸೆರಗ ಬಿಡು ಮರುಳೆ!
ನನಗೆ ಚೆನ್ನಮಲ್ಲಿಕಾಜುನದೇವರು
ಒಲಿವನೋ ಒಲಿಯನೋ ಎಂಬ ಚಿಂತೆ!
೩೧೧.
ನಾಳೆ ಬರುವುದು ನಮಗಿಂದೇ ಬರಲಿ
ಇಂದು ಬರುವುದು ನಮಗೀಗಲೇ ಬರಲಿ
ಆಗೀಗ ಎನ್ನದಿರು ಚೆನ್ನಮಲ್ಲಿಕಾರ್ಜುನ
೩೧೨.
ಕಿಡಿಕಿಡಿ ಕಾರಿದರೆನಗೆ
ಹಸಿವು ತೃಷೆ ಅಡಗಿತ್ತೆಂಬೆ
ಸಮುದ್ರ ಮೇರೆದಪ್ಪಿದರೆ
ಎನಗೆ ಮಜ್ಜನವ ನೀಡಿದರೆಂಬೆ
ಮುಗಿಲು ಹರಿದುಬಿದ್ದರೆ
ಎನಗೆ ಪುಷ್ಪದ ಅರಳೆಂಬೆ
ಶಿರ ಹೋದರೆ ಚೆನ್ನಮಲ್ಲಿಕಾರ್ಜುನದೇವಂಗೆ
ಅರ್ಪಿತವೆಂಬೆ
೩೧೩.
ಹಿಂಡನಗಲಿ ಹಿಡಿವಡೆದ ಕುಂಜರ
ತನ್ನ ವಿಂಧ್ಯವ ನೆನೆವಂತೆ ನೆನೆವೆನೆಯ್ಯ !
ಬಂಧನಕ್ಕೆ ಬಂದ ಗಿಳಿ ತನ್ನ ಬಂಧುವ ನೆನೆವಂತೆ ನೆನೆವೆನೆಯ್ಯ !
ಕಂದ, ನೀನಿತ್ತ ಬಾ ಎಂದು
ನೀವು ನಿಮ್ಮಂದವ ತೋರಯ್ಯ ಚೆನ್ನಮಲ್ಲಿಕಾರ್ಜುನ
೩೧೪.
ಉದಯದಲೆದ್ದು ನಿಮ್ಮ ನೆನೆವೆನಯ್ಯ
ನಿಮ್ಮ ಬರವ ಹಾರುತಿರ್ಪೆನಯ್ಯ
ಹಸೆ ಹಂದರವನಿಕ್ಕಿ ನಿಮ್ಮಡಿಗಳಿಗೆಡೆಮಾಡಿಕೊಂಡಿಪ್ಪೆನಯ್ಯಾ
ಚೆನ್ನಮಲ್ಲಿಕಾರ್ಜುನ, ನೀನಾವಾಗ ಬಂದಹೆಯೆಂದು
೩೧೫.
ಗಿರಿಯಲಲ್ಲದೆ
ಹುಲುಮೊರಡಿಯಲಾಡುವುದೇ ನವಿಲು?
[ಕೊಳನನಲ್ಲದೆ] ಕಿರುವಳ್ಳಕೆಳಸುವುದೇ ಹಂಸ?
ಮಾಮರ ತಳಿತಲ್ಲದೇ ಸ್ವರಗೈಯುವುದೇ ಕೋಗಿಲೆ?
ಪರಿಮಳವಿಲ್ಲದ ಪುಷ್ಪಕೆಳಸುವುದೇ ಭ್ರಮರ?
ಎನ್ನ ಜೀವ ಚೆನ್ನಮಲ್ಲಿಕಾರ್ಜುನಗಲ್ಲದೆ
ಅನ್ಯಕೆಳಸುವುದೇ ಎನ್ನ ಮನ ಕೇಳಿರೆ ಕೇಳದಿಯರಿರಾ!
೩೧೬.
ಪಂಚೇಂದ್ರಿಯದ ಉರುವಣೆಯಹುದು
ಮದಭರದ ಜವ್ವನದೊಡಲು ವೃಥಾ ಹೋಯಿತಲ್ಲ
ತುಂಬಿ ಪರಿಮಳವನೆ ಕೊಂಡು ಲಂಬಿಸುವ ತೆರನಂತೆ
ಎನ್ನೆಂದಿಗೆ ಒಳಗೊಂಬೆಯೋ ಅಯ್ಯ ಚೆನ್ನಮಲ್ಲಿಕಾರ್ಜುನಯ್ಯ?
೩೧೭.
ಇಂದ್ರನೀಲದ ಗಿರಿಯನೇರಿಕೊಂಡು
[ಚಂದ್ರಕಾಂತದ ಶಿಲೆಯ] ಮೆಟ್ಟಿಕೊಂಡು
ಕೊಂಬ ಬಾರಿಸುತ, ಹರನೇ
ಎನ್ನ ಕುಂಭಕುಚದ ಮೇಲೆ ನಿಮ್ಮನೆಂದಪ್ಪಿಕೊಂಬೆನಯ್ಯ?
ಅಂಗಭಂಗ-ಮನಭಂಗವಳಿದು
ನಿಮ್ಮನೆಂದಿಂಗೊಮ್ಮೆ ನೆರೆವೆನೋ ಚೆನ್ನಮಲ್ಲಿಕಾರ್ಜುನ?
೩೧೮.
ತಾನು ದಂಡಮಂಡಲಕ್ಕೆ ಹೋದನೆಂದರೆ
ನಾನು ಸುಮ್ಮನಿಹೆನು
ತಾನೆನ್ನ ಕೈಯೊಳಗಿದ್ದು, ಎನ್ನ ಮನದೊಳಗಿದ್ದು
ನುಡಿಯದಿದ್ದರಾನು ಎಂತು ಸೈರಿಸುವೆನವ್ವ?
ನೇಹವೆಂಬ ಕುಂಟಣಿ
ಚೆನ್ನಮಲ್ಲಿಕಾರ್ಜುನನ ನೆರಹದಿರ್ದಡೆ
ನಾನೇವೆ ಸಖಿಯೆ?
೩೧೯.
ಬಂಜೆ ಬೇನೆಯನರಿವಳೇ?
ಬಲದಾಯಿ ಮುದ್ದ ಬಲ್ಲಳೇ?
ನೊಂದ ನೋವ ನೋಯದವರೆತ್ತ ಬಲ್ಲರು?
[ಚೆನ್ನಮಲ್ಲಿಕಾರ್ಜುನನಿರಿದಲಗು] ಒಡಲಲ್ಲಿ ಮುರಿದು
ಹೊರಳುವೆನ್ನಳಲನು ನೀವೆತ್ತ ಬಲ್ಲಿರೇ, ಎಲೆ ತಾಯಿಗಳಿರಾ!
೩೨೦.
ಅರಿಸಿನವನೆ ಮಿಂದು, ಹೊಂದೊಡಿಗೆಯನೆ ತೊಟ್ಟು
ದೇವಾಂಗವನುಟ್ಟು ಪುರುಷ ಬಾರಾ, ಪುಣ್ಯರತ್ನವೇ ನೀ ಬಾ
ನಿನ್ನ ಬರವೆನ್ನಸುವಿನ ಬರವು ಬಾರಯ್ಯ
ಚೆನ್ನಮಲ್ಲಿಕಾರ್ಜುನಯ್ಯ ಬಂದಾನೆಂದು
ಬಟ್ಟೆಗಳ ನೋಡಿ ಬಾಯಾರುತ್ತಿಹೆನು
೩೨೧.
ಕಳವಳದ ಮನವು ತಲೆಕೆಳಗಾದುದವ್ವ
ಸುಳಿದು ಬೀಸುವ ಗಾಳಿ ಉರಿಯಾಯಿತವ್ವ
ಬೆಳದಿಂಗಳು ಬಿಸಿಲಾಯಿತ್ತು ಕೆಳದಿ
ಹೊಳಲ ಸುಂಕಿಗನಂತೆ ತೊಳಲುತಿದ್ದೆನವ್ವ
ತಿಳುಹೌ ಬುದ್ಧಿಯ ಹೇಳಿ ಕರೆತಾರೆಲೆಗವ್ವ
ಚೆನ್ನಮಲ್ಲಿಕಾರ್ಜುನಂಗೆ ಎರಡರ ಮುನಿಸವ್ವ
೩೨೨.
ಇಂದೆನ್ನ ಮನೆಗೆ ಗಂಡ ಬಂದಹನೆಲೆಗವ್ವ
ನಿಮನಿಮಗೆಲ್ಲ ಶೃಂಗಾರವ ಮಾಡಿಕೊಳ್ಳಿ
ಚೆನ್ನಮಲ್ಲಿಕಾರ್ಜುನನೀಗಳೇ ಬಂದಹನು
ಇದಿರುಗೊಳ್ಳ ಬನ್ನಿರೇ ಅವ್ವಗಳಿರಾ!
೩೨೩.
ಬಂದಹನೆಂದು ಬಟ್ಟೆಯ ನೋಡಿ
ಬಾರದಿದ್ದರೆ ಕರಗಿ ಕೊರಗಿದೆನವ್ವ
ತಡವಾದರೆ ಬಡವಾದೆ ತಾಯೆ
ಚೆನ್ನಮಲ್ಲಿಕಾರ್ಜುನ ಒಂದಿರುಳಗಲಿದರೆ
ತೆಕ್ಕೆ ಸಡಿಲಿದ ಜಕ್ಕವಕ್ಕಿಯಂತಾದೆನವ್ವ
೩೨೪.
ಕೂಡಿ ಕೂಡುವ ಸುಖದಿಂದ
ಒಪ್ಪಚ್ಚಿ ಅಗಲಿ ಕೂಡುವ ಸುಖ ಲೇಸು ಕೆಳದಿ!
ಒಚ್ಚತ ಅಗಲಿರೆ, ಕಾಣದೆ ಇರಲಾರೆ,
ಎನ್ನ ದೇವ ಚೆನ್ನಮಲ್ಲಿಕಾರ್ಜುನನ ಅಗಲಿ
ಅಗಲದ ಸುಖವೆಂದಪ್ಪುದೋ!
೩೨೫.
ಉರಿಯ [ಪಳಿಯನೆ] ಉಡಿಸಿ, ಊರಿಂದ ಹೊರಗಿರಿಸಿ
ಕರೆಯಲಟ್ಟಿದ ಸಖಿಯ ನೆರೆದ ನೋಡೆಲೆಗವ್ವ
ತುರ್ಯಾವಸ್ಥೆಯಲ್ಲಿ ತೂಗಿ ತೂಗಿ ನೋಡಿ
ಕರೆ ನೊಂದೆ ನೋಡವ್ವ
ಅವಸ್ಥೆಯಿಂದ ಹಿರಿದು ದುಃಖದಲ್ಲಿ ಬೆಂದೆ
ಕರಿ ಬೆಂದು, ಗಿರಿ ಬೆಂದು
ಹೊನ್ನರಳಿಯ ಮರವನುಳಿದು
ಹಿರಿಯತನಗೆಡಿಸಿ ನೆರೆವೆನು ಚೆನ್ನಮಲ್ಲಿಕಾರ್ಜುನ
೩೨೬.
ಎರೆಯಂತೆ ಕರಕರಗಿ, ಮಳಲಂತೆ ಜರಿಜರಿದು
ಕನಸಿನಲಿ ಕಳವಳಿಸಿ ಆನು ಬೆರಗಾದೆ
ಆವಗೆಯ ಕಿಚ್ಚಿನಂತೆ ಸುಳಿಸುಳಿದು ಬೆಂದೆ
ಆಪತ್ತಿಗೆ ಸಖಿಯರ ನಾನಾರುವನು ಕಾಣೆ
ಅರಸಿ ಕಾಣದ ತನುವ, ಬೆರೆಸಿ ಕೂಡದ ಸುಖವ
ಎನಗೆ ನೀ ಕರುಣಿಸು ಚೆನ್ನಮಲ್ಲಿಕಾರ್ಜುನ
೩೨೭.
ಸಾವಿಲ್ಲದ ಸಹಜಂಗೆ, ರೂಹಿಲ್ಲದ ಚೆಲುವಂಗೆ
ಭವವಿಲ್ಲದ ಅಭವಂಗೆ, ಭಯವಿಲ್ಲದ ನಿರ್ಭಯ ಚೆಲುವಂಗೆ
ನಾನೊಲಿದೆನಯ್ಯ ಚೆನ್ನಮಲ್ಲಿಕಾರ್ಜುನ ಗಂಡನೆನಗೆ
ಮಿಕ್ಕಿದ ಲೋಕದ ಗಂಡರೆನಗೆ ಸಂಬಂಧವಿಲ್ಲವಯ್ಯ
೩೨೮.
ಅತ್ತೆ ಮಾಯೆ, ಮಾವ ಸಂಸಾರಿ
ಮೂವರು ಮೈದುನರು ಹುಲಿಯಂಥಾ ಅವದಿರು
ನಾಲುವರು ನಗೆವೆಣ್ಣು ಕೇಳು ಕೆಳದಿ
ಐವರು ಭಾವದಿರನೊಯ್ವ ದೈವವಿಲ್ಲ
ಆರು ಪ್ರಜೆಯತ್ತಿಗೆಯರ ಮೀರಲಾರೆನು ತಾಯೆ
ಹೇಳುವಡೆ ಏಳು ಪ್ರಜೆ ತೊತ್ತಿರ ಕಾವಲು
ಕರ್ಮವೆಂಬ ಗಂಡನ ಬಾಯ ಟೊಣೆದು
ಹಾದರವನಾಡುವೆನು ಹರನ ಕೂಡೆ
ಮನವೆಂಬ ಸಖಿಯ ಪ್ರಸಾದದಿಂದ
ಅನುಭಾವವ ಕಲಿತೆನು ಶಿವನೊಡನೆ
ಕರೆ ಚೆಲುವ ಶ್ರೀಶೈಲ ಚೆನ್ನಮಲ್ಲಿಕಾರ್ಜುನನ
ಸಜ್ಜನದ ಗಂಡನ ಮಾಡಿಕೊಂಬೆನು
೩೨೯.
ಕರಣ ಮೀಸಲಾಗಿ ನಿನಗರ್ಪಿತವಾಯಿತ್ತು
ಆನೊಂದರಿಯೆನಯ್ಯ
ಎನ್ನ ಗತಿ ನೀನಾಗಿ ಎನ್ನ ಮತಿ ನೀನಾಗಿ
ಪ್ರಾಣ ನಿಮಗರ್ಪಿತವಾಯಿತ್ತು
ನೀನಲ್ಲದ ಪೆರತೊಂದ ನೆನೆದೊಡೆ
ಆಣೆ, ನಿಮ್ಮಾಣೆ ಚೆನ್ನಮಲ್ಲಿಕಾರ್ಜುನ
೩೩೦.
ತನು ನಿಮ್ಮ ರೂಪಾದ ಬಳಿಕ ನಾನಾರಿಗೆ ಮಾಡುವೆ?
ಮನ ನಿಮ್ಮ ರೂಪಾದ ಬಳಿಕ ನಾನಾರ ನೆನೆವೆ?
ಪ್ರಾಣ ನಿಮ್ಮ ರೂಪಾದ ಬಳಿಕ ನಾನಾರನಾರಾಧಿಸುವೆ?
ಅರಿವು ನಿಮ್ಮಲ್ಲಿ ಸ್ವಯವಾದ ಬಳಿಕ ನಾನಾರನರಿವೆ?
ಚೆನ್ನಮಲ್ಲಿಕಾರ್ಜುನಯ್ಯ,
[ನಿಮ್ಮಿಂದ ನೀವೆಯಾಗಿ ನಿಮ್ಮನೇ ಮರೆದೆ]
೩೩೧.
ಶಿವಗಣಂಗಳ ಮನೆಯಂಗಳ
ವಾರಣಾಸಿಯೆಂಬುದು ಹುಸಿಯೇ
ಪುರಾತನರ ಮನೆಯ ಅಂಗಳದಲ್ಲಿ
ಅಷ್ಟಾಷಷ್ಟಿತೀರ್ಥಂಗಳು ನೆಲೆಸಿಪ್ಪವಾಗಿ?
ಅದೆಂತೆಂದಡೆ:
ಕೇದಾರಸ್ಯೋದಕೇ ಪೀತೇ
ವಾರಣಸ್ಯಾಂ ಮೃತೇ ಸತಿ
ಶೀಶೈಲ ಶಿಖರೇ ದೃಷ್ಟೇ
ಪುನರ್ಜನ್ಮ ನ ವಿದ್ಯತೇ
ಎಂಬ ಶಬ್ದಕ್ಕಧಿಕವು
ಸುತ್ತಿಬರಲು ಶ್ರೀಶೈಲ, ಕೆಲಬಲದಲ್ಲಿ ಕೇದಾರ
ಅಲ್ಲಿಂದ ಹೊರಗೆ ವಾರಣಾಸಿ
ವಿರಕ್ತಿ ಬೆದೆಯಾಗಿ, ಭಕ್ತಿ ಮೊಳೆಯಾಗಿ
ಎನ್ನ ದೇವ ಚೆನ್ನಮಲ್ಲಿಕಾರ್ಜುನ
ನಿಮ್ಮ ಭಕ್ತರ ಮನೆಯಂಗಳ ವಾರಣಾಸಿಯಿಂದ
ಗುಂಜಿಯಧಿಕ ನೋಡಾ!
೩೩೨.
ನಿನ್ನ ಅಂಗದಾಚಾರವ ಕಂಡು
ಎನಗೆ ಲಿಂಗಸಂಗವಾಯಿತ್ತಯ್ಯ, ಬಸವಣ್ಣ
ನಿನ್ನ ಮನದ ಸುಜ್ಞಾನವ ಕಂಡು
ಎನಗೆ ಜಂಗಮಸಂಬಂಧವಾಯಿತ್ತಯ್ಯ, ಬಸವಣ್ಣ
ನಿನ್ನ ಸದ್ಭಕ್ತಿಯ ತಿಳಿದು
ಎನಗೆ ನಿಜಸಾಧ್ಯವಾಯಿತ್ತಯ್ಯ, ಬಸವಣ್ಣ
ಚೆನ್ನಮಲ್ಲಿಕಾರ್ಜುನನ ಹೆಸರಿಟ್ಟ
ಗುರು ನೀನಾದ ಕಾರಣ
ನಾನೆಂಬುದಿಲ್ಲವಯ್ಯ ಬಸವಣ್ಣ
೩೩೩.
ಅಯ್ಯ, ನಿಮ್ಮಾನುಭಾವಿಗಳ ಸಂಗದಿಂದ
ಎನ್ನ ತನು ಶುದ್ಧವಾಯಿತ್ತು!
ಅಯ್ಯ, ನಿಮ್ಮ ಅನುಭಾವಿಗಳು
ಎನ್ನನೊರೆದೊರೆದು, ಕಡಿಕಡಿದು, ಅರೆದರೆದು
ಅನುಮಾಡಿದ ಕಾರಣ
ಎನ್ನ ಮನ ಶುದ್ಧವಾಯಿತ್ತು!
ಎನ್ನ ಸರ್ವಭೋಗಾದಿ ಭೋಗಂಗಳೆಲ್ಲ
ನಿಮ್ಮ ಶರಣರಿಗರ್ಪಿತವಾಗಿ
ಎನ್ನ ಪ್ರಾಣ ಶುದ್ಧವಾಯಿತ್ತು!
ಎನ್ನ ಸರ್ವೇಂದ್ರಿಯಗಳೆಲ್ಲವು
ನಿಮ್ಮ ಶರಣರ ಪ್ರಸಾದವ ಕೊಂಡ ಕಾರಣ
ಎನ್ನ ಸರ್ವಾಂಗ ಶುದ್ಧವಾಯಿತ್ತಯ್ಯ!
ನಿಮ್ಮ ಶರಣರಿಂತು ಎನ್ನನಾಗುಮಾಡಿದ ಕಾರಣ
ಚೆನ್ನಮಲ್ಲಿಕಾರ್ಜುನಯ್ಯ,
ನಿಮ್ಮ ಶರಣರಿಗೆ ತೊಡಿಗೆಯಾದೆನಯ್ಯ ಪ್ರಭುವೆ!
೩೩೪.
ಬಸವಣ್ಣನ ಮನೆಯ ಮಗಳಾಗಿ ಬದುಕಿದೆನಾಗಿ
ತನ್ನ ಕರುಣ ಭಕ್ತಿ ಪ್ರಸಾದವ ಕೊಟ್ಟನು
ಚೆನ್ನಬಸವಣ್ಣನ ತೊತ್ತಿನ ಮಗಳಾದ ಕಾರಣ
ಒಕ್ಕ ಪ್ರಸಾದವ ಕೊಟ್ಟನು
ಪ್ರಭುದೇವರ ತೊತ್ತಿನ ಮಗಳಾದ ಕಾರಣ
ಜ್ಞಾನಪ್ರಸಾದವ ಕೊಟ್ಟನು
ಸಿದ್ಧರಾಮಯ್ಯನ ಶಿಶುಮಗಳಾದ ಕಾರಣ
ಪ್ರಾಣಪ್ರಸಾದವ ಸಾಧಿಸಿ ಕೊಟ್ಟನು
ಮಡಿವಾಳ ಮಾಚಿ ತಂದೆಯ ಮನೆಯ ಮಗಳಾದ ಕಾರಣ
ನಿರ್ಮಳ ಪ್ರಸಾದವ ನಿಶ್ಚಯಿಸಿ ಕೊಟ್ಟನು
ಇಂತೀ ಅಸಂಖ್ಯಾತಗಣಂಗಳೆಲ್ಲರೂ ತಮ್ಮ ಕರುಣದ ಕಂದನೆಂದು
ತಲೆದಡಹಿ ರಕ್ಷಿಸಿದ ಕಾರಣ
ಚೆನ್ನಮಲ್ಲಿಕಾರ್ಜುನನ ಪಾದಕ್ಕೆ ಯೋಗ್ಯಳಾದೆನು
೩೩೫.
ತನು ಮೀಸಲಾಗೆ ಭಾವವಚ್ಚುಗೊಂಡಿಪ್ಪುವುದವ್ವ
ಅಚ್ಚುಗದ ಸ್ನೇಹ, ನಿಚ್ಚಟದ ಮೆಚ್ಚುಗೆ,
ಬೆಚ್ಚು ಬೇರಾಗದ ಭಾವವಾಗೆ
ಚೆನ್ನಮಲ್ಲಿಕಾರ್ಜುನಯ್ಯ ಒಳಗೆ ಗಟ್ಟಿಗೊಂಡನವ್ವ
೩೩೬. ಮಚ್ಚು ಅಚ್ಚುಗವಾಗಿ ಒಪ್ಪಿದ ಪರಿಯ ನೋಡಾ
ಎಚ್ಚರೆ ಗರಿದೋರದಂತೆ ನಡಬೇಕು
ಅಪ್ಪಿದರೆ ಅಸ್ಠಿಗಳು ನುಗ್ಗುನುರಿಯಾಗಬೇಕು
ಬೆಚ್ಚರೆ ಬೆಸುಗೆಯರಿಯದಂತಿರಬೇಜು
ಮಚ್ಚು ಒಪ್ಪಿತ್ತು ಚೆನ್ನಮಲ್ಲಿಕಾರ್ಜುನಯ್ಯನ ಸ್ನೇಹ
೩೩೭.
ನಡೆಯದ ನುಡಿಗಡಣ, ಮಾಡದ ಕಲಿತನ
ಚಿತ್ರದ ಸತಿಯ ಶೃಂಗಾರವದೇತಕ್ಕೆ ಪ್ರಯೋಜನ?
ಎಲೆಯಿಲ್ಲದ ಮರನು, ಜಲವಿಲ್ಲದ ನದಿಯು,
ಗುಣಿಯಲ್ಲದವಗುಣಿಯ ಸಂಗವದೇತಕ್ಕೆ ಪ್ರಯೋಜನ?
ದಯವಿಲ್ಲದ ಧರ್ಮವು, ಭಯವಿಲ್ಲದ ಭಕ್ತಿಯು,
ನಯವಿಲ್ಲದ ಶಬ್ದವದೇತಕ್ಕೆ ಪ್ರಯೋಜನ?
ಎನ್ನ ದೇವ ಚೆನ್ನಮಲ್ಲಿಕಾರ್ಜುನ, ಲಿಂಗೈಕ್ಯವು
ಪ್ರಾಣಗುಣವರಿಯದವರ ಕೂಡೆ ಪ್ರಸಂಗವೇತಕ್ಕೆ?
೩೩೮.
ಪ್ರಾಣ ಹೊಲಮೇರೆಯಲ್ಲಿ ಪ್ರಾಣ ಸತ್ತುದ ಕಂಡೆ
ದೇವದಾನವಮಾನವರೆಲ್ಲಾ ಜೋಳವಾಳಿಯಲೈದಾರೆ
ಜಾಣ ಕಲುಕುಟಿಕನನಗಲದೆ ಹೂವನೆ ಕೊಯ್ದು
ಕಲಿಯುಗ ಕರಸ್ಥಲದೇವಪೂಜೆ ಘನ
ಮೇರುವಿನ ಕುದುರೆ ನಲಿದಾಡಲದು
ಭೂತರಾಜ ರಾಜರಂಗಳಿಗಳ[?] ಜಗಳ ಮೇಳಾವ
ಮರುಪತ್ತದ ಮಾತು ನಗೆ ಹಗರಣ
ಕ್ಷೀರಸಾಗರದಲ್ಲಿ ದಾರಿಯಳವಡದಯ್ಯ
ನೀ ಹೇಳಬೇಕು ಭಕ್ತರೆಂತಪ್ಪರೋ
ಪಂಚವರ್ಣದ ಬಣ್ಣ ಸಂಧೆವರದಾಟವು[?]
ಚೆನ್ನಮಲ್ಲಿಕಾರ್ಜುನಯ್ಯ,
ತ್ರಿಭುವನದ ಹೆಂಡಿರ ನೀರ ಹೊಳೆಯಲ್ಲಿರಿಸಿತ್ತು
೩೩೯.
ಹಸಿದ ಹಸುಳೆಗೆರೆದೆಯಾಹ
ವಿಷವ, ರಾಜಹಂಸೆಗುಕ್ಕು
ರಸವನೀಂಟಿಸಿದೆ, ಮಹೇಶ, ನೋಳ್ಪ ಕಣ್ಣೊಳು
ಕಸವ ಕವಿದೆ, ಕರ್ಣಗಳಿಗೆ
ದಸಿಯ ಬಡಿದೆ; ಕರುಣವಿಲ್ಲ-
ದಸಮಪಾತಕವನು ಎನಗೆ ಕೇಳಿಸಿಂದು ನೀ ||೧||
ಹರನೆ, ಕಣ್ಣೊಳುರಿಯನ್ನಿಟ್ಟ
ದುರುಳ, ನಂಜುಗೊರಲ, ಸರ್ಪ
ಧರ ತ್ರಿಶೂಲಿ! ನಿನ್ನ ನಂಬಿದವರನಸಿಯೊಳು
ಅರೆದು ಸಣ್ಣಿಸುವುದೆ ನಿನ್ನ
ಕರುಣವಲ್ಲದದೆಲ್ಲರಂತೆ
ಕರುಣಿಯೆಂಬ ಮರುಳನಾವ ?! ಮಗನ ಕೊಲಿಸಿರೇ? ||೨||
ಯತಿಯ ರಸಿಕನೆನಿಸಿ, ಪತಿ-
ವ್ರತೆಯ ಸಿತಗೆಯೆನಿಸಿ, ದಿವ್ಯ-
ಮತಿಗೆ ಸಟೆಯ ಬಿತ್ತಿ, ದಾನಿ-
ಗತಿದರಿದ್ರದೆಡರನೀವ
ಮತವೆ ನಿನ್ನದುತ್ತಮಿಕೆಯ ನೆರೆವ ತಪ್ಪೆಯ? ||೩||
ಅರಗಿಲೆರೆದ ಬೊಂಬೆಗುರಿಯ
ಭರಣವನ್ನು ತೊಡಿಸಲಹುದೆ?!
ಹರನೆ ನಿನ್ನ ಸ್ತೋತ್ರವಲ್ಲದನ್ಯವರಿಯದ
ತರಳೆಯೆನ್ನ ಕಿವಿಯೊಳೆನ್ನ
ಪುರುಷವಚನವನ್ನು ತುಂಬೆ
ಕರುಣವಿಲ್ಲಲಾ ಕಪರ್ದಿ... ||೪||
ಗಂಡನುಳ್ಳ ಹೆಣ್ಣನಾವ
ಗಂಡು ಬಯಸಿ ಕೇಳ್ದಡವನ
ತುಂಡುಗಡಿಯದಿಹನೆಯವಳ ಗಂಡನೆನ್ನಯ
ಗಂಡ ನೀನಿರಲ್ಕೆ ಕೇಳ್ದೊ
ಡಂಡುಗೊಂಡು ಸುಮ್ಮನಿಹೆ! ಶಿ-
ಖಂಡಿಯೆಂಬ ನಾಮ ಸಾಮ್ಯವಾದುದಿಂದಲಿ ||೫||
೩೪೦.
ಪತಿಯೆ ಗತಿಯೆನಿಪ್ಪ ಸತಿಗೆ
ಪತಿವ್ರತಾಭಿಧಾನ ಸೆಲ್ವು
ದಿತರ ಪತಿಯ ರತಿಯೊಳಿರ್ಪ ಸತಿಯ ಕ್ಷಿತಿಯೊಳು
ಸಿತಗೆಯೆನ್ನದಿಹರೆ? ದಿಟದ
ಪತಿಯದೊರ್ವ, ಸತಿಗೆ ಸಟೆಯ
ಪತಿಯದೊರ್ವನುಂಟೆ ತಳರಿ ತಳುವದೆ?!
೩೪೧.
ಮದನನೆಸುಗೆಯಿಂದ ಮುನ್ನ ಚೆನ್ನಮಲ್ಲನ
ಮದನಗಿತ್ತಿಯಾದೆ! ಮಿಕ್ಕಿ
ನಧಮರೇತಕವ್ವಗಳಿರ?
ಮದುವೆಯಹರೆ ಮಗುಳೆ ಕಂಡ ಕಂಡ ಗಂಡರ? ||೧||
ಸಾವು ಸಂಕಟಳಿವುಪಳಿವು
ನೋವು ದುಃಖ ದುರಿತರಕ್ತ
ಮಾವುಸಸ್ಠಿ ಬಾಲಜಾಡ್ಯ ಜರೆ ರುಜಾನಿಶಂ
ಬೇವಸಂಗಳಿಲ್ಲದುರೆ ಸ-
ದಾ ವಯಸ್ಸಿನಿಂದಲೆಸವ
ಕೋವಿದಂಗೆ ಪೆತ್ತರಿತ್ತರೆನ್ನ ||೨||
ಮಾತೆ ಮುಕುತಿದೆರಹನಾಂತು,
ರೀತಿಗೊಲ್ಲು ತಂದೆ, ಬಂಧು-
ವ್ರಾತವವನ ಕುಲವನೊಪ್ಪಿ ಕೊಟ್ಟರೆನ್ನನು
ಆತಗೊಲ್ಲು ಮದುವೆಯಾದೆ
ನಾ ತಳೋದರಿಯರಿರೆಲೆಲೆ
ಆತನರಸುತನದ ಘನದ ಬಿನದವೆಂತೆನೆ ||೩||
ಆಳುವವನಿಯವನಿಗಿದೀ
ರೇಳು ಲೋಕ, ದುರ್ಗ-ರಜತ
ಶೈಳ, ಹರಿವಿರಿಂಚಿ ಸುರಪ ಮುಖವಜೀರರು,
ಆಳು ದುನುಜ ಮನುಜ ದಿವಿಜ
ವ್ಯಾಳರುಗ್ಘಡಿಸುವ ಭಟ್ಟ
ಜಾಳಿ ಚಂಡಕೀರ್ತಿಗಳ್, ಪ್ರಧಾನಿ ಸುರಗುರು ||೪||
ಮಿತ್ರ ಧನದರಾಪ್ತರೇ
ಮಿತ್ರ ಗಾತ್ರ ಪ್ರಮಥರತಿ ಕ-
ಳತ್ರವೇ ಭವಾನಿ, ರಾಜವಾಜಿ ನಿಗಮವು
ಪತ್ರಿರಥ-ಗಣೇಶರೆಸೆವ
ಪುತ್ರರಧಿಕಶೈವಧರ್ಮ
ಗಾತ್ರ ಲಿಂಗವೀವನಾವ ಪದವನೆಳಸಲು ||೫||
ದಶಭುಜಂಗಳೈದು ವಕ್ತ್ರ
ವಸವವಖಿಳ ಕಕುಭ, ಮುಡಿವ
ಕುಸುಮ ತಾರೆ, ತುಂಬುರಾದಿಗಳ್ ಸುಗಾಯಕರ್,
ಎಸೆವ ಜಗದ ವಾರ್ತೆಗಳನು
ಬೆಸಸುವಾತ ನಾರದ ಶ್ರಿ-
ದಶವಧೂಕದಂಬ ಓಲಯಿಸುವರಾತನ ||೬||
ಹಸನಿಸುವನೆ ಭೃಂಗಿಯೂರು-
ವಸಿ ತಿಲೋತ್ತಮಾದಿ ದಿವಿಜ
ಕುಸುಮಗಂಧಿನಿಯರೆ ನಚ್ಚಣಿಯರು, ಪಿಡಿವಡೆ
ತಿಸುಳ ಸಬಳ, ಚಾಪ ತ್ರಿದಶ
ರೆಸವ ನಿಳಯ, ನಾರಿ ಭುಜಗ,
ವಿಶಿಖ ವಿಷ್ಣುವಿಂದು ಭಾಸ್ಕರಾಗ್ನಿ ನೇತ್ರವೂ ||೭||
ಮಲೆವ ಕಾಲ ಕಾಮದನುಜ
ಕುಲವನಟ್ಟಿ ಕುಟ್ಟಿ ಭಕ್ತ
ರೊಲವನೀವ ಸಕಲದೇವ ಚಕ್ರವರ್ತಿಗೆ
ಒಳಿದೆನೊಲಿವೆನೆಂತು ಪೇಳಿ
ರೆಲೆಲೆಯಕ್ಕಗಳಿರ ಬದ್ಧ
ಮಲಮಯಾಂಗಿಯಾದ ಹೀನಮಾನಸಾತ್ಮಗೆ? ||೮||
ಗಿರಿಯ ತೊರೆದು ಬಱಿ ಪುಲ್ಲ
ಮೊರಡಿಗೆಳಸಿ ಬಹುದೆ? ಅಂಚೆ
ಸರಸಿಯನ್ನು ಸಡಿಲಿ ಪಲ್ವಲಕ್ಕೆ ಪಾಯ್ವುದೇ?
ಎರಪದೇ ಪರಾಗವಿಲ್ಲ-
ದರಳಿಗಲಿ? ಮಹೇಶಗೊಲ್ದು
ನರಕಿಗೊಲಿಯ ಬಲ್ಲುದೇ ಮದೀಯ ಚಿತ್ತವು? ||೯||
ಮೇರುಗಿರಿಯಿರಲ್ಕೆ ರಜವ[=ಜರಗ?]
ತೂರಲೇಕೆ? ಕ್ಷ್ರೀರವಾರ್ಧಿ
ಸಾರಿರಲ್ಕೆ [ಓರೆಪಶುವದೇಕೆ]? ತತ್ತದ
ದಾರಿಗಳಲಲೇಕೆ ಗುರುವ
ಸಾರಿ ಸುಪ್ರಸಿದ್ಧವಿದ್ದು?
ಹಾರಲೇಕೆ ಪದವೆ ಲಿಂಗ ಕರದೊಳಿರುತಿರೆ? ||೧೦||
ಆವ ಚಿಂತೆಯೇಕೆ ಮನದ
ದಾವತಿಯನು ತೀರ್ಚುವೆನ್ನ
ಜೀವದೆರೆಯ ಚೆನ್ನಮಲ್ಲಿಕಾರ್ಜುನಯ್ಯನ
ಭಾವೆಯಾನು! ಬಳಿಕ ನರಕಿ
ಜೀವಿಗೆನ್ನ ಕೇಳ್ದರಿನ್ನು
ನೋವಿರಿ.... ||೧೧||
೩೪೨.
ಎನಗೆ ಬಂದ ಬವರಕೇಕೆ ನಿಮಗೆ ಬಂಧನ? ||ಪಲ್ಲವ||
ಆರಿಗಿಟ್ಟ ಬಡಿಣದನ್ನ | ವಾರು ಕೊಂಬರೆನಗೆ ಬಂದ
ಮಾರಿಗಾಗಿ ಶಿವನ ಭಕ್ತರಳಲಲೆನ್ನಸು
ಹಾರುತಿದೆ-ಮದೀಯ ತನುವ | ನೂರುನುಚ್ಚುಮಾಡೆ ನಿಮಗಿ
ದೂರ ಪೇಳ್ದೊಡಾಣೆ ಚೆನ್ನಮಲ್ಲಿಕಾಜುನ ||೧||
ಇಹದೆ ಶರಣರೊಲಿಯದಲ್ಲ | ದಹುದೆ ಮುಕ್ತಿಯವರ ಭಂಗಿ
ಸಹಿತರಿಂದಲಾವ ಗತಿಯ ಪಡೆವೆನಿನಿತಕೆ
ದಹನನೇತ್ರನಿಟ್ಟ ನೆಲೆಯೊಳಿಹೆ[ನೆನ್ನುತ್ತ ಗೀತವನ್ನು
ಸಹಜಭರಿತೆ ಪಾಡಿದಳ್ ಮನೋನುರಾಗದಿ] ||೨||
ವಾತ-ವಹ್ನಿ-ಸಲಿಲ-ಸುರ | ಭೂತಳಾದಿ ತತ್ವವನಿಶ
ರೀತಿದಪ್ಪದಿಪ್ಪವಯ್ಯ ನಿನನುಜ್ಞೆಯ-
ನಾತು; ಮಿಕ್ಕಡೆನ್ನನೊಪ್ಪ | ನಾತ ಮಲ್ಲಿನಾಥ
..................................... ||೩||
೩೪೩.
ಬೇನೆಯಿಂ ಬೇವ ಬೇವದಸದಳ ಬಲ್ಲರೆ
ಬೇನೆಯಿಲ್ಲದರಂತೆ ನೀವೆಂತರಿವಿರೆನ್ನ
ಬೇನೆಯ ಬಗೆಯವನ್ನಗಳಿರಾ ಮಚ್ಚೆನ್ನ ಮಲ್ಲೇಶನಿರಿದಲಗು ಮುರಿದ
ಬೇನೆಯಿಂ ಬೇವಳಾನೇ ಬಲ್ಲೆನೀ ನೋವು
ಬೇನೆ ಮಚ್ಚಿತ್ತದೆರೆಯನ ತಾಗದಿರದು
೩೪೪.
ವಿಷಯಸುಖ ವಿಷವೆಂದು ತಿಳಿಯದಜ್ಞಾನಿ ಬಿಡು
ವಿಷಯಸುಖ ನಿರವಯವೆಂದರಿಯದರಿಮರುಳೆ ಬಿಡು
ವಿಷಯಸುಖ ಭವದ ಬಿತ್ತೆಂದು ಭಾವಿಸದಧಮಜೀವಿ ಬಿಡು ಬಿಡು ಸೆರಗನು
ವಿಷಯದಣು ಮಾತ್ರ ಬಿಂದುಗಳಲ್ ಭೂಧರದೊ
ಲೆಸೆವುದೆಂದೋದುವಾಗಮವ ಕೇಳ್ದೆಚ್ಚರದ
ಪಶುವೆ ಕೇಳ್ದರಿಯ ವಿಷಯದೊಳು ಮುಂಗೆಟ್ಟ ನರಸುರರ ವಿಧಿಗಳ ||೧||
ಪುಲ್ಲಶರನೆಸುಗೆಗಳವಳಿದಳುಪಿದಂಗನೆಯ
ನೊಲ್ಲದೊಲ್ಲದ ಪೆಣ್ಣನೊಲಿಸುವವನತ್ಯಧಮ
ನಲ್ಲವೆ? ಪೆರತೊರ್ವಗೊಲ್ದವಳನಪ್ಪಲಳ್ತಿಯೆ ಮನಕ್ಕಾನು ಚೆನ್ನ
ಮಲ್ಲಿಕಾರ್ಜುನಗೊಲ್ದಳೆನ್ನನಪ್ಪಿದಡೆ ಕ
ಗ್ಗಲ್ಲನಪ್ಪಿದ ಮಾಳ್ಕೆಯಂತಿರದೆ ಹೋಗೆಲವೊ
ಖುಲ್ಲ ||೨||
೩೪೫.
[ತೊಡರಿ ಬಿಡದಂಡೆಲೆವ ಮಾಯೆಯ
ತೊಡಕನಾರೈದಲಿಸಿ ಗೀತವ
ತೊಡಗಿದಳ್] ಅಸಂಖ್ಯಾತಲಕ್ಷಭವಾಂಬುರಾಶಿಯೊಳು
ಕಡೆದು ಮನುಜತ್ವಂಬಡೆಯೆ ಬೆಂ-
ಬಿಡದು ನಿಮ್ಮಯ ಮಾಯೆ, ಮಾಯೆಯ
ಬಿಡುಗಡೆಗೆ ತೆರಪಿಲ್ಲಾ ಗುರುಚೆನ್ನಮಲ್ಲೇಶ ||೧||
ಒಡಲಿನೊಳ್ ಮಲಮಾಸಿನುಬ್ಬಸ
ವಡೆದುದಿಸಲಜ್ಞಾನ ರುಜೆಗಳ
ತೊಡಕು, ಕಾವನ ಕಾಟ ಜವ್ವನದೊಳ್, ಜರೆಗಶಕ್ತಿಯ
ಜಡತೆಯಲ್ಲದೆ ಜಗಕೆ ನಿಮ್ಮಡಿ
ವಿಡಿಯಲೆಲ್ಲಿಯ ಬಿಡೆಯ ಮಾಯೆಯ ಸೆಡಕಿನೊಳು ಸಿಲುಕಿ ||೨||
ಹರಿಯಜೇಂದ್ರಾದ್ಯಖಿಳ ದಿವಿಜರ
ಶಿರವನರಿದಹಿದನುಜಮನುಜರ
ನರೆದು ಸಣ್ಣಿಸಿ ನುಂಗಿ, ನುಸುಳುವ ಮನುಮುನಿಗಳಧಟ
ಪರಿದು ಸಚರಾಚರವ ನೆರೆ ನಿ
ಟ್ಟೊರಸುವುದು ಗಡ ಮಾಯೆ ನಿಮ್ಮಯ
ಶರಣರಡಿವಿಡಿದಾಂ ಬದುಕಿರ್ದೆನೆಂದು ಪಾಡಿದಳು ||೩||
೩೪೬.
ತನುವು ಕಟ್ಟನೆ ಕರಗೆರೆದು ಮ
ಜ್ಜನವ, ನಿಜಮನವಲರ್ದು ಕುಸುಮವ,
ವಿನುತ ಹದುಳಿಗತನದಿ ಗಂಧಾಕ್ಷತೆಯನರು ಹಿಂದೆ
ಮಿನುಗುವಾರ್ತಿಯ, ನೆನಹುಶುದ್ಧದಿ
ಘನಸುಧೂಪವ, ಹರುಷರಸ ಸಂ
ಜನಿತ ನೈವೇದ್ಯವ ಸಮರ್ಪಿಸಿ, ಜ್ಞಾನಸತ್ಕ್ರಿಯದಿ ||೧||
ತಾಂ ಬೆಳೆರ್ವೆತ್ತಲೆಯನಿತ್ತು ಕ-
ರಾಂಜುಜದ ಬೊಮ್ಮವನು ನಿಜ ಹರು
ಷಾಂಬುಕಣ ಸಂಪಾತದೊಡನಿಟ್ಟಿಸುತೆ ಕ್ರಿಯೆಗಳವು
ಬೆಂಬಳಿಯೊಳಿರ್ದರಿಯದರ್ಚಿಪೆ
ನೆಂಬೆನೆಂತಾ ನಾದ ಬಿಂದುಗ
ಳೆಂಬರಿಯವು ನಿಮ್ಮ ನುತಿಸುವೆನೆಂತು ಶಶಿಮೌಳಿ ||೨||
೩೪೭.
ಅನುಭವವೆ ಭವಬಂಧಮೋಚನ
ವನುಭವವೆ ದುರಿತಾಚಲಶನಿ
ಯನುಭವವೆ ತನುಗುಣಾಭ್ರ ಪ್ರಕರಪವಮಾನ
ಅನುಭವವೆ ಭಕ್ತಿಯೆ ಸುಧಾನಿಧಿ
ಅನುಭವವೆ ಮುಕ್ತಿಯ ತವರ್ಮನೆ ಶರಣಸಂತತಿಯ ||೧||
೩೪೮.
ಭಾಷೆಯ ಮೀಸಲ್ಗೆಡಿಸಿ ಬಳಿಯಲಿ-
ನ್ನೇಸೊಂದಾಚರಣೆಯನಾಚರಿಸಲ್
ದೋಷಂ ಪರಿಯದವಂಗವನೊಳ್ ಪುದುವಾಳ್ವರ್ ತದ್ದೋಷಾ
ವಾಸಿಗಳೆನಿಪರ್, ತೊಲತೊಲಗಿನ್ನೆ
ನ್ನಾಸೆಯನುಳಿದು
೩೪೯.
ಪೂತ ಶ್ರೀಗುರುವರ ಪೇಳ್ದೊಲ್ ದು
ರ್ನೀತಿಯ, ಭೀತರ ಕಾಯ್ವಂ ತಾನೆ
ಬೂತಾದೊಲ್, ಪತಿಪತ್ನೀತ್ವವನರಹುವಳಭಿಸಾರಿಕೆಯ
ರೀತಿಯನೊರೆವೊಲ್, ಪೇಳ್ದಿರಿ ನೀವೆ
ನ್ನಾತುಮದಜ್ಞನತೆಯಂ ತೆವರದೆ ದು
ರ್ನೀತಿಯನಾ ಶಿವಭಕ್ತರ್ ಸಹಭವಗುರುತಂದೆಗಳೆನಗೆ ||೧||
ಮದ್ಗುರು ತಂದೆ ಮಹಾವೈಭವದೊಳ್
ಚಿದ್ಘನಲಿಂಗಕ್ಕೊಲಿದೆನ್ನುವನೆಸೆ
ದುದ್ಗಮ ಶರನೆಸೆಯದ ಬಳಿಕುದ್ವಾಹವೆನೆಸಗಿದ ಬಳಿಕ
ತದ್ ಘನಲಿಂಗದ ಸತಿಯಂ ಪಡೆದು ವಿ
ಯದ್ ಗಂಗಾಮೌಲಿಯ ಭಕ್ತಂಗಿ
ತ್ತುದ್ಗಮ ಶರನ ವಿಕಾರದೋಳಿಹುದಂ ನೋಳ್ದಪೆವೆಂಬರಕೆ ||೨||
ಈ ಪಾಪವನೊಂದಿಸಲೆಳಸುವರೇಂ
ಕೂಪರೆ ಪೆರದೊಲಗು
೩೫೦.
ಕ್ಷಿತಿಯ ಚರಿತ್ರವನತಿಗಳೆದೆನ್ನುವನೆಳಸಿದಿರೆಂತೆನಲು
ಹುತಹವನುಂಡ ಹಿಮಂ ಬೆರೆವುದೆ? ಸ
ನ್ನುತ ಸೌರಭ್ಯಕದಂಬವನಂಬರ
ಗತಿವೇಗದಿನಡರಿದ ಹೊಗೆ ಮನೆಗಳ್ತಪ್ಪುದೆ ಮಡಮುರಿದು?
ಓಡೊಡೆ ಗಾಜುಗಳುಂ ಮೃತ್ತಿಕೆಯೊಳ್
ಮೂಡಿ ಗಡಾ ಮೃತ್ತಿಕೆಯೊಳ್ ಮಗುಳೊಡ
ಗೂಡವೆನಲ್ಕವರಿಂದಿಳಿಕೆಯೆ ಶಿವಶರಣರ ಚಾರಿತ್ರ?
ರೂಢಿಯೊಳೆಗೆದಾ ರೂಢಿಯೆ ಜಡದೊಳ್
ಕೂಡದ ವೃಷಭಾರೂಢನೊಳೊಡನೊಡ
ಗೂಡಿದ ಶರಣರ ಕೂಡಿದಳಾನೆನ್ನಾಸೆಯ ಮಾಣು
೩೫೧.
.....ಲಾಲಿಸೆನ್ನೊಡೆಯ ಬಸವೇಶನರ್ಧಾಂಗಿ ಸನ್ನುತ ಕೃಪಾಂಗಿ ಸರ್ವಾಂಗಲಿಂಗಿ ನೀನು
ಮೃಡಶರಣರಾದವರ ಮನೆಯ ದಾಸಿಯು ಮೆಟ್ಟು
ವಡಿಗೆರ್ಪನಾಂತವಳ್ಗೊರೆಯಲ್ಲವಾನೆನ್ನ
ನಡಿಗಡಿಗೆ ನೀವಿಂತು ಬಣ್ಣಿಸಲ್ ತಕ್ಕಳಲ್ಲದಳ ನುತಿಗೆ ||೧||
ಚಿರಭಕ್ತಿ ಭಿಕ್ಷಮಂ ನಿಮ್ಮಲ್ಲಿ, ಸತತ ಸ
ದ್ಗುರುಭಕ್ತಿ ಭಿಕ್ಷಮಂ ವೀರಮ್ಮನಲಿ, ಲಿಂಗ
ದುರುಭಕ್ತಿ ಭಿಕ್ಷಮಂ ಕಮಳವ್ವೆಯಲಿ, ಶಿವಧ್ಯಾನದಮಂತ್ರದ ಭಿಕ್ಷವ
ಪರಮಗುರುತಾಯಿ ಶಿವನಮ್ಮನಲಿ, ಸುಜ್ಞಾನ
ದರುಹಿನ ಸುಭಿಕ್ಷಮಂ ವಿಮಳವ್ವೆಯಲ್ಲೆಲ್ಲ
ಶರಣ ಸತಿಯರೊಳು ವೈರಾಗ್ಯಭಿಕ್ಷವ ಬೇಡಿ ಬಂದ ಭಿಕ್ಷಾಂದೇಹಿಯಾಂ ||೨||
ಕಾರುಣ್ಯದಿಂದೆನ್ನ ಮನದರಕೆಯನ್ನಿತ್ತು
ಪಾರವೈದಿಸುವುದು.......
೩೫೨.
ಇಕ್ಕದಿರ್ ತಂದೆ ಬ[=ಮ]ನ್ನಣೆಯ ಬಸಿಶೂಲಕ್ಕೆ,
ತಕ್ಕಳಲ್ಲಾ ನುತಿಗೆ; ಗುರುಶಿಷ್ಯರಂ, ಪೆತ್ತ
ಮಕ್ಕಳಂ ಪೆತ್ತರೊರೆದೊರೆದು ನೋಡದೆ ನೋಳ್ಪರಾರ್?
ಕುಂದೆಯವರು ನೋಡೆ? ||೧||
ತೂಕದಿಂದೊರೆಯಿಂದೆ ನೋಟದಿಂ ಚೆಂಬೊನ್ನ
ಜೋಕೆಗೈದರಮನೆಗೆ ಸಲಿಸುವನೊಲೆನ್ನುವಂ
ನೀ ಕರುಣದಿಂ ನೋಡಿ ರುದ್ರಂಗೆ ಸಲ್ವೊಲೆಸಗಿರ್ದು ಸಂದೆಯವದೇಕೆ
ಮೇಕೆಯೊಂದರ ದೆಸೆಯೊಳಳಿದ ಭಟನಸುವ ಧರ
ಣೀಕಾಂತ ಪ್ರಮುಖ ಭೂಭುಜರ ಹರಣವ ಹರನ
ವಾಕಿನಿಂ ಮುನ್ನ ಉಳುಹಿದ ದುಷ್ಟನಿಗ್ರಹ ಶಿಷ್ಟಪ್ರತಿಷ್ಠೆಯೆಂದೆ ||೨||
ಎನ್ನ ಸೋದರವೆ ಎನ್ನ ತಂದೆ ಮದ್ಗುರುವೆ
ಕಿನ್ನರಿಯ ಬ್ರಹ್ಮಯ್ಯ ಬಿಡು ಮನದ
ಖಿನ್ನತೆಯ ಬಿಡದೊಡಾಂ ನಿನ್ನ ಸೋದರಿಯಲ್ಲ ||೩||
೩೫೩.
ಪರಮಗುರು ತಂದೆ ಕಿನ್ನರಿಯ ಬ್ರಹ್ಮಯ್ಯ, ತವ
ಕರುಣಾಂಜನದಿ ಬಗ್ಗನಗ್ಗಳದ ಬಗ್ಗೆನಿಪ
ಶರಣಾಳಿಯಂ ಕಂಡು ಗೆಲುವಾದೆ, ಬಲವಾದೆ,
ಛಲವಂತೆಯಾದೆ ಮದದ
ಕರುವಾದೆ, ಕರುಣಗುಣಕಾರಿಯಾದೆ, ಭವವಲ್ಲರಿ
ಗರಿಗಿತ್ತಿಯಾದೆ, ಸನ್ಮೂರ್ತಿ ಸಾಮ್ರಾಜ್ಯಕ್ಕೆ
ಸಿರಿದೇವಿಯಾದೆ, ನನ್ನೊಲು ಧನ್ಯರಾರ್
೩೫೪.
ಹಂಬುಹರಿದುರುಳ್ವ ನರಗಿರದೆ ತಿಂಥಿಣಿಯ ಪೆ
ರ್ಗೊಂಬು ಕೈಬಸಮಾದೊಲಂಬುಧಿಯೊಳಾಳ್ವಗೊದ
ಗಿಂ ಬೈತುರಂ ಬಂದೊಲರಿಗಳರೆಯುಟ್ಟಿ ಬಪ್ಪಡೆಗಭಯಕರದೊಳೆಸೆವ
ಬೆಂಬಲಂಗೂಡಿದೊಲ್, ದಿಕ್ಕಿಲ್ಲದಳುವೆಳಕ
ಗಂ ಬೆಸಲೆಯಾದಳಳ್ತಂದೆತ್ತಿದಂದಾದು
ದಂಬಕತ್ರಯ ನಿಮ್ಮ ಶರಣರಡಿಗಾಣುತೆನಗೆ ||೧||
ಇನ್ನು ನೋಡೆದೆನ್ನಧಟ ಕಾಮಾದಿವರ್ಗಗಳ
ಬೆನ್ನ ಬಾರಂಗಳೆವೆನೆಂಟು ಮದಗಳ ಗಂಟ
ಲಂ ನಿಟಿಲೆನಲ್ ಮುರಿವೆಕರಣೇಂದ್ರಿಯಗಳ ಕಲಕುವೆನುಳಿದ ದುಃಖಕರ್ಮವ
ಛಿನ್ನ ಭಿನ್ನಂಗಡಿವೆ ||೨||
೩೫೫.
ತಂದೆತಾಯೆನಗೆ ಶ್ರೀಗುರುನಾಥ, ತೆತ್ತಿಗರ್
ಕಂದುಗೊರಲನ ಶರಣಸಂದೋಹ, ಗಂಡನಾ
ನಂಡಿವಾಹನ ಚೆನ್ನಮಲ್ಲಿಕಾರ್ಜುನನಿದಕ್ಕಿಲ್ಲ ಸಂದೆಯ ತಿಲಾಂಶ
ಎಂದೆಂದು ಪ್ರಭುವೆ ನಿಮ್ಮಯ ಮನೆಯೊಳೆನ್ನ ನಡೆ
ವಂದಮಂ ನೆಗಳಿದನುಮತದಿಂದ ಮುಳಿಯಲೇಕೆ? ||೧||
೩೫೬.
....ಅಯ್ಯ ತನು-ಜೀವ-ಭಾವಂಗೆಳೆನಗಿರ್ದೊಡೇಂ
ತತ್ತ್ರಿವಿಧವು |
ಇಲ್ಲದಾ ಘನವೆ ಮನವಾದ ದೂಸರ್ನೀವೆ
ಬಲ್ಲಿರಲ್ಲದೆಯಿತರಾರ್ ಬಲ್ಲರಹುದು ಮರ
ಹಿಲ್ಲದಿರ್ಪೆನ್ನನುವನು....
೩೫೭.
....ಬಸವಬ್ಬ ನಿಮ್ಮೊಲ್ಮೆಯಿಂ ಕಾಮಾರಿಯ |
ಅಪ್ಪಿ ಪೆರತರಿಯೆ | ನೋಟಕ್ಕೆ ನಾಮದಲ್ಲಿ ಪೆ
ಣ್ಣಪ್ಪೆನಲ್ಲದೆ ಭಾವಿಸಲ್ಗಂಡುರೂಪು ಬಿಡ
ದರ್ಪಿರ್ಪುನ್ನನೆಂಬುದ ನಿಮ್ಮ ಲಿಂಗವೆ ಬಲ್ಲುದು
೩೫೮.
ಎನ್ನ ಭಕ್ತಿಯು ನಿಮ್ಮ ಧರ್ಮ ಪ್ರಭುವಿನ ಧರ್ಮ
ವೆನ್ನ ಸುಜ್ಞಾನವೆನ್ನ ಪರಿಣಾಮವೇ
ಚೆನ್ನಬಸವೇಶ್ವರನ ಧರ್ಮವೆಲ್ಲಾ ಪುರಾತನರ ಧರ್ಮವೆನ್ನ ವಿರತಿ |
ಎನ್ನಳವದೇಂ ದೇವ ನಿಮ್ಮ ಸೊಮ್ಮ ನಿಮ್ಮ
ಪನ್ನಳಿನಕಪ್ಪೈಸಿ ಪರಿಶುದ್ಧಳಪ್ಪವ
ಳ್ಗಿಂನ್ನುಂಟೆ ಪರಮಸ್ವತಂತ್ರತ್ವ
೩೫೯.
ನಂಬಿದೆ ಗುರುವೇ ನಂಬಿದೆ, ನಂಬಿದೆ ಸ್ವಾಮಿ
ನಂಬಿದೆ ಅಂಬಿಕಾರಮಣ ನೀನಂಬಿಗ ||೧||
ಹೊಳೆಯ ಬರವ ನೋಡಂಬಿಗ
ಸೆಳಹು ಬಹಳ ಕಾಣಂಬಿಗ
ಸುಳುಹಿನೊಳಗೆ ಬಿದ್ದೆನಂಬಿಗ
ಸೆಳೆದುಕೊಳ್ಳೋ ನೀನಂಬಿಗ ||೧||
ಆರು ತೆರೆಯ ನೋಡಂಬಿಗ! ಬಲು
ಮೀರಿ ಬರುತಲಿವೆ ಅಂಬಿಗ!
ಹಾರಲೊದೆದು, ಎನ್ನ ತಡಿಗೆ ಶೆರಿಸು, ನೀ
ದೂರ ಮಾಡದಿರು ಅಂಬಿಗ ||೨||
ತುಂಬಿದ ಹರಿಗೋಲಂಬಿಗ ಅದ
ಕೊಂಬತ್ತು ಛಿದ್ರ ನೋಡಂಬಿಗ
ಸಂಭ್ರಮವನು ನೋಡಂಬಿಗ ಇದ
ರಿಂಬನರಿದು ತೆಗೆಯಂಬಿಗ ||೩||
ಹತ್ತು ಹತ್ತು ನೋಡಂಬಿಗ
ಹತ್ತಿದರೈವರು ಅಂಬಿಗ
ಮುತ್ತಿಗೆಗೊಳಗಾದೆನಂಬಿಗ, ಎನ್ನ
ನೆತ್ತಿಕೊಳ್ಳೋ ನೀನಂಬಿಗ ||೪||
ಸತ್ಯವೆಂಬ ಹುಟ್ಟಂಬಿಗ ಸದ್
ಭಕ್ತಿಯೆಂಬ ಪಥವಂಬಿಗ
ನಿತ್ಯಮುಕ್ತ ನಮ್ಮ ಚೆನ್ನಮಲ್ಲಿಕಾರ್ಜುನನ
ಮುಕ್ತಿಮಂಟಪಕೊಯ್ಯೋ ಅಂಬಿಗ ||೫||
೫೬೦.
ಕರಕರೆ ಕರಕರೆ ಘನವಯ್ಯೋ
ಕರೆದು ಹೇಳಿ ಎಮ್ಮವರಿಗೆ ಸುದ್ದಿಯ ||ಪಲ್ಲವ||
ಅತ್ತೆಯ ಮಾತುಗಳೆ ಚಿತ್ತವ ಕಲಕಿವೆ
ಮತ್ತೆ ಮಾವನೊಳ್ಳಿದನಲ್ಲ; ಎನ್ನ
ಚಿತ್ತವಲ್ಲಭನಿಂದಾದ ಭಂಡ ನಾ
ವಿಸ್ತರಿಸಲಾರೆ, ಹೇಳಿ, ಎಮ್ಮವರಿಗೆ ||೧||
ಮುನ್ನ ಹುಟ್ಟಿದ ಮೂರು ಮಕ್ಕಳ ಕಾಟ
ಕನ್ನೆಯರೈವರ ಕೂಡಿಕೊಂಡು
ಮನ್ನಣೆಯನಿತಿಲ್ಲ ಮೈದುನರೈವರ
ಇನ್ನಿರಲಾರೆ ಹೇಳಿ ಎಮ್ಮವರಿಗೆ ||೨||
ನಾರಿಯರೈವರ ಕೂಡಿಕೊಂಡು ನಾ
ದಾರಿ ಸಂಗಡವಾಗಿ ಬರುತಿರಲು
ಭೋರನೆ ಶ್ರೀಶೈಲ ಚೆನ್ನಮಲ್ಲೇಶಂಗೆ
ಓರಂತೆ ಮನಸೋತೆ ಸಾರಿತ್ತ ಬಾರೆನೆ ತಾಯಿ ||೩||
೫೬೧.
ಒಲ್ಲೆನೊಕತನವ ಒಲ್ಲೆ, ನಾನಾರೆ
ಕೊಲ್ಲ ಬಂದಾನೆನೆ ಕೋಪದಲಿ ನಲ್ಲ ||ಪಲ್ಲವ||
ಮಾವನೆಂಬುವ ನನ ಮನವ ನೋಯಿಸಿದನೆ
ಆವಾಗ ನಮ್ಮತ್ತೆ ಅಣಕವಾಡುವಳು
ಭಾವನೆಂಬವ ಕೆಂಡ, ಬಲು ಬಾಧಿಸುತಿಹ
ಬೇವುತಲಿರ್ದೆನು ಮತ್ತಿನ್ನಾರಿಗೆ ಹೇಳುವೆ ||೧||
ಮನೆಯಾತನ ಕೊಂದು, ಮಾವನ ಹಳ್ಳವ ಕೂಡಿ
ಬಿನುಗು ಭಾವದಿರನು ಬೀದಿಪಾಲು ಮಾಡಿ
ನನಗೆ ವೈರಿಯಾದ ಅತ್ತೆನೆ ಕೊಂದು
ಮನಸು ಬಂದಲ್ಲಿ ನಾನಿಪ್ಪೆನೆಲೆ ತಾಯಿ ||೨||
ಮುನ್ನಿನ ಪ್ರಮಥಗಣಂಗಳೆನ್ನ ಬಂಧುಬಳಗ
ಉನ್ಮನಿಯ ಜ್ಯೋತಿ ಬ್ರಹ್ಮರಂಧ್ರದ ಮೇಲಿಪ್ಪ
ಚೆನ್ನಮಲ್ಲಿಕಾರ್ಜುನನೆನ್ನನೊಲಿದಡೆ
ಇನ್ನಿತ್ತ ಬಾರೆ ನಾನೆಲೆ ತಾಯೆ ||೩||
೩೬೨.
ನಿಬ್ಬಣಕ್ಕೆ ಹೋಗುತೈದೇನೆ, ನೋಡಕ್ಕಯ್ಯ!
ನಿಬ್ಬಣಕೆ ಹೋದಡೆ, ಮರಳಿ ಬಾರನಕ್ಕಯ್ಯ! ||ಪಲ್ಲವ||
ಧನವು ಧಾನ್ಯ ಮನೆಯೊಳುಂಟು;
ಘನವು ಎನ್ನ ಮನೆಯೊಳಿಲ್ಲ
ಮನೆಯ ಗಂಡ ಮುನಿಯಲೆನ್ನ ಮಂಡೆ ಬೋಳಾಗದು ||೧||
ಮಂಡೆದುರುಬ-ಮಿಂಡತನದಿ
ದಿಬ್ಬಣಕ್ಕೆ ನಾ ಹೋದಡೆ
ಮಂಡೆ ಬೋಳಾಗದನಕವಪ್ಪುದೆನಗೆ ನಿಬ್ಬಣ? ||೨||
ಗಂಡನುಳ್ಳ ಗರತಿ ನಾನು
ರಂಡೆಯಾದನಯ್ಯೊ; ಇನ್ನು
ಕೊಂಡೊಯ್ಯೊ, ಶಿವನೆ, ಎನ್ನ ಹುಟ್ಟಿದೈವರು ಮಕ್ಕಳ ||೩||
ಕಾಮವೆಂಬ ಹೊಲನ ದಾಂಟಿ
ಸೀಮೆಯೆಂಬ ಹೊಲಬನರಿದು
ಹೇಮಗಿರಿಯ ಹೊಕ್ಕ ಬಳಿಕ ಮರಳಿ ಬಾರೆನಕ್ಕಯ್ಯ ||೪||
ಸಾಗಿ ಬೇಗದಿಂದ
ಹೋಗಿ ನೆರೆಯದಿದ್ದರೆ,
ಚೆನ್ನಮಲ್ಲಿಕಾರ್ಜುನಯ್ಯ ಮುನಿವ ಕಾಣಕ್ಕಯ್ಯ ||೫||
೩೬೩.
ಮುಕುತಿ ಹೋಯಿತು ಮುರುಕಿಸುವನಕ
ಮೂಕುತಿ ಹೋಯಿತು ||ಪಲ್ಲವ||
ಅಣಕವನಾಡುತ್ತ ಐವರ ಕೂಡೆ
ಸೆಣಸುತ ನಾಲ್ವರ ಕೈವಿಡಿದು,
ಮಣಕದಿಂದಲಿ ಆರು ಮಂದಿಯ ಕೂಡೆ,
ಉಣ ಕುಳಿತಲ್ಲಿ ಮೈಮರೆದೆನಕ್ಕ ||೧||
ಅಕ್ಕರಿಂದಲಿ ಹತ್ತು ಮಂದಿಯ ಕೂಡಿ
ನಕ್ಕರು, ಕೆಲೆದರು ತಮತಮಗೆ
ಮಕ್ಕಳಾಟಿಕೆಯ ನಾನಾಡುವ ಹೊತ್ತಿಗೆ
ಇಕ್ಕುತಲಿ ಮೈಮರೆದೆನಕ್ಕ ||೨||
ಅತ್ತ ಮಾರುದ್ದರುವೆಯ ಕೂಡಲಾಗಿ
ಸುತ್ತೇಳು ಕೇರಿಯರು ಸೆಣಸುವರು
ಚಿತ್ತವಲ್ಲಭ ಚೆನ್ನಮಲ್ಲೇಶ ಕೂಡಿ
ಮುತ್ತೈದೆಯಾಗೆನ್ನನಿರಗೊಡಕ್ಕ ||೩||
೩೬೪.
ಕಣ್ಣಾರೆ ನಾ ಕಂಡೆ ಕನಸಿನ ಸುಖವ
ಉಣ್ಣದೂಟವನುಂಡು ಊರ ಸುಡುವುದ ||ಪಲ್ಲವ||
ಮಾಣದಚ್ಚ ಜಲದೊಳೆಂದು ಆಣಿಯಾದ ಮುತ್ತು ಹುಟ್ಟಿ
ಕೋಣೆಯೆಂಟರೊಳಗೆ ತಾನೆ ತಿರುಗುವುದು
ಆಣಿಕಾರರು ಹಂಡು, ಆ ಮುತ್ತ ಬೆಲೆ ಮಾಡಿ,
ಜಾಣತನದಲ್ಲಿ ಕೊಂಡೊಯ್ದರದನು ||೧||
ಇಂಬಪ್ಪ ಗಿರಿಯಲಿ ಕೊಂಭೆರಡನೆ ಕಂಡು
ಶಂಭುನಾರಿಯ ನೋಡಿ ಮಾತಾಡೆ
ಮುಂಬರಿದಾಡುವ ಮಾವತಿಗನ ಕೊಂದು
ಸಂಭ್ರಮಿಸಿ ಉಂಬ ಶಿವಶರಣರೆಲ್ಲರನು ||೨||
ಮುಪ್ಪಿಲ್ಲದ ಸರ್ಪನೊಪ್ಪವಿಲ್ಲದೆ ಕೊಂದು
ಒಪ್ಪುವ ಆತ್ಮಕನ ನೋಟಕರ
ಉಪ್ಪರಿಗೆಯ ಮೇಲೆ ಉರಿವ ಲಿಂಗವನು ಕಂಡು
ಒಪ್ಪದ ಚೀಟಿ ಸುಟ್ಟುಹಿದ ಮಹಿಮರ ||೩||
ಜಗಕೆ ಎಚ್ಚರುವಾಗಿ ಅಘಹರರೂಪಾಗಿ
ಅಗಣಿತವಹ ಘನಮಹಿಮರನು
ಬೆಗೆಗೊಳ್ಳದೆ ಭಾವೆನ್ನರ ಸಂಗವ
ನೊಗೆದು ಈಡಾಡುವ ಓಜೆವಂತರನು ||೪||
ಮನಕ್ಕೆ ಗೋಚರವಾಗಿ ತನುಮನ ರೂಪಾಗಿ
ಅನುವಿನ ವಿವರವ ಬಲ್ಲವರ
ನೆನೆವರಿಗೆ ಸಿಲ್ಕಿ ನೇಮವ ಕೋರುವ
ಘನ ಚೆನ್ನಮಲ್ಲನೆಂಬಿನಿಯನನು ||೫||
೩೬೫.
ಕೈಯ ತೋರೆಯಮ್ಮ, ಕೈಯ ನೋಡುವೆನು
ಬಯ್ಯಾಪುರದಿಂದಲಿಳಿದು ಬಂದೆ ನಾನು
ಮೈಯೊಳಗಿರ್ದ ವಸ್ತುವ ಹೇಳುವೆನು ||ಪಲ್ಲವ||
ವಚನ:
ಚೆಲುವೆತ್ತ ಭಾವದ ಲಕ್ಷಣವ ಹೇಳುವೆ ತೋರೆಯಮ್ಮ
ಅರಿವಿನ ಬಗೆ ಯಾವುದೆ ಕೊರವಿ? ನಿನ್ನ ನಾಮ ಸೀಮೆ ಯಾವುದು! ಎಲ್ಲಿಂದ ಬಂದೆಯಮ್ಮ?
ಉತ್ತರೋತ್ತರ ಬಯ್ಯಾಪುರದ ಮಾಹಾದೇವಿಯ ವರವೆ; ಮಹಾದೇವನ ಒಲವೆ;
ಅಲ್ಲಿಂದ ಇಳಿದು ಬಂದೆನಮ್ಮ! ನಿನ್ನ ತನುವಿನೊಳಗಿರ್ದ ನಿತ್ಯಾನಿತ್ಯವ ವಿವರಿಸಿ
ಹೇಳುವೆ ನಂಬು ನಂಬೆಯಮ್ಮ
ಪದ:
ಎಂಟು ಮಂದಿ ನಂಟರು ನಿಮಗಮ್ಮ
ಉಂಟಾದ ಹತ್ತು ದಿಕ್ಕಿನಲ್ಲಿ ಬಳಗವಮ್ಮ
ಗಂಟಲ ಮೆಟ್ಟಿಕೊಂಡೈದರೆ ನಿಮ್ಮ,
ಸುಂಟರಗಾಳಿಯಂತೆ ತಿರುಗುವೆಯಮ್ಮ
ಕಂಟಕ ಬಿಡಿಸುವೆ ಕರುಣದಿ ನಿಮ್ಮ, ನೀಲ
ಕಂಠನಂಘ್ರಿಯ ಬಿಡದೆ ಪಿಡಿಯಮ್ಮ ||೧||
ವಚನ:
ನಂಬುವುದಕೊಂದು ಕುರುಹುಂಟೆ ತಾಯಿ?
ಭೂದೇವಿ ಮೊದಲಾದ ಅಷ್ಟತತ್ವಾಧಿಕರು ನಿನ್ನ ಸಾಕ್ಷಿಬಂಧುಗಳಮ್ಮ, ದಶಮುಖ
ಪವನಸಂಕುಳವೆ ನಿನ್ನ ಇಷ್ಟರುಗಳಮ್ಮ! ಅನ್ಯರು ಸೇರರು; ನಿನ್ನವರು ನಿನಗೆ ವೈರಿಗಳಮ್ಮ
ಕಂಟಕವಾಗಿ ಕಾಡುವುದಮ್ಮ
ಅಹುದಹುದು ಅದೆಂಥ ಕಂಟಕವೆ ತಾಯಿ!
ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಲ್ಲಿ ಸತ್ತು ಸತ್ತು ಹುಟ್ಟಿದೆಯಮ್ಮ. ಬಾರದ
ಭವದಲ್ಲಿ ಬಂದೆಯಮ್ಮ. ತೊಡದ ಚೋಹವ ತೊಟ್ಟೆಯಮ್ಮ. ಕಾಣದ ಕರ್ಮವ
ಕಂಡೆಯಮ್ಮ. ಉಣ್ಣದಾಹಾರವನುಂಡೆಯಮ್ಮ. ಇಲ್ಲಿಗೆ ಈ ಮನೆಗೆ ಬಂದೆಯಮ್ಮ.
ಇದು ನಿನ್ನ ಪುಣ್ಯದ ಫಲವಮ್ಮ. ಈ ಕಂಟಕಕ್ಕಂಜಿ ಕಳವಳಿಸದಿರಮ್ಮ. ನಿರಂಜನನ
ಪಾದವ ಭಕ್ತಿಯಿಂ ಧೃಡವಿಡಿಯಮ್ಮ
ಪದ:
ಒಡನೆ ಹುಟ್ಟಿದೈವರು ನಿನಗಮ್ಮ;
ಕೆಡಹಿಯಾರು ಮಂದಿ ಕೊಲುತಿಹರಮ್ಮ;
ಪಿಡಿದರೆ ತಾಯಿ-ಮಕ್ಕಳು ಬಯ್ವರಮ್ಮ;
ತೊಡರಿಕೆ ನಾಲ್ವರು ಹೆದರಿದಿರಮ್ಮ
ಪೊಡವೀಶನಡಿಯ ಬಿಡದೆ ಪಿಡಿಯಮ್ಮ;
ಒಡಲ ಕಿಚ್ಚಿನ ಕೊರವಿಯು ನಾನಲ್ಲಮ್ಮ ||೨||
ವಚನ:
ಚಿಂತೆಯ ಬಿಡಿಸುವ ನಿಶ್ಚಿಂತ ಪದವಾವುದೆ ತಾಯಿ?
ನಿನ್ನೊಡನೆ ಜನಿಸಿದ ಪಂಚಭೂತಂಗಳು ನಿನಗೆ ಸಂಗವಾಗಿ ಹಿತಶತ್ರುತನದಿ ಭವ
ದತ್ತ ಕೆಡಹುವರಮ್ಮ, ಅವರೊಡೆಯರು ನಿನ್ನನಾಳಿಗೊಂಡು ಕಾಡುವರಮ್ಮ
ಇದ ವಿವರಿಸಿ ಪೇಳೆ ತಾಯಿ!
ಚತುರ್ಮುಖಬ್ರಹ್ಮ ಹೊಡೆದಾಳುತೈದಾನೆಯಮ್ಮ ವಿಷ್ಣು ವಿಧಿಪಾಶದಿಂ ಬಿಗಿಯೆ
ರುದ್ರನ ಹೊಡೆ ನಿಚ್ಚ ಹೊಯ್ಯುತಿದೆಯಮ್ಮ. ಈಶ್ವರನಂತುರದಲ್ಲಿ ಸದಾಶಿವ ಸೈಗೆಡೆದನಮ್ಮ.
ಒಳಹೊರಗೆ ನಿನಗೈವರ ಕಟ್ಟು-ಕಾವಲು ಘನವಮ್ಮ. ಮತ್ತೊಮ್ಮೆ ಕಾಮ
ಕಾತರಿಸಿ, ಕ್ರೋಧವಿರೋಧಿಸಿ, ಮದವಹಂಕರಿಸಿ ಮಚ್ಚರ ಕೆಚ್ಚು ಬಲಿದು, ಹೊಯ್ದು-
ಬಯ್ದು-ಕೊಯ್ದು-ಕೊರೆದು, ಚಿತ್ರಿಸಿ, ಚಿರಣಿಸುವರಮ್ಮ. ಮತ್ತೊಮ್ಮೆ ಏಳು ಮಕ್ಕಳ
ತಾಯಿ ಹಿಡಿದು ಹೀರಿಹಿಪ್ಪೆಯ ಮಾಡುವಳಮ್ಮ. ಆ ಮಕ್ಕಳ ಜನನ ಏಳಕೇಳು ದಿನವಮ್ಮ.
ಅಳುಕಿಸಿ-ನಡುಕಿಸಿ ಕಳವಳಿಸಿ-ಹೆದರಿಸಿ, ಎತ್ತರತತ್ತರ ಮರುಳು ಮಾಡಿ ಕನಸು-
ಕಳವಳ-ಒತ್ತರಮಂ ಒತ್ತರಿಸಿ ನಡೆದು ಬುದ್ಧಿಯರಿದಂತೆ ಕಂಪಿಸಿ ಕಳವಳಿಸಿ ನುಡಿವ
ರಮ್ಮ. ಮತ್ತೊಮ್ಮೆ ಮನಬಂದಂತೆ ನಡೆದು ಬುದ್ಧಿಯರಿಯದಂತೆ ಸ್ಥಿರಕರಿಸಿ ಚಿತ್ತಬಂದಂತೆ
ಅವಧರಿಸಿ, ಅಹಂಕಾರ ತೋರಿದಂತೆ ಬಿರಿಪಿಡಿದಲೆವುತ್ತಿಪುದಮ್ಮ. ಒಮ್ಮೆ ಮರನಾಗುವೆಯಮ್ಮ,
ಒಮ್ಮೆ ಮನುಷ್ಯಳಾಗುವೆಯಮ್ಮ. ಇದರೊಳು ಸಿಲ್ಕಿದೆನೆಂದು ಚಿಂತಿಸದಿರಮ್ಮ.
ಈ ಚಿಂತನೆಯ ಮಂತ್ರದಿಂ ಕಳೆದು ನಿಶ್ಚಿಂತದೋರಿಸುವೆ. ಎನ್ನೊಡೆಯ
ಜಗದೀಶ ಆದಿಲಿಂಗನ ಪಾದವನನುದಿನ ಅಗಲದೆ ನಂಬಿ ನಚ್ಚಿ ಭಜಿಸಮ್ಮ.
ಅದು ಎಂಥ ಉಪದೇಶದ ನೋಂಪಿಯಮ್ಮ?
ಮಂಗಳವಾರದ ದಿನ ಮನೆಯ ಸಾರಿಸೆಯಮ್ಮ, ಕಟ್ಟುಮುಟ್ಟು ಹೊರಯಿಕೆ ಬಿಸಾಡೆಯಮ್ಮ.
ರಂಗಮಂಟಪವ ರಚಿಸಿ ಚೌಕವಲಂಕರಿಸೆಯಮ್ಮ. ರಂಗದಕ್ಕಿಯಮೇಲೆ ಕಳಶವನ್ನಿಟ್ಟು
ಐವರು ಅಚ್ಚ ಮುತ್ತೈದೆಯರ ಕುಳ್ಳಿರಿಸೆಯಮ್ಮ. ತೂ[=ತಾ]ಳಮೇಳದವರ ಕರೆ
ತಂದು ಶುಭವಾದ್ಯವ ಮೊಳಗಿಸೆಯಮ್ಮ. ಮನೆಯ ದೇವರ ಜ್ಯೋತಿಯ ತುಂಬಿ, ಕಪ್ಪುರದ
ಮಂಗಳಾರತಿಯ ತಂದಿಸಿಸೆಯಮ್ಮ, ಸುಚಿತ್ತೆಯಾಗಿ ಸಮ್ಮುಖದಲ್ಲಿ ಕುಳ್ಳಿರೆಯಮ್ಮ.
ತಲೆಗೈಯನಿಕ್ಕಿ, ವಿಭೂತಿಯ ಹಣೆಗಿಟ್ಟು, ಕಿವಿಯೊಳು ಮಂತ್ರವನುಸುರಿದನಮ್ಮ;
ನೆತ್ತಿಯ ಲಿಂಗವ ಹಸ್ತಕೆ ಕೊಟ್ಟು, ಕರ್ತೃ ಅಲ್ಲಯ್ಯ ಸಾಕ್ಷಿಯಾಗಿ! ಉಪಾಯದಿಂ
ಉದರವ ಹೊರೆವ ಉಪಾಧಿ ಕೊರವಿಯಲ್ಲ. ಪರವ ತೋರುವ ಪರಮದೀಕ್ಷಾ ಕೊರವಿ ನಾನಮ್ಮ.
ಪದ:
ಈಶಮಹೇಶನೆ ಮನೆದೈವವಮ್ಮ
ಬೇಸರು ಮಾಡಿ, ರಾಶಿದೈವವ ಹಿಡಿಯೆ
ಕಾಸಿಂಗೆ ಬಾರದ ಕಸನಪ್ಪೆಯಮ್ಮ,
ಹೇಸಿ ದೈವವ ಬಿಡು, ಪಿಡಿಯೀಶನಡಿಯ,
ಮೀಸಲ ಹಿಡಿಯಮ್ಮ ಸೂಸದ ಮನವ
ನಾಸಿಕಾಗ್ರದೊಳು ಗಮಿಸಿ ನಿಲ್ಲಮ್ಮ! ||೩||
ವಚನ:
ಇಂತೀ ದೇವರಿಗೆ ನಿಷ್ಠೆಯಿಂದ ನೇಮವ ಮಾಡಬೇಕಮ್ಮ!
ಅದೆಂಥಾ ನೇಮವೇ ತಾಯಿ?
ಪೊಡವಿಗೊಡೆಯ ಮೃಡನೊಬ್ಬನೆ ನಿಮ್ಮ ಮನದ ದೈವವಮ್ಮ. ಈ ದೇವರ ನೋತು
ಫಲವೇನೂ ಕಾಣೆಂದಲಸದಿರಮ್ಮ. ನಾಡ ಹಿಡಿದಾಡುವ ಕೇಡಿಗ ದೈವವ ಬಗೆಯದಿರಮ್ಮ.
ಅವು ನಿಮ್ಮ ಕಾಡುವವಮ್ಮ. ಕರಕಷ್ಟಬದ್ಧಭವಿಯಾಗುವೆಯಮ್ಮ. ಲಜ್ಜೆಗೆಟ್ಟು
ಕಿರುಕುಳ ನೀಚದೈವಂಗಳ ಸಂಗ ಬೇಡಮ್ಮ. ಎಲ್ಲ ದೇವರೊಡೆಯ ಲಿಂಗದೇವನೆ
ನಿನ್ನ ಮನದೈವ ಕುಲದೈವವಮ್ಮ. ಮನದಲ್ಲಿ ನಂಬಿ ನಚ್ಚಿ ಗುಡಿಗಟ್ಟೆಯಮ್ಮ. ಏಳು ಮಂದಿ
ಅಚ್ಚಮುತ್ತೈದೆಯರನೊಂದು ಹೊತ್ತನಿರಿಸೆಯಮ್ಮ. ಶುದ್ಧಪದ್ಮಾಸನವನಿಕ್ಕೆಯಮ್ಮ.
ನಾಭಿ ಪವನವನೆತ್ತೆಯಮ್ಮ. ನಾಸಿಕಾಗ್ರದಿ ನಿಲ್ಲೆಯಮ್ಮ. ರವಿಶಶಿಗಳಾಟವ
ನೋಡೆಯಮ್ಮ. ತಾಳಮದ್ದಲೆಯ ಬಾರಿಸೆಯಮ್ಮ. ಓಂ ನಮಶ್ಶಿವಾಯವೆಂದು ಓಲಗವ ಮಾಡೆಯಮ್ಮ
ಪದ:
ಕುಂಭಿನಿದೈವವ ಹಿಡಿಯೆ ನೀ ಕೆಟ್ಟೆ!
ಶಂಭುಲಿಂಗನ ಕೈಯ ಬಿಡಲು ನೀ ಭ್ರಷ್ಟೆ!
ಇಂಬುಗೊಡಲು ಬೇಡ, ಇದಿರಿಟ್ಟವೆಲ್ಲ!
ಹಂಬಲು ಬಿಡು ಭ್ರಷ್ಟದೈವವನೆಲ್ಲ
ನಂಬಿ ಶುದ್ಧವಾಗೆ ನಿಜಲಿಂಗದಲಿ
ಮುಂಬಾಗಿಲೊಳು ಪೊಕ್ಕು ಲಾಲಿಸು ಸೊಲ್ಲ! ||೪||
ವಚನ:
ಇಂತೀ ನಿಷ್ಠೆ ನಿರ್ಧರವಾಗಬೇಕೆಯಮ್ಮ!
ಅದೆಂಥಾ ಧೃಢಭಾವವೆ ತಾಯಿ?
ನಾಡಾಡಿ ದೈವವ ನೋತಡೆ ಕೇಡಲ್ಲದೆ ಸುಖವಿಲ್ಲವಮ್ಮ. ಏಕಲಿಂಗನಿಷ್ಠೆ ಇಲ್ಲದಡೆ
ಕಾಕಪ್ಪೆಯಮ್ಮ. ಕಂಡಕಂಡ ದೈವಂಗಳ ಕೊಂಡೆಸಗಲು ಮುಡುಹಂ ಸುಟ್ಟು ನೀರು
ಮುಳುಗಿ, ಸುತ್ತಿ, ತಲೆಯಂ ತರಿದು, ಬತ್ತಲೆ ಬಳಸಿ, ಕುರುಳು ಬೆರಳು ಮುಂಬಲ್ಲು
ಹೋಗಿ, ಕೆಟ್ಟು, ಡೊಣೆಯಲಿ ತಿಂದು, ನಾಯಾಗಿ ಬೊಗುಳಿ, ಲಜ್ಜೆಗೆಟ್ಟು ಚೀಮಾರಿಯಪ್ಪೆಯಮ್ಮ.
ನೆನೆದು-ಬಿರಿದು-ಉಲಿದು, ಕರಗಿ ಕರಿಮುರುಯಪ್ಪೆ. ಬಿನುಗುಭಿಕಾರ
ದೈವಂಗಳ ನೆನೆಯದಿರಮ್ಮ. ಪ್ತತಿಪೂಜೆ ಮಾಡದೆ ಆಚಾರದಲ್ಲಿ ನಿಂದುದೆ ನಿಷ್ಠೆಯಮ್ಮ.
ನಿಷ್ಠೆಯಿಲ್ಲದ ಪೂಜೆ ಎಷ್ಟು ಕಾಲ ಮಾಡಿದರೂ ನಷ್ಟವಲ್ಲದೆ ದೃಷ್ಟವುಂಟೆ? ಆದಿಲಿಂಗನ
ಭಜಿಸೆಯಮ್ಮ. ಆತ್ಮಲಿಂಗವ ಧ್ಯಾನಿಸಮ್ಮ. ಚಿತ್ತ ಶುದ್ಧವಾಗಿರಲಮ್ಮ.
ಅದೆಂಥಾ ಸುಯಿಧಾನವೆ ತಾಯಿ?
ಒಂಬತ್ತು ಬಾಗಿಲ ಕದವನಿಕ್ಕಿ ಒಳಯಿಕೆ ಒಬ್ಬ್ರನು ಬಿಡದಿರೆ, ಸುಮ್ಮನೆ ಕಳುಹೆ.
ಒಮ್ಮನವ ಮಾಡೆ, ಗಮ್ಮನೆ ನಡೆಯೆ, ಘಳಿಲೆಂದು ಪೋಗೆ, ದಿಗಿಲೆಂದು ಹತ್ತೆ, ಎಡ
ಬಲನಂ ಮುರಿಯೆ, ಬೀಗವಂ ಕೊಳ್ಳೆ, ಕುಂಭಿನಿಯ ಬಾಗಿಲ ಕದವ ತಳ್ಳೆ, ಒಳಪೊಕ್ಕು
ಒಂದಾಗಿ ನೋಡೆ, ಸೋಹವೆಂಬ ಬ್ರಹ್ಮನಾದವನಾಲಿಸಮ್ಮ. ಪರತತ್ವದೊಳು ಉರಿ
ಕರ್ಪೂರದಂತಾಗಮ್ಮ. ಇಂತೀ ನಿಷ್ಠೆಗೆ ನಮೋ ನಮೋ ಎಂಬೆನಮ್ಮ ಬೋಸರಿಗತನದ
ಲೇಸಿನವಳು ನಾನಲ್ಲಮ್ಮ.
ಪದ:
ಆದಿಯನರಿಯೆನಮ್ಮ ಭೇದಿಸಿ ಮುನ್ನ!
ಮೇದಿನಿಯೊಳು ಬಂದು ಮರೆದೆಯಲ್ಲಮ್ಮ!
ತಂದೆ ಹಬ್ಬೆಯನೆತ್ತಿ ಹೇಳುವೆ ನಿಮ್ಮ
ಬಂದ ಮಾರ್ಗದಲ್ಲಿ ಗಮಿಸಿ ನಿಲ್ಲಮ್ಮ
ಭ್ರೂಮಧ್ಯದ ಮನೆಯೊಳಗಿರ್ದು ಕಾಣಮ್ಮ
ಮುಂದಣ ಕೋಣೆಯೊಳೆ ಜೀವಿಸು ನೀನಮ್ಮ ||೫||
ವಚನ:
ಮುನ್ನೊಮ್ಮೆ ಆದಿಯ ಲೀಲೆಯಿಂದ ಮೇದಿನಿಗಿಳಿದು ಆಗುಚೇಗೆಗೊಳಗಾಗಿ ನಿನ್ನ
ನಿಜವನರಿಯದ ಪರಿಯ ತಿಳಿದು ನೋಡಮ್ಮ.
ಅದೆಂಥ ದೇವರ ಲೀಲೆಯೆ ತಾಯಿ?
ನಾದ-ಬಿಂದು-ಕಳೆ-ಆದಿಯನಾಗಿ ತತ್ವಂಗಳಾವುವುವಿಲ್ಲದಂದು, ತಂದೆ ತಾನೆ
ತಾನಾಗಿರ್ದನಮ್ಮ. ಆತನ ಸತಿಯಾನೆಯಮ್ಮ. ತನಗೆ ಮಖ್ಖಳು ಬೇಕಾಗಿ ನೆನೆದಡೆ
ನಾದ-ಬಿಂದು-ಕಳಾಯುಕ್ತವಾದ ಓಂಕಾರವಾಯಿತಮ್ಮ. ಆ ಓಂಕಾರವೆ ಆದಿಯ ಶರಣನಮ್ಮ.
ಆ ಶರಣನ ಶಕ್ತಿಯ ಹೆಸರು ನೀನೆಯಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಪರಸತಿಯೆಂದು ಸದಾಶಿವಂಗೆ ಕೈಗೂಡಿಸಿದನಮ್ಮಾ. ನಿನ್ನೊಡನೊಬ್ಬಳು ಹುಟ್ಟಿದಳು.
ಆದಿಶಕ್ತಿಯೆಂದು ಈಶ್ವರಂಗೆ ಸಂಬಂಧಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಇಚ್ಛಾಶಕ್ತಿಯೆಂದು ರುದ್ರಂಗೆ ಪಟ್ಟವ ಕಟ್ಟಿದೆನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಜ್ಞಾನಶಕ್ತಿಯೆಂದು ವಿಷ್ಣುವಿಂಗೆ ಕೈಗೂಡಿಸಿದನಮ್ಮ. ನಿನ್ನೊಡನೊಬ್ಬಳು ಹುಟ್ಟಿದಳು.
ಕ್ರಿಯಾಶಕ್ತಿಯೆಂದು ಬ್ರಹ್ಮಂಗೆ ಧಾರೆಯನೆರೆದನಮ್ಮ. ಇವರು ನಿನ್ನಿಂದ ಹುಟ್ಟಿದ ಪಂಚ
ಕೃತ್ಯಂಗಳಿಗೊಳಗಾದರು. ಇದರೊಳು ಪೊಕ್ಕು ಬಳಸಿದೆಯಾಗಿ ನನ್ನ ನೀ ಮರೆದೆಯಮ್ಮ;
ಇನ್ನಾದರೂ ಎಚ್ಚೆತ್ತು ನಡೆಯೆ.
ನಡೆವ ಗತಿ ಪಥವಾವುದೆ ತಾಯಿ?
ಇವರು ನಿನ್ನೊಳಗಿರ್ಪರಮ್ಮ. ಪಂಚಭೂತಂಗಳಿಗೊಡೆಯರಮ್ಮ. ಪಂಚ ಚಕ್ರಗಳಧಿಕಾರಿಗಳಮ್ಮ.
ಮೊದಲಿವರ ನಿನ್ನ ವಶವ ಮಾಡಿಕೊಳ್ಳಮ್ಮ. ಇವರ ಸಂಗವನಗಲಿ,
ಹುಟ್ಟಿದ ಮಾರ್ಗವೆರಸಿ ಹುಬ್ಬಳ್ಳಿಗೆ ನಡೆಯಮ್ಮ. ಅಲ್ಲಿ ನಿರ್ಮಲ ಲಿಂಗ ಉಂಟಮ್ಮ.
ಪತಿಭಕ್ತಿಯ ಮಾಡಮ್ಮ ನಿನ್ನ ಗಂಡನೊಲಿವನಮ್ಮ. ಮೂಮ್ದಣ ಬಾಗಿಲ ತೆಗೆಯಮ್ಮ.
ಮೇಲಣ ಕೋಣೆಯ ಪೌಳಿಯ ಬಳಸಿ ನೋಡೆಯಮ್ಮ. ಥಳಥಳಿಸುವ ಪರುಷದ ಪೀಠದಲ್ಲಿ
ಪರಂಜ್ಯೋತಿ ಲಿಂಗವಿಪ್ಪುದಮ್ಮ. ನಿನ್ನ ಹೆಯ್ಯತ್ತನೆಂದು, ಹತ್ತಿರ ಬಂದು ನಮಿಸಮ್ಮ.
ಅಮೃತಕೂಪವ ಮೊಗೆಯಮ್ಮ. ತುಂಬಿದ ಕೊಡನ ಘೃತವಂ ಶಂಭುಲಿಂಗನ
ಮಂಡೆಗೆರೆಯಮ್ಮ. ಕೂಪದೊಳಗಣ ಕಮಲವ ಪಿಡಿಯಮ್ಮ. ಮಸ್ತಕದೊಳು ಮಡಗಮ್ಮ.
ಧೂಪಾರತಿಯ ಬೆಳಗಮ್ಮ. ಅಮೃತಾರೋಗಣೆಯ ಮಾಡಿಸಮ್ಮ. ಕರ್ಪೂರ
ವೀಳ್ಯವ ಸಲಿಸಮ್ಮ. ಗೀತವಾದ್ಯ ನೃತ್ಯಂಗಳಿಂ ಮೆಚ್ಚಿಸಮ್ಮ. ಸಂಭ್ರಮದ ಪೂಜೆಯೊಳು
ಸೈವೆರಗಾಗಮ್ಮ. ಇಂತೀ ಅವಿರಳ ಭಾವಪೂಜೆ ನಮೋ ನಮೋ ಎಂಬೆಯಮ್ಮ.
ಪದ:
ನಾಗರ ಕಾಟಕ್ಕೆ ನವೆದೆಯಲ್ಲಮ್ಮ
ನಾಗಲೋಕದಿಂ ಹಿಡಿಯಿತು ನಿಮ್ಮ.
ಜಗವನೆಲ್ಲವ ನುಂಗಿ ಜಾಳಿಸುತೈತೆ.
ಗಂಗಾಧರನ ಕಾಟದ ಸರ್ಪವಮ್ಮ.
ಬೇಗದಿಂದ ತ್ರಿಗಗನಕೊಗೆಯಮ್ಮ
ಈಗಲೆ ಪರಶಿವನೊಲವಿದೆಯಮ್ಮ ||೬||
ವಚನ:
ಆಧಾರಕುಂಡಲಿಯ ಸರ್ಪನ ವೇದನೆಯಿಂ ಭವರುಜೆಯಕ್ಕೀಡಾಗಿ ಬಳಲುತಿರ್ದೆಯಮ್ಮ.
ಅದು ಎಂಥ ಶೇಷನೆ ತಾಯಿ?
ಒಂಬತ್ತು ಹೋರಿನ ಹುತ್ತದಲ್ಲಿ ಸ್ಥಾನವಾಗಿರ್ಪುದಮ್ಮ, ಐದು ಮುಖದ ಅಜ್ಞಾನ ಸರ್ಪ!
ಪೂರ್ವಕ್ಕೊಂದು ಮುಖ, ಪಶ್ಚಿಮಕ್ಕೊಂದು ಮುಖ; ಉತ್ತರಕ್ಕೊಂದು ಮುಖ;
ದಕ್ಷಿಣಕ್ಕೊಂದು ಮುಖ; ಅಧೋದ್ವಾರಕ್ಕೊಂದು ಮುಖ; ಪಂಚವರ್ಣದ ಪ್ರಳಯ
ಕಾಳೋರಗನೆಯಮ್ಮ. ಅಲ್ಲಿಂದ ಬಂದು ನಿನ್ನನಲೆವುತ್ತಿದೆಯಮ್ಮ. ಅದರ ವಿಷದ ಹೊಗೆ
ತಾಗಿ ಅಜನ ಸೃಷ್ಟಿಯಲಿ ಅಲಿಪರಿದೆಯಮ್ಮ ನಿನ್ನ ಮಾತೇನು, ಈರೇಳು ಲೋಕವನೆಲ್ಲವ
ಕಚ್ಚಿ ಕೆಡವುತ್ತಿದೆಯಮ್ಮ. ಅದು ಪರಮೇಶ್ವರನ ಆಜ್ಞಾಶಕ್ತಿ ತಾನೆಯಮ್ಮ.
ಇಂಥಾ ಶೇಷನ ಹಿಡಿದುಕೊಂಡು ಪ್ರಸಾದವ ಕೊಂಬ ಪರಿಯಾವುದೆ ತಾಯಿ?
ಅಡಿಯ ಮಡದಿಂದೊತ್ತೆಯಮ್ಮ. ಹುತ್ತದ ಒಂಭತ್ತು ಹೋರನೆ ಮುಚ್ಚೆಯಮ್ಮ.
ಅಧೋಪವನವನೂರ್ಧ್ವಕೆತ್ತೆಯಮ್ಮ. ಮೂಲಾಗ್ನಿಯ ಪಟುವ ಮಾಡೆಯಮ್ಮ. ಆಧಾರ
ಕುಂಡಲಿಯನಂಡಲೆದಭಿಮುಖವ ಮಾಡೆಯಮ್ಮ. ನಾಗಸ್ವರದ ಶೃತಿಯ ನಖದ ಕೊನೆಯಲ್ಲಿ
ಹೆಚ್ಚಿಸೆಯಮ್ಮ. ಕಂಠಝೇಂಕಾರ ಸಪ್ತಸ್ವರದಂತಿರುಹೆಯಮ್ಮ. ಅದು ನಾದದ
ನಾದವ ಕೇಳುತ್ತ ನಾಭಿಮಂಡಲದಿಂದೆದ್ದು ಉಸುರ ಉನ್ಮನಿಯಲ್ಲಿ ಬಿಡುತ್ತ ಒಂದೆ ನಾಳದಲ್ಲಿ
ಗಮನಿಸುವುದಮ್ಮ ಮೇಲಣ ಕೋಣೆಯೊಳಗಿರ್ಪ ಕಪ್ಪೆ ಒತ್ತೆಯ ನುಂಗುವುದಮ್ಮ.
ಅಲ್ಲಿ ಸತ್ತ ಸರ್ಪನ ನೆತ್ತಿಯಲ್ಲಿ ಮಾಣಿಕವಿಪ್ಪುದಮ್ಮ, ಅದ ಸೆಳೆದುಕೊಳ್ಳಮ್ಮ.
ಅಪ್ರಶಿಖಾಮಂಡಲದ ಅಮೃತಾಹಾರವ ಸವಿಯಮ್ಮ. ಗಗನಾಂಬರ ಆತ್ಮನಿರತೆಯಾಗಿರಮ್ಮ,
ಪರಮೇಶ್ವರನಲ್ಲಿ ಪ್ರಸನ್ನಮುಖ ತಪ್ಪದಮ್ಮ. ಇಂಥ ಶೇಷನ ಪ್ರಸಾದಕ್ಕೆ ನಮೋ
ನಮೋ ಎಂಬೆನಮ್ಮ.
ಪದ:
ಎಲ್ಲವ ಹೇಳುವೆ ಎಲ್ಲಿಪ್ಪೆ ಕೊರವಿ?
ಕಲ್ಯಾಣದ ಚೆಲುವೈಕುಂಠವಮ್ಮ.
ಅಲ್ಲಿಂದನೆಲ್ಲವ ಪೇಳಿದೆ ನಿಮ್ಮ
ವೇಳೆಯನರಿತು ಹೋಗೆ ಎಡೆಮಾಡಿ ತಾರೆ
ಮೊದಲಾದ ಪಂಚಭಿಕ್ಷವ ಕೊಂಡುಬಾರೆ
ಚೆನ್ನಮಲ್ಲಿಕಾರ್ಜುನನ ವರವೆನಗುಂಟೆ ||೭||
ವಚನ:
ಮನಸಿನ ಕನಸಿನ ಕೋರಿಕೆಯೆಲ್ಲವ ಕಂಡಂತೆ ಪೇಳಿದೆ ನಿನ್ನ ಸ್ಥಲ-ನೆಲೆ ಯಾವುದೆ ತಾಯಿ?
ಕಲ್ಯಾಣವೆನ್ನ ತವರೂರಮ್ಮ. ವೈಕುಂಠವೆನ್ನ ಗಂಡನೂರೆಯಮ್ಮ. ಅಲ್ಲಿಂದ
ಬಂದು ನಿನ್ನ ಮನಕ್ಕೆ ಮಂಗಳವಪ್ಪಂತೆ ಪೇಳಿದೆನಮ್ಮ. ಅರಿವಿನ ಅಚ್ಚಕೊರವಿತಿ
ನಾನಮ್ಮ. ಎನಗೆ ದೇವರ ಒಲವರವುಂಟಮ್ಮ.
ಅದೆಂಥ ದೇವರುಗಳ ವರದಿಂದ ಪೇಳಿದೆಯಮ್ಮ?
ನೆಲದುರ್ಗದ ಭ್ರಾಂತದೇವಿ, ಸೊನ್ನಲಪುರದ ಲಕ್ಷ್ಮಿದೇವಿ, ಅನಲಾಪುರದ ಕ್ರಿಯ
ಮಹಂಕಾಳಿ, ಅಮೃತಾಪುರದ ಈಶಮಹೇಶ್ವರಿ, ಗಗನಾಪುರದ ನಾನಾ ಮಹಂತಿ, ಅಂಬಾಪುರದ
ಕ್ರಿಯಾಮಹೇಶ್ವರಿಯ ವರವೆಯಮ್ಮ ಮತ್ತು ಭೂಮಿಯೊಳಗಿರ್ಪ ಬ್ರಹ್ಮ
ದೇವರು, ಸಲಿಲದೊಳಗಿರ್ಪ ವಿಷ್ಣುದೇವರು, ಅಗ್ನಿಯೊಳಗಿರ್ಪ ರುದ್ರದೇವರು, ಪವನದೊಳಗಿರ್ಪ
ಈಶ್ವರದೇವರು, ಗಗನದೊಳಗಿರ್ಪ ಸದಾಶಿವರು, ಅಂಬರದೊಳಗಿರ್ಪ ಪರಶಿವದೇವರ
ವರವೆಯಮ್ಮ. ಮತ್ತಂ ಸದ್ಯೋಜಾತಮುಖದ ಆಚಾರಲಿಂಗ ದೇವರು ವಾಮದೇವಮುಖದ ಶಿವಲಿಂಗದೇವರು,
ತತ್ಪುರುಷಮುಖದ ಚರಲಿಂಗದೇವರು, ಈಶಾನಮುಖದ ಪ್ರಸಾದಲಿಂಗದೇವರು,
ಗಂಭೀರಮುಖದ ಘನಲಿಂಗದೇವರ ವರವೆಯಮ್ಮ. ಇಂತಿ ಒಂದೆ, ಎರಡೆ, ಮೂರೆ, ನಾಲ್ಕೆ,
ಐದೆ, ಆರೆ! ಮೀರೆ ಏಕನಾದವೆಂಬ ಎಕ್ಕೆಯ ಬೆನವನ ವರದಿಂ ಎಡೆದೆರಹಿಲ್ಲದೆ ಪರಿಪೂರ್ಣವಾದ
ಸಂದ ಶಂಕೆಯಳಿದು ಪೇಳಿದೆಯಮ್ಮ. ಇನ್ನೀತತ್ವ-ಸ್ಥಳ-ಕುಳಭೇದವನರಿದು ಅರ್ಪಿತಾವಧಾನ
ಮುಖಂಗಳ ವಿವರಿಸಿ ಸಕಲಪದಾರ್ಥಂಗಳ ನನಗೆಯು ದೇವರಿಗೆಯುಣಬಡಿಸಬೇಕಮ್ಮ.
ಅರ್ಪಿಸುವ ಸಾವಧಾನವಾವುದಮ್ಮ?
ಸದ್ಭಕ್ತಿಯಿಂದ ಭಕ್ತನನರಿದು, ಸುಚಿತ್ತಹಸ್ತದಿಂ ಸುಗಂಧವ ಆಚಾರಲಿಂಗದೇವರಿ
ಗರ್ಪಿಸಬೇಕಮ್ಮ. ನೈಷ್ಠಿಕ ಭಕ್ತಿಯಿಂ ಮಾಹೇಶ್ವರನನರಿದು ಸುಬುದ್ಧಿ ಹಸ್ತದಿಂ ಸುರಸವ
ಗುರುಲಿಂಗದೇವರಿಗರ್ಪಿಸಬೇಕಮ್ಮ. ಅವಧಾನ ಭಕ್ತಿಯಿಂ ಪ್ರಸಾದವನರಿದು ನಿರಹಂಕಾರ
ಹಸ್ತದಿಂ ಸ್ವರೂಪವ ಶಿವಲಿಂಗದೇವರಿಗರ್ಪಿಸಬೇಕಮ್ಮ. ಅನುಭಾವ ಭಕ್ತಿಯಿಂ
ಪ್ರಾಣಲಿಂಗಿಯನರಿದು ಸುಮನ ಹಸ್ತದಿಂ ಸುಸ್ಪರ್ಶನವ ಚರಲಿಂಗದೇವರಿಗರ್ಪಿಸಬೇಕಮ್ಮ.
ಆನಂದಭಕ್ತಿಯಿಂ ಶರಣರನರಿದು ಸುಜ್ಞಾನದಿಂದ ಸುಶಬ್ದವ ಪ್ರಸಾದ
ಲಿಂಗದೇವರಿಗರ್ಪಿಸಬೇಕಮ್ಮ. ಸಮರಸ ಭಕ್ತಿಯಿಂ ಐಕ್ಯನನರಿದು ಸದ್ಭಾವ ಹಸ್ತದಿಂ
ಸಂತೃಪ್ತಿಯ ಮಹಾಲಿಂಗದೇವರಿಗರ್ಪಿಸಬೇಕಮ್ಮ. ಮೀರಿದ ಸುಖವ ಪರತತ್ವದೊಳೊಡಗೂಡಿ
ಪ್ರಸಾದವ ಪಡೆದು ಪರಿಣಾಮಿಯಾಗಿರಮ್ಮ. ಇದು ನಿನಗೆ ಪರಾಪರಮುಕ್ತಿ
ಪರಶಿವಲಿಂಗದೊಲವಮ್ಮ.
೩೬೬.
ತೂಗಿದೆನು ನಿಜದುಯ್ಯಾಲೆ ನಾ
ಬೀಗಿದೆನು ನೆನವು ನಿಶ್ಚಲದಲ್ಲಿಗೆ ||ಪಲ್ಲವ||
ನಿಲ್ಲದೆ ಧರೆಯ ಮೇಲೆ ನೆಟ್ಟವರ
ಡಾಲಿಕಲ್ಲಿನ ಕಂಭವು
ಮೇಲೆ ಮಾಣಿಕದ ತೊಲೆ
ಕೀಲಿಟ್ಟು ಜಾಣನಾಡಿದೆನುಯ್ಯಲ ||೧||
ಸರವು ನಾಲ್ವರ ಹತಿಯೊಳು ಭರದಿಂದ
ಅರಿತ ಮಣೆಯಾರ ನಿಲಿಸಿ
ಅರಿದ ತೊಲೆಯ ಕಟ್ಟಲು ಆ ಉಯ್ಯಾಲೆ
ಹರಿಯುತೊದೆಯಿತು ಮುಂದಕ್ಕೆ ||೨||
ನಾದದ ಕಲ್ಲ ಕಟ್ಟಿಯದರೊಳಗೆ
ಭೇದಿಸುವ ಬಿಂದುಜಲವು
ಆಧಾರದ ಕಳೆಮೊಳೆಯೊಳು ಕೊಳವನದ
ಆದಿಲಿಂಗನ ಪಾಡುತ ||೩||
ಮುತ್ತುಮಾಣಿಕ್ಯದ ರತ್ನದ ತೊಡಿಗೆಯನು
ಸತ್ಯಮುಖಿಯರು ತೊಟ್ಟರು
ಅರ್ತಿಯಿಂ ರಾಗ ಮಾಡಿ ಪಾಡಿದರು
ಸತ್ಯಜ್ಞಾನದ ಶೃತಿಯೊಳು ||೪||
ಕೊಳಲು ಕಹಳೆಯ ಡೋಲಿನ ರವಸಕ್ಕೆ
ನಲಿದು ಒಡೆಯಿತು ಮುಂದಕ್ಕೆ
ಹೊಳೆವ ವಜ್ರದ ಕಂಭದ ಬೆಳಗಿನ
ಒಳಗೆ ಆಡಿದೆನುಯ್ಯಲ ||೫||
ಈಡಾಪಿಂಗಳನಾಳದ ಬೆಳಗಿನೊಳ
ಗಾಡಲೊದೆಯಿತು ಮುಂದಕ್ಕೆ
ನಾಡು-ದೇಶವು ನೋಡಲಾ ಉಯ್ಯಾಲೆ
ಗಾಡಿ ಸುಷುಮ್ನೆಯ ಕೂಡಿತು ||೬||
ಆರು ಚಕ್ರವನು ದಾಂಟಿ ಆರು ಉಯ್ಯಾಲೆ
ಹೋರ ಒದೆಯಿತು ಮುಂದಕ್ಕೆ
ಮೀರಿದ ಸ್ಥಲದಿ ನಿಂದು ಚೆನ್ನಮಲ್ಲನೊಳು
ಬೆರೆದು ಆಡಿದೆನುಯ್ಯಾಲೆ ||೭||
೩೬೭.
ಅರುಹಿಂದ ಆಚರಿಸಬೇಕು
ಮರಹಿಲ್ಲದೆ ತಾನಿರಬೇಕು
ರೆತೆಯ ಮರೆಯ ಕುರುಹರಿಯಬೇಕು
ಪರಬ್ರಹ್ಮದೊಳಗೆ ತಾ ನೆರೆಯಬೇಕು ||ಪಲ್ಲವ||
ಪಟ್ಟಣವನೆಲ್ಲ ಸುಟ್ಟು ಮಡಿಯಬೇಕು | ದೊಡ್ಡ
ಸೆಟ್ಟಿಕಾತಿಯ ಪಟ್ಟವಳಿಯಬೇಕು
ಪಟ್ಟದ ರಾಣೀಯೊಳು ನುಡಿಯಬೇಕು | ಅಲ್ಲಿ
ಬಿಟ್ಟ ಮಂಡೆಯೊಳು ತಾ ನಡೆಯಬೇಕು ||೧||
ಚಿಕ್ಕತಂಗಿಯೊಳೊಪ್ಪಿಯಾಡಬೇಕು | ತ
ಮ್ಮಕ್ಕನ ಬಿಗಿಬಿಗಿದಪ್ಪಬೇಕು
ಕುಕ್ಕುಟ ದನಿದೋರಿ ಕೂಗಬೇಕು | ನೆರೆ
ಸೊಕ್ಕಿದವರು ಮುರಿದೋಡಬೇಕು ||೨||
ಚಿಕ್ಕುಟು ಕಣ್ಣೆರೆದುಕ್ಕಬೇಕು |
ಬೆಕ್ಕಿನ ದೃಕ್ಕನು ಕುಕ್ಕಬೇಕು
ಹಕ್ಕಿಯ ಪಕ್ಕವ ಹಿಕ್ಕಬೇಕು | ಬಹು
ರಕ್ಕಸರುಗಳೊಕ್ಕಲಿಕ್ಕಬೇಕು ||೩||
ತಂದೆಯಂಗನೆಯೊಳಗಾಡಬೇಕು | ತನ್ನ
ಕಂದನ ತಾ ಬಂದು ಕೂಡಬೇಕು
ಹಿಂದುಮುಂದಾಗಿ ಮತ್ತೆ ನಡೆಯಬೇಕು | ನಿಜ
ಮಂದಿರದಿಂದುವ ಸುಡಬೇಕು ||೪||
ಹರಿಯ ಮನೆಯ ಮೆಟ್ಟಿ ಮರೆಯಬೇಕು
ಕರಿಗಳೆಲ್ಲವ ಕೊಂದುರಿಯಬೇಕು
ಕರಿಯ ಬೇದನ ಶಿರವನರಿಯಬೇಕು | ತನ್ನ
ಬರಿಯ ಮನೆಯ ಹೊಕ್ಕು ನೆರೆಯಬೇಕು ||೫||
ಮಂಜಿನ ಕೊಡನೊಡೆರೆದರಿಯಬೇಕು | ಅದ
ರಂಜಿಪ ಬಂಜೆಯು ಪರಿಯಬೇಕು
ಮುಂಜೂರಲಮೃತ ಕರೆಯಬೇಕು | ಬೇಗ
ನಂಜದೆ ಸುರಿದು ಮೈಮರೆಯಬೇಕು ||೬||
ಹುಲ್ಲೆಯ ತಲ್ಲಣವಡಗಬೇಕು | ಅಲ್ಲಿ
ಮೆಲ್ಲನೆ ಬಿಲ್ಲುಗಾರ ಸೋಲಬೇಕು
ಸೊ(ಬಿ?)ಲ್ಲುಗಾರನ ಬಿಲ್ಲು ಮೆಲ್ಲಬೇಕು | ಚೆನ್ನ
ಮಲ್ಲಿಕಾರ್ಜುನನಲ್ಲಿ ನಿಲ್ಲಬೇಕು ||೭||
೩೬೮.
ಏನೋ ನಮ್ಮ ನಲ್ಲ ನೀ ಮನೆಗೇಕೆ ಬಾರೆ
ನಾನೇನು ತಪ್ಪನು ಮಾಡಿದುದಿಲ್ಲ ||ಪಲ್ಲವ||
ಕೂಸಿನ ತಾಯಿಗೆ ಹೇಸದೊತ್ತೆಯ ಕೊಟ್ಟು
ಕೂಸತ್ತೆನ್ನಯ ನಲ್ಲ ಬೇಸತ್ತು ಹೋದೆ ||ಅನುಪಲ್ಲವ||
ಮನವುಳ್ಳ ಭಾವಕಿಗನುವಾಗಿ ನಮ್ಮ ನಲ್ಲ
ಮನ ಸಂಚಲವಾಗಲನುವಾದುದಿಲ್ಲ ||೧||
ಒತ್ತೆಯ ನಲ್ಲನ ತೋಳ ಮೇಲೊರಗಿದೆ
ಚಿತ್ತದ ನಲ್ಲನ ಕನಸಿನಲಿ ಕಂಡೆ ||೨||
ಕೇಳಯ್ಯ ಶ್ರೀಶೈಲ ಚೆನ್ನಮಲ್ಲಿಕಾರ್ಜುನ
ನೀನು ಮಾತಾಡಿದುದುಂಟು ಕೂಡಿದುದಿಲ್ಲ ||೩||
ಅಲ್ಲಮಪ್ರಭುವಿನ ವಚನಗಳು
೧.
ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ, ನಿಮ್ಮ ಶರಣಸಂಬಂಧ.
೨.
ಜಲದೊಳಗಿದ್ದ ಕಿಚ್ಚು
ಜಲವ ಸುಡದೆ, ಜಲವು ತಾನಾಗಿದ್ದಿತು ನೋಡಾ!
ನೆಲೆಯನಱದು ನೋಡಿಹೆನೆಂದಡೆ
ಅದು ಜಲವು ತಾನಲ್ಲ !
ಕುಲದೊಳಗಿದ್ದು, ಕುಲವ ಬೆರಸದೆ,
ನೆಲೆಗೆಟ್ಟುನಿಂದುದನಾರುಬಲ್ಲರು !
ಹೊಱಗೊಳಗೆ ತಾನಾಗಿದ್ದು ಮತ್ತೆ
ತಲೆದೋಱದಿಪ್ಪುದು, ಗುಹೇಶ್ವರ, ನಿಮ್ಮ ನಿಲುವು ನೋಡಾ !
ಪಿಂಡಜ್ಞಾನ ಸ್ಥಲ
೩.
ಆದಿಯಾಧಾರವಿಲ್ಲದಂದು
ಹಮ್ಮು ಬಿಮ್ಮುಗಳಿಲ್ಲದಂದು
ಸುರಾಳನಿರಾಳವಿಲ್ಲದಂದು
ಸಚರಾಚರವೆಲ್ಲ ರಚನೆಗೆ ಬಾರದಂದು
ಗುಹೇಶ್ವರ, ನಿಮ್ಮ ಶರಣನುದಯಿಸಿದನಂದು
೪.
ಅಯ್ಯ,
ಜಲ-ಕೂರ್ಮ-ಗಜ-ಫಣಿಯ ಮೇಲೆ ಧರೆ ವಿಸ್ತರಿಸಿ ನಿಲ್ಲದಂದು,
ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು,
ಅಗ್ನಿಗೆ ಕಳೆದೋಱದಂದು,
ಯುಗ-ಜುಗಮಿಗಿಲೆನಿಸಿದ ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನಱಿದಿಹೆನೆಂಬ ತ್ರಿಜಗದಧಿಪತಿಗಳಿಲ್ಲದಂದು :
ತೋಱುವ ಬೀಱುವ ಪರಿಭಾವದಲ್ಲಿ ಭರಿತ
ಅಗಮ್ಯ ಗುಹೇಶ್ವರಲಿಂಗವು.
೫.
ಎನ್ನ ನಾನಱಿಯದ ಮುನ್ನ
ನೀನೇನಾಗಿದ್ದೆ ಹೇಳಾ ?
ಮುನ್ನ ನೀ ಬಾಯಿ ಮುಚ್ಚಿಕೊಂಡಿದ್ದೆಯೆಂಬುದ
ನಾ ನಿನ್ನ ಕಣ್ಣಿಂದ ಕಂಡೆನು !
ಎನ್ನ ನಾನಱಿದ ಬಳಿಕ
ಇನ್ನು ನೀ ಬಾಯ್ದೆಱೆದು ಮಾತನಾಡಿದರೆ
ಅದನೆನ್ನ ಕಣ್ಣಿಂದ ನೀ ಕಂಡು ನಾಚಿದೆ ನೋಡಾ !
ಎನ್ನ ಕಾಬ ನಿನಗೆ, ನಿನ್ನ ಕಾಬ ಎನಗೆ
ಸಂಚದ ನೋಟ ಒಂದೆ ನೋಡಾ !
ಗುಹೇಶ್ವರ, ನಿನ್ನ ಬೆಡಗಿನ ಬಿನಾಣವನಱಿದೆ ನೋಡಾ !
೬.
ಮಾಯದ ಬಲೆಯಲ್ಲಿ ಸಿಲುಕಿದ
ಮರುಳ ನಾನೆಂದಱಿದ ಪರಿಯ ನೋಡಾ !
ತನ್ನ ವಿನೋದಕ್ಕೆ ಬಂದು
ನಿಶ್ಚಿಂತ ನಿರಾಳ ಗುಹೇಶ್ವರನೆಂದಱಿಯದ ಪರಿಯ ನೋಡಾ !
ಮಾಯಾವಿಲಾಸ ವಿಡಂಬನ ಸ್ಥಲ
೭.
ಕಾಯದ ಮೊದಲಿಂಗೆ ಬೀಜವಾವುದೆಂದಱಿಯದೀ ಲೋಕ !
ಇಂದ್ರಿಯಂಗಳು ಬೀಜವಲ್ಲ !
ಆ ಕಳಾಭೇದ ಬೀಜವಲ್ಲ !
ಸ್ವಪ್ನ ಬಂದೆಱಗಿತ್ತಲ್ಲಾ !
ಇದಾವಂಗೂ ಶುದ್ಧ ಸುಯಿಧಾನವಲ್ಲ ಕಾಣಾ ಗುಹೇಶ್ವರ.
೮.
ಗಗನದ ಮೇಲೊಂದಭಿನವ ಗಿಳಿ ಹುಟ್ಟಿ
ಸಯಸಂಭ್ರಮದಲ್ಲಿ ಮನೆಯ ಮಾಡಿತ್ತು !
ಒಂದು ದಿನ ಗಿಳಿ ಇಪ್ಪತೈದು ಗಿಳಿಯಾಯಿತ್ತು !
ಬ್ರಹ್ಮನಾ ಗಿಳಿಗೆ ಹಂಜರವಾದ
ವಿಷ್ಣುವಾ ಗಿಳಿಗೆ ಕೊಱೆಕೂಳಾದ
ರುದ್ರನಾ ಗಿಳಿಗೆ ತಾ ಕೋಲಾದ !
ಇಂತೀ ಮೂವರ ಮುಂದಣ ಕಂದನ ನುಂಗಿ
ದೃಷ್ಟನಾಮ ನಷ್ಟವಾಯಿತ್ತು-ಇದೆಂತೋ ಗುಹೇಶ್ವರ ?!
೯.
ನೆಲದ ಬೊಂಬೆಯ ಮಾಡಿ
ಜಲವ ಬಣ್ಣವನುಡಿಸಿ
ಹಲವು ಪರಿಯಾಶ್ರಮದಲ್ಲಿ ಉಲಿವ ಗೆಜ್ಜೆಯ ಕಟ್ ಟಿ
ವಾಯುವನಲಸಂಚಕ್ಕೆ ಅರಳೆಲೆಯ ಶೃಂಗಾರವ ಮಾಡಿ
ಆಡಿಸುವ ಯಂತ್ರವಾಹಕನಾರೋ ?
ಬಯಲ ಕಂಭಕ್ಕೆ ತಂದು
ಸಯವೆಂದು ಪರವ ಕಟ್ಟಿದೆಡೆ
ಸಯವದ್ವಯವಾಯಿತ್ತು-ಏನೆಂಬೆ ಗುಹೇಶ್ವರ.
೧೦.
ಜಂಬೂದ್ವೀಪದ ವ್ಯವಹಾರಿ
ಖಂಡಭಂಡವ ತುಂಬಿ
ಕುಂಭಿನಿಯುದರದ ಮೇಲೆ ಪಸರವನಿಕ್ಕಿದ.
ಉಷ್ಣ-ತೃಷ್ಣೆ ಘನವಾಗಿ
ಕಡಲೇಳು ಸಮುದ್ರವ ಕುಡಿದು
ನೀರಡಸಿ, ಅಱಲುಗೊಂಡು ಬೆಱಗಾದ !
ಶಿಶು ತಾಯ ಹೆಣನ ಹೊತ್ತುಕೊಂದು ಹೆಸರು ಹೇಳುತ್ತೈದಾನೆ
ಗುಹೇಶ್ವರನೆಂಬ ನಿಲವ ವಸುಧೆಯಾಕೃತಿ ನುಂಗಿತ್ತು.
೧೧.
ದೇವರೆಲ್ಲರ ಹೊಡೆತಂದು
ದೇವಿಯರೊಳಗೆ ಕೂಡಿತ್ತು-ಮಾಯೆ !
ಹರಹರಾ, ಮಾಯೆಯಿಯ್ದೆಡೆಯ ನೋಡಾ !
ಎರಡೆಂಬತ್ತು ಕೋಟಿ ಪ್ರಮಥಗಣಂಗಳು
ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು
ನಂದಿವಾಹನ-ರುದ್ರರು
ಇವರೆಲ್ಲರೂ
ಮಾಯೆಯ ಕಾಲುಗಾಹಿನ ಸರಮಾಲೆ ಕಾಣ ಗುಹೇಸ್ವರ !
೧೨.
ಊರ ಮಧ್ಯದ ಕಣ್ಣ ಕಾಡಿನೊಳಗೆ
ಬಿದ್ದೈದಾವೆ ಐದು ಹೆಣನು.
ಅಂದು ಬಂದು ಅಳುವರು ಬಳಗ ಘನವಾದ ಕಾರಣ,
ಹೆಣನೂ ಬೇಯದು, ಕಾಡೂ ನಂದದು
ಮಾಡ ಉರಿಯಿತ್ತು ಗುಹೇಶ್ವರ !
೧೩.
ಹುಲಿಯ ಬೆನ್ನಲ್ಲಿ ಒಂದು ಹುಲ್ಲೆ ಹೋಗಿ
ಮೇದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ರಕ್ಕಸಿಯ ಮನೆಗೆ ಹೋಗಿ
ನಿದ್ರೆಗೆಯ್ದು ಬಂದೆನೆಂದರೆ-ಅದ ಕಂಡು ಬೆಱಗಾದೆ !
ಜವನ ಮನೆಗೆ ಹೋಗಿ
ಸಾಯದೆ ಬದುಕಿ ಬಂದೆನೆಂದರೆ-ಅದ ಕಂಡು ಬೆಱಗಾದೆ !
ಗುಹೇಶ್ವರ.
೧೪.
ಹೃದಯಕಂದದ ಮೇಲೆ ಹುಟ್ಟಿತ್ತು
ಹರಿದು-ಹಬ್ಬಿ-ಕೊಬ್ಬಿ ಹಲವು ಫಲವಾಯಿತ್ತು ನೋಡಿರೇ
ಪರಿಪರಿಯ ಫಲಂಗಳನು-ಬೇಡಿದವರಿಗಿತ್ತು -
ಆ ಫಲವ ಬಯಸಿದವರು ಜಲದೊಳಗೆ ಬಿದ್ದರೆ
ನೋಡಿ ನಗುತ್ತಿದ್ದೆನ್ತು - ಗುಹೇಶ್ವರ.
೧೫.
ಅರಗಿನ ಪುತ್ಥಳಿಯನುರಿ ಕೊಂಡಡೆ
ಉದಕ ಬಾಯಾಱಿ ಬಳಲುತ್ತಿದೆ !
ಅಗೆಯಿಂ ಭೋ! ಭಾವಿಯನಗೆಯಿಂ ಭೋ !
ಅಗೆದಾತ ಸತ್ತ-ಭಾವಿ ಬತ್ತಿತ್ತು.
ಇದು ಕಾರಣ ನೆಱೆ ಮೂಱು ಲೋಕ
ಬಱುಸೂಱೆವೋಯಿತ್ತು-ಗುಹೇಶ್ವರ.
೧೬.
ಅಂಗದ ಕೊನೆಯ ಮೇಲಣ ಕೋಡಗ
ಕೊಂಬು-ಕೊಂಬಿಗೆ ಹಾರಿತ್ತು ಅಯ್ಯ.
ಒಂದು ಸೋಜಿಗ-
ಕೈಯ ನೀಡಲು ಮೈಯೆಲ್ಲವ ನುಂಗಿತ್ತು !
ಒಯ್ಯನೆ ಕರೆದಡೆ ಮುಂದೆ ನಿಂದಿತ್ತು !
ಮು(ಮೆ)ಯ್ಯಾಂತಡೆ ಬಯಲಾಯಿತ್ತು ಗುಹೇಶ್ವರ !!
೧೭.
ಭೂತ ಭೂತವ ಕೂಡಿ ಅದ್ಭುತವಾಗಿತ್ತು :
ಕಿಚ್ಚು ಕೋಡಿತ್ತು, ನೀರು ನೀರಡಸಿತ್ತು ;
ಉರಿಪವನದೋಷದೊಳಗಿದ್ದು ವಾಯುವಿಮ್ಮಡಿಸಿತ್ತ ಕಂಡೆ
ಗುಹೇಶ್ವರ.
೧೮.
ಅಡವಿಯೊಳಗೆ ಕಳ್ಳರು
ಕಡವಸದ ಸ್ವಾಮಿಯನು ಹುಡುಕಿ ಹುಡುಕಿ
ಅರಸುತ್ತೈದಾರೆ !
ಸೊಡರು ನಂದಿ ಕಾಣದೆ
ಅನ್ನಪಾನದ ಹಿರಿಯರೆಲ್ಲರೂ ತಮ್ಮ ತಾವಱಿಯದೆ
ಅಧರಪಾನವನುಂಡು ತೇಗಿ
ಸುರಾಪಾನವ ಬೇಡುತ್ತೈದಾರೆ.
ಅಱಿದ ಹಾರುವನೊಬ್ಬನು
ಅರಿದ ತಲೆಯ ಹಿಡಿದುಕೊಂಡು
ಅಧ್ಯಾತ್ಮವಿಕಾರದ ನೆತ್ತರ ಕುಡಿದನು
ನೋಡಾ-ಗುಹೇಸ್ವರ.
೧೯.
ಮಾಯದ ಕೈಯಲ್ಲಿ ಓಲೆಕಂಠವ ಕೊಟ್ಟರೆ
ಲಗುನ-ಮಿಗುನವ ಬರೆಯಿತ್ತು ನೋಡಾ !
ಅರಗಿನ ಪುತ್ಥಳಿಗೆ ಉರಿಯ ಸೀರೆಯನುಡಿಸಿದರೆ
ಅದು ಸಿರಿಯ ಸಿಂಗಾರವಾಯಿತ್ತು ನೋಡಾ !
ಅಂಬರದೊಳಗಾಡುವ ಗಿಳಿ
ಪಂಜರದೊಳಗಣ ಬೆಕ್ಕ ನುಂಗಿ
ರಂಭೆಯ ತೋಳಿಂದಗಲಿತ್ತು ನೋಡಾ-ಗುಹೇಶ್ವರ.
೨೦.
ಕೋಣನ ಕೊಂಬಿನ ತುದಿಯಲ್ಲಿ
ಏಳುನೂರೆಪ್ಪತ್ತು ಸೇದೆಯ ಭಾವಿ.
ಭಾವಿಯೊಳಗೊಂದು ಬಗರಿಗೆ
ಬಗರಿಗೆಯೊಳಗೊಬ್ಬ ಸೂಳೆ ನೋಡಯ್ಯ !
ಆ ಸೂಳೆಯ ಕೊರಳಲ್ಲಿ
ಏಳುನೂರೆಪ್ಪತ್ತಾನೆ ನೀಱಿತ್ತ ಕಂಡೆ-ಗುಹೇಶ್ವರ.
೨೧.
ಹುಲಿಯ ತಲೆಯ ಹುಲ್ಲೆ
ಹುಲ್ಲೆಯ ತಲೆಯ ಹುಲಿ-
ಈ ಎರಡರ ನಡು ಒಂದಾಯಿತ್ತು !
ಹುಲಿಯಲ್ಲ - ಹುಲ್ಲೆಯಲ್ಲ
ಕೆಲದಲೊಂದು ಬಂದು ಮೆಲುಕಾಡಿತ್ತು ನೋಡಾ.
ತಲೆಯಿಲ್ಲದ ಮುಂಡ
ತಱಗೆಲೆಯ ಮೇದರೆ
ಎಲೆಮಱೆಯಾಯಿತ್ತು ಗುಹೇಶ್ವರ.
೨೨.
ತೋಟವ ಬಿತ್ತಿದರೆಮ್ಮವರು
ಕಾಹ ಕೊಟ್ಟರು ಜವನವರು
ನಿತ್ಯವಿಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ !
ಗುಹೇಶ್ವರನಿಕ್ಕಿದ ಕಿಚ್ಚು
ಹೊತ್ತಿಕ್ಕಲುಂಟು, ಅಟ್ಟುಣ್ಣಲಿಲ್ಲ.
೨೩.
ನಿರ್ಣಯವನಱಿಯದ ಮನವೇ
ದುಗುಡವನಾಹಾರಂಗೊಂಡೆಯಲ್ಲಾ !
ಮಾಯಾಸೂತ್ರವಿದೇನೋ !
ಕಂಗಳೊಳಗಣ ಕತ್ತರೆ ತಿಳಿಯದಲ್ಲಾ !
ಬೆಳಗಿನೊಳಗಣ ಶೃಂಗಾರ ಬಳಲುತ್ತಿದೆ ಗುಹೇಶ್ವರ !
ಸಂಸಾರಹೇಯ ಸ್ಥಲ
೨೪.
ಸಂಸಾರವೆಂಬ ಹೆಣ ಬಿದ್ದಿರೆ
ತಿನಬಂದ ನಾಯ ಜಗಳವ ನೋಡಿರೇ !
ನಾಯ ಜಗಳವ ನೋಡಿ
ಹೆಣನೆದ್ದು ನಗುತ್ತಿದೆ
ಗುಹೇಶ್ವರನೆಂಬ ಲಿಂಗವಲ್ಲಿಲ್ಲ ಕಾಣಿರೇ !
೨೫.
ಹಳ್ಳದೊಳಗೊಂದು ಹುಳ್ಳಿ ಬರುತ್ತಿರಲು
ನೊರೆತೆರೆಗಳು ತಾಗಿದವಲ್ಲಾ !
ಸಂಸಾರವೆಂಬ ಸಾಗರದೊಳಗೆ
ಸುಖ-ದು:ಖಂಗಳು ತಾಗಿದವಲ್ಲಾ !
ಇದು ಕಾರಣ
ರೂಪಾದ ಜಗಕ್ಕೆ ಪ್ರಳಯವಾಯಿತ್ತು ಗುಹೇಶ್ವರ.
೨೬.
ಕರೆಯದೇ ಬಂದುದ
ಹೇಳದೆ ಹೋದುದ-ಆರೂ ಅಱಿಯರಲ್ಲಾ !
ಅಂದಂದಿಗೆ ಬಂದ ಪ್ರಾಣಿಗಳು-ಆರೂ ಅಱಿಯರಲ್ಲಾ !
ಗುಹೇಶ್ವರಲಿಂಗ ಉಣ್ಣದೇ ಹೋದುದ-ಆರೂ ಅಱಿಯರಲ್ಲ !
೨೭.
ಆಯಿತ್ತೆ ಉದಯಮಾನ
ಹೋಯಿತ್ತೆ ಅಸ್ತಮಾನ
ಉಳಿದವಲ್ಲಾ ನೀರಲಾದ ನಿರ್ಮಿತಂಗಳೆಲ್ಲವೂ !
ಕತ್ತಲೆಗವಿಯಿತ್ತು
ಮೂಱು ಲೋಕದೊಳಗೆ
ಇದಱಚ್ಚುಗವೇನು ಹೇಳಾ ಗುಹೇಶ್ವರ ? !
೨೮.
ಕಾಲುಗಳೆರಡೂ ಗಾಲಿ ಕಂಡಯ್ಯ
ದೇಹವೆಂಬುದೊಂದು ತುಂಬಿದ ಬಂಡಿ ಕಂಡಯ್ಯ
ಬಂಡಿಯ ಹೊಡೆವರೈವರು ಮಾನಿಸರು
ಒಬ್ಬರಿಗೊಬ್ಬರು ಸಮವಿಲ್ಲಯ್ಯ.
ಅದಱಿಚ್ಛೆಯನಱಿದು ಹೊಡೆಯದಿದ್ದರೆ
ಅದುಱಚ್ಚು ಮುಱಿಯಿತ್ತು ಗುಹೇಶ್ವರ.
೨೯.
ಆರಕ್ಕೆಯ ಸಿರಿಗೆ ಆರಕ್ಕೆ ಚಿಂತಿಸುವರು !
ಆರಕ್ಕೆಯ ಬಡತನಕ್ಕೆ ಆರಕ್ಕೆ ಮುಱುಗುವರು !
ಇದಾರಕ್ಕೆ ಆರಕ್ಕೆ ?
ಇದೇನಕ್ಕೆ ಏನಕ್ಕೆ ?
ಮಾಯದ ಬೇಳುವೆ ಹುರುಳಿಲ್ಲ
ಕೊಂದು ಕೂಗಿತ್ತು ನೋಡಾ ಗುಹೇಶ್ವರ.
೩೦.
ಮಾನದ ತೋರಿಹ ಆವಿಂಗೆ
ಕೊಳಗದ ತೋರಿಹ ಕೆಚ್ಚಲು
ತಾಳಮರದುದ್ದವೆರಡು ಕೋಡು ನೋಡಾ !
ಅದುನಱಸ ಹೋಗಿ ಆಱು ದಿನ
ಅದು ಕೆಟ್ಟು ಮೂಱು ದಿನ !
ಅಘಟಿತಘಟಿತ ಗುಹೇಶ್ವರ,
ಅಱಸುವ ಬಾರೈ ತಲೆಹೊಲದಲ್ಲಿ !
೩೧.
ಕುಲದಲಧಿಕನು ಹೋಗಿ
ಹೊಲೆಗೇರಿಯಲ್ಲಿ ಮನೆಯ ಕಟ್ಟಿದರೆ
ಕುಲಗೆಡದಿಪ್ಪ ಪರಿಯ ನೋಡಾ !
ಆತನ ಕುಲದವರೆಲ್ಲರೂ ಮುಖವ ನೋಡಲೊಲ್ಲದೈದಾರೆ.
ಕುಲವುಳ್ಳವರೆಲ್ಲರು ಕೈವಿಡಿದರು
ಕುಲಗೆಟ್ಟವನೆಂದು ತಿಳಿದು
ವಿಚಾರಿಸಲು ಹೊಲೆಗೆಟ್ಟು ಹೋಯಿತ್ತು
ಕಾಣಾ ಗುಹೇಶ್ವರ.
ಗುರುಕರುಣ ಸ್ಥಲ
೩೨.
ಕಂಡುದ ಹಿಡಿಯಲೊಲ್ಲದೆ
ಕಾಣದುದನಱಸಿ ಹಿಡಿದಹೆನೆಂದರೆ
ಸಿಕ್ಕದೆಂಬ ಬಳಲಿಕೆ ನೋಡಾ !
ಕಂಡುದನೆ ಕಂಡು
ಗುರುಪಾದವ ಹಿಡಿದಲ್ಲಿ
ಕಾಣದುದ ಕಾಣಬಹುದು ಗುಹೇಶ್ವರ.
೩೩.
ಕಾಣದುದನಱಸುವರಲ್ಲದೆ ಕಂಡುದನಱಸುವರೇ ?!
ಘನಕ್ಕೆ ಘನವಾದ ವಸ್ತು
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ
ತಾನೆ ಪ್ರಸಾದವಾದ, ತಾನೆ ಮಂತ್ರವಾದ, ತಾನೆ ಯಂತ್ರವಾದ
ತಾನೆ ಸಕಲವಿದ್ಯಾಸ್ವರೂಪನಾದ:
ಇಂತಿವೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಬಂದ ಬಳಿಕ
ಇನ್ನು ನಿರ್ವಿಕಾರ-ಗುಹೇಶ್ವರ.
೩೪.
ಕೃತಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬಡಿದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ತ್ರೇತಾಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಬೈದು
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ದ್ವಾಪರ ಯುಗದಲ್ಲಿ
ಶ್ರೀಗುರು ಶಿಷ್ಯಂಗೆ ಝಂಕಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಕಲಿಯುಗದಲ್ಲಿ
ಶ್ರೀಗುರು ಶಿಷ್ಯಂಗೆ ವಂದಿಸಿ
ಬುದ್ದಿಯ ಕಲಿಸಿದರೆ-ಆಗಲಿ ಮಹಾಪ್ರಸಾದವೆಂದೆನಯ್ಯ.
ಗುಹೇಶ್ವರ,
ನಿಮ್ಮ ಕಾಲದ ಕಟ್ಟಳೆಯ ಕಲಿತನಕ್ಕೆ ನಾ ಬೆಱಗಾದೆನು.
೩೫.
ಅಯ್ಯ, ನೀನೆನಗೆ ಗುರುವಪ್ಪಡೆ
ನಾ ನಿನಗೆ ಶಿಷ್ಯನಪ್ಪಡೆ,
ಎನ್ನ ಕರಣಾದಿ ಗುಣಂಗಳ ಕಳೆದು
ಎನ್ನ ಕಾಯದ ಕರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ತೊಡೆದು
ಎನ್ನ ಪ್ರಾಣದ ಧರ್ಮವ ನಿಲಿಸಿ,
ನೀನೆನ್ನ ಕಾಯದಲಡಗಿ
ನೀನೆನ್ನ ಪ್ರಾಣದಲಡಗಿ
ನೀನೆನ್ನ ಭಾವದಲಡಗಿ,
ನೀನೆನ್ನ ಕರಸ್ಥಲಕ್ಕೆ ಬಂದು
ಕಾರುಣ್ಯವ ಮಾಡು ಗುಹೇಶ್ವರ.
೩೬.
ಕಸ್ತುರಿಯ ಮೃಗ ಬಂದು ಸುಳಿಯಿತ್ತಯ್ಯ
ಸಕಲವಿಸ್ತಾರದ ರೂಹು ಬಂದು ನಿಂದಿತ್ತಯ್ಯ.
ಆವ ಗ್ರಹ ಬಂದು ಸೋಕಿತ್ತೆಂದಱಿಯೆನಯ್ಯ
ಆವ ಗ್ರಹ ಬಂದು ಹಿಡಿಯಿತ್ತೆಂದಱಿಯೆನಯ್ಯ.
ಹೃದಯಕಮಲಮಧ್ಯದಲ್ಲಿ
ಗುರುವನಱಿದು, ಪೂಜಿಸಿ,
ಗುರು ವಿಖ್ಯಾತನೆಂಬುದ ನಾನಱಿದೆನಯ್ಯ
ಗುರುಗುಹೇಶ್ವರನಲ್ಲಿ ಹಿಂದಣ ಹುಟ್ಟಱತು ಹೋದುದ ಕಂಡೆನಯ್ಯ.
೩೭.
ಎಣ್ಣೆ-ಬತ್ತಿ-ಪ್ರಣಿತೆ ಕೂಡಿ
ಜ್ಯೋತಿಯ ಬೆಳಗಯ್ಯ !
ಅಸ್ಥಿ-ಮಾಂಸ-ದೇಹ
ಪ್ರಾಣನಿ:ಪ್ರಾಣವಾಯಿತ್ತು !!
ದೃಷ್ಟಿವರಿದು ಮನ ಮುಟ್ಟಿದ ಪರಿ ಇನ್ನೆಂತೋ ?
ಮುಟ್ಟಿ ಲಿಂಗವ ಕೊಂಡಡೆ
ಕೆಟ್ಟಿತ್ತು ಜ್ಯೋತಿಯ ಬೆಳಗು !
ಇದು ಕಷ್ಟಕರವೆಂದಱಿದೆನು ಗುಹೇಶ್ವರ.
೩೮.
ಪಾತಾಳದಿಂದತ್ತ ಮಾತ ಬಲ್ಲವರಿಲ್ಲ
ಗಗನದಿಂದ ಮೇಲೆ ಅನುಭಾವ ತಾನಿಲ್ಲ
ಒಳಗಣ ಜ್ಯೋತಿಯ ಬೆಳಗ ಬಲ್ಲವರಿಲ್ಲ
ಹೊಱಗಣ ಹೊಱಗನು ಅಱಿಯಬಲ್ಲವರಿಲ್ಲ
ಹಿಂದಣ ಹಿಂದನು
ಮುಂದಣ ಮುಂದನು
ತಂದೆ ತೋಱಿದನು ನಮ್ಮ ಗುಹೇಶ್ವರನು.
೩೯.
ಎತ್ತಣ ಮಾಮರ
ಎತ್ತಣ ಕೋಗಿಲೆ ?
ಎತ್ತಣಿಂದೆತ್ತ ಸಂಬಂಧವಯ್ಯ ?!
ಬೆಟ್ಟದ ನೆಲ್ಲಿಯ ಕಾಯಿ
ಸಮುದ್ರದೊಳಗಣ ಉಪ್ಪು
ಎತ್ತಣಿಂದೆತ್ತ ಸಂಬಂಧವಯ್ಯಾ ?!
ಗುಹೇಶ್ವರಲಿಂಗಕ್ಕೆಯೂ
ಎನಗೆಯೂ
ಎತ್ತಣಿಂದೆತ್ತ ಸಂಬಂಧವಯ್ಯ ?!
೪೦.
ಕಾಣಬಾರದ ಲಿಂಗವು
ಕರಸ್ಥಲಕ್ಕೆ ಬಂದರೆ
ಎನಗಿದು ಸೋಜಿಗ ! ಎನಗಿದು ಸೋಜಿಗ !
ಅಹುದೆನಲಮ್ಮೆನು ಅಲ್ಲೆನಲಮ್ಮೆನು,
ಗುಹೇಶ್ವರಲಿಂಗ ನಿರಾಳ !
ನಿರಾಕಾರ ಸಾಕಾರವಾಗಿ
ಎನ್ನ ಕರಸ್ಥಲಕ್ಕೆ ಬಂದರೆ
ಹೇಳಲಮ್ಮೆ ಕೇಳಲಮ್ಮೆ.
೪೧.
ಜ್ಯೋತಿಯೊಳಗಣ ಕರ್ಪುರಕ್ಕೆ
ಅಪ್ಪುವಿನೊಳಗಿಪ್ಪ ಉಪ್ಪಿಂಗೆ
ಶ್ರೀ ಗುರುವಿನ ಹಸ್ತದೊಳಗಿಪ್ಪ ಶಿಷ್ಯಂಗೆ-
ಈ ಮೂಱಕ್ಕೆಯೂ
ಬೇಱೆ ಕ್ರಿಯಾವರ್ತನೆಯುಂಟೆ ಗುಹೇಶ್ವರ ?
೪೨.
ಗುರುಶಿಷ್ಯ ಸಂಬಂಧವನಱಸಲೆಂದು ಹೋದರೆ
ತಾನೆ ಗುರುವಾದ
ತಾನೆ ಶಿಷ್ಯನಾದ
ತಾನೆ ಲಿಂಗವಾದ.
ಗುಹೇಶ್ವರ,
ನಿಮ್ಮ ಶರಣನ ಕಾಯದ ಕೈಯಲ್ಲಿ ಲಿಂಗವ ಕೊಟ್ಟರೆ
ಭಾವ ಬತ್ತಲೆಯಾಯಿತ್ತು !
ಭಕ್ತ ಸ್ಥಲ
೪೩.
ಭವಿಯ ತಂದು ಭಕ್ತನ ಮಾಡಿ
ಪೂರ್ವಾಶ್ರಯವ ಕಳೆದ ಬಳಿಕ ಮರಳಿ ಪೂರ್ವವನೆತ್ತಿ ನುಡಿವ
ಗುರುದ್ರೋಹಿಯ ಮಾತ ಕೇಳಲಾಗದು,
ಹೆಸರಿಲ್ಲದ ಲಿಂಗಕ್ಕೆ ಹೆಸರಿಡುವ
ಲಿಂಗದ್ರೋಹಿಯ ಮಾತ ಕೇಳಲಾಗದು.
ಪೂರ್ವದಲ್ಲಿ ನಾಮವಿಲ್ಲದ ಗುರು
ಹೆಸರಿಲ್ಲದ ಲಿಂಗ, ಹೆಸರಿಲ್ಲದ ಶಿಷ್ಯ
ಇಂತೀ ತ್ರಿವಿಧಸ್ಥಲವನಱಿಯದೆ ಕೆಟ್ಟರು ಗುಹೇಶ್ವರ.
೪೪.
ಬೆವಸಾಯವ ಮಾಡಿ ಮನೆಯ ಬೀಯಕ್ಕೆ ಭತ್ತವಿಲ್ಲದಿದ್ದರೆ
ಆ ಬೆವಸಾಯದ ಗೊರ[=ಡ]ವೇತಕಯ್ಯ ?
ಕ್ರಯವಿಕ್ರಯವ ಮಾಡಿ ಮನೆಯ ಸಂಚು ನಡೆಯದನ್ನಕ್ಕ
ಆ ಕ್ರಯವಿಕ್ರಯದ ಗೊರ[=ಡ]ವೇತಕಯ್ಯ ?
ಒಡೆಯನನೋಲೈಸಿ ತನುವಿಂಗೆ ಅಷ್ಟಭೋಗವ ಪಡೆಯದಿದ್ದರೆ
ಆ ಓಲಗದ ಗೊರ[=ಡ]ವೇತಕಯ್ಯ ?
ಭಕ್ತನಾಗಿ ಭವಂನಾಸ್ತಿಯಾಗದಿದ್ದರೆ
ಆ ಉಪದೇಶವ ಕೊಟ್ಟ ಗುರು
ಕೊಂಡ ಶಿಷ್ಯ
ಇವರಿಬ್ಬರ ಮನೆಯಲ್ಲಿ ಮಾರಿ ಹೊಗಲಿ
ಗುಹೇಶ್ವರಲಿಂಗವತ್ತಲೆ ಹೊಗಲಿ.
೪೫.
ಮೇರುವ ಸಾರಿಗೆ ಕಾಗೆ ಹೊಂಬಣ್ಣವಾಗದಿದ್ದರೆ
ಆ ಮೇರುವಿಂದತ್ತಣ ಹುಲುಮೊರಡಿಯೆ ಸಾಲದೇ ?
ದೇವ, ನಿಮ್ಮ ಪೂಜಿಸಿ ಧಾವತಿಗೊಂಬಡೆ
ಆ ಧಾವತಿಯಿಂದ ಮುನ್ನಿನ ವಿಧಿಯೇ ಸಾಲದೇ?
ಗುಹೇಶ್ವರ, ನಿಮ್ಮ ಪೂಜಿಸಿ ಸಾವಡೆ
ನಿಮ್ಮಿಂದ ಹೊಱಗಣ ಜವನೆ ಸಾಲದೆ!
೪೬.
ಕಾಳರಕ್ಕಸಿಗೊಬ್ಬ ಮಗ ಹುಟ್ಟಿ
ಕಾಯದ ರಾಶಿಯ ಮೊಗೆವುತ್ತ ಸುರಿವುತ್ತಲಿದ್ದನಯ್ಯ !
ಕಾಳರಕ್ಕಸಿಯ ಮೂಗು ಮೊಲೆಯ ಕೊಯ್ದು
ದೇವಕನ್ನಿಕೆಯ ಮಱೆಹೊಕ್ಕು
ಬಾಯ ತುತ್ತೆಲ್ಲವನು ಉಣಲೊಲ್ಲದೆ ಕಾಱಿದಡೆ
ಆತನೆ ಭಕ್ತನೆಂಬೆ !
೪೭.
ಅಕ್ಷರವ ಬಲ್ಲೆವೆಂದು
ಅಹಂಕಾರವಡೆಗೊಂದು ಲೆಕ್ಕಗೊಳ್ಳರಯ್ಯ,
ಗುರುಹಿರಿಯರು ತೋರಿದ ಉಪದೇಶದಿಂದ
ವಾಗದ್ವೈತವ ಕಲಿತು, ವಾದಿಪರಲ್ಲದೆ
ಆಗು-ಹೋಗೆಂಬುದನಱಿಯರು,
ಭಕ್ತಿಯನಱಿಯರು-ಯುಕ್ತಿಯನಱಿಯರು-ಮುಕ್ತಿಯನಱಿಯರು
ಮತ್ತೂ ವಾದಿಗಳೆನಿಸುವರು
ಹೋದರು, ಗುಹೇಶ್ವರ, ಸಲೆ ಕೊಂಡ ಮಾಱಿಂಗೆ !
೪೮.
ಐದು ಮುಖದಂಗನೆಗೆ ಹದಿನೈದು ದೇಹ ನೋಡ ;
ಆ ಅಂಗನೆಯ ಮನೆಯೊಳಗಿದ್ದು
ತಾವಾರೆಂಬುದನಱಿಯದೆ
ಬಾಯಿಗೆ ಬಂದಂತೆ ನುಡಿವರು,
ಗುಹೇಶ್ವರ, ನಿಮ್ಮನಱಿಯದ ಜಡರುಗಳು.
೪೯.
ಎಣ್ಣೆ ಬೇಱೆ, ಬತ್ತಿ ಬೇಱೆ
ಎರಡೂ ಕೂಡಿ ಸೊಡರಾಯಿತ್ತು.
ಪುಣ್ಯ ಬೇಱೆ, ಪಾಪ ಬೇಱೆ
ಎರಡೂ ಕೂಡಿ ಒಡಲಾಯಿತ್ತು.
ಮಿಗಬಾರದು, ಮಿಗದಿರಬಾರದು,
ಒಡಲಿಚ್ಚೆಯ ಸಲಿಸದೆ ನಿಮಿಷವಿರಬಾರದು,
ಕಾಯಗುಣವಳಿದು,
(ಮಾಯ ಜ್ಯೋತಿ ವಾಯುವ ಕೂಡದ ಮುನ್ನ)
ಭಕ್ತಿಯ ಮಾಡಬಲ್ಲಾತನೇ ದೇವ, ಗುಹೇಶ್ವರ.
೫೦.
ಹೊನ್ನು ಮಾಯೆಯೆಂಬರು
ಹೊನ್ನು ಮಾಯೆಯಲ್ಲ.
ಹೆಣ್ಣು ಮಾಯೆಯೆಂಬರು
ಹೆಣ್ಣು ಮಾಯೆಯಲ್ಲ.
ಮಣ್ಣು ಮಾಯೆಯೆಂಬರು
ಮಣ್ಣು ಮಾಯೆಯಲ್ಲ.
ಮನದ ಮುಂದಣ ಆಶೆಯೇ ಮಾಯೆ ಕಾಣಾ
ಗುಹೇಶ್ವರ !
೫೧.
ಕಳ್ಳಗಂಜಿ ಕಾಡ ಹೊಕ್ಕಡೆ
ಹುಲಿ ತಿನ್ನದೆ ಮಾಬುದೇ ?
ಹುಲಿಗಂಜಿ ಹುತ್ತವ ಹೊಕ್ಕಡೆ
ಸರ್ಪ ತಿನ್ನದೆ ಮಾಬುದೇ ?
ಕಾಲಕ್ಕಂಜಿ ಭಕ್ತನಾದಡೆ ಕರ್ಮ ತಿನ್ನದೆ ಮಾಬುದೇ ?
ಇಂತೀ ಮೃತ್ಯುವಿನ ಬಾಯ ತುತ್ತಾದ
ವೇಷಡಂಬಕರನೇನೆಂಬೆ - ಗುಹೇಶ್ವರ !
೫೨.
ಐದು ಸರ್ಪಂಗಳಿಗೆ
ತನುವೊಂದು, ದಂತವೆರಡು !
ಸರ್ಪ ಕಡಿದು ಸತ್ತ ಹೆಣನು ಸುಳಿದಾಡುವುದ ಕಂಡೆ !
ಈ ನಿತ್ಯವನಱಿಯದ ಠಾವಿನಲ್ಲಿ
ಭಕ್ತಿಯೆಲ್ಲಿಯದೊ ಗುಹೇಶ್ವರ ?!
೫೩.
ಆರೂ ಇಲ್ಲದಾರಣ್ಯದೊಳಗೆ ಮನೆಯ ಕಟ್ಟಿದರೆ
ಕಾಡುಗಿಚ್ಚು ಎದ್ದು ಬಂದು ಹತ್ತಿತಲ್ಲ !
ಆ ಉರಿಯೊಳಗೆ ಮನೆ ಬೇವಲ್ಲಿ
ಮನೆಯೊಡೆಯನೆತ್ತ ಹೋದನೋ ?!
ಆ ಉರಿಯೊಳಗೆ ಬೆಂದ ಮನೆ
ಚೇಗೆಯಾಗದುದ ಕಂಡು
ಮನೆಯೊಡೆಯನಳಲುತ್ತ ಬಳಲುತ್ತೈದಾನೆ.
ಗುಹೇಶ್ವರ.
ನಿಮ್ಮ ಒಲವಿಲ್ಲದ ಠಾವ ಕಂಡು
ಹೇಸಿ ತೊಲಗಿದೆನಯ್ಯ !
೫೪.
ಪ್ರಣಿತೆಯೂ ಇದೆ
ಬತ್ತಿಯೂ ಇದೆ -
ಜ್ಯೋತಿಯ ಬೆಳಗುವಡೆ
ತೈಲವಿಲ್ಲದೆ ಪ್ರಭೆ ತಾನೆಲ್ಲಿಯದೋ ?!
ಗುರುವಿದೆ
ಲಿಂಗವಿದೆ -
ಶಿಷ್ಯನ ಸುಜ್ಞಾನವಂಕುರಿಸದನ್ನಕ್ಕರ ಭಕ್ತಿಯೆಲ್ಲಿಯದೋ ?!
ಸೋಹಮೆಂಬುದ ಕೇಳಿ, ದಾಸೋಹವ ಮಾಡದಿದ್ದರೆ
ಅತಿಗಳೆದನು ಗುಹೇಶ್ವರ.
೫೫.
ಘನತರಚಿತ್ರದ ರೂಹ ಬರೆಯಬಹುದಲ್ಲದೆ
ಪ್ರಾಣವ ಬರೆಯಬಹುದೇ ?
ಅಯ್ಯ,
ದಿವ್ಯಾಗಮಂಗಳು ಹೇಳಿದ ಕ್ರೀಯಲು ದೀಕ್ಷೆಯ ಮಾಡಬಹುದಲ್ಲದೆ
ಭಕ್ತಿಯ ಮಾಡಬಹುದೇ ?
ಅಯ್ಯ,
ಪ್ರಾಣವಹ ಭಕ್ತಿಯ ತನ್ಮಯ ನೀನು !
ಈ ಗುಣವುಳ್ಳಲ್ಲಿ ನೀನಿಹೆ
ಇಲ್ಲದಲ್ಲಿ ನೀನಿಲ್ಲ, ಗುಹೇಶ್ವರ.
೫೬.
ಕಾಯಕ್ಕೆ ಮಜ್ಜನ
ಪ್ರಾಣಕ್ಕೆ ಓಗರ
ಇವ ಮಾಡಲೆ ಬೇಕು,
ಸುಳಿವ ಸುಳುಹುಳ್ಳನ್ನಕ್ಕರ
ಇವ ಮಾಡಲೆ ಬೇಕು
ಗುಹೇಶ್ವರನೆಂಬ ಲಿಂಗಕ್ಕೆ
ಆತ್ಮನುಳ್ಳಕ್ಕರ ಭಕ್ತಿಯ ಮಾಡಲೆ ಬೇಕು.
೫೭.
ಅದ್ವೈತವ ನುಡಿದು ಅಹಂಕಾರಿಯಾದೆನಯ್ಯ
ಬ್ರಹ್ಮವ ನುಡಿದು ಭ್ರಮಿತನಾದೆನಯ್ಯ
ಶೂನ್ಯವ ನುಡಿದು ಸುಖದು:ಖಕ್ಕೆ ಗುರಿಯಾದೆನಯ್ಯ
ಗುಹೇಶ್ವರ, ನಿಮ್ಮ ಶರಣ ಸಂಗನ ಬಸವಣ್ಣನ ಸಾನ್ನಿಧ್ಯದಿಂದ
ನಾನು ಸದ್ಭಕ್ತನಾದೆನಯ್ಯ.
೫೮.
'ದೇವ' ಕಂಡಾ.
'ಭಕ್ತ' ಕಂಡಾ
ವಕರಳಿ ಮರಳಿ ಶರಣೆಂಬ ಕಂಡಾ !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಸಾವನ್ನಕ್ಕರ ಸರ ಉಂಟೇ, ಗುಹೇಶ್ವರ.
೫೯.
ಮುಂದು ಜಾವದಲೆದ್ದು
ಲಿಂಗದಂಘ್ರಿಯ ಮುಟ್ಟಿ,
ಸುಪ್ರಭಾತ ಸಮಯದಲ್ಲಿ
ಶಿವಭಕ್ತರ ಮುಖವ ನೋಡುವುದು,
ಹುಟ್ಟಿದುದಕ್ಕಿದೆ ಸಫಲ ನೋಡಾ !
ಸತ್ಯವಚನವಿಂತೆಂದುದು ;
"ಇವಿಲ್ಲದವರ ನಾನೊಲ್ಲೆ"
ಗುಹೇಶ್ವರ.
೬೦.
ಆಚಾರವಱಿಯದೆ
ವಿಭವವಳಿಯದೆ ;
ಕೋಪವಡಗದೆ
ತಾಪ ಮುಱಿಯದೆ-
ಬಱಿದೆ ಭಕ್ತರಾದೆವೆಂದು
ಬೆಬ್ಬನೆ ಬೆಱೆವವರ ಕೇಡಿಂಗೆ ನಾನು ಮಱುಗುವೆನು ಕಾಣಾ
ಗುಹೇಶ್ವರ.
೬೧.
ಆಸೆಗೆ ಸತ್ತುದು ಕೋಟಿ !
ಆಮಿಷಕ್ಕೆ ಸತ್ತುದು ಕೋಟಿ !
ಹೊನ್ನು-ಹೆಣ್ಣು-ಮಣ್ಣಿಂದು ಸತ್ತುದು ಕೋಟಿ !
ಗುಹೇಶ್ವರ,
ನಿಮಗಾಗಿ ಸತ್ತವರನಾರನೂ ಕಾಣೆ !!
೬೨.
ಹೃದಯಕಮಲದೊಳಗೊಂದು
ಮಱಿದುಂಬಿ ಹುಟ್ಟಿತ್ತು !
ಹಾರಿ ಹೋಗಿ ಆಕಾಶವ ನುಂಗಿತ್ತಯ್ಯಾ !!
ಆ ತುಂಬಿಯ ಗಱಿಯ ಗಾಳಿಯಲ್ಲಿ
ಮೂಱು ಲೋಕವೆಲ್ಲವೂ ತಲೆಕೆಳಗಾಯಿತ್ತು !!!
ಪಂಚವರ್ಣದ ಹಂಸೆಯ ಪಂಜರವ ಖಂಡಿಸಿದರೆ
ಗಱಿ ಮುಱಿದು, ತುಂಬಿ ನೆಲಕ್ಕುರುಳಿತ್ತು !
ನಿಜದುದಯದ ಬೆಡಗಿನ ಕೀಲ -
ಗುಹೇಶ್ವರ,
ನಿಮ್ಮ ಶರಣರನುಭಾವಸಂಗದಲ್ಲಿದ್ದು ಕಂಡೆನಯ್ಯ.
೬೩.
ಕಬ್ಬಿನಲ್ಲಿ ಬಿಲ್ಲ ಮಾಡಿ
ಪರಿಮಳದಲ್ಲಿ ಅಂಬ ಮಾಡಿ
ನಲ್ಲೋ ಬಿಲ್ಲಾಳೇ,
ಎನ್ನ ಮನದಲ್ಲಿ ಎಸೆಯ ಬಲ್ಲೆಯಲ್ಲಾ
ಗುಹೇಶ್ವರನೆಂಬ ಲಿಂಗವನು ?!
೬೪.
ಅಮರಾವತಿಯ ಪಟ್ಟಣದೊಳಗೆ
ದೇವೇಂದ್ರನಾಳುವ ನಂದನವನವಯ್ಯ !
ಅತ್ತ ಸಾರೆಲೆ ಕಾಮ, ಮೋಹವೆ ನಿನಗೆ ?
ಲೋಕಾದಿಲೋಕವನೆಲ್ಲವ ಮರುಳುಮಾಡಿದೆ-
ಕಾಮ, ಗುಹೇಶ್ವರಲಿಂಗವನಱಿ ಭೋ!
೬೫.
ಎಸೆಯದಿರು, ಎಸೆಯದಿರು
ಕಾಮ, ನಿನ್ನ ಬಾಣ ಹುಸಿಯಲೇಕೋ ?
ಲೋಭ-ಮೋಹ-ಮದ-ಮತ್ಸರ
ಇವು ಸಾಲದೇ ನಿನಗೆ ?
ಗುಹೇಶ್ವರಲಿಂಗದ ವಿರಹದಲ್ಲಿ ಬೆಂದವರ
ಮರಳಿ ಸುಡಲುಂಟೇ ಮರುಳು ಕಾಮ ?!
೬೬.
ಬಿಸುವಂತೆ ! ಜವಳಿಗಂಭ !!
ಲೇಸಾಯಿತ್ತು ಮನೆ
ಲೇಸಾಯಿತ್ತು ಮೇಲುವೊದಿಕೆ
ಮಗುಳೆ ಆ ಅಂಗಕ್ಕೆ ಕಿಚ್ಚನಿಕ್ಕಿ
ಮನೆಯನಿಂಬುಮಾಡಿದೆ ಲಿಂಗಜಂಗಮಕ್ಕೆ !
ಹುಟ್ಟುಗೆಟ್ಟು ಬಟ್ಟಬಯಲಲ್ಲಿ ನಾನಿದೇನೆ ಗುಹೇಶ್ವರ.
೬೭.
ತನು ತರತರಂಬೋಗಿ
ಮನವು ನಿಮ್ಮಲ್ಲಿ ಸಿಲುಕಿತ್ತಯ್ಯ.
ನೋಟವೇ ಪ್ರಾಣವಾಗಿ
ಆಪ್ಯಾಯನ ನಿಮ್ಮಲ್ಲಿ ಅಱಿತುದಯ್ಯ
ಸಿಲುಕಿತ್ತು ಶೂನ್ಯದೊಳಗೆ
ಗುಹೇಶ್ವರ ನಿರಾಳವಯ್ಯ.
೬೮.
ಮನ ಬಸುಱಾದರೆ ಕೈ ಬೆಸಲಾಯಿತ್ತ ಕಂಡೆ !
ಕರ್ಪುರದ ಕಂಪ ಕಿವಿ ಕುಡಿಯಿತ್ತ ಕಂಡೆ !
ಮುತ್ತಿನ ಢಾಳವ ಮೂಗು ನುಂಗಿತ್ತ ಕಂಡೆ !
ಕಂಗಳು ಹಸಿದು ವಜ್ರವ ನುಂಗಿತ್ತ ಕಂಡೆ !
ಒಂದು ನೀಲದೊಳಗೆ ಮೂಱು ಲೋಕವಡಗಿತ್ತ ಕಂಡೆ !
ಗುಹೇಶ್ವರ.
೬೯.
ನಿಚ್ಚಕ್ಕೆ ನಿಚ್ಚ ಒತ್ತೆಯ ಬೇಡಿದಡೆ
ಅಚ್ಚಿಗವಾಯಿತ್ತವ್ವಾ, ನಮ್ಮ ನಲ್ಲಂಗೆ
ಕಿಚ್ಚನೆ ಹೊತ್ತುಕೊಂಡು
ಅಚ್ಚನೆಯಾಡಲು
ಅಚ್ಚುಗವಾಯಿತ್ತವ್ವಾ, ನಮ್ಮ ನಲ್ಲಂಗೆ !
ಅಚ್ಚನೆಯ ಗಳಿಹವನಿಳುಹಿದರೆ
ಬಳಿಕ ನಿಶ್ಚಿಂತವಾಯಿತ್ತು, ಗುಹೇಶ್ವರ !!!
೭೦.
ಆಸೆಯೆಂಬ ಕೂಸನೆತ್ತಲು
ರೋಷವೆಂಬ ತಾಯಿ ಮುಂದೆ ಬಂದಿಪ್ಪಳು ನೋಡಾ !
ಇಂತೆರಡಿಲ್ಲದ ಕೂಸನೆತ್ತಬಲ್ಲಡೆ
ಅವ ಅಚ್ಚ ಶೀಲವಂತನೆಂಬೆ ಕಾಣಾ ಗುಹೇಶ್ವರ.
೭೧.
ತಾಯಿ ಬಂಜೆಯಾದಲ್ಲದೆ ಶಿಶು ಗತವಾಗದು.
ಬೀಜ ನಷ್ಟವಾದಲ್ಲದೆ ಸಸಿ ಗತವಾಗದು
ನಾಮ ನಷ್ಟವಿಲ್ಲದೆ ನೇಮ ನಷ್ಟವಾಗದು
ಮೊದಲುಗೆಟ್ಟಲ್ಲದೆ ಲಾಭದಾಸೆ ಬಿಡದು
ಗುಹೇಶ್ವರಲಿಂಗದ ನಿಜವನೆಯ್ದುವಡೆ
ಪೂಜೆಯ ಫಲ ಮಾದಲ್ಲದೆ ಭವಂ ನಾಸ್ತಿಯಾಗದು.
೭೨.
ಬೆಟ್ಟಕ್ಕೆ ಚಳಿಯಾದಡೆ
ಏನ ಹೊದಿಸುವಿರಯ್ಯ !
ಬಯಲು ಬತ್ತಲೆಯಾದಡೆ
ಏನ ನುಡಿಸುವರಯ್ಯ ?
ಭಕ್ತನು ಭವಿಯಾದಡೆ
ಏನನುಪಮಿಸುವೆನಯ್ಯ - ಗುಹೇಶ್ವರ ?
೭೩.
ಸತ್ತ ಬಳಿಕ ಮುಕ್ತಿಯ ಹಡೆದಹೆನೆಂದು
ಪೂಜಿಸ ಹೋದರೆ
ಆ ದೇವರೇನ ಕೊಡುವರೋ ?
ಸಾಯದೆ-ನೋಯದೆ-ಸ್ವತಂತ್ರನಾಗಿ
ಸಂದು-ಭೇದವಿಲ್ಲದಿಪ್ಪ, ಗುಹೇಶ್ವರ, ನಿಮ್ಮ ಶರಣ.
ಮಾಹೇಶ್ವರ ಸ್ಥಲ
೭೪.
ಕುರೂಪಿ
ಸುರೂಪಿಯ ನೆನೆದಡೆ
ಸುರೂಪಿಯಪ್ಪನೆ ?
ಆ ಸುರೂಪಿ
ಕುರೂಪಿಯ ನೆನದಡೆ
ಕುರೂಪಿಯಪ್ಪನೆ ?
ಧನವುಳ್ಳವರ ನೆನೆದಡೆ ದರಿದ್ರ ಹೋಹುದೇ ?
ಪುರಾತರ ನೆನೆದು ಕೃತಾರ್ಥರಾದೆವೆಂಬರು !
ತಮ್ಮಲ್ಲಿ ಭಕ್ತಿನಿಷ್ಠೆಯಿಲ್ಲದವರ ಕಂಡಡೆ
ಮೆಚ್ಚನು ಗುಹೇಶ್ವರನು.
೭೫.
ಕಾರಣವಿಲ್ಲ, ಕಾರ್ಯವಿಲ್ಲ.
ಏತಕ್ಕೆ ಭಕ್ತರಾದೆವೆಂಬಿರೋ ?
ಐವರ ಬಾಯ ಎಂಜಲನುಂಬಿರಿ !
ಐವರು ಸ್ತ್ರೀಯರ ಮುಖವನಱಿಯಿರಿ !
ಮೂಱು ಸಂಕಲೆಯ ಕಳೆಯಲಱಿಯಿರಿ !
ಕಾಯವಿಡಿದು ಲಿಂಗವ ಮುಟ್ಟಿಹೆನೆಂಬ
ಭ್ರಮೆಯ ನೋಡಾ, ಗುಹೇಶ್ವರ.
೭೬.
ಉದಯವಾಯಿತ್ತ ಕಂಡು
ಉದರಕ್ಕೆ ಕುದಿವರಯ್ಯ !
ಕತ್ತಲೆಯಾಯಿತ್ತ ಕಂಡು
ಮಜ್ಜನಕ್ಕೆಱೆವರಯ್ಯ ! ಲಿಂಗಕ್ಕೆ ನೇಮವಿಲ್ಲ !
ಇರುಳಿಗೊಂದು ನೇಮ !
ಹಗಲಿಗೊಂದು ನೇಮ ! ಲಿಂಗಕ್ಕೆ ನೇಮವಿಲ್ಲ !
ಕಾಯ ಒಂದೆಸೆ
ಜೀವ ಒಂದೆಸೆ
ಗುಹೇಶ್ವರನೆಂಬ ಲಿಂಗವು ತಾನೊಂದೆಸೆ !
೭೭.
ಅಗ್ರವಣಿ-ಪತ್ರೆ-ಧೂಪ-ದೀಪನಿವಾಳಿಯಲ್ಲಿ
ಪೂಜಿಸಿ ಪೂಜಿಸಿ ಬಳಲುತ್ತೈದಾರೆ !
ಏನೆಂದಱಿಯರು ! ಎಂತೆಂದಱಿಯರು !
ಜನಮರುಳೋ ಜಾತ್ರೆ ಮರುಳೋ-
ಎಂಬಂತೆ ಎಲ್ಲರೂ ಪೂಜಿಸಿ
ಏನನೂ ಕಾಣದೆ
ಲಯವಾಗಿ ಹೋದರು, ಗುಹೇಶ್ವರ.
೭೮.
ಮಜ್ಜನಕ್ಕೆಱೆದು ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಸೀತಾಳಕ್ಕಲ್ಲದೆ ?
ಪತ್ರೆ-ಪುಷ್ಪದಲ್ಲಿ ಪೂಜಿಸಿ ಫಲವು ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಗಿಡುಗಳಿಗಲ್ಲದೆ ?
ಸಯಿಧಾನವರ್ಪಿಸಿ ಪ್ರಸಾದದ ಫಲವ ಬೇಡುವರಯ್ಯ
ತಮಗೆಲ್ಲಿಯದೋ ಆ ಫಲವು ಹದಿನೆಂಟು ಧಾನ್ಯಕ್ಕಲ್ಲದೆ ?
ಲಿಂಗದೊಡೆಯ ಲಿಂಗಕ್ಕೆ ಕೊಟ್ಟು
ಫಲವ ಬೇಡುವ ಸರ್ವಾನ್ಯಾಯಿಗಳನೇನೆಂಬೆ ಗುಹೇಶ್ವರ.
೭೯.
ಜಾಲಗಾಱನ ಕಾಲು ಮುಳ್ಳು ತಾಗಿ ನೊಂದಿತ್ತೆಂಬಂತೆ
ಸೂನೆಗಾಱನ ಮನೆಯಲ್ಲಿ ಹೆಣ ಹೋಗಿ ಅಳುವಂತೆ
ಕನ್ನಗಳ್ಳನ ಮನೆಯಲ್ಲಿ ಬಟ್ಟಲು ಹೋಗಿ ಮಱುಗುವಂತೆ
ಠಕ್ಕನ ಪೂಜೆಗೆ ಮೆಚ್ಚುವನೇ ನಮ್ಮ ಗುಹೇಶ್ವರನು ?
೮೦.
ಸಾಸವೆಯಷ್ಟು ಸುಖಕ್ಕೆ
ಸಾಗರದಷ್ಟು ದುಃಖ ನೋಡಾ !
ಘಳಿಗೆಯ ಬೇಟವ ಮಾಡಿಹೆನೆಂಬ
ಪರಿಯ ನೋಡಾ !
ತನ್ನನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ
ಬಿನ್ನಾಣ ತಪ್ಪಿತ್ತು ಗುಹೇಶ್ವರ.
೮೧.
ಮಜ್ಜನಕ್ಕೆಱೆವರೆಲ್ಲಾ ಇದ್ದಲ್ಲಿ ಫಲವೇನು ?
ಮುದ್ರೆಧಾರಿಗಳಪ್ಪರಯ್ಯ !
ಲಿಂಗದಲ್ಲಿ ನಿಷ್ಠೆಯಿಲ್ಲ
ಜಂಗಮದಲ್ಲಿ ಪ್ರೇಮಿಗಳಲ್ಲ
ವೇಷಲಾಂಛನಧಾರಿಗಳಪ್ಪರಯ್ಯ !
ನೋಡಿ ಮಾಡುವ ಭಕ್ತಿ ಸಜ್ಜನಸಾರಾಯವಲ್ಲ
ಗುಹೇಶ್ವರ ಮೆಚ್ಚನಯ್ಯ !
೮೨.
ಕೊಟ್ಟ ಕುದುರೆಯನೇಱಲಱಿಯದೆ
ಮತ್ತೊಂದು ಕುದುರೆಯ ಬಯಸುವರು
ವೀರರೂ ಅಲ್ಲ ! ಧೀರರೂ ಅಲ್ಲ !!
ಇದು ಕಾರಣ
ನೆಱೆ ಮೂಱು ಲೋಕವೆಲ್ಲವೂ
ಹಲ್ಲಣವ ಹೊತ್ತುಕೊಂಡು ಬಳಲುತ್ತೈದಾರೆ
ಗುಹೇಶ್ವರನೆಂಬ ಲಿಂಗವನವರೆತ್ತಬಲ್ಲರೋ ?
೮೩.
ಜೀವವಿಲ್ಲದ ಹೆಣನ ಹಿಡಿದಾರುವರಯ್ಯ
ಪ್ರತಿಯಿಲ್ಲದ ಪ್ರತಿಗೆ ಪ್ರತಿಯ ಮಾಡುವರಯ್ಯ
ಶಿರವಿಲ್ಲದ ಮುಂಡಕ್ಕೆ ಸೇಸೆಯನಿಕ್ಕುವರು ಗುಹೇಶ್ವರ !
೮೪.
ಆದ್ಯರಲ್ಲ ! ವೇದ್ಯರಲ್ಲ !
ಸಾಧ್ಯರಲ್ಲದ ಹಿರಿಯರ ನೋಡಾ !
ತನುವಿಕಾರ ! ಮನವಿಕಾರ !
ಇಂದ್ರಿಯವಿಕಾರದ ಹಿರಿಯರ ನೋಡಾ !
ಶಿವಚಿಂತೆ ಶಿವಜ್ಞಾನಿಗಳ ಕಂಡರೆ
ಅಳವಾಡಿ ನುಡಿವರು
ಗುಹೇಶ್ವರನಱಿಯದ ಕರ್ಮಿಗಳಯ್ಯ !
೮೫.
ಆಳವಱಿಯದ ಭಾಷೆ
ಬಹುಕುಳವಾದ ನುಡಿ
ಇಂತೆರಡಱ ನುಡಿ ಹುಸಿಯಯ್ಯ !
ಬಹುಭಾಷಿತರು, ಸುಭಾಷಿತವರ್ಜಿತರು
"ಶರಣಸತಿ ಲಿಂಗಪತಿ" ಎಂಬರು
ಹುಸಿಯಯ್ಯ !
ಇಂತಪ್ಪವರ ಕಂಡು ನಾಚಿದೆನಯ್ಯ ಗುಹೇಶ್ವರ.
೮೬.
ದೇಶ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ತಮಂಧ ಗುಱಿಯಾಗಿ
ಲಯವಾಗಿ ಹೋದವರ ಕಂಡೆ !
ಕಾಮ ಗುಱಿಯಾಗಿ
ಬೆಂದುಹೋದವರ ಕಂಡೆ !
ನೀ ಗುಱಿಯಾಗಿ
ಲಯವಾಗಿ ಹೋದವರನಾರನೂ ಕಾಣೆ ಗುಹೇಶ್ವರ.
೮೭.
ಮರನೊಳಗಣ ಪತ್ರೆ ಫಲಂಗಳು
ಮರ ಕಾಲವಶದಲ್ಲಿ ತೋರುವಂತೆ,
ಹರನೊಳಗಣ ಪ್ರಕೃತಿಸ್ವಭಾವಂಗಳು
ಹರಭಾವದಿಚ್ಚೆಗೆ ತೋಱುವವು !
ಲೀಲೆಯಾದಡುಮಾಪತಿ
ಲೀಲೆ ತಪ್ಪಿದಡೆ ಸ್ವಯಂಭು ಗುಹೇಶ್ವರ.
೮೮.
ಓಡಿನೊಳಗುಂಟೆ ಕನ್ನಡಿಯ ನೋಟ ?
ಮರುಳಿನ ಕೂಟ ವಿಪರೀತಚರಿತ್ರ !
ನೋಟದ ಸುಖ ತಾಗಿ ಕೋಟಲೆಗೊಂಡೆನು
ಗುಹೇಶ್ವರನೊಬ್ಬನೆ ಅಚಳ
ಉಳಿದವರೆಲ್ಲರೂ ಸೂತಕಿಗಳು.
೮೯.
ಸತಿ ಭಕ್ತೆಯಾದಡೆ ಹೊಲೆಗಂಜಲಾಗದು.
ಪತಿ ಭಕ್ತನಾದಡೆ ಕುಲಕಂಜಲಾಗದು.
ಸತಿ-ಪತಿಯೆಂಬ ಅಂಗಸುಖ ಹಿಂಗಿ
ಲಿಂಗವೆ ಪತಿಯಾದ ಬಳಿಕ
ಸತಿಗೆ ಪತಿಯುಂಟೆ?
ಪತಿಗೆ ಸತಿಯುಂಟೆ?
ಪಾಲುಂಡು ಮೇಲುಂಬರೇ ಗುಹೇಶ್ವರ ?!
೯೦.
ಪಂಚೇಂದ್ರಿಯ ಸಪ್ತಧಾತುವನತಿಗಳೆದಲ್ಲಿ
ಘನವೇನೋ ?
ಕಾಮ-ಕ್ರೋಧ-ಲೋಭ-ಮೋಹ-
ಮದ-ಮತ್ಸರವಿಷಯವನತಿಗಳೆದಲ್ಲಿ
ಫಲವೇನೋ ?
ಇವೆಲ್ಲವ ಕೊಂದ ಪಾಪ ನಿಮ್ಮ ತಾಗುವುದು,
ಗುಹೇಶ್ವರ.
೯೧.
ಲಿಂಗ ಒಳಗೋ ಹೊಱಗೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಎಡನೋ ಬಲನೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಮುಂದೋ ಹಿಂದೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಸ್ಥೂಲವೋ ಸೂಕ್ಷ್ಮವೋ ?
ಬಲ್ಲಡೆ ನೀವು ಹೇಳಿರೇ !
ಲಿಂಗ ಪ್ರಾಣವೋ, ಪ್ರಾಣ ಲಿಂಗವೋ ?
ಬಲ್ಲಡೆ ನೀವು ಹೇಳಿರೇ ? ಗುಹೇಶ್ವರ.
೯೨.
ತನುವಿಂಗೆ ತನುವಾಗಿ
ಮನಕ್ಕೆ ಮನವಾಗಿ
ಜೀವಕ್ಕೆ ಜೀವವಾಗಿ ಇದ್ದುದನಾರು ಬಲ್ಲರೋ ?!
ಅದು ದೂರವೆಂದು
ಸಮೀಪವೆಂದು
ಮಹಂತ ಗುಹೇಶ್ವರನೊಳಗೆಂದು
ಹೊಱಗೆಂದು
ಬಱುಸೂಱೆವೋದರು !
ಪ್ರಸಾದಿ ಸ್ಥಲ
೯೩.
ಲಿಂಗಾರ್ಚನೆಯಿಲ್ಲದ ಮುನ್ನ
ಸಿಂಗಿಯಾನಾರೋಗಿಸಿದಿರಿ
ಸಂಜೆ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ
ಚಿತ್ರಗುಪ್ತರಱಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ
ಬೈಚಿಟ್ಟಿರಿ ಕೈಲಾಸವ ನಿಮ್ಮ ಚಿಕ್ಕುಟಾಧಾರದಲ್ಲಿ
ಈರೇಳು ಭುವನಂಗಳೆಲ್ಲವೂ ನಿಮ್ಮ ರೋಮಕೂಪದಲ್ಲಡಗಿದವು
ಪ್ರಾಣಾಪಾನ ವ್ಯಾನೋದಾನ ಸಮಾನರಹಿತ ಗುಹೇಶ್ವರ.
೯೪.
ತ್ರಿವಿಧ ನಿತ್ಯವ
ತ್ರಿವಿಧ ಅನಿತ್ಯವ ಬಲ್ಲವರಾರೋ ?
ತ್ರಿವಿಧಕ್ಕೆ ತ್ರಿವಿಧವನಿತ್ತು
ತ್ರಿವಿಧಪ್ರಸಾದದ ಕೊಳಬಲ್ಲಡೆ
ಆತನ ಧೀರನೆಂಬೆ !
ಆತನ
ಗುಹೇಶ್ವರಲಿಂಗದಲ್ಲಿ ಅಚ್ಚಪ್ರಸಾದಿಯೆಂಬೆ !
೯೫.
ಬೇಡದ ಮುನ್ನ ಮಾಡಬಲ್ಲಡೆ ಭಕ್ತ
ಬೇಡುವನೆ ಲಿಂಗಜಂಗಮ ?
ಬೇಡುವರಿಗೆಯೂ
ಬೇಡಿಸಿಕೊಂಬವರಿಗೆಯೂ
ಪ್ರಸಾದವಿಲ್ಲ ಗುಹೇಶ್ವರ.
೯೬.
ಒಳಗ ತೊಳೆಯಲಱಿಯದೇ
ಹೊಱಗ ತೊಳೆದು ಕುಡಿಯುತ್ತಿದ್ದರಯ್ಯ !
ಪಾದೋದಕ-ಪ್ರಸಾದವನಱಿಯದೆ
ಬಂದ ಬಟ್ಟೆಯಲ್ಲಿ ಮುಳುಗುತ್ತೈದಾರೆ ಗುಹೇಶ್ವರ.
೯೭.
ಮಾಡಿದ ಓಗರ ಮಾಡಿದಂತೆ ಇದ್ದಿತು
ನೀಡುವ ಕೈಗಳೆಡೆಯಾಡುತ್ತಿದ್ದವು.
ಲಿಂಗಕ್ಕರ್ಪಿತವ ಮಾಡಿದೆನೆಂಬರು.
ಒಂದಱಲೊಂದು ಸವೆಯದು ನೋಡಾ
ಲಿಂಗನಾರೋಗಣೆಯ ಮಾಡಿದನೆಂಬರು
ತಾವುಂಡು ನಿಮ್ಮ ದೂಱುವರು ಗುಹೇಶ್ವರ.
೯೮.
ತನ್ನ ಮುಟ್ಟಿ ನೀಡಿದುದೇ ಪ್ರಸಾದ.
ತನ್ನ ಮುಟ್ಟದೇ ನೀಡಿದುದೇ ಓಗರ.
ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದಿ.
ಇದುಕಾರಣ-
ಇಂತಪ್ಪ ಭೃತ್ಯಾಚಾರಿಗಲ್ಲದೆ ಪ್ರಸಾದವಿಲ್ಲ ಗುಹೇಶ್ವರ.
೯೯.
ಆಧಿಯಿಲ್ಲದಿದ್ದಡೆ
ಲಿಂಗಪ್ರಸಾದಿಯೆಂಬೆ !
ವ್ಯಾಧಿಯಿಲ್ಲದಿದ್ದಡೆ
ಜಂಗಮಪ್ರಸಾದಿಯೆಂಬೆ !
ಲೌಕಿಕ ಸೋಂಕದಿದ್ದಡೆ
ಸಮಯಪ್ರಸಾದಿಯೆಂಬೆ !
ಇಂತೀ ತ್ರಿವಿಧಪ್ರಸಾದಸಂಬಂಧಿಯಾದಾತನ
ಅಚ್ಚಪ್ರಸಾದಿಯೆಂಬೆನು ಕಾಣಾ ಗುಹೇಶ್ವರ.
೧೦೦.
ಪದವನರ್ಪಿಸಬಹುದಲ್ಲದೆ
ಪದಾರ್ಥವನರ್ಪಿಸಬಾರದು !
ಓಗರವನರ್ಪಿಸಬಹುದಲ್ಲದೆ
ಪ್ರಸಾದವನರ್ಪಿಸಬಾರದು !
ಗುಹೇಶ್ವರ, ನಿಮ್ಮ ಶರಣರು
ಹಿಂದ ನೋಡಿ ಮುಂದನರ್ಪಿಸಿದರು !
ಪ್ರಾಣಲಿಂಗಿ ಸ್ಥಲ
೧೦೧.
ಪ್ರಣವಮಂತ್ರವ ಕರ್ಣದಲಿ ಹೇಳಿ
ಶ್ರೀಗುರು ಶಿಷ್ಯನ ಅಂಗದ ಮೇಲೆ
ಲಿಂಗಪ್ರತಿಷ್ಠೆಯ ಮಾಡಿದ ಬಳಿಕ
ಪ್ರಾಣದಲಿ ಲಿಂಗವಿಪ್ಪುದೆಂಬ
ವ್ರತಗೇಡಿಗಳ ಮಾತ ಕೇಳಲಾಗದು.
ಒಳಗಿಪ್ಪನೇ ಲಿಂಗದೇವನು
ಮಲ-ಮೂತ್ರ-ಮಾಂಸದ ಹೇಸಿಕೆಯೊಳಗೆ ?
ಅಲ್ಲಿ ಪ್ರಾಣವಿಪ್ಪುದಲ್ಲದೆ ಲಿಂಗವಿಪ್ಪುದೇ ?
ಆ ಪ್ರಾಣವ ತಂದು
ತನ್ನ ಇಷ್ಟಲಿಂಗದಲ್ಲಿರಿಸಿ ನೆರೆಯ ಬಲ್ಲಡೆ
ಆತನೆ ಪ್ರಾಣಲಿಂಗಸಂಬಂಧಿ !
ಅಲ್ಲದವರ ಮೆಚ್ಚುವನೆ ನಮ್ಮ ಗುಹೇಶ್ವರಲಿಂಗವು ?
೧೦೨.
ಕದಳಿಯ ಬನವ ಹೊಕ್ಕು
ಹೊಲಬ ತಿಳಿಯದನ್ನಕ್ಕ,
ಬಯಲ ಗಾಳಿಯ ಹಿಡಿದು
ಘಟ್ಟಿ ಮಾಡದನ್ನಕ್ಕ,
ಬಱಿದೆ ಬಹುದೇ ಶಿವಜ್ಞಾನ ?
ಷಡುವರ್ಗವಳಿಯದನ್ನಕ್ಕ
ಅಷ್ಟಮದವಳಿಯದನ್ನಕ್ಕ
ಬಱಿದೆ ಬಹುದೇ ಶಿವಸಂಪದ ?
ಮದಮತ್ಸರವ ಮಾಡಲಿಲ್ಲ !
ಹೊದಕುಳಿಗೊಳಲಿಲ್ಲ
ಗುಹೇಶ್ವರಲಿಂಗ ಕಲ್ಪಿತದೊಳಗಲ್ಲ !
೧೦೩.
ಶಬ್ದ ಸ್ಪರ್ಶ ರೂಪ ರಸ ಗಂಧ
ಪಂಚೇಂದ್ರಿಯ ಸಪ್ತಧಾತು ಅಷ್ಟಮದದಿಂದ
ಮುಂದುಗಾಣದವರು ನೀವು ಕೇಳಿರೇ !
ಲಿಂಗವಾರ್ತೆಯ ವಚನರಚನೆಯ
ಮಾತನಾಡುವಿರಯ್ಯ !
ಸಂಸಾರದ ಮುಚ್ಚು ಬಿಡದನ್ನಕ್ಕರ
ಸೂಕ್ಷ್ಮಶಿವಪಥವು ಸಾಧ್ಯವಾಗದು.
ಗುಹೇಶ್ವರಲಿಂಗದಲಿ
ವಾಕು ಪಾಕವಾದಡೇನು ?
ಮನ ಪಾಕವಾಗದನ್ನಕ್ಕರ ?!
೧೦೪.
ಮರ್ತ್ಯಲೋಕದ ಮಾನವರು
ದೇಗುಲದೊಳಗೊಂದು ದೇವರ ಮಾಡಿದಡೆ
ಆನು ಬೆಱಗಾದೆನಯ್ಯ !
ನಿಚ್ಚಕ್ಕೆ ನಿಚ್ಚ ಅರ್ಚನೆಪೂಜನೆಯ ಮಾಡಿಸಿ
ಭೋಗವ ಮಾಡುವರ ಕಂಡು ನಾನು ಬೆಱಗಾದೆನು
ಗುಹೇಶ್ವರ,
ನಿಮ್ಮ ಶರಣರು ಹಿಂದೆ ಲಿಂಗವನಿರಿಸಿ ಹೋದರು.
೧೦೫.
ಭಾವದಲೊಬ್ಬ ದೇವರ ಮಾಡಿ
ಮನದಲೊಂದು ಭಕ್ತಿಯ ಮಾಡಿ
ಕಾಯದ ಕೈಯಲ್ಲಿ ಕಾರ್ಯವುಂಟೆ ?
ವಾಯಕ್ಕೆ ಬಳಲುವರು ನೋಡಾ !
ಎತ್ತನೇಱಿ ಎತ್ತನಱಸುವರು ಎತ್ತ ಹೋದರೈ
ಗುಹೇಶ್ವರ ?
೧೦೬.
ಹೊಟ್ಟೆಯ ಮೇಲೆ
ಕಟ್ಟೋಗರದ ಮೊಟ್ಟೆಯ ಕಟ್ಟಿದರೇನು?
ಹಸಿವು ಹೋಹುದೇ ?
ಅಂಗದ ಮೇಲೆ ಲಿಂಗ ಸ್ವಾಯತವಾದರೇನು ?
ಭಕ್ತನಾಗಬಲ್ಲನೆ ?
ಇಟ್ಟ ಕಲ್ಲು ಮೆಳೆಯ ಮೇಲೆ ಸಿಕ್ಕಿದಡೆ
ಆ ಕಲ್ಲು ಲಿಂಗವೆ ?
ಆ ಮೆಳೆ ಭಕ್ತನೆ ?
ಇಟ್ಟಾತ ಗುರುವೆ ?
ಇಂತಪ್ಪನವರ ಕಂಡರೆ ನಾಚುವೆನಯ್ಯ ಗುಹೇಶ್ವರ.
೧೦೭.
ಇಷ್ಟಲಿಂಗವನು ಪ್ರಾಣಲಿಂಗವೆಂಬ
ಕಷ್ಟವೆಲ್ಲಿಯದೋ ?
ಇಷ್ಟಲಿಂಗ ಹೋದರೆ ಪ್ರಾಣಲಿಂಗ ಹೋಗದು ನೋಡಾ !
ಇಷ್ಟಲಿಂಗ-ಪ್ರಾಣಲಿಂಗವೆಂಬ ಬೇಧವನು
ಗುಹೇಶ್ವರ, ನಿಮ್ಮ ಶರಣ ಬಲ್ಲ.
೧೦೮.
ವ್ರತಗೇಡಿ, ವ್ರತಗೇಡಿ ಎಂಬವ ತಾನೆ ವ್ರತಗೇಡಿ,
ವ್ರತಗೆಡಲಿಕೇನು ಹಾಲಂಬಿಲವೆ ?
ವ್ರತಗೆಟ್ಟ ಬಳಿಕ ಘಟ ಉಳಿಯಬಲ್ಲುದೇ ?
ಕಾಯದೊಳಗೆ ಜೀವ ಉಳ್ಳನ್ನಕ್ಕರ
ಅದೇ ಪ್ರಾಣಲಿಂಗವು ಕಾಣಾ ಗುಹೇಶ್ವರ.
೧೦೯.
ಅಂಗದ ಕಳೆಯಲೊಂದು ಲಿಂಗವ ಕಂಡೆ
ಲಿಂಗದ ಕಳೆಯಲೊಂದು ಅಂಗವ ಕಂಡೆ !
ಅಂಗದ ಲಿಂಗದ ಸಂದಣಿಯನಱಸಿ ಕಂಡೆ ನೋಡಿರೇ !
ಇಲ್ಲಿ ಐದಾನೆ ಶಿವನು !
ಬಲ್ಲಡೆ ಇರಿಸಿಕೊಳ್ಳಿರೇ ಕಾಯವಳಿಯದ ಮುನ್ನ !!
ನೋಡಬಲ್ಲಡೆ ಗುಹೇಶ್ವರಲಿಂಗಕ್ಕೆ ಬೇರೆ ಠಾವುಂಟೆ ಹೇಳಿರೇ.
೧೧೦.
ಪೂಜಿಸಿ ಕೆಳಯಿಂಕೆ ಇಳುಹಲದೇನೋ ?
ಅನಾಗತ ಪೂಜೆಯ ಮಾಡಲದೇನೋ ?
ದೇಹವೇ ಪಿಂಡಿಗೆ
ಜೀವವೇ ಲಿಂಗ-ಗುಹೇಶ್ವರ.
೧೧೧.
ಅಱಿದಱಿದು ಅಱಿವು ಬಱುದೊಱಿವೋಯಿತ್ತು !
"ಕುಱುಹ[ತೋಱ]ದಡೆಂತೂ ನಂಬರು,
ತೆಱಹಿಲ್ಲದ ಘನವ ನೆನೆದು
ಗುರುಶರಣೆಂಬುದಲ್ಲದೆ ಮಱಹು ಬಂದೀತೆಂ"ದು
ಗುರು ಕುಱುಹ ತೋಱಿದನಲ್ಲದೆ
ಬಲ್ಲಡೆ ಗುಹೇಶ್ವರಲಿಂಗವು ಹೃದಯದಲೈದಾನೆ.
೧೧೨.
ಉದಕ ಮೂರುತಿಯಾಗಿ
ಉದಯವಾಯಿತ್ತು ಪಿಂಡಿಗೆಯಲ್ಲಿ
ಮೂಲ ಸ್ಥಾನ ಸ್ಥಾಪ್ಯವಾಯಿತ್ತು
ಸ್ವದೇಹಶಿವಪುರದಲ್ಲಿ !
ವಾಯು ಪೂಜಾರಿಯಾಗಿ
ಪರಿಮಳದಿಂಡೆದಂಡೆಯ ಕಟ್ಟಿ
ಪೂಜಿಸುತ್ತಿರ್ದುದೋ ನವದ್ವಾರಶಿವಾಲಯದಾದಿಮಧ್ಯಸ್ಥಾನದಲ್ಲಿ
ಗುಹೇಶ್ವರನೆಂಬುದಲ್ಲಿಯೆ ನಿಂದಿತ್ತು.
೧೧೩.
ಕಾಲೇ ಕಂಭಗಳಾದವೆನ್ನ
ದೇಹವೇ ದೇಗುಲವಾದುವಯ್ಯ !
ಎನ್ನ ನಾಲಗೆಯೆ ಘಂಟೆ
ಶಿರ ಸುವರ್ಣದ ಕಳಸವಿದೇನಯ್ಯ !
ಸ್ವರವೇ ಲಿಂಗಕ್ಕೆ ಸಿಂಹಾಸನವಾಗಿರ್ದುದು !
ಗುಹೇಶ್ವರ,
ನಿಮ್ಮ ಪ್ರಾಣಲಿಂಗಪ್ರತಿಷ್ಠೆ ಪಲ್ಲಟವಾಗದಂತಿದ್ದೆನಯ್ಯ.
೧೧೪.
ಪ್ರಾಣಲಿಂಗಕ್ಕೆ ಕಾಯವೇ ಸೆಜ್ಜೆ
ಆಕಾಶಗಂಗೆಯಲ್ಲಿ ಮಜ್ಜನ
ಹೂವಿಲ್ಲದ ಪರಿಮಳದ ಪೂಜೆ
ಹೃದಯಕಮಲದಲ್ಲಿ ಶಿವಶಿವಾ ಎಂಬ ಶಬ್ದ
ಇದು ಅದ್ವೈತ ಕಾಣಾ ಗುಹೇಶ್ವರ.
೧೧೫.
ಹೊತ್ತಾರೆ ಪೂಜಿಸಲುಬೇಡ ಕಂಡಾ !
ಬೈಗೆ ಪೂಜಿಸಲುಬೇಡ ಕಂಡಾ !
ಇರುಳುವನೂ ಹಗಲುವನೂ ಕಳೆದು ಪೂಜಿಸಬೇಕು ಕಂಡಾ !
ಇಂತಪ್ಪ ಪೂಜೆಯ ಪೂಜಿಸುವರ
ಎನಗೆ ತೋಱಯ್ಯ ಗುಹೇಶ್ವರ.
೧೧೬.
ಅಂಗದಲ್ಲಿ ಮಾಡುವ ಸುಖವದು
ಲಿಂಗಕ್ಕೆ ಭೂಷಣವಾಯಿತ್ತು.
ಕಾಡುಗಿಚ್ಚಿನ ಕೈಯಲ್ಲಿ
ಕರಡವ ಕೊಯ್ಸುವಂತೆ-
ಹಿಂದೆ ಮೆದೆಯಿಲ್ಲ !
ಮುಂದೆ ಹುಲ್ಲಿಲ್ಲ !!
ಅಂಗ-ಲಿಂಗವೆಂಬನ್ನಕ್ಕರ ಫಲದಾಯಕ,
ಲಿಂಗೈಕ್ಯವದು ಬೇಱೆ ಗುಹೇಶ್ವರ.
೧೧೭.
ಎನ್ನ ಮನದ ಕೊನೆಯ ಮೊನೆಯ ಮೇಲೆ
ಅಂಗವಿಲ್ಲದ ರೂಪನ ಕಂಡು ಮರುಳಾದೆನವ್ವ !
ಆತನ ಕಂಡು ಬೆಱಗಾದೆನವ್ವ-
ಎನ್ನಂತರಂಗದ ಆತುಮನೊಳಗೆ
ಅನಿಮಿಷನಿಜೈಕ್ಯ ಗುಹೇಶ್ವರನ ಕಂಡು !
೧೧೮.
ಮನದ ಸುಖವ ಕಂಗಳಿಗೆ ತಂದರೆ
ಕಂಗಳ ಸುಖವ ಮನಕ್ಕೆ ತಂದರೆ
ನಾಚಿತ್ತು, ಮನ ನಾಚಿತ್ತು !
ಸ್ಥಾನಪಲ್ಲಟವಾದಡೆ
ವ್ರತಕ್ಕೆ ಭಂಗ ಗುಹೇಶ್ವರ.
೧೧೯.
ಎನಗೊಂದು ಲಿಂಗ
ನಿನಗೊಂದು ಲಿಂಗ
ಮನೆಗೊಂದು ಲಿಂಗವಾಯಿತ್ತು !
ಹೋಯಿತ್ತಲ್ಲಾ ಭಕ್ತಿ ಜಲವ ಕೂಡಿ !
ಉಳಿ ಮುಟ್ಟಿದ ಲಿಂಗವ
ಮನ ಮುಟ್ಟಬಲ್ಲುದೇ ಗುಹೇಶ್ವರ ?
೧೨೦.
ಅರಳಿಯ ಮರದ ಮೇಲೆ
ಒಂದು ಹಂಸೆ ಗೂಡನಿಕ್ಕಿತ್ತ ಕಂಡೆ ! ಆ ಗೂಡಿನೊಳಗೊಬ್ಬ ಹೆಂಗೂಸು
ಉಯ್ಯಾಲೆಯಾಡುತ್ತಿದ್ದಳು.
ಉಯ್ಯಾಲೆ ಹಱಿದು
ಹೆಂಗೂಸು ನೆಲಕ್ಕೆ ಬಿದ್ದು ಸತ್ತಡೆ
ಪ್ರಾಣಲಿಂಗವ ಕಾಣಬಹುದು ಕಾಣಾ ಗುಹೇಶ್ವರ.
೧೨೧.
ಪೃಥ್ವಿಗೆ ಹುಟ್ಟಿದ ಶಿಲೆ
ಕಲ್ಲುಕುಟಿಕಂಗೆ ಹುಟ್ಟಿದ ಮೂರುತಿ
ಮಂತ್ರಕ್ಕೆ ಲಿಂಗವಾಯಿತ್ತಲ್ಲಾ !
ಆ ಮೂವರಿಗೆ ಹುಟ್ಟಿದ ಮಗನ
ಲಿಂಗವೆಂದು ಕೈವಿಡಿವ
ಅಚ್ಚವ್ರತಗೇಡಿಗಳನೇನೆಂಬೆ ಗುಹೇಶ್ವರ.
೧೨೨.
ಮೂಱು ಪುರದ ಹೆಬ್ಬಾಗಿಲೊಳಗೊಂದು
ಕೋಡಗ ಕಟ್ಟಿದುದ ಕಂಡೆ !
ಅದು ಕಂಡಕಂಡವರನೇಡಿಸುತ್ತಿದ್ದಿತು ನೋಡಾ !
ಪುರದರಸು ತನ್ನ ಪಾಯದಳ ಸಹಿತ ಬಂದರೆ
ಒಂದೇ ಬಾರಿ ಮುಱಿದು ನುಂಗಿತ್ತ ಕಂಡೆ !
ಆ ಕೋಡಗಕ್ಕೆ ಒಡಲುಂಟು, ತಲೆಯಿಲ್ಲ ;
ಕಾಲುಂಟು, ಹೆಜ್ಜೆಯಿಲ್ಲ ;
ಕೈಯುಂಟು, ಬೆರಳಿಲ್ಲ ;
ಇದು ಕರಚೋದ್ಯ ನೋಡಾ !
ತನ್ನ ಕರೆದವರ ಮುನ್ನವೇ ತಾ ಕರೆವುದು ಆ ಕೋಡಗ
ತನ್ನ ಬಸಿಱಲ್ಲಿ ಬಂದ ಮದಗಜದ ನೆತ್ತಿಯನೇಱಿ
ಗಾಳಿಯ ಧೂಳಿಯ ಕೂಡಿ ಓಲಾಡುತ್ತಿಹುದ ಕಂಡೆ !
ವಾಯದ ಗಗನದ ಮೇಲೆ
ತನ್ನ ಕಾಯವ ಪುಟನೆಗೆದು ತೋಱುತ್ತಿಹುದ ಕಂಡೆ !
ಹತ್ತು ಮುಖದ ಸರ್ಪನ
ತನ್ನ ಹೇಳಿಗೆಯೊಳಗಿಕ್ಕಿ ಆಡಿಸುತ್ತಿಹುದ ಕಂಡೆ !
ಐವರು ಕೊಡಗೂಸುಗಳ ಕಣ್ಣಿಂಗೆ
ಕಣ್ಣಡವ ಕಟ್ಟುತ್ತಿಹುದ ಕಂಡೆ !
ಹತ್ತು ಕೇರಿಗಳೊಳಗೆ ಸುಳಿವ ಹರಿಯ ನೆತ್ತಿಯ ಮೆಟ್ಟಿ
ಹುಬ್ಬನಾಡಿಸುವುದ ಕಂಡೆ !
ಆ ಕೋಡಗದ ಕೈಯಲ್ಲಿ ಮಾಣಿಕ್ಯವ ಕೊಟ್ಟಡೆ
ನೋಡುತ್ತ ನೋಡುತ್ತ ಬೆಱಗಾದುದು ಕಂಡೆ !
ಕೂಡಲಿಲ್ಲ ಕಳೆಯಲಿಲ್ಲ ! ಗುಹೇಶ್ವರನ ನಿಲುವು
ಪ್ರಾಣಲಿಂಗ ಸಂಬಂಧವಿಲ್ಲದವರಿಗೆ ಕಾಣಬಾರದು.
೧೨೩.
ಕಲ್ಲ ಮನೆಯ ಮಾಡಿ
ಕಲ್ಲ ದೇವರ ಮಾಡಿ
ಆ ಕಲ್ಲು ಕಲ್ಲ ಮೇಲೆ ಕೆಡೆದರೆ
ದೇವರೆತ್ತ ಹೋದರೋ?
ಲಿಂಗಪ್ರತಿಷ್ಠೆಯ ಮಾಡಿದವಂಗೆ
ನಾಯಕನರಕ ಗುಹೇಶ್ವರ.
೧೨೪.
ದೇಹವೇ ದೇವಾಲಯವಾಗಿದ್ದ ಮೇಲೆ
ಮತ್ತೆ ಬೇರೆ ದೇಗುಲಕ್ಕೆ ಎಡೆಯಾಡುವರಿಗೆ
ಏನ ಹೇಳುವೆನಯ್ಯ ?
ಗುಹೇಶ್ವರ, ನೀ ಕಲ್ಲಾದೆಡೆ ನಾನೇನಪ್ಪೆನು ?!
೧೨೫.
ಒಡಲುವಿಡಿದು ಪಾಷಾಣಕ್ಕೆ ಹಂಗಿಗರಾದರಲ್ಲಾ !
ಅಂಗಸಂಗಿಗಳೆಲ್ಲಾ ಮಹಾಘನವನಱಿಯದೆ ನಿಂದರೊ !
ಹುಸಿಯನೆ ಕೊಯ್ದು
ಹುಸಿಯನೆ ಪೂಜಿಸಿ
ಗಸಣಿಗೊಳಗಾದರು ಗುಹೇಶ್ವರ.
ಸರ್ವಜ್ಞನ ವಚನಗಳು ( ತ್ರಿಪದಿಗಳು )
೧
ನಂದಿಯನು ಏರಿದನ
ಚಂದಿರನ ಮುಡಿದವನ ಕಂದನಂ ಬೇಡಿ ನೆನೆವುತ್ತ
ಮುಂದೆ ಹೇಳುವೆನು ಸರ್ವಜ್ಞ
೨.
ಮುನ್ನ ಕಾಲದಲಿ ಪನ್ನಗಧರನಾಳು
ಎನ್ನೆಯ ಪೆಸರು, ಪುಷ್ಪದತ್ತನು ಎಂದು
ಮನಿಪರು ದಯದಿ ಸರ್ವಜ್ಞ
೩.
ಅಂದಿನ ಪುಷ್ಪದತ್ತ ಬಂದ ವರರುಚಿಯಾಗಿ
ಮುದವ ಸಾರೆ, ಸರ್ವಜ್ಞನೆಂದೆನಿಸಿ
ನಿಂದವನು ನಾನೆ ಸರ್ವಜ್ಞ
೪.
ಸಣ್ಣನೆಯ ಮಳಲೊಳಗೆ ನುಣ್ಣನೆಯ ಶಿಲೆಯೊಳಗೆ
ಬಣ್ಣೆಸಿಬರೆದ ಪಟದೊಳಗೆಯಿರುವಾತ
ತಣ್ಣೊಳಗೆ ಇರನೇ ಸರ್ವಜ್ಞ
೫.
ಹೊಲಸು ಮಾಂಸದ ಹುತ್ತ ಎಲುವಿನಾ ಹಂದರವು
ಹೊಲೆಬಲಿದ ತನುವಿನೊಳಗಿರ್ದುಮದರೊಳಗೆ
ಕುಲವನರಸುವರೆ ಸರ್ವಜ್ಞ
೬.
ಎಲುವಿನೀ ಕಾಯಕ್ಕೆ ಸಲೆ ಚರ್ಮದ ಹೊದಿಕೆ
ಮಲ ಮೂತ್ರ ಕ್ರಿಮಿಗಳೊಳಗಿರ್ದ ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ
೭.
ಸರ್ವಜ್ಞನೆಂಬುವನು ಗರ್ವದಿಂದಾದವನೆ ?
ಸರ್ವರೊಳಗೊಂದು ನುಡಿಗಲಿತು ವಿದ್ಯೆಯ
ಪರ್ವತವೇ ಆದ ಸರ್ವಜ್ಞ
೮.
ಗುರುವಿನಾ ವಿಸ್ತರದ, ಪರಿಯನಾನೇನೆಂಬೆ
ಮೆರೆವ ಬ್ರಹ್ಮಾಂಡದೊಳಹೊರಗೆ
ಅವ ಬೆಳಗಿ ಪರಿಪೂರ್ಣನಿರ್ಪ ಸರ್ವಜ್ಞ
೯.
ಊರಿಂಗೆ ದಾರಿಯನು ಆರು ತೋರಿದರೇನು?
ಸಾರಾಯದಾ ನಿಜವ ತೋರುವ ಗುರುವು ತಾ
ನಾರಾದರೇನು? ಸರ್ವಜ್ಞ
೧೦.
ಪರತತ್ವ ತನ್ನೊಳಗೆ ಎರವಿಲ್ಲದಿರುತಿರ್ದು
ಪರದೇಶಿಯಂತೆ ಇರುತಿರ್ಪಯೋಗಿಯನು
ಪರಮಗುರುವೆಂಬೆ ಸರ್ವಜ್ಞ
೧೧.
ಹರನಿಚ್ಛೆಯಿಲ್ಲದಲೆ ಹರಿದು ಹೋಗದು ಪಾಪ
ಹರಭಕ್ತಿಯುಳ್ಳ ಗುರುವರನು ಓರ್ವನೇ
ನರ ದೈವವೆಂಬೆ ಸರ್ವಜ್ಞ
೧೨.
ಬಂಧುಗಳು ಆದವರು ಬಂದುಂಡು ಹೋಗುವರು
ಬಂಧನವ ಕಳೆಯಲರಿಯರಾ ಗುರುವಿಗಿಂತ
ಬಂಧುಗಳುಂಟೆ ಸರ್ವಜ್ಞ
೧೩.
ಜೀವ, ಸದ್ಗುರುನಾಥ, ಕಾಯ ಪುಸಿಯನೆ ತೋರಿ
ಮಾಯನಾಶವನು ಹರಿಸುತ್ತ ಶಿಷ್ಯಂಗೆ
ತಾಯಿಯಂತಾದ ಸರ್ವಜ್ಞ
೧೪.
ತಂದೆಗೂ ಗುರುವಿಗೂ ಒಂದು ಅಂತರವುಂಟು
ತಂದೆ ತೋರುವನು ಸದ್ಗುರುವ. ಗುರುರಾಯ
ಬಂಧನವ ಕಳೆವ ಸರ್ವಜ್ಞ
೧೫.
ಗುರುವಿಂಗೆ ದೈವಕ್ಕೆ, ಹಿರಿದು ಅಂತರವುಂಟು
ಗುರುತೋರ್ವ ದೈವದೆಡೆಯನು ದೈವತಾ
ಗುರುವ ತೋರುವನೇ? ಸರ್ವಜ್ಞ
೧೬.
ಗುರುಪಾದಕೆರಗಿದರೆ, ಶಿರಸು ತಾ ಮಣಿಯಕ್ಕು
ಪರಿಣಾಮವಕ್ಕು ಪದವಕ್ಕು ಕೈಲಾಸ
ನೆರಮನೆಯಕ್ಕು ಸರ್ವಜ್ಞ
೧೭.
ಒಂದರೊಳಗೆಲ್ಲವು ಸಂದಿಸುವದನು ಗುರು
ಚಂದದಿಂ ತೋರಿಕೊಡದಿರಲು ಶೊಷ್ಯನವ
ಕೊಂದನೆಂದರಿಗು ಸರ್ವಜ್ಞ
೧೮.
ಲಿಂಗಕ್ಕೆ ಕಡೆ ಎಲ್ಲಿ, ಲಿಂಗದೆಡೆ ಎಲ್ಲಿ
ಲಿಂಗದೊಳು ಜಗವು ಅಡಗಿಹುದು ಲಿಂಗವನು
ಹಿಂಗಿದವರುಂಟೆ? ಸರ್ವಜ್ಞ
೧೯.
ದೆಶಕ್ಕೆ ಸಜ್ಜನನು, ಹಾಸ್ಯಕ್ಕೆ ಹನುಮಂತ
ಕೇಶವನು ಭಕ್ತರೊಳಗೆಲ್ಲ ಮೂರು ಕ
ಣ್ಣೇಶನೆ ದೈವ ಸರ್ವಜ್ಞ
೨೦.
ಉಂಬಳಿಯ ಇದ್ದವನು ಕಂಬಳಿಯ ಹೊದೆಯುವನೇ?
ಶಂಭುವಿರಲಿಕ್ಕೆ ಮತ್ತೊಂದು ದೈವವ
ನಂಬುವನೇ ಹೆಡ್ಡ ಸರ್ವಜ್ಞ
೨೧.
ಅಂಜದಲೆ ಕೊಂಡಿಹರೆ ನಂಜು ಅಮೃತವದಕ್ಕು
ಅಂಜಿ ಅಳುಕುತಲಿ ಕೊಂಡಿಹರೆ, ಅಮೃತವು
ನಂಜಿನಂತಕ್ಕು ಸರ್ವಜ್ಞ
೨೨.
ಎಂಜಲೂ ಅಶೌಚ
ಸಂಜೆಯೆಂದೆನಬೇಡ ಕುಂಜರವು ವನವ ನೆನವಂತೆ ಬಿಡದೆನಿ
ರಂಜನನ ನೆನೆಯೊ ಸರ್ವಜ್ಞ
೨೩.
ಭೂತೇಶಗೆರಗುವನು ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಶಿವನಿಗೆ ಶರಣೆನ್ನ
ದಾತ ಮಾದಿಗನು ಸರ್ವಜ್ಞ
೨೪.
ಕುಲಗೆಟ್ಟವರು ಚಿಂತೆ ಯೊಳಗಿಪ್ಪರಂತಲ್ಲ
ಕುಲಗೆಟ್ಟು ಶಿವನ ಮರೆಹೊಕ್ಕ ಋಷಿಗಳಿಗೆ
ಕುಲಗೋತ್ರವುಂಟೆ? ಸರ್ವಜ್ಞ
೨೫.
ಜಾತಿಹೀನನ ಮನೆಯ ಜ್ಯೊತಿ ತಾ ಹೀನವೆ?
ಜಾತಂಗೆ ಜಾತನೆನಲೇಕೆ? ಅರುವಿಡಿ
ದಾತನೇ ಜಾತ ಸರ್ವಜ್ಞ
೨೬.
ಯಾತರ ಹೂವೇನು ? ನಾತವಿದ್ದರೆ ಸಾಕು
ಜಾತಿಯಲಿ ಜಾತಿಯೆನಬೇಡ ಶಿವನೊಲಿ
ದಾತನೆ ಜಾತ ಸರ್ವಜ್ಞ
೨೭.
ಅಕ್ಕರವು ತರ್ಕಕ್ಕೆ ಲೆಕ್ಕವು ಗಣಿತಕ್ಕೆ
ಮಿಕ್ಕವೋದುಗಳು ತಿರುಪೆಗೆ ಮೋಕ್ಷಕಾ
ರಕ್ಕರವೇ ಸಾಕು ಸರ್ವಜ್ಞ
೨೮.
ಎಲ್ಲರನು ನೆರೆ ಬೇಡಿ, ಹಲ್ಲು ಬಾಯ್ದೆರೆಯುವರೇ?
ಬಲ್ಲಿದಾ ಶಿವನ ಭಜಿಸಿದರೆ ಶಿವ ತಾನು
ಇಲ್ಲೆನ್ನಲರಿಯನು ಸರ್ವಜ್ಞ
೨೯.
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚಂದ್ರಶೇಖರನು ಮುದಿ ಎತ್ತನೇರಿ ಬೇ
ಕೆಂದುದನು ಕೊಡುವ ಸರ್ವಜ್ಞ
೩೦.
ಸಾರವನು ಬಯಸುವರೆ, ಕ್ಷಾರವನು ಬೆರಿಸುವುದು
ಮಾರಸಂಹರನ ನೆನೆದರೆ ಮೃತ್ಯುವು
ದೂರಕ್ಕೆ ದೂರ ಸರ್ವಜ್ಞ
೩೧.
ಕಾಯ ಕಮಲದ ಸಜ್ಜೆ, ಜೀವರತನುವೆ ಲಿಂಗ
ಭವ ಪುಶ್ಪದಿಂ ಶಿವಪೂಜೆ ಮಾಡುವರ
ದೇವರೆಂದೆಂಬೆ ಸರ್ವಜ್ಞ
೩೨.
ಓದು ವಾದಗಳೇಕೆ, ಗಾದಿಯ ಮಾತೇಕೆ
ವೇದ ಪುರಾಣ ನಿನಗೇಕೆ? ಲಿಂಗದಾ
ಹಾದಿಯರಿದವಗೆ ಸರ್ವಜ್ಞ
೩೩.
ಒಪ್ಪಾದ ನುಡಿಯೇಕೆ? ಪುಷ್ಪವೇರಿಸಲೇಕೆ?
ಅರ್ಪಿತನ ಗೊಡವೆ ತನಗೇಕೆ? ಲಿಂಗದ
ನೆಪ್ಪನರಿದವಗೆ ಸರ್ವಜ್ಞ
೩೪.
ಗಂಗೆ ಗೋದಾವರಿಯು, ತುಂಗಭದ್ರೆಯು ಮತ್ತೆ
ಹಿಂಗದೆ ಮುಳುಗಿ ಫಲವೇನು? ನಿನ್ನಲ್ಲೆ
ಲಿಂಗದರುವಿಲ್ಲ ಸರ್ವಜ್ಞ
೩೫.
ಮೆಟ್ಟಿದಾ ಕಲ್ಲಿಂಗೆ, ಮೊಟ್ಟೆ ಪತ್ರಿಯ ಹಾಕಿ
ಕಟ್ಟಿದಾ ಲಿಂಗ ಅಡಿಮಾಡಿ ಶರಣೆಂಬ
ಭ್ರಷ್ಟನ ಕಂಡ್ಯಾ ? ಸರ್ವಜ್ಞ
೩೬.
ಗುರುವಿಂದ ಬಂಧುಗಳು, ಗುರುವಿಂದ ದೈವಗಳು
ಗುರುವಿಂದಲಿಹುದು ಪುಣ್ಯವದು, ಜಗಕೆಲ್ಲ
ಗುರುವಿಂದ ಮುಕ್ತಿ ಸರ್ವಜ್ಞ
೩೭.
ಶಿವಪೂಜೆ ಮಾಡಿದಡೆ, ಶಿವನ ಕೊಂಡಾಡಿದಡೆ
ಶಿವನಲ್ಲಿ ನೆನೆಹ ನಿಲಿಸಿದಡೆ ಶಿವಲೋಕ
ವವಗೆ ಕಾಣಯ್ಯ ಸರ್ವಜ್ಞ
೩೮.
ನಿಷ್ಠೆ ಇದ್ದಡೆ ಶಿವನು, ಗಟ್ಟಿಗೊಂಡೊಳಗಿರ್ಪ
ನಿಷ್ಠೆಯಿಲ್ಲದಲೆ ಭಜಿಸಿದೊಡೆ ಶಿವನವನ
ಬಿಟ್ಟು ಬಯಲಪ್ಪ ಸರ್ವಜ್ಞ
೩೯.
ಇಟ್ಟಾವಿಭೂತಿ ತಾ ಪಟ್ಟಗಟ್ಟಿರುತಿಕ್ಕು
ಇಟ್ಟಾವಿಭೂತಿಯರಿಯದಿರೆ ಸೀಳಿದಾ
ಬಟ್ಟೆಯಂತಕ್ಕು ಸರ್ವಜ್ಞ
೪೦.
ಲಿಂಗದಲಿ ಮನವಾಗಿ, ಲಿಂಗದಲಿ ನೆನಹಾಗಿ
ಲಿಂಗದಲಿ ನೋಟ, ನುಡಿಕೂಟವಾದವನು
ಲಿಂಗವೇ ಅಕ್ಕು ಸರ್ವಜ್ಞ
೪೧.
ದೇಹಿಯನಬೇಡ, ನಿರ್ದೇಹಿ ಜಂಗಮಲಿಂಗ
ದೇಹ ಗುಣದಾಸೆಯಳಿದೊಡೆ ಆತ ನೀರ್ದೇಹಿ
ಕಾಣಯ್ಯ ಸರ್ವಜ್ಞ
೪೨.
ವಂಶವನು ಪುಗನೆಂದಿ, ಗಾಶಿಸನು ಪರಧನವ
ಸಂಶಯವನಳಿದ ನಿಜಸುಖಿ ಮಹಾತ್ಮನು
ಹಿಂಸೆಗೊಡಬಡನು ಸರ್ವಜ್ಞ
೪೩.
ಅರ್ಪಿತದ ಭೇದವನು
ತಪ್ಪದೆಲೆ ತಿಳಿದಾತ ಸರ್ಪಭುಷಣನ ಸಮನಹನು ನಿಜಸುಖದೋ
ಳೊಪ್ಪುತ್ತಲಿಹನು ಸರ್ವಜ್ಞ
೪೪.
ಭೋಗಿಸುವ ವಸ್ತುಗಳ ಭೋಗಿಸು ಶಿವಗಿತ್ತು
ರಾಗದಿಂ ಸತ್ಯವೆರಸಿಹ ಪ್ರಸಾದಿಯ
ಶ್ರಿ ಗುರುವು ಎಂಬೆ ಸರ್ವಜ್ಞ
೪೫.
ಲಿಂಗವಿರಹಿತನಾಗಿ ನುಂಗದಿರು ಏನುವನು
ತಿಂಗಳಲಿ ಸತ್ತ ಕೊಳೆ ನಾಯಿ ಮಾಂಸವನು
ನುಂಗಿದೆಂತಕ್ಕು ಸರ್ವಜ್ಞ
೪೬.
ಅಂಜದಲೆ ಕೊಂಡಿಹರೆ, ನಂಜು ಅಮೃತವದಕ್ಕು
ಅಂಜಿ, ಅಳುಕುತಲಿ ಕೊಂಡಿಹರೆ ಅಮೃತವು
ನಂಜಿನಂತಕ್ಕು ಸರ್ವಜ್ಞ
೪೭.
ಸಿರಿಯು ಬಂದರೆ ಲೇಸು, ತೀರದ ಜವ್ವನ ಲೇಸು
ಮರಣವಿಲ್ಲದಾ ಮಗಲೇಸು ಲಿಂಗಕ್ಕೆ
ಶರಣುವೆ ಲೇಸು ಸರ್ವಜ್ಞ
೪೮.
ಸೋಕಿಡಾ ಸುಖಂಗಳ
ನೇಕವನು ಶಿವಗಿತ್ತು
ತಾ ಕಿಂಕರತೆಯ ಕೈಕೊಂಡ ಮನುಜನೇ ಲೋಕಕ್ಕೆ ಶರಣ ಸರ್ವಜ್ಞ
೪೯.
ಮಲಯಜದ ಮರದೊಳಗೆ ಸಲೆ ಗಂಧವಿಪ್ಪಂತೆ
ಸುಲಲಿತವು ಆದ ಶರಣರಾಹೃದಯದಲಿ
ನೆಲಸಿಹನು ಶಿವನು ಸರ್ವಜ್ಞ
೫೦.
ಕಿಚ್ಚಿನೊಳು ಸುಘೃತವು, ಒಚ್ಚತದಿ ಕರ್ಪುರವು
ಅಚ್ಚಳಿದು ನಿಜದಿ ನಿಂದಂತೆ, ಭೇದವನು
ಮುಚ್ಚುವನೆ ಶರಣ ಸರ್ವಜ್ಞ
೫೧.
ಗಂಗೆಯಾ ತಡೆ ಲೇಸು, ಮಂಗಳನ ಬಲ ಲೇಸು
ಜಂಗಮ ಭಕ್ತನಾ ನಡೆ ಲೇಸು, ಶರಣರಾ
ಸಂಗವೇ ಲೇಸು ಸರ್ವಜ್ಞ
೫೨.
ಆಕಾಶಪಥ ಮೀರಿ, ದೇಕವಸ್ತುವ ತಿಳಿದು
ಸಾಕಾರವಳಿದು ನಿಜವಾದ ಐಕ್ಯಂಗೆ
ಏಕತ್ರ ನೋಡು ಸರ್ವಜ್ಞ
೫೩.
ನಾನು-ನೀನುಗಳದು, ತಾನು ಲಿಂಗದಿ ಉಳಿದು
ನಾನಾ ಭ್ರಮೆಗಳ ಅತಿಗಳೆದು ನಿಂದಾತ
ತಾನೈಕ್ಯ ನೋಡು ಸರ್ವಜ್ಞ
೫೪.
ಹೀನಂಗೆ ಗತಿಯಿಲ್ಲ, ದೀನಗನುಚಿತವಲ್ಲ
ಏನು ಇಲ್ಲದವಗೆ ಭಯವಿಲ್ಲ ಐಕ್ಯಂಗೆ
ತಾನೆಂಬುದಿಲ್ಲ ಸರ್ವಜ್ಞ
೫೫.
ಆಗಿಲ್ಲ ಹೋಗಿಲ್ಲ, ಮೇಗಿಲ್ಲ ಕೆಳಗಿಲ್ಲ
ತಾಗಿಲ್ಲ ತಪ್ಪು ತಡೆಯಿಲ್ಲ ಲಿಂಗಕ್ಕೆ
ದೇಗುಲವೆ ಇಲ್ಲ ಸರ್ವಜ್ಞ
೫೬.
ಅಲಸದಾ ಶಿವಪೂಜೆ ಹುಲುಸುಂಟು ಕೇಳಯ್ಯ
ಬಲುಕವಲು ಒಡೆದು ಬೇರಿಂದ ತುದಿತನಕ
ಹಲಸು ಕಾತಂತೆ ಸರ್ವಜ್ಞ
೫೭.
ಉಂಡುಂಡು ತಿರುಗುವಾ ಭಂಡರಾ ಕಳೆ ಬೇಡ
ಕಂಡು ಲಿಂಗವನು ಪೂಜಿಸಿದವಗೆ ಯಮ
ದಂಡ ಕಾಣಯ್ಯ ಸರ್ವಜ್ಞ
೫೮.
ಆತುಮದ ಲಿಂಗವನು
ಪ್ರೀತಿಯಲಿ ಪೂಜಿಪಗೆ ಆತಂಕವಿಲ್ಲ ಭಯವಿಲ್ಲ
ದಶವಿಧದ ಪಾತಕಗಳಿಲ್ಲ ಸರ್ವಜ್ಞ
೫೯.
ಲಿಂಗವನು ಅಂದವನ ಅಂಗ ಹಿಂಗಿರಬೇಕು
ತೆಂಗಿನಕಾಯಿ ಪರಿಪೂರ್ಣ ಬಲಿದು ಜಲ
ಹಿಂಗಿದಪ್ಪಂದ ಸರ್ವಜ್ಞ
೬೦.
ಅಂಗವನು ಲಿಂಗವನು ಸಂಗೊಳಿಸಲೆಂತಕ್ಕು
ಲಿಂಗದಾ ನೆನಹು ಘನವಾಗೆ ಶಿವಲಿಂಗ
ಹಿಂಗಿರದು ಅವನ ಸರ್ವಜ್ಞ
೬೧.
ಒಮ್ಮನದ ಶಿವಪೂಜೆ ಗಮ್ಮನೆ ಮಾಡುವದು
ಇಮ್ಮನವ ಪಿಡಿದು ಕೆಡಬೇಡ ವಿಧಿವಶವು
ಸರಿಮ್ಮನೇ ಕೆಡಗು ಸರ್ವಜ್ಞ
೬೨.
ಅಷ್ಟವಿಧದರ್ಚನೆಯ ನೆಷ್ಟು ಮಾಡಿದರೇನು?
ನಿಷ್ಠೆ ನೆಲೆಗೊಳದೆ ಭಜಿಸುವಾ ಪೂಜೆ ತಾ
ನಷ್ಟ ಕಾಣಯ್ಯ ಸರ್ವಜ್ಞ
೬೩.
ಇಷ್ಟಲಿಂಗದಿ ಮನವ ನೆಟ್ಟನೆಯ ನಿಲಿಸದಲೆ
ಕಷ್ಟಭ್ರಮೆಗಳಲಿ ಮುಳುಗಿದನು ಕರ್ಮದಾ
ಬಟ್ಟೆಗೆ ಹೋಹ ಸರ್ವಜ್ಞ
೬೪.
ಎಷ್ಟು ಬಗೆಯಾರತಿಯ ಮುಟ್ಟಿಸಿದ ಫಲವೇನು?
ನಿಷ್ಠೆಯಿಲ್ಲದವನ ಶಿವಪೂಜೆ ಹಾಳೂರ
ಕೊಟ್ಟಗುರಿದಂತೆ ಸರ್ವಜ್ಞ
೬೫.
ಒಸೆದೆಂಟು ದಿಕ್ಕಿನಲ್ಲಿ ಮಿಸುನಿ ಗಿಣ್ಣಲು ಗಿಂಡಿ
ಹಸಿದು ಮಾಡುವನ ಪೂಜೆಯದು ಬೋಗಾರ
ಪಸರ ವಿಟ್ಟಂತೆ ಸರ್ವಜ್ಞ
೬೬.
ಬತ್ತಿ ಹೆತ್ತುಪ್ಪವನು ಹತ್ತಿಸಿದ ಫಲವೇನು?
ನಿತ್ಯ ನೆಲೆಗೊಳದೆ ಭಜಿಸುವಾ ಪೂಜೆ ತಾ
ಹತ್ತಿಗೇಡೆಂದ ಸರ್ವಜ್ಞ
೬೭.
ಎಣಿಸುತಿರ್ಪುದು ಬಾಯಿ ಪೊಣರುತಿರ್ಪುದು ಬೆರಳು
ಕ್ಷಣಕ್ಕೊಮ್ಮೆ ಒಂದನೆಣಿಸುವಾ ಜಪಕೊಂದು
ಕುಣಿಕೆಯುಂಟೆಂದ ಸರ್ವಜ್ಞ
೬೮.
ಎಣಿಸುತಿರ್ಪುದು ಬೆರಳು
ಗುಣಿಸುತಿರ್ಪುದು ಜಿಹ್ವೆ ಮನಹೋಗಿ ಹಲವ ನೆನೆದರದು ಹಾಳೂರ
ಶುನಕನಂತಕ್ಕು ಸರ್ವಜ್ಞ
೬೯.
ಕೊಲುವ ಕೈಯೊಳು ಪೂಜೆ, ಮೆಲುವ ಬಾಯೊಳು ಮಂತ್ರ
ಸಲೆ ಪಾಪವೆರೆದ ಮನದೊಳಗೆ ಪೂಜಿಪನೆ
ಹೊಲೆಯ ಕಾಣಯ್ಯ ಸರ್ವಜ್ಞ
೭೦.
ಲಿಂಗಪೂಜಿಸುವಾತ ಜಂಗಮಕ್ಕೆ ನೀಡಿದೊಡೆ
ಲಿಂಗದಾ ಕ್ಷೇಮ ಘನವಾಗಿ ಆ ಲಿಂಗ
ಹಿಂಗದಿರುತಿಹುದು ಸರ್ವಜ್ಞ
೭೧.
ಲಿಂಗಕ್ಕೆ ತೋರಿಸುತ ನುಂಗುವಾತನೇ ಕೇಳು
ಲಿಂಗವುಂಬುವದೆ ? ಇದನರಿದು ಕಪಿಯೆ ನೀ
ಜಂಗಮಕೆ ನೀಡು ಸರ್ವಜ್ಞ
೭೨.
ಲಿಂಗಪ್ರಸಾದವನು ಅಂಗಕ್ಕೆ ಕೊಂಬುವರು
ಗಂಗಾಳದೊಳಗೆ ಕೈ ತೊಳೆದು ಚಲ್ಲುವಾ
ಮಂಗಗಳ ನೋಡು ಸರ್ವಜ್ಞ
೭೩.
ಹಲವನೋದಿದಡೇನು? ಚೆಲುವನಾದದಡೇನು ?
ಕುಲವೀರನೆನೆಸಿ ಫಲವೇನು? ಲಿಂಗದಾ
ಒಲುಮೆ ಇಲ್ಲದಲೆ ಸರ್ವಜ್ಞ
೭೪.
ಓದುವಾದಗಳೇಕೆ ? ಗಾದೆಯ ಮಾತೇಕೆ?
ವೇದ ಪುರಾಣವು ನಿನಗೇಕೆ ಲಿಂಗದಾ
ಹಾದಿಯರಿಯದಲೆ ಸರ್ವಜ್ಞ
೭೫.
ಕಂಡವರ ಕಂಡು ತಾ ಕೊಂಡ ಲಿಂಗವ ಕಟ್ಟಿ
ಕೊಂಡಾಡಲರಿಯದಧಮಂಗೆ ಲಿಂಗವದು
ಕೆಂಡದಂತಿಹುದು ಸರ್ವಜ್ಞ
೭೬.
ಕಟ್ಟಲೂ ಬಿಡಲು ಶಿವ ಬಟ್ಟಲವ ಕದ್ದನೇ
ಕಟ್ಟಲೂ ಬೇಡ ಬಿಡಲೂ ಬೇಡ
ಕಣ್ಣು ಮನ ನಟ್ಟರೆ ಸಾಕು ಸರ್ವಜ್ಞ
೭೭.
ಆ ದೇವ ಈ ದೇವ ಮಹಾದೇವನೆನಬೇಡ
ಆ ದೇವರ ದೇವ ಭುವನದಾ ಪ್ರಾಣಿಗಳಿ
ಗಾದವನೇ ದೇವ ಸರ್ವಜ್ಞ
೭೮.
ಚಿತ್ರವನು ನವಿಲೊಳು ವಿ ಚಿತ್ರವನು ಗಗನದೊಳು
ಪತ್ರ ಪುಷ್ಪಗಳ ವಿವಿಧವರ್ಣಗಳಿಂದ
ಚಿತ್ರಿಸಿದರಾರು ಸರ್ವಜ್ಞ
೭೯.
ಇಂಗಿನನೊಳು ನಾತವನು ತೆಂಗಿನೊಳಗೆಳೆ ನೀರು
ಭ್ರಂಗ ಕೋಗಿಲೆಯ ಕಂಠದೊಳು ಗಾಯನವ
ತುಂಬಿದವರಾರು ಸರ್ವಜ್ಞ
೮೦.
ಕಳ್ಳಿಯೊಳು ಹಾಲು, ಮುಳು ಗಳ್ಳಿಯೊಳು ಹೆಜ್ಜೇನು
ಎಳ್ಳಿನೊಳಗೆಣ್ಣೆ ಹನಿದಿರಲು, ಶಿವಲೀಲೆ
ಸುಳ್ಳೆನ್ನಬಹುದೆ? ಸರ್ವಜ್ಞ
೮೧.
ಎಲ್ಲ ದೈವವ ಬೇಡಿ ಹುಲ್ಲು ಬಾಯ್ತೆರೆಯದೆಲೆ
ಬಲ್ಲ ದಾಶಿವನ ಭಜಿಸಿ ಬೇಡಿದಾತ
ಇಲ್ಲೆನಲಿಕರಿಯ ಸರ್ವಜ್ಞ
೮೨.
ಆದಿ ದೈವವನು ತಾ ಭೇದಿಸಲಿ ಕರಿಯದಲೆ
ಹಾದಿಯಾಕಲ್ಲಿಗೆಡೆಮಾಡಿ ನಮಿಸುವಾ
ಮಾದಿಗರ ನೋಡು ಸರ್ವಜ್ಞ
೮೩.
ತನ್ನಲಿಹ ಲಿಂಗವನು ಮನ್ನಿ ಸಲಿಕರಿಯದಲೆ
ಬಿನ್ನಣದಿ ಕಟಿದ ಪ್ರತಿಮೆಗಳಿಗೆರಗುವಾ
ಅನ್ಯಾಯ ನೋಡು ಸರ್ವಜ್ಞ
೮೪.
ಉಣಬಂದ ಜಂಗಮಕೆ ಉಣಬಡಿಸಲೊಲ್ಲದಲೆ
ಉಣದಿಪ್ಪ ಲಿಂಗಕುಣಬಡಿಸಿ ಕೈಮುಗಿವ
ಬಣಗುಗಳ ನೋಡ ಸರ್ವಜ್ಞ
೮೫.
ಕಲ್ಲು ಕಲ್ಲೆಂಬುವಿರಿ ಕಲ್ಲೊಳಗಿರ್ಪುದೇ ದೈವ
ಕಲ್ಲಲ್ಲಿ ಕಳೆಯನಿಲಿಸಿದಾ ಗುರುವಿನಾ
ಸೊಲ್ಲೇದೈವ ಸರ್ವಜ್ಞ
೮೬.
ಗುಡಿಯ ಬೋದಿಗೆ ಕಲ್ಲು
ನಡುರಂಗ ತಾ ಕಲ್ಲು ಕಡೆಮೂಲೆ ಸೆರಗು ತಾ ಕಲ್ಲು ವರವನ್ನು
ಕೊಡುವಾತ ಬೇರೆ ಸರ್ವಜ್ಞ
೮೭.
ಪ್ರಾಣನೂ ಪರಮಮನು ಕಾಣದಲೆ ಒಳಗಿರಲು
ಮಾಣದೇ ಸಿಲೆಯ ಹಿಡಿದದಕೆ ಮೂರ್ಖ ತಾ
ಪ್ರಾಣಾತ್ಮನೆಂಬ ಸರ್ವಜ್ಞ
೮೮
ಕಲ್ಲು ಗುಂಡಿನ ಮೇಲೆ ಮಲ್ಲಿಗೆಯ ಅರಳಿಕ್ಕಿ
ನಿಲ್ಲದಲೆ ಹಣೆಯ ಬಡಿವರ್ಗೆ ಬುಗುಟಿಲ್ಲ
ದಿಲ್ಲ ಕಾಣಯ್ಯ ಸರ್ವಜ್ಞ
೮೯.
ಉತ್ಪತ್ತಿಗೆ ಬೊಮ್ಮಗಡ ಸ್ಥಿತಿಗೆ ವಿಷ್ಣುಗಡ
ಹತವ ಗೈವುದಕ್ಕೆ ರುದ್ರಗಣ, ಇವರುಗಳ
ಸ್ಥಿತಿಯನರಿಯೆಂದ ಸರ್ವಜ್ಞ
೯೦.
ಬೊಮ್ಮನಿರ್ಮಿಪನೆಂಬ ಮರ್ಮತಿಯ ನೀ ಕೇಳು
ಬೊಮ್ಮನಾ ಸತಿಗೆ ಮೂಗಿಲ್ಲವಾಮೂಗ
ನಿರ್ಮಿಸನದೇಕೆ ಸರ್ವಜ್ಞ
೯೧.
ಹುಟ್ಟಿಸುವನಜನೆಂಬ, ಕಷ್ಟದಾ ನುಡಿಬೇಡ
ಹುಟ್ಟಿಪನು ತನ್ನ ಶಿರಹರಿಯೆ ಮತ್ತೊಂದು
ಹುಟ್ಟಿಸನದೇಕೆ ಸರ್ವಜ್ಞ
೯೨.
ಹತ್ತು ಭವವನು ಎತ್ತಿ, ಎತ್ತು ಎಮ್ಮೆಯ ಕಾದು
ಮತ್ತೆ ಪಾಂಡವರಿಗಾಳಾದ ಹರಿಯು ತಾ
ನೆತ್ತಣಾ ದೈವ ಸರ್ವಜ್ಞ
೯೩.
ನರಸಿಂಹನವತಾರ
ಹಿರಿದಾದ ಅದ್ಭುತವು
ಶರಭನು ಗುರಿಂದ ಕೊಲುವಾಗ ನರಿಯಂದವಾದ ಸರ್ವಜ್ಞ
೯೪.
ಪಾಲಿಸುವ ಹರಿಯು ತಾ, ಸೋಲನೆಂದೆನಬೇಡ
ಶೂಲಿ ತ ಮಗನ ತಲೆ ಚಿಗುಟಿ ಹರಿ ಏಕೆ
ಪಾಲಿಸದೆ ಹೋದ ಸರ್ವಜ್ಞ
೯೫.
ಹರನವನ ಕೊಲುವಂದು, ಎರಳೆಯನು ಎಸೆವಂದು
ಮರಳಿ ವರಗಳನು ಕೊಡುವಂದು ಪುರಹರಗೆ
ಸರಿಯಾದ ಕಾಣೆ ಸರ್ವಜ್ಞ
೯೬.
ಹರಿ ಬೊಮ್ಮನೆಂಬವರು, ಹರನಿಂದಲಾದವರು
ಅರಸಿಗೆ ಆಳು ಸರಿಯಹನೆ ಶಿವನಿಂದ
ಮೆರೆವರಿನ್ನಾರು ಸರ್ವಜ್ಞ
೯೭.
ಹರಿದಲೆಯ ಬೊಮ್ಮಂಗೆ, ಕುರಿದಲೆಯ ದಕ್ಷಂಗೆ
ನೆರೆಹತ್ತು ಜನನವಾಹರಿಗೆ ಇವರುಗಳು
ಸರಿಯಹರೆ ಸರ್ವಜ್ಞ
೯೮.
ಧರೆಯ ತೇರನು ಮಾಡಿ, ಅಜನ ಸಾರಥಿ ಮಾಡಿ
ಹರಿಯ ಶರವಮಾಡಿ ತ್ರಿಪುರವನು ಆಳಿದಂತೆ
ಸರಿಯಾರು ಹೇಳಿ ಸರ್ವಜ್ಞ
೯೯.
ಇಂದ್ರನಾನೆಯನೇರಿ ಒಂದನೂ ಕೊಡಲರಿಯ
ಚ್ಂದ್ರಶೇಖರನು ಮುದಿಯೆತ್ತನೇರಿ
ಬೇಕೆಂದುದನು ಕೊಡುವ ಸರ್ವಜ್ಞ
೧೦೦.
ಉಂಬಳಿಯ ಇದ್ದವರ, ಕಂಬಳಿಯ ಹೊದೆಯುವರೆ
ಶಂಭುವಿದ್ದಂತೆ ಮತ್ತೊಂದು ದೈವವನು
ನಂಬುವನೆ ಹೆಡ್ಡ ಸರ್ವಜ್ಞ
೧೦೧.
ಎಲುವಿನ ಕಾಯಕ್ಕೆ | ಸಲೆ ಚರ್ಮವನು ಹೊದಿಸಿ
ಮಲ-ಮೂತ್ರ-ಕ್ರಿಮಿಯು ಒಳಗಿರ್ಪ - ದೇಹಕ್ಕೆ
ಕುಲವಾವುದಯ್ಯ ಸರ್ವಜ್ಞ
೧೦೨.
ಹೊಲಸು ಮಾಂಸದ ಹುತ್ತು | ಎಲುವಿನ ಹಂಜರವು
ಹೊಲೆ ಬಲಿದ ತನುವಿನೊಳಗಿರ್ದು - ಮತ್ತದರ
ಕುಲವನೆಣಿಸುವರೆ ಸರ್ವಜ್ಞ
೧೦೩.
ದಿಟವೆ ಪುಣ್ಯದ ಪುಂಜ | ಸಟೆಯೆ ಪಾಪದ ಬೀಜ
ಕುಟಿಲ ವಂಚನೆಯ ಪೊಗದಿರು - ನಿಜವ ಪಿಡಿ
ಘಟವ ನೆಚ್ಚದಿರು ಸರ್ವಜ್ಞ
೧೦೪.
ಸುರತರು ಮರನಲ್ಲ | ಸುರಭಿಯೊಂದಾವಲ್ಲ
ಪರುಷ ಪಾಷಾಣದೊಳಗಲ್ಲ - ಗುರುವು ತಾ
ನರರೊಳಗಲ್ಲ ಸರ್ವಜ್ಞ
೧೦೫.
ಜ್ಯೋತಿಯಿಂದವೆ ನೇತ್ರ | ರಾತ್ರಿಯಲಿ ಕಾಂಬಂತೆ
ಸೂತ್ರದಲಿ ಧಾತನರಿವಂತೆ - ಶಿವನ ಗುರು
ನಾಥನಿಂದರಿಗು ಸರ್ವಜ್ಞ
೧೦೬.
ಮಂಡೆ ಬೋಳಾದೊಡಂ | ದಂಡು ಕೋಲ್ವಿಡಿದೊಡಂ
ಹೆಂಡತಿಯ ಬಿಟ್ಟು ನಡೆದೊಡಂ - ಗುರುಮುಖವ
ಕಂಡಲ್ಲದಿಲ್ಲ ಸರ್ವಜ್ಞ
೧೦೭. ಬ್ರಹ್ಮವೆಂಬುದು ತಾನು | ಒಮ್ಮಾರು ನೀಳವೇ
ಒಮ್ಮೆ ಸದ್ಗುರುವಿನುಪದೇಶ - ವಾಲಿಸಲು
ಗಮ್ಮನೆ ಮುಕ್ತಿ ಸರ್ವಜ್ಞ
೧೦೮.
ಊರಿಂಗೆ ದಾರಿಯ | ನಾರು ತೋರಿದರೇನು
ಸಾರಾಯಮಪ್ಪ ಮತವನರುಹಿಸುವ ಗುರು
ಆರಾದೊಡೇನು ಸರ್ವಜ್ಞ
೧೦೯.
ತುಪ್ಪವಾದಾ ಬಳಿಕ | ಹೆಪ್ಪನೆರೆದವರುಂಟೆ
ನಿಃಪತ್ತಿಯಾದ ಗುರುವಿನುಪದೇಶದಿಂ
ತಪ್ಪದೇ ಮುಕ್ತಿ ಸರ್ವಜ್ಞ
೧೧೦.
ಪರುಷ ಲೋಹವ ಮುಟ್ಟಿ | ವರುಷವಿರಬಲ್ಲುದೇ
ಪರುಷವೆಂತಂತೆ ಶಿಷ್ಯಂಗೆ - ಗುರುವಿನ
ಸ್ಪರುಶನವೆ ಮೋಕ್ಷ ಸರ್ವಜ್ಞ
೧೧೧.
ಮೊಸರ ಕಡೆಯಲು ಬೆಣ್ಣೆ | ಒಸೆದು ತೋರುವ ತೆರದಿ
ಹಸನುಳ್ಳ ಗುರುವಿನುಪದೇಶ - ದಿಂ ಮುಕ್ತಿ
ವಶವಾಗದಿಹುದೆ ಸರ್ವಜ್ಞ
೧೧೨.
ಗುರುಪಾದ ಸೇವೆ ತಾ ದೊರಕೊಂಡಿತಾದೊಡೆ
ಹಿರಿದಪ್ಪ ಪಾಪ ಹರೆವುದು - ಕರ್ಪುರದ
ಗಿರಿಯ ಸುಟ್ಟಂತೆ ಸರ್ವಜ್ಞ
೧೧೩.
ಎತ್ತಾಗಿ ತೊತ್ತಾಗಿ | ಹಿತ್ತಿಲದ ಗಿಡವಾಗಿ
ಮತ್ತೆ ಪಾದದ ಕೆರವಾಗಿ - ಗುರುವಿನ
ಹತ್ತಿಲಿರು ಎಂದ ಸರ್ವಜ್ಞ
೧೧೪.
ಸಾಣೆಕಲ್ಲೊಳು ಗಂಧ | ಮಾಣದೆ ಎಸೆವಂತೆ
ಜಾಣ ಶ್ರೀಗುರುವಿನುಪದೇಶ - ದಿಂ ಮುಕ್ತಿ
ಕಾಣಿಸುತಿಹುದು ಸರ್ವಜ್ಞ
೧೧೫.
ಬೆಟ್ಟ ಕರ್ಪುರ ಉರಿದು | ಬೊಟ್ಟಿಡಲು ಬೂದಿಲ್ಲ
ನೆಟ್ಟನೆ ಗುರುವಿನರಿದನ - ಕರ್ಮವು
ಮುಟ್ಟಲಂಜುವವು ಸರ್ವಜ್ಞ
೧೧೬.
ವಿಷಯಕ್ಕೆ ಕುದಿಯದಿರು | ಅಶನಕ್ಕೆ ಹದೆಯದಿರು
ಅಸಮಾಕ್ಷನಡಿಯನಗಲದಿರು - ಗುರುಕರುಣ
ವಶವರ್ತಿಯಹುದು ಸರ್ವಜ್ಞ
೧೧೭.
ತಂದೆಗೆ ಗುರುವಿಗೆ | ಒಂದು ಅಂತರವುಂಟು
ತಂದೆ ತೋರುವನು ಶ್ರೀಗುರುವ - ಗುರುರಾಯ
ಬಂಧನವ ಕಳೆವ ಸರ್ವಜ್ಞ
೧೧೮.
ಹಸಿಯ ಸೌದೆಯ ತಂದು | ಹೊಸೆದರುಂಟೇ ಕಿಚ್ಚು
ವಿಷಯಂಗಳುಳ್ಳ ಮನುಜರಿಗೆ - ಗುರುಕರುಣ
ವಶವರ್ತಿಯಹುದೆ ಸರ್ವಜ್ಞ
೧೧೯.
ಒಂದೂರ ಗುರುವಿರ್ದು | ವಂದನೆಯ ಮಾಡದೆ
ಸಂಧಿಸಿ ಕೂಳ ತಿನುತಿರ್ಪವನ - ಇರವು
ಹಂದಿಯ ಇರವು ಸರ್ವಜ್ಞ
೧೨೦.
ಲಿಂಗದ ಗುಡಿಯೆಲ್ಲಿ ? ಲಿಂಗಿಲ್ಲದೆಡೆಯೆಲ್ಲಿ ?
ಲಿಂಗದೆ ಜಗವು ಅಡಗಿಹುದು - ಲಿಂಗವನು
ಹಿಂಗಿ ಪರ ಉಂಟೆ ಸರ್ವಜ್ಞ
೧೨೧.
ಓರ್ವನಲ್ಲದೆ ಮತ್ತೆ | ಈರ್ವರುಂಟೇ ಮರುಳೆ
ಸರ್ವಜ್ಞನೋರ್ವ ಜಗಕೆಲ್ಲ - ಕರ್ತಾರ
ನೋರ್ವನೇ ದೇವ ಸರ್ವಜ್ಞ
೧೨೨.
ಎಂಜಲು ಶೌಚವು | ಸಂಜೆಯೆಂದೆನ ಬೇಡ
ಕುಂಜರ ವನವ ನೆನೆವಂತೆ - ಬಿಡದೆ ನಿ
ರಂಜನನ ನೆನೆಯ ಸರ್ವಜ್ಞ
೧೨೩.
ಭೂತೇಶ ಶರಣೆಂಬ | ಜಾತಿ ಮಾದಿಗನಲ್ಲ
ಜಾತಿಯಲಿ ಹುಟ್ಟಿ ಭೂತೇಶ - ಶರಣೆನ್ನ
ದಾತ ಮಾದಿಗನು ಸರ್ವಜ್ಞ
೧೨೪.
ಯಾತರ ಹೂವಾದರು | ನಾತರೆ ಸಾಲದೆ
ಜಾತಿ-ವಿಜಾತಿ ಯೆನಬೇಡ - ಶಿವನೊಲಿ
ದಾತನೇ ಜಾತಿ ಸರ್ವಜ್ಞ
೧೨೫.
ಮಾಯಾಮೋಹವ ನೆಚ್ಚಿ | ಕಾಯವನು ಕರಗಿಸುತೆ
ಆಯಾಸಗೊಳುತ ಇರಬೇಡ - ಓಂ ನಮಶ್ಯಿ
ವಾಯವೆಂದೆನ್ನಿ ಸರ್ವಜ್ಞ
೧೨೬.
ಮುನಿವಂಗೆ ಮುನಿಯದಿರು | ಕನೆವಂಗೆ ಕನೆಯದಿರು
ಮನಸಿಜಾರಿಯನು ಮರೆಯದಿರು - ಶಿವನ ಕೃಪೆ
ಘನಕೆ ಘನವಕ್ಕು ಸರ್ವಜ್ಞ
೧೨೭.
ನರರ ಬೇಡುವ ದೈವ | ವರವೀಯ ಬಲ್ಲುದೇ
ತಿರಿವವರನಡರಿ ತಿರಿವಂತೆ - ಅದನರಿ
ಹರನನೆ ಬೇಡು ಸರ್ವಜ್ಞ
೧೨೮.
ಲಿಂಗವ ಪೂಜಿಸುವಾತ | ಜಂಗಮಕೆ ನೀಡದೊಡೆ
ಲಿಂಗದ ಕ್ಷೋಭೆ ಘನವಕ್ಕು - ಮಹಲಿಂಗ
ಹಿಂಗುವುದು ಅವನ ಸರ್ವಜ್ಞ
೧೨೯.
ಉಣ ಬಂದ ಲಿಂಗಕ್ಕೆ | ಉಣಲಿಕ್ಕದಂತಿರಿಸಿ
ಉಣದಿರ್ಪ ಲಿಂಗಕ್ಕುಣ ಬಡಿಸಿ - ಕೈ ಮುಗಿವ
ಬಣಗುಗಳ ನೋಡ ಸರ್ವಜ್ಞ
೧೩೦.
ಒಮ್ಮನದಲ್ಲಿ ಶಿವಪೂಜೆಯ | ಗಮ್ಮನೆ ಮಾಡುವುದು
ಇಮ್ಮನವಿಡಿದು ಕೆಡಬೇಡ - ವಿಧಿವಶವು
ಸುಮ್ಮನೆ ಕೆಡಗು ಸರ್ವಜ್ಞ
೧೩೧.
ಅಂಗವನು ಲಿಂಗವನು | ಸಂಗೊಳಿಸಲೆಂತಕ್ಕು ?
ಲಿಂಗದೆ ನೆನಹು ಘನವಾಗೆ - ಆ ಅಂಗ
ಲಿಂಗವಾಗಿಕ್ಕು ಸರ್ವಜ್ಞ
೧೩೨.
ಕಂಗಳಿಚ್ಛೆಗೆ ಪರಿದು | ಭಂಗಗೊಳದಿರು ಮನುಜ
ಲಿಂಗದಲಿ ಮನವ ನಿಲ್ಲಿಸಿ - ಸತ್ಯದಿ ನಿಲೆ
ಲಿಂಗವೇಯಹೆಯೊ ಸರ್ವಜ್ಞ
೧೩೩.
ಓದುವಾದಗಳೇಕೆ | ಗಾದೆಯ ಮಾತೇಕೆ
ವೇದ-ಪುರಾಣ ನಿನಗೇಕೆ - ಲಿಂಗದ
ಹಾದಿಯನರಿದವಗೆ ಸರ್ವಜ್ಞ
೧೩೪.
ನೋಟ ಶಿವಲಿಂಗದಲಿ | ಕೂಟ ಜಂಗಮದಲ್ಲಿ
ನಾಟಿ ತನು ಗುರುವಿನಲಿ ಕೂಡೆ - ಭಕ್ತನ ಸ
ಘಾಟವದು ನೋಡ ಸರ್ವಜ್ಞ
೧೩೫.
ನಾನು-ನೀನುಗಳಳಿದು | ತಾನೆ ಲಿಂಗದಿ ನಿಂದು
ನಾನಾ ಭ್ರಮೆಗಳ ನೆರೆ ಹಿಂಗಿ - ನಿಂದವನು
ತಾನೈಕ್ಯ ನೋಡ ಸರ್ವಜ್ಞ
೧೩೬.
ತನ್ನ ನೋಡಲಿಯೆಂದು | ಕನ್ನಡಿ ಕರೆವುದೇ
ತನ್ನಲ್ಲಿ ಜ್ಞಾನ ಉದಿಸಿದ - ಮಹತುಮನು
ಕನ್ನಡಿಯಂತೆ ಸರ್ವಜ್ಞ
೧೩೭.
ಹೆಣ್ಣನು ಹೊನ್ನನು | ಹಣ್ಣಾದ ಮರವನು
ಕಣ್ಣಲಿ ಕಂಡು - ಮನದಲಿ ಬಯಸದ
ಅಣ್ಣಗಳಾರು ಸರ್ವಜ್ಞ
೧೩೮.
ತಿರಿದು ತಂದಾದೊಡಂ | ಕರೆದು ಜಂಗಮಕಿಕ್ಕು
ಪರಿಣಾಮವಕ್ಕು ಪದವಕ್ಕು - ಕೈಲಾಸ
ನೆರೆಮನೆಯಕ್ಕು ಸರ್ವಜ್ಞ
೧೩೯.
ಆಡದೆಲೆ ಕೊಡುವವನು | ರೂಢಿಯೊಳಗುತ್ತಮನು
ಆಡಿ ಕೊಡುವವನು ಮಧ್ಯಮನು - ಅಧಮ
ತಾನಾಡಿಯೂ ಕೊಡದವನು ಸರ್ವಜ್ಞ
೧೪೦.
ಮಾನವನ ದುರ್ಗುಣವ | ನೇನೆಂದು ಬಣ್ಣಿಸುವೆ
ದಾನಗೈಯಲು ಕನಲುವ - ದಂಡವನು
ಮೋನದಿಂ ತೆರುವ ಸರ್ವಜ್ಞ
೧೪೧.
ಅಂತಕ್ಕು ಇಂತಕ್ಕು | ಎಂತಕ್ಕು ಎನಬೇಡ
ಚಿಂತಿಸಿ ಸುಯ್ವುತಿರಬೇಡ ಶಿವನಿರಿಸಿ
ದಂತಿಹುದೆ ಲೇಸು ಸರ್ವಜ್ಞ
೧೪೨.
ಸಿರಿಯು ಸಂಸಾರವು | ಸ್ಥಿರವೆಂದು ನಂಬದಿರು
ಹಿರಿದೊಂದು ಸಂತೆ ನೆರೆದೊಂದು - ಜಾವಕ್ಕೆ
ಹರೆದು ಹೋಹಂತೆ ಸರ್ವಜ್ಞ
೧೪೩.
ದಂತಪಂಕ್ತಿಗಳೊಳಗೆ | ಎಂತಿಕ್ಕು ನಾಲಗೆಯು
ಸಂತತ ಖಳರ ಒಡನಿರ್ದು - ಬಾಳುವು
ದಂತೆ ಕಂಡಯ್ಯ ಸರ್ವಜ್ಞ
೧೪೪.
ಹಸಿಯದಿರೆ ಕಡುಗಾದ | ಬಿಸಿನೀರ ಕೊಂಬುದು
ಹಸಿವಕ್ಕು ಸಿಕ್ಕ ಮಲ ಬಿಡುಗು - ದೇಹ ತಾ
ಸಸಿನವಾಗುವುದು ಸರ್ವಜ್ಞ
೧೪೫.
ಹಸಿವಿಲ್ಲದುಣಬೇಡ | ಹಸಿದು ಮತ್ತಿರಬೇಡ
ಬಿಸಿ ಬೇಡ ತಂಗುಳವು ಬೇಡ - ವೈದ್ಯನ
ಗಸಣಿಸಿಯೇ ಬೇಡ ಸರ್ವಜ್ಞ
೧೪೬.
ಜಾತಿ ಹೀನನ ಮನೆಯ | ಜ್ಯೋತಿ ತಾ ಹೀನವೇ
ಜಾತಿ-ವಿಜಾತಿಯೆನಬೇಡ - ದೇವನೊಲಿ
ದಾತನೇ ಜಾತ ಸರ್ವಜ್ಞ
೧೪೭.
ಕ್ಷಣಮಾತ್ರವಾದರೂ | ಗುಣಿಗಳೊಡನಾಡುವುದು
ಗುಣಹೀನರುಗಳ ಒಡನಾಟ - ಬಹುದುಃಖ
ದಣಲೊಳಿರ್ದಂತೆ ಸರ್ವಜ್ಞ
೧೪೮.
ಬಸವ ಗುರುವಿನ ಹೆಸರ | ಬಲ್ಲವರಾರಿಲ್ಲ
ಪುಸಿಮಾತನಾಡಿ ಕೆಡದಿರಿ - ಲೋಕಕ್ಕೆ
ಬಸವನೇ ಕರ್ತ ಸರ್ವಜ್ಞ
೧೪೯.
ಹಸಿದೊಡಂಬಲಿ ಮುದ್ದು | ಬಿಸಿಲಿಗೆ ಕೊಡೆ ಮುದ್ದು
ಬಸುರಲ್ಲಿ ಬಂದ ಶಿಶು ಮುದ್ದು - ಲೋಕಕ್ಕೆ
ಬಸವಣ್ಣನೇ ಮುದ್ದು ಸರ್ವಜ್ಞ
೧೫೦.
ಕತ್ತೆ ಬೂದಿಯ ಹೊರಳಿ | ಭಕ್ತನಂತಾಗುವುದೆ
ತತ್ವವರಿಯದಲೆ ಭಸಿತವಿಟ್ಟರೆ ಶುದ್ಧ
ಕತ್ತೆಯಂತಕ್ಕು ಸರ್ವಜ್ಞ
೧೫೧.
ಬಲ್ಲವರ ಒಡನಾಡೆ | ಬೆಲ್ಲವನು ಸವಿದಂತೆ
ಅಲ್ಲದಜ್ಞಾನಿಯೊಡನಾಡೆ - ಮೊಳಕೈಗೆ
ಕಲ್ಲು ಹೊಡೆದಂತೆ ಸರ್ವಜ್ಞ
೧೫೨.
ಬಂದುದನೆ ತಾ ಹಾಸಿ | ಬಂದುದನೆ ತಾ ಹೊದೆದು
ಬಂದುದನೆ ಮೆಟ್ಟಿ ನಿಂತರೆ - ವಿಧಿ ಬಂದು
ಮುಂದೇನ ಮಾಳ್ಕು ಸರ್ವಜ್ಞ
೧೫೩.
ಸಿರಿ ಬಂದ ಕಾಲದಲಿ | ಕರೆದು ದಾನವ ಮಾಡು
ಪರಿಣಾಮವಕ್ಕು ಪದವಕ್ಕು - ಕೈಲಾಸ
ನೆರೆಮನೆಯಕ್ಕು ಸರ್ವಜ್ಞ
೧೫೪.
ಏನ ಬೇಡುವಡೊಬ್ಬ | ದಾನಿಯನೆ ಬೇಡುವುದು
ದೀನನ ಬೇಡಿ ಬಳಲಿದಡೆ - ಆ ದೀನ
ನೇನ ಕೊಟ್ಟಾನು ಸರ್ವಜ್ಞ
೧೫೫.
ಕೋಡಿಯನು ಕಟ್ಟಿದರೆ | ಕೇಡಿಲ್ಲವಾ ಕೆರೆಗೆ
ಮಾಡು ಧರ್ಮಗಳ ಮನಮುಟ್ಟಿ - ಕಾಲನಿಗೆ
ಈಡಾಗದ ಮುನ್ನ ಸರ್ವಜ್ಞ
೧೫೬.
ಅನ್ನದಾನಗಳಿಗಿಂತ | ಇನ್ನು ದಾನಗಳಿಲ್ಲ
ಅನ್ನಕ್ಕೆ ಮೇಲು ಹಿರಿದಿಲ್ಲ - ಲೋಕಕ್ಕೆ
ಅನ್ನವೇ ಪ್ರಾಣ ಸರ್ವಜ್ಞ
೧೫೭.
ಉಣ್ಣದೊಡವೆಯ ಗಳಿಸಿ | ಮಣ್ಣಾಗೆ ಬಚ್ಚಿಟ್ಟು
ಚೆನ್ನಾಗಿ ಬಳಿದು ಮೆತ್ತಿದನ - ಬಾಯೊಳಗೆ
ಮಣ್ಣು ಕಂಡಯ್ಯ ಸರ್ವಜ್ಞ
೧೫೮.
ಕೊಟ್ಟಿರ್ದ ಕಾಲದಲಿ | ಅಟ್ಟುಣ್ಣಲರಿಯದೆ
ಹುಟ್ಟಿಕ್ಕಿ ಜೇನು ಅನುಮಾಡಿ - ಪರರಿಗೆ
ಕೊಟ್ಟು ಹೋದಂತೆ ಸರ್ವಜ್ಞ
೧೫೯.
ಹೆಣ್ಣಿಂದ ಇಹವುಂಟು | ಹೆಣ್ಣಿಂದ ಪರವುಂಟು
ಹೆಣ್ಣಿಂದ ಸಕಲ ಫಲವುಂಟು - ಮರೆದರೆ
ಹೆಣ್ಣಿಂದ ಮರಣ ಸರ್ವಜ್ಞ
೧೬೦.
ಮಜ್ಜಿಗೂಟಕೆ ಲೇಸು | ಮಜ್ಜನಕೆ ಮಡಿ ಲೇಸು
ಕಜ್ಜಾಯ ತುಪ್ಪ ಉಣ ಲೇಸು - ಮನೆಗೊಬ್ಬ
ಅಜ್ಜಿಯೇ ಲೇಸು ಸರ್ವಜ್ಞ
೧೬೧.
ಸಿರಿ ಬಲ ಉಳ್ಳಾಗ | ಮರೆಯದವನೇ ಜಾಣ
ಕೊರತೆಯಾದಾಗ ಕೊಡುವೆನಿದ್ದರೆ ಎಂದು
ಅರಚುವವನೆ ಹೆಡ್ಡ ಸರ್ವಜ್ಞ
೧೬೨.
ನಿತ್ಯ ನೀರೊಳು ಮುಳುಗಿ | ಹತ್ಯಾನೆ ಸ್ವರ್ಗಕ್ಕೆ
ಹತ್ತೆಂಟು ಕಾಲ ಜಲದೊಳಗಿಹ ಕಪ್ಪೆ
ಹತ್ತವ್ಯಾಕಯ್ಯ ಸರ್ವಜ್ಞ
೧೬೩.
ಅನ್ನ ದೇವರ ಮುಂದೆ | ಇನ್ನು ದೇವರು ಉಂಟೆ
ಅನ್ನವಿರುವನಕ ಪ್ರಾಣವು - ಜಗದೊಳ
ಗನ್ನವೇ ದೈವ ಸರ್ವಜ್ಞ
೧೬೪.
ನಂಬು ಪರಶಿವನೆಂದು | ನಂಬು ಗುರುಚರಣವನು
ನಂಬಲಗಸ್ತ್ಯ ಕುಡಿದನು - ಶರಧಿಯನು
ನಂಬು ಗುರುಪದವ ಸರ್ವಜ್ಞ
೧೬೫.
ಬಂಧುಗಳಾದವರು ಮಿಂದುಂಡು ಹೋಹರು
ಬಂಧನವ ಕಳೆಯಲರಿಯರು - ಗುರುವಿಂದ
ಬಂಧನವಳಿಗು ಸರ್ವಜ್ಞ
೧೬೬.
ಮೆಟ್ಟಿಪ್ಪುದಾಶೆಯನು | ಕಟ್ಟಿಪ್ಪುದಿಂದ್ರಿಯವ
ತೊಟ್ಟಿಪ್ಪುದುಳ್ಳ ಸಮತೆಯನು - ಶಿವಪದವ
ಮುಟ್ಟಿಪ್ಪುದಯ್ಯ ಸರ್ವಜ್ಞ
೧೬೭.
ಚಿತ್ತೆಯ ಮಳೆ ಹೊಯ್ದು | ಮುತ್ತಾಗಬಲ್ಲುದೆ
ಚಿತ್ತದ ನೆಲೆಯನರಿಯದೆ - ಬೋಳಾದ
ರೆತ್ತಣ ಯೋಗ ಸರ್ವಜ್ಞ
೧೬೮.
ಇಂದ್ರಿಯವ ತೊರೆದಾತ | ವಂದ್ಯನು ಜಗಕೆಲ್ಲ
ಬಿಂದುವಿನ ಬೇಧವರಿದ ಮಹಾತ್ಮನು
ಬೆಂದ ನುಲಿಯಂತೆ ಸರ್ವಜ್ಞ
೧೬೯.
ಜ್ಞಾನಿ ಸಂಸಾರದೊಳು | ತಾನಿರಬಲ್ಲನು
ಭಾನು ಮಂಡಲದಿ ಹೊಳೆವಂತೆ - ನಿರ್ಲೇಪ
ಏನಾದಡೇನು ಸರ್ವಜ್ಞ
೧೭೦.
ಸತ್ಯವ ನುಡಿವಾತ | ಸತ್ತವನೆನಬೇಡ
ಹೆತ್ತ ತಾಯ್ ಮಗನ ಕರೆವಂತೆ - ಸ್ವರ್ಗದವ
ರಿತ್ತ ಬಾಯೆಂಬ ಸರ್ವಜ್ಞ
೧೭೧.
ಜ್ಞಾನಿಯನಜ್ಞಾನಿಯೆಂದು | ಹೀನ ತಾ ನುಡಿದರೆ
ಆನೆಯನೇರಿ ಸುಖದಿಂದಲಿ - ಹೋಹಂಗೆ
ಶ್ವಾನ ಬೊಗಳ್ದೇನು ಸರ್ವಜ್ಞ
೧೭೨.
ತುಂಬಿದಾ ಕೆರೆಭಾವಿ | ತುಂಬಿಹುದೆನಬೇಡ
ನಂಬಿರಬೇಡ ಲಕ್ಶ್ಮಿಯನು - ಬಡತನವು
ಬೆಂಬಳಿಯೊಳಿಹುದು ಸರ್ವಜ್ಞ
೧೭೩.
ಕೇಡನೊಬ್ಬನಿಗೆ ಬಯಸೆ | ಕೇಡು ತಪ್ಪದು ತನಗೆ
ಕೂಡಿ ಕೆಂಡವನು ತೆಗೆದೊಡೆ - ತನ್ನ ಕೈ
ಕೂಡೆ ಬೇವಂತೆ ಸರ್ವಜ್ಞ
೧೭೪.
ಅರಸು ಮುನಿದೂರೊಳಗೆ | ಇರುವುದೇ ಕರ ಕಷ್ಟ
ಅರಸು ಮನ್ನಣೆಯು ಕರಗಿದ - ಠಾವಿಂದ
ಸರಿವುದೇ ಲೇಸು ಸರ್ವಜ್ಞ
೧೭೫.
ಆಶೆಯುಳ್ಳನ್ನಕ್ಕರ - ದಾಸನಾಗಿರುತಿಪ್ಪ
ಆಶೆಯ ತಲೆಯನಳಿದರೆ - ಕೈಲಾಸ
ದಾಚೆಯಲಿಪ್ಪ ಸರ್ವಜ್ಞ
೧೭೬.
ಧಾರುಣಿ ನಡುಗುವುದು | ಮೇರುವಲ್ಲಾಡುವುದು
ವಾರಿಧಿ ಬತ್ತಿ ಬರೆವುದು - ಶಿವಭಕ್ತಿ
ಯೋರೆಯಾದಂದು ಸರ್ವಜ್ಞ
೧೭೭.
ಮಂದಿಯಿಲ್ಲದರಸು | ತಂದೆ ಇಲ್ಲದ ಕಂದ
ಬಂಧುಗಳಿಲ್ಲದಿಹ ಬಡತನ - ಇವು ತಾನು
ಎಂದಿಗೂ ಬೇಡ ಸರ್ವಜ್ಞ
೧೭೮.
ಅನ್ನವಿಕ್ಕದನಿಂದ | ಕುನ್ನಿ ತಾ ಕರ ಲೇಸು
ಉನ್ನತವಪ್ಪತಿಥಿಗಿಕ್ಕದ ಬದುಕು - ನಾಯ
ಕುನ್ನಿಯಿಂ ಕಷ್ಟ ಸರ್ವಜ್ಞ
೧೭೯.
ಉರಿಯುದಕ ಶೀತವು | ಉರಗಪತಿ ಭೀಕರವು
ಗುರುವಾಜ್ಞೆಗಂಜಿ ಕೆಡುವವು - ಇದ ನರ
ರರಿಯದೆ ಕೆಡುಗು ಸರ್ವಜ್ಞ
೧೮೦.
ಶೇಷನಿಂ ಹಿರಿದಿಲ್ಲ | ಆಸೆಯಿಂ ಕೀಳಿಲ್ಲ
ರೋಷದಿಂದಧಮಗತಿಯಿಲ್ಲ - ಪರದೈವ
ಈಶನಿಂದಿಲ್ಲ ಸರ್ವಜ್ಞ
೧೮೧.
ಕೊಟ್ಟು ಹುಟ್ಟಲಿಲ್ಲ | ಮುಟ್ಟಿ ಪೂಜಿಸಲಿಲ್ಲ
ಸಿಟ್ಟಿನಲಿ ಶಿವನ ಬೈದರೆ - ಶಿವ ತಾನು
ರೊಟ್ಟಿ ಕೊಡುವನೆ ಸರ್ವಜ್ಞ
೧೮೨.
ಹಸಿವರಿತು ಉಂಬುದು | ಬಿಸಿನೀರ ಕುಡಿವುದು
ಹಸಿವಕ್ಕು ವಿಷಯ ಘನವಕ್ಕು - ವೈದ್ಯಗೆ
ಬೆಸಸ ಬೇಡೆಂದ ಸರ್ವಜ್ಞ
೧೮೩.
ಲಿಂಗಕೆ ತೋರಿಸುತ | ನುಂಗುವಾತನೆ ಕೇಳು
ಲಿಂಗ ಉಂಬುವುದೆ ? ಪೊಡಮಡು - ತೆಲೊ ಪಾಪಿ
ಜಂಗಮಕೆ ನೀಡು ಸರ್ವಜ್ಞ
೧೮೪.
ಹೆಂಡಿರು ಮಕ್ಕಳಿಗೆಂದು | ದಂಡಿಸದಿರು ದೇಹವನು
ಭಂಡ ವಸ್ತುವನು ಕೊಡದುಣದೆ - ಬೈಚಿಡಲು
ಕಂಡವರಿಗಹುದು ಸರ್ವಜ್ಞ
೧೮೫.
ಮಾತು ಬಂದಲ್ಲಿ ತಾ | ಸೋತು ಬರುವುದು ಲೇಸು
ಮಾತಿಂಗೆ ಮಾತು ಮಥಿಸೆ - ವಿಧಿ ಬಂದು
ಆತುಕೊಂಡಿಹುದು ಸರ್ವಜ್ಞ
೧೮೬.
ಕಣ್ಣು ನಾಲಗೆ ಮನವು | ತನ್ನವೆಂದೆನ ಬೇಡ
ಅನ್ಯರು ಕೊಂದರೆನ ಬೇಡ - ಇವು ಮೂರು
ತನ್ನನೇ ಕೊಲುಗು ಸರ್ವಜ್ಞ
೧೮೭.
ನುಡಿಸುವುದಸತ್ಯವನು | ಕೆಡಿಸುವುದು ಧರ್ಮವನು
ಒಡಲನೆ ಕಟ್ಟಿ ಹಿಡಿಸುವುದು - ಲೋಭದ
ಗಡಣ ಕಾಣಯ್ಯ ಸರ್ವಜ್ಞ
೧೮೮.
ಸೊಡರಿಂಗೆ ಎಣ್ಣೆಯ | ಕೊಡನೆತ್ತಿ ಹೊಯಿವರೆ
ಬಡವನೆಂದು ಕೊಡದೆ ಇರಬೇಡ - ಇರವರಿದು
ಕೊಡುವುದೇ ಲೇಸು ಸರ್ವಜ್ಞ
೧೮೯.
ಒಡಲೆಂಬ ಹುತ್ತಕ್ಕೆ | ನುಡಿವ ನಾಲಗೆ ಸರ್ಪ
ಕಡುರೋಷವೆಂಬ ವಿಷವೇರೆ - ಸಮತೆ ಗಾ
ರುಡಿಗನಂತಕ್ಕು ಸರ್ವಜ್ಞ
೧೯೦.
ಅಪಮಾನದೂಟದಿಂ | ದುಪವಾಸ ಕರ ಲೇಸು
ನೃಪನೆದ್ದು ಬಡಿವ ಅರಸನೋಲಗದಿಂದ
ತಪವಿಹುದೆ ಲೇಸು ಸರ್ವಜ್ಞ
೧೯೧.
ಹಿರಿದು ಪಾಪವ ಮಾಡಿ - ಹರಿವರು ಗಂಗೆಗೆ
ಹರಿವ ನೀರಲ್ಲಿ ಕರಗುವೊಡೆ - ಯಾ ಪಾಪ
ಎರೆಯ ಮಣ್ಣಲ್ಲ ಸರ್ವಜ್ಞ
೧೯೨.
ಅಂತಿರ್ದರಿಂತಿರ್ದ | ರೆಂತಿರ್ದರೆನಬೇಡ
ಕುಂತಿಯಣುಗರು ತಿರಿದರು - ಮಿಕ್ಕವರು
ಎಂತಿರ್ದರೇನು ಸರ್ವಜ್ಞ
೧೯೩.
ಉಳ್ಳಲ್ಲಿ ಉಣಲೊಲ್ಲ | ಉಳ್ಳಲ್ಲಿ ಉಡಲೊಲ್ಲ
ಉಳ್ಳಲ್ಲಿ ದಾನಗೊಡಲೊಲ್ಲ - ನವನೊಡವೆ
ಕಳ್ಳಗೆ ನೃಪಗೆ ಸರ್ವಜ್ಞ
೧೯೪.
ಕೊಡುವಾತನೇ ಮೃಢನು | ಪಡೆವಾತನೇ ನರನು
ಒಡಲು-ಒಡವೆಗಳು ಕೆಡೆದು ಹೋಗದ ಮುನ್ನ
ಕೊಡು ಪಾತ್ರವನರಿದು ಸರ್ವಜ್ಞ
೧೯೫.
ಅನ್ನವನಿಕ್ಕುವುದು | ನನ್ನಿಯನು ನುಡಿವುದು
ತನ್ನಂತೆ ಪರರ ಬಗೆದೊಡೆ - ಕೈಲಾಸ
ಬಿನ್ನಾಣವಕ್ಕು ಸರ್ವಜ್ಞ
೧೯೬.
ಆನೆ ಮುಕುರದೊಳಡಗಿ | ಭಾನು ಸರಸಿಯೊಳಡಗಿ
ನಾನೆನ್ನ ಗುರುವಿನೊಳಡಗಿ - ಸಂಸಾರ
ತಾನದೆತ್ತಣದು ಸರ್ವಜ್ಞ
೧೯೭.
ಎಂಜಲು ಹೊಲೆಯಿಲ್ಲ | ಸಂಜೆಗತ್ತಲೆಯಿಲ್ಲ
ಅಂಜಿಕೆಯಿಲ್ಲ ಭಯವಿಲ್ಲ - ಜ್ಞಾನವೆಂ
ಬಂಜನವಿರಲು ಸರ್ವಜ್ಞ
೧೯೮.
ಬಲ್ಲೆನೆಂಬಾ ಮಾತು | ಎಲ್ಲವೂ ಹುಸಿ ನೋಡಾ
ಬಲ್ಲರೆ ಬಲ್ಲೆನೆನಬೇಡ - ಸುಮ್ಮನಿರ
ಬಲ್ಲರೆ ಬಲ್ಲ ಸರ್ವಜ್ಞ
೧೯೯.
ಏನಾದಡೇನಯ್ಯ | ತಾನಾಗದನ್ನಕ್ಕ
ತಾನಾಗಿ ತನ್ನನರಿದಡೆ - ಲೋಕ ತಾ
ನೇನಾದಡೇನು ಸರ್ವಜ್ಞ
೨೦೦.
ಆನೆ ನೀರಾಟದಲಿ | ಮೀನ ಕಂಡಂಜುವುದೇ
ಹೀನಮಾನವರ ಬಿರುನುಡಿಗೆ - ತತ್ವದ
ಜ್ಞಾನಿ ಅಂಜುವನೆ ಸರ್ವಜ್ಞ
ಜಾನಪದ ಗೀತೆ
ಯಾವುದೇ ಪೋಸ್ಟ್ ಗಳಿಲ್ಲ
ದೇಶಭಕ್ತಿ ಗೀತೆ
ಯಾವುದೇ ಪೋಸ್ಟ್ ಗಳಿಲ್ಲ
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ